Saturday, April 23, 2011

ಚಿನ್ನಾ ಚಿನ್ನಾ ಚಿತ್ರ ಆಸೆ


ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಬರುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ ಎನ್ನೋದು ಸಧ್ಯಕ್ಕೆ ಬಂದಿರುವ ಮಾಹಿತಿ. ಉಳಿದ ವಿಚಾರಗಳಿಗೆ ಓದಿ ನೋಡಿ....

ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಈಗ ಮತ್ತೊಂದು ಸಿನ್ಮಾ ಕಳೆ ಬಂದಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ಸಿನ್ಮಾ ಮಾಡ್ತಾರೆ ಎನ್ನುವ ಸುದ್ದಿ ಬಹಳ ಹಿಂದೆ ಹರಡಿಕೊಂಡಿತ್ತು. ಆದರೆ ಈಗ ಅದು ದೃಢಪಟ್ಟಿದೆ. ಚಿನ್ನಾ ನಿರ್ದೇಶನ ಮಾಡುವ ಚಿತ್ರ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಇದರ ಮುಹೂರ್ತ ಏ.೨೨ ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕರಾವಳಿಯ ಲೋಕಲ್ ಭಾಷೆಗಳಲ್ಲಿ ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ.
ಚಿನ್ನಾ ಟಾಕಿಂಗ್:
‘ಉಜ್ವಾಡು ’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ಅದೇ ಕತೆಯಾಗಿ ‘ಉಜ್ವಾಡು’ ಚಿತ್ರವಾಗಲಿದೆಯಂತೆ ಎನ್ನೋದು ಅವರ ಮಾತು. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಲಿದೆ. ಈ ವರ್ಷದ ಕೊನೆ ಭಾಗದಲ್ಲಿ ಚಿತ್ರವನ್ನು ಕರಾವಳಿಯ ಥಿಯೇಟರ್‌ಗಳಿಗೆ ತರುವ ಯೋಜನೆ ಇದೆ. ‘ಉಜ್ವಾಡು’ ಚಿತ್ರ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾತ್ರ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ ಎನ್ನೋದು ನನ್ನ ವಿಶ್ವಾಸ’ ಎನ್ನುತ್ತಾರೆ ಕಾಸರಗೋಡು ಚಿನ್ನಾ.
ಉಜ್ವಾಡು ಬ್ಯಾಕ್ ಗ್ರೌಂಡ್:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕುತ್ತಿದ್ದಾರೆ. ಚಿತ್ರ ಕಾರ್ಕಳದ ಅಸುಪಾಸು ಚಿತ್ರೀಕರಣವಾಗಲಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.
..........
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ೨೨.೦೪.೨೦೧೧ ರಂದು ಪ್ರಕಟವಾದ ಲೇಖನ.
...............

No comments:

Post a Comment