Friday, April 29, 2011

ಬಿಡುಗಡೆಯ ಹಾದಿಯಲ್ಲಿ ‘ಮಂಜುಳಾಗಾನ’


ಅಂದ ಕಾಲತ್ತಿಲ್ನ ಕನ್ನಡ ನಟಿ ಮಂಜುಳಾ ಕೊನೆಯದಾಗಿ ಅತ್ಯಂತ ಕಡಿಮೆ ಸಂಭಾವಣೆಗೆ ತುಳು ಚಿತ್ರವೊಂದರಲ್ಲಿ ನಟಿಸಿದ್ದರು. ಚಿತ್ರ ತಯಾರಾಗಿ ಈಗ ೨೫ ವರ್ಷ. ಆದರೆ ಈಗಲೂ ಡಬ್ಬಾ ಪೆಟ್ಟಿಗೆಯಲ್ಲಿ ಚಿತ್ರದ ರೀಲುಗಳು ಧೂಳು ತಿನ್ನುತ್ತಿದೆ. ಈ ವರ್ಷವಾದರೂ ಸಿನಿಮಾ ಹೊರ ತರಬೇಕು ಎನ್ನುವ ಆಸೆಯ ಕಣ್ಣುಗಳಲ್ಲಿ ಲವಲವಿಕೆಯ ಜತೆ ಚಿತ್ರದ ನಿರ್ಮಾಪಕ ಕಮ್ ನಟ ಕೆ.ಎನ್. ಟೇಲರ್ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಬೇವರ್ಸಿ ಹಳೆ ಬೇವರ್ಸಿ... ಅಂತ ಬಜಾರಿ ಹೆಣ್ಣು ಮಗಳು ರೇಗೊ ದೃಶ್ಯ ನೋಡಿದಾಗ ಕನ್ನಡ ಚಿತ್ರರಂಗದ ಅಭೂತಪೂರ್ವ ನಟಿ ಮಂಜುಳಾ ಇನ್ನು ನಮ್ಮೊಂದಿಗೆ ಜೀವಂತ ಆಗಿರೋದು ಸ್ಪಷ್ಟ ಆಗುತ್ತೆ.. ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಮಂಜುಳಾರ ‘ಎರಡು ಕನಸು’ ಚಿತ್ರ ಪ್ರಸಾರವಾಗುತ್ತಿದ್ದಾಗ ನಮ್ಮ ಮಂಜುಳಾ ಇಲ್ವಾ ಅಂತ ಮನಸು ಮುದುಡಿತು. ಅವರ ನಟನೆಯೇ ಅಂತಹುದು. ಸಿನಿಮಾ ಹೆಸರಿಗಿಂತ ಕಲಾವಿದರು ಸುರಿಸುವ ಡೈಲಾಗ್ಗಳೇ ಹೆಚ್ಚು ಮನದಲ್ಲಿ ಉಳಿಯೋದು. ಬೇವರ್ಸಿ ಅಂತ ಕಿರಿಚೋ ಮಂಜುಳಾ ವನ್ಸೈಡ್ನಲ್ಲಿ ಇಷ್ಟವಾದರೆ ಮತ್ತೊಂದೆಡೆ ಬಿಕನಾಸಿ ಅಂತ ಕಿಚಾಯಿಸೋ ಡಾ.ರಾಜ್ ಇಷ್ಟವಾಗುತ್ತಾರೆ ಅಂತಾ ತುಳು ನಿರ್ದೇಶಕ ಕಮ್ ನಟ ಕೆ.ಎನ್ ಟೇಲರ್ ಲೈಫ್ ಲೈನ್ ಬೇಡ ಎಂದುಕೊಂಡು ದುನಿಯಾ ಬಿಟ್ಟ ನಟಿ ಮಂಜುಳಾರ ಬಗ್ಗೆ ಲವಲವಿಕೆಯ ತಂಡದ ಜತೆಗೆ ಮಾತಿನ ಬುತ್ತಿ ಇಟ್ಟು ಕೂತಿದ್ದರು.
ಅಂದಹಾಗೆ ೭೦ರಿಂದ ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ನಾಯಕಿಯಾಗಿ ಮಿಂಚಿದ ನಟಿ ಮಂಜುಳಾ ನೂರಕ್ಕಿಂತ ಅಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀನಾಥ್ ಹಾಗೂ ಮಂಜುಳಾ ಜೋಡಿಯಾಗಿ ನಟಿಸಿದ ಚಿತ್ರಗಳ ಸಂಖ್ಯೆ ಬರೋಬರಿ ೩೪ ! ಈ ಒಂದು ಕಾರಣದಿಂದ ಈ ಜೋಡಿಯನ್ನು ‘ಪ್ರಣಯ ಜೋಡಿ’ ಎಂದೇ ಸಿನಿಮಾ ಜಗತ್ತಿನಲ್ಲಿ ಗುರುತಿಸಲಾಗುತ್ತಿತ್ತು. ನಾಲ್ಕು ತೆಲುಗು ಹಾಗೂ ಮೂರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಂಜುಳಾ ಡಾ. ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿ ಚಿತ್ರ ತಾರೆಯರ ಜತೆಯಲ್ಲಿ ಬಣ್ಣ ಹಚ್ಚಿಕೊಂಡಿದ್ದರು. ಹಣ, ಗೌರವ, ಖ್ಯಾತಿ ಎಲ್ಲವೂ ಮಂಜುಳಾರ ಬಗಲಲ್ಲಿ ಮಲಗಿ ಕೂತಿತ್ತು.
ಯಾಕೋ ಏನೋ ಇದೆಲ್ಲ ಬೇಡ ಅಂತಾ ಲೈಫ್ ಲೈನ್ ಕಿತ್ತುಕೊಂಡು ಹೊರಟು ಹೋದರು. ಆದರೆ ಸ್ಯಾಂಡಲ್ವುಡ್ನಲ್ಲಿ ಮಂಜುಳಾ ಸೂಪರ್ ಪಟ್ಟ ಗಿಟ್ಟಿಸಿಕೊಂಡಿದ್ದಾಗ... ಅವರ ಸಂಭಾವನೆ ಲಕ್ಷ ತೂಗುತ್ತಿದ್ದಾಗ ....ಅತ್ಯಂತ ಕಡಿಮೆ ಸಂಭಾವಣೆ ಪಡೆದು ತುಳು ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ತುಳು ಚಿತ್ರ ನಟ ಹಾಗೂ ನಿರ್ಮಾಪಕ ಕೆ.ಎನ್. ಟೇಲರ್ ಗಣಪತಿ ಫಿಲಂ ಬ್ಯಾನರ್ನಡಿಯಲ್ಲಿ ತುಳು ಹಾಗೂ ಕನ್ನಡ ಭಾಷೆಯಲ್ಲಿ ‘ನಮ್ಮ ಭಾಗ್ಯ’ ಚಿತ್ರ ತಯಾರಾಗಿತ್ತು. ಆದರೆ ಚಿತ್ರ ಏನೋ ಸಂಪೂರ್ಣವಾಯಿತು. ಚಿತ್ರದ ರೆಕಾರ್ಡಿಂಗ್, ಡಬ್ಬಿಂಗ್, ಪ್ರಿಂಟ್, ಸೆನ್ಸಾರ್ ಅಂತಾ ಬಹಳಷ್ಟು ಕೆಲಸಗಳು ಹಾಗೆಯೇ ಉಳಿದು ಹೋಯಿತು.
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಅರೂರು ಪಟ್ಟಾಬಿ ನಿರ್ದೇಶನ ಮಾಡಿದ್ದರು. ಚಿತ್ರದ ನಿರ್ಮಾಣಕ್ಕಾಗಿ ಸರಿಸುಮಾರು ೨೦ ಲಕ್ಷ ರೂ .ಮೊತ್ತವನ್ನು ಅಂದಿನ ಕಾಲದಲ್ಲಿ ಕೆ. ಎನ್ ಟೇಲರ್ ಸುರಿದಿದ್ದರು.ನಟ ಸುಂದರ ಕೃಷ್ಣ ಅರಸ್, ರಾಜೇಶ್, ತಾರಾ, ಕೆ. ವಿಜಯ ಸೇರಿದಂತೆ ಕನ್ನಡ ಹಾಗೂ ತುಳು ರಂಗಭೂಮಿಯ ಬಹಳಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಸಂಗೀತಕ್ಕಾಗಿ ಚೆನ್ನೈಯಿಂದ ರಾಮ್ ಪ್ರಸಾದ್ರನ್ನು ಕರೆ ತರಲಾಗಿತ್ತು. ಹೀಗೆ ಚಿತ್ರ ಎಲ್ಲ ರೀತಿಯಿಂದಲೂ ಸಕಲ ಸನ್ನದ್ಧವಾಗಿತ್ತು. ಆದರೆ ಇತ್ತ ಕಡೆ ನಿರ್ಮಾಪಕರಲ್ಲಿ ಇನ್ನಷ್ಟೂ ಹಣ ಸುರಿಯುವ ತಾಕತ್ತು ಮುರಿದು ಬಿದ್ದಿತ್ತು... ಚಿತ್ರ ತೆರೆಗೆ ಬರುವ ಸೂಚನೆಗಳು ಬಹುತೇಕ ಮಂಕಾಗಿ ಹೋಗಿತ್ತು. ಇದೆಲ್ಲ ಆಗಿ ಹೋಗಿ ಭರ್ಜರಿ ೨೫ ವರ್ಷಗಳಾಗಿದೆ. ಚಿತ್ರ ಇಂದು ನಾಳೆ ಬಿಡುಗಡೆ ಮಾಡೋಣ ಅಂತಾ ಚಿತ್ರದ ಎಲ್ಲರೂ ಕಾಯುತ್ತಿದ್ದಾರೆ.
‘ನಮ್ಮ ಭಾಗ್ಯ’ದ ಸ್ಟೋರಿ ಲೈನ್ ಅಂತದ್ದು.. ಇಂದಿಗೂ ಚಿತ್ರ ಸಖತ್ ರನ್ ಆಗುತ್ತದೆ. ಆದರೆ ಚಿತ್ರ ತೆರೆಗೆ ತರಬೇಕಾದರೆ ಬರೋಬರಿ ೧೦ ಲಕ್ಷ ರೂ. ಕೈಯಲ್ಲಿ ಇರಬೇಕು. ನನ್ನ ಬಳಿ ಖರ್ಚು ಮಾಡುವಷ್ಟು ಹಣ ಇದ್ದಿದ್ದಾರೆ, ಯಾವಾಗಲೋ ಚಿತ್ರ ತರುತ್ತಿದ್ದೆ... ಚಿತ್ರಕ್ಕೆ ಹಣ ಸುರಿಯುವವರು ಮುಂದೆ ಬಂದರೆ ಚಿತ್ರ ರಿಲೀಸ್ ಮಾಡುತ್ತೇನೆ. ೨೫ ವರ್ಷಗಳ ನಂತರವಾದರೂ ಚಿತ್ರ ಹೊರ ಬರುತ್ತದೆ ಅನ್ನುವ ಆಸೆ ನನ್ನದು ಎಂದು ಮಾತು ಮುಗಿಸಿ ಚಿತ್ರದ ನಿರ್ಮಾಪಕ ಕೆ.ಎನ್. ಟೇಲರ್ ನಮ್ಮ ಮುಖ ನೋಡಲಾರಂಭಿಸಿದರು. ಅಂದಹಾಗೆ ‘ನಮ್ಮ ಭಾಗ್ಯ’ ಚಿತ್ರದ ಕ್ಲೈಮ್ಯಾಕ್ಸ್ಗೂ ಮಂಜುಳಾರ ಬದುಕಿಗೂ ತೀರಾ ಹತ್ತಿರದ ಸಂಬಂಧವಿದೆ. ಚಿತ್ರದಲ್ಲಿ ನಾಯಕನಿಗೆ ಬಾಯಿ ಬರುವಂತೆ ಮಾಡಲು ಹೋಗಿ ಮಂಜುಳಾ ಬೆಂಕಿಗೆ ಬೀಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡರೆ ಇತ್ತ ಮಂಜುಳಾರ ನಿಜ ಬದುಕು ಕೂಡ ಬೆಂಕಿ ಆಕಸ್ಮಿಕ ಅಥವಾ ಆತ್ಮಹತ್ಯೆ ಮೂಲಕ ಕೊನೆಗೊಂಡಿತ್ತು ಎನ್ನುವುದು ವಿಪರಾಸ್ಯ.

Wednesday, April 27, 2011

ಕುಡ್ಲದಲ್ಲಿ ರಾಕ್ ಆನ್ ಮದಿರೆ ನಾಡಿನ ಪಾಪ್ ದೊರೆ



ಕೈಗೆ ಮೈಕ್ ವಿದ್ ಗಿಟಾರ್ ಕೊಟ್ಟು ಬಿಟ್ಟ್ರೆ ಸಾಕು ಸ್ಟೇಜ್ನಲ್ಲಿಯೇ ರಾಕ್,ಪಾಪ್, ಇಂಡಿಯನ್ ಫ್ಯೂಶನ್ ಎಲ್ಲವೂ ಬಂದು ಬಿಡುತ್ತದೆ. ಯೆಸ್. ಇದು ಮದಿರೆಯ ನಾಡಿನ ಕುವರ ಭಾರತೀಯ ಪಾಪ್ ಲೋಕದ ದೊರೆ ರೆಮೋ ಫೆರ್ನಾಂಡೀಸ್ರ ಇಂಟರ್ ಡಕ್ಷನ್ ಮಾರ್ಕ್.

ಅಸುಪಾಸು ಆರವತ್ತು.. ಆದರೂ ಸಂಗೀತದ ಹುಚ್ಚು ಒಂಚೂರು ಕಡಿಮೆಯಾಗಿಲ್ಲ. ಮುಖದಲ್ಲಿ ಸಣ್ಣಗೆ ನೆರಿಗೆಯ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕೂಡಾ ವಾಯ್ಸ್ನಲ್ಲಿ ಕೊಂಚನೂ ವೇರಿಯೇಶನ್ ಬಂದಿಲ್ಲ. ಕೈಗೆ ಮೈಕ್ ವಿದ್ ಗಿಟಾರ್ ಕೊಟ್ಟು ಬಿಟ್ಟ್ರೆ ಸಾಕು ಸ್ಟೇಜ್ನಲ್ಲಿಯೇ ರಾಕ್, ಪಾಪ್, ಇಂಡಿಯನ್ ಫ್ಯೂಶನ್ ಎಲ್ಲವೂ ಬಂದು ಬಿಡುತ್ತದೆ. ಯೆಸ್. ಇದು ಮದಿರೆಯ ನಾಡಿನ ಕುವರ ಭಾರತೀಯ ಪಾಪ್ ಲೋಕದ ದೊರೆ ರೆಮೋ ಫೆರ್ನಾಂಡೀಸ್ರ ಇಂಟರ್ಡಕ್ಷನ್ ಮಾರ್ಕ್. ಅಂದಹಾಗೆ ರೆಮೋ ಫೆರ್ನಾಂಡೀಸ್ ಮಂಗಳೂರಿನ ಶಕ್ತಿನಗರದಲ್ಲಿ ನಡೆಯುತ್ತಿರುವ ಮೊದಲ ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹಾ ಸಮ್ಮೇಳನದಲ್ಲಿ ಕಾಣಿಸಿಕೊಂಡಿದ್ದರು. ಬರೀ ಕಾಣಿಸಿಕೊಂಡಿದ್ದು ಮಾತ್ರವಲ್ಲ ತಮ್ಮ ಹಳೆಯ ಟ್ಯೂನ್ಗೆ ಶರಣಾಗಿ ನೆರೆದಿದ್ದ ಎಲ್ಲ ಪ್ರೇಕ್ಷಕ ವರ್ಗದ ಹಾರ್ಟ್ ಬೀಟ್ನ್ನು ಸಾವಿರ ಮೆಗಾವಾಟ್ಸ್ ಬಲ್ಬ್ ಥರ ಹೊತ್ತಿಸಿ ಹೊರಟರು.
ರೆಮೋ ಸಂಗೀತಕ್ಕೊಂದು ಚುಂಬಕ ಶಕ್ತಿ ಇದೆ. ಅದಕ್ಕಿಂತಲೂ ಭಿನ್ನವಾಗಿ ರೆಮೋ ಸಂಗೀತ, ಸಾಹಿತ್ಯ, ಹಾಡುಗಾರಿಕೆಯಲ್ಲಿ ನಾನಾ ದೇಶಗಳ ಭಿನ್ನ ಸಮಾಜದ ಮಜಲು, ಸಂಸ್ಕೃತಿ, ಶೈಲಿಗಳ ಟಚ್ ಆಫ್ ಇರೋದಂತೂ ಗ್ಯಾರಂಟಿ. ಮದಿರೆಯ ನಾಡು( ಗೋವಾ)ದ ಪೋರ್ಚುಗೀಸ್ ಮ್ಯೂಸಿಕ್ ಶೈಲಿಯ ಜತೆಗೆ ಹಿಂದೂಸ್ತಾನಿ ಸಂಗೀತದ ಹೊಳಪು ಕಂಡರೆ ಅದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ೮೦ ಹಾಗೂ ೯೦ರ ದಶಕದಲ್ಲಿ ಬಾಲಿವುಡ್ನಲ್ಲಿ ಡಿಸ್ಕೋ ಮ್ಯೂಸಿಕ್ಗೆ ಹೊಸ ದಿಶೆ ತೋರಿಸಿದ ಖ್ಯಾತಿಯಂತೂ ರೆಮೋ ಬಗಲಲ್ಲಿ ಮುದುಡಿ ಕುಳಿತು ಬಿಟ್ಟಿದೆ. ಮಧ್ಯಮ ವರ್ಗದ ಸಾಮಾಜಿಕ- ರಾಜಕೀಯ ಹಸಿವು, ತೊಳಲಾಟಗಳ ಮೇಲೆ ಕಣ್ಣು ಹಾಕಿ ಸಾಹಿತ್ಯ ಬರೆಯುವ ರೆಮೋ ಯುವಜನತೆಯ ನಾಡಿಮಿಡಿತವನ್ನು ಸರಿಯಾಗಿ ಬಲ್ಲವರು. ಇಂಗ್ಲೀಷ್ , ಫ್ರೆಂಚ್, ಹಿಂದಿ, ಪೋರ್ಚ್ಗೀಸ್ ಜತೆಗೆ ಕೊಂಕಣಿಯಲ್ಲೂ ಬರೆಯುವ ಹಾಡುವ ತಾಕತ್ತು ಇರುವ ಏಕೈಕ ಸಂಗೀತಗಾರ ಎನ್ನುವ ಹೆಸರಿಗೂ ಭಾಜನರಾಗಿದ್ದಾರೆ.
ಮಿಡಲ್ ಕ್ಲಾಸ್ ಭಾರತೀಯ ಯುವಜನತೆ ಬೇಗನೆ ಆಕರ್ಷಿತವಾಗುವ ಆಂಗ್ಲ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಬರೆಯುವ ರೆಮೋ ಬಾಲಿವುಡ್ನಲ್ಲಿ ೧೯೮೭ರಲ್ಲಿ ಬಿಡುಗಡೆಯಾದ ‘ಜ್ವಾಲಾ’ದ ಟೈಟಲ್ ಸಾಂಗ್ನಿಂದ ಸಿನಿಮಾ ಲ್ಯಾಂಡ್ಗೆ ಡೈರೆಕ್ಟ್ ಎಂಟ್ರಿ ಪಡೆದವರು. ನಂತರ ಬಂದ ಬಾಂಬೆ ಸಿನಿಮಾದ ‘ಹಮ್ಮಾ ಹಮ್ಮಾ ’ಹಾಡು. ಅಜಯ್ ದೇವಗನ್ ಹಾಗೂ ಕಾಜೋಲ್ ಅಭಿನಯದ ‘ಪ್ಯಾರ್ ತೋ ಹೋ ನಾಯಿ ತಾ’ದ ಟೈಟಲ್ ಸಾಂಗ್ ಹಾಗೂ ‘ಕಾಮೋಶಿ’ ಸಂಗೀತ ಸಂಯೋಜನೆಯ ನಂತರ ಬಾಲಿವುಡ್ನಲ್ಲಿ ಹಾಡುವುದನ್ನು, ಬರೆಯುವುದನ್ನು, ಸಂಗೀತ ಸಂಯೋಜನೆ ಮಾಡುವುದನ್ನು ಕಡಿಮೆ ಮಾಡಿದರು.
ತನ್ನ ನೆಚ್ಚಿನ ಕ್ಷೇತ್ರ ಆಲ್ಬಂ ಜಗತ್ತಿನತ್ತ ಮುಖ ಮಾಡಿ ಮಲಗಿದರು. ತನ್ನ ಆಸಕ್ತಿಯ ಗಿಟಾರ್ ಜತೆಜತೆಗೆ ಸಿತಾರ್ ಹಾಗೂ ಕೊಳಲು ಕೂಡ ಅಧ್ಯಯನ ಮಾಡಿ ನುಡಿಸುವುದರಲ್ಲಿ ರೆಮೋ ಯಾವಾಗಲೂ ತಲ್ಲೀನ. ತನ್ನ ಆಲ್ಬಂಗಳಾದ ‘ಗೋವನ್ ಕ್ರೇಜಿ’ ‘ಓಲ್ಡ್ ಗೋವನ್ ಗೋಲ್ಡ್’ ಮಾದಕ ವ್ಯಸನದ ವಿರೋಧದ ‘ಪ್ಯಾಕ್ ದ್ಯಾಟ್ ಸ್ನ್ಮಾಕ್’ ಅತೀ ಹೆಚ್ಚು ಬೇಡಿಕೆ ಕುದುರಿಸಿದ ಆಲ್ಬಂ ‘ ಬಾಂಬೆ ಸಿಟಿ’ ಸುರಕ್ಷಿತ ಲೈಂಗಿಕತೆಯ ಕುರಿತು ಜಾಗೃತಿ ಹುಟ್ಟು ಹಾಕಿದ ಆಲ್ಬಂ ‘ಎವರಿ ವನ್ ವಾಂಟ್ಸ್ ಟು’, ೨೦೦೦ರಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಪಾಪ್ ಆಲ್ಬಂ ‘ಓ ಮೇರಿ ಮುನ್ನಿ’ ರೆಮೋ ರ ಸೂಪರ್ ಹಿಟ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗಲೂ ವಿಶ್ವದಾದ್ಯಂತ ಹಲವಾರು ಮ್ಯೂಸಿಕ್ ನೈಟ್ಗಳು, ಸ್ಟೇಜ್ ಪ್ರೋಗ್ರಾಂಗಳಿಂದ ನಿರಂತರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ.
ರೆಮೋ ಹೇಳಿದ ಗಿಟಾರ್ ಕತೆ:
ರೆಮೋಗೆ ಅದು ಮೂರರ ವಯಸ್ಸು , ತಂದೆ ಬೆನಾರ್ಡೋ ಜತೆಯಲ್ಲಿ ಒಂದ್ ದಿನ ಪಣಜಿಯಲ್ಲಿ ಶಾಫಿಂಗ್ ಹೋಗುತ್ತಿದ್ದಾಗ ಗಿಟಾರ್ ಥಟ್ ಅಂತಾ ಕಣ್ಣಿಗೆ ಬಿದ್ದು ಬಿಟ್ಟಿತು. ನಾನು ತಂದೆಯನ್ನು ಗಿಟಾರ್ ತೆಗೆದುಕೊಡಿ ಎಂದು ಕೇಳಿಕೊಂಡಾಗ ಅವರು ತಕ್ಷಣ ತೆಗೆದುಕೊಡಲಿಲ್ಲ. ಮಗನ ಹಟ ಜಾಸ್ತಿಯಾಯಿತು. ಕೊನೆಗೆ ತಂದೆ ಶರಣಾಗಿ ಗಿಟಾರ್ ತೆಗೆಸಿ ಕೊಟ್ರು. ಆದರೆ ಅದನ್ನು ಯಾವ ರೀತಿ ನುಡಿಸುವುದು ಅಂತಾ ಅರ್ಥ ಆಗುತ್ತಿರಲಿಲ್ಲ. ತಂದೆ ಒಳ್ಳೆಯ ಗಿಟಾರಿಸ್ಟ್ ಆಗಿದ್ದರು. ಅವರನ್ನು ಹೋಗಿ ಕೇಳುವುದು ಎಂದರೆ ಒಂಥಾರ ಮುಜುಗರದ ವಿಚಾರವಾಯಿತು. ಕೊನೆಗೆ ತಾಯಿ ಲೂಯಿಸಾ ಫೆರ್ನಾಂಡೀಸ್ ಮೂಲಕ ತಂದೆಯಿಂದ ಗಿಟಾರ್ ಪಾಠ ಆರಂಭವಾಯಿತು. ಅಂದಿನಿಂದ ದಿನಾಲೂ ಗಿಟಾರ್ ಕುರಿತು ತಂದೆಯಿಂದ ಒಂದೊಂದು ವಿಚಾರಗಳು ಹೊರ ಬರುತ್ತಿದ್ದವು. ಅಲ್ಲಿಂದ ಗಿಟಾರ್ ಕುರಿತು ರೆಮೋರ ಆಸಕ್ತಿಗಳು ನಿಧಾನವಾಗಿ ಯಾರಿಗೂ ತಿಳಿಯದಂತೆ ಮನಸ್ಸಿನೊಳಗೆ ಜಾಗ ಪಡೆದುಕೊಂಡಿತು. ಈಗ ವಿದ್ ಔಟ್ ಗಿಟಾರ್ ರೆಮೋ ನೋ ಮೋರ್ ಎಂದೇ ಹೇಳಿ ಬಿಡಬಹುದು ಎಂದರು ಪಾಪ್ ಗಾಯಕ ರೆಮೋ ಫೆರ್ನಾಂಡೀಸ್.
ಬೀಟ್-೪ ರಾಕ್ ಬ್ಯಾಂಡ್:ರೆಮೋಗೆ ಆಗ ೮ರ ಅಸುಪಾಸಿನ ವಯಸ್ಸು. ಇದೇ ಟೈಮ್ನಲ್ಲಿ ರೆಮೋರ ಕಸೀನ್ ಬ್ರದರ್ ರೆಕ್ಸ್ ಫೆರ್ನಾಂಡೀಸ್ ಪುಣೆಯಲ್ಲಿ ಓದುತ್ತಿದ್ದರು. ಅವರು ಇವರಿಗಿಂತ ೧೨ ವರ್ಷ ಹಿರಿಯ. ಇಬ್ಬರಿಗೂ ಒಂದೇ ಗೀಳು ಸಂಗೀತಕ್ಕೆ ಪಾಶ್ಚಿಮಾತ್ಯ ಟಚ್ ನೀಡಬೇಕು ಎನ್ನೋದು ಅವರ ಹೆಗ್ಗುರಿ. ಅದಕ್ಕಿಂತಲೂ ಮೊದಲಿನ ಕತೆ ಇಲ್ಲಿದೆ. ಬಾಲ್ಯದಲ್ಲಿದ್ದ ಗಿಟಾರ್ ಪ್ರೀತಿ ರೆಮೋರನ್ನು ಶಾಲೆಯಲ್ಲೂ ಬಿಟ್ಟಿರಲಿಲ್ಲ. ‘ರಾಕ್ ಅರೌಂಡ್ ದೀ ಕ್ಲಾಕ್ ’ ಎನ್ನುವ ಪುಟ್ಟ ಗಿಟಾರ್ ತಂಡವನ್ನು ಕಟ್ಟಿಕೊಂಡು ಬಂದರು. ಆಗ ಅವರ ಜತೆಗಿದ್ದ ಗೆಳೆಯರು ಸಾಥ್ ನೀಡುತ್ತಿದ್ದರು. ಅಲೆಕ್ಸಾಂಡರ್ ರೊಸಾರಿಯೋ, ರೆಕ್ಸ್ ಫೆರ್ನಾಂಡೀಸ್, ನಾನ್ಡೀನೋ ಲೋಬೋಟ್ಟೋ ಫೆರಿಯಾ, ಕ್ಯಾಟಿನೋ ದೇ ಅಬ್ರೋ ಸೇರಿಕೊಂಡು ಬೀಟ್-೪ ಎನ್ನುವ ಸ್ಕೂಲ್ ಬ್ಯಾಂಡ್ವೊಂದನ್ನು ಕಟ್ಟಿಕೊಂಡರು.
ಗೋವಾ ತುಂಬಾ ಸುತ್ತಾಡಿಕೊಂಡು ಹಲವಾರು ಗಿಟಾರ್ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಈ ಗಿಟಾರ್ ಆಸಕ್ತಿಗಳ ಜತೆಯಲ್ಲಿಯೇ ಮುಂಬಯಿಯಲ್ಲಿ ಆರ್ಕಿಟೆಕ್ ಪದವಿ ಪಡೆದುಕೊಂಡರು. ಆದರೂ ಸಂಗೀತ, ಗಿಟಾರ್ ಮೇಲಿದ್ದ ಭಕ್ತಿ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ತರಗತಿಗಳಿಗೆ ಬಂಕ್ ಮಾಡಿ ಲೆಕ್ಚರ್ಗಳಿಗೆ ಕೈ ಕೊಟ್ಟು ಗಿಟಾರ್ ನುಡಿಸುವ ಮತ್ತಷ್ಟೂ ತಂತ್ರಗಳನ್ನು ಕರಗತಮಾಡಿಕೊಳ್ಳುತ್ತಿದ್ದರಂತೆ. ಟೈಮ್ ಸಿಕ್ಕಾಗ ಹಾಡುಗಳನ್ನು ಬರೆಯುತ್ತಿದ್ದರು. ಜತೆಗೆ ಸೋಲೋ ಸಿಂಗಿಂಗ್ ಮಾಡುತ್ತಿದ್ದರು. ಕೆಲವೊಂದು ಸಲ ತನ್ನ ಹಾಡಿನ ಹುಚ್ಚು ಕಡಿಮೆ ಮಾಡಿಕೊಳ್ಳಲು ಸಿಕ್ಕ ಸಿಕ್ಕ ಬ್ಯಾಂಡ್ಗಳಲ್ಲಿ ಹಾಡುತ್ತಿದ್ದರು. ಅಂದಿನ ಕಾಲದಲ್ಲಿ ಫೇಮಸ್ ಬ್ಯಾಂಡ್ ಆಗಿದ್ದ ಬಶೀರ್ ಶೇಕ್ ಅವರ ‘ದೀ ಸವೇಜಸ್’ನಲ್ಲೂ ಡಿಕೊಂಡು ಬಂದಿದ್ದೇನೆ ಎನ್ನುತ್ತಾರೆ ರೆಮೋ. ಸಂಗೀತದ ವಿಚಾರದಲ್ಲಿ ಉದಾರತೆ ಮರೆದು ನಿಂತರೂ ಕೂಡಾ ಎಲ್ಲರೊಂದಿಗೆ ಬೆರೆತು ಮಾತನಾಡುವ ವಿಚಾರದಲ್ಲಿ ಬಹಳ ಚೌಕ್ಕಾಸಿ ಮಾಡುವ ರೆಮೋ ಲವಲವಿಕೆಯ ಫಾಸ್ಟ್ ಕ್ವಶನ್ಗಳಿಗೆ ಥಟ್ ಅಂತಾ ಅನ್ಸರ್ ಕೊಟ್ಟಿದ್ದು ಹೀಗಿದೆ ನೋಡಿ...
* ನೀವು ಮೊದಲು ಹಾಡಿದ ಹಾಡು ಯಾವುದು?
- ಫ್ರೆಂಚ್ ಭಾಷೆಯಲ್ಲಿ ‘ಮೀಯಾ ಮಝೀದಾ ಕ್ಯೂರಿದಾ’ ಹಾಡು. ಇದರ ಅರ್ಥ ‘ಮೈ ಡಾರ್ಲಿಂಗ್ ಮದರ್’ ಇದನ್ನು ನಾನು ನನ್ನ ಐದನೇ ಹರೆಯದಲ್ಲಿ ಹಾಡಿದೆ. ಮೊದಲ ಬಾರಿಗೆ ಕ್ಲಬ್ ನ್ಯಾಷನಲ್ ಸ್ಟೇಜ್ನಲ್ಲಿ ಹಾಡಿದೆ. ಈ ಹಾಡು ತುಂಬಾ ಭಾವನಾತ್ಮಕವಾಗಿತ್ತು. ಈ ಕಾರಣಕ್ಕಾಗಿ ನನ್ನ ‘ಓಲ್ಡ್ ಗೋವನ್ ಗೋಲ್ಡ್’ ಆಲ್ಬಂಗೂ ಈ ಹಾಡು ಹಾಕಿದ್ದೇನೆ.
* ನಿಮ್ಮ ನೆಚ್ಚಿನ ಹಾಡುಗಾರರು ಯಾರು?
-ಓಹೋ...ತುಂಬಾ ಜನ ಇದ್ದಾರೆ ಬಿಡಿ. ಆದರೆ ಹಾಡುವವರು ಸಾಹಿತ್ಯ ಬರೆದು ಸಂಯೋಜಿಸಿ ಹಾಡಿದರೆ ಮಾತ್ರ ನನಗೆ ಖುಶಿ. ಈ ಮೂಲಕ ಅವರ ಹಾಡಿಗೆ ಆಳವಾದ ಅರ್ಥಕಂಡುಕೊಳ್ಳಲು ಸಾಧ್ಯವಿದೆ. ಯಾರದೋ ಸಾಹಿತ್ಯಕ್ಕೆ ಬೇರೆಯವರು ಹಾಡಿದರೆ ಏನಿದೆ ಅರ್ಥ.
* ಮಂಗಳೂರು ಕುರಿತು ನಿಮ್ಮ ಅಭಿಪ್ರಾಯ?
- ವಾವ್.. ವಂಡರ್ಫುಲ್ ಮ್ಯಂಗಲೂರ್ ಆಂಡ್ ಪೀಪಲ್ಸ್ ಐ ಲವ್ ದೆಮ್. ಇಲ್ಲಿಗೆ ನನ್ನದು ಎರಡನೇ ಭೇಟಿ. ಕರಾವಳಿಯ ಹಸಿರನ್ನು ಹತ್ತಿರದಿಂದ ನೋಡಬೇಕೆನ್ನುವುದು ನನ್ನ ಕನಸು. ಆದರೆ ಸರಿಯಾದ ಟೈಮ್ ಸಿಕ್ಕಿಲ್ಲ. ನನ್ನನ್ನು ಮ್ಯಂಗಲೂರ್ ಮತ್ತೊಂದು ಸಾರಿ ಕರೆದರೆ ಒಂದು ವೀಕ್ ಇಲ್ಲಿಯೇ ಉಳಿಯುತ್ತೇನೆ.
* ಆರವತ್ತರಲ್ಲೂ ಆರೊ ಗ್ಯದ ಗುಟ್ಟು ಏನು?
- ನಮ್ಮದು ಗೋವಾನ್ ಶೈಲಿ. ಜಾಸ್ತಿ ಏನನ್ನೂ ತಿನ್ನುವುದಿಲ್ಲ. ಒಂದು ಲೆಕ್ಕದಲ್ಲಿ ಡಯಟ್ ಎನ್ನಬಹುದು. ಯೋಗ, ವ್ಯಾಯಾಮಕ್ಕೆ ನನ್ನ ದೇಹ ಒಗ್ಗಿ ಹೋಗಿದೆ.
* ಟೈಮ್ ಸಿಕ್ಕಾಗ ಏನ್ ಮಾಡ್ತೀರಾ?
ಕೆಲವೊಂದು ಪುಸ್ತಕಗಳನ್ನು ಓದುತ್ತೇನೆ. ಹಿಂದಿ,ಇಂಗ್ಲೀಷ್, ಫ್ರೆಂಚ್ ಸಿನ್ಮಾಗಳನ್ನು ನೋಡುತ್ತೇನೆ. ಡ್ರಾಯಿಂಗ್, ಬರವಣಿಗೆ, ಪೋಟೋ ಶಾಪ್, ವಿಡಿಯೋ ಎಡಿಟಿಂಗ್, ಸಾಫ್ಟ್ವೇರ್ಗಳಲ್ಲಿ ಕೊಂಚ ಕೈಯಾಡಿಸುತ್ತೇನೆ. ವಾಕಿಂಗ್, ಡ್ರೈವಿಂಗ್ ಎಂದರೂ ನನಗೆ ತುಂಬಾ ಇಷ್ಟ.
* ಮುಂದಿನ ಯೋಜನೆ ಅಥವಾ ಅಲ್ಬಂ ಯಾವುದು?
- ಈಗಷ್ಟೇ ಒಂದು ಗೋವಾ ಭಾಷೆಯ ಚಿತ್ರವೊಂದಕ್ಕೆ ಸಂಗೀತ ನೀಡಿದ್ದೇನೆ. ಯುರೋಪ್ನಲ್ಲಿ ಒಂದು ತಿಂಗಳ ಶೋ ಮಾಡಿ ವಾಪಾಸು ಬಂದಿದ್ದೇನೆ. ಸದ್ಯಕ್ಕೆ ಕೊಂಚ ಬ್ರೇಕ್. ಇದರ ನಡುವೆ ಹೊಸದಾಗಿ ಒಂದು ಆಲ್ಬಂ ತರುವ ಕುರಿತು ಯೋಚನೆ ಮಾಡುತ್ತಿದ್ದೇನೆ.
* ನಿಮ್ಮ ಇಬ್ಬರು ಮಕ್ಕಳು ನಿಮ್ಮ ಕ್ಷೇತ್ರಕ್ಕೆ ಬರುತ್ತಾರಾ..?
- ನೋಡಬೇಕು ಇಬ್ಬರಿಗೂ ಆಸಕ್ತಿ ಇದೆ. ಅವರನ್ನು ಲಾಂಚ್ ಮಾಡುವ ಕುರಿತು ಯೋಚನೆ ಮಾಡುತ್ತೇನೆ.
* ನಿಮ್ಮ ಹೇರ್ ಸ್ಟೈಲ್ ಹಾಗೂ ಕೂದಲಿನ ಬಣ್ಣ ಪದೇ ಪದೇ ಚೇಂಜ್ ಆಗುತ್ತಿದೆ ಅಲ್ವಾ..?
- ಕಮಾನ್ ಜರ್ನಲಿಷ್ಟ್.... ಚಿಲ್ ಔಟ್.. ರಿಲ್ಯಾಕ್ಸ್... ಈ ಟೈಮ್ಗೆ ತಕ್ಕಂತೆ ಚೇಂಚ್ ಆಗುತ್ತಿದ್ದೇನೆ. ಬದಲಾವಣೆ ಯಾವತ್ತಿಗೂ ಒಳ್ಳೆಯದು. ಬದಲಾವಣೆಗೆ ವಯಸ್ಸು ಇದೆಯಾ..?

ಕಾಲಿವುಡ್ನಲ್ಲಿ ಬೇಸಿಗೆ ಧಮಾಕಾ





ವಿಶ್ವಕಪ್ ಮುಗಿಯುತ್ತಿದ್ದಂತೆ ಟ್ವೆಂಟಿ೨೦ ಕ್ರಿಕೆಟ್ ಆರಂಭವಾಗಿದೆ. ಆದರೆ ಐಪಿಎಲ್ ಬಗ್ಗೆ ತಮಿಳುಚಿತ್ರೋದ್ಯಮಕ್ಕೆ ಹೆಚ್ಚಿನ ಭೀತಿಯಿದ್ದಂತಿಲ್ಲ. ಹಾಗಾಗಿ ಬೇಸಿಗೆಗೆ ತೆರೆಕಾಣಲು ಪ್ರಮುಖ ಸಿನಿಮಾಗಳುಸಿಂಗಾರಗೊಳ್ಳುತ್ತಿವೆ. ವರ್ಲ್ಡ್ಕಪ್ನಿಂದ ಕಾಲಿವುಡ್ಗೆ ದೊಡ್ಡಮಟ್ಟದ ಹಾನಿಯಂತೂ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸುಮಾರು ೨೫ ಚಿತ್ರಗಳು ತೆರೆಕಂಡಿದ್ದವು. ಇವುಗಳಲ್ಲಿ ಬಂಡವಾಳ ವಾಪಸಾಗಿರುವುದು ಎರಡು ಚಿತ್ರಗಳಿಗಷ್ಟೇ. ಸಿಂಗಲ್ ಸ್ಕ್ರೀನ್ಗಳಲ್ಲಿ (ಥಿಯೇಟರ್) ಶೇ.೧೫ರಿಂದ ೨೫ ರಷ್ಟು ಕಲೆಕ್ಷನ್ ಆಗಿದೆ. ಚೆನ್ನೈನ ಮಲ್ಟಿಪ್ಲೆಕ್ಸ್ಗಳ ಗಳಿಕೆ ಪರವಾಗಿಲ್ಲ. ಅಲ್ಲಿ ಶೇ.೫೦ರಷ್ಟು ಖುರ್ಚಿಗಳು ಭರ್ತಿಯಾಗಿದ್ದವಂತೆ. ಅಲ್ಲಿನ ಸಿನಿಮಾ ಪಂಡಿತರ ಪ್ರಕಾರ ಚಿತ್ರಗಳ ನೀರಸ ಗಳಿಕೆಗೆ ಕ್ರಿಕೆಟ್ ಒಂದೇ ಕಾರಣವಲ್ಲ. ಶಾಲಾ ಪರೀಕ್ಷೆಗಳ ಭೀತಿಯನ್ನೂ
ಎದುರಿಸಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ ಸಿನಿಮಾಗಳ ಕಳಪೆ ವಸ್ತು, ಗುಣಮಟ್ಟ ಕೂಡ ಪ್ರಮುಖ ಕಾರಣ. ‘ಜನರು ಇಂದು ತಾವು ನೋಡಬೇಕಾದ ಸಿನಿಮಾಗಳ ಆಯ್ಕೆಯಲ್ಲಿ ಅತಿಯಾದ ಎಚ್ಚರಿಕೆ ವಹಿಸುತ್ತಿದ್ದಾರೆ. ಕಳೆದೆರಡು ತಿಂಗಳಲ್ಲಿ ತೆರೆಕಂಡ ಚಿತ್ರಗಳ ಗುಣಮಟ್ಟ ಶೋಚನೀಯವಾಗಿತ್ತು’ ಎಂದು ವಿಶ್ಲೇಷಕರುವಾದ ಮಂಡಿಸುತ್ತಾರೆ.
ಬೇಸಿಗೆ ಸೀಸನ್ನ ಮೊದಲ ಚಿತ್ರವಾಗಿ ‘ಮಾಪಿಳ್ಳೈ’ ತೆರೆಕಂಡಿತ್ತು. ಧನುಷ್ ಮತ್ತು ಹನ್ಸಿಕಾ ಮೋಟ್ವಾನಿ ಅಭಿನಯದ ಈ ಚಿತ್ರ ಗೆಲುವಿನ ಹಾದಿಯಲ್ಲಿದೆ. ೧೯೮೯ರಲ್ಲಿ ಇದೇ ಶೀರ್ಷಿಕೆಯಡಿ ತೆರೆಕಂಡ ರಜನೀಕಾಂತ್ರ ಸೂಪರ್ಹಿಟ್ ಚಿತ್ರದ ರಿಮೇಕಿದು. ‘ಬೇಸಿಗೆಗೆ ಅತ್ಯಂತ ಸೂಕ್ತ ಚಿತ್ರವಿದು. ಕಾಮಿಡಿ, ಆಕ್ಷನ್, ಮ್ಯೂಸಿಕಲ್ ಪ್ಯಾಕೇಜ್ನ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಟುಂಬದ ಎಲ್ಲರಿಗೂ ಇಷ್ಟವಾಗುವ ಕಥಾವಸ್ತು’ ಎನ್ನುತ್ತಾರೆ ಧನುಷ್. ಇನ್ನು ಕೆ.ವಿ.ಆನಂದ್ ನಿರ್ದೇಶನದಲ್ಲಿ ಜೀವಾ ನಟಿಸಿರುವ ‘ಕೋ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿರುವ ರಾಜಕೀಯ ಥ್ರಿಲ್ಲರ್ ಇದು. ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜನೆ ಚಿತ್ರದ ಹೈಲೈಟ್. ದೊಡ್ಡ ಪ್ರಯೋಗಗಳ ಮಧ್ಯೆ ಗಮನ ಸೆಳೆದಿರುವ ಸಿನಿಮಾ - ಅಝ್ಗರ್ಸಮಿಯಿನ್ ಕುಥಿರೈ. ಇಳೆಯರಾಜಾ ಸಂಗೀತ ಸಂಯೋಜನೆಯ ಚಿತ್ರದ ಬಗ್ಗೆ ಉದ್ಯಮದಲ್ಲಿ ಒಳ್ಳೆಯ ‘ಟಾಕ್’ ಇದೆ. ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ಗಳು ಸಿನಿರಸಿಕರಲ್ಲಿ ಕುತೂಹಲ ಕೆರಳಿಸಿವೆ. ಪ್ರಾಥಮಿಕ ಮಾಹಿತಿ ಹೇಳುವಂತೆ ಇದೊಂದು ‘ಅಸಾಂಪ್ರದಾಯಕ ಲವ್ಸ್ಟೋರಿ’. ‘ಮೈನಾ’, ‘ಕಲವಾಣಿ’ ಚಿತ್ರಗಳಂತೆ ಇದು ಕೂಡ ಉದ್ಯಮದಲ್ಲಿ ಸಂಚಲನ ಉಂಟುಮಾಡುವ ನಿರೀಕ್ಷೆಯಿದೆ. ಡ್ಯಾನ್ಸ್ ಮಾಸ್ಟರ್ ಪ್ರಭುದೇವಾ ನಿರ್ದೇಶನದ ರೊಮ್ಯಾಂಟಿಕ್
ಸಿನಿಮಾ ‘ಎಂಗಿಯಂ ಕಾದಲ್’ ಮತ್ತೊಂದು ಭರವಸೆಯ ಚಿತ್ರ. ಜಯಂ ರವಿ ಮತ್ತು ಹನ್ಸಿಕಾ ಅಭಿನಯದ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಥಿಯೇಟರ್ಗೆ ಬರಲಿದೆ. ಹ್ಯಾರಿಸ್ ಸಂಯೋಜನೆಯ ಸಂಗೀತ ಕ್ಲಿಕ್ಕಾಗಿರುವುದು ಚಿತ್ರಕ್ಕೆ ಶ್ರೀರಕ್ಷೆ. ‘ಕುಟುಂಬದ ಎಲ್ಲರಿಗೂ ಮನರಂಜನೆ ಒದಗಿಸುವಂಥ ಪ್ರಯೋಗ. ಅದಕ್ಕಿಂತ ಹೆಚ್ಚಿನದಾಗಿ ಪ್ರೇಕ್ಷಕರನ್ನು ಹಿಡಿದಿಡುವಂಥ ಕಥಾಹಂದರವಿದೆ’ ಎನ್ನುತ್ತಾರೆ ಪ್ರಭು.
ಮೇ ತಿಂಗಳ ದೊಡ್ಡ ಸಿನಿಮಾ - ವಾನಂ. ಸಿಂಬು ನಟಿಸಿರುವ ಈ ಚಿತ್ರ ತೆಲುಗು ಸೂಪರ್ಹಿಟ್ ‘ವೇದಂ’ ರಿಮೇಕ್. ಬಾಲಾ ನಿರ್ದೇಶನದ ‘ಅವನ್ ಇವನ್’ ಚಿತ್ರವನ್ನೂ ಕಡೆಗಣಿಸುವಂತಿಲ್ಲ.ಆರ್ಯ ಮತ್ತು ವಿಶಾಲ್ ಇಲ್ಲಿ ಅಪರೂಪದ ಪಾತ್ರಗಳಲ್ಲಿ
ನಟಿಸಿದ್ದಾರೆ. ದೊಡ್ಡ ಸಿನಿಮಾಗಳೊಂದಿಗೆ ಭಿನ್ನ ಕಥಾವಸ್ತು ಹೊಂದಿರುವ ಯುವ ನಿರ್ದೇಶಕರೂ ಸ್ಪರ್ಧೆಯಲ್ಲಿದ್ದಾರೆ. ಸೆಮಿಫೈನಲ್ ಹಂತದಲ್ಲಿ ಐಪಿಎಲ್ ಕ್ರಿಕೆಟ್ ಕೂಡ ಸಿನಿಮಾಗೆ ಪೈಪೋಟಿ ನೀಡಲಿದೆ. ಆಗ ಗಟ್ಟಿ ಕಥೆ, ನಿರೂಪಣೆಯ ಚಿತ್ರಗಳಷ್ಟೇ
ಥಿಯೇಟರ್ನಲ್ಲಿ ಉಳಿಯುವುದು.

ಕ್ಲಿಕ್ ಆಗುತ್ತಾ ದೈವ ತಿರುಮಗನ್
ಈ ಬೇಸಿಗೆಯ ಭರವಸೆಯ ಚಿತ್ರಗಳಲ್ಲಿ ‘ದೈವ ತಿರುಮಗನ್’ ಪ್ರಮುಖವಾದುದು. ವಿಕ್ರಂ ಅಭಿನಯದ ಚಿತ್ರ ಮೇ ತಿಂಗಳಿನಲ್ಲಿ ತೆರೆಕಾಣಲಿದೆ. ‘ಮದ್ರಾಸಿಪಟ್ಟಣಂ’ (೨೦೧೦) ಖ್ಯಾತಿಯ ಎ.ಎಲ್.ವಿಜಯ್ ನಿರ್ದೇಶನದ ಪ್ರಯೋಗ. ಚಿತ್ರಕ್ಕೆ ಸಂಬಂ ಸಿದ ಎಲ್ಲಾ ಮಾಹಿತಿಯನ್ನೂ ಗೌಪ್ಯವಾಗಿಡಲಾಗಿತ್ತು. ಚಿತ್ರದ ಶೀರ್ಷಿಕೆ ಅಂತಿಮವಾಗಿದ್ದು ಕೂಡ ತೀರಾ ಇತ್ತೀಚೆಗೆ. ದೈವ ಮಗನ್, ಪಿತಾ, ಚೆಲ್ಲಂ, ಅಪ್ಪ.. ಹೀಗೆ ಏಳೆಂಟು ಶೀರ್ಷಿಕೆಗಳ ಪೈಕಿ ಅಂತಿಮವಾಗಿ ‘ದೈವ ತಿರುಮಗನ್’ ಆಯ್ಕೆಯಾಗಿದೆ. ನಿರ್ದೇಶಕ ವಿಜಯ್ ತಮ್ಮ ಚಿತ್ರದ ಕುರಿತಾಗಿ ಹೇಳುವುದು ಹೀಗೆ - ‘ವಿಕ್ರಂಪಾತ್ರದ ಹೆಸರು ಕೃಷ್ಣ. ಅವನು ದೇವರ ಮಗ. ಪ್ರೀತಿಯಿಂದ ಎಲ್ಲರೂ ‘ಚೆಲ್ಲ ಕುಟ್ಟಿಕೃಷ್ಣನ್’ ಎಂದೇ ಕರೆಯುತ್ತಾರೆ. ದೈಹಿಕಬೆಳವಣಿಗೆ ಸಮರ್ಪಕವಾಗಿದ್ದರೂ, ಮಾನಸಿ
ಕವಾಗಿ ಆತನಿನ್ನೂ ೫ ವರ್ಷದ ಬಾಲಕ. ಕಪಟ, ಮೋಸ ಅರಿಯದ ಮುಗ್ದ ಮನಸ್ಸಿನ ಕೃಷ್ಣ ದೇವರೊಂದಿಗೂ ಸಂಭಾಷಿಸುತ್ತಾನೆ’ ಜಿ.ವಿ.ಪ್ರಕಾಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ನಾಯಕ ವಿಕ್ರಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಇದು ತಮ್ಮ ವೃತ್ತಿ ಜೀವನಕ್ಕೊಂದು ತಿರುವು ನೀಡಲಿ ದೆ ಎಂದು ವಿಕ್ರಂ ಹೇಳಿಕೊಳ್ಳುತ್ತಾರೆ. ‘ಚಿತ್ರತಂಡದ ಸೂಕ್ತ ನೆರವು ಇದ್ದುದರಿಂದ ಇಂಥದ್ದೊಂದು ಪಾತ್ರ ನಿರ್ವಹಿಸಲು ಸಾಧ್ಯವಾಯ್ತು. ಹಿರಿಯ ನಟ ಭಾಸ್ಕರ್ ಶ್ರೇಷ್ಠ ಅಭಿನಯ ನೀಡಿದ್ದಾರೆ. ನಾಯಕಿಯರಾದ
ಅನುಷ್ಕಾ ಮತ್ತು ಅಮಲಾ ಪೌಲ್ರಿಗೆ ಚಿತ್ರ ಹೊಸದೊಂದು ಇಮೇಜು ಸೃಷ್ಟಿಸಲಿದೆ’ ಎನ್ನುವುದು ವಿಕ್ರಂ ಅಭಿಪ್ರಾಯ. ಹಿಂದೆ ‘ಪಿತಾಮಗನ್’ನಲ್ಲಿ ವಿಶಿಷ್ಠ ಪಾತ್ರ ನಿಭಾಯಿಸಿ ಸೈ ಎನಿಸಿಕೊಂಡವರು ವಿಕ್ರಂ. ಈಗ ಅವರ ಅಭಿಮಾನಿಗಳು ‘ದೈವ
ತಿರುಮಗನ್’ ಎದುರು ನೋಡುತ್ತಿದ್ದಾರೆ.

Tuesday, April 26, 2011

ಇದು ಪ್ರಕಾಶ್ ಶೆಟ್ಟಿ ಬಿಗ್ ನ್ಯೂಸ್


ಸಾಯಿಬಾಬಾ ಇನ್ನಿಲ್ಲಅಂತಾ ಎಲ್ಲರಿಗೂ ಗೊತ್ತಾಗಿ ಹೋಗಿದೆ. ಆದರೆ ಸಾಯಿಯ ಪುನರ್ಜನ್ಮದ ಕುರಿತು ಅಲ್ಲಿ ಇಲ್ಲಿ ಕತೆಗಳು ರೆಕ್ಕೆ ಬಿಚ್ಚಿಹಾರಾಡುತ್ತಿದೆ. ಸಾಯಿಬಾಬಾರ ಮುಂದಿನ ಜನ್ಮ ಮಂಡ್ಯದಲ್ಲಿ ‘ಪ್ರೇಮಸಾಯಿ’ ಎನ್ನುವ ಹೆಸರಿನಲ್ಲಿ ಆಗುತ್ತದೆ ಎನ್ನೋದು ಈ ಅಂತೆಕಂತೆಗಳ ಸಂತೆಯಲ್ಲಿ ಬಹಳ ಸುದ್ದಿಯಲ್ಲಿರುವ ವಿಚಾರ. ಸಾಯಿಯ ಪುನರ್ಜನ್ಮದ ಕುರಿತು ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಈ ರೀತಿಯಲ್ಲಿ ಪಂಚ್ ಕೊಟ್ಟಿದ್ದಾರೆ. ನೋಡಿ ನಕ್ಕು ಬಿಡಿ ಸಾಕು.

* ಸ್ಟೀವನ್ ರೇಗೊ, ದಾರಂದಕುಕ್ಕು

Saturday, April 23, 2011

ಚಿನ್ನಾ ಚಿನ್ನಾ ಚಿತ್ರ ಆಸೆ


ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಬರುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ ಎನ್ನೋದು ಸಧ್ಯಕ್ಕೆ ಬಂದಿರುವ ಮಾಹಿತಿ. ಉಳಿದ ವಿಚಾರಗಳಿಗೆ ಓದಿ ನೋಡಿ....

ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಈಗ ಮತ್ತೊಂದು ಸಿನ್ಮಾ ಕಳೆ ಬಂದಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ಸಿನ್ಮಾ ಮಾಡ್ತಾರೆ ಎನ್ನುವ ಸುದ್ದಿ ಬಹಳ ಹಿಂದೆ ಹರಡಿಕೊಂಡಿತ್ತು. ಆದರೆ ಈಗ ಅದು ದೃಢಪಟ್ಟಿದೆ. ಚಿನ್ನಾ ನಿರ್ದೇಶನ ಮಾಡುವ ಚಿತ್ರ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಇದರ ಮುಹೂರ್ತ ಏ.೨೨ ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕರಾವಳಿಯ ಲೋಕಲ್ ಭಾಷೆಗಳಲ್ಲಿ ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ.
ಚಿನ್ನಾ ಟಾಕಿಂಗ್:
‘ಉಜ್ವಾಡು ’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ಅದೇ ಕತೆಯಾಗಿ ‘ಉಜ್ವಾಡು’ ಚಿತ್ರವಾಗಲಿದೆಯಂತೆ ಎನ್ನೋದು ಅವರ ಮಾತು. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಲಿದೆ. ಈ ವರ್ಷದ ಕೊನೆ ಭಾಗದಲ್ಲಿ ಚಿತ್ರವನ್ನು ಕರಾವಳಿಯ ಥಿಯೇಟರ್‌ಗಳಿಗೆ ತರುವ ಯೋಜನೆ ಇದೆ. ‘ಉಜ್ವಾಡು’ ಚಿತ್ರ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾತ್ರ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ ಎನ್ನೋದು ನನ್ನ ವಿಶ್ವಾಸ’ ಎನ್ನುತ್ತಾರೆ ಕಾಸರಗೋಡು ಚಿನ್ನಾ.
ಉಜ್ವಾಡು ಬ್ಯಾಕ್ ಗ್ರೌಂಡ್:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕುತ್ತಿದ್ದಾರೆ. ಚಿತ್ರ ಕಾರ್ಕಳದ ಅಸುಪಾಸು ಚಿತ್ರೀಕರಣವಾಗಲಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.
..........
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ೨೨.೦೪.೨೦೧೧ ರಂದು ಪ್ರಕಟವಾದ ಲೇಖನ.
...............

ಐಶ್ ಬ್ಯೂಟಿ



ಐಶ್ವರ್ಯಾ ರೈ ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುವುದು ಜಗಜ್ಜಾಹೀರು. ಈ ಐಶ್ವರ್ಯಾ ಎಂಬ ಸೌಂದರ್ಯದ ಖನಿಯ ಬ್ಯೂಟಿ ಸಿಕ್ರೇಟ್ ಏನೂ ಅಂತಾ ನಿಮಗೊತ್ತಾ..? ಬನ್ನಿ ತುಂಬಾನೇ ಸಿಂಪಲ್ ಇದೆ.

ಐಶ್ವರ್ಯಾ ರೈ ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುವುದು ಜಗಜ್ಜಾಹೀರು. ವಯಸ್ಸು ೩೭ ದಾಟಿದರೂ ಇಂದಿಗೂ ತನ್ನ ರೂಪ ಪ್ರತಿಭೆಯಿಂದಾಗಿ ಮುಂಚೂಣಿಯಲ್ಲಿರುವ ನಟಿ. ವಿಶ್ವ ಸುಂದರಿಯಾಗಿ ಬದುಕನ್ನು ತಾನು ಬಯಸಿದ ಹಾಗೆ ಕಟ್ಟಿಕೊಂಡ ಜಾಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪ್ರಚಾರ ಪಡಿಸಿದ ಬೆಡಗಿ. ಐಶ್ ಮಾದಕವಾಗಿಯೂ ಕಾಣಬಲ್ಲ ಚತುರೆ. ಅಪ್ಪಟ ಭಾರತೀಯ ನಾರಿಯಾಗಿಯೂ ಕಂಗೊಳಿಸಬಲ್ಲ ಕುಡ್ಲದ ಪೊಣ್ಣು.
ಈ ತುಳುನಾಡ ಬೆಡಗಿ ತನ್ನ ಜೀವನದ ಒಂದೊಂದೇ ಮೆಟ್ಟಿಲನ್ನೂ ಏರಿ ಬೆಳೆದದ್ದೇ ಒಂದು ಯಶೋಗಾಥೆ. ಸೊಸೆಯಾಗಿ, ಪತ್ನಿಯಾಗಿ, ಮಗಳಾಗಿ ತನ್ನ ವೃತ್ತಿ ಬದುಕಿನಲ್ಲೂ ಅಷ್ಟೇ ಮಟ್ಟಿನ ಸ್ವಷ್ಟತೆಯನ್ನು, ಯಶಸ್ಸನ್ನೂ ಕಾಯ್ದುಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ಈ ಐಶ್ ಅವೆಲ್ಲವೂಗಳನ್ನೂ ಸಮರ್ಥವಾಗಿ ನಿಭಾಯಿಸಿದವಳು. ಈ ಐಶ್ವರ್ಯಾ ಎಂಬ ಸೌಂದರ್ಯದ ಖನಿಯ ಬ್ಯೂಟಿ ಸಿಕ್ರೇಟ್ ಬಗ್ಗೆ ಗೊತ್ತಾ? ತುಂಬಾನೇ ಸಿಂಪಲ್. ಆಕೆಯೇ ಹೇಳಿಕೊಂಡಂತೆ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಅನುಸರಿಸುವ ದಿನನಿತ್ಯದ ಅಭ್ಯಾಸಗಳು ಇಲ್ಲಿವೆ.
ಪಕ್ಕಾ ನ್ಯಾಚುರಲ್ ವಸ್ತುಗಳ ಬಳಕೆ ಐಶ್ಚರ್ಯಾದು. ಕೆಮಿಕಲ್ ಬ್ಯೂಟಿ ಪ್ರಾಡಕ್ಟ್‌ಗಳಿಗಿಂತಲೂ ನ್ಯಾಚುರಲ್ ಬ್ಯೂಟಿ ಪ್ರಾಡಕ್ಟ್‌ಗಳೆಡೆಗೆ ಹೆಚ್ಚು ಮಹತ್ವ. ರಾಸಾಯನಿಕ ಸೌಂದರ್ಯ ವರ್ಧಕಗಳಿಂದ ಮಾರು ದೂರ. ಕಳಾಹೀನವಾದ ಕೂದಲುಗಳಿಗೆ ದಿನವೂ ಪ್ರಾಕೃತಿಕವಾಗಿಯೇ ಪೋಷಣೆ ನೀಡುವ ಐಶ್ ಭಾರತದ ಪುರಾತನ ಸೌಂದರ್ಯ ಟಿಪ್ಸ್‌ಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದವರು. ಶೂಟಿಂಗ್ ಮುಗಿಸಿ ಮನೆಗೆ ಬಂದ ಮೇಲೆ, ಚರ್ಮವನ್ನು ಪ್ರತಿದಿನವೂ ಮೃದುವಾಗಿ ತಿಳಿಯಾಗಿಸಲು ಸೌತೆಕಾಯಿ ಬಳಕೆ. ಪ್ರತಿದಿನವೂ ಶೂಟಿಂಗ್ ಮುಗಿಸಿದ ಮೇಲೆ ಕ್ಲೀನಾಗಿ ಮುಖ ತೊಳೆದು, ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಮುಖಕ್ಕೆ ವರ್ತುಲವಾಗಿ ಉಜ್ಜುವುದು.
ಕಡಲೇ ಹಿಟ್ಟಿನ ಪೇಸ್ಟಿನಿಂದ ಚರ್ಮ ಶುದ್ಧಿಗೊಳಿಸುವುದು. ನಂತರ ಹಾಲು ಹಾಗೂ ಮೊಸರಿನ ಪ್ಯಾಕ್ ಲೇಪಿಸಿ ಚರ್ಮವನ್ನು ಮಾಯ್‌ಶ್ಚರೈಸ್ ಮಾಡುವುದು. ಆಗಾಗ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವುದು. ಭಾರತದಲ್ಲಿ ಬಹು ಪ್ರಸಿದ್ಧವಾದ ಕಡಲೇ ಹಿಟ್ಟಿನ ಫೇಸ್ ಐಶ್‌ರ ದಿನನಿತ್ಯದ ಹವ್ಯಾಸ. ಸ್ವಲ್ಪ ಕಡಲೇ ಹಿಟ್ಟಿಗೆ ಸ್ವಲ್ಪ ಅರಿಶಿನ ಸೇರಿಸಿ ಅದಕ್ಕೆ ಮೊಸರು ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ತೊಳೆಯುವುದು. ಶ್ರೀಗಂಧ, ಮುಲ್ತಾನಿ ಮಿಟ್ಟಿ, ಅರಿಶಿನ ಪುಡಿ ಮಿಕ್ಸ್ ಮಾಡಿ ಅದಕ್ಕೆ ಮೊಸರು ಹಾಗೂ ಹಾಲು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ತೊಳೆಯುವುದು. ಮನೆಯಲ್ಲಿರುವಷ್ಟೂ ಹೊತ್ತು ಮೇಕಪ್ ರಹಿತಾವಾಗಿದ್ದು, ಚರ್ಮವನ್ನು ಉಸಿರಾಡಲು ಬಿಡುವುದು. ಕಠಿಣ ಆಹಾರಕ್ರಮ ಪಾಲಿಸುವುದು ಕೂಡಾ ಆಕೆಯ ದಿನಚರಿ. ಕರಿದ, ಎಣ್ಣೆ ಹಚ್ಚಿರುವ ತಿನಸುಗಳು, ಜಂಕ್‌ಫುಡ್‌ಗಳಿಂದ ಐಶ್ ದೂರ, ಬಹುದೂರ !
ಧೂಮಪಾನ, ಮದ್ಯಪಾನಗಳಿಂದಲೂ ಸದಾ ದೂರವಿರುವುದು. ಯಾವತ್ತೂ ಹೊಟ್ಟೆ ತುಂಬಿ ತುಳುಕುವಷ್ಟು ತಿನ್ನುವುದರಿಂದ ದೂರವಿರುವುದು ಹಾಗೂ ಹಿತವಾಗಿ ಮಿತವಾಗಿ ಉಣ್ಣುವುದು. ಪ್ರತಿದಿನವೂ ೮ ಲೋಟಗಳಿಗಿಂತಲೂ ಹೆಚ್ಚು ನೀರು ಕುಡಿಯುವ ಮೂಲಕ ಮುಖದ ಚರ್ಮವನ್ನು ಸದಾ ತಿಳಿಯಾಗಿಸಿಕೊಳ್ಳುವುದು. ಬೆಳಗ್ಗೆ ಎದ್ದ ತಕ್ಷಣ ಎರಡು ಮೂರು ಲೋಟ ನೀರು ಕುಡಿಯುವುದು. ಕೆಲಸ ಎಷ್ಟೇ ಕಠಿಣವಾಗಿರಲಿ, ಎಷ್ಟೇ ಸುಸ್ತಾಗಲಿ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವ ಕಾರ್ಯಕ್ಕೆ ಅದರದ್ದೇ ಆದ ಪ್ರಾಧ್ಯಾನ್ಯತೆ ನೀಡುವುದು ಐಶ್ ದಿನಚರಿ.
ಸದಾ ತನಗೊಪ್ಪುವ ಬಣ್ಣ ಹಾಗೂ ಡಿಸೈನ್‌ನ ಬಟ್ಟೆಗಳನ್ನು ಧರಿಸುವ ಮೂಲಕ ಇನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳುವುದು. ಕೊಂಚ ಯೋಗ, ಧ್ಯಾನ, ದೇವರೆಡೆಗೆ ಭಕ್ತಿ ಇವೆಲ್ಲವೂ ಐಶ್ ದಿನಚರಿ. ಪ್ರತಿದಿನವೂ ನಗುಮೊಗದಿಂದಲೇ ದಿನದಾರಂಭ. ಪಾಸಿಟಿವ್ ಥಿಂಕಿಂಗ್, ಮುಖದಲ್ಲಿ ನಗು ಇವೆಲ್ಲವೂ ನಿಜವಾದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುವುದರಲ್ಲಿ ಐಶ್ವರ್ಯಾಗೆ ಅಚಲವಾದ ನಂಬಿಕೆಯಂತೆ.
.............
ವಿಜಯ ಕರ್ನಾಟಕದ ಲವಲವಿಕೆಯಲ್ಲಿ ೨೩.೦೪.೨೦೧೧ ರಂದು ಪ್ರಕಟವಾದ ಲೇಖನ.
..................

ಪ್ರಕಾಶ್ ಶೆಟ್ಟರ ರಾಂಗ್ ರೈಡ್


ಅಣ್ಣಾ ಹಜಾರೆ ಲೋಕಪಾಲ್ ವಿಧೇಯಕದ ಕುರಿತು ಬಹಳ ಸಿರೀಯಸ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತು ಬಿಡಿ. ಆದರೆ ಹಜಾರೆ ಜತೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಕೂಡ ಸಿರೀಯಸ್ ಆಗಿದ್ದಾರೆ ಎನ್ನುವ ವಿಚಾರವೊಂದು ಬಹಿರಂಗ ಗೊಂಡಿದೆ. ಲೋಕಪಾಲ್ ವಿಧೇಯಕ ಎಲ್ಲಿ ಹೋಯಿತು.? ಆ ವಿಚಾರ ಏನಾಯಿತು..? ಎಂಬ ಕುರಿತು ಪ್ರಕಾಶ್ ಶೆಟ್ಟಿ ರಾಂಗ್ ರೈಡ್ ಮಾಡಿದ್ದಾರೆ. ಬನ್ನಿ ಕಾರ್ಟೂನ್ ನೋಡಿ... ನಕ್ಕು ಬಿಡಿ.. ಸಿರೀಯಸ್ ವಿಚಾರವನ್ನು ಗಮನದಲ್ಲಿಡಿ.

* ಸ್ಟೀವನ್ ರೇಗೊ, ದಾರಂದಕುಕ್ಕು

Wednesday, April 20, 2011

ಹುಸೇನ್ ಸಾಹೇಬ್ರ ವಾವ್ ತಾಜ್ !


ಹೊಸದಿಲ್ಲಿಯ ಆಲ್ ಇಂಡಿಯಾ ಫೈನ್ ಆರ್ಟ್ಸ್ ಆಂಡ್ ಕ್ರಾಫ್ಟ್ ಸೊಸೈಟಿ ಏರ್ಪಡಿಸಿದ್ದ ರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಅಖ್ತರ್ ಹುಸೇನ್ ಅವರ ‘ಲವ್ ಟಾರ್ನಿಶ್‌ಡ್’ ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿದೆ. ‘ಲೈಟ್ ಆಂಡ್ ಶೇಡ್ಸ್ ಆಫ್ ಸೈನ್ಸ್ ಹೆಸರಿನಡಿಯಲ್ಲಿ ೨೦೦೯ರ ಜೂನ್‌ನಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ಏ.೧೭ರ ವರೆಗೆ ಹೊಸದಿಲ್ಲಿಯ ಎಐಎಫ್‌ಎಸಿಎಸ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದೇ ಸಂದರ್ಭ ಪ್ರಶಸ್ತಿ ವಿತರಣೆ ಸಮಾರಂಭವೂ ನಡೆಯಿತು.

Tuesday, April 19, 2011

ದುರಂತ ನಗರಿಯ ಬೆಡಗಿ ಬಣ್ಣದ ಮೀನಾ ಬದುಕು ಸಿನಿಮಾ



ಮೀನಾ ಹುಟ್ಟಿದಾಗಲೂ ಹೆತ್ತವರ ಕೈಯಲ್ಲಿ ಕಾಸಿರಲಿಲ್ಲ. ದೊಡ್ಡ ನಾಯಕಿಯಾಗಿ ಹೆಸರು ಮಾಡಿ ಬದುಕಿನ ಕೊನೆ ಕ್ಷಣದಲ್ಲೂ ಮೀನಾರ ಕೈಯಲ್ಲಿ ಆಸ್ಪತ್ರೆಗೆ ನೀಡಲು ಹಣ ಇರಲಿಲ್ಲ. ಇದು ಮೀನಾ ಕುಮಾರಿ ಎಂಬ ಟ್ರ್ಯಾಜಿಡಿ ಕ್ವೀನ್ ಬದುಕು.

‘ದಿಲ್ ಸಾ ಜಬ್ ಸಾಥಿ ಪಾಯಾ
ಬೇಚೇನ್ ಬೀ ಸಾತ್ ವೋ ಲೇ ಅಯಾ’(ಮನಸ್ಸಿಗೆ ಹತ್ತಿರದ ಗೆಳೆಯನನ್ನು ಪಡೆದೆ ಅದರ ಬೆನ್ನಿಗೆ ದು:ಖವನ್ನು ಅವನು ಜತೆಯಲ್ಲಿ ತಂದ )
ಇದು ಬಾಲಿವುಡ್‌ನ ದುರಂತ ನಾಯಕಿ ಎಂದೇ ಕರೆಯಲಾಗುವ ಮೀನಾ ಕುಮಾರಿಯ ಬದುಕು. ಮೀನಾ ಕುಮಾರಿ ಎಂದಾಕ್ಷಣ ಸಿನಿ ಪ್ರೇಕ್ಷಕನ ಮನಸ್ಸು ೧೯೪೦ಕ್ಕೆ ಓಡಿ ನಿಂತುಬಿಡುತ್ತದೆ. ಅವರು ಅಂದಿನ ಕಾಲದ ಸೂಪರ್ ಲೀಡ್ ನಾಯಕಿ. ಚಿಕ್ಕ ಅವಯೊಳಗೆ ಬಾಲಿವುಡ್‌ನಲ್ಲಿ ಮಹಾರಾಣಿಯಂತೆ ಮರೆದು ನಿಂತವರು. ಆದರೆ ಬದುಕಿನ ಚಕ್ರದಲ್ಲಿ ಮೀನಾರ ಬದುಕು ಎಲ್ಲಿತ್ತೋ ಅಲ್ಲಿಯೇ ಬಂದು ನಿಂತು ಬಿಟ್ಟದ್ದು ಮಾತ್ರ ಬಹಳ ದೊಡ್ಡ ದುರಂತ ! ಯಾಕೇ ಅಂತಾ ಕೇಳ್ತೀರಾ...? ಅದಕ್ಕೆ ಉತ್ತರ ‘ಸಾಹೀಬ್ ಬೀಬಿ ಔರ್ ಗುಲಾಮ್’ಚಿತ್ರ ನೋಡಿ. ೧೯೬೨ರಲ್ಲಿ ಬಾಲಿವುಡ್‌ನಲ್ಲಿ ಬಂದ ಮೋಸ್ಟ್ ಸಕ್ಸಸ್ ರೇಟೆಡ್ ಸಿನ್ಮಾ ಇದು. ಈ ಚಿತ್ರದ ಕತೆಗೂ ಮೀನಾರ ಬದುಕಿಗೂ ಬಹಳ ಹತ್ತಿರದ ನಂಟಿದೆ. ಒಂದಾರ್ಥದಲ್ಲಿ ಮೀನಾ ಕುಮಾರಿಯ ಬದುಕೇ ಈ ಸಿನ್ಮಾದಲ್ಲಿ ಕತೆಯಾಗಿದೆ ಎನ್ನೋದು ಬಹಳ ಸೂಕ್ತ. ಮೀನಾ ಹುಟ್ಟಿದಾಗಲೂ ಹೆತ್ತವರ ಕೈಯಲ್ಲಿ ಕಾಸಿರಲಿಲ್ಲ. ದೊಡ್ಡ ನಾಯಕಿಯಾಗಿ ಹೆಸರು ಮಾಡಿ ಬದುಕಿನ ಕೊನೆ ಕ್ಷಣದಲ್ಲೂ ಮೀನಾರ ಕೈಯಲ್ಲಿ ಆಸ್ಪತ್ರೆಗೆ ನೀಡಲು ಹಣ ಇರಲಿಲ್ಲ. ಇದು ಮೀನಾ ಕುಮಾರಿ ಎಂಬ ಟ್ರ್ಯಾಜಿಡಿ ಕ್ವೀನ್ ಬದುಕು.
ಬನ್ನಿ ಮೀನಾರ ಫ್ಲ್ಯಾಶ್ ಬ್ಯಾಕ್‌ಗೆ ತಿರುಗಿ ಬಿಡೋಣ. ಆಲಿ ಭಕ್ಷ್ ಪರ್ಶಿಯಾದ ಒಬ್ಬ ರಂಗ ಕಲಾವಿದ. ಜತೆಗಿಷ್ಟು ಟೈಮ್ ಪಾಸ್ ಮಾಡಲು ಉರ್ದು ಕವಿತೆಗಳನ್ನು ಬಹಳ ಚೆನ್ನಾಗಿ ಬರೆಯುತ್ತಿದ್ದ. ಈ ಸಮಯದಲ್ಲಿ ರಂಗಭೂಮಿ ಕಲಾವಿದೆ ಹಾಗೂ ನೃತ್ಯಗಾರ್ತಿ ಇಕ್ಬಾಲ್ ಬೇಗಂ ಜತೆ ಸ್ನೇಹ ಬೆಳೆದು ಬಿಡುತ್ತದೆ. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆ ನಡೆಯುತ್ತದೆ. ಇವರಿಬ್ಬರ ಮೂರನೇ ಮಗಳಾಗಿ ಹುಟ್ಟುವವಳೇ ಮಹಾಜಾಬೀನ್ ಬಾನು. ಮೀನಾ ಕುಮಾರಿಯನ್ನು ಹೆತ್ತವರು ಕರೆದದ್ದು ಇದೇ ಹೆಸರಿನಲ್ಲಿ. ಆದರೆ ಸಿನಿಮಾ ಜಗತ್ತು ನಂತರ ಅವರನ್ನು ‘ಮೀನಾ ಕುಮಾರಿ ’ಎಂದೇ ಕರೆಯಿತು. ಮೀನಾ ಹುಟ್ಟುವಾಗ ಹೆತ್ತವರು ದಟ್ಟ ದಾರಿದ್ರ್ಯದಲ್ಲಿದ್ದರು. ಬೇಗಂರ ಪ್ರಸೂತಿ ಸಮಯದಲ್ಲಿ ವೈದ್ಯರಿಗೆ ಫೀಸ್ ಕೊಡಲು ಇವರ ಬಳಿ ಹಣ ಇರಲಿಲ್ಲವಂತೆ !
ಆಲಿಭಕ್ಷ್ ಮುಂಬಯಿಯ ರೂಪರ್ಥಾ ಸ್ಟುಡಿಯೋದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾಗ ಅಲ್ಲಿಗೆ ತಂದೆಯ ಜತೆಯಲ್ಲಿ ಬರುತ್ತಿದ್ದ ಮೀನಾರನ್ನು ನೋಡಿ ಸಿನಿಮಾ ನಿರ್ದೇಶಕರು ನಟಿಸುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಆದರೆ ಮೀನಾಗೆ ಅದು ಒಂಚೂರು ಇಷ್ಟವಾಗುತ್ತಿರಲಿಲ್ಲ. ಮೀನಾ ತನ್ನ ತಾಯಿ ಇಕ್ಬಾಲ್ ಬೇಗಂ ಬಳಿಯಲ್ಲಿ ಒಂದು ಪದೇ ಪದೇ ಹೇಳುತ್ತಿದದ್ದು ಒಂದೇ ಮಾತು. ‘ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ನಾನು ಇತರ ಮಕ್ಕಳಂತೆ ಶಾಲೆಗೆ ಹೋಗುತ್ತೇನೆ ’ಎನ್ನುತ್ತಿದ್ದಾರಂತೆ. ಆದರೆ ಬಡತನದ ಕುಲುಮೆಯಲ್ಲಿದ್ದ ತಂದೆ ಆಲಿಭಕ್ಷ್ ಮಗಳನ್ನು ಸಿನಿಮಾದಲ್ಲಿ ನಟಿಸುವಂತೆ ಒತ್ತಡ ಹಾಕುತ್ತಿದ್ದ. ಅಂತೂ ಇಂತೂ ತಂದೆಯ ಒತ್ತಡಕ್ಕೆ ಬಿದ್ದು ೭ರ ಹರೆಯದಲ್ಲಿ ಬೇಬಿ ಮೀನಾ ಕುಮಾರಿ ‘ಫರ್ಜ್ ಹೀ ವತನ್’ ಚಿತ್ರದಲ್ಲಿ ನಟಿಸಿದರು. ಅದೇ ಅವರ ಮೊದಲ ಚಿತ್ರ. ಪ್ರಕಾಶ್ ಸ್ಟುಡಿಯೋ ಬ್ಯಾನರ್‌ನಡಿಯಲ್ಲಿ ವಿಜಯ್ ಭಟ್ಟ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ೧೯೪೦ರ ಹೊತ್ತಿಗೆ ಬೇಬಿ ಮೀನಾ ಕುಮಾರಿ ಪ್ರಬುದ್ಧ ನಟಿಯಾಗಿ ಹೊರಬಂದರು.
ಐತಿಹಾಸಿಕ ಚಿತ್ರಗಳಾದ ವೀರ್ ಘಟೋತ್ಕಜ(೧೯೪೯), ಶ್ರೀಗಣೇಶ್ ಮಹಿಮಾ(೧೯೫೦) ಫ್ಯಾಂಟಸಿ ಚಿತ್ರ ಅಲ್ಲಾದ್ದೀನ್ ಮತ್ತು ಅದ್ಬುತ ದೀಪ(೧೯೫೨)ರಲ್ಲಿ ಕಾಣಿಸಿಕೊಂಡಿದ್ದರು. ನಂತರ ಬಿಜ್ಜು ಬಾವುರಾ(೧೯೫೨)ಚಿತ್ರದಲ್ಲಿ ನಾಯಕಿಯಾಗಿ ಮೀನಾ ಕುಮಾರಿ ಕಾಣಿಸಿಕೊಂಡರು. ಈ ಚಿತ್ರಕ್ಕಾಗಿ ಮೊದಲ ಫಿಲಂಫೇರ್ ಅವಾರ್ಡ್ ಪಡೆದುಕೊಂಡರು. ತನ್ನ ನಾನಾ ಚಿತ್ರಗಳಿಗಾಗಿ ೧೪ ಬಾರಿ ಫಿಲಂಫೇರ್ ಅವಾರ್ಡ್‌ಗೆ ನಾಮಕಿಂತಗೊಂಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಅದರಲ್ಲೂ ಮೀನಾ ಕುಮಾರಿಯನ್ನು ಯಶ್ಸಿಸಿನ ಉತ್ತುಂಗಕ್ಕೆ ಕರೆದು ಕೂರಿಸಿದ ಚಿತ್ರಗಳಂದರೆ ‘ಪರಿಣೀತಾ’, ‘ದೀರಾ’, ‘ಏಕ್ ಹೀ ರಸ್ತಾ’, ‘ಶಾರದಾ’, ‘ದಿಲ್ ಅಪ್‌ನಾ ಔರ್ ಪ್ರೀತ್ ಪರಾಹೀ’ಯಲ್ಲಿ ಅಳುಮುಂಜಿಯಲ್ಲಿ ಕಾಣಿಸಿಕೊಂಡರು. ‘ಅಝದ್’, ‘ಮಿಸ್ ಮೇರಿ’, ‘ಶರ್ತ್’, ‘ಕೋಹಿನೂರ್’ ಚಿತ್ರಗಳ ಪಾತ್ರಗಳು ಕುರಿತು ಪ್ರೇಕ್ಷಕ ವರ್ಗದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಒಂದು ಸಿನಿಮಾ ಕತೆ:
ನಿರ್ದೇಶಕ ಗುರುದತ್ತ್‌ರ ‘ಸಾಹೀಬ್ ಬೀಬಿ ಔರ್ ಗುಲಾಂ’(೧೯೬೨)ನಲ್ಲಿ ಚೋಟಿ ಬಾವು ಪಾತ್ರದಲ್ಲಿ ಮೀನಾ ಮದ್ಯವ್ಯಸನಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ ಕಮರ್ಷಿಯಲ್ ದೃಷ್ಟಿಯಲ್ಲೂ ಸಕ್ಸಸ್ ಕಂಡಿತು. ಇಂದಿಗೂ ಈ ಪಾತ್ರ ಹಿಂದಿ ಸಿನಿಮಾಗಳಲ್ಲಿಯೇ ಅತೀ ಉತ್ತಮ ಪಾತ್ರ ಎಂದೇ ಪರಿಗಣಿಸಲಾಗುತ್ತದೆ. ಅಂದಹಾಗೆ ಇದು ಬರೀ ಸಿನಿಮಾದ ಪಾತ್ರ ಮಾತ್ರವಾಗಿರಲಿಲ್ಲ . ಬದಲಾಗಿ ಮೀನಾ ಕುಮಾರಿಯ ಬದುಕಿನ ಪಾತ್ರವೇ ಆಗಿ ಹೋಗಿತ್ತು. ‘ಪಿಯಾ ಐಸಾ ಜೀಯಾ ಮನ್...’ ಹಾಡು ಮಹಿಳೆಯರಲ್ಲಿ ಅಡಗಿ ಕೂತಿರುವ ಪ್ರೀತಿ ಹಾಗೂ ಕಾಮದ ಭಾವನೆಗಳನ್ನು ಜಾಗೃತ ಮಾಡುವ ಹಾಡು ಸರ್ವಕಾಲಕ್ಕೂ ಸೂಕ್ತ ಎಂದೇ ವಿಮರ್ಶಕರು ಬರೆದರು. ಈ ಪಾತ್ರದಲ್ಲಿ ತನ್ನ ಆಕಾಂಕ್ಷೆಗಳನ್ನು ಗಂಡ ಪೂರೈಸದೇ ಇದ್ದಾಗ ಅವಳು ಮದ್ಯಕ್ಕೆ ಶರಣಾಗೋದು ನಂತರ ಮತ್ತೊಬ್ಬ ನ ಆಸರೆ ಪಡೆಯಲು ಶ್ರಮ ಪಡೋದು ಎಲ್ಲವೂ ಮೀನಾ ಕುಮಾರಿ ನಿಜ ಬದುಕಿನಲ್ಲಿ ಘಟಿಸಿದ ವಿಚಾರಗಳಾಗಿತ್ತು. ಈ ಚಿತ್ರದ ನಂತರ ನಾಲ್ಕು ವರ್ಷ ಮೀನಾ ಕುಮಾರಿಯನ್ನು ಯಾರು ಕೂಡ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ‘ದಿಲ್ ಏಕ್ ಮಂದಿರ್’, ‘ಕಾಜಲ್’, ‘ಪೂಲ್ ಔರ್ ಪತ್ತರ್ ’ಎಲ್ಲವೂ ಫಿಲ್ಮ್‌ಫೇರ್‌ಗೆ ನಾಮಕಿಂತಗೊಂಡಿದ್ದು ಮಾತ್ರವಲ’ ‘ಕಾಜಲ್ ’ಚಿತ್ರದ ನಟನೆಗಾಗಿ ಉತ್ತಮ ನಟಿ ಅವಾರ್ಡ್‌ನ್ನು ಪಡೆದುಕೊಂಡಿದ್ದರು.
ಪ್ರೀತಿ ಕೊಡದ ಮದುವೆ:
೧೯೫೨ರಲ್ಲಿ ಮೀನಾ ಕುಮಾರಿ ಖ್ಯಾತ ಬಾಲಿವುಡ್ ನಿರ್ದೇಶಕ, ವಿವಾಹಿತ ಕಮಲ್ ಅಮರೋಹಿ ಅವರನ್ನು ಪ್ರೀತಿಸಿ, ಮದುವೆಯಾಗುತ್ತಾರೆ. ಅವರು ಮೀನಾಕ್ಕಿಂತ ೧೫ ವರ್ಷ ವಯಸ್ಸಿನಲ್ಲಿ ದೊಡ್ಡವರು. ಕಮಲ್ ಅಮರೋಹಿ ಮದುವೆಯಾದ ನಂತರ ಮೀನಾ ಕುಮಾರಿ ಚಿತ್ರಗಳನ್ನು ನಿರ್ಮಾಣ ಮಾಡಲು ಹೊರಟರು. ಮೊತ್ತ ಮೊದಲಿಗೆ ‘ದೀರಾ’ ಚಿತ್ರವನ್ನು ನಿರ್ಮಾಣ ಮಾಡಿದರು. ನಿಜಕ್ಕೂ ಅದು ಅವರಿಬ್ಬರ ಪ್ರೀತಿ ಕತೆಯಾಗಿತ್ತು. ನಂತರ ಮತ್ತೊಂದು ಚಿತ್ರಕ್ಕೆ ಮುಹೂರ್ತ ನಡೆಯಿತು. ಅದುವೇ ‘ಪಕೀಜಾ’ ಆದರೆ ಅದು ಪರದೆಗೆ ಬರಬೇಕಾದರೆ ೧೪ ವರ್ಷ ತೆಗೆದುಕೊಂಡಿತು. ಆದರೆ ಅಮರೋಹಿ ಮೀನಾ ಕುಮಾರಿಯಿಂದ ಮಕ್ಕಳನ್ನು ಪಡೆಯಲು ಬಯಸಿರಲಿಲ್ಲ. ಕಾರಣ ಅಮರೋಹಿ ತನ್ನ ಮೊದಲ ಪತ್ನಿಯಿಂದ ಒಬ್ಬ ಪುತ್ರನನ್ನು ಪಡೆದಿದ್ದರು.
ಈ ಪುತ್ರ ಕೂಡ ಮೀನಾಕುಮಾರಿಯನ್ನು ತನ್ನ ತಾಯಿಯಂತೆ ಭಾವಿಸಿಕೊಂಡಿದ್ದ. ಮತ್ತೊಂದು ಮಗುವಾದರೆ ಎಲ್ಲಿ ಮೀನಾರಿಗೆ ತನ್ನ ಪುತ್ರನ ಮೇಲಿನ ಪ್ರೀತಿ ಕಡಿಮೆಯಾಗುವುದೋ ಎಂದು ಅಮರೋಹಿ ಭಾವಿಸಿಬಿಟ್ಟಿದ್ದರು. ಈ ಒಂದು ವಿಚಾರದಿಂದಲೇ ಮೀನಾ ಕುಮಾರಿ ಹಾಗೂ ಕಮಲ್ ಅಮರೋಹಿ ನಡುವೆ ಮನಸ್ತಾಪ ಹೆಚ್ಚಾಗುತ್ತಿತ್ತು. ತನಗೆ ಪತಿಯಿಂದ ಲೈಂಗಿಕ ಸುಖ ಸಿಗುತ್ತಿಲ್ಲ ಎಂದು ತನ್ನ ಆತ್ಮೀಯ ಸ್ನೇಹಿತರ ವಲಯದಲ್ಲಿ ಹೇಳಿಕೊಂಡಿದ್ದಳು ಮೀನಾ. ಇದೇ ವಿಚಾರ ಇಬ್ಬರ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿತು. ೧೯೬೪ರಲ್ಲಿ ಇಬ್ಬರಿಗೂ ವಿಚ್ಚೇದನ ನಡೆದು ಹೋಯಿತು. ಈ ವಿಚ್ಛೇದನದಿಂದ ಮೀನಾ ಕಂಗಾಲಾಗಿದ್ದರು. ಆಗ ನಟ ಧರ್ಮೇಂದ್ರ ಜತೆಯಲ್ಲಿ ಸಂಬಂಧ ಬೆಳೆಸಲು ಪ್ರಯತ್ನಿಸಿದರು.
ಈ ನಡುವೆ ಮೀನಾ ನಟಿಸಿದ ಚಿತ್ರಗಳು ‘ಚಂದನ್ ಕಾ ಪಲಾನಾ’ ಹಾಗೂ ‘ಮಜಾಲಿ ದೀದಿ’ ಬಾಲಿವುಡ್‌ನಲ್ಲಿ ಮಕಾಡೆ ಮಲಗಿತು. ಒಂದರ ಹಿಂದೆ ಒಂದರಂತೆ ಚಿಂತೆಗಳು ಹೆಚ್ಚಾಯಿತು. ಅಲ್ಲಿಂದ ಮೀನಾ ನಿಧಾನವಾಗಿ ಕುಡಿತದ ದಾಸಿಯಾದರು. ಮದ್ಯದ ಆಕರ್ಷಣೆ ಎಷ್ಟು ಜೋರಾಗಿತ್ತು ಎಂದರೆ ಮದ್ಯ ಇಲ್ಲದೇ ಮೀನಾ ಇಲ್ಲ ಎನ್ನುವ ಪರಿಸ್ಥಿತಿ ಬಂದು ನಿಂತಿತು. ವಿಪರೀತ ಕುಡಿತದಿಂದ ಮೀನಾ ಕುಮಾರಿ ಕರುಳು ಡ್ಯಾಮೇಜ್ ಆಯಿತು. ೧೯೬೮ರಲ್ಲಿ ಕುರುಳಿನ ತೊಂದರೆಯ ಚಿಕಿತ್ಸೆಗಾಗಿ ಲಂಡನ್, ಸ್ವಿಟ್ಜರ್‌ಲ್ಯಾಂಡ್‌ಗೆ ಹೋದರು. ಚಿಕಿತ್ಸೆ ಫಲ ನೀಡಲಿಲ್ಲ. ಮರಳಿ ಭಾರತಕ್ಕೆ ಬಂದು ತನ್ನ ಹಿರಿಯಕ್ಕ ಮಧು ಅವರ ಮನೆಯಲ್ಲಿ ನೆಲೆ ನಿಂತರು. ಆದರೆ ಮಧು ಹಾಗೂ ಮೀನಾರ ನಡುವೆ ಮಾತುಕತೆ ಇರಲಿಲ್ಲ. ವಿಪರೀತ ಕುಡಿತದ ಚಟವೇ ಅವರ ಮಾತುಕತೆ ನಿಲ್ಲಲು ಕಾರಣವಾಗಿತ್ತು. ಮೀನಾರ ಸೌಂದರ್ಯ ಮಾಸುತ್ತಿದ್ದಂತೆಯೇ ಸಿನಿಮಾದಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದರು.
ಇತ್ತ ಕಡೆ ಅರ್ಧದಲ್ಲಿಯೇ ನಿಂತಿದ್ದ ‘ಪಕೀಜಾ’ ಚಿತ್ರ ಪೂರ್ಣ ಮಾಡಲು ಮೀನಾ ಮುಂದಾದರು. ಅಂತೂ ಇಂತೂ ಫೆಬ್ರವರಿ ೧೯೭೨ರಲ್ಲಿ ‘ಪಕೀಜಾ’ ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದಾಗ ಕುಂಟುತ್ತಿತ್ತು. ಆದರೆ ೩೧ ಮಾರ್ಚ್ ೧೯೭೨ರಲ್ಲಿ ಮೀನಾ ಕುಮಾರಿ ಎಲ್ಲರನ್ನು ಬಿಟ್ಟು ಹೊರಟು ಹೋದರು. ಪಕೀಜಾ ಚಿತ್ರ ಮತ್ತೆ ಗರಿಕೆದರಿಕೊಂಡು ಬಾಕ್ಸಾಫೀಸ್‌ನ್ನು ಚಿಂದಿ ಮಾಡಿತು. ಆದರೆ ಮೀನಾ ಸಾಯುವ ಹೊತ್ತಿನಲ್ಲಿ ಹಣಕಾಸಿನ ಮುಂಗಟ್ಟಿನಲ್ಲಿದ್ದರು. ಹುಟ್ಟುವಾಗಲೂ ಹಣಕಾಸಿನ ಕೊರತೆ ಇತ್ತು. ಸಾಯುವಾಗಲೂ ಆಸ್ಪತ್ರೆಯಲ್ಲಿ ಕೊಡಲು ಕೂಡ ಹಣ ಇರಲಿಲ್ಲ. ಬದುಕಿದ ೩೦ ವರ್ಷಗಳ ಕಾಲ ಮೀನಾ ಕುಮಾರಿ ದುರಂತ ನಾಯಕಿಯಾಗಿ ಉಳಿದರು.
.................

ವಿಜಯ ಕರ್ನಾಟಕದ ಲವಲವಿಕೆಯಲ್ಲಿ ೧೯.೦೪.೨೦೧೧ರಂದು ಪ್ರಕಟವಾಗಿದೆ.
............

Monday, April 18, 2011

ಪ್ರಕಾಶ್ ಶೆಟ್ಟಿ ಬಾಲ್ಕನಿಯಲ್ಲಿ ಮಾತ್ರ


ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಜೆಪಿಯಲ್ಲಿನ ‘ಯಡ್ಡಿ ವರ್ಸಸ್ ಅನಂತು ’ ಗುಂಪುಗಳಿಂದ ಬಿಜೆಪಿ ಕಲ್ಲಂಗಡಿಯಂತೆ ಎರಡು ಹೋಳಾಗುತ್ತಿದೆ ಎನ್ನುವ ಸಂದೇಹ ಪಟ್ಟುಕೊಂಡು ಅಂತಾರಾಷ್ಟ್ರೀಯ ಕಾರ್ಟೂನ್ ಕಲಾವಿದ ಪ್ರಕಾಶ್ ಶೆಟ್ಟಿ ಬಿಜೆಪಿಯ ಅತೃಪ್ತ ಆತ್ಮಗಳ ಬಗ್ಗೆ ಕಾರ್ಟೂನ್ ಕೊಟ್ಟಿದ್ದಾರೆ. ಕಾರ್ಟೂನ್ ನೋಡಿ ಮಜಾ ಮಾಡಿ.

*ಸ್ಟೀವನ್ ರೇಗೊ, ದಾರಂದಕುಕ್ಕು

Sunday, April 17, 2011

ಗಾಂ...ನಗರದ ‘ಕತೆ’ ಕುಲಗೆಟ್ಟಿದೆ !


ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತೇವೆ ಎನ್ನೋದು ವಿನೋದ್ ರಾಜ್ ಮಾತು.

ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಯಾವುದೇ ಸಿನ್ಮಾಗಳು ಓಡುತ್ತಿಲ್ಲ. ನಟರ ಹೆಸರು ಉಳಿಸುವ ಭರದಲ್ಲಿ ಚಿತ್ರಗಳನ್ನು ಓಡಿಸಲಾಗುತ್ತಿದೆ. ಗಾಂ...ನಗರದ ಕತೆನೇ ಈಗ ಬದಲಾಗುತ್ತಿದೆ. ಥಿಯೇಟರ್ ಬಾಡಿಗೆಯಲ್ಲೂ ಯಾವುದೇ ಬದಲಾವಣೆಯಾಗುತ್ತಿಲ್ಲ. ಪ್ರೇಕ್ಷಕ ವರ್ಗ ಕನ್ನಡ ಸಿನ್ಮಾಗಳ ಮೇಲೆ ವ್ಯಾಮೋಹ ತೋರಿಸುತ್ತಿಲ್ಲ. ಗಾಂ...ನಗರದಲ್ಲಿ ಬಡವ- ಶ್ರೀಮಂತ ಎನ್ನುವ ಕೇಟಗರಿ ಕ್ರಿಯೇಟ್ ಆಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನ್ಮಾ ಮಾಡೋದು ಆದ್ರೂ ಹೇಗೆ ಮಾರಾಯ್ರೆ ಅಂತಾ ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಕನ್ನಡ ಚಿತ್ರರಂಗದ ಕುರಿತು ಪ್ರಶ್ನೆ ಎತ್ತಿ ಕೂತಿದ್ದರು. ಇತ್ತೀಚೆಗೆ ತಮ್ಮ ತಾಯಿ ಎಂ. ಲೀಲಾವತಿಯ ಜತೆಯಲ್ಲಿ ಮಂಗಳೂರಿನ ತಮ್ಮ ಮೂಲಮನೆಯ ದೈವ ಸ್ಥಳಗಳಿಗೆ ಭೇಟಿ ನೀಡುವಾಗ ವಿನೋದ್ ಲವಲವಿಕೆಯ ಜತೆ ಕೊಂಚ ಹೊತ್ತು ಸಿನ್ಮಾ ಉದ್ಯಮದ ಕುರಿತು ಮಾತಿಗೆ ಕುಳಿತಿದ್ದರು.
ಗಾಂನಗರದ ಕುಲಗೆಟ್ಟ ಜನರ ಬಗ್ಗೆ ನೇರ ನುಡಿಯಲ್ಲಿ ಮಾತನಾಡಿದ ವಿನೋದ್ ಹೇಳುವುದಿಷ್ಟು: ಸ್ಯಾಂಡಲ್‌ವುಡ್ ಇಂಡಸ್ಟ್ರಿ ಈಗ ಮೊದಲಿನ ರೀತಿ ಉಳಿದಿಲ್ಲ. ಇಲ್ಲಿ ಈಗ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಬದಲಾಗಿ ಸೂಪರ್ ಹಿಟ್ ಆಯಿತು ಎನ್ನುವ ಮಾದರಿಯಲ್ಲಿ ಫೋಕಸ್ ಮಾಡಲಾಗುತ್ತಿದೆ. ಓಡುವ ಚಿತ್ರಗಳ ಬದಲಾಗಿ ಸ್ಯಾಂಡಲ್‌ವುಡ್‌ನಲ್ಲಿ ಓಡಿಸುವ ಚಿತ್ರಗಳು ಹುಟ್ಟಿ ಕೊಳ್ಳಲಾರಂಭಿಸಿದೆ. ಇಂತಹ ಓಡಿಸುವ ಚಿತ್ರಗಳಿಂದ ಯಾರಿಗೂ ಲಾಭವಿಲ್ಲ. ಬರೀ ದೊಡ್ಡವರು ಎನ್ನಿಸಿಕೊಂಡವರು ಉದ್ಯಮದಲ್ಲಿ ಉಳಿದು ಬಿಡುತ್ತಾರೆ. ಉಳಿದವರು ಸುದ್ದಿ ಇಲ್ಲದೇ ಮರೆಯಾಗಿ ಬಿಡುತ್ತಾರೆ ಎನ್ನುವುದು ದಿಟ.
ನಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಯಾರದು?’ ಹಾಗೂ ‘ಕನ್ನಡದ ಕಂದ’ ನಂತರ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಯಾಕೆ ಹೋದ್ರಿ ಅಂತಾ ಕೇಳಿದ್ರೆ. ಅಮ್ಮ( ಎಂ.ಲೀಲಾವತಿ) ಹಾಗೂ ನಾನು ಯಾವತ್ತಿಗೂ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಹೋದವರೇ ಅಲ್ಲ. ಉದ್ಯಮ ನಮಗೊಂದು ಬದುಕು, ಗೌರವ ಎಲ್ಲವೂ ತಂದುಕೊಟ್ಟಿದೆ. ಅಂತಹ ಇಂಡಸ್ಟ್ರಿಯನ್ನು ಮರೆಯಲು ಹೇಗೆ ತಾನೇ ಸಾಧ್ಯ. ಆದರೆ ಉದ್ಯಮದವರು ಮಾತ್ರ ನಮ್ಮನ್ನು ಮರೆತಿದ್ದಾರೆ. ಅದು ಅವರ ತಪ್ಪಲ್ಲ. ನಮ್ಮ ತಪ್ಪಲ್ಲ. ಯಾರ ತಪ್ಪು ಅಂತಾ ತಿಳೀತಾ ಇಲ್ಲ ಎಂದು ಮೌನದ ಮೋಡದಲ್ಲಿ ಜಾರಿ ಹೋದರು ವಿನೋದ್‌ರಾಜ್.
ಮತ್ತೆ ಐದು ನಿಮಿಷಗಳ ಕಾಲ ನೀರವ ಮೌನ. ಕೇಳುವ ಪ್ರಶ್ನೆಗಳು ಎಲ್ಲೋ ಕಳೆದು ಹೋಗಿ ಬಿಡುತ್ತದೆ ಎನ್ನುವ ಭೀತಿ. ಮತ್ತೆ ವಿನೋದ್‌ರಾಜ್ ಮಾತಿನ ಹಳಿಗೆ ಬಂದು ನಿಂತರು. ಕನ್ನಡ ಸಿನಿಮಾಗಳು ಯಾಕೆ ಓಡುತ್ತಿಲ್ಲ ಮಾರಾಯ್ರೆ ಎಂದಾಗ ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತಾರೆ . ಕಳೆದ ಎರಡು ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳಿ ‘ಅಪ್ತರಕ್ಷಕ’ ಯಾವುದೇ ಗಿಮಿಕ್ ಇಲ್ಲದೇ ಗೆದ್ದಿದೆ. ಉಳಿದಂತೆ ಯಾವುದು ಕೂಡ ಸೂಪರ್ ಹಿಟ್ ಅಲ್ವೇ ಅಲ್ಲ. ಎಲ್ಲವೂ ಸಾಧಾರಣ ಎನ್ನುವುದು ವಿನೋದ್‌ರ ವಾದ.
ತುಳುವಿನಲ್ಲಿ ಚಿತ್ರ:
ಈ ವರ್ಷದ ಮೇ- ಜೂನ್ ಹೊತ್ತಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಕರಾವಳಿಯ ಹೊಸ ಕಲಾವಿದರನ್ನು ಹಾಕಿ ಮಾಡಬೇಕು ಎನ್ನೋದು ನಮ್ಮ ಕನಸು. ತಾಯಿ ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ. ನಾನು ಬರೀ ನಿರ್ಮಾಪಕನ ಕುರ್ಚಿಯಲ್ಲಿ ಕಾಣ ಸಿಗುತ್ತೇನೆ. ಕತೆ, ಬಜೆಟ್, ನಿರ್ದೇಶಕರು ಯಾರು ಎನ್ನುವ ಕುರಿತು ಯಾವುದೇ ಡಿಟೇಲ್ ಸಧ್ಯಕ್ಕೆ ಕೊಡುವುದಿಲ್ಲ. ಚಿತ್ರದ ತಂಡದಲ್ಲಿ ಕರಾವಳಿಯ ಮಂದಿಗೆ ಜಾಸ್ತಿ ಒತ್ತು ನೀಡುತ್ತೇವೆ. ಎರಡು- ಮೂರು ನಿರ್ದೇಶಕರು ನಮ್ಮ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ತುಳು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ಮಾಡುತ್ತೇವೆ. ಹೊಸ ನಟ- ನಟಿಯರು, ಕತೆಗಾರರು, ನಿರ್ದೇಶಕರು ಇದ್ದಾರೆ ನಮ್ಮನ್ನು ಸಂಪರ್ಕಿಸಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಪಕ್ಕಾವಾಗಿ ನಿಮ್ಮ ಮುಂದೆ ಬಂದೇ ಬರುತ್ತೇವೆ ಎನ್ನುತ್ತಾರೆ ವಿನೋದ್ ರಾಜ್.

Saturday, April 16, 2011

ನನ್ನ ಅಣ್ಣ ಮಮ್ಮಾ ಕುಂಞಿ !


ಕೇಂದ್ರ ಸರಕಾರ ಕಡೆಗೂ ಬಾಲ ಸಾಹಿತ್ಯದ ಮೇಲೆ ಕರುಣೆ ತೋರಿಸಿದೆ. ಖ್ಯಾತ ಕತೆಗಾರ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಪಾಪು ಗಾಂ.. ಬಾಪು ಗಾಂ.. ಆದ ’ಕತೆಗೆ ಬಾಲ ಸಾಹಿತ್ಯ ಪುರಸ್ಕಾರ ನೀಡಿದೆ. ಬೊಳುವಾರು ಅವರ ಸಹೋದರ ಐಕೆ ಬೊಳುವಾರು ಅಣ್ಣನ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ನೀಡಿದ್ದಾರೆ.


ಹಮಾರಾ ಟ್ರಾನ್ಸ್‌ಲೇಟರ್ ಜನರಲ್ ಕಾ ಹಾ ಹೈ... ಹರಿಜನ ಉದ್ದಾರ ಪ್ರಚಾರಕ್ಕಾಗಿ ಮೈಸೂರು ರಾಜ್ಯದ(ಕರ್ನಾಟಕ ಎಂದು ನಾಮಕರಣ ಆಗುವ ಮೊದಲು) ಪುತ್ತೂರಿಗೆ ಬಂದಿದ್ದ ಗಾಂ...ಜಿ ಪೇಟೆ ಬೀದಿಯಲ್ಲಿ ಸಾರ್ವಜನಿಕ ಸಭೆ ಆರಂಭಿಸುವ ಮೊದಲು ತಮ್ಮ ಪಕ್ಕದಲ್ಲಿ ಕುಳಿತಿದ್ದ ವಕೀಲ ಸದಾಶಿವರಾಯರನ್ನು ಪ್ರಶ್ನೆ ಕೇಳಿದಾಗ ವಕೀಲರು ಕಕ್ಕಾಬಿಕ್ಕಿ. ಗಾಂ...ಜಿಯ ಹಿಂಬದಿಯಲ್ಲಿ ಮೀರಾಬೆನ್ ಜತೆಯಲ್ಲಿ ಮಾತನಾಡುತ್ತಿದ್ದ ಲೇಖಕ ಶಿವರಾಮ ಕಾರಂತರಿಗೆ ಗಾಂಜಿಯ ಪ್ರಶ್ನೆ ಕೇಳಿಸಿತು. ಸದಾಶಿವರಾಯರ ಗಡಿಬಿಡಿಯೂ ಕಾಣಿಸಿತು.
ವಕೀಲರ ಬೆನ್ನಿಗೆ ಬೆರಳಿನಿಂದ ತಿವಿದು ಎಚ್ಚರಿಸಿದ ಕಾರಂತರು ವೇದಿಕೆಯ ಕೆಳಗೆ ಕುಕ್ಕುರು ಕಾಲಿನಲ್ಲಿ ಕುಳಿತು ಗ್ಯಾಸ್ ಲೈಟ್‌ಗೆ ‘ಟುಸ್‌ಕ್.. ಟುಸ್‌ಕ್‘ ಗಾಳಿ ಹೊಡೆಯುತ್ತಿದ್ದ ನಾರಾಯಣ ಕಿಲ್ಲೆ ಅವರತ್ತ ಬೊಟ್ಟು ಮಾಡಿ ಟ್ರಾನ್ಸ್‌ಲೇಟರ್ ಜನರಲ್ ಅವರೇ ಎಂದು ಸಂಞೆ ಮಾಡಿದರು. ವಕೀಲರ ಮುಖ ಊರಾಗಲವಾಯಿತು. ಇದು ಕತೆಗಾರ ಬೊಳುವಾರು ಬರೆಯುವ ಸ್ಟೈಲ್. ‘ಪಾಪು ಗಾಂ ಬಾಪು ಗಾಂ ಆದ ಕತೆ’ಯಲ್ಲಿ ಇದನ್ನೇ ಬರೆದುಕೊಂಡಿದ್ದಾರೆ ಎಂದು ಪುತ್ತೂರಿನ ಬೊಳುವಾರಿನಿಂದ ಎರಡು ಸ್ಟಾಪ್ ಮುಂದೆ ಇರುವ ಮನೆಯಲ್ಲಿ ಕೂತು ಟಿವಿಯಲ್ಲಿ ಬರುತ್ತಿದ್ದ ಅಣ್ಣನ ಸುದ್ದಿ ನೋಡಿ ಖ್ಯಾತ ಮಕ್ಕಳ ರಂಗಭೂಮಿ ನಿರ್ದೇಶಕ ಐಕೆ ಬೊಳುವಾರು ದೂರವಾಣಿ ಮೂಲಕ ಲವಲವಿಕೆಗೆ ಹೇಳಿದ ಮೊದಲ ಮಾತು.
ಸುಮಾರು ಮುಕ್ಕಾಲು ಗಂಟೆಯ ಕಾಲ ಬೊಳುವಾರು ಮಹಮ್ಮದ್ ಕುಂಞಿ ಅವರು ಯಾರಿಗೂ ಹೇಳಿರದ ಅವರ ಸಹೋದರ ಐಕೆ ಅವರಲ್ಲಿ ಹಂಚಿಕೊಂಡಿದ್ದ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ಹೇಳುತ್ತಾ ಹೋಗುತ್ತಿದ್ದರು. ‘ಬಾಲ್ಯದಲ್ಲಿ ತುಂಬಾ ಬಡತನವಿತ್ತು. ತಂದೆ ಅಬ್ಬಾಸ್ ಹಾಗೂ ತಾಯಿ ಕುಲ್ಸುಬೀ ಐದು ಮಕ್ಕಳು ಶಿಕ್ಷಣ ಮುಗಿಸುವರೆಗೂ ಬೀಡಿ ಉದ್ಯಮವನ್ನು ಬಿಟ್ಟು ನಿಂತಿರಲಿಲ್ಲ. ಈ ಸಮಯದಲ್ಲಿ ಮುಸ್ಲಿಂ ಸಮುದಾಯವರು ಸಣ್ಣ ವಯಸ್ಸಿನಲ್ಲಿಯೇ ಮೀನು ವ್ಯಾಪಾರ ಇತರ ಕೆಲಸಗಳಿಗೆ ಹೋಗುವುದು ಜಾಸ್ತಿಯಾಗಿತ್ತು. ಆದರೆ ನಮ್ಮ ತಂದೆಯ ಒಲವು ಶಿಕ್ಷಣದ ಕಡೆಗೆ ಇತ್ತು. ಮಕ್ಕಳು ಓದಿ ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ಹೊಟ್ಟೆಗೆ ಸರಿಯಾಗಿ ಹಿಟ್ಟು ಇಲ್ಲದಿದ್ದರೂ ಶಾಲೆಗೆ ಮಾತ್ರ ಕಳುಹಿಸದೇ ಬಿಡುತ್ತಿರಲಿಲ್ಲ. ತಂದೆಯ ಈ ಕೆಲಸ ಮೀನು ಮಾರುಕಟ್ಟೆಯಲ್ಲಿ ಇರಬೇಕಾದ ಹುಡುಗರು ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ ’ಎಂದು ಐಕೆ ತಂದೆಯ ನೆನಪುಗಳನ್ನು ಕೆದಕಿದರು.
ಮಹಮ್ಮದ್‌ರ ಕ್ರಿಕೆಟ್ ಪ್ರೀತಿ:
ಬೊಳುವಾರು ಮಹಮ್ಮದ್ ಕುಂಞಿ ಕನ್ನಡ ಸಾಹಿತ್ಯ ರಂಗದಲ್ಲಿ ಅದರಲ್ಲೂ ಸಣ್ಣ ಕತೆ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಎನ್ನುವುದು ಎಲ್ಲರಿಗೂ ಗೊತ್ತು ಬಿಡಿ. ಆದರೆ ಬೊಳುವಾರಿನಲ್ಲಿರುವ ಅವರ ಬಹುತೇಕ ಗೆಳೆಯರಿಗೆ ಅವರೊಬ್ಬ ಸಾಹಿತಿಗಿಂತ ಹೆಚ್ಚಾಗಿ ‘ಕ್ರಿಕೆಟ್ ಆಟಗಾರ ’ಎಂದೇ ಪರಿಚಿತ. ಮಹಮ್ಮದ್ ಓದುತ್ತಿದ್ದ ಬೊಳುವಾರು ಪ್ರಾಥಮಿಕ ಶಾಲೆ ಇರಲಿ ಖ್ಯಾತ ಬೋರ್ಡ್ ಹೈಸ್ಕೂಲ್‌ನ ಕ್ರಿಕೆಟ್ ತಂಡದಲ್ಲಿ ಅವರು ಇಲ್ಲದೇ ಹೋದರೆ ಟೀಮ್ ತುಂಬಾನೇ ವೀಕ್ ಆಗಿಬಿಡುತ್ತಿತ್ತು. ವಿನ್ ಆಗುವ ಚಾನ್ಸ್‌ಯೇ ಕಡಿಮೆ ಇರುತ್ತಿತ್ತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಹಮ್ಮದ್ ‘ಎ’ ವನ್ ಪ್ಲೇಯರ್ ಎಂದು ಗೆಳೆಯರ ಸಮೂಹದಿಂದ ಕರೆಸಿಕೊಂಡಿದ್ದರು. ಟೈಮ್ ಸಿಕ್ಕಿದಾಗಲೆಲ್ಲಾ ಬೋರ್ಡ್ ಹೈಸ್ಕೂಲ್‌ನ ಮೈದಾನದಲ್ಲಿ ಮಹಮ್ಮದ್ ಠಿಕಾಣಿ ಹೂಡುತ್ತಿದ್ದರು. ಅವರ ಸಹೋದರರು ಕ್ರಿಕೆಟ್ ಬಗ್ಗೆ ಆಸಕ್ತಿ ತಮಗಿಲ್ಲ ಎಂದಾಗಲೆಲ್ಲ ಅವರ ಜತೆ ‘ಕುಟ್ಟಿ ದೊಣ್ಣೆ ’ ಆಡಲು ಬರುತ್ತಿದ್ದರು. ಅಲ್ಲೂ ಇಲ್ಲೂ ಮಹಮ್ಮದ್ ಗೆಲ್ಲುವ ಕುದುರೆ ಎಂದೇ ಎಲ್ಲರಿಗೂ ಗೊತ್ತಿತ್ತು.
ಏಕಾಂಗಿತನ ಕಳೆಯಲು ಕತೆ ಬರೆದರು:
ಬೊಳುವಾರು ಮಹಮ್ಮದ್ ಕುಂಞಿ ಬರೆದ ಸಣ್ಣ ಕತೆಗಳ ಲೆಕ್ಕಚಾರವನ್ನು ಸ್ವತಃ ಅವರೇ ಇಟ್ಟುಕೊಂಡಿಲ್ಲ. ಆದರೆ ಐಕೆ ಅದರ ಲೆಕ್ಕಚಾರವನ್ನು ಪಕ್ಕವಾಗಿ ಇಟ್ಟುಕೊಳ್ಳುತ್ತಾರೆ. ಮಹಮ್ಮದ್ ಶಿಕ್ಷಣ ಮುಗಿಸಿಕೊಂಡು ಸಿಂಡಿಕೇಟ್ ಬ್ಯಾಂಕ್‌ನ ಗುಲ್ಬರ್ಗ ಶಾಖೆಗೆ ಕ್ಲರ್ಕ್ ಆಗಿ ಸೇರಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿಯೇ ಹೊಸ ಜಾಗ ಹೊಸ ಜನರ ನಡುವೆ ಹೊಂದಾಣಿಕೆಯ ಸಮಸ್ಯೆ, ಏಕಾಂಗಿತನ ಕಾಡುತ್ತಿದ್ದಾಗ ಮಹಮ್ಮದ್ ಆಯ್ಕೆ ಮಾಡಿಕೊಂಡದ್ದು ಸಾಹಿತ್ಯ ಕ್ಷೇತ್ರ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವ ಭಾರತ’ದಲ್ಲಿ ಮೊತ್ತ ಮೊದಲ ಬಾರಿಗೆ ‘ನಿರೀಕ್ಷೆ’ ಎಂಬ ಸಣ್ಣ ಕತೆ ಮುದ್ರಣವಾಗುತ್ತಿದ್ದಂತೆಯೇ ಮಹಮ್ಮದ್ ಎಂಬ ಹೊಸ ಪೀಳಿಗೆಯ ಕತೆಗಾರ ೧೯೮೦ರ ವರೆಗೂ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸುತ್ತಾರೆ. ೧೯೮೦ರ ನಂತರ ಅವರ ಕತೆಗಳಲ್ಲಿ ಮಾನವೀಯ ಅಂಶಗಳು, ತಮಾಷೆ, ಕುತೂಹಲ ಮೊದಲಾದ ಅಂಶಗಳು ಜಾಗ ಪಡೆದುಕೊಂಡು ಮಹಮ್ಮದ್‌ರ ಕತೆಗಳು ಟೋಟಲಿ ಡಿಫರೆಂಟ್ ಎನ್ನುವ ಮಾತು ಆರಂಭವಾಗಿ ಬಿಡುತ್ತದೆ ಎನ್ನುತ್ತಾರೆ ಅವರ ಸಹೋದರ ಐಕೆ ಬೊಳುವಾರು.
ಮುತ್ತುಪಾಡಿ ಎಂಬ ಊರು:
ಖ್ಯಾತ ಕತೆಗಾರ ಆರ್.ಕೆ. ನಾರಾಯಣ್ ಅವರ ಕಲ್ಪನೆಯ ಊರು ‘ಮಾಲ್ಗುಡಿ’ ಇದ್ದ ರೀತಿಯಲ್ಲಿ ಮಹಮ್ಮದ್‌ರ ಊರು ‘ಮುತ್ತು ಪಾಡಿ’. ಅವರ ಎಲ್ಲ ಸಣ್ಣ ಕತೆಗಳಲ್ಲಿ ‘ಮುತ್ತುಪಾಡಿ’ ಎಂಬ ಊರಿಗೆ ಖಾಯಂ ಜಾಗ ಇದ್ದೇ ಇದೆ. ಅಂದಹಾಗೆ ‘ಮುತ್ತುಪಾಡಿ’ ಮಹಮ್ಮದ್‌ರ ಕಲ್ಪನೆಯ ಊರಲ್ಲ. ಇಂದಿಗೂ ಈ ಊರುಗಳು ಪುತ್ತೂರಿನ ಅಸುಪಾಸಿನಲ್ಲಿ ಇದೆ. ಕೋಡಿಂಬಾಡಿ, ನೆಕ್ಕಿಲಾಡಿ, ಬೆಳ್ಳಿಪಾಡಿ ಹೀಗೆ ಪಾಡಿ ಬರುವ ಊರುಗಳು ‘ಮುತ್ತುಪಾಡಿ’ ಎಂಬ ಆಧಾರದಲ್ಲಿ ಮಹಮ್ಮದ್ ಸಣ್ಣ ಕತೆಗಳಲ್ಲಿ ಹೇಳುತ್ತಾ ಸಾಗುತ್ತಾರೆ. ಈ ಎಲ್ಲ ಊರಿನಲ್ಲಿ ಮಹಮ್ಮದ್‌ರ ಖಾಸಾ ದೋಸ್ತ್‌ಗಳು ಇದ್ದಾರೆ. ಪುತ್ತೂರಿನ ಬೊಳುವಾರಿಗೆ ಬಂದಾಗ ಈ ಎಲ್ಲ ದೋಸ್ತ್‌ಗಳ ಮನೆಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಾರೆ. ಅವರ ಹೆಚ್ಚಿನ ಕತೆಗಳಲ್ಲಿ ಈ ದೋಸ್ತ್‌ಗಳೇ ಜೀವಾಳ. ಆದರೆ‘ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ಯಲ್ಲಿ ಮಾತ್ರ ಈ ಊರಿನ ಉಲ್ಲೇಖ ಇಲ್ಲ. ಈ ಕೃತಿಯಲ್ಲಿ ಪುತ್ತೂರಿನ ನಿಜವಾದ ಊರುಗಳೇ ಜಾಗ ಪಡೆದುಕೊಂಡಿದೆ.
ಬಾಲಸಾಹಿತ್ಯದಲ್ಲಿ ಆಸಕ್ತಿ:
ಮಹಮ್ಮದ್ ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ಗೆ ವರ್ಗಾವಾದಾಗ ಅವರ ಮನೆಯ ಪಕ್ಕದಲ್ಲಿಯೇ ಶಿವರಾಮ ಕಾರಂತರ ಮನೆ ಇತ್ತು. ಸಾಹಿತ್ಯ ಗೀಳಿದ್ದ ಮಹಮ್ಮದ್ ಹೆಚ್ಚು ಒತ್ತು ಶಿವರಾಮ ಕಾರಂತರ ಮನೆಯಲ್ಲಿ ಕಳೆಯುತ್ತಿದ್ದರು. ಅಲ್ಲಿಯೇ ಅವರಿಗೆ ಬಾಲ ಸಾಹಿತ್ಯದ ಕುರಿತು ಒಲವು ಮೂಡಿ ಬಂತು. ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯತ್ನ ಎನ್ನುವ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಕೃತಿಯನ್ನು ಸಂಪಾದನೆ ಮಾಡಿರುವುದು ಬೊಳುವಾರು ಅವರ ಹೆಗ್ಗಳಿಕೆ. ೧೦೦ ಕವಿಗಳ ಕವನಗಳು ಈ ಕೃತಿಯ ಹೈಲೇಟ್. ‘೧೨ ಮಕ್ಕಳ ನಾಟಕಗಳ ಸಂಪಾದನೆ,’ ‘ಸಂತಮ್ಮನ’ ಕವನ ಸಂಕಲನ ಸಂಪಾದನೆ ಜತೆಗೆ ಈಗ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ ಕಾದಂಬರಿ ವರೆಗೆ ಅವರ ಮಕ್ಕಳ ಸಾಹಿತ್ಯ ಸೇವೆ ಮುಂದುವರಿದಿದೆ.
ಬೊಳುವಾರು ಮಹಮ್ಮದ್ ಒಬ್ಬ ವಿಶಿಷ್ಟ ಜೀವಿ. ಅವರ ವೈಯಕ್ತಿವಾಗಲಿ ಅಥವಾ ಸಾರ್ವಜನಿಕವಾಗಲಿ ಫೋಟೋ ತೆಗೆಸಿಕೊಳ್ಳುವ ಪರಿಪಾಟ ಇಟ್ಟುಕೊಂಡಿಲ್ಲ. ಅದರಲ್ಲೂ ಐಕೆ ಬೊಳುವಾರು ಕೂಡ ಅದೇ ದಾರಿಯನ್ನು ಹಿಡಿದವರು. ‘ಫೋಟೋ ತೆಗೆಯುತ್ತೇನೆ ಸ್ವಾಮಿ ಒಂದ್ ಸಾರಿ ಮುಖ ತೋರಿಸಿ’ ಎಂದಾಗ ಮಹಮ್ಮದ್ ಯಾರಿಗೂ ಹೇಳದೇ ಮರೆಯಾಗುವ ಐವತ್ತು ದಾಟಿದ ಪುಟ್ಟ ಮಗು ಎಂದೇ ಅವರ ಆಪ್ತರ ವಲಯ ಹೇಳುವ ಮಾತಿದೆ. ಟೋಟಲಿ ಕೇಂದ್ರ ಸರಕಾರ ಮಹಮ್ಮದ್‌ರ ಬಾಲ ಸಾಹಿತ್ಯಕ್ಕೆ ಪುರಸ್ಕಾರ ನೀಡುತ್ತಿರುವುದು ಮಾತ್ರ ಖುಷಿಯ ವಿಚಾರ.

ಚಕ್ ಧೂಮ್ ಧೂಮ್ ಶೆಫ್ ಮಗ ಡ್ಯಾನ್ಸರ್ !



ಕುಡ್ಲದ ಖ್ಯಾತ ಚೈನೀಸ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ‘ಹವೋ ಹವೋ’ ಹಾಗೂ ‘ಹವೋ ಮಿನ್’ ರೆಸ್ಟೋರೆಂಟ್‌ಗಳಲ್ಲಿ ಶೆಫ್ ಆಂಡ್ ಓನರ್ ಆಗಿರುವ ಲೂಯಿಸ್ ವಾಂಗ್ ಹಾಗೂ ರೋಸಿ ವಾಂಗ್‌ರಿಗೆ ಸೈರಸ್ ಆಂಡ್ ಪುತ್ರಿ ಮೆಲೇಷಿ ವಾಂಗ್ ಇಬ್ಬರು ಮಕ್ಕಳು. ಈಗ ನಿಮ್ಮ ಮುಂದೆ ಸೈರಸ್ ವಾಂಗ್....

ಸೈರಸ್ ವಾಂಗ್ ಮ್ಯಂಗಲೂರ್. ಸಿವೈಆರ್ ಸ್ಪೇಸ್ ಕೊಟ್ಟು ೫೬೮೮೨ಗೆ ಸೆಂಡ್ ಮಾಡಿ ಎಂದಾಗ ಟಿವಿ ಪರದೆಯ ಮುಂದೆ ಕೂತ ಕುಡ್ಲದ ಪ್ರೇಕ್ಷಕರಿಗೊಂದು ಅಚ್ಚರಿ. ಈ ಹಿಂದೆ ಮಂಗಳೂರು ಎಂದಾಗ ನ್ಯಾಷನಲ್ ಟಿವಿ ಚಾನೆಲ್‌ಗಳಲ್ಲಿ ಬಿಂಬಿತವಾದ ರೀತಿ ಮಾತ್ರ ಕೊಂಚ ವಿಚಿತ್ರವಾಗಿತ್ತು. ಕೆಟ್ಟ ವಿಚಾರಗಳಿಂದಲೇ ಮಂಗಳೂರು ಶೈನ್ ಆಗಿತ್ತು ಬಿಡಿ.
ಈಗ ಕಾಲ ಬದಲಾಗಿದೆ. ಮಂಗಳೂರಿನ ಟ್ಯಾಲೆಂಟ್ ಯೂತ್ ನ್ಯಾಷನಲ್ - ಇಂಟರ್ ನ್ಯಾಷನಲ್ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ. ಅದಕ್ಕೊಂದು ತಾಜಾ ಐಟಂ ಖ್ಯಾತ ಕಲರ್‍ಸ್ ಚಾನೆಲ್‌ನ ‘ಚಕ್ ಧೂಮ್ ಧೂಮ್’ ಮಕ್ಕಳಿಗಾಗಿ ಇರುವ ರಿಯಾಲಿಟಿ ಡ್ಯಾನ್ಸ್ ಶೋ. ಒಂದು ಲೆಕ್ಕಚಾರದ ಪ್ರಕಾರ ಈ ರಿಯಾಲಿಟಿ ಡ್ಯಾನ್ಸ್ ಶೋಗೆ ಭರ್ಜರಿ ಖರ್ಚಾಗಿದೆ. ಖರ್ಚಿನ ವಿಚಾರದಲ್ಲಿ ಇಂತಹ ಪ್ರಯತ್ನ ನಿಜಕ್ಕೂ ಮೊದಲು ಎನ್ನುವುದು ಕಲರ್‍ಸ್ ಚಾನೆಲ್‌ನ ಅಭಿಮತ.
ಅದೆಲ್ಲ ಈಗ ಬಿಟ್ಟು ಬಿಡಿ. ಅಪ್ಪಟ ಕುಡ್ಲದ ಡ್ಯಾನ್ಸಿಂಗ್ ಪ್ರತಿಭೆ ಸೈರಸ್ ವಾಂಗ್ ಈಗ ಎಂಟರ ಘಟ್ಟ ಮುಟ್ಟಿ ಡೇಂಜರ್ ಝೋನ್‌ನೊಳಗೆ ಬಿದ್ದಿದ್ದಾನೆ. ಕುಡ್ಲದ ಖ್ಯಾತ ಚೈನೀಸ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ‘ಹವೋ ಹವೋ’ ಹಾಗೂ ‘ಹವೋ ಮಿನ್’ ರೆಸ್ಟೋರೆಂಟ್‌ಗಳಲ್ಲಿ ಶೆಫ್ ಆಂಡ್ ಓನರ್ ಆಗಿರುವ ಲೂಯಿಸ್ ವಾಂಗ್ ಹಾಗೂ ರೋಸಿ ವಾಂಗ್‌ರಿಗೆ ಸೈರಸ್ ಹಾಗೂ ಪುತ್ರಿ ಮೆಲೇಷಿ ವಾಂಗ್ ಇಬ್ಬರು ಮಕ್ಕಳು. ತಂದೆ ಲೂಯಿಸ್ ವಾಂಗ್ ಕಿಚನ್ ರೂಂನಲ್ಲಿ ಬ್ಯುಸಿಯಾಗಿದ್ದಾರೆ. ತಾಯಿ ರೋಸಿ ವಾಂಗ್ ಕಿಚನ್ ವಿದ್ ಪುತ್ರನ ಡ್ಯಾನ್ಸ್ ಕೇರಿಯರ್‌ನಲ್ಲಿ ಫುಲ್ ಬ್ಯುಸಿ.
ಹೃತಿಕ್‌ನ ಪಕ್ಕಾ ಅಭಿಮಾನಿ:
‘ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಮಾಡುತ್ತಿದ್ದ ಸ್ಟೆಪ್ ನೋಡಿ ಸೈರಸ್ ಬಾಲ್ಯದಲ್ಲಿಯೇ ಕುಣಿತ ಆರಂಭಿಸಿದ. ಮೂರು ವರ್ಷದಲ್ಲಿಯೇ ಅವನಿಗೆ ಡ್ಯಾನ್ಸ್ ಮೇಲೆ ವಿಶೇಷ ಮೋಹ ಬೆಳೆಯಿತು. ಟಿವಿಯಲ್ಲಿ ಯಾವುದೇ ಡ್ಯಾನ್ಸ್ ಕಾರ್‍ಯಕ್ರಮಗಳು ಬರಲಿ ತಕ್ಷಣ ಎದ್ದು ನಿಂತು ಡ್ಯಾನ್ಸ್ ಮಾಡುತ್ತಾನೆ. ಅದಕ್ಕಾಗಿ ಅವನನ್ನು ಸಂದೇಶ್ ಜಾನ್ವಿ ಅವರ ‘ಮಂಗಳೂರು ಎಕ್ಸ್‌ಲೆಂಟ್ ಡ್ಯಾನ್ಸಿಂಗ್ ಅಕಾಡೆಮಿ’ಗೆ ಸೇರಿಸಿದೆ ಎನ್ನುತ್ತಾರೆ ಸೈರಸ್‌ನ ತಾಯಿ ರೋಸಿ ವಾಂಗ್.
‘ಸೈರಸ್ ಬರೀ ಡ್ಯಾನ್ಸ್ ಕಲಿತಿಲ್ಲ. ಅದರ ಜತೆಯಲ್ಲಿ ಈಜುವುದರಲ್ಲೂ ಇದ್ದಾನೆ. ಕರಾಟೆ, ಮಾರ್ಷಲ್ ಆರ್ಟ್ಸ್ ಬಗ್ಗೆನೂ ಕೊಂಚ ನಾಲೆಡ್ಜ್ ಇದೆ. ಮನೆಯಲ್ಲಿ ತುಂಬಾ ತಂಟೆ ಮಾಡ್ತಾನೆ. ಸಹೋದರಿ ಮೆಲೇಷಿ ವಾಂಗ್ ಜತೆಯಲ್ಲಿ ಆಡುವುದು ಎಂದರೆ ಅವನಿಗೆ ಬಹಳ ಖುಶಿ. ಸೈರಸ್ ನಿಜಕ್ಕೂ ನಮ್ಮ ಪಾಲಿನ ಲಕ್ಕಿ ಬಾಯ್‌ಎನ್ನುತ್ತಾರೆ ರೋಸಿ.
‘ಕುಡ್ಲದ ಬೆಂದುರ್ ವೆಲ್‌ನ ತೆರೇಸಾ ಶಾಲೆಯಲ್ಲಿ ಏಳನೇ ತರಗತಿ ಓದುವ ಸೈರಸ್ ಎವರೇಜ್ ಹುಡ್ಗ. ಶಾಲೆಯ ಮುಖ್ಯೋಪಾಧ್ಯಾಯರ ಜತೆಯಲ್ಲಿ ಶಿಕ್ಷಕರು ಅವನ ಡ್ಯಾನ್ಸಿಂಗ್ ಕೇರಿಯರ್‌ಗೆ ಬಹಳ ಪ್ರೋತ್ಸಾಹ ಕೊಡ್ತಾರೆ. ಒಂದೊಂದು ತಿಂಗಳು ರಜೆ ಹಾಕಿ ಈಗ ನಾವು ಮುಂಬಯಿಯ ಕಲರ್‍ಸ್ ಚಾನೆಲ್‌ನ ಸ್ಪರ್ಧೆಗೆ ಎಂಟ್ರಿಯಾಗಿದ್ದೇವೆ. ಈ ಸಮಯದಲ್ಲಿ ಶಾಲೆಯ ಪ್ರೋತ್ಸಾಹ ಬಹಳಷ್ಟಿದೆ’ ಎನ್ನುತ್ತಾರೆ ರೋಸಿ ವಾಂಗ್.
ಎಲ್ಲಕ್ಕೂ ‘ಸೈ ’ಸೈರಸ್:
ಕಂಕನಾಡಿಯಲ್ಲಿರುವ ಮಂಗಳೂರು ಎಕ್ಸ್‌ಲೆಂಟ್ ಡ್ಯಾನ್ಸ್ ಅಕಾಡೆಮಿಯ ಕೋರಿಯೋಗ್ರಾಫರ್‌ಗಳಾದ ಚರಣ್‌ರಾಜ್ ಗಟ್ಟಿ, ನೀತು ಮರೋಳಿ, ಜೀವನ್, ಸಂತೋಷ್ ಎಲ್ಲರ ಮೆಚ್ಚಿನ ಶಿಷ್ಯ ಸೈರಸ್ ಅಂತೆ. ಯಾವುದೇ ಬಾಲಿವುಡ್, ಹಿಪ್‌ಹಾಪ್, ಪಾಪ್, ಸಾಲ್ಸಾ ಐಟಂಗಳಲ್ಲಿ ಸೈರಸ್ ಸೈ ಎನ್ನಿಸಿ ಬಿಡುತ್ತಾನೆ ಎನ್ನೋದು ಗುರುಗಳ ಮಾತು.‘ಸೈರಸ್ ತುಂಬಾನೇ ಆಕ್ಟಿವ್. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲದೇ ಹೋಗಬಹುದು.ಆದರೆ ಸೈರಸ್ ಯಾವಾಗಲೂ ಚಾರ್ಜ್‌ನಲ್ಲಿರುತ್ತಾನೆ. ಯಾವುದೇ ಐಟಂಗಳನ್ನು ನಾವು ಹೇಳಿಕೊಟ್ಟ ತಕ್ಷಣ ಮಾಡಿ ಮುಗಿಸುವ ಪೋರ ಸೈರಸ್ ’ಎಂದು ಶಿಷ್ಯನ ಬಗ್ಗೆ ಮೆಚ್ಚು ನುಡಿ ಸುರಿಸುತ್ತಾರೆ ಚರಣ್ ರಾಜ್ ಗಟ್ಟಿ. ‘ಶಾಲೆಯವರು ನೀಡಿದ ಹೋಮ್ ವರ್ಕ್ ಸಂಪೂರ್ಣ ಮುಗಿಸಿದ ನಂತರ ಡ್ಯಾನ್ಸ್ ಅಕಾಡೆಮಿಗೆ ಬರುತ್ತಾನೆ. ಸಂಜೆ ೭ರಿಂದ ೮ರ ತನಕ ಫುಲ್ ಜೋಶ್‌ನಿಂದ ಡ್ಯಾನ್ಸ್ ಮಾಡ್ತಾನೆ ’ಎನ್ನುತ್ತಾರೆ ಕೋರಿಯೋಗ್ರಾಫರ್ ನೀತು ಮರೋಳಿ.
ಸೈರಸ್ ‘ಗುಡ್ ಡೇಟಾ’:
ಹನ್ನೊಂದರ ಹರೆಯದ ಸೈರಸ್ ವಾಂಗ್. ಸೋನಿ ಟಿವಿಯ ‘ಬೂಗಿ ವೂಗಿ ’ಡ್ಯಾನ್ಸ್ ಸ್ಪರ್ಧೆಯಲ್ಲೂ ಗೆದ್ದು ಬಂದವ. ೨೦೦ಕ್ಕಿಂತ ಹೆಚ್ಚು ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಂಡ ಪ್ರತಿಭೆ. ಝೀ ಕನ್ನಡದ ‘ಕುಣಿಯೋಣ ಬಾರಾ’ದಲ್ಲೂ ಪ್ರದರ್ಶನ ನೀಡಿದ ಪೋರ ಸೈರಸ್ ರಾಷ್ಟ್ರ ಮಟ್ಟದ ಅನೇಕ ಡ್ಯಾನ್ಸ್ ಸ್ಪರ್ಧೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾನೆ.
ಅಂದಹಾಗೆ ಸೈರಸ್ ತನ್ನ ಬಗ್ಗೆ ಏನೂ ಹೇಳುತ್ತಿದ್ದಾನೆ ಕೇಳಿ....‘ನಿಜಕ್ಕೂ ವಂಡರ್ ಫುಲ್ ಅನುಭವ. ನನಗೆ ಇಲ್ಲಿ ಗೆಲ್ಲೋದಕ್ಕಿಂತ ಹೆಚ್ಚಾಗಿ ಖ್ಯಾತ ಕೋರಿಯೋಗ್ರಾಫರ್ ಜತೆಯಲ್ಲಿ ಇರುವ ಖುಶಿ ಬಹಳ ದೊಡ್ಡದು. ಗೆಲ್ಲಬೇಕೆಂದು ಕುಡ್ಲದಿಂದ ಬಂದಿದ್ದಾನೆ. ಅಲ್ಲಿನ ಜನ ನನ್ನ ಕೈ ಬಿಡೋದಿಲ್ಲ ಎಂಬ ಧೈರ್ಯ ಇದೆ’ ಎಂದು ಹೇಳಿ ನಕ್ಕ. ಕುಡ್ಲದ ಪ್ರತಿಭೆಯೊಂದು ಈ ರೀತಿಯಲ್ಲಿ ಕಲರ್‍ಸ್‌ನಲ್ಲಿ ಶೈನಿಂಗ್ ಆಗುತ್ತಿರೋದು ಹೆಮ್ಮೆಯ ವಿಚಾರ ಅಲ್ವಾ..?
ಚಕ್ ಧೂಮ್ ಧೂಮ್ ಏನಿದು..?
‘ಚಕ್ ಧೂಮ್ ಧೂಮ್’ ಡ್ಯಾನ್ಸ್ ರಿಯಾಲಿಟಿ ಶೋ ಕಲರ್‍ಸ್ ಚಾನೆಲ್‌ನಲ್ಲಿ ಪ್ರತಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ೯ರಿಂದ ೧೦ ಗಂಟೆಗೆ ಪ್ರಸಾರವಾಗುತ್ತಿದೆ. ಈಗಾಗಲೇ ಸೈರಸ್ ವಾಂಗ್ ೨೦ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದಾನೆ. ಈ ರಿಯಾಲಿಟಿ ಶೋವಿನ ಜಡ್ಜ್‌ನ ಸ್ಥಾನದಲ್ಲಿ ಖ್ಯಾತ ಬಾಲಿವುಡ್‌ನ ಕೋರಿಯೋಗ್ರಾಫರ್ ಸರೋಜ್ ಖಾನ್, ಅಹಮದ್ ಖಾನ್ ಇದ್ದಾರೆ. ರಿಯಾಲಿಟಿ ಶೋವಿನಲ್ಲಿರುವ ಪುಟಾಣಿಗಳಿಗೆ ಕೋರಿಯೋಗ್ರಾಫರ್ ಬೊಸ್ಕೊ ಹಾಗೂ ಸೀಜರ್ ಟ್ರೈನಿಂಗ್ ನೀಡುತ್ತಿದ್ದಾರೆ. ಪುಟಾಣಿ ಡ್ಯಾನ್ಸರ್‌ಗಳ ಮಧ್ಯೆ ಪೈಪೋಟಿಯಂತೂ ಬಹಳ ಮಜಬೂತಾಗಿದೆ. ಬೇಕಾದರೆ ಒಂದು ಸಾರಿ ಟಿವಿಯಲ್ಲಿ ನೋಡಿಬಿಡಿ.

Friday, April 15, 2011

ಬಿಜೆಪಿ ಭಿನ್ನ ಮತ ಮತ್ತು ಕಾರ್ಟೂನ್ !


ಖ್ಯಾತ ಅಂತಾರಾಷ್ಟ್ರೀಯ ಕಾರ್ಟೂನಿಸ್ಟ್ ಈಗ ಮಾಧ್ಯಮದಂತಹ ಮುಖ್ಯವಾಹಿನಿಯ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲವು ವಿಚಾರಗಳ ಮೇಲೆ ಸಿರೀಯಸ್ ಆಗಿ ಪ್ರಕಾಶಣ್ಣ ಕಾರ್ಟೂನ್ ಮಾಡಿ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಪದೇ ಪದೇ ಬೆಂಕಿಯಂತೆ ಕಾಣಿಸಿಕೊಳ್ಳುತ್ತಿರುವ ಭಿನ್ನಮತ ಈ ರೀತಿಯಲ್ಲೂ ಸೃಷ್ಟಿಯಾಗಬಹುದು ಎನ್ನುವ ಊಹೆಯ ಮೇಲೆ ನಿಂತು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮಾಡಿ ಕಳುಹಿಸಿದ್ದಾರೆ. ಒಂದ್ ಸಾರಿ ನೋಡಿ ಬಿಡಿ.

* ಸ್ಟೀವನ್ ರೇಗೊ, ದಾರಂದಕುಕ್ಕು

Wednesday, April 13, 2011

ರಾಕ್ ಆನ್ ಸುನೀದಿ ಜವಾನಿ




ಹಾಡುಗಳು ಹೈ ನೋಟ್‌ನಲ್ಲಿ ಇದ್ದರೂ ಒಂಚೂರು ಟೋನ್‌ನಲ್ಲಿ ವ್ಯತ್ಯಾಸ ಮಾಡದೇ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಛಾತಿ ಇರೋದು ಸುನೀದಿಗೆ ಮಾತ್ರ ಎನ್ನೋದು ಬಾಲಿವುಡ್‌ನ ಬಹುತೇಕ ಸಂಗೀತ ನಿರ್ದೇಶಕರ ಗಟ್ಟಿ ಮಾತು. ಇಂತಹ ಹೈಪವರ್ ಹುಡುಗಿ ಸುನೀದಿ ಚೌವಾನ್ ಲವಲವಿಕೆಯ ಜತೆ ಕೂತು ಚಿಟ್‌ಚಾಟ್ ಮಾಡಿದ್ದಾರೆ.

ಈ ವರ್ಷದ ಬಾಲಿವುಡ್‌ನ ಸೂಪರ್ ಡೂಪರ್ ಹಿಟ್ ಸಾಂಗ್ ‘ಶೀಲಾ ಕೀ ಜವಾನಿ..’ ಯಾರಿಗೆ ತಾನೇ ಗೊತ್ತಿಲ್ಲ. ಮದುವೆ, ಮುಂಜಿ ಏನೇ ನಡೆಯಲಿ ಅಲ್ಲಿ ಶೀಲಾ ಬಂದು ಕುಣಿವಷ್ಟು ಜೋರಾಗಿತ್ತು ಆ ಹಾಡು. ಅದರ ಹಿಂದೆ ಇದ್ದ ಗಾಯಕಿ ಸುನೀದಿ ಚೌವಾನ್. ಹಾಡುಗಳು ಹೈ ನೋಟ್‌ನಲ್ಲಿ ಇದ್ದರೂ ಒಂಚೂರು ಟೋನ್‌ನಲ್ಲಿ ವ್ಯತ್ಯಾಸ ಮಾಡದೇ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಛಾತಿ ಇರೋದು ಭವಿಷ್ಯ ಸುನೀದಿಗೆ ಮಾತ್ರ ಎನ್ನೋದು ಬಾಲಿವುಡ್‌ನ ಬಹುತೇಕ ಸಂಗೀತ ನಿರ್ದೇಶಕರ ಗಟ್ಟಿ ಮಾತು. ಅದಕ್ಕಾಗಿಯೇ ಸುನೀದಿಯನ್ನು ಹೈಪಿಚ್ ಹಾಗೂ ಪಾಪ್ ಸಂಗೀತಗಳಿಗೆ ಹೇಳಿ ಮಾಡಿಸಿದ ಕಂಠ ಎಂದು ವಿಮರ್ಶಕರು ಹೇಳುವುದಿದೆ. ೨೦೦೭ರಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ‘ಓಂಕಾರ’ದ ‘ಬೀಡಿ ಜಲಾಯೀ ದೇ...’ ಹಾಡಿನಿಂದ ತಾನು ಅಷ್ಟು ಚೆನ್ನಾಗಿ ಕುಣಿಯಲು ಸಾಧ್ಯವಾಯಿತು ಎಂದು ಈ ಹಾಡಿಗೆ ಕುಣಿದಿದ್ದ ನಟಿ ಬಿಪಾಷ ಬಸು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದು ಸುನೀದಿಯ ಹಾಡಿನ ಪವರ್ ಆಗಿತ್ತು. ಸುನೀದಿಯನ್ನು ಬಹಳಷ್ಟು ಜನರು ಲತಾರ ಮುಂದುವರಿದ ಭಾಗ ಎಂದೇ ಪರಿಗಣಿಸುತ್ತಾರೆ.
ನಾಲ್ಕರ ಹರೆಯದಲ್ಲಿ ದಿಲ್ಲಿಯ ದೇವಸ್ಥಾನದ ಮುಂದೆ ಸುನೀದಿ ಹಾಡಿದ್ದು ಈಗಲೂ ಭರ್ಜರಿಯಾಗಿ ಸಂಗೀತದಲ್ಲಿ ಮುಂದುವರಿಯುತ್ತಿದ್ದಾರೆ. ಇದರ ನಂತರ ೧೯೯೬ರಲ್ಲಿ ದೂರದರ್ಶನ್‌ದಲ್ಲಿ ಬಂದ ಸಂಗೀತ ರಿಯಾಲಿಟಿ ಶೋ ‘ಮೇರಿ ಅವಾಜ್ ಸುನೋ’ದಲ್ಲಿ ಆಯ್ಕೆಯಾಗಿದ್ದರು. ೧೯೯೬ನಲ್ಲಿ ‘ಶಾಸ್ತ್ರಾ ’ ಚಿತ್ರಕ್ಕೆ ಹಿನ್ನೆಲೆಗಾಯಕಿಯಾಗಿ ಸುನೀದಿಗೆ ಸಂಗೀತ ನಿರ್ದೇಶಕ ಅದೇಶ್ ಶ್ರೀವಾಸ್ತವ್ ಚಾನ್ಸ್ ಕೊಟ್ಟಿದ್ದರು. ಆದರೆ ಈ ಚಿತ್ರದ ಹಾಡು ಬಾಲಿವುಡ್ ಚಿತ್ರ ರಸಿಕರಿಗೆ ಇಷ್ಟವಾಗಲಿಲ್ಲ. ನಂತರ ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ನಿರ್ದೇಶನದ ‘ಮಸ್ತ್’ನ ಹಾಡು ಸುನೀದಿಯ ಲೈಫ್‌ನ್ನು ಲಿಫ್ಟ್ ಮಾಡಿತು. ಈ ಮೊದಲು ಸಂದೀಪ್‌ಗೆ ಗಾಯಕ ಸೋನು ನಿಗಮ್ ಸುನೀದಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಅದಕ್ಕಾಗಿ ಇಂದಿಗೂ ಸುನೀದಿ ಸೋನು ನಿಗಮ್‌ರನ್ನು ನೆನಪು ಮಾಡುತ್ತಾರೆ.
೨೦೦೮ರ ವರ್ಷ ಸುನೀದಿ ಪಾಲಿಗೆ ಸೂಪರ್ ಹಿಟ್ ವರ್ಷ. ಹಾಡಿದ ಬಹುತೇಕ ಹಾಡುಗಳು ಸಿನಿ ಪ್ರೇಮಿಗಳ ಬಾಯಿಯಲ್ಲಿ ಮಂತ್ರಗಳಂತೆ ಉದುರಿತು. ‘ತಾಷನ್’, ‘ದೋಸ್ತಾನಾ’, ‘ರೇಸ್’, ‘ರಬ್ ದೇ ಬನಾದೇ ಜೋಡಿ’ಯ ಹಿಟ್ ಹಾಡುಗಳು ಈಗಲೂ ಸಂಗೀತ ಆರಾಧಕರ ರೇಟಿಂಗ್‌ನಲ್ಲಿ ಟಾಪ್‌ನಲ್ಲಿ ಉಳಿದುಕೊಂಡಿವೆ. ಸುನೀದಿ ಈ ವರೆಗೆ ೩ ಸಾವಿರದಷ್ಟು ಹಾಡುಗಳನ್ನು ಹಾಡಿದ್ದಾರೆ. ಹದಿನಾಲ್ಕು ಬಾರಿ ಫಿಲ್ಮ್‌ಪೇರ್ ಅವಾರ್ಡ್‌ಗೆ ನಾಮಕಿಂತಗೊಂಡಿದ್ದಾರೆ. ಅದರಲ್ಲಿ ಮೂರು ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಸುನೀದಿ ಚೌವಾನ್ ಲವಲವಿಕೆಯ ಜತೆ ಕೂತು ಚಿಟ್‌ಚಾಟ್ ಮಾಡಿದ್ದಾರೆ. ಬನ್ನಿ ಓವರ್ ಟು ಸುನೀದಿ ಚೌವಾನ್.
ಬದುಕು ಕಟ್ಟಿದ ಹುಡುಗಿ
ಸುನೀದಿ ಮೂಲತಃ ದಿಲ್ಲಿಯ ಬೆಡಗಿ. ರಂಗಭೂಮಿ ಹಿನ್ನೆಲೆಯಿಂದ ಬಂದ ಸುನೀದಿ ನಂತರ ದಿನಗಳಲ್ಲಿ ದಿಲ್ಲಿ ಬಿಟ್ಟು ಮುಂಬಯಿ ಸೇರಿಕೊಂಡರು. ೧೮ರ ಹರೆಯದಲ್ಲಿ ಬಾಲಿವುಡ್‌ನ ಖ್ಯಾತ ಮ್ಯೂಸಿಕ್ ವಿಡಿಯೋ ನಿರ್ದೇಶಕ ಕಮ್ ಕೋರಿಯೋಗ್ರಾಫರ್ ಬಾಬಿ ಖಾನ್ ಜತೆಯಲ್ಲಿ ವಿವಾಹವಾಗಿದ್ದರು. ‘ಪಹೇಲಾ ನಾಷಾ’ ಮ್ಯೂಸಿಕ್ ವಿಡಿಯೋನಿಂದ ಇಬ್ಬರ ಜತೆ ಸ್ನೇಹವಾಗಿ ನಂತರ ಅದು ಪ್ರೇಮಕ್ಕೆ ನಾಂದಿ ಹಾಡಿತು ಎನ್ನುವ ಮಾತಿದೆ. ಆದರೆ ಯಾಕೋ ಗೊತ್ತಿಲ್ಲ ವಿವಾಹ ಮಾತ್ರ ಬಹಳ ಗುಪ್ತವಾಗಿ ನಡೆದಿತ್ತು. ತಮ್ಮ ಹತ್ತಿರದ ಬಂಧುಗಳಿಗೆ ಮಾತ್ರ ಆಹ್ವಾನವಿತ್ತು. ವಿವಾಹವಾದ ಒಂದು ವರ್ಷದಲ್ಲಿಯೇ ಇಬ್ಬರ ನಡುವೆ ಮನಸ್ತಾಪ ಜೋರಾಯಿತು. ಇಬ್ಬರು ನಾನೊಂದು ತೀರಾ ನೀನೊಂದು ತೀರ ಎಂದು ಬಿಟ್ಟರು. ಸುನೀದಿ ಬಾಬಿಯನ್ನು ಬಿಟ್ಟು ಹೆತ್ತವರ ಜತೆಯಲ್ಲಿ ಮತ್ತೆ ಸೇರಿಕೊಂಡರು. ಎರಡು ಮೂರು ವರ್ಷಗಳ ಕಾಲ ಕಾನೂನಿನ ಮೂಲಕ ವಿಚ್ಛೇದನ ಪಡೆದು ಕೊಂಡದ್ದು ಆಯಿತು. ಈಗ ಪುರುಷ ಮೃಗಗಳನ್ನು ಕಂಡಾಗ ಸುನೀದಿ ಬೆಂಕಿ ಉಂಡೆಯಾಗುತ್ತಾರೆ.
* ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಕತೆ ಏನು?
- ಶೀಲಾ ಕೀ ಜವಾನಿ...ಹಿಟ್ ನಂತರ ಈಗ ಹತ್ತಾರು ಪ್ರಾಜೆಕ್ಟ್‌ಗಳು ಕೈಯಲ್ಲಿದೆ. ಈ ವರ್ಷನೂ ಮತ್ತೊಂದು ಸೂಪರ್ ಹಾಡು ಕೊಡಬೇಕು ಎನ್ನೋದು ನನ್ನ ಬಯಕೆ.
* ನೀವು ಗುರು ಇಲ್ಲದ ಶಿಷ್ಯೆಯಂತೆ ?
- ಹೌದು. ನಾನು ಲತಾಜೀ ಹಾಗೂ ಆಶಾಜೀಗಳ ಹಾಡುಗಳನ್ನು ಕೇಳಿ ಯೇ ಸಂಗೀತ ಜ್ಞಾನ ಕಲಿತಿದ್ದೇನೆ. ಅವರ ಹಾಡುಗಳೇ ನನ್ನ ಇಂದಿನ ದಾರಿಗೆ ಪ್ರೇರಕ ಶಕ್ತಿಗಳು. ಉಳಿದಂತೆ ಸಂಗೀತವನ್ನು ಯಾವ ಗುರುಗಳಿಂದಲೂ ಕಲಿತಿಲ್ಲ.
* ನಿಮ್ಮ ಹತ್ತಿರದ ಪ್ರತಿರ್ಸ್ಪ ಯಾರು?
-ನಾನು ನನ್ನ ಪ್ರತಿರ್ಸ್ಪಗಳ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಇತ್ತೀಚೆಗೆ ಸಂಗೀತ ಲೋಕಕ್ಕೆ ಹೊಸ ಗಾಯಕಿಯರು ಬರುತ್ತಿದ್ದಾರೆ. ಅದು ಹೆಮ್ಮೆ ಪಡುವ ವಿಷ್ಯಾ. ಸಂಗೀತದಲ್ಲಿ ಪೈಪೋಟಿ ಇದ್ರೆ ತಾನೇ ಗುಣಮಟ್ಟ ಹೆಚ್ಚಾಗೋದು....
*ತುಂಬಾ ಟ್ಯಾಲೆಂಟ್ ಇರುವ ನೀವು ನಟನೆಗೆ ಯಾಕೆ ಹೋಗ್ತಿಲ್ಲ?
- ಕಳೆದ ಎರಡು ಮೂರು ವರ್ಷಗಳಿಂದ ಹತ್ತಾರು ಸಿನಿಮಾ ನಿರ್ದೇಶಕರು ನನ್ನನ್ನು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ನನಗೆ ನನ್ನದೇ ಕನಸ್ಸಿನ ಪಾತ್ರಗಳಿವೆ ಅಂತಹ ಪಾತ್ರಗಳು ಬಂದರೆ ಸಿನಿಮಾದಲ್ಲಿ ನಟಿಸುವುದು ಗ್ಯಾರಂಟಿ.
*ಹೊಸ ಅಲ್ಬಂ ತರುವ ಕೆಲಸ ಎಲ್ಲಿಗೆ ಬಂತು?
- ಆಲ್ಬಂ ತರುವ ಪ್ಲ್ಯಾನ್‌ವೊಂದು ಇತ್ತು. ಆದರೆ ಈಗ ಸಿನಿಮಾಗಳು ಜಾಸ್ತಿ ಬರುತ್ತಿದೆ. ಆಲ್ಬಂಗೆ ಟೈಮ್ ಸಿಗ್ತಿಲ್ಲ. ಈ ವರ್ಷ ಖಂಡಿತ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಆಲ್ಬಂ ತರುವ ಪ್ರಯತ್ನ ಮಾಡುತ್ತೇನೆ.
* ನಿಮ್ಮ ಪ್ರಕಾರ ಒಳ್ಳೆಯ ಹಾಗೂ ಬಹಳ ಕೆಟ್ಟ ಸಂಗೀತ ನಿರ್ದೇಶಕ ಯಾರು?
-ತುಂಬಾನೇ ಕಠಿಣ ಸವಾಲಿದು. ಒಂದ್ ಸಲ ಒಂದು ಸ್ಟುಡಿಯೋದಲ್ಲಿ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಮೂರು ಗಂಟೆಗಳ ಕಾಲ ರೆಕಾರ್ಡಿಂಗ್ ಮಾಡಿಸದೇ ಕೂರಿಸಿದರು. ನನ್ನ ವೃತ್ತಿ ಬದುಕಿನಲ್ಲಿ ಅವರೊಬ್ಬರೇ ಬಹಳ ಕೆಟ್ಟ ನಿರ್ದೇಶಕರು ಎಂದು ನಿರ್ಧಾರ ಮಾಡಿದೆ. ಆದರೆ ಹೆಸರು ಹೇಳಲು ಇಷ್ಟಪಡುವುದಿಲ್ಲ. ಉಳಿದಂತೆ ಎಲ್ಲರೂ ವೃತ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ.
* ದಿಲ್ಲಿ ಹುಡುಗನ ಜತೆ ಮದುವೆ ಇದೆ ಎನ್ನುವ ಮಾತಿದೆಯಲ್ಲ?
- ಇದೆಲ್ಲ ಮಾಧ್ಯಮಗಳು ಕಟ್ಟಿ ನಿಲ್ಲಿಸಿದ ಕತೆ. ಮದುವೆ ಎನ್ನೋದು ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಸಿನಿಮಾ ಬದುಕಿನಲ್ಲಿ ಇಂತಹ ಲಿಂಕ್ ಆಪ್ ಗಾಸಿಪ್‌ಗಳು ಪದೇ ಪದೇ ಬರುತ್ತದೆ. ನಾನು ಈ ವಿಚಾರದಲ್ಲಿ ಗಾಂಜಿಯ ಮೂರು ಮಂಗನಂತೆ ಇರುತ್ತೇನೆ.
* ಬಾಬಿ ಮತ್ತೆ ನಿಮ್ಮ ಬದುಕಿನಲ್ಲಿ ಎಂಟ್ರಿಯಾಗುತ್ತಾರಾ..?
- ಇಲ್ಲವೇ ಇಲ್ಲ. ಮದುವೆ ಎನ್ನುವ ಪದ ಈಗ ಬೋರ್ ಹೊಡಿಸುತ್ತಿದೆ. ಅವರು ತಮ್ಮ ಬದುಕಿನಲ್ಲಿ ಖುಷಿಯಾಗಿದ್ದಾರೆ. ನಾನು ನನ್ನ ಬದುಕಿನಲ್ಲಿ ಹ್ಯಾಪಿಯಾಗಿದ್ದೇನೆ. ಕಾನೂನು ಮೂಲಕ ನಾವು ಹೋಗಿದ್ದರ ಪರಿಣಾಮ ಎಂದಿಗೂ ನಾವು ಜತೆ ಸೇರಲಾರೆವು. ಒಂದ್ ಮಾತು ಹೇಳಬಲ್ಲೆ.. ಅವರಿಗೆ ಆಲ್ ದೀ ಬೆಸ್ಟ್.

Tuesday, April 12, 2011

ನಾಟ್ಯ ಮಯೂರಿ ಶೋಭನಾ


ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಶೋಭನಾರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಅದು ಬರಿಯ ಹೆಸರಲ್ಲ. ಹಿರಿತೆರೆಯಲ್ಲಿ ನೋಡಿ ಮರೆತು ಬಿಡುವ ಮುಖನೂ ಅಲ್ಲ. ಬಣ್ಣದ ಲೋಕದಲ್ಲಿ ಚಾನ್ಸ್ ಇಲ್ಲ ಎಂದು ಮೂಲೆಗೆ ಸೇರಿ ಬಿಡುವ ನಾಯಕಿಯರನ್ನು ಬಹಳಷ್ಟು ಕಾಣಬಹುದು. ಆದರೆ ದಕ್ಷಿಣ ಭಾರತದ ನಾಯಕಿಯರ ರ್‍ಯಾಕಿಂಗ್ ಪಟ್ಟಿಯಲ್ಲಿ ನಟಿ ಶೋಭನಾ ನಂಬರ್ ವನ್ ಇದ್ದಾಗಲೇ ಭರತನಾಟ್ಯದ ಮೇಲೆ ಮನಸು ಮಾಡಿದವರು. ಸಿನ್ಮಾಗಳ ಮೇಲೆ ಸಿನ್ಮಾ ನಿರ್ದೇಶಕರು ಅವರ ಕಾಲ್‌ಶೀಟ್‌ಗಾಗಿ ದುಂಬಾಲು ಬಿದ್ದಾಗಲೂ ಬಹಳಷ್ಟು ಚ್ಯುಸಿಯಾಗಿ ಚಿತ್ರಗಳನ್ನು ಆಯ್ಕೆಮಾಡಿಕೊಂಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡವರು. ಅದು ದಕ್ಷಿಣ ಭಾರತದ ಖ್ಯಾತ ನಟಿ ಶೋಭನಾ ಮೇಡಂರ ತಾಕತ್ತು. ಗಟ್ಟಿಯಾಗಿ ಹೇಳುವುದಾದರೆ ಅದೊಂದು ನಾಟ್ಯ ಕ್ಷೇತ್ರದ ಅಮೂಲ್ಯ ಆಸ್ತಿ.
ಸ್ಯಾಂಡಲ್‌ವುಡ್‌ನಲ್ಲಿ ಬಂದ ‘ಆಪ್ತಮಿತ್ರ’ ಸಿನಿಮಾ ಯಾರಿಗೆ ಗೊತ್ತಿಲ್ಲ . ನಾಗವಲ್ಲಿಯಾಗಿ ಸೌಂದರ್ಯ ನಟಿಸಿದ ಈ ಚಿತ್ರದ ಮೂಲ ಮಲಯಾಳಂನ ‘ಮಣಿಚಿತ್ರತ್ತಾಳ್’. ಫಾಝಿಲ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಇಡೀ ಚಿತ್ರರಂಗವೇ ಅಚ್ಚರಿಪಡುವಂತೆ ನಟಿಸಿದ್ದು ಶೋಭನಾ. ನೃತ್ಯವೇ ಈ ಚಿತ್ರದ ಹೈಲೇಟ್ ವಿಚಾರವಾಗಿತ್ತು. ಅಂದಹಾಗೆ ನೃತ್ಯದಲ್ಲಿ ಶೋಭನಾ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ.
ಬಣ್ಣದ ಬದುಕು:
೧೮ನೇ ವಯಸ್ಸಿನಲ್ಲಿ ಮೊದಲ ಬಾರಿ ಶೋಭನಾ ಕ್ಯಾಮರಾ ಫೇಸ್ ಮಾಡಿದ್ದಳು. ನಂತರ ‘ಕನಮಾರಾಯತು’ನಲ್ಲಿ ಮಮ್ಮುಟ್ಟಿಗೆ ನಾಯಕಿ. ತೆಲುಗಿನ ಜನಪ್ರಿಯ ನಟ ನಾಗಾರ್ಜುನ ಮೊದಲ ಬಾರಿ ನಾಯಕನಾದ ‘ವಿಕ್ರಮ್’ ಚಿತ್ರಕ್ಕೆ ನಾಯಕಿಯಾಗಿ ಸಿಕ್ಕಿದ್ದು ಇದೇ ಶೋಭನಾ. ಫಾಜಿಲ್ ಅವರ ‘ಮಣಿಚಿತ್ರತ್ತಾಳ್’ಗೆ ೧೯೯೪ರಲ್ಲಿ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟರೆ ರೇವತಿ ಅವರ ‘ಮಿತ್ರ್ ಮೈ ಫ್ರೆಂಡ್ ’೨೦೦೩ರಲ್ಲಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಗೌರವ ತಂದಿತು. ೨೦೦೬ರಲ್ಲಿ ಪದ್ಮಶ್ರೀ ಗೌರವವೂ ಒಲಿದು ಬಂತು. ಸಿನಿಮಾ ರಂಗದಲ್ಲಿ ಇಷ್ಟೊಂದು ಜನಪ್ರಿಯತೆ ಇದ್ದರೂ ಅದೆಲ್ಲವನ್ನೂ ಪಕ್ಕದಲ್ಲಿಟ್ಟು ಶೋಭನಾ ಬೆನ್ನು ಹತ್ತಿದ್ದು ನೃತ್ಯವನ್ನು. ನೃತ್ಯದಲ್ಲಿ ಪ್ರಖ್ಯಾತರಾದ ತೃವಾಂಕೂರ್ ಸಹೋದರಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸೊಸೆ ಶೋಭನಾ. ಭರತನಾಟ್ಯದ ದಂತಕಥೆಗಳಾದ ಚಿತ್ರ ವಿಶ್ವೇಶ್ವರನ್ ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ.
ನಿರ್ದೇಶಕ ಮಣಿರತ್ನಂರ ಪ್ರಖ್ಯಾತ ಸ್ಟೇಜ್ ಶೋ ‘ನೆಹ್ರೂ ಇಂಡ್ರು, ನಾಳೈ’ಯಲ್ಲಿ ಪಾಲ್ಗೊಂಡಿದ್ದರು. ಶೋಭನಾ ೧೯೯೪ರಲ್ಲಿ ಚೆನ್ನೈಯಲ್ಲಿ ‘ಕಲಾರ್ಪಣ’ ಎನ್ನುವ ನಾಟ್ಯ ಶಾಲೆಯನ್ನು ಆರಂಭ ಮಾಡಿದರು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಜಗತ್ತಿನಾದ್ಯಂತ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವುದು, ಅಶಕ್ತ ಕಲಾವಿದರಿಗೆ ನೆರವಾಗುವುದು ಮತ್ತು ಪರಿಸರ ರಕ್ಷಣೆಗೆ ಪ್ರೋತ್ಸಾಹ ಇದು ಅವರ ಶಾಲೆಯ ಮುಖ್ಯ ಉದ್ದೇಶ.
ಶೋಭನಾ ಅವರ ಮಾಯಾ ರಾವಣ-ಜಾಗತಿಕ ಮತ್ತು ಭಾರತೀಯ ಸಂಗೀತದ ಅಪೂರ್ವ ಮಿಶ್ರಣ ಹೊಂದಿರುವ ದೃಶ್ಯಕಾವ್ಯರೂಪಕ. ಎರಡೂವರೆ ವರ್ಷದಲ್ಲಿ ೫೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಸಂಗೀತ ಮತ್ತು ನೃತ್ಯದ ಮೂಲಕ ಪ್ರಕಟಗೊಳ್ಳುವ ಈ ವೈಭವದಲ್ಲಿ ರಾವಣನ ಪಾತ್ರ ಶೋಭನಾ ಅವರದ್ದು. ಈ ಕಥಾನಕದ ಇಂಗ್ಲಿಷ್ ವಿವರಣೆಯನ್ನು ನಾಸಿರುದ್ದೀನ್ ಷಾ, ಜಾಕಿ ಶ್ರಾಫ್, ಮಿಲಿಂದ್ ಸೋಮನ್, ಸುಹಾಸಿನಿ, ರೇವತಿ, ರೋಹಿಣಿ, ಟಬು, ಸಮೀರ್ ಸೋನಿ ಮತ್ತು ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಇಂತಹ ಶೋಭನಾ ಇತ್ತೀಚೆಗೆ ಮಿಜಾರಿನ ಎಡಪದವಿನಲ್ಲಿ ನಡೆದ ಭೂತನಾಥೇಶ್ವರ ಕ್ರೀಡೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ನೃತ್ಯ ಪ್ರದರ್ಶನದ ನಂತರ ಲವಲವಿಕೆಯ ಜತೆಯಲ್ಲಿ ಶೋಭನಾ ಚಿಟ್ ಚಾಟ್ ಮಾಡಿದ್ದಾರೆ. ಓವರ್ ಟು ಶೋಭನಾ.
* ಶೋಭನಾ ಪದದ ಅರ್ಥವೇನು?
- ಶೋಭನಾ ಎನ್ನುವುದು ದೇವಿ ಪಾರ್ವತಿಯ ಮತ್ತೊಂದು ಹೆಸರು. ಮನೆಗೆ ಶೋಭೆ ತರುವ ಹುಡುಗಿ ಶೋಭನಾ ಎನ್ನಬಹುದು.
* ಸಿನ್ಮಾ ಮತ್ತು ಭರತನಾಟ್ಯ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡ್ತೀರಾ..?
-- ಒಂದ್ ಕಾಲದಲ್ಲಿ ಎರಡು ನನ್ನ ಕಣ್ಣಾಗಿತ್ತು. ಈಗ ಸಿನ್ಮಾ ಕಡಿಮೆ ಮಾಡಿದ್ದೇನೆ. ನೃತ್ಯಕ್ಕೆ ಜಾಸ್ತಿ ಮಹತ್ವ ಬಂದಿದೆ.
* ‘ಮಣಿಚಿತ್ರತ್ತಾಳ್’ ನಂತರ ‘ನಾಗವಲ್ಲಿ’ಯ ಪಾತ್ರ ಮಾಡಿಲ್ಲ ಯಾಕೆ?
-ನನಗೆ ತುಂಬಾ ಇಷ್ಟವಾದ ಪಾತ್ರ ‘ನಾಗವಲ್ಲಿ’ . ನಂತರ ಬೇರೆ ಭಾಷೆಯಲ್ಲಿ ಬಂದ ಚಿತ್ರದ ನಿರ್ದೇಶಕರು ನನಗೆ ಆಫರ್ ಕೊಟ್ಟಿರಲಿಲ್ಲ. ಕೊಟ್ಟಿದ್ದಾರೆ ನಂತರ ನಾಗವಲ್ಲಿಯಾಗುತ್ತಿದ್ದೆ.
* ನಾಗವಲ್ಲಿಯ ಪಾತ್ರ ತುಂಬಾನೇ ಡೇಂಜರಸ್ ಅಂತೆ ?
- ನಾಗವಲ್ಲಿ ಸಿನ್ಮಾದ ಒಂದು ಪಾತ್ರವಷ್ಟೇ. ಉಳಿದ ಯಾವುದೇ ವಿಚಾರ ನನಗೆ ಗೊತ್ತಿಲ್ಲ. ಕೆಲವರಿಗೆ ಅದೊಂದು ಡೇಂಜರಸ್ ಪಾತ್ರ ಅನ್ನಿಸಿರಬಹುದು. ನನಗೆ ಅದು ಚಾಲೇಂಜಿಂಗ್ ಪಾತ್ರ ಅನ್ನಿಸಿತ್ತು.
*‘ಮಾಯಾ ರಾವಣ್’ ಕಲ್ಪನೆ ಹೇಗೆ ಬಂತು ?
- ಬಾಲ್ಯದಲ್ಲಿ ರಾಮಾಯಣದ ಬಗ್ಗೆ ಬಹಳ ಕುತೂಹಲ. ಜತೆಗೆ ರಾವಣ ಪಾತ್ರ ಕೂಡ ರಾಮನಿಗಿಂತ ಜಾಸ್ತಿ ಇಷ್ಟವಾಗುತ್ತಿತ್ತು. ನೃತ್ಯದಲ್ಲಿ ರಾಮಾಯಣ ಭಾಗವನ್ನು ಪಡಿಮೂಡಿಸಿದರೆ ಹೇಗೆ ಎನ್ನುವ ಯೋಚನೆಯ ಮುಂದೆ ‘ಮಾಯಾ ರಾವಣ್ ’ ಹುಟ್ಟಿಕೊಂಡಿತ್ತು. ಬಾಲಿವುಡ್‌ನ ಬಹಳ ಸ್ನೇಹಿತರು ಈ ಕಲ್ಪನೆಗೆ ಸಾಥ್ ನೀಡಿದ್ದಾರೆ.
* ಕರಾವಳಿ ಜನ, ಸಂಸ್ಕೃತಿ, ಕಲೆ ಹೇಗೆನ್ನಿಸಿತು ?
- ಇದು ಕರಾವಳಿ ತೀರದ ಊರಿಗೆ ಎರಡನೇ ಭೇಟಿ. ನಾನು ಮಲಯಾಳಿ ಕರಾವಳಿ ನನ್ನ ಮನೆ ಇದ್ದಾಗೆ. ಇಲ್ಲಿನ ಜನ, ಸಂಸ್ಕೃತಿ, ಕಲೆ ಇಷ್ಟವಾಯಿತು. ಅವಕಾಶ ಕೊಟ್ಟರೆ ಮತ್ತೊಂದು ಬಾರಿ ಬರುತ್ತೇನೆ.
* ‘ಕಲಾರ್ಪಣ’ ಸಂಸ್ಥೆಯ ಬಗ್ಗೆ ಏನೂ ಹೇಳುತ್ತೀರಿ?
- ಅದು ನನ್ನ ಮತ್ತೊಂದು ಕನಸ್ಸು. ಈಗಾಗಲೇ ನಾನಾ ರಾಜ್ಯಗಳ ೯೦ ವಿದ್ಯಾರ್ಥಿಗಳು ‘ಕಲಾರ್ಪಣ’ ಸಂಸ್ಥೆಯ ಅಡಿಯಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. ಬಹಳಷ್ಟು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಎಲ್ಲರೂ ಬಹಳ ಶ್ರೀಮಂತರಲ್ಲ. ಆದರೆ ಒಳ್ಳೆಯ ಪ್ರತಿಭಾವಂತರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳಕಿಗೆ ತರೋದು ನನ್ನ ಹಾಗೂ ಸಂಸ್ಥೆಯ ಮುಖ್ಯ ಉದ್ದೇಶ.
* ಚಿತ್ರ ನಾಯಕಿಯರು ನಿವೃತ್ತಿಯ ನಂತರ ಜಾಸ್ತಿ ಭರತನಾಟ್ಯಕ್ಕೆ ಬರುತ್ತಾರಲ್ಲ?
- ಹಾಗೇನೂ ಇಲ್ಲ. ಕೆಲವರು ಇರಬಹುದು. ಕ್ಲಾಸಿಕಲ್ ನೃತ್ಯ ಬಹಳಷ್ಟು ನಾಯಕಿಯರ ಬದುಕು ರೂಪಿಸಿದೆ. ನಿವೃತ್ತಿಯ ನಂತರ ನಾಯಕಿಯರು ಭರತನಾಟ್ಯವನ್ನು ವೃತ್ತಿಯಾಗಿ ಪರಿಗಣಿಸಿರಬಹುದು.

ಭ್ರಷ್ಟಚಾರದ ವಿರುದ್ಧ ಪ್ರಕಾಶಣ್ಣನ ಪಂಚ್


ಜನಲೋಕಪಾಲ್ ವಿಧೇಯಕ್ಕಾಗಿ ಸಿರೀಯಸ್ ಆಗಿ ದುಡಿಯುತ್ತಿರುವ ‘ಅಣ್ಣಾ ಹಜಾರೆ ’ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಗೊಂದಲ ಮೂಡಿಸಿದ್ದು ಮಾತ್ರ ನಿಜ. ‘ಗಾಂಜಿ ಬದುಕಿದ್ದಾರೆ ಅವರು ಕೂಡ ಭ್ರಷ್ಟಚಾರಕ್ಕೆ ಗುರಿಯಾಗುತ್ತಿದ್ದರು’ ಎನ್ನುವ ಹೇಳಿಕೆ ನೀಡಿದ ಕುಮಾರಸ್ವಾಮಿ ಅಣ್ಣಾ ಹಜಾರೆಗೆ ಗೇಲಿ ಮಾಡಿದ್ದಾರೆ ಎಂದು ಸಿರೀಯಸ್ ಆಗಿ ಯೋಚಿಸಿದ ಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಕಾರ್ಟೂನ್‌ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಕುಮಾರಣ್ಣ ಹೇಳಿಕೆ ತೀವ್ರತೆ ಹಾಗೂ ಅಣ್ಣಾ ಹಜಾರೆ ಅವರ ವ್ಯಕ್ತಿತ್ವ ಎರಡು ಈ ವ್ಯಂಗ್ಯಚಿತ್ರದಲ್ಲಿ ಮೂಡಿ ಬಂದಿದೆ. ಕಾರ್ಟೂನ್ ನೋಡಿ ನಗುವ ಬದಲು ಒಂದ್ ಸಾರಿ ಭ್ರಷ್ಟಚಾರದ ವಿರುದ್ಧ ಕೈ ಎತ್ತಿ ಎಂದು ಪ್ರಕಾಶಣ್ಣ ತಮ್ಮ ಕಾರ್ಟೂನ್ ಮೂಲಕ ಜಾಗೃತಿ ಮಾಡುತ್ತಿದ್ದಾರೆ.

ಸ್ಟೀವನ್ ರೇಗೊ, ದಾರಂದಕುಕ್ಕು

Monday, April 11, 2011

ಪ್ರೇಕ್ಷಕ ಮೂಕ ವಿ‘ಸ್ಮಿತಾ’



ಬಾಲಿವುಡ್ ನಿರ್ದೇಶಕಿ ಕಿರಣ್‌ರಾವ್ ನಿರ್ದೇಶನದ ‘ಧೋಬಿ ಘಾಟ್’ ಚಿತ್ರ ನೋಡಿದ ನಂತರ ಅನ್ನಿಸಿದ್ದು ಆ ಹೊಸ ಹುಡುಗ ಅವರ ಮಗ ಅಲ್ವಾ...? ಅದೇ ಮುಖ, ಕಣ್ಣು, ಮೂಗು, ನಟನೆ ಸೇಮ್ ಟೂ ಸೇಮ್ ಖ್ಯಾತ ನಟಿ ಸ್ಮಿತಾ ಪಾಟೀಲ್ ಹೊಳಪು ಒಂದ್ ಸಾರಿ ಬಂದು ಮರೆಯಾಯಿತು.

ಬಾಲಿವುಡ್ ನಟ ಅಮೀರ್ ಖಾನ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದ ‘ಧೋಬಿ ಘಾಟ್’ ಚಿತ್ರ ಯಾಕೋ ಕಮರ್ಷಿಯಲ್ ಪಾಯಿಂಟ್ ಆಫ್ ರೇಟಿಂಗ್‌ನಲ್ಲಿ ವೀಕ್ ಅನ್ನಿಸಿದರೂ ಅಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಪ್ರತಿಕ್ ರಾಜ್ ಬಬ್ಬರ್ ಮಾತ್ರ ಬಹಳಷ್ಟು ಸಿನಿ ವಿಮರ್ಶಕರಿಂದ ಶಹಬ್ಬಾಸ್‌ಗಿರಿ ಪಡೆದಿದ್ದರು. ಹೊಸ ಹುಡುಗ ಬಾಲಿವುಡ್‌ನಲ್ಲಿ ಬೆಳೆದು ನಿಲ್ಲುತ್ತಾನೆ ಎಂದು ಭವಿಷ್ಯ ಹೇಳಿದ್ದರು. ಎಲ್ಲ ರೀತಿಯಿಂದಲೂ ಬಾಲಿವುಡ್‌ನ ರಂಗೀನ್ ದುನಿಯಾದಲ್ಲಿ ಹೊಸ ಹುಡುಗ ಬಂದ ಅಂತಾ ಖುಶಿ ಪಟ್ಟುಕೊಂಡಿದ್ದರು. ಆದರೆ ಈ ಹುಡುಗ ಮಾತ್ರ ಬಾಲಿವುಡ್‌ನ ಖ್ಯಾತ ನಟಿ ಸ್ಮಿತಾ ಪಾಟೀಲ್‌ರ ಸುಪುತ್ರ ಅಂತಾ ಬಹಳಷ್ಟು ಮಂದಿಗೆ ಗೊತ್ತೇ ಇರಲಿಕ್ಕಿಲ್ಲ. ಆದರೆ ಇದು ಮಾತ್ರ ದಿಟ ಕಣ್ರಿ.
ಸ್ಮಿತಾ ಪಾಟೀಲ್ ಹಾಗೂ ರಾಜ್ ಬಬ್ಬರ್‌ರ ಪುತ್ರ ಪ್ರತಿಕ್ ಬಬ್ಬರ್ ಧೋಬಿ ಘಾಟ್ ನಂತರ ಈಗ ‘ಧಮ್ ಮಾರೋ ಧಮ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಏಪ್ರಿಲ್ ೨೨ರಂದು ತೆರೆಯ ಮೇಲೆ ಬರುವ ಸೂಚನೆ ಈಗಾಗಲೇ ನೀಡಿದೆ. ಈ ಚಿತ್ರದ ನಂತರ ‘ಅಕ್ರೋಶ್’ ಮತ್ತು ‘ ಮೈ ಫ್ರೆಂಡ್ ಪಿಂಟೋ ’ ಚಿತ್ರೀಕರಣದ ಹಾದಿಯಲ್ಲಿದೆ. ಟೋಟಲಿ ಪ್ರತಿಕ್ ಬಬ್ಬರ್, ತಾಯಿಯ ಹಾದಿಯಲ್ಲಿ ನಡೆಯುತ್ತಿದ್ದಾನೋ ಎನ್ನುವ ಸಂದೇಹದ ಮೇಲೆ ಸ್ಮಿತಾ ಪಾಟೀಲ್‌ರ ಬಣ್ಣದ ಲೋಕದ ಪುಟಗಳನ್ನು ಒಂದ್ ಸಲ ಬಿಚ್ಚಿಟ್ಟುಕೊಂಡು ನೋಡಿದಾಗ ಅನ್ನಿಸಿದ್ದು ಇಷ್ಟೇ : ಅವನು ಸ್ಮಿತಾ ಪಾಟೀಲ್‌ರ ಹೆಮ್ಮೆಯ ಸುಪುತ್ರನೇ ಖರೇ ಕಣ್ರಿ.
ಮರಾಠಿ ಭಾಷೆಯ ಚಾನೆಲ್‌ವೊಂದರಲ್ಲಿ ಟಿವಿ ನಿರೂಪಕಿಯಾಗಿದ್ದ ಚೆಲುವೆಯನ್ನು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಪ್ರೇಕ್ಷಕರ ಮುಂದೆ ತಂದು ಬಿಟ್ಟಿದ್ದರು. ಹೌದು. ಇದು ಸ್ಮಿತಾ ಪಾಟೀಲ್ ಎನ್ನುವ ಬಾಲಿವುಡ್ ನಟಿಯ ಕತೆ. ಚೂಪಾದ ಮೂಗು, ಮನಸೆಳೆದು ಬಿಡುವ ದೇಹ ಸೌಂದರ್ಯ ಜತೆಗಿಷ್ಟು ಮುದ್ದಾದ ಮಾತುಗಳು. ಅಂದಕಾಲತ್ತಿಲ್‌ನ ಚೆಲುವೆ ಸ್ಮಿತಾ ಪಾಟೀಲ್ ನೆನಪಿಗೆ ಬಂದು ಬಿಡುತ್ತದೆ. ೧೯೭೦ರ ಅಸುಪಾಸಿನಲ್ಲಿ ಖ್ಯಾತ ನಿರ್ದೇಶಕ ಬೆನೆಗಲ್, ಗೋವಿಂದ ನಿಹಲಾನಿ ಹಾಗೂ ಮೃಣಾಲ್ ಸೇನ್‌ನಂತಹ ಗರಡಿಯಲ್ಲಿ ಪಳಗಿದ ಹುಡುಗಿ. ಇಡೀ ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನ ವಿಶೇಷ ನಟನೆಯ ಮೂಲಕ ಛಾಪು ಮೂಡಿಸಿಕೊಂಡಿದ್ದರು ಸ್ಮಿತಾ ಪಾಟೀಲ್.
ಶ್ಯಾಮ್ ಬೆನೆಗಲ್ ನಿರ್ದೇಶನದ ‘ಚರಣ್‌ದಾಸ್ ಚೋರ್’ಚಿತ್ರ ಸ್ಮಿತಾರ ಪಾಲಿಗೆ ಸಿನಿಮಾರಂಗಕ್ಕೆ ಗೇಟ್‌ಪಾಸ್ ಆಯಿತು. ಅವರ ನಿರ್ದೇಶನದ ‘ಮಂಥನ್’, ‘ಭೂಮಿಕಾ’ ‘ಅಕ್ರೋಶ್" ‘ಚಕ್ರ’ ಹಾಗೂ ‘ಮಿರ್ಚ್ ಮಸಾಲ’ ಎಲ್ಲವೂ ಕಲಾತ್ಮಕ ಹಾಗೂ ಕಮರ್ಷಿಯಲ್ ದೃಷ್ಟಿಯಿಂದಲೂ ಹೆಸರು ಮಾಡಿದ ಚಿತ್ರಗಳಲ್ಲಿ ಸ್ಮಿತಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಂದಹಾಗೆ ಸಿನಿಮಾ ರಂಗಕ್ಕೂ ಬರುವ ಮುಂಚೆ ಸ್ಮಿತಾ ಪಾಟೀಲ್ ಒಬ್ಬ ಮರಾಠಿ ರಂಗಭೂಮಿ ಕಲಾವಿದೆ. ಅಗೊಮ್ಮೆ ಈಗೊಮ್ಮೆ ಮರಾಠಿ ವಾಹಿನಿಯೊಂದರಲ್ಲಿ ವಾರ್ತಾವಾಚಕಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಮಹಿಳೆಯರ ಬದುಕು, ಬವಣೆಗಳ ಬಗ್ಗೆ ಅತೀವ ಕಾಳಜಿ ಇದ್ದ ಹೋರಾಟಗಾರ್ತಿಯಾಗಿ ಮೆರೆದು ನಿಂತವರು. ಮಹಾರಾಷ್ಟ್ರದ ಖ್ಯಾತ ರಾಜಕಾರಣಿ ಶಿವರಾಜಿ ರಾವ್ ಪಾಟೀಲ್‌ರ ಮುದ್ದು ಮಗಳು ಸ್ಮಿತಾ ಪಾಟೀಲ್ ಸರಿಸುಮಾರು ೭೫ಕ್ಕಿಂತ ಹೆಚ್ಚಿನ ಹಿಂದಿ ಹಾಗೂ ಮರಾಠಿ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದ ಸಾಧ ಗಾಗಿ ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ೧೯೮೫ರಲ್ಲಿ ಪದ್ಮಶ್ರೀ ಅವಾರ್ಡ್ ಕೂಡ ಸ್ಮಿತಾರ ಮಡಿಲು ತುಂಬಿತು.
ಆ ಕಾಲದಲ್ಲಿ ಸಿನಿಮಾ ರಂಗದಲ್ಲಿ ತನ್ನ ವಿಶಿಷ್ಟ ಅಭಿನಯದ ಮೂಲಕ ಗಮನಸೆಳೆಯುತ್ತಿದ್ದ ಬಾಲಿವುಡ್ ನಟ ರಾಜ್ ಬಬ್ಬರ್‌ರ ಜತೆ ಪ್ರೇಮಾಂಕುರವಾಗಿ ಸ್ಮಿತಾ ಕೊನೆಗೆ ಬಬ್ಬರ್‌ರ ಎರಡನೇ ಪತ್ನಿಯಾಗಿ ಉಳಿದು ಹೋದರು. ಆದರೂ ಸಿನಿಮಾ ರಂಗದ ಜತೆಗಿನ ನಂಟು ಮಾತ್ರ ಕಳಚಿಕೊಂಡಿರಲಿಲ್ಲ. ೧೯೮೬ರಲ್ಲಿ ಸ್ಮಿತಾ ಗರ್ಭಿಣಿಯಾಗಿ ಆಸ್ಪತ್ರೆ ಸೇರಿಕೊಂಡರು. ಆದರೆ ಡೆಲಿವರಿಯ ಸಮಯದಲ್ಲಿ ನಡೆದ ತೊಂದರೆಯಿಂದ ಸ್ಮಿತಾ ಪಾಟೀಲ್ ಎಲ್ಲರನ್ನು ಬಿಟ್ಟು ಹೋದರು. ಸ್ಮಿತಾ ಹೋದಾಗ ಅವರ ೧೦ ಚಿತ್ರಗಳು ತೆರೆಗೆ ಬರಲು ಕಾಯುತ್ತಿತ್ತು.
೩೧ರ ಹರೆಯದಲ್ಲಿ ದೂರವಾದ ಸ್ಮಿತಾ ಪಾಟೀಲ್ ಒಬ್ಬ ಪ್ರತಿಭಾವಂತ ನಟ ಪ್ರತಿಕ್ ಬಬ್ಬರ್‌ರನ್ನು ಬಿಟ್ಟು ಹೋಗಿದ್ದಾರೆ. ಪ್ರತಿಕ್ ನೋಡಿದಾಗ ಅದೇ ಸ್ಮಿತಾರ ಚೂಪಾದ ಮೂಗು, ಸೆಳೆಯುವ ಕಣ್ಣುಗಳು, ನಟನೆ ಎಲ್ಲವೂ ಸೇಮ್ ಟೂ ಸೇಮ್ ಅನ್ನಿಸಿಬಿಡುತ್ತದೆ ಗ್ಯಾರಂಟಿ. ಅಂದಹಾಗೆ ಪ್ರತಿಕ್ ಬಬ್ಬರ್‌ನನ್ನು ನೀವು ಸರಿಯಾಗಿ ನೋಡಿಲ್ಲವಾದರೆ ಒಂದ್ ಸಾರಿ ಧಮ್ ಮಾರೋ ಧಮ್ ಸಿನಿಮಾ ನೋಡಿ ಬಂದು ಬಿಡಿ. ಸ್ಮಿತಾ ಪಾಟೀಲ್‌ರ ಹೊಳಪು ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

Saturday, April 9, 2011

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ..

ಬೆಕ್ಕಿಗೂ ಮಕ್ಕಳಿಗೂ ಮಡಿ ಮೈಲಿಗೆಯ ಹಂಗಿಲ್ಲ ಎನ್ನುವುದು ಮಡಿವಂತರ ಗಾದೆ. ಆದ್ದರಿಂದ ಬೆಕ್ಕಮ್ಮ ಮುಸುರೆ ಪಾತ್ರೆಗೆ ಬಾಲ ಸೋಕಿಸಿ ಅನಂತರ ಹಾಲಿನ ಪಾತ್ರೆಯತ್ತ ಕೊಂಚವೇ ಬಗ್ಗಿ ನೋಡಿದರೂ ಒಕೆ. ಆ ಹಾಲು ದೇವರಿಗೆ ವರ್ಜ್ಯವಲ್ಲ. ಅಂದಮೇಲೆ ಗೊತ್ತಾಯಿತಲ್ಲ ಬೆಕ್ಕಿನ ಮಹಾತ್ಮೆ ಏನು ಅಂತ. ಆದರೆ ಮಕ್ಕಳು ಬೆಕ್ಕಿನಿಂದ ದೂರ ಇರುವುದು ಆರೋಗ್ಯಕರ ಎನ್ನುವುದು ಕಿವಿ ಮಾತು.

ಮೈಸೂರರಸನ ಅರಮನೆಯೊಳಗೆ,
ರಾಜನ ಸಂಗಡ ರಾಣಿಯು ಇದ್ದಳು
ಅಂತಪುರದೊಳಗೆ...
ಅಂಥಾ ಅಂತಪುರದೊಳಗೆ ಪ್ರವೇಶಿಸುವ ಮುದ್ದಿನ ಬೆಕ್ಕಿಗೆ ನಿಷೇಧಗಳೇ ಇಲ್ಲ ! ಕಿಲಾಡಿ ಮಾರ್ಜಾಲ ಕಾರ್ಯ ಸಾಧು. ಅಂದ ಹಾಗೆ ಬೆಕ್ಕನ್ನು ಎಷ್ಟೇ ಎತ್ತರದಿಂದ ಕೆಳಕ್ಕೆ ಹಾಕಿದರೂ ಅದು ನಾಲ್ಕು ಕಾಲೂರಿ ನಿಲ್ಲುತ್ತದೆ ಎನ್ನುವುದು ಅದರ ಕೆಪಾಸಿಟಿ. ಆದರೆ ಪಾಪ, ಸರಸರನೆ ಮರ ಏರುವ ಬೆಕ್ಕಿಗೆ ಇಳಿಯಲಿಕ್ಕೆ ಬರುವುದಿಲ್ಲ.
ಮನೆಯಲ್ಲಿ ನಿರ್ಭಿತಿಯಿಂದ ಓಡಾಡಿಕೊಂಡಿರುವ ಬೆಕ್ಕುಗಳು ಮುದ್ದು ಮುದ್ದು. ಸೂಕ್ಷ್ಮ ಕಣ್ಣುಗಳಿಂದ ತನ್ನ ಬೇಟೆಯತ್ತ ನೋಡುವ ಬೆಕ್ಕೆಂದರೆ ಪ್ರೀತಿ. ಪುಟಾಣಿ ಮಕ್ಕಳಿಗೆ ಬೆಕ್ಕು, ಅದರ ಮರಿಗಳ ಚಿನ್ನಾಟ ನಿತ್ಯ ಮನರಂಜನೆ. ಮನೆಯ ಸದಸ್ಯರಂತೆಯೇ ಅದಕ್ಕೊಂದು ಸ್ಥಾನ ಇರುತ್ತದೆ. ಅದಕ್ಕೊಂದು ಹಾಲಿನ ಬಟ್ಟಲು, ಮಲಗೋಕೆ ಸುಪ್ಪತ್ತಿಗೆ, ಮರಿ ಹಾಕಿದರೆ ಆರೈಕೆ. ಮನೆಯೊಡತಿಯೊಂದಿಗೆ ಸಂಭಾಷಣೆಯ ಭಾಗ್ಯವೂ ಬೆಕ್ಕಿಗೆ ಸಿಗುತ್ತದೆ. ನಂಬಿಕೆ ನಿಷ್ಠ ನಾಯಿಗಿಂತಲೂ ಮನೆಯಲ್ಲಿ ಮರೆಗುಳಿ ಬೆಕ್ಕೇ ಹೆಚ್ಚು ಪ್ರೀತಿ ಪಡೆಯುವುದುಂಟು. ಗಮನಿಸಿದ್ದೀರಾ, ಮನೆಯಲ್ಲಿರುವ ಎಲ್ಲ ಬೆಕ್ಕುಗಳೂ ಇಲಿ ಹಿಡಿಯುವುದಿಲ್ಲ. ಪುಷ್ಕಳವಾಗಿ ಹಾಲು ಮೀನು ತಿಂದುಕೊಂಡು, ತನ್ನ ತಾ ನೆಕ್ಕುತಾ ಇರುತ್ತವೆ ಫ್ಯಾಶನ್ ಪ್ರಿಯ ಸೋಂಬೇರಿ ಬೆಕ್ಕುಗಳು.
ಒಂದೆಡೆ ಬೆಕ್ಕು ರಸ್ತೆ ದಾಟುವಾಗ ಹಾದು ಹೋದ್ರೆ ಅದು ಅಪಶಕುನ ಎನ್ನುವ ನಂಬಿಕೆ ಒಂದು ಕಡೆ. ಜತೆಯಲ್ಲಿ ಬೆಕ್ಕುಗಳಿದ್ದರೆ ಅದು ಮನೆಗೆ ಸಂಪತ್ತು ಎನ್ನುವರು ಮತ್ತೊಂದೆಡೆ. ಬೆಕ್ಕುಗಳ ಕುರಿತು ಹರಡಿಕೊಂಡಿರುವ ಮೂಢನಂಬಿಕೆಗಳ ಜತೆಯಲ್ಲೇ ಬೆಕ್ಕಿನಿಂದ ಒಳ್ಳೆದಾಗುತ್ತದೆ ಎಂದು ನಂಬಿದವರ ದಂಡೇ ಇದೆ. ಭಾರತೀಯರಲ್ಲಿ ಬೆಕ್ಕೆಂದರೆ ಮೂಗು ಮುರಿಯುವವರು ಇದ್ದರೂ, ಬೆಕ್ಕು ಅಪಶಕುನ ಎನ್ನುವುದಕ್ಕೆ ಭಾರೀ ಪುರಾವೆ ಏನಿಲ್ಲ. ಪೂಜಾ ಕಾರ್ಯದಲ್ಲಿ ಅದನ್ನು ಕೊಂಚ ದೂರ ಇರಿಸುವುದುಂಟು. ಉಳಿದಂತೆ ಬೆಕ್ಕುಗಳು ಕ್ಯಾಂವ್ ಕ್ಯಾಂವ್ ಎಂದು ಜಗಳಾಡುವುದು ಬರಲಿರುವ ಕದನದ ಸಂಕೇತ. ವಾಮಾಚಾರ,ದೆವ್ವ ಪಿಶಾಚಿಗಳ ಲೋಕದಲ್ಲಿ ಮಾತ್ರ ಕಪ್ಪು ಬೆಕ್ಕಿನ ಪಾತ್ರ ಅಶುಭವೇ.
ಬೆಕ್ಕೆಂದರೆ ಬೇಸರವೇಕೆ..
ಕೆಲವರ ಮನೆಯಲ್ಲಿ ಕಪ್ಪು ಬೆಕ್ಕಿಗೆ ಮಾತ್ರ ಆಯುಸ್ಸು. ಮನೆಗೆ ಏಳಿಗೆ. ಮತ್ತೆ ಕೆಲವರಿಗೆ ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಶುಭ.
ಎಲ್ಲ ಬೆಕ್ಕು ಅದರಲ್ಲೂ ಕಪ್ಪು ಬೆಕ್ಕಿನ ಕುರಿತು ಈಜಿಪ್ಟ್ ನಾಗರಿಕರಿಗೆ ಪೂಜನೀಯ ಭಾವನೆ ಇದೆ. ಬೆಕ್ಕಿನ ಮಾಲೀಕರು ಸತ್ತಾಗ ಅವರ ಜತೆಯಲ್ಲಿಯೇ ಈ ಬೆಕ್ಕುಗಳನ್ನು ಹೂಳಲಾಗುತ್ತದೆ. ಸತ್ತ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತೆ ಅಂತಾ ಈಜಿಪ್ಟ್ ನಾಗರಿಕರ ನಂಬಿಕೆ.
ಕಪ್ಪು ಬೆಕ್ಕುಗಳನ್ನು ಸಾಕುವುದೆಂದರೆ ಅದು ಸಂಪತ್ತು ತಂದುಕೊಡುತ್ತದೆ. ಅದರಲ್ಲೂ ಕಪ್ಪು ಬೆಕ್ಕಿನಲ್ಲಿರುವ ಒಂದೇ ಒಂದು ಕೂದಲಬನ್ನು ಬೆಕ್ಕಿಗೆ ಗಾಯವಾಗದಂತೆ ತೆಗೆದು ಬಿಟ್ರೆ ಅವರಿಗೆ ಸಂಪತ್ತು, ಪ್ರೇಮ, ಅದೃಷ್ಟ ಹರಿದು ಬರುತ್ತದೆ.
ಬ್ರಿಟನ್ ಮೀನುಗಾರರ ನಂಬಿಕೆಯಂತೆ ಅವರ ಮನೆಗೆ ಕಪ್ಪು ಬೆಕ್ಕು ಬಂದರೆ ಅಂದು ಅವರ ಮನೆಗೆ ಅತಿಥಿಗಳು ಬರುತ್ತಾರಂತೆ.
ಮನೆ ಮುಂದೆ ಬೆಕ್ಕು ತಲೆಬಾಚುತ್ತಾ ಕುಳಿತರೆ ನೆಂಟರು ಬರುತ್ತಾರೆ ಎನ್ನುವುದು ಭಾರತೀಯರ ನಂಬಿಕೆ.
ಇಂಗ್ಲೆಂಡ್‌ನ ವರ್ತಕರಲ್ಲಿ ಕಪ್ಪು ಬೆಕ್ಕಿಗೆ ವಿಶೇಷ ರಾಜ ಮರ್ಯಾದೆ. ಬೆಕ್ಕು ಜೊತೆಗಿದ್ದರೆ ಇದ್ದರೆ ಸಮುದ್ರ ವ್ಯಾಪಾರದಲ್ಲಿ ಅವರಿಗೆ ಯಾವುದೇ ಅಪಾಯಗಳು ಬರುವುದಿಲ್ಲ.
ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಮನೆಯಲ್ಲಿರುವ ಹುಡುಗಿಗೆ ಬೇಗನೆ ಮದುವೆಯಾಗುತ್ತದೆ. ಅನಾಮಿಕ ಹೆಣ್ಣು ಬೆಕ್ಕೊಂದು ಮನೆ ಸೇರಿಕೊಂಡರೆ ಆ ಮನೆಯಲ್ಲಿ ಮದುವೆ ಖಚಿತ ಅಂತೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವ ದಾರಿಯಲ್ಲಿ ಬಿಳಿ ಬೆಕ್ಕು ಕಾಣಿಸಿಕೊಂಡರೆ, ಒಂದು ರೌಂಡ್ ತಿರುಗಿ ಬರಬೇಕು ಅಥವಾ ಉಗುಳಿ ಮುಂದಿನ ದಾರಿ ಹಿಡಿಯಬೇಕು ಎನ್ನುವುದು ಮತ್ತೊಂದು ಫಾರಿನ್ ನಂಬಿಕೆ.
ಬೆಕ್ಕು ತನ್ನ ಕಿವಿಯನ್ನು ನಾಲಗೆಯಿಂದ ಸ್ವಚ್ಛ ಮಾಡುತ್ತಿದ್ದಾರೆ ಅಂದು ಜೋರಾಗಿ ಮಳೆಯಾಗುತ್ತದೆ.
ಮದುಮಗಳ ಪಕ್ಕದಲ್ಲಿ ಬಂದು ಬೆಕ್ಕು ಕೂಗಿದರೆ ಅವಳ ವೈವಾಹಿಕ ಬದುಕು ಸಂತೋಷದಿಂದ ಕೂಡಿರುತ್ತದೆ.
ಟಾಮ್ ಟಾಮ್
ಕಾರ್ಟೂನ್ ವರ್ಲ್ಡ್ ಚಾನೆಲ್‌ನಲ್ಲಿ ‘ಟಾಮ್ ಆಂಡ್ ಜೆರ್ರಿ’ ಕಾರ್ಟೂನ್‌ನನ್ನು ವಿಶ್ವ ಪ್ರಸಿದ್ಧ, ದೊಡ್ಡವರು ಚಿಕ್ಕವರೆನ್ನುವ ಭೇದ ಇಲ್ಲದೆ ಈ ಕಾರ್ಟೂನ್ ನೋಡುವ ದೊಡ್ಡ ವರ್ಗ ಇದೆ. ವಿಲಿಯೆಮ್ ಹನ್ನಾ ಮತ್ತು ಜೋಸೆಫ್ ಬಾರ್‌ಬೆರಾ ಈ ಸರಣಿಯ ಹರಿಕಾರರು. ಟಾಮ್ ಪಾತ್ರ ಬ್ರಿಟನ್ ಮೂಲದ್ದು. ಉದ್ದಕೂದಲಿನ ನೀಲಿ ಕಂದು ಮಿಶ್ರಿತ ಟಾಮ್ ಸಖತ್ ಕಾಮಿಡಿ ಬೆಕ್ಕು. ಅದರಲ್ಲೂ ಜೆರ್ರಿ ಎಂಬ ಪುಟ್ಟ ಇಲಿಯನ್ನು ಕೊಂದು ತಿನ್ನಲು ಟಾಮ್ ಮಾಡುವ ಕಸರತ್ತುಗಳು, ಜೆರ್ರಿ ಬದುಕಲು ಮಾಡುವ ಸಾಹಸ ಕಾರ್ಟೂನ್ ಪ್ರೇಮಿಗಳನ್ನು ಏಕ್ ದಂ ನಗಿಸಿ ಬಿಡುತ್ತದೆ. ೧೯೪೦ರಿಂದಲೂ ಕಾರ್ಟೂನ್ ದುನಿಯಾದಲ್ಲಿ ರಾಜ್ಯಭಾರ ಮಾಡುತ್ತಿರುವ ‘ಟಾಮ್ ಆಂಡ್ ಜೆರ್ರಿ’ ಟೈಮ್ ಪತ್ರಿಕೆ ನಡೆಸಿದ ಸಮೀಕ್ಷೆಯೊಂದರಲ್ಲಿ ಮೊದಲ ಸ್ಥಾನದಲ್ಲಿದೆ. ‘ಪೂಸಿ ಗೆಟ್ ದೀ ಬೂಟ್’ಎಂದು ಮೊದಲ ‘ಟಾಮ್ ಆಂಡ್ ಜೆರ್ರಿ’ಯನ್ನು ಕರೆಯಲಾಗಿತ್ತು. ನಂತರ ಈ ಹೆಸರು ಬದಲಾಗಿ ‘ಟಾಮ್ ಆಂಡ್ ಜೆರ್ರಿ’ಯಾಗಿ ಬದಲಾವಣೆಗೊಂಡಿತು. ಅಂದಾಹಾಗೆ ಟಾಮ್‌ನ ಒರಿಜಿನಲ್ ಹೆಸರು ‘ಜಾಸ್‌ಫರ್’

Friday, April 8, 2011

ಮಕ್ಕಳ ಸಾಹಿತ್ಯ ಲೋಕದ ಹಿರಿ ಜೀವ ಪಳಕಳ




ಈ ವರ್ಷನೂ ನ.೧೪ರಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಲವಲವಿಕೆ ಈ ಬಾರಿ ಮಕ್ಕಳ ಸಾಹಿತ್ಯಕ್ಕಾಗಿ ಅವಿರತವಾಗಿ
ದುಡಿಯುತ್ತಿರುವ ಕರಾವಳಿ ಪುಟ್ಟ ಊರಿನ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ತೆರೆದು ಇಟ್ಟಿದೆ. ಮಕ್ಕಳ ಸಾಹಿತಿಯೊಬ್ಬರ ಜತೆ ಸಿಂಪಲ್ ಮಾತುಕತೆ ನಿಮ್ಮ ಮುಂದೆ ಹಾಜರು...

ಮೂಡುಬಿದರೆಯಿಂದ ಬರೋಬರಿ ಐದು ಕಿ.ಮೀ ದೂರದಲ್ಲಿದೆ ಪಳಕಳ ಎನ್ನುವ ಪುಟ್ಟ ಹಸಿರಿನ ಮಡಿಲು. ಅಡಕೆ, ತೆಂಗು, ಭತ್ತದ ನಡುವೆ ದೊಡ್ಡದಾದ ಒಂದು ಹಂಚಿನ ಮನೆ. ಇದೇ ಮನೆಯಲ್ಲಿರುವ ಒಂದು ಹಿರಿಯ ಜೀವ ಮಕ್ಕಳ ಸಾಹಿತ್ಯಕ್ಕಾಗಿ ಹಗಲಿರುಳು ದುಡಿಯುತ್ತಿದೆ. ತನ್ನೆಲ್ಲ ಬದುಕನ್ನು ಅದಕ್ಕಾಗಿ ಮೀಸಲಿಟ್ಟಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬರೀ ಒಂದೇ ಒಂದು ಕೃತಿಯ ಮುದ್ರಣ, ಮಾರಾಟ ಎಂದರೆ ಅದೊಂದು ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯನ್ನು ವಿದ್‌ಔಟ್ ಆಕ್ಸಿಜನ್ ಇಲ್ಲದೇ ಏರಿ ಬಂದ ಸಾಹಸ. ಅದರಲ್ಲೂ ಕನ್ನಡ ಸಾಹಿತ್ಯ ಲೋಕ ಎಂದಿಗೂ ಸರಿಯಾದ ಗೌರವ ಕೊಡದಿರುವ ಮಕ್ಕಳ ಸಾಹಿತ್ಯ ರಚನೆ ಎಂದರೆ ಯಾರಿಗೆ ತಾನೇ ಇಷ್ಟವಿದೆ.
ಮಕ್ಕಳ ಸಾಹಿತ್ಯನಾ..? ಎಂದು ಉಡಾಫೆಯ ಮಾತನ್ನು ಆಡಿ ಮೂಗು ಮುರಿಯುವ ಮಂದಿನೇ ರಾಜ್ಯದಲ್ಲಿ ಜಾಸ್ತಿ ಇದ್ದಾರೆ. ಆಂಗ್ಲ ಭಾಷೆಯ ಪ್ರಭಾವ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕರಾಮತ್ತು, ಓದು- ಬರಹ, ಕಲ್ಚರಲ್ ಪ್ರೋಗ್ರಾಂಗಳ ನಡುವೆ ಇಂದಿನ ಮಕ್ಕಳು ನಲುಗಿ ಹೋಗುವಾಗ ಮಕ್ಕಳ ಸಾಹಿತ್ಯ ಓದಲು ಟೈಮ್ ಎಲ್ಲಿದೆ ..?ಎನ್ನುವ ಕಾಲಘಟ್ಟದಲ್ಲಿ ಪಳಕಳ ಸೀತಾರಾಮ ಭಟ್ಟರು ಟೋಟಲಿ ಡಿಫರೆಂಟ್ ಆಗಿ ನಮ್ಮ ಮುಂದೆ ಬರುತ್ತಾರೆ.
ನಾನಾ ವಯೋಮಾನದ ಮಕ್ಕಳಿಗಾಗಿ ಕಳೆದ ೬೦ ವರ್ಷಗಳಿಂದ ನಿರಂತರವಾಗಿ ಮಕ್ಕಳ ಕತೆ, ಕವನ, ಚುಟುಕು ಅಂತಾ ಬರೋಬರಿ ನೂರಕ್ಕಿಂತ ಅಕ ಕೃತಿಗಳನ್ನು (೧೨೫ ಕೃತಿಗಳು) ಹೊರ ತಂದಿದ್ದಾರೆ. ಸಂಪರ್ಕಗಳು ಸರಿಯಾಗಿ ಟಚ್ ಆಗದ ಪಳಕಳ ಎಂಬ ಪುಟ್ಟ ಊರಿನಲ್ಲಿ ನಿಂತು ಸೀತಾರಾಮ ಭಟ್ಟರು ಮಾಡುವ ಸಾಹಿತ್ಯ ಕ್ರಾಂತಿ ಇದೆಯಲ್ಲ ಅದು ಕನ್ನಡ ಸಾಹಿತ್ಯ ಲೋಕಕ್ಕೆ ಗೊತ್ತುಂಟೋ ಗೊತ್ತಿಲ್ಲ. ಆದರೆ ಇಡೀ ಸಾಹಿತ್ಯ ಲೋಕ ಅವರನ್ನುಂತು ಸಿರೀಯಸ್ ಆಗಿ ಗುರುತಿಸಿಲ್ಲ. ಆದರೆ ಸೀತಾರಾಮ ಭಟ್ಟರಿಗಂತೂ ಈ ವಿಚಾರದ ಮೇಲೆ ಯಾವುದೇ ಬೇಸರವಿಲ್ಲ. ಮಕ್ಕಳ ಸಾಹಿತ್ಯ ಎಂದರೆ ತನ್ನ ಪ್ರಾಣವೇ ಅಂತಾ ಪುಟ್ಟ ಊರಿನ ಮಡಿಲಿನಲ್ಲಿ ಬೆಚ್ಚಗೆ ಕೂತಿದ್ದಾರೆ.
ಮಕ್ಕಳ ಸಾಹಿತ್ಯ ಎಂದಾಗ ೮೦ರ ಹರೆಯದ ಸೀತಾರಾಮ ಭಟ್ರು ಅರ್ಧ ಬರ್ದ ನಡುಗುವ ಕೈಗಳಿಂದ ಪೆನ್ನು ಹಿಡಿದು ಟೇಬಲ್ ಮೇಲೆ ಕೂತು ಬರವಣಿಗೆ ಆರಂಭ ಮಾಡಿದ್ದಾರೆ ಎಂದಾದರೆ ಅಲ್ಲೊಂದು ಪುಟ್ಟದಾದ ಕೃತಿ ರೆಡಿಯಾಯಿತು ಅಂತ ಅರ್ಥ ಬರುತ್ತದೆ. ಇಂತಹ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯ ಹುಡುಕಾಟದಲ್ಲಿ ಲವಲವಿಕೆಯ ತಂಡ ಪಳಕಳರ ದೊಡ್ಡ ಮನೆಗೆ ಪುಟ್ಟದಾಗಿ ಭೇಟಿ ಕೊಟ್ಟಿತ್ತು. ಪಳಕಳರ ಮಕ್ಕಳ ಸಾಹಿತ್ಯ ಲೋಕದ ಓಟದಲ್ಲಿ ನಿಂತು ಅವರನ್ನು ಮಾತನಾಡಿಸಿತು. ಆಗ ಕಂಡದ್ದು ಬರೀ ಮಗು ಮನಸಿನ ಸಾಹಿತ್ಯ ಲೋಕ ಮಾತ್ರ. ಪಳಕಳರ ಉಳಿದೆಲ್ಲ ವಿಚಾರಗಳು ಬದಿಗೆ ಸರಿದು ನಿಂತಿತ್ತು.
ದುಡಿದದ್ದು ಎಲ್ಲವೂ ಸಾಹಿತ್ಯಕ್ಕೆ ಸುರಿದೆ...
ಮಕ್ಕಳ ಸಾಹಿತ್ಯ ಎಂದರೆ ನನ್ನ ಪ್ರಾಣ. ಅದಕ್ಕಾಗಿ ನಾನು ಏನೂ ಮಾಡಲು ಸಿದ್ದ. ಅದರ ಮೇಲಿನ ಪ್ರೀತಿಯಿಂದ ಇಂದಿಗೂ ಬರೆಯುತ್ತಿದ್ದೇನೆ. ಕೈಯಲ್ಲಿ ಪೆನ್ನು ಹಿಡಿಯಲು ತಾಕತ್ತು ಇರುವ ವರೆಗೂ ಬರೆಯುತ್ತೇನೆ. ಸರಿಸುಮಾರು ೩೬ ವರ್ಷಗಳ ಕಾಲ ಶಿಕ್ಷಕನಾಗಿ ಮೂಡುಬಿದರೆ, ಅಸುಪಾಸಿನ ಶಾಲೆಗಳಲ್ಲಿ ದುಡಿದಿದ್ದೇನೆ. ೫೦ ವರ್ಷಗಳ ಹಿಂದೆ ನನ್ನ ತಿಂಗಳ ಸಂಬಳ ೪೦ ರೂ. ಪ್ಲಸ್ ೨೧ ಭತ್ಯೆಯಾಗಿತ್ತು. ನಿವೃತ್ತನಾಗುವ ಮೊದಲು ನಾಲ್ಕು ಸಾವಿರಕ್ಕೆ ಬಂತು. ಈ ಸಂಬಳದ ಹಣದಿಂದಲೇ ನಾನು ಇಷ್ಟೊಂದು ಕೃತಿಗಳನ್ನು ಬರೆಯಲು ಸಾಧ್ಯವಾಯಿತು. ಕುಟುಂಬಕ್ಕಾಗಿ ದೊಡ್ಡ ತೋಟವಿತ್ತು. ಅದರಿಂದ ಬಂದ ಹಣವೆಲ್ಲವೂ ಕುಟುಂಬ ನಿರ್ವಹಣೆ, ಐವರು ಮಕ್ಕಳ ಪೋಷಣೆಗೆ ಅಂತ ಸಂದಾಯವಾಗುತ್ತಿತ್ತು. ನನ್ನ ಸಂಬಳ ಎಲ್ಲವೂ ಸಾಹಿತ್ಯ ಲೋಕಕ್ಕೆ ವಿನಿಯೋಗವಾಗುತ್ತಿತ್ತು. ಆದರೆ ಕುಟುಂಬದವರು ಈ ವಿಚಾರದಿಂದ ಒಂದು ಚೂರು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ ತಮ್ಮಾ.. ಅಂತಾ ಜಗುಲಿಯಲ್ಲಿ ಕೂತ ಪಳಕಳರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಬಿಟ್ಟಿದ್ದರು.
ಪಳಕಳ ಭಟ್ಟರು ಎಂದರೆ ಹಾಂಗೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಹೋಗಿ ನಿಮ್ಮ ಮುಂದಿನ ಬದುಕಿಗಾಗಿ ಗ್ರಾಜ್ಯುವೇಟಿ ಹಾಗೂ ಪಿಎಫ್ ಹಣ ಅಂತಾ ೨ ಲಕ್ಷ ರೂ. ಕೊಟ್ಟು ಬಿಡುತ್ತೇವೆ ಎಂದಾಗ ಪಳಕಳರ ಮನಸ್ಸಿನಲ್ಲಿ ಬಂದ ಐಡಿಯಾ ಏನೂ ಗೊತ್ತಾ..? ನಮ್ಮ ಊರಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಈ ಹಣ ವಿನಿಯೋಗವಾಗಬೇಕು. ಬಡವರ ವೈದ್ಯಕೀಯ ಖರ್ಚು ಹಾಗೂ ಮಕ್ಕಳ ಸಾಹಿತ್ಯಕ್ಕಾಗಿ ಇನ್ನಷ್ಟೂ ಕೆಲಸ ಮಾಡಬೇಕು ಎಂದುಕೊಂಡು ೨ ಲಕ್ಷಕ್ಕೆ ಮತ್ತೊಂದು ಲಕ್ಷ ಸೇರಿಸಿಕೊಂಡು ಪಳಕಳ ಪ್ರತಿಷ್ಠಾನ(ರಿ) ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡು ಈಗಲೂ ಈ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಅವಿಭಜಿತ ಕರಾವಳಿ ಜಿಲ್ಲೆಯ ಎಲ್ಲ ಮಕ್ಕಳ ಸಾಹಿತಿಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲು ಹೋಗಿ ಪಳಕಳ ಹಾಗೂ ಅವರ ಸ್ನೇಹಿತರ ವರ್ಗ ಸೇರಿಕೊಂಡು ದಕ್ಷಿಣ ಕನ್ನಡ ಮಕ್ಕಳ ಸಾಹಿತ್ಯ ಸಂಗಮ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದರು.
ಮಕ್ಕಳ ಸಾಹಿತ್ಯಕ್ಕೆ ಯಾಕೆ ಬಂದ್ರು..
ಪಳಕಳರು ಮೂಡುಬಿದರೆಯ ಜೈನ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಹಾಗೂ ಸಮಾಜಶಾಸ್ತ್ರ ವಿಚಾರಗಳನ್ನು ಭೋದಿಸುತ್ತಿದ್ದಾಗ ಅವರಿಗೊಂದು ಕತೆ ಹೇಳುವ ಪಾಠವಿತ್ತು. ಮನೆಯಲ್ಲಿ ಅವರ ಸೋದರತ್ತೆ ಚೆನ್ನಮ್ಮ ಹೇಳುತ್ತಿದ್ದ ಕತೆಗಳಿಂದ ಸೀತಾರಾಮರು ಈ ಹಿಂದೆಯೇ ಪ್ರೇರಿತಗೊಂಡಿದ್ದರು. ಪಳಕಳದ ಊರಿನಿಂದ ಶಾಲೆಗೆ ನಡೆದುಕೊಂಡು ಬರುವ ಹಾದಿಯಲ್ಲಿ ಪುಟ್ಟ ಪುಟ್ಟ ಕವನ, ಕತೆಗಳು ರಸ್ತೆಯಲ್ಲಿ ಹುಟ್ಟಿಕೊಳ್ಳುತ್ತಿದ್ದವು. ಅವುಗಳನ್ನು ಪುಟ್ಟದಾದ ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದರು.
ತಮ್ಮದೇ ಪ್ರಕಾಶನ ಸಂಸ್ಥೆ ಶಿಶು ಸಾಹಿತ್ಯ ಮಾಲೆ ಹಾಗೂ ಕಿನ್ನಿಗೋಳಿಯ ಯುಗಪುರುಷ ಪ್ರಕಾಶನದ ಮೂಲಕ ಈ ಎಲ್ಲ ಕತೆ, ಕವನಗಳು ಪುಸ್ತಕ ರೂಪದಲ್ಲಿ ಬಂದು ಹೋದವು.. ಎಲ್ಲರೂ ಮಕ್ಕಳ ಸಾಹಿತ್ಯವನ್ನು ಉಪೇಕ್ಷೆ ದೃಷ್ಟಿಯಿಂದ ನೋಡುತ್ತಿದ್ದಾಗ ಪಳಕಳ ಮಾತ್ರ ಮಕ್ಕಳ ಸಾಹಿತ್ಯವನ್ನು ತನ್ನ ಬದುಕಿನಷ್ಟೇ ಪ್ರೀತಿಸ ತೊಡಗಿದರು. ಇಡೀ ಸಾಹಿತ್ಯದಲ್ಲಿಯೇ ಬದುಕು ಕಟ್ಟ ತೊಡಗಿದರು. ಸಾಹಿತ್ಯ ಜತೆಗೆ ತಮ್ಮ ಊರಿನ ಅತೀ ಬಡವ ಕುಟುಂಬಗಳನ್ನು ಹುಡುಕಿ ತನ್ನ ಜಮೀನಿನಿಂದ ೫ ಸೆಂಟ್ಸ್ ಜಾಗವನ್ನು ಕೊಟ್ಟು ಅವರಿಗೆ ಬದುಕಲು ಹೇಳಿ ಕೊಟ್ಟಿದ್ದಾರೆ.
ಅಂದಹಾಗೆ ಪಳಕಳರ ಕತೆ -ಕವನಗಳನ್ನು ಸಿರೀಯಸ್ ಆಗಿ ಓದುವ ಅಭಿಮಾನಿಗಳ ಬಳಗ ಕೂಡ ಬಹಳ ದೊಡ್ಡದಿದೆ. ಪಳಕಳರ ಸಾಹಿತ್ಯವನ್ನು ನೋಡಿದ ಮಣಿಪಾಲದ ವಿದ್ಯಾರ್ಥಿಯೊಬ್ಬರು ಈಗ ‘ಪಳಕಳ ಸೀತಾರಾಮ ಭಟ್ಟರ ಬದುಕು- ಬರಹ ’ಎಂಬ ವಿಚಾರದಲ್ಲಿ ಪಿಎಚ್‌ಡಿ ಪ್ರಬಂಧ ಮಾಡುತ್ತಿದ್ದಾರೆ. ಹತ್ತಾರು ಪ್ರಶಸ್ತಿಗಳನ್ನು ನೀಡಿ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವದಿಂದ ನೋಡಿಕೊಂಡಿದೆ. ಪತ್ನಿ ವಸಂತಿಯ ಜತೆಗೆ ಐವರು ಮಕ್ಕಳೊಂದಿಗೆ ಸೀತಾರಾಮರು ಕಾಂಕ್ರೀಟಿಕರಣನದ ನಗರದಿಂದ ದೂರ ಉಳಿದು ನೆಮ್ಮದಿ ಕಾಣುತ್ತಿದ್ದಾರೆ. ಪಳಕಳರು ಕೊನೆದಾಗಿ ಹೇಳುವುದು ಇಷ್ಟೇ..‘ ಮಕ್ಕಳಿಗೆ ಒಳ್ಳೆಯ ಸಾಹಿತ್ಯದ ರುಚಿ ಹತ್ತಿಸಿಬಿಡಿ. ಮಕ್ಕಳು ಆಟದ ಸಾಮಗ್ರಿಗಳಿಗೆ ಹಟ ಹಿಡಿಯುವಂತೆ.. ಸಾಹಿತ್ಯ ಓದುವ ಚಟ ಹಿಡಿಸಿ..ಇದು ಮಕ್ಕಳ ಸಾಹಿತ್ಯ ಲೋಕಕ್ಕೆ ಹೆತ್ತವರು ಮಾಡುವ ಪುಟ್ಟ ಕೆಲಸ.. ಮಕ್ಕಳ ದಿನಾಚರಣೆ ಸಮಯದಲ್ಲಾದರೂ ಮನೆಗೊಂದು ಒಳ್ಳೆಯ ಮಕ್ಕಳ ಸಾಹಿತ್ಯದ ಕೃತಿಯನ್ನು ಮಕ್ಕಳಿಗೆ ಕೊಟ್ಟು ಬಿಡಿ. ಇದರಿಂದ ಸಾಹಿತ್ಯ ಉಳಿಯುತ್ತದೆ ಜತೆಗೆ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಳ್ಳುತ್ತಾರೆ’ ಇಡೀ ಮಾತುಕತೆಯಲ್ಲಿ ಪಳಕಳ ಮಾತನಾಡಿದ್ದು ಬರೀ ಮಕ್ಕಳ ಸಾಹಿತ್ಯ ಮಾತ್ರ.. ಇಂತಹ ವ್ಯಕ್ತಿಯನ್ನು ಮಕ್ಕಳ ದಿನಾಚರಣೆಯ ಟೈಮ್‌ನಲ್ಲಿ ನೆನೆಯುವುದರಲ್ಲಿ ಏನಿದೆ ತಪ್ಪು..?

Thursday, April 7, 2011

ಸ್ಯಾಂಡಲ್‌ವುಡ್‌ನಲ್ಲಿ ಕುಸಲ್

ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ಇತ್ತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಂತರ ಸ್ಯಾಂಡಲ್‌ವುಡ್‌ನಲ್ಲಿ ನವೀನ್ ಬಣ್ಣ ಹಾಕುತ್ತಿದ್ದಾರೆ. ಕರಾವಳಿಗೆ ಸೀಮಿತವಾಗಿದ್ದ ಇಬ್ಬರ ಜುಗಲ್ ಬಂ... ಇನ್ನೂ ಮುಂದೆ ಸ್ಯಾಂಡಲ್‌ವುಡ್‌ನಲ್ಲೂ ಕಾಣಬಹುದು.

ತುಳು ರಂಗಭೂಮಿ ಈಗ ಮತ್ತೆ ಸುದ್ದಿಯಲ್ಲಿದೆ. ತುಳು ರಂಗಭೂಮಿಯಲ್ಲಿ ಹೊರಳಾಡಿಕೊಂಡಿದ್ದ ಕುಸಲ್ದರಸೆ ನವೀನ್ ಡಿ ಪಡೀಲ್ ಈಗ ಸ್ಯಾಂಡಲ್‌ವುಡ್ ಪಡಸಾಲೆಯಲ್ಲಿ ಬಂದು ನಿಂತಿದ್ದಾರೆ. ರಂಗವೇದಿಕೆಯ ಮೇಲೆ ನಿಂತು ತನ್ನದೇ ಕಾಮಿಡಿ ಟ್ರೆಂಡಿನಿಂದ ಲಕ್ಷಾಂತರ ಪ್ರೇಕ್ಷಕರ ಮನಸ್ಸು ಗೆದ್ದ ಚೋರ ನವೀನ್ ಈಗ ಕನ್ನಡದ ಮೂರು ಚಿತ್ರಗಳಿಗೆ ಸೆಲೆಕ್ಟ್ ಆಗಿದ್ದಾರೆ. ನಿರ್ದೇಶಕ ಅಭಯ ಸಿಂಹರ ‘ಶಿಕಾರಿ’ ಶಶಾಂಕ್ ನಿರ್ದೇಶನದ ಜರಾಸಂಧ ಹಾಗೂ ಹಿಮಾಯತ್ ಖಾನ್ ನಿರ್ದೇಶನದ ಅಚ್ಚುಮೆಚ್ಚು ಚಿತ್ರಗಳಲ್ಲಿ ನವೀನ್ ಹಾಸ್ಯ ನಟನಾಗಿ ಕಂಗೊಳಿಸಲಿದ್ದಾರೆ. ಈ ಮೂರು ಚಿತ್ರಗಳ ಚಿತ್ರೀಕರಣ ಭಾಗ ಪೂರ್ಣಗೊಂಡಿದ್ದು ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಮೂಲಕ ಕರಾವಳಿಯ ಪ್ರತಿಭೆಗಳನ್ನು ಬದಿಗೊತ್ತಿ ಮೆರೆಯುತ್ತಿದ್ದ ಗಾಂನಗರದಲ್ಲಿ ಕರಾವಳಿಯ ಪ್ರತಿಭೆಗಳು ಇಣುಕಾಡಲು ಆರಂಭ ಮಾಡಿದ್ದಂತಾಗಿದೆ.
ಇತ್ತೀಚೆಗಷ್ಟೇ ತುಳು ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ನಂತರ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡಿರೋದು ಮಾತ್ರ ವಿಶೇಷ ಆಸಕ್ತಿ ಮೂಡಿಸಿದೆ. ಈ ಹಿಂದೆ ನವೀನ್ ಡಿ ಪಡೀಲ್ ತುಳು ರಂಗಭೂಮಿಯ ನಿರ್ದೇಶಕ ದೇವದಾಸ್ ಕಾಪಿಕಾಡ್‌ರ ‘ಚಾಪರ್ಕ’ ಟೀಮ್‌ನ ಸದಸ್ಯರಾಗಿದ್ದವರು. ದೇವ್ ಪ್ಲಸ್ ನವೀನ್ ಕಾಂಬೀನೇಷನ್‌ನಲ್ಲಿ ಮೂಡಿ ಬಂದ ನಾಟಕಗಳು ಸೂಪರ್ ಹಿಟ್ ಅನ್ನಿಸಿಕೊಂಡಿತ್ತು. ಇಬ್ಬರ ನಟನೆಯ ಜುಗಲ್‌ಬಂ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಬಿಟ್ಟಿತ್ತು. ನವೀನ್ ಚಾಪರ್ಕ ತಂಡದಲ್ಲಿ ಬೆಳೆಯುತ್ತಾ ಹೋದಂತೆ ಇತ್ತ ತಂಡದಲ್ಲಿ ಬಿರುಕು ಮೂಡಲಾರಂಭಿಸಿತು. ನವೀನ್ ತಂಡದಿಂದ ಹೊರಬಿದ್ದರು. ದೇವದಾಸ್‌ಗೆ ಪೈಪೋಟಿ ನೀಡಲು ನವೀನ್ ಮತ್ತೊಂದು ನಾಟಕ ತಂಡಕ್ಕೆ ಭರ್ತಿಯಾದರು. ನಂತರ ಇಬ್ಬರ ನಡುವೆ ಮುಸುಕಿನ ಗುದ್ದಾಟಕ್ಕೆ ಕಹಳೆ ಮೊಳಗಿತ್ತು.
ನವೀನ್ ನಾಟಕಗಳ ಜತೆಗೆ ಕೋಸ್ಟಲ್‌ವುಡ್‌ನಲ್ಲಿ ‘ಬಿರ್ಸೆ’ ತುಳು ಸಿನಿಮಾ, ತುಳು ಸಿರೀಯಲ್‌ನಲ್ಲಿ ಬ್ಯುಸಿಯಾಗಿದ್ದಾಗ ಇತ್ತ ದೇವದಾಸ್ ಕಾಪಿಕಾಡ್ ನಿರ್ದೇಶಕ ರಮೇಶ್ ಅರವಿಂದ್‌ರ ‘ವೆಂಕಟ ಇನ್ ಸಂಕಟ’ದ ಹಾಸ್ಯ ಪಾತ್ರಕ್ಕೆ ಸೆಲೆಕ್ಟ್ ಆಗಿ ಹೋದರು. ಇತ್ತೀಚೆಗೆ ಬಂದು ಹೋದ ‘ಕಾರ್ತಿಕ್’ ಹಾಗೂ ಇನ್ನೂ ಬಿಡುಗಡೆಯಾಗದ ಸ್ಮೈಲ್ ಸೀನು ನಿರ್ದೇಶನದ ‘ತೂಫಾನ್’ನಲ್ಲೂ ದೇವದಾಸ್ ಇಣುಕಾಡಿದ್ದಾರೆ. ಆದರೆ ಕರಾವಳಿಯ ನಾಟಕಗಳಲ್ಲಿ ಮಿಂಚಿದ ದೇವದಾಸ್ ಕನ್ನಡದ ಪ್ರೇಕ್ಷಕರ ಎದುರು ಮಾತ್ರ ಬೋರಲಾಗಿ ಬಿದ್ದಿದ್ದಾರೆ ಎನ್ನುವ ಮಾತಿದೆ. ಸ್ಯಾಂಡಲ್‌ವುಡ್ ಸಿನ್ಮಾ ಜಗತ್ತಿನಲ್ಲಿ ತನ್ನ ನಿಜವಾದ ಒರಿಜಿನಾಲಿಟಿಯನ್ನು ಬಿಚ್ಚಿಡುವಲ್ಲಿ ದೇವದಾಸ್ ಸೋತು ಹೋಗಿದ್ದಾರೆ ಎನ್ನುವ ಮಾತು ಕೂಡ ಕರಾವಳಿ ತುಂಬಾ ಹರಡಿ ಬಿಟ್ಟಿದೆ. ಮೂರು ಚಿತ್ರಗಳ ನಂತರ ದೇವದಾಸ್ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿ ಮಲಗುತ್ತಿಲ್ಲ. ಸಿನ್ಮಾ ಬೇಡ ರಂಗಭೂಮಿಯೇ ಸಾಕು ಬಿಡಿ ಎಂದು ದೇವದಾಸ್ ನಗುತ್ತಾ ಹೇಳುತ್ತಿದ್ದಾರೆ. ಇತ್ತ ಕಡೆ ಕುಸಲ್ದರಸೆ ನವೀನ್ ಡಿ ಪಡೀಲ್ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ದೇವು ಕಳೆದು ಹೋದ ಹಾಗೇ ನವೀನ್ ಕಳೆದು ಹೋಗುತ್ತಾರಾ ಕಾಲವೇ ನಿಂತು ಉತ್ತರ ಹೇಳಬೇಕು. ಟೋಟಲಿ ಇಬ್ಬರು ಘಟಾನುಘಟಿ ರಂಗಭೂಮಿ ನಟರ ನಡುವೆ ಕೋಲ್ಡ್ ವಾರ್ ಮತ್ತೆ ಆರಂಭವಾಗುವ ಸೂಚನೆಯಂತೂ ಬಂದಿದೆ ಗ್ಯಾರಂಟಿ.

Tuesday, April 5, 2011

ವರ್ಲ್ಡ್ ಫೇಮಸ್ ಕಪ್‌ನಲ್ಲಿ ಕಲ್ಲಡ್ಕ ಟೀ



ಕಲ್ಲಡ್ಕದ ಸಣ್ಣ ಊರಿನ ಸಣ್ಣ ಹೋಟೆಲ್‌ನಲ್ಲಿ ತಯಾರಾಗುವ ಕೆ.ಟಿ ಈಗ ವಿಶ್ವದ ಮೂಲೆ ಮೂಲೆಯಲ್ಲೂ ಫೇಮಸ್. ಯಾಕೆ ಅಂತೀರಾ ಪುಟ್ಟ ಊರಿನ ಈ ಕೆ.ಟಿ. ಗೂಗಲ್ ಸರ್ಚ್‌ನಲ್ಲಿ ಅತೀ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ. ಏನಪ್ಪಾ ಅಂತ ಕೆ.ಟಿಯ ಸ್ಟೈಲ್.

‘ವ್ಹಾವ್ ಕ್ಯಾ ಭಾತ್ ಹೈ...ಕೆ.ಟೀ.ಕಾ ಸ್ಟೈಲ್ ಯೀ ಬಹುತೀ ಅಲಗ್ ಹೈ’ ಎಂದು ಬಾಯಿ ಚಪ್ಪರಿಸಿಕೊಂಡು ಎನ್‌ಡಿಟಿವಿ ಗುಡ್ ಟೈಮ್ಸ್‌ನ“ಹೈವೇ ಆನ್ ಮೈ ಪ್ಲೇಟ್’ಕಾರ್‍ಯಕ್ರಮ ನಿರೂಪಕರಾದ ರಾಕಿ ಸಿಂಗ್ ಆಂಡ್ ಮಯೂರ್ ಶರ್ಮ ಹೇಳುತ್ತಿದ್ದಾಗ ನಿಜಕ್ಕೂ ಅವರು ಹೇಳಿದ್ದು ನೂರಕ್ಕೆ ನೂರರಷ್ಟು ಮಾತು ನಿಜ ಅನ್ನಿಸಿಬಿಡ್ತು. ಅರ್ಧ ಟೀ ಅರ್ಧ ಹಾಲು ಇದು ಕೆ.ಟೀ. ಸ್ಪೆಶಲ್ಲೂ... ಕೆ.ಟೀ.ಯ ಕುರಿತು ಬರೀ ಕರಾವಳಿ ಯಾಕೆ ಇಡೀ ದೇಶವೇ ಮಾತನಾಡುತ್ತದೆ. ವಿಶ್ವದ ಮಾಹಿತಿಯ ಕಣಜ ಎಂದೇ ಬಿಂಬಿತ ಗೂಗಲ್ ಸರ್ಚ್‌ನಲ್ಲಿ ಕೆ.ಟೀ.ಯ ಕುರಿತು ಹುಡುಕಾಡಿ ನೋಡಿ. ಕೆ.ಟೀಯ ಮೇಲಿನ ಹತ್ತಾರು ಪುಟಗಳು ಏಕ್‌ದಂ ತೆರೆದು ಕೂರುತ್ತೆ. ಬ್ಲಾಗ್‌ಗಳ ಮೇಲೆ ಹತ್ತಾರು ಬರಹಗಳು ಓಡಾಡುತ್ತಿರುತ್ತದೆ. ಅದೇ ಕೆ.ಟೀಗೆ ಇರುವ ಗತ್ತು, ಗಮ್ಮತ್ತು ..!!
ಅಂದಹಾಗೆ ಕೆ.ಟೀ ಬಗ್ಗೆ ಇನ್ನೂ ಕಪ್‌ಗೆ ಇಳಿದು ಮಾತನಾಡೋಣ. ಮಂಗಳೂರು ಟು ಮಾಣಿಯ ರಸ್ತೆಯಲ್ಲಿ ಟ್ರಾವೆಲ್ ಮಾಡುತ್ತಿರುವಾಗ ಕಲ್ಲಡ್ಕ ಎಂಬ ಪುಟ್ಟ ಊರೊಂದು ಥಟ್ ಅಂತಾ ಕಾಣಿಸಿಕೊಳ್ಳುತ್ತದೆ. ಇದೇ ಊರಿನಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ನಾಮ ಫಲಕ ಎದುರುಗೊಳ್ಳುತ್ತದೆ. ೬೦ರ ದಶಕದಲ್ಲಿ ಲಕ್ಷ್ಮಿ ನಾರಾಯಣ ಹೊಳ್ಳ ಹಾಗೂ ಅವರ ಪುತ್ರ ನರಸಿಂಹ ಹೊಳ್ಳ ಈ ಕೆ.ಟೀಯ ಜನ್ಮದಾತರು. ಅಂದಿನಿಂದ ಈ ಕೆ.ಟೀಗೆ ಅದೇ ಟೇಸ್ಟ್... ಅದೇ ಸ್ಟೈಲ್,ಲುಕ್ ಇದೆ ಎಂದರೆ ಎಲ್ಲರೂ ನಂಬಬೇಕು. ಹೊಳ್ಳರ ಇಡೀ ಕುಟುಂಬ ಈ ಕೆ.ಟೀಯಲ್ಲಿ ಮುಳುಗಿ ಎದ್ದೇಳುತ್ತಿದೆ. ನರಸಿಂಹ ಹೊಳ್ಳರ ಹಿರಿಯ ಪುತ್ರ ರಾಜೇಂದ್ರ ಹೊಳ್ಳ, ಶಿವರಾಮ ಹೊಳ್ಳ, ಶ್ರೀನಿವಾಸ ಹೊಳ್ಳ ಎಲ್ಲರೂ ಇದೇ ಕೆ.ಟೀಯ ಕಿಚನ್‌ನಲ್ಲಿದ್ದಾರೆ.
ಹೆಸರು ಹೇಗೆ ಬಂತು:
ಕಲ್ಲಡ್ಕದಲ್ಲಿ ತಯಾರಾಗುವ ಟೀಯನ್ನು ಕೆ.ಟೀ ಅಂತ ಕರೆಯುವುದು ಟು ಕಾಮನ್ ಬಿಡಿ. ಆದರೆ ಈ ಹೆಸರಿನ ಹಿಂದೆ ಬಹಳ ದೊಡ್ಡ ರಹಸ್ಯ ಇದೆ. ಲಕ್ಷ್ಮಿನಾರಾಯಣ ಹೊಳ್ಳರು ೬೦ರ ದಶಕದಲ್ಲಿ ಶ್ರೀ ಲಕ್ಷ್ಮಿ ನಿವಾಸ್ ಹೋಟೆಲ್ ತೆರೆದಾಗ ಅಲ್ಲಿ ಕೆ.ಟೀ ಇರಲಿಲ್ಲ. ಆದರೆ ಇದೇ ಸಮಯದಲ್ಲಿ ಕೊಡಗಿನಿಂದ ಬರುತ್ತಿದ್ದ ಕೆಳಗೂರು ಟೀಯನ್ನು ಬಳಸುತ್ತಿದ್ದಾಗ ಅಲ್ಲಿಗೆ ಬಂದ ಹಿರಿಯ ಗ್ರಾಹಕರೊಬ್ಬರು ‘ಕಲ್ಲಡ್ಕ ಸ್ಪೆಶಲ್ ಟೀ’ ಅಂತಾ ಹೆಸರು ಕೊಟ್ಟರಂತೆ. ಅದೇ ಮುಂದೆ ಕೆ.ಟೀ ಅಂತಾ ಬದಲಾವಣೆಗೊಂಡಿತು. ಕೆಳಗೂರು ಟೀಗೂ ಕೆ.ಟಿಗೂ ಬಹಳ ಹತ್ತಿರದ ನಂಟಿತ್ತು.
ಆದರೆ ಮಂಗಳೂರಿನ ಟೀ ಏಜೆಂಟ್‌ರೊಬ್ಬರು ಕೆಳಗೂರು ಟೀಯ ಏಜೆಂಟ್‌ಶಿಫ್‌ನ್ನು ಬಿಟ್ಟು ಹೋದ ನಂತರ ಅಲ್ಲಿಗೆ ದೇವಗಿರಿ ಟೀ ಬಂತು. ಆದರೂ ಕೆ.ಟೀಯಲ್ಲಿ ಯಾವುದೇ ಚೇಂಜ್ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಶ್ರೀಲಕ್ಷ್ಮಿ ನಿವಾಸ್‌ನ ಮಾಲೀಕ ಶಿವರಾಮ ಹೊಳ್ಳ. ಕೆ.ಟೀಯ ಜತೆಯಲ್ಲಿ ರಿಮ್‌ಜಿಮ್ ಕಾಫಿ ಕೂಡ ಅಷ್ಟೇ ಫೇಮಸ್. ಕಲ್ಲಡ್ಕದಲ್ಲಿ ಮಾಡುವ ಡಿಫರೆಂಟ್ ಕಾಫಿಯನ್ನು ಕುಡಿದ ನಂತರ ಗ್ರಾಹಕನೊಬ್ಬ ‘ಜುಮ್’ ಆಯಿತು ಎಂದನಂತೆ. ಅಲ್ಲಿಂದ ಕಲ್ಲಡ್ಕದ ಕಾಫಿ ‘ರಿಮ್‌ಜಿಮ್ ಕಾಫಿ’ ಆಯಿತು ಎನ್ನುತ್ತದೆ ಶ್ರೀಲಕ್ಷ್ಮಿ ನಿವಾಸ್‌ನ ಹಿಸ್ಟರಿ ಬುಕ್.
ಕೆ.ಟೀಯ ಹಿಂದಿನ ಕೈ:
ಕರಾವಳಿಯ ಕೆ.ಟೀಯ ಕುರಿತು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಮಾತನಾಡುತ್ತಾರೆ ಬಿಡಿ. ‘ಅದರ ಟೇಸ್ಟ್‌ಯೇ ಬೇರೆ... ಅದನ್ನು ಕುಡಿಯುವ ಸ್ಟೈಲೇ ಬೇರೆ ಕಣ್ರಿ ’ಎಂದು ರೆಬೆಲ್‌ಸ್ಟಾರ್ ಅಂಬರೀಷ್ ಕಲ್ಲಡ್ಕಕ್ಕೆ ಬಂದಿದ್ದಾಗ ಕೆ.ಟೀ ಕುಡಿದು ಮಾತನಾಡಿದರಂತೆ. ಕನ್ನಡ ಚಿತ್ರರಂಗದ ನಟ ದರ್ಶನ್, ನಟಿ ರಾಕಾ ಎಲ್ಲರೂ ಕೆ.ಟೀಯ ಟೇಸ್ಟ್‌ನ್ನು ಚೆಕ್ ಮಾಡಿ ಹೊಗಳಿ ಹೋದವರು ಎನ್ನುತ್ತಾರೆ ಶಿವರಾಮ ಹೊಳ್ಳರು. ನಟಿ ರಾಕಾವಂತೂ ಕರಾವಳಿಗೆ ಭೇಟಿ ನೀಡಿದಾಗ ಇಲ್ಲಿಗೆ ಬಂದೇ ಹೋಗುತ್ತಾರೆ.ರಾಜಕಾರಣಿಗಳಾದ ಆಸ್ಕರ್ ಫೆರ್ನಾಂಡೀಸ್, ಡಾ.ವಿ.ಎಸ್. ಆಚಾರ್ಯ, ರಮಾನಾಥ ರೈ ಎಲ್ಲರೂ ಶ್ರೀ ಲಕ್ಷ್ಮಿ ನಿವಾಸ್‌ನ ಬೇಜುಗಳಲ್ಲಿ ಕೂತು ಕೆ..ಟೀ ವಿದ್ ಗೋಳಿಬಜ್ಜೆ ತಿಂದು ಹೋಗುತ್ತಾರೆಯಂತೆ.
ಕೆ.ಟೀಯ ಫೇಮಸ್‌ಗಿರಿಯನ್ನು ನೋಡಿ ಇದರ ನಕಲಿ ಟೀ, ಕಾಫಿ ಶಾಪ್‌ಗಳು ಕರಾವಳಿ ಹಾಗೂ ಇತರ ಭಾಗದಲ್ಲಿ ತಲೆ ಎತ್ತಿದೆ. ಆದರೆ ಇಲ್ಲಿನ ಒರಿಜಿನಾಲಿಟಿ ಮಾತ್ರ ಎಲ್ಲೂ ಸಿಗುವುದಿಲ್ಲ . ಇಲ್ಲಿನ ಭೌಗೋಳಿಕ ಲಕ್ಷಣ ಹಾಗೂ ದೇವಿಯ ಮಹಿಮೆ ಕೆ.ಟೀ.ಯ ಒರಿಜಿನಾಲಿಟಿ ಉಳಿದುಕೊಳ್ಳಲು ಕಾರಣ ಎನ್ನೋದು ಶಿವರಾಮ ಹೊಳ್ಳರು ನೀಡುವ ಸಾಬೂಬು. ಕಳೆದ ೨೦ ವರ್ಷಗಳಿಂದ ಶ್ರೀಲಕ್ಷ್ಮಿ ನಿವಾಸ್‌ನಲ್ಲಿ ದುಡಿಯುತ್ತಿರುವ ವಿಠಲ್ ಈಗ ಕೆ.ಟೀಯ ಕಿಚನ್ ಉಸ್ತುವಾರಿ ನೋಡುವವರು. ಇದಕ್ಕಿಂತ ಮೊದಲು ಲಕ್ಷ್ಮಿ ನಾರಾಯಣ ಹೊಳ್ಳರ ಕಾಲದಲ್ಲಿ ಸುಬ್ರಾಯ ಪ್ರಭುಗಳಿದ್ದರೂ ನಂತರ ನರಸಿಂಹ ಹೊಳ್ಳರ ಕಾಲದಲ್ಲಿ ರಾಮಚಂದ್ರ ಆಚಾರ್ ಇಲ್ಲಿ ಕೆ.ಟೀ ಮಾಡಿಕೊಡುತ್ತಿದ್ದರು. ಎಲ್ಲರೂ ಕಲ್ಲಡ್ಕದವರು ಹಾಗೂ ಸುದೀರ್ಘ ಕಾಲದವರೆಗೂ ಇಲ್ಲಿ ದುಡಿದವರು.
ತಯಾರು ಮಾಡೋದು ಹೇಗೆ:
ಕೆ.ಟೀ ಕುಡಿಯೋದು ಗೊತ್ತಾ ಆದರೆ ಮಾಡೋದು ಹೆಂಗೆ ಮಾರಾಯ್ರೆ ಅಂತಾ ಕೇಳಬಹುದು. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಹೀಗಿವೆ. ದಪ್ಪ ಹಾಲು ಅದು ಊರಿನ ಹಾಲಿರಬಹುದು ಅಥವಾ ನಂದಿನಿಯ ಹಾಲು ಕೂಡ ಉತ್ತಮ. ಆದರೆ ಅದಕ್ಕೆ ಹಾಕುವ ನೀರಿನ ಪ್ರಮಾಣ ಕಡಿಮೆ ಇರಬೇಕು. ದಪ್ಪ ಡಿಕ್ಕಷನ್ ಹಾಗೂ ಸಕ್ಕರೆ ಇದ್ದಾರೆ ಸಾಕು ಬಿಡಿ. ಬುರುಬುರು ನೊರೆಯ ಅರ್ಧ ಹಾಲಿನ ಅರ್ಧ ಟೀಯ ಸಖತ್ ಕೆ.ಟೀ ರೆಡಿಯಾಗುತ್ತದೆ. ಬರೀ ಒಂದು ಲೋಟಕ್ಕೆ ೮ ರೂ. ಮಾತ್ರ. ಅದು ರಿಮ್‌ಜಿಮ್‌ಗೂ ಕೂಡಾ ಸೇಮ್ ರೇಟ್ ಬಿಡಿ. ಅಂದಹಾಗೆ ಕಲ್ಲಡ್ಕಕ್ಕೆ ಬಂದಾಗ ಕೆ.ಟೀ ಕುಡಿಯೋದನ್ನು ಮರೆಯಬೇಡಿ. ಶ್ರೀಲಕ್ಷ್ಮಿನಿವಾಸ್ ಬೆಳಗ್ಗೆ ೫.೩೦ರಿಂದ ೮ರವರೆಗೆ ನಿಮಗಾಗಿ ಬಾಗಿಲು ತೆರೆದು ಕೂತಿರುತ್ತದೆ. ಕಾಲ್ ಮಾಡಿ: ೦೮೨೫೫-೨೭೫೩೫೯

Monday, April 4, 2011

ತೆಲಿಕೆದ ಅರಸ ದೇವದಾಸ



ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕೆ ಮುಖದಲ್ಲಿ ತುಂಬಿ ತುಳುಕುವ ನಗು. ಇದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ಎಂದೇ ಗುರುತಿಸಲಾಗುವ ಕಲಾವಿದ, ನಿರ್ದೇಶಕ ಹೀಗೆ ಹತ್ತಾರು ನೇಮ್ ಪ್ಲೇಟ್‌ಗಳನ್ನು ತೂಗು ಹಾಕಿದ ಕಾಪಿಕಾಡಿನ ದೇವದಾಸ್‌ರ ಶಾರ್ಟ್ ಇಂಟರ್‌ಡಕ್ಷನ್.

ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಭಾಷೆಯ ದೊಡ್ಡ ಚಿತ್ರವೊಂದು ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಬಂದ ಕೂಡಲೇ ಇತರ ಭಾಷೆಯ ಚಿತ್ರಗಳು ಬದಿಗೆ ಸರಿದು ನಿಂತು ನಿಲ್ಲುತ್ತದೆ. ದೊಡ್ಡ ಚಿತ್ರಗಳ ಮುಂದೆ ತಮ್ಮ ಚಿತ್ರ ಎಲ್ಲಿ ಕಳೆದು ಹೋಗುತ್ತೋ ಎನ್ನುವ ಸಣ್ಣ ಭಯ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಾಡುತ್ತಿರುತ್ತದೆ. ಆದರೆ ತುಳುನಾಡು ಮಾತ್ರ ಟೋಟಲಿ ಡಿಫರೆಂಟ್. ಇಲ್ಲಿ ತುಳುನಾಟಕಗಳು ಬಂದರೆ ಸಾಕು ಸಿನಿಮಾ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿರುತ್ತದೆ. ಸಿನಿಮಾಗಳು ಸೆಂಚುರಿ ಬಾರಿಸದೇ ಇರಬಹುದು ಆದರೆ ತುಳುನಾಟಕಗಳಂತೂ ಸೆಂಚುರಿ ಮೇಲೆ ಸೆಂಚುರಿ ಪ್ರದರ್ಶನ ಕಾಣಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ನಿಂದ ಚಿತ್ರ ಗೆಲ್ಲಬಹುದು. ಆದರೆ ಇಲ್ಲಿ ಅದ್ಯಾವುದೋ ಇಲ್ಲ...ಜಸ್ಟ್ ಫಾರ್ ಕಾಮಿಡಿ ಪ್ಲಸ್ ಮೆಸೇಜ್ ಇದ್ರೆ ಸಾಕು. ನಾಟಕ ಸೂಪರ್ ಹಿಟ್ ! ಇದು ತುಳು ರಂಗಭೂಮಿಗೆ ಇರುವ ಕೆಪಾಸಿಟಿ .
ಇಂತಹ ಒಂದು ರಂಗಭೂಮಿಯಲ್ಲಿ ಆಳ್ವಿಕೆ ಮಾಡುತ್ತಿರುವವರು ತೆಲಿಕೆದ ಅರಸ ( ನಗುವಿನ ಅರಸ) ದೇವದಾಸ ಕಾಪಿಕಾಡು. ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕಾಗಿ ಮುಖದಲ್ಲಿ ತುಂಬಿ ತುಳುಕುವ ನಗು. ಇದು ದೇವದಾಸ ಕಾಪಿಕಾಡ್‌ನ ಇಂಟರ್‌ಡಕ್ಷನ್. ಅಂದಹಾಗೆ ಕರಾವಳಿಯ ಮಂದಿಗೆ ದೇವದಾಸರ ಪರಿಚಯ ನೀಡುವ ಅಗತ್ಯವೇ ಬೀಳುವುದಿಲ್ಲ. ಅದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ! ಕಳೆದ ೨೫ ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಭಿನ್ನ ರೀತಿಯ ನಲವತ್ತಕ್ಕಿಂತ ಜಾಸ್ತಿ ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶನ ಮಾಡಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ತುಳು ರಂಗಭೂಮಿಯ ಜತೆಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಹಾಸ್ಯ ಕಲಾವಿದರಾಗಿ ಡಿಮ್ಯಾಂಡ್ ಗಳಿಸಿಕೊಂಡಿದ್ದಾರೆ.
ರಮೇಶ್ ಅರವಿಂದರ ‘ವೆಂಕಟ ಇನ್ ಸಂಕಟ’ ಇನ್ನೂ ಬರುವ ‘ಕಾರ್ತಿಕ್’, ‘ತೂಫಾನ್’ನಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸ್ಟಾರ್ ಸೂರ್ಯ ಅಭಿನಯದ ಕಾಲಿವುಡ್‌ನ ಒಂದೆರಡು ಚಿತ್ರಗಳಿಗೂ ಆಫರ್‌ಗಳು ಬಂದಿತ್ತು. ಕನ್ನಡದಲ್ಲಿ ಸಾಧಾರಣ ಓಟ ಆರಂಭಿಸಿದ ಯೋಗರಾಜ್ ಭಟ್ಟರ ‘ಪಂಚರಂಗಿ’ಗೂ ಆಫರ್ ಬಂದಿತ್ತು. ಆದರೆ ತುಳು ರಂಗಭೂಮಿ ಮೇಲಿರುವ ಅಭಿಮಾನದಿಂದ ಸಿನಿಮಾರಂಗದಿಂದ ದೂರಕ್ಕೆ ನಿಂತಿದ್ದರು. ದೇವದಾಸ್‌ರ ಸೂಪರ್ ಹಿಟ್ ನಾಟಕಗಳ ಪಟ್ಟಿ ಅವರ ಕೇರಿಯರ್ ಅಷ್ಟೇ ದೊಡ್ಡದಿದೆ. ಅದರಲ್ಲೂ ೬೦೦ ಪ್ರದರ್ಶನ ಕಂಡ ಅವರ ‘ಪುದರ್ ದೀ ತೀಜಿ’ ಒಂದು ಹಿಸ್ಟರಿ ಕ್ರಿಯೇಟ್ ಮಾಡಿದೆ. ‘ ಮಾಮು’ ‘ಬಲೇ ಚಾ ಪರ್‍ಕ’, ‘ಗಂಟೆ ಏತಾಂಡ್’, ‘ಈರ್ ದೂರ’ , ‘ವೈವಾಟ್ ವಸಂತೆ’, ‘ಮೊಬೈಲ್ ಮಾಧವೆ’, ‘ಕೆಬಿ ಪಿತ್ತಲೆ’ ‘ಈರ್ ಉಂಡರಾ?’ ಈಗ ‘ಗೋಪಾಲ ಈ ಪಾರ್‌ಬಲ....’ ಟೋಟಲಿ ಕತೆ, ಸಂಭಾಷಣೆ, ಗೀತೆರಚನೆ, ಹಿನ್ನೆಲೆ ಗಾಯನ, ನಿರ್ದೇಶನದ ಮೂಲಕ ಕರಾವಳಿ ಸೇರಿದಂತೆ ಮುಂಬಯಿ, ಕೊಲ್ಲಿ ರಾಷ್ಟ್ರಗಳಲ್ಲಿಯೂ ದೇವದಾಸ್ ಕಾಪಿಕಾಡು ಸಿಲೆಬ್ರಿಟಿ ಆಗಿ ಹೊರ ಬಂದಿದ್ದಾರೆ. ‘ಬಲೇ ಚಾ ಪರ್‍ಕ ’ನಾಟಕದ ಯಶಸ್ಸಿನಿಂದ ಅದೇ ತಂಡವನ್ನು ಕಟ್ಟಿಕೊಂಡು ತುಳು ರಂಗಭೂಮಿಯಲ್ಲಿ ಹೆಸರು ಮಾಡುತ್ತಿದ್ದಾರೆ.
ಕಾಡಿನಿಂದ ಬಂದ ದೇವದಾಸ :
ದೇವದಾಸರ ಊರು ನಿಜಕ್ಕೂ ಬಂಟ್ವಾಳದ ಸಜಿಪ ಪಡು. ಆದರೆ ತಂದೆ ನಾರಾಯಣ್ ಸಾಲ್ಯಾನ್ ಕಾಪಿಕಾಡಿನಲ್ಲಿ ಪುಟ್ಟ ಬೀಡಿಯ ಬ್ರ್ಯಾಂಚ್‌ನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಇಡೀ ಕುಟುಂಬ ಕಾಪಿಕಾಡಿಗೆ ಶಿಫ್ಟ್ ಆಯಿತು. ಮಂಗಳೂರಿನ ಕೆನರಾ ಶಾಲೆಗೆ ದೇವದಾಸ್ ಸೇರಿಕೊಂಡರು. ಶಾಲಾ ದಿನಗಳಲ್ಲಿಯೇ ಮಂಗಳೂರು ಆಕಾಶವಾಣಿಯಲ್ಲಿ ದೇವದಾಸ ಕತೆ ಓದುತ್ತಿದ್ದರು. ಬರೀ ದೇವದಾಸ ಬದಲು ಊರಿನ ಹೆಸರು ಕೂಡ ಜತೆಗೆ ಬಂತು. ಅಲ್ಲಿಂದ ದೇವದಾಸ್ ಕಾಪಿಕಾಡು ಆಗಿ ಬದಲಾದರು. ಅಂದಹಾಗೆ ಒಂದು ಬಾರಿ ಶಾಲೆಯ ಶಿಕ್ಷಕರೊಬ್ಬರು ಎಲ್ಲ ವಿದ್ಯಾರ್ಥಿಗಳಲ್ಲಿ ಊರಿನ ಹೆಸರು ಕೇಳುತ್ತಿದ್ದಾಗ ನನ್ನ ಗುಂಗುರು ಕೂದಲನ್ನು ನೋಡಿ ನೀನು ಯಾವ ಕಾಡಿನಿಂದ ಬಂದಿದ್ದೀಯಾ..? ಎಂದು ಪ್ರಶ್ನಿಸಿದರು. ನಾನು ಕಾಪಿಕಾಡಿನಿಂದ ಎಂದಾಗ ನನ್ನ ಮರುತ್ತರಕ್ಕೆ ಸಿಟ್ಟಾಗಿ ಶಿಕ್ಷಕರು ತಂದೆಯನ್ನು ಕರೆದುಕೊಂಡು ಬರಲು ಹೇಳಿದರು. ನಾನು ಕರೆದುಕೊಂಡು ಬಂದೆ ತಂದೆ ವಿವರ ನೀಡಿದಾಗ ನಿಜಕ್ಕೂ ನನ್ನ ಊರು ‘ಕಾಪಿಕಾಡು’ ಎಂದು ತಿಳಿದ ನಂತರ ಶಿಕ್ಷಕ ನನ್ನ ಜತೆ ತುಂಬಾ ಸಲುಗೆಯಿಂದ ವರ್ತಿಸಿದರು ಎಂದು ದೇವದಾಸ್ ಜೋರಾಗಿ ನಕ್ಕು ಬಿಟ್ಟರು.
ಹಂಪನಕಟ್ಟೆಯ ಕಾಲೇಜು ದಿನಗಳಲ್ಲಿ ಫೈನ್ ಆರ್ಟ್ಸ್‌ನ ಯಾವುದೇ ಕಾರ್‍ಯಕ್ರಮಗಳಿರಲಿ ಅಲ್ಲಿ ನಮ್ಮ ತಂಡಕ್ಕೆ ಬಹುಮಾನ ಬಂದು ಬಿಡುತ್ತಿತ್ತು. ಅಲ್ಲಿ ಓದುತ್ತಿದ್ದ ಮಾಧವ್ ಶಕ್ತಿನಗರ್ ಜತೆಗೂಡಿ ಪದವು ಫ್ರೆಂಡ್ಸ್ ಕ್ಲಬ್‌ನ ಆಶ್ರಯದಲ್ಲಿ ನಾಟಕ ಮಾಡಿಕೊಂಡು ಬರುತ್ತಿದ್ದೇವು. ಅಲ್ಲಿಂದಲೇ ನಾಟಕ ರಂಗಕ್ಕೆ ಎಂಟ್ರಿ. ‘ಯಾನ್ ಮಲ್ಲಾಯೇ ಯಾನೇ ಮಲ್ಲಾಯೇ’ ನಾನು ಬರೆದ ಮೊದಲ ನಾಟಕ. ಕಾಶಿನಾಥ್ ಅವರ ‘ಅನುಭವ’ ಚಿತ್ರಕ್ಕಿಂತ ಮೊದಲು ನಾವು ಅರ್ಧ ಗಂಟೆಯ ಇದೇ ‘ಅನುಭವ’ವನ್ನು ನಾಟಕ ರಂಗಕ್ಕೆ ತಂದಿದ್ದೇವು... ನಾಟಕ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಹಾಸ್ಯ ನಾಟಕಗಳ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಬಹುದು ಎನ್ನುವ ಟ್ರೇಡ್ ಸಿಕ್ರೇಟ್ ಗೊತ್ತಾಯಿತು. ತದನಂತರ ನಾನು ರಂಗಭೂಮಿಯನ್ನು ಬಿಟ್ಟಿಲ್ಲ ಎನ್ನುತ್ತಾರೆ ಕಾಪಿಕಾಡು.
‘ಶಾಲೆಯ ದಿನಗಳಲ್ಲಿ ‘ನಾರದ ಗರ್ವಭಂಗ’ ಎನ್ನುವ ಪುಟ್ಟ ನಾಟಕ ರೆಡಿಯಾಗಿತ್ತು. ಅಲ್ಲಿ ‘ನಾರದ’ನ ಪಾತ್ರ ನನಗೆ ಸಿಕ್ಕಿತ್ತು. ಆದರೆ ಗ್ಯಾಲರಿಯಲ್ಲಿ ತುಂಬಿದ್ದ ಜನರನ್ನು ನೋಡಿ ನಾನು ಕಂಗಾಲು. ನನಗೆ ನೀಡಿದ ಸಂಭಾಷಣೆ ಬಿಟ್ಟು ಜೋರಾಗಿ ಹಾಡಲು ಆರಂಭ ಮಾಡಿದೆ. ಸಂಗೀತದ ಕುರಿತು ಕೊಂಚ ಜ್ಞಾನ ಇತ್ತು. ಆದರೆ ನಾಟಕದ ಸೆಕೆಂಡ್ ಸೀನ್ ಬಂದಾಗ ಸುಧಾರಿಸಿಕೊಂಡು ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇದು ನನ್ನ ರಂಗಭೂಮಿ ವೃತ್ತಿಯಲ್ಲಿ ಮರೆಯಲಾಗದ ಕ್ಷಣ. ಇಂತಹ ಸಿಹಿ- ಕಹಿ ಘಟನೆಗಳು ಬಹಳಷ್ಟು ನಡೆದಿದೆ ಅದೆಲ್ಲವೂ ನನ್ನ ವೃತ್ತಿ ರಂಗಭೂಮಿಯನ್ನು ಗಟ್ಟಿ ಮಾಡಿದೆ ಎನ್ನುತ್ತಾರೆ ದೇವದಾಸ್.
ಲವ್‌ಗೆ ಬಿದ್ದ ದೇವದಾಸ:
ದೇವದಾಸ ಕಾಪಿಕಾಡು ಮದುವೆಯಾಗಿರೋದು ಶರ್ಮಿಳಾ ಡಿ. ಕಾಪಿಕಾಡು ಅವರನ್ನು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಮದುವೆ ಹಿಂದಿನ ಸಿಕ್ರೇಟ್ ಏನಪ್ಪಾ ಅಂದರೆ ಇಬ್ಬರೂ ಲವ್ ಮಾಡಿ ಮದುವೆಯಾಗಿರುವವರು. ಹಂಪನಕಟ್ಟೆ ಕಾಲೇಜಿನ ಪಿಯುಸಿಯಲ್ಲಿ ಓದುತ್ತಿದ್ದ ಶರ್ಮಿಳಾ ಡಿಗ್ರಿ ಓದುತ್ತಿದ್ದ ದೇವದಾಸರ ಹಾಸ್ಯ ಪ್ರವೃತ್ತಿಗೆ ಸೋತು ಹೋಗಿದ್ದರು. ಫೈನ್ ಆರ್ಟ್ಸ್‌ನಲ್ಲಿ ಬಹುಮಾನಗಳ ಕೊಳ್ಳೆ ಹೊಡೆಯುತ್ತಿದ್ದ ದೇವದಾಸ್ ನಿಧಾನವಾಗಿ ಶರ್ಮಿಳಾರ ಸುತ್ತಮುತ್ತ ಗಿರಕಿ ಹೊಡೆಯಲು ಆರಂಭಿಸಿದರು. ಲವೇರಿಯಾ ಜೋರಾಗಿ ವಿವಾಹದಲ್ಲಿ ಅಂತ್ಯಕಂಡಿತ್ತು. ದೇವದಾಸ್‌ರ ಪ್ರತಿಯೊಂದು ಯಶಸ್ಸಿನ ಹಿಂದೆ ಶರ್ಮಿಳಾ ನಿಂತಿದ್ದಾರೆ ಎನ್ನುವುದು ನಿಜ. ದೇವದಾಸ್‌ರೇ ಹೇಳುವಂತೆ ಒಂದು ಕಾಲದಲ್ಲಿ ಆರ್ಥಿಕವಾಗಿ ಕುಸಿದು ಕೂತಿದ್ದೆ. ನಾಟಕಗಳನ್ನು ಬಿಟ್ಟು ಕೆಲಸವೊಂದಕ್ಕೆ ಸೇರಿಕೊಂಡಿದ್ದೆ. ಆದರೆ ಶರ್ಮಿಳಾ ನನಗೆ ಉತ್ಸಾಹದ ಚಿಲುಮೆಯಾಗಿ ಬಂದರು. ಈಗ ಈ ಉನ್ನತ ಮಟ್ಟದಲ್ಲಿರಲು ಶರ್ಮಿಳಾರೇ ಕಾರಣ ಎನ್ನುತ್ತಾರೆ ಅವರು. ದೇವದಾಸರ ‘ಬಲೇ ಚಾ ಪರ್‍ಕ’ ತಂಡದ ಸಂಪೂರ್ಣ ಉಸ್ತುವಾರಿಯನ್ನು ಶರ್ಮಿಳಾ ಕಾಪಿಕಾಡು ನೋಡಿಕೊಳ್ಳುತ್ತಿದ್ದಾರೆ. ದೇವದಾಸರ ಪುತ್ರ ಅರ್ಜುನ್ ಎಂಬಿಎ ಓದುತ್ತಿದ್ದಾರೆ. ಅರ್ಜುನ್‌ಗಾಗಿ ತುಳುವಿನಲ್ಲಿ ಚಿತ್ರವೊಂದು ತಯಾರಿಸಲು ದೇವದಾಸ್ ಹೊರಟ್ಟಿದ್ದಾರೆ. ಸದ್ಯಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಎಲ್ಲ ರೀತಿಯಿಂದಲೂ ದೇವದಾಸ್ ಕಾಪಿಕಾಡ್ ತಮ್ಮ ನಾಟಕಗಳ ಮೂಲಕ ತುಳುವರ ಪಾಲಿನ ‘ ಚಾರ್ಲಿ ಚಾಪ್ಲಿನ್’ ಎನ್ನುವುದರಲ್ಲಿ ನೋ ಡೌಟ್..!!

Sunday, April 3, 2011

ವೀ ಆರ್ ದೀ ಚಾಂಪಿಯನ್ಸ್


೨೮ ವರ್ಷಗಳ ತಪಸ್ಸು ಈಗ ಮುಗಿದಿದೆ. ಅಂತೂ ಇಂತೂ ಭಾರತ ವಿಶ್ವ ವಿಜೇತವಾಗಿ ಮೂಡಿ ಬಂದಿದೆ. ಧೋನಿ ಪಡೆ ಮುಂಬಯಿಯ ವಾಂಖೆಡೆ ಮೈದಾನದಲ್ಲಿ ಮಾಡಿದ ಕ್ರಾಂತಿ ಮಾತ್ರ ವರ್ಣಿಸಲು ಅಸಾಧ್ಯ. ಆದರೂ ವಿಶ್ವ ಕ್ರಿಕೆಟ್ ದುನಿಯಾದಲ್ಲಿ ನಾವು ನಂಬರ್ ವನ್ ಪಟ್ಟಕ್ಕೆ ಬಂದು ನಿಂತಿದ್ದೇವೆ. ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಇದಾಗಿದ್ದು , ಮುಂಬರುವ ವಿಶ್ವಕಪ್‌ನಲ್ಲಿ ಸಿಡಿಲಮರಿಯ ಅಬ್ಬರದ ಹೊಡೆತಗಳಿಲ್ಲ ಎನ್ನುವುದು ಕೂಡ ಈಗ ಗ್ಯಾರಂಟಿಯಾಗಿದೆ. ವಿಶ್ವಕಪ್ ಫೈನಲ್ ತುಂಬಾನೇ ರೋಚಕ ವಿಜಯಲಕ್ಷ್ಮೀ ಯಾರಿಗೆ ಒಳಿದು ಬಿಡುತ್ತಾಳೆ ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಾದ ಎಲ್ಲರಿಗೂ ಇರುತ್ತದೆ. ಅದರಲ್ಲೂ ಭಾರತ-ಶ್ರೀಲಂಕಾದ ಮ್ಯಾಚ್ ತುಂಬಾನೇ ರೋಚಕ. ಭಾರತದ ಆರಂಭಿಕ ಆಟಗಾರರಾದ ಸೆಹೆವಾಗ್ ಹಾಗೂ ಸಚಿನ್‌ರ ವಿಕೆಟ್ ಬೇಗನೆ ಉರುಳಿ ಹೋಗಿದ್ದು, ಇನ್ನೇನೂ ವಿಶ್ವಕಪ್ ಶ್ರೀಲಂಕಾದ ಪಾಲಾಯಿತು ಎನ್ನುವಷ್ಟರಲ್ಲಿ ಗಂಭೀರ್ ಹಾಗೂ ವಿರಾಟ್‌ನ ಮಧ್ಯಮ ಕ್ರಮಾಂಕಿತ ಆಟ. ಧೋನಿಯ ಜವಾಬ್ದಾರಿಯುತ ಆಟ ಮತ್ತೆ ಭಾರತ ಗೆಲ್ಲುವ ಕಿರಣ ಮೂಡಿಸಿದ್ದು ಎಲ್ಲವೂ ಹಾಸಿಗೆ ಮೇಲೆ ಮಲಗಿ ಕೊಂಡಿದ್ದ ಭಾರತೀಯರ ಕನಸ್ಸು ನನಸ್ಸಾಯಿತು. ಶ್ರೀಲಂಕಾ ಗೆದ್ದು ಬಿಡುತ್ತದೆ ಎನ್ನುವ ಭ್ರಮೆಯಲ್ಲಿದ್ದಾಗ ನನ್ನ ಇಮೇಲ್‌ಗೆ ನನ್ನ ಹಿರಿಯ ಗೆಳೆಯ ಹಾಗೂ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ‘ಇಲ್ಲ ಮಾರಾಯ್ರೆ ಕಪ್ ನಮಗೆ ಬರುತ್ತದೆ. ನೋಡು ನಿಮಗೊಂದು ಕಾರ್ಟೂನ್ ಕಳುಹಿಸುತ್ತೇನೆ’ ಎಂದು ವಿಶ್ವಕಪ್ ಎತ್ತುವ ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಅದು ಕೂಡ ಭಾರತದ ಪ್ರಮುಖ ಎರಡು ವಿಕೆಟ್‌ಗಳು ಉರುಳಿ ಹೋದ ನಂತರ ನಿಜಕ್ಕೂ ಪ್ರಕಾಶ್ ನಿನ್ನೆ ಮಟ್ಟಿಗೆ ಜ್ಯೋತಿಷಿ ಆಗಿ ಹೋದರು. ಕಾರ್ಟೂನ್ ನೋಡಿ ಎಂಜಾಯ್ ಮಾಡಿ ಬಿಡಿ.

* ಸ್ಟೀವನ್ ರೇಗೊ, ದಾರಂದಕುಕ್ಕು