Wednesday, March 30, 2011

ಕುಡ್ಲದ ಕಂಠಕ್ಕೆ ‘ದಾದಾ ಫಾಲ್ಕೆಯ’ ಕಿರೀಟ !


‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಈ ಜಾಹೀರಾತು ಸ್ಲೋಗನ್ ಕೇಳಿರದ ಮಂದಿ ಯಾರು ಇಲ್ಲ ಬಿಡಿ. ಇಂತಹ ಸಾವಿರಾರು ಜಾಹೀರಾತು... ಫಿಲ್ಮ್ ಡಿವಿಷನ್ ನಿರ್ಮಾಣದ ಹತ್ತಾರು ಸಾವಿರ ಡಾಕ್ಯುಮೆಂಟರಿಗಳ ಹಿಂದೆ ಕುಡ್ಲದ ವಾಯ್ಸ್ ಇದೆ ಅಂತಾ ಎಷ್ಟು ಮಂದಿಗೆ ಗೊತ್ತು...ಈ ಅಪರೂಪದ ಕಂಠಕ್ಕೆ ಈಗ ಮಹಾರಾಷ್ಟ್ರ ಸರಕಾರದ ‘ದಾದಾ ಸಾಹೇಬ್ ಫಾಲ್ಕೆ ’ ಬಂದಿದೆ. ಆದರೆ ಕನ್ನಡಿಗರಿಗೆ ಈ ವಾಯ್ಸ್ ಗೊತ್ತೇ ಇಲ್ಲ ಬಿಡಿ...

ಕಳೆದ ೪೦ ವರ್ಷಗಳಿಂದ ದೃಶ್ಯ, ಶ್ರವ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಓಡಾಡುತ್ತಿರುವ ‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಜಾಹೀರಾತು ಕೇಳಿರದ ಮಂದಿ ಯಾರು ಇರಲಿಕ್ಕಿಲ್ಲ ಬಿಡಿ. ಅಂದಿನಿಂದ ಇಂದಿನವರೆಗೂ ಈ ಜಾಹೀರಾತು ತನ್ನ ವರಸೆಯನ್ನು ಮುಂದುವರಿಸಿಕೊಂಡು ಹೋಗಿದೆ. ಈ ಜಾಹೀರಾತು ಸ್ಲೋಗನ್ ಹಿಂದೆ ಇರುವ ವಾಯ್ಸ್ ಪಡುಬಿದ್ರಿಯ ಫಲಿಮಾರಿನ ಶಿವರಾಜ್ ಸುವರ್ಣ ಅಂತಾ ಬಹುತೇಕ ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಕೋಲ್ಗೇಟ್ ಟೂಥ್ ಪೇಸ್ಟ್‌ನಿಂದ ಹಿಡಿದು ಫೋರ್ ವಿಲರ್‍ಸ್‌ವರೆಗೆ ಇತರ ಭಾಷೆಗಳಿಂದ ಕನ್ನಡ ಭಾಷೆಗೆ ಈ ಕಮರ್ಷಿಯಲ್ ಜಾಹೀರಾತುಗಳು ಡಬ್ ಆಗಬೇಕಾದರೆ ಅಲ್ಲಿ ಶಿವರಾಜ್ ಸುವರ್ಣ ಇರಬೇಕು. ಅವರೊಬ್ಬರೇ ಇದ್ದಾರೆ ಸಾಲದು ಕಂಪನಿಯ ಪ್ರಾಡಕ್ಟ್‌ಗಳನ್ನು ಪ್ರಮೋಶನ್ ಮಾಡಲು ಅವರ ಧ್ವನಿ ಕೂಡ ಸಾಥ್ ಕೊಡಬೇಕು.
ಪಡುಬಿದ್ರಿಯ ತನ್ನ ಅಜ್ಜಿಯ ಮನೆಯಲ್ಲಿ ಶಿವರಾಜ್ ಸುವರ್ಣ ಬಾಲ್ಯದ ದಿನಗಳನ್ನು ಕಳೆದದ್ದು, ಸರಿಸುಮಾರು ೧೨ ವರ್ಷಗಳ ವರೆಗೆ ಪಡುಬಿದ್ರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡಿದ್ದ ಪ್ರತಿಭಾವಂತ ಶಿವರಾಜ್ ಸುವರ್ಣ ನಂತರ ತನ್ನ ತಂದೆಯೊಂದಿಗೆ ಮುಂಬಯಿಯ ಪಡಸಾಲೆಯ ಮೇಲೆ ನಡೆಯಲಾರಂಭಿಸಿದರು. ಅಲ್ಲಿಂದಲೇ ಅವರ ಕಂಠದಾನ ಕಲಾವಿದನಾಗಿ ವೃತ್ತಿಯನ್ನು ಆರಂಭ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಕಂಠದಾನ ಕಲಾವಿದನಾಗಿ ಮುಂದುವರಿದಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರಕಾರ ಇವರನ್ನು ಗುರುತಿಸುವ ಬದಲಾಗಿ ಮಹಾರಾಷ್ಟ್ರ ಸರಕಾರ ಏ.೩೦ ರಂದು ೧೪೧ನೇ ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮಾದಿನಾಚರಣೆಯ ಸಂದರ್ಭದಲ್ಲಿ ಕಂಠದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶಿವರಾಜ್ ಸುವರ್ಣ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿದೆ.
ಹುಲಿಯ ಹೊಟ್ಟೆಯಲ್ಲಿ....
ಶಿವರಾಜ್ ಸುವರ್ಣ ಅವರ ತಂದೆ ಪಡುಬಿದ್ರಿಯ ಫಲಿಮಾರು ಕರ್ನಿರೆಯ ಕೆ.ಕೆ. ಸುವರ್ಣ ರಂಗಭೂಮಿ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಕೋಲ್ಗೇಟ್ ಟೂಥ್ ಪೌಡರ್ ಜಾಹೀರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡ ಮೊಡೆಲ್ ಕೂಡ ಇವರೇ ಆಗಿದ್ದಾರೆ. ಮುಂಬಯಿಯಲ್ಲಿರುವ ಖ್ಯಾತ ಸಭಾಂಗಣ ಷಣ್ಮುಗಾನಂದದ ಮ್ಯಾನೇಜರ್ ಆಗಿದ್ದವರು. ಈ ಷಣ್ಮುಗಾನಂದ ಸಭಾಂಗಣ ಅಂದಿನ ಕಾಲದಲ್ಲಿ ಬಹಳಷ್ಟು ಖ್ಯಾತಿ ಪಡೆದ ಸಭಾಂಗಣವಾಗಿತ್ತು. ಈಗಲೂ ಅದರ ಇಮೇಜ್ ಕೊಂಚನೂ ಕಡಿಮೆಯಾಗಿಲ್ಲ ಬಿಡಿ. ದಕ್ಷಿಣ ಭಾರತದ ಖ್ಯಾತ ಕಾರ್‍ಯಕ್ರಮಗಳು , ಸಿನಿಮಾ ಅವಾರ್ಡ್ ಕಾರ್‍ಯಕ್ರಮಗಳು ಇಲ್ಲಿಯೇ ನಡೆಯುತ್ತಿದೆ. ಈ ಸಭಾಂಗಣದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಟಾಟಾ ಸಂಸ್ಥೆಯವರು ಇವರನ್ನು ಅವರು ನಡೆಸುತ್ತಿರುವ ಎನ್‌ಸಿಪಿಎ( ರಾಷ್ಟ್ರೀಯ ನಾಟ್ಯಕಲಾ ಕೇಂದ್ರ) ಗೆ ಸಹಾಯಕ ನಿರ್ದೇಶಕರಾಗಿ ಸೇರಿಸಿಕೊಂಡರು. ಹಲವಾರು ವರ್ಷಗಳ ಕಾಲ ಅಲ್ಲಿ ದುಡಿದ ಅವರು ನಿರ್ದೇಶಕರಾಗಿ ನಿವೃತ್ತರಾದವರು. ಹಲವಾರು ಜಾಹೀರಾತು ಹಾಗೂ ಡಾಕ್ಯುಮೆಂಟರಿಗಳಿಗೆ ಧ್ವನಿ ಗೂಡಿಸಿಕೊಂಡು ಸೈ ಎನ್ನಿಸಿದ್ದರು. ಈಗ ಅವರ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಕೂಡಾ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಅದರಲ್ಲೂ ಶಿವರಾಜ್ ಸುವರ್ಣ ಫುಲ್‌ಟೈಂ ವೃತ್ತಿಯಾಗಿ ಅದನ್ನು ನೆಚ್ಚಿಕೊಂಡಿದ್ದಾರೆ.
ಕತ್ತೆಗೆ ಕೊಟ್ಟ ಕಂಠ:
ಶಿವರಾಜ್ ಸುವರ್ಣ ಮೊತ್ತ ಮೊದಲ ಬಾರಿಗೆ ಫಿಲ್ಮ್ ಡಿವಿಷನ್ ನಿರ್ಮಾಣದ ಮಕ್ಕಳ ಚಿತ್ರವೊಂದಕ್ಕೆ ಬರೀ ೧೨ರ ವಯಸ್ಸಿನಲ್ಲಿ ಕತ್ತೆಗೆ ಕಂಠವನ್ನು ದಾನ ಮಾಡಿದ್ದರು. ಈ ಚಿತ್ರ ಕೂಡ ಹಲವಾರು ಪ್ರಶಸ್ತಿಗಳನ್ನು ಅಂದು ಬಾಚಿಕೊಂಡಿತು. ಹಿಂದಿ, ಇಂಗ್ಲೀಷ್, ಗುಜರಾತಿ, ಮರಾಠಿ, ತುಳು, ಕನ್ನಡ ಹೀಗೆ ಹತ್ತಾರು ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಸಾಸಿಕೊಂಡ ಶಿವರಾಜ್ ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಸಂಸ್ಕೃತ ಭಾಷೆಯ ‘ಭಗವದ್ಗೀತಾ’ವನ್ನು ಹಿಂದಿಗೆ ಡಬ್ಬಿಂಗ್ ಸೇರಿದಂತೆ ಬಹುತೇಕ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳಿಗೆ ಕಂಠದಾನ ಕೊಟ್ಟಿದ್ದಾರೆ. ಬಾಲಿವುಡ್ ಮೆಗಾ ಸ್ಟಾರ್‌ಗಳಿಗೆ ಕಂಠದಾನ ಕಲಾವಿದರಾಗಿ ದುಡಿದಿರುವ ಶಿವರಾಜ್ ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಕುರಿತಾಗಿ ಡಾಕ್ಯುಮೆಂಟರಿಯೊಂದನ್ನು ದೇಶದ ೧೪ ಭಾಷೆಗಳಿಗೆ ಡಬ್ಬಿಂಗ್ ಮಾಡಿ ಎಲ್ಲರ ಕೈಯಿಂದಲೂ ಭೇಷ್ ಎನ್ನಿಸಿಕೊಂಡಿದ್ದಾರೆ. ರೇಡಿಯೋದ ಸ್ಪಾಟ್ ಜಾಹೀರಾತು, ಜಿಂಗಲ್ಸ್, ರೇಡಿಯೋ ನಾಟಕಗಳು ಹೀಗೆ ಕಂಠದಾನ ಕಲಾವಿದರಾಗಿ ಶಿವರಾಜ್ ಸುವರ್ಣ ದುಡಿದದ್ದು ಬಹಳಷ್ಟಿದೆ ಎಂದು ಅವರ ಪತ್ನಿ ಪ್ರೊ. ಸುಮತಿ ಶಿವರಾಜ್ ಸುವರ್ಣ ಹೇಳುತ್ತಾರೆ. ಮುಂಬಯಿಯ ಅಂಧೇರಿಯಲ್ಲಿ ಶಿವರಾಜ್ ಸುವರ್ಣ ತನ್ನ ಪತ್ನಿಯೊಂದಿಗೆ ಪಡುಬಿದ್ರಿಗೆ ಆಗಾಗ ಬಂದು ಹೋಗುತ್ತಾ ಇರುತ್ತಾರೆ.
ಈಗ ಕೊಂಚ ಸುಲಭ:
‘ನಾನು ಈ ಕಂಠದಾನ ಕ್ಷೇತ್ರಕ್ಕೆ ಕಲಾವಿದನಾಗಿ ಬರುವ ಹೊತ್ತಲ್ಲಿ ತಾಂತ್ರಿಕತೆ ಅಷ್ಟೊಂದು ಫಾಸ್ಟ್ ಆಗಿರಲಿಲ್ಲ. ಒಂದು ಜಾಹೀರಾತಿಗೆ ಕಂಠ ಕೊಡಬೇಕಾದರೆ ೨ರಿಂದ ೩ ದಿನಗಳು ಬೇಕಾಗಿತ್ತು. ಈಗ ಬರೀ ಅರ್ಧ ಗಂಟೆಯೊಳಗೆ ಒಂದು ಜಾಹೀರಾತು ತಯಾರು ಮಾಡಿಕೊಡಬಹುದು. ಹಿಂದಿನ ಟೈಮ್‌ನಲ್ಲಿ ಜಾಹೀರಾತು ಅಥವಾ ಡಾಕ್ಯುಮೆಂಟರಿಗಳಿಗೆ ಕಂಠದಾನ ನೀಡಬೇಕಾದರೆ ಯಾರು ಮುಂದೆ ಬರುತ್ತಿರಲಿಲ್ಲ. ಈ ಕ್ಷೇತ್ರದಲ್ಲಿ ತಾಳ್ಮೆ ಅತೀ ಅವಶ್ಯಕವಾಗಿರುತ್ತದೆ. ಭಾವನೆಗಳು, ಉದ್ವೇಗ ಎಲ್ಲವೂ ಜಾಹೀರಾತಿಗೆ ಬೇಕಾದಂತೆ ಅಳವಡಿಸಿಕೊಳ್ಳೋದು ಅಷ್ಟೊಂದು ಸಲೀಸಲ್ಲ. ಇಂದಿನ ಕಂಠದಾನ ಕ್ಷೇತ್ರದಲ್ಲಿ ತಾಂತ್ರಿಕತೆ ಬಹಳಷ್ಟು ಕೆಲಸ ಮಾಡಿದೆ. ಈ ಕ್ಷೇತ್ರವನ್ನು ಈಗ ಮೆಚ್ಚುವವರು ಕೂಡ ಬಹಳಷ್ಟು ಮಂದಿ ಇದ್ದಾರೆ ಎಂದು ಶಿವರಾಜ್ ಸುವರ್ಣ ಅನುಭವದ ಮೂಸೆಯೊಳಗೆ ಇಳಿದು ಹೋದರು.
ಇಷ್ಟು ವರ್ಷಗಳ ಕಾಲ ನಿಮ್ಮ ಪರಿಚಯ ಕನ್ನಡಿಗರಿಗೆ ಯಾಕೆ ಆಗಿಲ್ಲ ಎಂದು ಲವಲವಿಕೆಯ ತಂಡ ಪ್ರಶ್ನೆ ಎತ್ತಿದಾಗ..‘ಯಾವುದೇ ಕ್ಷೇತ್ರವಾಗಿರಬಹುದು ಅಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದೇ ಬರೀ ಆ ಕ್ಷೇತ್ರದ ಹಿಂದೆ ನಿಂತು ಕೆಲಸ ಮಾಡುವ ಮಂದಿ ಜಾಸ್ತಿ ಸಂಖ್ಯೆಯಲ್ಲಿರುತ್ತಾರೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಅಥವಾ ಮಾಧ್ಯಮಗಳನ್ನು ಗಣನೆಗೆ ತೆಗೆದುಕೊಂಡಾಗ ಈ ವಿಚಾರ ಸರಿ ಎನ್ನಿಸಿಬಿಡಬಹುದು. ಸಿನಿಮಾದಲ್ಲಿ ಬರೀ ಹೀರೋ, ನಿರ್ದೇಶಕ ಹೀಗೆ ಕೆಲವರು ಮಾತ್ರ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ಆದರೆ ಅದರ ಹಿಂದೆ ಒಬ್ಬ ಲೈಟ್ ಬಾಯ್‌ನಿಂದ ಹಿಡಿದು ಎಡಿಟಿಂಗ್ ರೂಂನ ವರೆಗೂ ಕಾಣದ ಕೈಗಳು ಕೆಲಸ ಮಾಡುತ್ತದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಕಂಠದಾನ ಕ್ಷೇತ್ರ ಕೂಡ ಅದೇ ರೀತಿಯಲ್ಲಿದೆ. ಕಂಠದ ಪರಿಚಯ ಎಲ್ಲರಿಗೂ ಇರುತ್ತೇ ಆದರೆ ಮುಖದ ಪರಿಚಯ ಇರುವುದೇ ಇಲ್ಲ. ಇದು ನಮ್ಮ ಕ್ಷೇತ್ರದ ಒಂದು ವೀಕ್ ಪಾಯಿಂಟ್ ಎಂದು ಶಿವರಾಜ್ ಸುವರ್ಣ ಕಂಠದಾನ ಕ್ಷೇತ್ರದ ವೀಕ್‌ನೆಸ್ ಪಾಯಿಂಟ್‌ಗಳನ್ನು ಹೆಕ್ಕುತ್ತಾ ಹೋದರು.
‘ಮಹಾರಾಷ್ಟ್ರದ ಸರಕಾರ ವಿವಿಧ ಭಾಷೆಗಳ ಸಿನಿಮಾದಲ್ಲಿ ದುಡಿಯುವ ಮಂದಿಯನ್ನು ಗುರುತಿಸಿ ನೀಡುವ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಬಂದಾಗ ಶಿವರಾಜ್ ಸುವರ್ಣ ಬಹಳಷ್ಟು ಖುಶಿ ಪಟ್ಟರು. ಕಂಠದಾನ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ ಹಿರಿಯರನ್ನು ಮಹಾರಾಷ್ಟ್ರ ಸರಕಾರ ಗುರುತಿಸಿ ಪ್ರೋತ್ಸಾಹಿಸುವುದರಿಂದಲೇ ಇಲ್ಲಿನ ಸಿನಿಮಾ ಇಂಡಸ್ಟ್ರಿ ಈ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬಯಿಯಲ್ಲಿ ನೆಲೆನಿಂತಿರುವ ಕಾರಣ ನಮ್ಮ ಕುರಿತು ಕರ್ನಾಟಕದ ಸಿನಿಮಾ ಅಥವಾ ಇತರರಿಗೆ ಅಷ್ಟೊಂದು ಪರಿಚಯ ಇರಲು ಸಾಧ್ಯವಿಲ್ಲ ಎಂದು ಅವರ ಪ್ರೊ.ಸುಮತಿ ಶಿವರಾಜ್ ಸುವರ್ಣ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಅಂದಾಹಾಗೆ ಕಂಠದಾನ ಕಲಾವಿದ ಶಿವರಾಜ್ ಸುವರ್ಣರಿಗೆ ಒಂದು ಬೆಸ್ಟ್ ಆಫ್ ಲಕ್ ಹೇಳಬೇಕಾದರೆ ಅವರಿಗೊಂದು ಇ-ಮೇಲ್ ಮಾಡಿ - shivrajsuvarna@gmail.com.

Tuesday, March 29, 2011

ಕೆಬಿಸಿಯಲ್ಲಿ ಅಮೀರ್


ಮಿಸ್ಟರ್ ಪರ್‌ಫೆಕ್ಷನ್ ಅಮೀರ್ ಖಾನ್ ಈಗ ೨೪ ಇಂಚಿನ ಟಿವಿಯೊಳಗೆ ಇಳಿಯಲಿದ್ದಾರೆ. ಬೆಳ್ಳಿತೆರೆಯಲ್ಲಿ ಅಮೀರ್ ಮಾಡುತ್ತಿರುವ ಮ್ಯಾಜಿಕ್ ಇನ್ನೂ ಮುಂದೆ ಕಿರುತೆರೆಯಲ್ಲಿ ಮುಂದುವರಿಯಲಿದೆ. ಹಾಟ್‌ಸೀಟ್‌ನಲ್ಲಿ ಇನ್ನೂ ಮುಂದೆ ಅಮೀರ್ ಬರುತ್ತಿದ್ದಾರೆ.. ಜಾಗ ಬಿಡಿ..

ಕೆಲವು ವರ್ಷಗಳ ಹಿಂದೆ ಅಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಕೂತಿದ್ರು.... ನಂತರ ಶಾರುಕ್ ಖಾನ್ ಕೂತಿದ್ರು.. ಆದರೆ ಈಗ ಅದೇ ಹಾಟ್ ಸೀಟ್‌ನಲ್ಲಿ ಅನ್ಸರ್‌ಗಳನ್ನು ಲಾಕ್ ಮಾಡಲು ‘ಮಿಸ್ಟರ್ ಪರ್‌ಫೆಕ್ಷನ್’ ಅಮೀರ್ ಖಾನ್ ಬರುತ್ತಿದ್ದಾರೆ. ಖಾಸಗಿ ವಾಹಿನಿ ಸ್ಟಾರ್ ಪ್ಲಸ್‌ನಲ್ಲಿ ಕೆಬಿಸಿಯ ಮೂರನೇಯ ಆವೃತ್ತಿ ಆರಂಭವಾಗುವ ಸೂಚನೆ ಬಂದಿದೆ. ಈಬಾರಿ ಈ ಕೆಬಿಸಿಯ ಚುಕ್ಕಾಣಿ ಹಿಡಿದವರು ನಟ ಅಮೀರ್ ಖಾನ್. ಕೆಬಿಸಿಯ ಕಾರ್‍ಯಕ್ರಮಕ್ಕಾಗಿ ಸಂಯೋಜಕರು ಈಗಾಗಲೇ ಅಮೀರ್ ಖಾನ್ ಜತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ.
ಆದರೆ ಅಮೀರ್ ಖಾನ್ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ನಂತರ ಈ ಹಾಟ್ ಸೀಟ್‌ನಲ್ಲಿ ಕೂರುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ಅವರ ಮೂಲಗಳು ತಿಳಿಸಿದೆ. ಈಗಾಗಲೇ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಶಾರುಕ್ ಖಾನ್ ಪಡೆದುಕೊಂಡಿರುವ ಸಂಭಾವಣೆಗಿಂತ ಈ ಬಾರಿಯ ಕೆಬಿಸಿಯ ಹಾಟ್ ಸೀಟ್ ಸಂಭಾವಣೆ ಜಾಸ್ತಿ ಇರಲಿದೆ. ಅಮೀರ್ ಖಾನ್ ಬರೀ ಒಂದು ಎಪಿಸೋಡ್‌ಗೆ ಬರೋಬರಿ ೭೫ ಲಕ್ಷ ರೂ. ಡಿಮ್ಯಾಂಡ್ ಇಟ್ಟಿದ್ದಾರೆ. ಈ ಡೀಲ್‌ಗೆ ಕೆಬಿಸಿ ಸಂಯೋಜಕರು ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟರೆ ಅಮೀರ್ ಖಾನ್ ಹಾಟ್ ಸೀಟ್‌ನಲ್ಲಿ ಕೂರುವ ಕುರಿತು ಯಾವುದೇ ಡೌಟ್ ಇರೋದಿಲ್ಲ.
ಈಗಾಗಲೇ ಅಮೀರ್ ಖಾನ್‌ರ ಬತ್ತಳಿಕೆಯಲ್ಲಿ ಎರಡು ಚಿತ್ರಗಳು ಬಿದ್ದುಕೊಂಡಿದೆ. ಈ ಚಿತ್ರಗಳಲ್ಲಿ ಒಂದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಇದರ ನಡುವೆ ಈ ಕೆಬಿಸಿಯ ಮೂರನೇ ಆವೃತ್ತಿಯ ಕಾರ್‍ಯಕ್ರಮಗಳಿಗೆ ಶೂಟಿಂಗ್ ನಡೆಯುವ ಸೂಚನೆ ಕೂಡ ಬಂದಿದೆ. ಎರಡಕ್ಕೂ ಟೈಮಿಂಗ್ ಹೊಂದಾಣಿಕೆ ನಡೆಸಲು ಅಮೀರ್ ಖಾನ್‌ಗೆ ಕೊಂಚ ಕಷ್ಟವಾಗಲಿದೆ ಎನ್ನೋದು ಅವರ ಆಪ್ತರ ವಲಯದ ಮಾತು. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಹಿಂದೆ ಹಾಟ್‌ಸೀಟ್‌ನಲ್ಲಿದ್ದ ಅಮಿತಾಭ್ ಬಚ್ಚನ್ ಹಾಗೂ ಶಾರುಕ್ ಖಾನ್‌ರ ಅದೇ ಓಲ್ಡ್ ಡೈಲಾಗ್‌ಗಳಾದ ‘ಲಾಕ್ ಕೀಯಾ ಜಾಯೇ’ ‘ಫ್ರೇಜ್ ಕಿಯಾ ಜಾಯೇ’ ಗುಡ್ ಬಾಯ್ ಹೇಳುವ ಮಾತು ಅಮೀರ್ ಖಾನ್ ಆಡಿದ್ದಾರೆ. ಈ ಕೆಬಿಸಿಯಲ್ಲಿ ಹೊಸ ಪದದ ಆವಿಷ್ಕಾರಕ್ಕಾಗಿ ಸಂಯೋಜಕರು ಹುಡುಕಾಡುತ್ತಿದ್ದಾರೆ ಎಂಬ ಮಾತು ಹೊರ ಬಂದಿದೆ.
ಈ ಬಾರಿಯ ಹಾಟ್ ಸೀಟ್‌ನಲ್ಲೂ ಬಹಳಷ್ಟು ಬದಲಾವಣೆಗಳು ದಾಖಲಾಗುವ ಚಾನ್ಸ್‌ಗಳು ಜಾಸ್ತಿಯಿದೆ. ಅಮೀರ್ ಖಾನ್‌ರ ಹೊಸ ಗೆಟಪ್, ಹೊಸ ಸಂಭಾಷಣೆಗಳು, ಅನ್ಸರ್‌ಗಳನ್ನು ಲಾಕ್ ಮಾಡುವ ಶೈಲಿ ಎಲ್ಲವೂ ಡಿಫರೆಂಟ್ ಆಗಿರಲಿದೆ ಎನ್ನೋದು ಕೆಬಿಸಿಯ ಮೂಲಗಳು ಹೇಳುವ ಮಾತು. ಈ ವರ್ಷದ ಮಧ್ಯ ಭಾಗದಲ್ಲಿ ಕೆಬಿಸಿಯ ಮೂರನೇ ಆವೃತ್ತಿ ಸ್ಟಾರ್ ಪ್ಲಸ್‌ನಲ್ಲಿ ಹೊಸ ದುನಿಯಾವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಸಾಧ್ಯತೆ ಇದೆ ಎಂದು ಕೆಬಿಸಿಯ ಸಂಯೋಜಕರಲ್ಲಿ ಒಬ್ಬರಾಗಿರುವ ಸಿದ್ಧಾರ್ಥ್ ಬಸು ಮಾಧ್ಯಮಗಳಿಗೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

Monday, March 28, 2011

ಮುಂಗಾರು ಹುಡುಗಿ ಸೂಳೆ ಸಿದ್ದು !


ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಈಗ ಸಿನಿಮಾ ಆಗಲಿದೆ. ಅದರಲ್ಲೂ ಮುಂಗಾರು ಹುಡುಗಿ ಪೂಜಾ ನಟಿಸುತ್ತಿದ್ದಾರೆ. ಸಕ್ಸಸ್ ಚಿತ್ರಗಳಿಲ್ಲದೇ ಒದ್ದಾಟ ಮಾಡುತ್ತಿರುವ ಪೂಜಾ ಸಕ್ಸಸ್‌ಗಾಗಿ ಡಿಫರೆಂಟ್ ಪಾತ್ರ ಮಾಡುತ್ತಿದ್ದಾರೆ.

ಸೂಳೆ ಸಿದ್ದು !
ಇದು ಮುಂಗಾರು ಹುಡುಗಿ ಪೂಜಾ ಲೇಟೆಸ್ಟ್ ಪಾತ್ರ ! ‘ಚಾಮೇಲಿ’ಯಲ್ಲಿ ಕರೀನಾ ‘ಚಾಂದಿನಿ ಬಾರ್’ನಲ್ಲಿ ಟಬು,‘ರಕ್ತ ಕಣ್ಣೀರು’ನಲ್ಲಿ ರಮ್ಯಕೃಷ್ಣ ಈಗ ಅದೇ ಸಾಲಿನಲ್ಲಿ ಮುಂಗಾರು ಹುಡುಗಿ ಬಂದು ನಿಂತಿದ್ದಾಳೆ. ‘ಮುಂಗಾರು ಮಳೆ ’ ಹಿಟ್ ಚಿತ್ರದ ನಂತರ ಪೂಜಾ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳುವಂತೆ ಓಡಿಲ್ಲ ಎನ್ನುವುದು ಮುಂಗಾರು ಹುಡುಗಿಗೆ ಮನದಟ್ಟಗಿದೆ.
ಸಿಕ್ಕಿ ಸಿಕ್ಕಿದ ಚಿತ್ರಗಳನ್ನು ಒಪ್ಪಿಕೊಂಡು ಬೇಡಿಕೆ ಕಳೆದುಕೊಂಡು ಮೂಲೆ ಸೇರುವ ಹುಡುಗಿ ಈಗ ‘ಬೀರೆ ದೇವು ಪೂಂಜೆ’ಯಲ್ಲಿ ‘ಸೂಳೆ ಸಿದ್ದು’ ಪಾತ್ರದಲ್ಲಿ ವೀಳ್ಯದೆಲೆ ಜಗಿಯಲಿದ್ದಾರೆ. ‘ಕೋಟಿ ಚೆನ್ನಯ’ ಐತಿಹಾಸಿಕ ಚಿತ್ರ ನಿರ್ಮಿಸಿದ ಆರ್.ಧನರಾಜ್ ಈ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ. ಸರಿಸುಮಾರು ೪೫೦ ವರ್ಷಗಳ ಹಿಂದಿನ ಕತೆಯನ್ನು ಅಗೆದು ಬಗೆದು ಚಿತ್ರ ಮಾಡುತ್ತಿದ್ದಾರೆ. ಕರಾವಳಿ ಬಂಟ ಸಮಾಜದ ವೀರ ಪುರುಷ ‘ದೇವು ಪೂಂಜ’ನ ಕತೆ ತುಳುನಾಡಿನಲ್ಲಿ ಬಹಳ ಫೇಮಸ್.
ದಂಡನಾಯಕನಾಗಿರುವ ದೇವು ಪೂಂಜನಿಗೆ ಕರಾವಳಿ ಜುಮಾದಿ ದೈವದ ಬೆಂಬಲ ಇರುತ್ತದೆ. ಯಾವ ಯುದ್ಧದಲ್ಲೂ ದೇವು ಪೂಂಜನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದ ನಂದಾವರ ಅರಸ ಯುಕ್ತಿಯಿಂದ ಗೆಲ್ಲುವ ಯೋಜನೆಯೊಂದಕ್ಕೆ ಸಿದ್ದನಾಗುತ್ತಾನೆ. ನಂದಾವರ ಅರಸನ ನೃತ್ಯಗಾರ್ತಿ(ವೇಶ್ಯೆ) ‘ಸೂಳೆ ಸಿದ್ದು’ವನ್ನು ಈ ಕೆಲಸಕ್ಕೆ ನಿಯೋಜಿಸಿ ಬಿಡುತ್ತಾನೆ. ದೇವು ಪೂಂಜ ಹಾಗೂ ಸೂಳೆ ಸಿದ್ದುವಿನ ಚೆನ್ನೆಮಣೆಯಾಟ...ಸೋಲು- ಗೆಲುವು, ಸಾವು ಹೀಗೆ ಪೂಜಾ ಗಾಂ ಇಡೀ ಚಿತ್ರ ಕತೆಯ ಸೆಂಟರ್ ಪಾಯಿಂಟ್‌ನಲ್ಲಿ ಮಿಂಚುತ್ತಾರೆ.
ಸೆ.೨೨ರಿಂದ ಚಿತ್ರಕ್ಕೆ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ತುಳು ಸೇರಿದಂತೆ ಕನ್ನಡ ಭಾಷೆಯಲ್ಲೂ ‘ಬೀರೆ ದೇವು ಪೂಂಜೆ ’ ತೆರೆ ಕಾಣುವ ಸಾಧ್ಯತೆ ಇದೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸುಮಧುರ ಸಂಗೀತವಿದೆ. ಉಳಿದಂತೆ ಆರ್. ಸಿದ್ಧಾರ್ಥ್ ‘ದೇವು ಪೂಂಜ’ನ ಪಾತ್ರಕ್ಕೆ ಇಳಿದಿದ್ದಾರೆ. ನಟಿ ವಿನಯಪ್ರಕಾಶ್ ಹಾಗೂ ತುಳು ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತುಳುವಿನಲ್ಲಿ ದೊಡ್ಡ ಬಜೆಟ್ ಹಾಗೂ ಐತಿಹಾಸಿಕ ಚಿತ್ರ ಎನ್ನಲಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಸೂಪರ್ ಹಿಟ್ ಆಗಿತ್ತು. ಯಕ್ಷಗಾನದ ಕೋಲ್ಯಾರು ರಾಮಚಂದ್ರ ರಾವ್ ‘ಸೂಳೆ ಸಿದ್ದು’ವಿನ ಪಾತ್ರವನ್ನು ಹೈ ಕ್ಲಾಸ್ ಮಾದರಿಯಲ್ಲಿ ಮಾಡಿ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದರು. ಆದರೆ ಪೂಜಾಳಿಗೆ ಈ ಪಾತ್ರ ಎಷ್ಟರ ಮಟ್ಟಿಗೆ ಸಕ್ಸಸ್ ತಂದು ಕೊಡುತ್ತದೆ ಎನ್ನೋದು ಈಗ ಉಳಿದಿರುವ ಡಾಲರ್ ಪ್ರಶ್ನೆ. ಟೋಟಲಿ ಚಿತ್ರ ಬಿಡುಗಡೆ ವರೆಗೂ ಕಾದು ನೋಡಲೇ ಬೇಕು.

ಚಿನ್ನಾದ ಬಲೆಯಲ್ಲಿ ನೀತು


ಕೋಸ್ಟಲ್‌ವುಡ್‌ಗೆ ತಲೆ ಹಾಕಿ ಮಲಗೋದಿಲ್ಲ ಎಂದು ಮುನಿಸಿಕೊಂಡು ಹೋಗಿದ್ದ ನೀತು ಈಗ ಕೊಂಕಣಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏನ್ ಇದರ ಕತೆ ಅಂತೀರಾ..?

ನೀತು ಬ್ಯಾಕ್ ಟೂ ಕೋಸ್ಟಲ್‌ವುಡ್. ಸ್ಯಾಂಡಲ್‌ವುಡ್‌ನಲ್ಲಿ ಹೊರಳಾಡಿದ ಕರಾವಳಿಯ ಹುಡುಗಿ ನೀತು ಕೊಂಕಣಿ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ ಎನ್ನುವ ಗರಮ ಗರಂ ಸುದ್ದಿ ಹೊರ ಬಂದಿದೆ. ಈಗಾಗಲೇ ಕೋಸ್ಟಲ್‌ವುಡ್‌ನ ಕೋಟಿ ಚೆನ್ನಯ ಚಿತ್ರದ ನಂತರ ನೀತು ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಚಿತ್ರಗಳನ್ನು ಕೊಳ್ಳೆ ಹೊಡೆದಿದ್ದರು. ಪೂಜಾರಿ, ಗಾಳಿಪಟದಂತಹ ಕಮರ್ಷಿಯಲ್ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕ ವಲಯಕ್ಕೆ ಬಹಳ ಆಪ್ತರಾಗಿ ಹೋಗಿದ್ದರು.
ಕೋಟಿ ಚೆನ್ನಯ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಧನರಾಜ್ ಹಾಗೂ ನೀತು ನಡುವೆ ನಡೆದ ಪ್ರಶಸ್ತಿ ವಿವಾದದಿಂದಾಗಿ ನೀತು ಎಂದಿಗೂ ಕೋಸ್ಟಲ್‌ವುಡ್ ಇಂಡಸ್ಟ್ರಿಗೆ ಕಾಲಿಡುವುದಿಲ್ಲ ಎನ್ನುವ ಮಾತು ಕುಡ್ಲದಲ್ಲಿ ಹರಿದಾಡಿತ್ತು. ಬಹಳಷ್ಟು ಕೋಸ್ಟಲ್‌ವುಡ್ ನಿರ್ದೇಶಕರು ನೀತು ಮನೆಯ ಮುಂದಿನ ಬಾಗಿಲಲ್ಲಿ ಕೂತುನಿಂತು ನೀತು ಕಾಲ್‌ಶೀಟ್ ಇಲ್ಲದೇ ವಾಪಸ್ಸು ಬಂದ ಘಟನೆಗಳು ನಡೆದಿತ್ತು.
ಈಗ ನೀತು ಕರಾವಳಿಯ ರಂಗಭೂಮಿಯ ಕಲಾವಿದ ಕಾಸರಗೋಡು ಚಿನ್ನಾರ ಮಾತಿನ ಮೋಡಿಗೆ ಸಿಕ್ಕಿ ಕೊಂಕಣಿ ಚಿತ್ರವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ನೀತು ಅವರ ಮಾತೃಭಾಷೆ ಕೂಡ ಕೊಂಕಣಿ ಅದೇ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ನೀತುರ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲವಂತೆ.
ಅಂದಹಾಗೆ ಈ ಸಿನಿಮಾವನ್ನು ಕಾಸರಗೋಡು ಚಿನ್ನಾ ನಿರ್ದೇಶನ ಮಾಡುತ್ತಿದ್ದಾರೆ. ಕರಾವಳಿಯ ರಂಗಭೂಮಿಯಲ್ಲಿ ಚಿನ್ನಾರಿಗೆ ತನ್ನದೇ ಆದ ಒಂದು ಇಮೇಜ್ ಇದೆ. ರಂಗಭೂಮಿಯಲ್ಲಿ ಸಿಕ್ಕಿದ ಕೆಲವು ಅನುಭವಗಳನ್ನು ಒಟ್ಟು ಸೇರಿಸಿಕೊಂಡು ಈ ಚಿತ್ರವನ್ನು ಚಿನ್ನಾ ಮಾಡುತ್ತಿದ್ದಾರೆ ಎನ್ನುವುದು ಬಂದ ಮಾತು.
‘ಉಜ್ವಾಡ್’ ಎಂಬುದು ಆ ಚಿತ್ರದ ಹೆಸರು. ಅಂದಹಾಗೆ ‘ಉಜ್ವಾಡ್’ ಎಂದರೆ ಬೆಳಕು ಎನ್ನುವ ಅರ್ಥ ಇದೆ. ದಕ್ಷಿಣ ಕನ್ನಡದ ಗೌಡ ಸಾರಸತ್ವ ಬ್ರಾಹ್ಮಣ ಕುಟುಂಬಗಳ ಸಂಸ್ಕೃತಿಯನ್ನು ಬಿಂಬಿಸುವ ಜತೆಯಲ್ಲಿ ಅವರ ಬದುಕಿನ ಒಳನೋಟವನ್ನು ತೋರಿಸುವ ಪ್ರಯತ್ನ ಚಿತ್ರದಲ್ಲಿ ನಡೆಯಲಿದೆ.
ತನ್ನ ನ್ಯಾಚುರಲಾಟಿಗೆ ತಕ್ಕಂತೆ ಇರುವ ಪಾತ್ರ ಇದಾಗಿದ್ದು, ಕತೆನೂ ಬಹಳ ಇಷ್ಟವಾಗಿದೆ. ಬಹಳ ದಿನಗಳಿಂದ ಮಾತೃಭಾಷೆಯ ಚಿತ್ರದಲ್ಲಿ ನಟಿಸಬೇಕು ಎನ್ನೋದು ನನ್ನ ಕನಸ್ಸಾಗಿತ್ತು ಈಗ ಅದು ಈ ಚಿತ್ರದ ಮೂಲಕ ನನಸ್ಸಾಗಿದೆ ಎನ್ನುತ್ತಾರೆ ನೀತು.
ಈ ಚಿತ್ರದ ನಿರ್ಮಾಣದ ಹೊಣೆಯನ್ನು ಚಿನ್ನಾ ಅವರ ಸಂಬಂಕರೇ ಹೊತ್ತುಕೊಂಡಿದ್ದಾರೆ. ಕರಾವಳಿಯ ಪ್ರತಿಭೆಗಳಿಗೆ ಚಿತ್ರದಲ್ಲಿ ಹೆಚ್ಚು ಅವಕಾಶ ಕಲ್ಪಿಸುವುದಕ್ಕೆ ಚಿನ್ನಾ ಯೋಚಿಸುತ್ತಿದ್ದಾರೆ. ವಿ.ಮನೋಹರ್ ಅವರ ಸಂಗೀತ ಚಿತ್ರಕ್ಕಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಕಾರ್ಕಳ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲವೊಂದು ತಿಳಿಸಿದೆ.

Sunday, March 27, 2011

ಇದು ಮಣಿ ಮ್ಯಾಟರ್

ಟಾಲಿವುಡ್ ಕಮ್ ಕಾಲಿವುಡ್‌ನಲ್ಲಿ ಎರಡು ಓಡುವ ಕುದುರೆಗಳನ್ನು ಜತೆಯಾಗಿ ಕಟ್ಟುವ ಯತ್ನ ಸಾಗುತ್ತಿದೆ. ತಮಿಳಿನ ಸ್ಟಾರ್ ಚಿಯನ್ ವಿಕ್ರಂ ಹಾಗೂ ಸೂರ್ಯ ಜತೆಯಾಗಿ ಚಿತ್ರವೊಂದರಲ್ಲಿ ಬಣ್ಣ ಹಾಕುತ್ತಿದ್ದಾರೆ. ಏನ್ ವಿಷ್ಯಾ ಕೇಳಿ ಬಿಡೋಣ...

ಎರಡು ಓಡುವ ಕುದುರೆಗಳನ್ನು ಒಂದೇ ಗೂಟಕ್ಕೆ ಕಟ್ಟುವ ಯತ್ನ ತುಂಬಾ ಈಸಿ ಅಲ್ಲ ಬಿಡಿ. ಅಂತಹ ಒಂದು ದೊಡ್ಡ ಸಾಹಸ ಕೆಲಸಕ್ಕೆ ಟಾಲಿವುಡ್ ಹಾಗೂ ಕಾಲಿವುಡ್ ರೆಡಿಯಾಗಿದೆ. ತಮಿಳಿನಲ್ಲಿ ಸ್ಟಾರ್ ನಟರಾದ ಚಿಯನ್ ವಿಕ್ರಂ ಹಾಗೂ ಸೂರ್ಯ ಜತೆಯಾಗಿ ನಟಿಸುವ ಚಿತ್ರವೊಂದಕ್ಕೆ ಸ್ಕೆಚ್ ಮಾಡಲಾಗಿದೆ. ಅದೇ ಮಾದರಿಯಲ್ಲಿ ಟಾಲಿವುಡ್‌ನಲ್ಲಿ ಚಿಯನ್ ವಿಕ್ರಂ ಜತೆಯಾಗಿ ತೆಲುಗಿನ ನಟ ಮಹೇಶ್ ಬಾಬು ತೊಡೆ ತಟ್ಟಲಿದ್ದಾರೆ. ಇದೊಂದು ಭರ್ಜರಿ ಹಿಸ್ಟೋರಿಕಲ್ ಬೇಸ್ಡ್ ಸಿನ್ಮಾ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಸನ್ ಮೂವೀಸ್ ಚಿತ್ರಕ್ಕೆ ಹಣ ಸುರಿಯುತ್ತಿದ್ದಾರೆ.
‘ಪೊನ್ನಿಯಾನಿ ಸೆಲ್ವಂ’ ಎನ್ನುವ ಐತಿಹಾಸಿಕ ಕಾದಂಬರಿಯನ್ನು ಮೂಲವಾಗಿ ಇಟ್ಟುಕೊಂಡು ಚೋಳ ಹಾಗೂ ಪಲ್ಲವ ರಾಜಮನೆತನಗಳನ್ನು ಚಿತ್ರದಲ್ಲಿ ತೋರಿಸುವ ಪ್ಲ್ಯಾನ್ ನಡೆಯುತ್ತಿದೆ. ಇದರಲ್ಲಿ ಚಿಯನ್ ವಿಕ್ರಂ ರಾಜ ರಾಜ ಚೋಳ ಹಾಗೂ ಸೂರ್ಯ ಪಲ್ಲವರ ಅರಸನಾದರೆ ಇತ್ತಕಡೆ ತೆಲುಗಿನಲ್ಲಿ ಮಹೇಶ್ ಬಾಬು ಪಲ್ಲವ ರಾಜನಾಗುವ ಸಾಧ್ಯತೆ ಇದೆ. ಎಲ್ಲ ಲೆಕ್ಕಚಾರಗಳು ಇದೇ ಮಾದರಿಯಲ್ಲಿ ಮುಂದುವರಿದರೆ ಸನ್ ಮೂವೀಸ್‌ನಡಿಯಲ್ಲಿ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಈ ಚಿತ್ರವನ್ನು ಡೈರೆಕ್ಟ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಚಿತ್ರಕತೆ ಹಾಗೂ ಸಂಭಾಷಣೆ ಬರೆಯಲು ಖ್ಯಾತ ಚಿತ್ರಕತೆಗಾರ ಜಯ ಮೋಹನ್‌ಗೆ ಸನ್ ಮೂವೀಸ್ ಕಡೆಯಿಂದ ೨ ಕೋಟಿ ರೂ. ಸಂದಾಯವಾಗಿದೆ.
ಚಿತ್ರ ತಮಿಳು, ತೆಲುಗು ಸೇರಿದಂತೆ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಸನ್ ಮೂವೀಸ್‌ನಲ್ಲಿ ತಯಾರಾಗುತ್ತಿರುವ ರಜನಿಕಾಂತ್, ಕಮಲ್ ಜತೆಗಿನ ಚಿತ್ರದ ನಂತರ ಈ ಚಿತ್ರಕ್ಕೆ ಶೂಟಿಂಗ್ ಕೆಲಸಗಳು ಆರಂಭಗೊಳ್ಳಲಿದೆ. ನಿರ್ಮಾಣ ಸಂಸ್ಥೆಯ ಲೆಕ್ಕಚಾರದ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಅತ್ಯಕ ಹಣ ಚೆಲ್ಲಿ ಮಾಡುವ ಸಿನ್ಮಾ ಇದಾಗಲಿದೆಯಂತೆ. ಅದರಲ್ಲೂ ಮಲ್ಟಿ ಸ್ಟಾರ್‌ಗಳನ್ನು ಜತೆಗೆ ಸೇರಿಸಿಕೊಂಡು ನಟರಿಗೆ ಸರಿಯಾದ ನ್ಯಾಯ ನೀಡಲು ಮಣಿರತ್ನಂಗೆ ಮಾತ್ರ ಸಾಧ್ಯ. ಈ ಹಿಂದೆ ವಿಕ್ರಂ ಹಾಗೂ ಸೂರ್ಯ ಇಬ್ಬರು ಮಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕ ಬಾಲರ ‘ ಪಿತಾಮಗನ್’ನಲ್ಲೂ ವಿಕ್ರಂ ಹಾಗೂ ಸೂರ್ಯ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದರು.
ಐತಿಹಾಸಿಕ ಹಾಗೂ ಮಹಾಕಾವ್ಯಗಳನ್ನು ಬೇಸ್ಡ್ ಆಗಿ ಇಟ್ಟುಕೊಂಡು ಸಿನ್ಮಾ ಮಾಡಿ ಸಮಾಜಕ್ಕೆ ಒಂದು ಮೆಸೇಜ್ ಪಾಸ್ ಮಾಡುವುದರಲ್ಲಿ ನಿರ್ದೇಶಕ ಮಣಿರತ್ನಂ ಈಗಾಗಲೇ ತನ್ನ ಚಿತ್ರಗಳ ಮೂಲಕ ಫ್ರೂವ್ ಮಾಡಿದ್ದಾರೆ. ಆಧುನಿಕ ತಮಿಳಿನ ಸಾಹಿತ್ಯ ಲೋಕದ ಮಹಾನ್ ಗ್ರಂಥ ಎಂದೇ ಕರೆಯಲಾಗು ‘ಪೊನ್ನಿಯಾನಿ ಸೆಲ್ವಂ’ ಚಿತ್ರ ರೂಪಕ್ಕೆ ಇಳಿಯುತ್ತಿರುವ ಮಣಿರತ್ನಂ ವೃತ್ತಿ ಬದುಕಿಗೆ ಮತ್ತೊಂದು ಸವಾಲು ಎನ್ನಲು ಅಡ್ಡಿಯಿಲ್ಲ. ‘ರಾವಣನ್’ ಚಿತ್ರದ ಸೋಲಿನ ನಂತರ ದೊಡ್ಡ ಮಟ್ಟದ ಬ್ರೇಕ್‌ಗಾಗಿ ಮಣಿ ಕಾದು ನಿಂತಿದ್ದಾರೆ. ಈ ಚಿತ್ರ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡುತ್ತಾ ಕಾದು ನೋಡಬೇಕು.

Friday, March 25, 2011

ರೇಗೊ ಬಾಲ್ಕನಿ ೧೦೦೦ ನಾಟ್‌ಔಟ್



ಈಟ್ ಜಸ್ಟ್ ಮಿರಾಕಲ್. ನಾನು ಬ್ಲಾಗ್‌ಆರಂಭಿಸಿ ಕೆಲವೇ ದಿನಗಳಾಗಿವೆ. ಆದರೆ ನಿಮ್ಮಿಂದ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಇಷ್ಟೊಂದು ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಪ್ರೀತಿಗೆ ಏನೆನ್ನಬೇಕೋ ಗೊತ್ತಿಲ್ಲ. ದಿನಕ್ಕೆ ನೂರಾರು ಮಂದಿ ನನ್ನ ಬ್ಲಾಗ್ ವಿಸಿಟ್ ಮಾಡುತ್ತಾರೆ. ಅಲ್ಲಿನ ವಿಷಯನ್ನು ಓದಿ ಪ್ರೀತಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ತಪ್ಪಿದ್ದರೆ ‘ಹಾಗಲ್ಲ, ಹೀಗೆ’ ಎಂದು ತಿಳಿ ಹೇಳುತ್ತಾರೆ. ನೂರಾರು ಎಸ್‌ಎಂಎಸ್‌ಗಳು ನನ್ನ ಇನ್‌ಬಾಕ್ಸ್ ತುಂಬಿಸಿವೆ. ಸಾಧ್ಯವಾದಷ್ಟು ಪ್ರತಿಕ್ರಿಯಿಸಿದ್ದೇನೆ. ಈಗ ಬ್ಲಾಗ್‌ಗೆ ಬಂದು ಹೋದವರ ಸಂಖ್ಯೆ ೧೦೦೦ದ ಗಡಿ ದಾಟಿ ನಿಂತಿದೆ. ಒಂದು ಖುಷಿಯ ವಿಷ್ಯಾ ಏನಪ್ಪಾ ಅಂದರೆ ಬ್ಲಾಗ್ ಪ್ರಿಯರ ಸಂಖ್ಯೆ ಇನ್ನೂ ಕೂಡ ಇಳಿಮುಖವಾಗಿಲ್ಲ. ಬಾಲ್ಕನಿಗೆ ಬಂದು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗುತ್ತಿದೆ.
ಫ್ಲ್ಯಾಶ್‌ಬ್ಯಾಕ್ ಮಾರಾಯ್ರೆ:
ಬ್ಲಾಗ್ ಆರಂಭಿಸಬೇಕೆಂಬ ಯಾವುದೇ ಒಂದು ಖಚಿತ ಉದ್ದೇಶ ನನಗಿರಲಿಲ್ಲ. ನನ್ನ ಅಚ್ಚುಮೆಚ್ಚಿನ ಹಾಗೂ ಕನ್ನಡಿಗರ ಸಮಸ್ತ ಹೆಮ್ಮೆಯ ದಿನಪತ್ರಿಕೆ ವಿಜಯ ಕರ್ನಾಟಕದ ಪುಟ್ಟ ಕೂಸು ಲವಲವಿಕೆಯಲ್ಲಿ ಬರುತ್ತಿದ್ದ ನನ್ನ ನೂರಾರು ಲೇಖನಗಳು ಎಲ್ಲಿಯೋ ಕಳೆದು ಹೋಗುತ್ತಿದ್ದವು.. ನಿಮ್ಮ ಲೇಖನಗಳನ್ನು ಮತ್ತೊಂದು ಸಾರಿ ಓದಬೇಕು, ನನಗೆ ಪತ್ರಿಕೆ ಸಿಕ್ಕಿಲ್ಲ ಲೇಖನವನ್ನು ಎಲ್ಲಿ ಓದಬಹುದು ಮೊದಲಾದ ನಾನಾ ಸಮಸ್ಯೆಗಳಿಂದ ಕೂಡಿದ ದೂರವಾಣಿ ಕರೆಗಳು,ನನ್ನ ಎಲ್ಲ ಲೇಖನಗಳನ್ನು ಒಟ್ಟು ಸೇರಿಸಬೇಕೆಂಬ ಪುಟ್ಟ ಆಸೆಯ ಪ್ರತಿಫಲವೇ ಈ ರೇಗೊ ಬಾಲ್ಕನಿ ಎನ್ನುವ ಬ್ಲಾಗ್ ನಿಮ್ಮ ಮುಂದೆ ಬಂದು ನಿಂತಿದೆ.
ಕಳೆದ ಒಂದೂವರೆ ವರ್ಷದಿಂದ ನಾನು ಲವಲವಿಕೆಯಲ್ಲಿ ಬರೆದ ಎಲ್ಲ ಲೇಖನಗಳನ್ನು ಈ ಬ್ಲಾಗ್‌ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ಬಹಳಷ್ಟು ಜನ ಖುಷಿಯಿಂದ ಓದುತ್ತಿದ್ದಾರೆ. ಅದರಲ್ಲೂ ಬ್ಲಾಗ್‌ನ ಡಿಸೈನಿಂಗ್ ವರ್ಕ್ ಮಾಡಿದ ಆಂಟೋ, ಟೆಕ್ನಿಕಲಿ ಮಾತು ಕಳಿಸಿಕೊಟ್ಟ ಜಿ.ಕೆ.ಹೆಗಡೆ, ಬ್ಲಾಗ್‌ನ ಕಲ್ಪನೆ ಐಡಿಯಾ ಕೊಟ್ಟ ಸುನೀಲ್, ಬ್ಲಾಗ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನನ್ನ ಬಾಸ್ ಕುಮಾರನಾಥ್, ಸಾವಿರ ಕ್ಲಿಕ್ ಆಯಿತು ಎಂದು ಖುಷಿಯಿಂದ ಕಾರ್ಟೂನ್ ಕಳುಹಿಸಿ ಕೊಟ್ಟ ನನ್ನ ಹಿರಿಯ ಗೆಳೆಯ ಪ್ರಕಾಶ್ ಶೆಟ್ಟಿ, ಪ್ರತಿ ಆಪ್‌ಡೇಟ್‌ನಲ್ಲೂ ಕಾಮೆಂಟ್ ಕೊಡುವ ರವಿ, ಬ್ಲಾಗ್‌ನ್ನು ಒಂದು ತಿಂಗಳಲ್ಲಿಯೇ ನಿಲ್ಲಿಸಬೇಡ ಎಂದು ಸಲಹೆ ನೀಡಿದ ಕನ್ನಡ ಓದಲು ಗೊತ್ತಿಲ್ಲದ ಕೇರಳದ ಹುಡುಗಿ ನಿರಂಜಾಲಿ ವರ್ಮಾ,ನನ್ನನ್ನು ಬೆಳೆಸಿದ ವಿಜಯಕರ್ನಾಟಕದ ಲವಲವಿಕೆಯ ತಂಡ, ಪ್ರತಿ ಹೆಜ್ಜೆಯಲ್ಲೂ ಸಾಥ್ ಕೊಡುವ ನನ್ನ ಓದುಗ ವರ್ಗಕ್ಕೊಂದು ಗ್ರೇಟ್ ಥ್ಯಾಂಕ್ಸ್.

ಇಂತೀ ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು.

ನಾಗದೋಷ ಪರಿಹಾರಕ್ಕೆ ಮಲ್ಲಿಕಾ ಕರಾವಳಿಯ ಕುಕ್ಕೆಗೆ...


‘ಹಿಸ್’ ಚಿತ್ರದಲ್ಲಿ ನಾಗಿಣಿಯಾಗಿ ಹರಿದಾಡಿದ ಮಲ್ಲಿಕಾರಿಗೆ ಈಗ ನಾಗದೋಷ ಕಾಡುತ್ತಿದೆಯಂತೆ ! ಈ ದೋಷ ಪರಿಹಾರದ ಮಾರ್ಗವಾಗಿ ‘ಸರ್ಪ ಸಂಸ್ಕಾರ’ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಲ್ಲಿಕಾ ಶೆರವಾತ್ ಬರುತ್ತಿದ್ದಾಳೆ ಎನ್ನೋದು ಲವಲವಿಕೆಗೆ ಸಿಕ್ಕಿದ ನ್ಯೂಸ್...

ಸೆಕ್ಸಿ ತಾರೆ ಮಲ್ಲಿಕಾರ ಬಹುನಿರೀಕ್ಷಿತ ಹಾಲಿವುಡ್ ಚಿತ್ರ ‘ ಹಿಸ್’ ಪರದೆಯ ಮ್ಯಾಲೆ ಭರ್ಜರಿಯಾಗಿ ಹರಿದಾಡುತ್ತಿದೆ. ಆಂಗ್ಲ ಭಾಷೆಯ ಜತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡ ‘ಹಿಸ್ ’ ಮಲ್ಲಿಕಾರ ಬಣ್ಣದ ಕೆರಿಯರ್‌ಗೆ ಹೊಸ ಟ್ವೀಸ್ಟ್ ಕೊಟ್ಟಿದೆ. ‘ಹಿಸ್’ ತೆರೆ ಕಾಣುತ್ತಿದ್ದಂತೆ ಹಾಲಿವುಡ್‌ನ ಎರಡು ಚಿತ್ರಗಳು ಮಲ್ಲಿಕಾರ ಜೋಳಿಗೆಗೆ ಬಂದು ಬಿದ್ದಿದೆ. ‘ಹಿಸ್’ನ ತೆರೆ ಮೇಲಿನ ಓಡಾಟ ಮಲ್ಲಿಕಾರಿಗೆ ಖುಶಿ ಕೊಟ್ಟರೂ ಅಷ್ಟೇ ಹೆದರಿಕೆ ಹುಟ್ಟಿಸಿದೆ ಎನ್ನೋದು ಅವರ ಆಪ್ತ ವಲಯದ ಮಾತು. ‘ಹಿಸ್’ ಚಿತ್ರದಲ್ಲಿ ಮಲ್ಲಿಕಾರದ್ದು ನಾಗಿಣಿ ಪಾತ್ರ. ಅದರಲ್ಲೂ ಬಾಲಿವುಡ್ ಈ ಹಿಂದೆ ನೋಡಿರದ ಹಾಗೂ ಮಾಡಿರದ ಹೈ- ಕ್ಲಾಸ್ ನಾಗಿಣಿಯಾಗಿ ಮಲ್ಲಿಕಾ ಚಿತ್ರದ ತುಂಬಾ ಹರಿದಾಡಿ ಬಿಡುತ್ತಾರೆ.
ನಾಗಿಣಿ ಪಾತ್ರ ಮಾಡಿದವರಿಗೆ ನಾಗನ ದೋಷ ಬಂದು ಬಿಡುತ್ತದೆ ಎನ್ನೋದು ಮಲ್ಲಿಕಾರಿಗೆ ಈಗ ಭಯ ಕಾಡುತ್ತಿದೆ. ಈ ದೋಷದ ಪರಿಹಾರಕ್ಕೆ ತಿರುವಂತಪುರದ ರಾಣಿ ಲಕ್ಷ್ಮೀಬಾಯಿ ಮಲ್ಲಿಕಾರಿಗೆ ನಾಗನ ಆರಾಧಕ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಇತ್ತೀಚೆಗಷ್ಟೇ ರಾಣಿ ಲಕ್ಷ್ಮೀ ಬಾಯಿ ಸಲಹೆ ಮೇರೆಗೆ ಮಲ್ಲಿಕಾ ಶೆರವಾತ್ ಕೇರಳದ ಪ್ರಸಿದ್ಧ ನಾಗ ಆರಾಧಕ ಕ್ಷೇತ್ರ ಶ್ರೀ ನಾಗಾರಾಜ ದೇವಸ್ಥಾನಕ್ಕೆ ಬಂದಿದ್ದರು. ಅವರ ಜತೆಯಲ್ಲಿ ಹಿಸ್ ಟೀಮ್ ಲೀಡರ್ ಜೆನ್ನಿಫರ್ ಲಿಂಚ್, ಚಿತ್ರದ ನಿರ್ಮಾಪಕರು ಹಾಗೂ ತಾಂತ್ರಿಕ ತಂಡ ಕೂಡ ಇತ್ತು. ಅದಕ್ಕಾಗಿ ನಾಗನ ಪೂಜೆ ಮಾಡುವ ದೇವಸ್ಥಾನಗಳಿಗೆ ಭೇಟಿ ಕೊಡುವ ಯೋಜನೆಯೊಂದನ್ನು ಮಲ್ಲಿಕಾ ಶೆರವಾತ್ ತಯಾರಿಸಿದ್ದಾರೆ. ಅದರಲ್ಲಿ ಕರಾವಳಿಯ ನಾಗನ ಆರಾಧಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ.
ಮಲ್ಲಿಕಾ ಶೆರವಾತ್ ತನ್ನ ಮುಂದಿನ ಹಾಲಿವುಡ್ ಪ್ರಾಜೆಕ್ಟ್‌ಗಳ ಜತೆಯಲ್ಲಿ ಬಾಲಿವುಡ್‌ನ ದಮಾಲ್-೨ ಚಿತ್ರೀಕರಣದ ಡೇಟ್ಸ್‌ಗಳು ಕ್ಲ್ಯಾಷ್ ಆಗುತ್ತಿರುವುದರಿಂದ ಬಿಡುವು ಮಾಡಿಕೊಂಡು ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿಢೀರ್ ಭೇಟಿ ಕೊಟ್ಟು ‘ಸರ್ಪ ಸಂಸ್ಕಾರ’ ಪೂಜಾವಿಯಲ್ಲಿ ಭಾಗವಹಿಸಲಿದ್ದಾರೆ. ಇವರ ಜತೆಗೆ ತಿರುವಂತಪುರದ ರಾಣಿ ಲಕ್ಷ್ಮೀ ಬಾಯಿ, ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋವಿಂದ ಮೆನನ್, ನಿರ್ದೇಶಕಿ ಜೆನ್ನಿಫರ್ ಲಿಂಚ್ ಕೂಡ ಬರುವ ಸಾಧ್ಯತೆಗಳಿವೆ ಎಂದು ಮಲ್ಲಿಕಾರ ಆಪ್ತ ವಲಯದ ಮೂಲವೊಂದು ತಿಳಿಸಿದೆ. ಈಗಾಗಲೇ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಾಲಿವುಡ್- ಸ್ಯಾಂಡಲ್‌ವುಡ್ ನಟ- ನಟಿಯರ, ರಾಜಕಾರಣಿಗಳ, ಕ್ರೀಡಾಪಟುಗಳ ಮೆಚ್ಚಿನ ಧಾರ್ಮಿಕ ಕ್ಷೇತ್ರವಾಗಿ ಬದಲಾಗಿದೆ. ಈ ದೇವಸ್ಥಾನಕ್ಕೆ ತಿಂಗಳಿಗೆ ಒಬ್ಬರಂತೆ ಸೆಲೆಬ್ರಿಟಿಗಳು ಮಾಧ್ಯಮಗಳ ಕಣ್ಣು ತಪ್ಪಿಸಿಕೊಂಡು ಬಂದು ಹೋಗುತ್ತಾರೆ. ಈಗ ಮಲ್ಲಿಕಾರ ಸರದಿ ಬಂದಿದೆ. ಕರಾವಳಿಗೆ ಮಲ್ಲಿಕಾ ಯಾವ ಡ್ರೆಸ್‌ನಲ್ಲಿ ಬರುತ್ತಾರೆ ಎನ್ನೋದು ಕಾದು ನೋಡಬೇಕು.

Thursday, March 24, 2011

ಬಾಲಿವುಡ್ ‘ಅ ’ಸಾಮಿ


ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಕೊಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ ಈಗ ನಾಲ್ಕನೇ ಮದುವೆಯಾಗಿರೋದು ಗೊತ್ತಾ..?

ಲಿಫ್ಟ್ ಮಾಡಲು ಸಾಧ್ಯವಿಲ್ಲದೇ ಒದ್ದಾಡುವ ಟನ್‌ಗಟ್ಟಲೆ ತೂಗುವ ದೇಹ. ರಾಗಿ ಮುದ್ದೆಯನ್ನು ಬೀಟ್ ಮಾಡಿ ಬಿಡುವ ಮುದ್ದು ಮುದ್ದಾದ ಮೊಗ. ಹುಡುಗಿಯರು ಫೀದಾ ಆಗುವ ನಗು. ಭಗ್ನ ಪ್ರೇಮಿಗಳನ್ನು ತಣ್ಣನೆ ಮಾಡಿಬಿಡುವಂತಹ ವಾಯ್ಸ್ ಇದು ಬಾಲಿವುಡ್ ಸಿಂಗರ್ ಅದ್ನಾನ್ ಸಾಮಿ ಜಸ್ಟ್ ಇಂಟರ್‌ಡಕ್ಷನ್. ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಕೊಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ ಎಂದರೆ ಅದು ಹೆಚ್ಚುಗಾರಿಕೆಯ ಮಾತಲ್ಲ.
ಅದ್ನಾನ್ ನಿಜಕ್ಕೂ ಭಾರತದವನೇನಲ್ಲ. ಆದರೆ ಭಾರತದ ಸಂಗೀತ ಪ್ರೇಮಿಗಳು ಆತನಿಗೆ ಪ್ರೀತಿಯನ್ನು ತುಂಬಿ ತುಂಬಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಭಾರತದಲ್ಲಿ ವಾಸಿಸುತ್ತಿದ್ದ ತಂದೆ ಮತ್ತು ಭಾರತೀಯ ಮುಸ್ಲಿಂ ತಾಯಿಗೆ ಲಂಡನ್‌ನಲ್ಲಿ ಹುಟ್ಟಿದ ಮಗ ಅದ್ನಾನ್ ಸಾಮಿ. ಅದಕ್ಕಿಂತಲೂ ಹೆಚ್ಚಾಗಿ ಅದ್ನಾನ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಮಾತ್ರ ವಿವಾಹ ಹಾಗೂ ಡೈವೋರ್ಸ್‌ನಿಂದ ಎಂದರೆ ಅದು ತಪ್ಪಾಗಲಾರದು. ಇತ್ತೀಚೆಗಷ್ಟೇ ಆತನ ಮೂರನೇ ಪತ್ನಿ ಸಬಾಹ್ ಗಲಾಧರಿಗೆ ಸೋಡಾ ಚೀಟಿ ಕೊಟ್ಟು ಕೆಲವೇ ಟೈಮ್ ಮುಗಿದಿದೆ. ಈಗ ಮತ್ತೊಂದು ಹುಡುಗಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ.
ಅಪಘಾನಿಸ್ತಾನದಲ್ಲಿ ಹುಟ್ಟಿ ಲಂಡನ್‌ನ ಪ್ರಜೆ ಎನ್ನಿಸಿಕೊಂಡಿರುವ ರೋಯಾ ಫೈರ್‌ಬೀ ಅದ್ನಾನ್ ಸಾಮಿಯ ಲೇಟೆಸ್ಟ್ ಪತ್ನಿ ಎನ್ನಿಸಿಕೊಂಡಿದ್ದಾರೆ. ಅಮೆರಿಕದ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ರೋಯಾ ಹಾಗೂ ಅದ್ನಾನ್ ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಪ್ರಾಜೆಕ್ಟ್ ವರ್ಕ್‌ಗಾಗಿ ಭಾರತಕ್ಕೆ ಭೇಟಿ ನೀಡಿದ ರೋಯಾ ಅದ್ನಾನ್ ಸಾಮಿಯ ಸಂಗೀತಕ್ಕೆ ಮರಳಾಗಿ ಹೋಗಿದ್ದಳು. ಅಲ್ಲಿಯೇ ಇಬ್ಬರ ನಡುವೆ ಪ್ರೀತಿ ಚಿಗುರಿ ನಿಂತು ವಿವಾಹದಲ್ಲಿ ಅಂತ್ಯ ಕಂಡಿದ್ದು ಮಾತ್ರ ಖುಶಿಯ ವಿಚಾರ ಅನ್ನಿ. ಈ ಮೂಲಕ ಅದ್ನಾನ್ ನಾಲ್ಕನೇ ಪತ್ನಿಯ ಪತಿಯಾಗಿರೋದು ಮಾತ್ರ ವಿಶೇಷ .
ಸಾಮಿಯ ಮ್ಯಾರೇಜ್ ಕತೆ:
ಮೊದಲ ಪತ್ನಿಯ ವಿವರಗಳಂತೂ ಖುದ್ದು ಅದ್ನಾನ್‌ಗೆ ಗೊತ್ತಿರಲು ಸಾಧ್ಯವಿಲ್ಲ. ಎಲ್ಲಿದ್ದಾಳೋ... ಹೇಗಿದ್ದಾಳೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಂದಹಾಗೆ ಸಾಮಿಯ ಎರಡನೇ ಪತ್ನಿ ಝೇಬಾ ಭಕ್ತಿಯಾರ್. ಝೇಬಾಗೆ ೧೯೯೭ರಲ್ಲಿ ಡೈವೋರ್ಸ್ ಕೊಟ್ಟ ನಂತರ ದುಬಾಯಿ ಮೂಲದ ಸಬಾಹ್ ಗಲಾಧರಿ ಜತೆ ಪ್ರೀತಿ ಹುಟ್ಟಿಕೊಂಡು ವಿವಾಹದಲ್ಲಿ ಅಂತ್ಯ ಕಂಡಿತ್ತು. ಆಕೆಗೂ ಅದು ಮೊದಲ ಮದುವೆಯಲ್ಲ ! ಈ ಮೊದಲೇ ಅವಳು ಎರಡು ಗಂಡಂದಿರ ಮುದ್ದಿನ ಪತ್ನಿಯಾಗಿದ್ದವಳು..!!
ಅಂತೂ ಇಂತೂ ೧೦ ವರ್ಷಗಳ ಕಾಲ ಸಂಸಾರದಲ್ಲಿ ಸಾರ ಇಲ್ಲ ಎಂದುಕೊಂಡು ಅದ್ನಾನ್- ಸಬಾಹ್ ಬೇರೆ ಬೇರೆ ಆಗಿ ಹೋದರು. ಆದರೆ ನಂತರ ಮತ್ತೊಂದು ಸಾರಿ ಜತೆಯಾದರು. ಮತ್ತೆ ಬೇರೆ ಬೇರೆಯಾದರು. ಇವೆಲ್ಲದರ ನಡುವೆ ಅದ್ನಾನ್ ಸಾಮಿ ಬಾಟಲಿಗಳಿಗೆ ಜೋತು ಬಿದ್ದ, ಅದರ ಸುತ್ತಮುತ್ತ ನರಳಾಡಿದ, ಬಾಲಿವುಡ್ ನಟಿ ಅಮಿಷಾ ಪಟೇಲ್ ಜತೆಗೂ ಲಿಂಕ್ ಇದೆ ಎನ್ನುವ ಗಾಸಿಪ್‌ಗಳು ಎರ್ರಾಬಿರ್ರಿ ಹರಿದಾಡಿಕೊಂಡವು. ಕೊನೆಗೂ ಅದ್ನಾನ್‌ಗೆ ಹೊಸ ಲೈಫ್ ಕೊಟ್ಟದ್ದು ಮಾತ್ರ ರೋಯಾ. ಅವಳಿಂದಾಗಿ ಅದ್ನಾನ್ ಬಾಟಲಿ ನೋಡಿ ಮಲಗಿಲ್ಲ. ಬಾಲಿವುಡ್‌ನಲ್ಲೂ ಆತನ ಸಂಗೀತಕ್ಕೆ ಈಗ ಕಿಮ್ಮತ್ತು ಬರಲಾರಂಭವಾಗಿದೆ. ಬೇರೆ ಸಂಗೀತ ನಿರ್ದೇಶಕರ ಕೈಕೆಳಗೆ ಹಾಡುವುದಕ್ಕೂ ರೆಡಿಯಾಗಿದ್ದಾನೆ. ಅದೆಲ್ಲ ಬಿಟ್ಟು ಬಿಡಿ ಸಾಮಿಯ ಮದುವೆ ಕತೆ ಇಲ್ಲಿಗೆ ಮುಗಿದು ಹೋಗುತ್ತಾ ಎನ್ನುವುದು ಡಾಲರ್ ಪ್ರಶ್ನೆ.

ಕೊಚ್ಚಿಯಲ್ಲಿ ‘ಆಸೀನ್’ ಬ್ರಾಂಡ್ !


ಇದು ಈಗ ಹೊತ್ತಿ ಉರಿಯುತ್ತಿರುವ ಐಪಿಎಲ್‌ನ ಕೊಚ್ಚಿ ತಂಡದ ಬಿಸಿ ಬಿಸಿ ಮಾತು. ಲೋಕಸಭೆ- ರಾಜ್ಯಸಭೆಯಲ್ಲಿ ವಿವಾದ ಎಬ್ಬಿಸುತ್ತಿರುವ ಕೊಚ್ಚಿ ತಂಡದ ಸಿಕ್ರೇಟ್ ಮಾತು. ಮುಂದಿನ ಐ ಪಿ ಎಲ್ ಸರಣಿಯಲ್ಲಿ ಬಾಲಿವುಡ್ ನಟಿ ಆಸೀನ್ ಕೊಚ್ಚಿ ತಂಡದ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ. ಕೊಚ್ಚಿ ತಂಡದ ಸದಸ್ಯರ ಜತೆಯಲ್ಲಿ ಅವರು ಕುಣಿಯಲಿದ್ದಾರೆ.


ಬಾಲಿವುಡ್ ಈಗ ಕ್ರಿಕೆಟ್‌ನಲ್ಲಿ ತೇಲುತ್ತಿದೆ. ಇದು ಐಪಿ ಎಲ್ ಟಿ-೨೦ಯನ್ನು ನೋಡುತ್ತಾ ಇದ್ದಾಗ ಪ್ರೇಕ್ಷಕರ ಮುಂದೆ ನಿಲ್ಲುವ ಸತ್ಯ. ಆದರೆ ಬರುವ ಐ ಪಿ ಎಲ್ ಕ್ರಿಕೆಟ್ ರಣ ರಂಗ ಮತ್ತಷ್ಟೂ ಕಾವೇರಲಿದೆ. ಇಟ್‌ಮೀನ್ಸ್ ಐ ಪಿ ಎಲ್ ತಂಡಗಳ ಸಂಖ್ಯೆಯಲ್ಲಿ ಈಗ ದಿಢೀರ್ ಬೆಳವಣಿಗೆಗಳು ಕಾಣಿಸಿಕೊಂಡಿದೆ. ೮ ತಂಡಗಳ ಜಾಗದಲ್ಲಿ ಈಗ ಮತ್ತೆರಡು ತಂಡಗಳು ಬಂದು ಸೇರಿಕೊಂಡಿದೆ. ಕೇರಳಿಗರ ಕೊಚ್ಚಿ ಹಾಗೂ ಪುಣೆ ಬರುವ ಐ ಪಿ ಎಲ್‌ನಲ್ಲಿ ದೊಡ್ಡ ಸದ್ದು ಮಾಡಲಿದೆ ಎನ್ನೋದು ಐ ಪಿ ಎಲ್ ಮೂಲಗಳಿಂದ ಬಂದ ಮಾತು. ಈಗಾಗಲೇ ಕೇರಳಿಗರ ಕೊಚ್ಚಿ ತಂಡ ವಿವಾದಗಳ ಮೇಲೆ ನಡೆದಾಡುತ್ತಿದೆ. ದಿನಕ್ಕೊಂದು ಹೊಸ ವಿವಾದದಲ್ಲಿರುವ ಕೊಚ್ಚಿಗೆ ಈಗ ಬಾಲಿವುಡ್ ನಟಿ ಆಸೀನ್ ಬ್ರಾಂಡ್ ಅಂಬಾಸೀಡರ್ ಆಗಲಿದ್ದಾರೆ ಎಂಬ ಸುದ್ದಿ ಮುಂಬಯಿಯ ಪಡಸಾಲೆಯಿಂದ ರವಾನೆಯಾಗಿದೆ.
ಲೋಕಸಭೆ- ರಾಜ್ಯಸಭೆಯಲ್ಲಿ ಕೊಚ್ಚಿ ತಂಡ ಎಬ್ಬಿಸಿದ ಕ್ರೇಜ್(ವಿವಾದ)ಗಳ ನಡುವೆ ಕೊಚ್ಚಿ ತನ್ನ ತಂಡಕ್ಕೆ ರಾಯಭಾರಿಯನ್ನು ಹುಡುಕಿ ತೆಗೆದುಕೊಂಡಿದೆ ಎಂಬ ಸುದ್ದಿ ಈಗ ಬಹಿರಂಗವಾಗಿದೆ. ಅದರಲ್ಲೂ ಕೇರಳದ ಬಗ್ಗೆ ಬಾಲಿವುಡ್‌ನಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ ಆಸೀನ್ ತಮ್ಮ ತಂಡದ ಬ್ರಾಂಡ್ ಎಂದು ಕೊಚ್ಚಿ ತಂಡದ ಮಾಧ್ಯಮ ಪ್ರತಿನಿ ಮನೋಜ್ ಮಾಧವನ್ ತಿಳಿಸಿದ್ದಾರೆ. ಈಗಾಗಲೇ ಆಸೀನ್ ರಾಯಭಾರಿತ್ವಕ್ಕೆ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿಕೊಂಡಿದ್ದಾರೆ. ಮುಂದಿನ ಐ ಪಿ ಎಲ್ ಆರಂಭಕ್ಕೂ ಮೊದಲು ಆಸೀನ್ ತಂಡದ ಸದಸ್ಯರಿಗೆ ಹುರುಪು ತುಂಬಲು ಬರುತ್ತಾರೆ ಎಂದು ಆಸೀನ್ ತಂದೆ ಜೋಸಫ್ ತೊಟ್ಟುಮೊಕ್ಕಲ್ ಮಾತುಗಳ ಮೂಲಕ ತಲೆಯಾಡಿಸಿದ್ದಾರೆ.
‘ಆಸೀನ್ ಮೂಲತಃ ಕೇರಳದ ಹುಡುಗಿ. ಮಲೆಯಾಳ ಚಿತ್ರರಂಗದಿಂದ ಆರಂಭವಾದ ನಟನಾ ವೃತ್ತಿ ಈಗ ಬಾಲಿವುಡ್ ಮಟ್ಟಕ್ಕೂ ಬೆಳೆದು ನಿಂತಿದೆ. ಈ ಬ್ರಾಂಡ್ ಅಂಬಾಸೀಡರ್ ಸ್ಪರ್ಧೆಯಲ್ಲಿ ನಟಿ ವಿದ್ಯಾ ಬಾಲನ್ ಕೂಡ ಇದ್ದರು. ಆದರೆ ಈ ರಾಯಭಾರಿತ್ವಕ್ಕೆ ಅವರು ನಾಟ್ ಓಕೆ ಎಂದ ಮೇಲೆ ಈ ಅವಕಾಶ ಆಸೀನ್ ಪಾಲಿಗೆ ಬಂದಿದೆ. ಆಸೀನ್ ಯೂತ್ ಮೊಡೆಲ್ ಆಗಿ ಯುವಜನತೆಯ ಮನ ಗೆದ್ದಿದ್ದಾರೆ ’ ಎಂದು ಮನೋಜ್ ಗುಟ್ಟಾಗಿ ತಿಳಿಸಿದ್ದಾರೆ. ಮುಂದಿನ ಐಪಿಎಲ್ ಆರಂಭದಲ್ಲಿ ಹೊಸ ಕೊಚ್ಚಿ ತಂಡದ ಜತೆಯಲ್ಲಿ ಆಸೀನ್ ಕೂಡ ತಮ್ಮ ತಂಡಕ್ಕೆ ಬ್ಯಾಟಿಂಗ್ ಮಾಡುತ್ತಾರೆ. ಅವರ ಆಟದ ಪರಿ ನೋಡಬೇಕಾದರೆ ಮುಂದಿನ ವರ್ಷ ಕ್ರಿಕೆಟ್ ಗ್ಯಾಲರಿ ಬುಕ್ ಮಾಡಿಬಿಡಿ.
ಟೂ ಸಿಕ್ರೇಟ್ ಮ್ಯಾಟರ್:
ಐಪಿ ಎಲ್‌ನಲ್ಲಿ ಕೊಚ್ಚಿ ತಂಡ ಈಗಾಗಲೇ ಬಹಳಷ್ಟು ಪ್ರಚಾರವನ್ನು ಪಡೆದುಕೊಂಡಿದೆ. ಆರಂಭದಲ್ಲಿ ಕೊಚ್ಚಿ ತಂಡದ ಬಿಡ್ಡಿಂಗ್‌ನಿಂದ ಹಿಡಿದು ಇಂದಿನವರೆಗೂ ಅದು ಮಾಡುತ್ತಿರುವುದು ಗರಂ ಸುದ್ದಿಯೇ ಆಗಿ ಹೋಗಿದೆ. ಮಲಯಾಳ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ ಲಾಲ್(ಲಾಲೆಟಾ), ಬಾಲಿವುಡ್ ನಿರ್ದೇಶಕ ಪ್ರಿಯದರ್ಶನ್ ( ಪ್ರಿಯಾನ್ ) ಕೂಡ ಕೊಚ್ಚಿ ಬ್ರಾಂಡ್ ಅಂಬಾಸೀಡರ್‌ಗಳು. ಇದರ ಹಿಂದೆ ಈ ಇಬ್ಬರು ಕೊಚ್ಚಿ ಟೀಮ್‌ಗಾಗಿ ಹಣ ಹೂಡಿದ್ದಾರೆ. ಈಗಾಗಲೇ ಕೊಚ್ಚಿ ಟೀಮ್‌ಗೆ ‘ಸಿಟಿ ಕ್ರಿಕೆಟರ್‍ಸ್’ ಎಂದು ನಾಮಕರಣವನ್ನು ಗುಪ್ತವಾಗಿ ಮಾಡಲಾಗಿದೆ . ಇವರಿಬ್ಬರೂ ಬಾಲ್ಯದಲ್ಲಿ ಲೋಕಲ್ ತಂಡದ ಜತೆಯಲ್ಲಿ ಕ್ರಿಕೆಟ್ ಆಡುತ್ತಿದ್ದವರು. ಪ್ರಿಯಾನ್ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದರೆ, ಲಾಲೆಟಾ ಆಲ್ ರೌಂಟರ್ ಆಟಗಾರನಂತೆ. ಕ್ರಿಕೆಟ್‌ನ ಒಡನಾಟವಿದ್ದ ಕೇರಳದ ಮಹಮ್ಮದ್ ನಿಯಾಜ್, ಮಹಮ್ಮದ್ ಶಾನೌತ್, ರೋಹನ್ ಪ್ರೇಮ್, ಪಿ.ಪ್ರಶಾಂತ್ ಮತ್ತು ಸಂಜು ವಿ. ಸ್ಯಾಮ್‌ಸನ್ ಶಾರುಕ್ ಖಾನ್‌ರ ಕೊಲ್ಕತ್ತಾ ನೈಟ್ ರೈಡರ್‍ಸ್ ತಂಡದಲ್ಲಿ ಜಾಗ ಪಡೆಯಲು ಪ್ರಿಯಾನ್ ಬಹಳ ಮಟ್ಟಿಗೆ ಕಾರಣವಾಗಿದ್ದರು ಎಂದು ಗುಟ್ಟಾಗಿ ತಿಳಿದು ಬಂದ ವಿಚಾರ.

Wednesday, March 23, 2011

ಲಕ್ಷ್ಮೀಶನ ‘ಕ್ಯಾಮೆರಾ’ದ ಜೈತ್ರಯಾತ್ರೆ


ಎಸ್‌ಎಸ್‌ಎಲ್‌ಸಿ ಮುಗಿಸಲು ಪರದಾಡುತ್ತಿದ್ದ ಹುಡುಗ ಈಗ ಇಂಟರ್ ನ್ಯಾಷನಲ್ ಫೇಮ್. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ ಕ್ಯಾಮೆರಾ ವರ್ಕ್ ಎಂಬ ನೇಮ್ ಪ್ಲೇಟಿನಲ್ಲಿ ಲಕ್ಷ್ಮೀಶ್ ಶೆಟ್ಟಿಯ ಹೆಸರು ಚಾಲ್ತಿಯಲ್ಲಿದೆ. ಕ್ಯಾಮೆರಾದಲ್ಲಿ ಬದುಕಿನ ಹುಡುಕಾಟದ ಜಾಡು ಹಿಡಿದು ಅವರ ಹೆಜ್ಜೆ.

ಕಾರ್ಕಳದ ಪುಟ್ಟ ಹೃದಯ ಎಂದೇ ಬಿಂಬಿತ ಅಜೆಕಾರಿನ ಜ್ಯೋತಿ ಹೈಸ್ಕೂಲ್‌ಗೆ ಹೋಗುತ್ತಿದ್ದ ಈ ಹುಡುಗ ಕಲಿಕೆಯಲ್ಲಿ ದಡ್ಡ. ಆದರೆ ಭಾರೀ ಚುರುಕು. ಈಗ ಅವನದು ಅಂತಾರಾಷ್ಟ್ರೀಯ ಪ್ರಸಿದ್ಧಿ. ಎಸ್ ಎಸ್‌ಎಲ್‌ಸಿ ಮುಗಿಸಲು ಕಷ್ಟ ಪಡುತ್ತಿದ್ದ ಹುಡುಗನನ್ನು ನೋಡಿದ ಅಜೆಕಾರಿನ ಹಿರಿ ತಲೆಗಳು ಅಂದು ನೀನು ಗದ್ದೆ ಉಳಲು ಲಾಯಕ್ಕು ಎಂದಿದ್ದುಂಟು. ಈಗ ಅವರಿಂದಲೇ ಮೆಚ್ಚು ಮಾತು. ಅಂತೂ ಇಂತೂ ಅವನು ಎಸ್‌ಎಸ್ ಎಲ್‌ಸಿ ಮುಗಿಸಿದಾಗ ಇಡೀ ಊರೇ ಅವನಿಗಾಗಿ ಖುಶಿ ಪಟ್ಟಿತು. ಚಡ್ಡಿ ಹಾಕಿಕೊಂಡು ಚೂಟಿಯಿಂದ ಓಡಾಡುತ್ತಿದ್ದ ಪುಟ್ಟ ಹುಡುಗ ‘ನೀನು ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದೀಯಾ ’ ಅಂತಾ ಸ್ನೇಹಿತರು ಬಂದು ಹೇಳಿದಾಗ ಖುಷಿಯೋ ಖುಷಿ.
ಈಗ ಅದೇ ಹುಡುಗನಿಗಾಗಿ ದೇಶದ ಬಹುತೇಕ ಚಾನೆಲ್‌ಗಳು ಮುಗಿಬೀಳುತ್ತಿವೆ. ಚಾನೆಲ್‌ಗೆ ಬಂದರೆ ಸಾಕಪ್ಪಾ ಎಂದು ಗೋಗೆರೆಯುವ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಚಾನೆಲ್‌ನ ಸಿಇಒಗಳಿದ್ದಾರೆ. ಕಾರ್ಕಳದ ಅಜೆಕಾರಿನ ಮರ್ಣೆಯ ಲಕ್ಷ್ಮೀಶ್ ಶೆಟ್ಟಿ ಪಕ್ಕಾ ಗ್ರಾಮೀಣ ಪ್ರತಿಭೆ. ಅಜೆಕಾರಿನ ಕೃಷಿ ಕುಟುಂಬದ ಅಶೋಕ್ ಶೆಟ್ಟಿ ಹಾಗೂ ಲಲಿತಾ ಶೆಟ್ಟಿ ಅವರ ಹಿರಿಯ ಪುತ್ರ ಈ ಲಕ್ಷ್ಮೀಶ್ ಶೆಟ್ಟಿ. ಇಂದು ಸುಮಾರು ೮೭ ದೇಶಗಳ ೨೦೦ಕ್ಕೂ ಅಕ ಮಹಾನಗರಗಳಲ್ಲಿ ನಡೆದಿರುವ ವಿವಿಧ ಸಂಗೀತ, ನೃತ್ಯ ಪ್ರದರ್ಶನ, ಕ್ರೀಡೆ, ಅಮೇಜಿಂಗ್ ರೇಸ್ ಸೌತ್ ಈಸ್ಟ್ ಏಷ್ಯಾದಂತಹ ರಿಯಾಲಿಟಿ ಕಾರ್ಯಕ್ರಮಗಳ ಚಿತ್ರೀಕರಣ ಮಾಡಿದ್ದಾರೆ.
ಬಾಲ್ಯದಲ್ಲೇ ಕ್ಯಾಮರಾ ನಂಟು
ಅಜೆಕಾರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಲಕ್ಷ್ಮೀಶ್ ಶೆಟ್ಟಿಗೆ ಪಾಠದ ಕಡೆ ಗಮನ ಕಡಿಮೆ. ಪಠ್ಯೇತರ ಚಟುವಟಿಕೆಗಳತ್ತಲೇ ಒಲವು. ಶಾಲೆಗೆ ಫೋಟೋ ಕ್ಲಿಕ್ ಮಾಡಲು ಬಂದಿದ್ದ ಫೋಟೋಗ್ರಾಫರ್‌ನನ್ನು ನೋಡಿದ ಲಕ್ಷ್ಮೀಶ್‌ನಿಗೆ ಅದೇ ವೃತ್ತಿ ಮಾಡಬೇಕೆನ್ನುವ ಆಸೆ . ನಂತರ ಇತ್ತ ಕಡೆ ಶಿಕ್ಷಣ ಮುಗಿದು ಹೋಗುತ್ತಿದ್ದಂತೆ ಪೋಟೋಗ್ರಾಫಿಯ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಮುಂದೆ ಸಂಪೂರ್ಣವಾಗಿ ಎಸ್‌ಎಸ್‌ಎಲ್‌ಸಿಯಲ್ಲಿಯೇ ಶಿಕ್ಷಣಕ್ಕೆ ಗುಡ್‌ಬೈ ಹೇಳಿ ಬ್ರಹ್ಮಾವರದ ನವಿ ಕಾವೇರಿ ಪೋಟೋ ಸ್ಟುಡಿಯೋದ ಮಾಲೀಕ ಚಂದ್ರಕಾಂತ್ ಆಚಾರ್ಯ ಅವರ ಬಳಿಯಲ್ಲಿ ಫೋಟೋಗ್ರಾಫಿಯ ಅಧ್ಯಯನ ಆರಂಭ. ಉಡುಪಿಯ ಕಲ್ಸಂಕದಲ್ಲಿರುವ ಮಾಡರ್ನ್ ಸ್ಟುಡಿಯೋದ ಮಾಲೀಕ ಅರುಣ್ ಶಿರಾಲಿ ಲಕ್ಷ್ಮೀಶ್‌ರ ಕೈಗೆ ವಿಡಿಯೋ ಕ್ಯಾಮೆರಾ ಕೊಟ್ಟಾಗ ಪಟ್ಟ ಖುಷಿ ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅನುಭವದ ಆಳದೊಳಗೆ ಲಕ್ಷ್ಮೀಶ್ ಇಳಿದು ಹೋದರು.
ಬೆಂಗಳೂರು ದೂರದರ್ಶನದ ನಿರ್ದೇಶಕರಾಗಿದ್ದ ಶಿವಾನಂದ ಬೇಕಲ್ ಸಹಾಯದಿಂದ ಎಚ್.ಎಮ್.ಕೆ ಮೂರ್ತಿಯವರ ಮಾಲೀಕತ್ವದ ಓಂ ಶ್ರೀ ಫಿಲಂಸ್ ನಿರ್ಮಾಣ ಮಾಡುತ್ತಿದ್ದ ಧಾರಾವಾಹಿ, ಟೆಲಿಫಿಲ್ಮ್‌ಗಳ ಚಿತ್ರೀಕರಣದಲ್ಲಿ ಸೆಕೆಂಡ್ ಯೂನಿಟ್ ಕ್ಯಾಮೆರಾ ಮ್ಯಾನ್ ಆಗಿ ಸೇರಿಕೊಂಡರು. ಬಳಿಕ ಝೀ ಟಿವಿಯ ನ್ಯೂಸ್ ಚಾನೆಲ್‌ಗೆ ಕ್ಯಾಮೆರಾಮನ್ ಆಗಿ ಸೇರಿಕೊಂಡು ಅಲ್ಲಿಂದ ಆಜ್‌ತಕ್,ಎನ್‌ಡಿ ಟಿವಿ ಮುಂತಾದ ನ್ಯೂಸ್ ಚಾನೆಲ್‌ಗಳಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಿದರು. ೧೯೯೬ರ ನಂತರ ಎಎನ್‌ಐ ನ್ಯೂಸ್ ಏಜೆನ್ಸಿಯ ಬೆಂಗಳೂರು ಬ್ಯೂರೋ ಕ್ಯಾಮೆರಾಮನ್. ದೇಶದ ಮೊದಲ ಖಾಸಗಿ ಸುದ್ದಿವಾಹಿನಿಯಾಗಿದ್ದ ಟಿವಿ ಇಂಡಿಯಾದ ಲಕ್ನೋ, ಅಹಮದಾಬಾದ್ ಬ್ಯೂರೋದ ಮುಖ್ಯ ಕ್ಯಾಮೆರಾಮನ್ ಆಗಿ ಕೆಲಸ ನಿರ್ವಹಿಸಿದರು. ನಂತರ ಟಿವಿ ಇಂಡಿಯಾದ ನ್ಯೂಸ್ ಬ್ಯೂರೋದ ಮುಖ್ಯಸ್ಥರಾಗಿದ್ದ ಇಮ್ರಾನ್ ಖುರೇಶಿ ನೆರವಿನಿಂದ ದಿಲ್ಲಿಯ ನ್ಯೂಸ್ ಚಾನೆಲ್‌ನ ಉತ್ತರಪ್ರದೇಶ ನ್ಯೂಸ್ ಬ್ಯೂರೋಗೆ ಕ್ಯಾಮೆರಾಮನ್ ಆಗಿ ಸೇರ್ಪಡೆಯಾದರು.
ಅದು ಉತ್ತರ ಪ್ರದೇಶದಲ್ಲಿ ಮಾಯಾವತಿ ಸರಕಾರ ಇದ್ದ ಕಾಲ. ಇದೇ ಸಮಯದಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರು ಸದನದಲ್ಲಿ ಮೈಕ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ದೃಶ್ಯಗಳನ್ನು ಬೇರಾವ ಚಾನೆಲ್‌ಗಳು ಚಿತ್ರೀಕರಣ ಮಾಡಲಿಲ್ಲ. ಆದರೆ ಲಕ್ಷ್ಮೀಶ್ ಶೆಟ್ಟಿಯವರು ಚಿತ್ರೀಕರಿಸಿದ್ದರು. ನಂತರ ಸರಕಾರವೂ ಪತನಗೊಂಡದ್ದು ಈಗ ಹಳೇ ಸುದ್ದಿ. ಬಳಿಕ ಟಿವಿ ಇಂಡಿಯಾ ನ್ಯೂಸ್ ಚಾನೆಲ್‌ನ ಕ್ಯಾಮೆರಾಮನ್ ಆಗಿ ಕಾರ್ಗಿಲ್ ಯುದ್ದದ ೬೨ ದಿನಗಳನ್ನು ಭಾರತೀಯ ಸೇನೆಯ ಜತೆಗಿದ್ದು ಗುಂಡಿನ ಕಾಳಗದ ನೈಜ ದೃಶ್ಯಗಳನ್ನು ಸೆರೆಹಿಡಿದಿದ್ದರು.
೧೯೯೯ರಲ್ಲಿ ಲಂಡನ್ ಕ್ರೀಡಾ ಸುದ್ದಿ ಸಂಸ್ಥೆ ಟಿ.ಡಬ್ಲ್ಯೂ.ಐ ನ ಕ್ಯಾಮೆರಾಮನ್ ಆಗಿ ಮಲೇಷ್ಯಾ, ಸಿಂಗಪುರ,ಶ್ರೀಲಂಕಾ,ಪಾಕಿಸ್ತಾನ, ಚೀನಾ ಮುಂತಾದ ದೇಶಗಳಲ್ಲಿ ನಡೆಯುತ್ತಿದ್ದ ಟೆನ್ನಿಸ್, ಕ್ರಿಕೆಟ್, ಇನ್ನಿತರ ಪಂದ್ಯಗಳ ನೇರಪ್ರಸಾರಗಳಲ್ಲಿ ಪ್ರಮುಖ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಿದ್ದರು. ಎಂಟಿವಿ ಮ್ಯೂಸಿಕ್ ಚಾನೆಲ್‌ನಲ್ಲಿ ಪ್ರಸಾರವಾಗುವ ಮ್ಯೂಸಿಕ್ ಶೋಗಳ ಚಿತ್ರೀಕರಣದ ಜವಾಬ್ದಾರಿ ವಹಿಸಿದರು. ೨೦೦೨ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ ‘ಕೌನ್ ಬನೇಗಾ ಕರೋಡ್‌ಪತಿ’, ‘ಕಿಸ್ ಮೇ ಕಿತ್ನಾ ಹೈ ಧಮ್’ ಎಂಬ ಶೋಗಳಲ್ಲಿ ಮೇಜರ್ ಕ್ಯಾಮೆರಾಮನ್ ಅಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿ ಸೈ ಎನಿಕೊಂಡಿದ್ದರು.
ಇದಲ್ಲದೇ ಎನ್.ಜಿ.ಸಿ. ಡಿಸ್ಕವರಿ, ಎ.ಎಕ್ಸ್.ಎನ್ ಚಾನೆಲ್‌ನ ‘ಸೌತ್ ಈಸ್ಟ್ ಏಶಿಯಾ’ ವ್ಯಾಪ್ತಿಯಲ್ಲಿ ನಡೆಯುವ ‘ಅಮೇಜಿಂಗ್ ರೇಸ್ ಸೌತ್ ಈಸ್ಟ್ ಏಷ್ಯಾ’ಎಂಬ ಪ್ರತಿಷ್ಠಿತ ಅಂತಾರಾಷ್ಟೀಯ ಸ್ಪರ್ಧೆಯ ನಿರಂತರ ೯೦ ಗಂಟೆಗಳ ಶೂಟಿಂಗ್ ಸಮರ್ಥವಾಗಿ ನಿಭಾಯಿಸಿದ್ದು, ಈ ಚಿತ್ರೀಕರಣದ ಟೇಪ್ ಉತ್ತಮ ನಾನ್‌ಸ್ಕ್ರಿಪ್ಟೆಡ್ ರಿಯಾಲಿಟಿ ಶೋಗೆ ನಾಮನಿರ್ದೇಶನವಾಯಿತಲ್ಲದೇ, ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುವ ಟೆಲಿವಿಷನ್ ವರ್ಲ್ಡ್‌ಗೆ ನೀಡುವ ಗೌರವಾನ್ವಿತ ‘ಎಮಿ’ ಪ್ರಶಸ್ತಿ ಸುತ್ತಿಗೂ ಬಂದಿತ್ತು.
ಬಂಡಸಾಲೆಯಲ್ಲಿ ದುಡಿದ ಯುವಕ:
ದೂರದ ಮುಂಬಯಿಯ ನೆರೋಲ್ ಆರ್ಮಿ ಕಾಲೋನಿಯಲ್ಲಿದ್ದರೂ ತಿಂಗಳಿಗೊಮ್ಮೆಯಾದರೂ ತಾನು ಹುಟ್ಟಿದ ಊರಿಗೆ ಬರುತ್ತಾರೆ. ಇವರು ಕೆಲ ವರ್ಷಗಳ ಹಿಂದೆ ಶಿಕ್ಷಣ ವಂಚಿತ ಮಕ್ಕಳಿಗಾಗಿ ಮೊದಲ ಬಾರಿಗೆ ತುಳು ಭಾಷೆಯಲ್ಲಿ ನಿರ್ಮಿಸಿದ್ದ ‘ಬರವುದ ಬಂಡಸಾಲೆ’ ಎಂಬ ಕಿರುಚಿತ್ರ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ‘ಅಂದಿನ ಕಾಲದಲ್ಲಿ ತುಳು ಸಿನೆಮಾ ಹಾಗೂ ರಂಗಭೂಮಿ ಬಹಳ ಸೊರಗಿ ಹೋಗಿತ್ತು. ಈ ಸಂದರ್ಭ ತುಳುವಿನಲ್ಲಿ ಕಿರುಚಿತ್ರಗಳ ನಿರ್ಮಾಣ ಕಾರ್‍ಯ ಸರಿಯಾಗಿ ನಡೆಯುತ್ತಿರಲಿಲ್ಲ. ಈಗಲೂ ಇಲ್ಲಿನ ರಂಗಭೂಮಿ ಹಾಗೂ ತುಳು ನಿರ್ದೇಶಕರಲ್ಲಿರುವ ರಾಜಕಾರಣ, ತಾಂತ್ರಿಕವಾಗಿ ತುಳು ಚಿತ್ರೋದ್ಯಮ ಇತರ ಚಿತ್ರೋದ್ಯಮಗಳಿಗೆ ಸರಿಯಾಗಿ ಬೆಳೆಯದೆ ಇರೋದು ಇಲ್ಲಿನ ಉದ್ಯಮ ಹಿಂದೆ ಉಳಿಯಲು ಮುಖ್ಯ ಕಾರಣ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕುವ ಅವಶ್ಯಕತೆ ಈಗ ನಿರ್ಮಾಣವಾಗಿದೆ. ಸದ್ಯದಲ್ಲೇ ಕಿರುಚಿತ್ರ ಹಾಗೂ ಚಲನಚಿತ್ರಗಳನ್ನು ತಯಾರಿಸುವ ಕುರಿತು ಚಿಂತನೆ ನಡೆಸುತ್ತಿದ್ದೇನೆ ಎಂದು ಲಕ್ಷ್ಮೀಶ್ ಮುಂದಿನ ತುಳುನಾಡಿನ ಯೋಜನೆಗಳನ್ನು ತೆರೆದಿಟ್ಟರು.
‘ಸ್ಟಡಿ ಕ್ಯಾಮೆರಾ’ ಎಂಬ ಅದ್ಬುತ !
೩೫ ವರ್ಷಗಳ ಇತಿಹಾಸ ಇರುವ ಸ್ಟಡಿ ಕ್ಯಾಮೆರಾ ಮೇಡ್ ಇನ್ ಯುಎಸ್‌ಎಯ ಪ್ರಾಡಕ್ಟ್. ೩೫ ಕೆ.ಜಿಯಷ್ಟು ವೈಟ್ ಇರುವ ಈ ಕ್ಯಾಮೆರಾ ಯುಎಸ್‌ಎ ಡಾಲರ್ ಲೆಕ್ಕಚಾರದಲ್ಲಿ ತೂಗುವುದಾದರೆ ಬರೀ ೬೮ ಸಾವಿರ ಡಾಲರ್ ಅಂತೆ ! ಭಾರತದ ರೂಪಾಯಿಯಲ್ಲಿ ಕೌಂಟ್ ಮಾಡೋದಾದರೆ ಅದು ೩೨ ಲಕ್ಷ ರೂ ಕ್ಯಾಷ್. ಒಂದು ಸಮಾರಂಭದ ಶೂಟಿಂಗ್ ನಡೆಯುತ್ತಿದ್ದಾರೆ ಅದನ್ನು ಯಾವುದೇ ಮೂಲೆಯಿಂದ ಅಥವಾ ಓಡಾಡಿಕೊಂಡು ದೃಶ್ಯಗಳನ್ನು ಶೂಟ್ ಮಾಡುವ ಕ್ಯಾಮೆರಾವನ್ನು ಸ್ಟಡಿ ಕ್ಯಾಮೆರಾ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಇಂತಹ ಕ್ಯಾಮೆರಾ ಹೊಂದಿರುವ ಮಂದಿಯನ್ನು ಕೌಂಟ್ ಮಾಡಿದರೆ ಅವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದರಲ್ಲಿ ಒಬ್ಬರು ಲಕ್ಷ್ಮೀಶ್ ಶೆಟ್ಟಿ. ಈ ಕ್ಯಾಮೆರಾದ ಒಂದು ಪ್ಲ ಸ್ ಪಾಯಿಂಟ್ ಏನಪ್ಪಾ ಅಂದರೆ ಓಡಾಡಿಕೊಂಡು ದೃಶ್ಯಗಳನ್ನು ಸೆರೆ ಹಿಡಿದಾಗ ದೃಶ್ಯಗಳು ಕುಣಿಯುವುದಿಲ್ಲ.. ಸ್ಟಡಿಯಾಗಿ ದೃಶ್ಯಗಳು ಒಂದೊಂದಾಗಿ ಹರಿದು ಬರುತ್ತದೆ. ಇದನ್ನು ಬೆಲ್ಟ್‌ನ ಸಹಾಯದಿಂದ ಕಟ್ಟಿಕೊಂಡು ಯಾವುದೇ ಕೋನಗಳಲ್ಲೂ ಸ್ಪಷ್ಟ ಹಾಗೂ ನಿಖರವಾಗಿ ಚಿತ್ರೀಕರಣ ಮಾಡಬಹುದು.
.........
ಚಿತ್ರ : ಕೃಷ್ಣ ಕುಮಾರ್ ಅಜೆಕಾರು

Tuesday, March 22, 2011

ಬರುತ್ತಾಳೆ ‘ಕಂಚಿಲ್ದ ಬಾಲೆ’


ಕೋಸ್ಟಲ್‌ವುಡ್‌ಗೆ ಈಗ ೪೦ರ ಹರೆಯ. ೪೦ರ ಏಜ್‌ನಲ್ಲಿ ‘ಕಂಚಿಲ್ದಬಾಲೆ ’ ೪೦ನೇ ಚಿತ್ರವಾಗಿ ಮಾ.೨೫ರಂದು ಕರಾವಳಿ ಭಾಗದ ಸಿನಿಮಾ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ನಾನಾ ಕಾರಣಗಳಿಂದ ಚಿತ್ರ ಈಗಾಗಲೇ ಕರಾವಳಿ ತುಂಬಾ ಸುದ್ದಿಯಾಗಿದೆ.

ಅಂತೂ ಇಂತೂ ಕೋಸ್ಟಲ್‌ವುಡ್‌ಗೆ ೪೦ ವರ್ಷ ಆಗಿಯೇ ಹೋಯಿತು ಮಾರಾಯ್ರೆ. ಪುಟ್ಟ ಮಗುವಿನಂತೆ ಕಣ್ಣು ಮಿಟಿಕಿಸುತ್ತಿದ್ದ ತುಳು ಸಿನಿಮಾ ಇಂಡಸ್ಟ್ರಿ ಈಗ ೪೦ ವರ್ಷ ತುಂಬಿದೆ ಎಂದಾಗ ಹಿಪ್‌ಹಿಪ್ ಹುರ್ರೆಂ ಎನ್ನಲೇಬೇಕು. ಅಂದಿನ ಪರಿಸ್ಥಿತಿಯ ಮೇಲೊಂದು ತಿರುಗು ದೃಷ್ಟಿ ಬೀರಿ ನೋಡಿ. ‘ತುಳು ಸಿನಿಮಾ ನಾ... ’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು ಬಿಡಿ. ಆದರೆ ಈಗ ತುಳು ಸಿನಿಮಾದ ಬಗ್ಗೆಯೂ ಜನರಲ್ಲಿ ಸ್ವಲ್ಪ ಮಟ್ಟಿನ ಆಸಕ್ತಿ ಮೂಡಿದೆ ಜತೆಗೆ ತುಳು ಚಿತ್ರ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ವರ್ಷ ಪ್ಲಸ್ ಹಾಗೂ ಈ ವರ್ಷ ಎರಡನ್ನು ತುಲನೆ ಮಾಡಿ. ನಾಲ್ಕು ತುಳು ಸಿನಿಮಾಗಳು ಸೆಟ್ಟೇರಿದೆ. ಅದರಲ್ಲಿ ಎರಡು ಚಿತ್ರಗಳು ಸಧ್ಯಕ್ಕೆ ತುಳು ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ. ಅದರಲ್ಲಿ ಒಂದು ‘ಕಂಚಿಲ್ದ ಬಾಲೆ’.
ಕರೆಕ್ಟ್ ಆಗಿ ಹೇಳಿಬಿಡುವುದಾದರೆ ಈ ಚಿತ್ರ ಕೋಸ್ಟಲ್ ವುಡ್‌ನ ೪೦ನೇ ಚಿತ್ರ. ನಾನಾ ಕಾರಣಗಳಿಂದ ಚಿತ್ರ ಆರಂಭವಾಗುವ ಮೊದಲೇ ಬಹಳ ಸುದ್ದಿ ಮಾಡಿತ್ತು. ಚಿತ್ರದ ನಿರ್ದೇಶಕರು ಬದಲಾವಣೆಯಾಗಿದ್ದು, ನಿರ್ಮಾಪಕ ರಘುನಾಥ ರೈ ಚಿತ್ರವನ್ನು ಡೈರೆಕ್ಟ್ ಮಾಡಿ ನಿರ್ದೇಶಕರ ವಲಯವನ್ನೇ ಬೆಚ್ಚಿ ಬೀಳಿಸಿದ್ದು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದು, ಜಯಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಮೊದಲ ಬಾರಿಗೆ ಬಣ್ಣ ಹಾಕಿದ್ದು ಹೀಗೆ ನಾನಾ ಕಾರಣಗಳಿಗೆ ಚಿತ್ರ ಕರಾವಳಿ ಭಾಗದಲ್ಲಿ ಸುದ್ದಿ ಮಾಡಿದೆ.
ಕಂಚಿಲ್ದ ಬಾಲೆ:
ದಕ್ಷಿಣ ಕನ್ನಡದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಹಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಎತ್ತರ ಸ್ಥಾನದಲ್ಲಿ ನಿಲ್ಲುವುದು ಭೂತರಾಧನೆ. ಇಲ್ಲಿನ ಪ್ರತಿ ಕುಟುಂಬಗಳು ಭೂತರಾಧನೆಗೆ ಹೆಚ್ಚಿನ ಮಹತ್ವ ಕೊಡುತ್ತವೆ. ಜತೆಗೆ ತಮ್ಮ ಎಲ್ಲಾ ಕಷ್ಟ ಸುಖಗಳಿಗೆ ತಾವು ನಂಬಿದ ದೈವವೇ ಕಾರಣ ಎಂದು ನಂಬುತ್ತವೆ. ಅದಕ್ಕಾಗಿಯೇ ವರ್ಷಂಪ್ರತಿ ‘ಭೂತಕೋಲ’ ಎಂಬ ಹೆಸರಿನಲ್ಲಿ ತಾವು ನಂಬಿದ ದೈವಕ್ಕೆ ಕಾಣಿಕೆ, ಪೂಜೆಯನ್ನು ನೀಡುವುದು ಇಲ್ಲಿನ ರೂಢಿ. ಈ ಭೂತರಾಧನೆಯ ಕುರಿತು ಈಗಾಗಲೇ ಹಲವು ಪುಸ್ತಕಗಳು ಬಂದಿವೆ. ಈಗ ಇದೇ ಕತೆಯನ್ನು ಇಟ್ಟುಕೊಂಡು ‘ಕಂಚಿಲ್ದ ಬಾಲೆ ’ ರೆಡಿಯಾಗಿದೆ. ಕುಂಬ್ರ ರಘುನಾಥ ರೈ ೧೪ ವರ್ಷಗಳ ಹಿಂದೆ ‘ಮಾರಿಬಲೆ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರಪ್ರಶಸ್ತಿಯನ್ನು ಪಡೆದಿತ್ತು. ಜತೆಗೆ ಕರಾವಳಿಯಲ್ಲಿ ದೊಡ್ಡ ಯಶಸ್ಸನ್ನೂ ಕಂಡಿತ್ತು. ಈಗ ಭೂತರಾಧನೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ.
ಭೂತರಾಧನೆಯನ್ನು ಅನುಸರಿಸಿಕೊಂಡು ಬರುತ್ತಿರುವ ಒಂದು ಮನೆತನದಲ್ಲಿ ಎರಡು ತಲೆಮಾರುಗಳ ವ್ಯಕ್ತಿಗಳ ನಡುವೆ ನಡೆಯುವ ಸಂಘರ್ಷ, ತಣ್ಣಗಿನ ಹೋರಾಟ, ಈ ನಡುವೆ ಕುಟುಂಬದ ಸಮಸ್ತ ಆಸ್ತಿ ಹಕ್ಕಿಗೆ ಭಾಜನಳಾಗುವಂಥ ಒಂದು ಚಿಕ್ಕಪ್ರಾಯದ ಹೆಣ್ಣು ಮಗಳು ತನ್ನ ತಂದೆ, ತಾಯಂದಿರೊಂದಿಗೆ ಕ್ಯಾಲಿಪೋರ್ನಿಯಾದಿಂದ ಮನೆಯ ಭೂತ ಕೋಲಕ್ಕೆ ಊರಿಗೆ ಆಗಮಿಸಿ ಹಿಂದಿರುಗುವ ಮಧ್ಯೆ ನಡೆಯುವ ಘಟನಾವಳಿಗಳೇ ‘ಕಂಚಿಲ್ದ ಬಾಲೆ’ಯ ಕಥಾಹಂದರ. ಭೂತರಾಧನೆ ಒಂದು ನಂಬಿಕೆಯೋ, ಅಂಧಶ್ರದ್ಧೆಯೋ ಎಂದು ತೊಳಲಾಡುತ್ತಿರುವವರ ಮನಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನ ಕೂಡ ಈ ಚಿತ್ರದ ಮೂಲಕ ನಡೆದಿದೆ ಎನ್ನುವುದು ನಿರ್ದೇಶಕ ಕಮ್ ನಿರ್ಮಾಪಕ ಕುಂಬ್ರ ರಘುನಾಥ ರೈ ಅವರ ಅಭಿಪ್ರಾಯ. ‘ನಾವಿಲ್ಲಿ ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುತ್ತೇವೆಯೇ ಹೊರತು ಜನರ ಶ್ರದ್ಧೆ, ನಂಬಿಕೆಗೆ ನೋವು ಮಾಡುವುದಿಲ್ಲ. ಇದು ಬರೀ ಚಿತ್ರವಾಗಿ ಉಳಿಯದೇ ಒಂದು ಮಾಹಿತಿ ಕೋಶವಾಗಿಯೂ ಅನೇಕರಿಗೆ ಸಹಾಯವಾಗಲಿದೆ ಎಂಬ ಅಭಿಪ್ರಾಯವನ್ನೂ ರಘುನಾಥ್ ಹೊರಹಾಕುತ್ತಾರೆ.
ಕರಾವಳಿಯ ಸುತ್ತಮುತ್ತವಿರುವ ಹಳೆಯ ಗುತ್ತಿನ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ವಂಡಾರು ಗದ್ದೆಯಲ್ಲಿ ಕಂಬಳ ಓಟ ನಡೆಸಿದ್ದಾರೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಚರಿತ್ರಾ, ಸುರ್ ರಾಜ್ ಕಟೀಲ್, ಮಾನಸಿ, ರವಿ ಬೈಂದೂರು ಸೇರಿದಂತೆ ಸ್ಥಳೀಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರೇಣು ಸಂಗೀತ, ರವಿ ಸುರತ್ಕಲ್ ಅವರ ಛಾಯಾಗ್ರಹಣವಿದೆ. ‘ಮಾ.೨೫ ರಂದು ಕರಾವಳಿಯ ಪ್ರಮುಖ ಸಿನಿಮಾ ಥಿಯೇಟರ್‌ಗಳಿಗೆ ‘ಕಂಚಿಲ್ದ ಬಾಲೆ ’ ಬರುತ್ತಿದ್ದಾಳೆ. ಅವಳು ನಿಮ್ಮವಳು, ತುಳು ಪ್ರೇಕ್ಷಕರು ಕೈ ಹಿಡಿದು ಮುಂದೆ ನಡೆಸಲಿ’ ಎನ್ನುತ್ತಾರೆ ಕುಂಬ್ರ ರಘುನಾಥ ರೈ. ಅಂದಹಾಗೆ ಚಿತ್ರದ ನಾಲ್ಕಾರು ಪ್ರೀಮಿಯರ್ ಶೋಗಳು ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ನಡೆದಿದೆ. ಚಿತ್ರ ನೋಡಿದವರು ಚಿತ್ರ ಸ್ಯಾಂಡಲ್‌ವುಡ್‌ಕ್ಕಿಂತ ಚೆನ್ನಾಗಿ ಬಂದಿದೆ ಎಂದಿದ್ದಾರಂತೆ. ಹಾಗಾದರೆ ಸ್ಯಾಂಡಲ್‌ವುಡ್ ಚಿತ್ರ ನಿರ್ದೇಶಕರಿಗಂತೂ ಕರೆಗಂಟೆ ಕೊಟ್ಟಾಗಾಯಿತು.

......
ಮುತ್ತಪ್ಪ ರೈ, ಶಕ್ಕು ಅಕ್ಕ
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮುತ್ತಪ್ಪ ರೈ ನಟಿಸುತ್ತಿರುವುದು. ಈ ಹಿಂದೆ ಹಲವು ಆಫರ್‌ಗಳು ಬಂದಿದ್ದರೂ ಮುತ್ತಪ್ಪ ರೈ ಅವ್ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಈಗ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರೈ ಈ ಚಿತ್ರದಲ್ಲಿ ಒಂದೆರಡು ದೃಶ್ಯಗಳಷ್ಟೇ ಬಂದು ಹೋಗುತ್ತಾರೆ. ಜತೆಗೆ ಅವರ ಬೆಂಗಳೂರಿನ ಬಿಡದಿಯಲ್ಲಿರುವ ಮನೆಯ ದೃಶ್ಯಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರದ ಮೂಲಕವಾದರೂ ತುಳು ಪ್ರೇಕ್ಷಕರು ಮುತ್ತಪ್ಪ ರೈ ಅವರ ಮನೆಯ ದರ್ಶನ ಭಾಗ್ಯ ಪಡೆದುಕೊಳ್ಳಬಹುದು. ಅಂದಹಾಗೆ ರೈ ತುಳು ಚಿತ್ರವನ್ನೇ ಒಪ್ಪಿಕೊಳ್ಳಲು ಕಾರಣವೇನು? ಇದಕ್ಕೆ ರೈ ಹೇಳುವುದಿಷ್ಟು; ನಾನು ಕ್ಯಾಮರಾ ಎದುರಿಸಿದರೆ ವೊದಲು ತುಳು ಚಿತ್ರದಲ್ಲೇ ಅಂದುಕೊಂಡಿದ್ದೆ. ಅದು ನನ್ನ ಮಾತೃಭಾಷೆ ಕೂಡ. ‘ಕಂಚಿಲ್ದ ಬಾಲೆ’ಯ ಕಥೆ ನನಗೆ ಇಷ್ಟವಾಯಿತು. ದೈವ-ದೇವರ ಬಗೆಗಿನ ಚಿತ್ರ. ಒಂದರ್ಥದಲ್ಲಿ ಇದು ಮೌಲ್ಯವನ್ನು ಸಾರುವ ಚಿತ್ರವೆಂದರೂ ತಪ್ಪಲ್ಲ. ಒಂದೆರಡು ಡೈಲಾಗ್‌ಗಳೂ ನನ್ನ ಪಾಲಿಗೆ ಇವೆ ಎಂದಿದ್ದಾರೆ. ಉಳಿದಂತೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೈವದ ಮೇಲೆ ಅಪಾರ ನಂಬಿಕೆ ಹೊತ್ತುಕೊಂಡಿರುವ ಅಜ್ಜಿಯ ಪಾತ್ರ ಶಕು ಅಕ್ಕರಿಗೆ ಬಂದಿದೆ.

Sunday, March 20, 2011

ಸಿಐಡಿ ದಯಾ ಈ ಹುಡ್ಗ ನಮ್ಮೂರಿನವ..!


ದಯಾ(ನಂದ) ನಾಯಕ್...ಅಲ್ಲಲ್ಲ ಅವರಲ್ಲ...ಇವರು ದಯಾನಂದ ಶೆಟ್ಟಿ. ಯಾರಿವರು ಎಂದು ಅಚ್ಚರಿಯೇ? ಅದೇ...ಸೋನಿ ಕಿರುತೆರೆ ವಾಹಿನಿಯ ಸಿಐಡಿ ಎಂಬ ಸರಣಿ ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್ ದಯಾ ಪಾತ್ರದಲ್ಲಿ ಮಿಂಚುತ್ತಿರುವರಲ್ಲ...ಅವರು ಯಾರೆಂದು ಬಲ್ಲಿರೇನು? ನಮ್ಮೂರಿನ ಹುಡ್ಗನೇ ಆತ...! ಕುತೂಹಲ ಹೆಚ್ಚಾಯಿತೇ...ಬನ್ನಿ ಓದೋಣ...


ಅದು ಒಂದೇ ಹೊಡೆತ. ಅಪರಾಗಳು ತಮಗೆ ಗೊತ್ತಿಲ್ಲದ, ಗೊತ್ತಿರುವ ವಿಚಾರ ಒಂದೇ ಬಾರಿಗೆ ಕಕ್ಕುತ್ತಾರೆ.ಯಾವುದೇ ಭದ್ರಮನೆ ಬಾಗಿಲಿರಲಿ ಒಂದೇ ಬಾರಿಗೆ ಮುರಿದು ಹಾಕುವ ಧಮ್ ಇರೋ ವ್ಯಕ್ತಿ ಯಾರಾದರೂ ಇದ್ದಾರಾ..? ಹೌದು ಇದ್ದಾರೆ.. ಅವರೇ ಸಿಐಡಿ ಸೀನಿಯರ್ ಇನ್ಸ್‌ಸ್ಪೆಕ್ಟರ್ ದಯಾನಂದ ಶೆಟ್ಟಿ ಯಾನೆ ದಯಾ.
ಭಾರತೀಯ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿದ ಟಿವಿ ಸರಣಿ ಇದ್ದರೆ ಅದು ಸಿಐಡಿ ಮಾತ್ರ. ಹಿಂದಿಯ ಸೋನಿ ವಾಹಿನಿಯಲ್ಲಿ ಸಿಐಡಿ ಟಿವಿ ಸರಣಿ ೧೨ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತಿದೆ. ಸಿಐಡಿಯನ್ನು ಬಿ.ಪಿ. ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಟಿವಿ ಸರಣಿ ಗಿನ್ನೆಸ್ ರೆಕಾರ್ಡ್ ಬುಕ್‌ನಲ್ಲಿ ಜಾಗ ಪಡೆದಿದೆ. ರಂಗಭೂಮಿ ಹಿರಿಯ ಕಲಾವಿದ ಶಿವಾಜಿ ಸತ್ಯಂ ( ಎಸಿಪಿ.ಪ್ರದ್ಯುಮನ್) ಸಹಿತ ಹಲವು ಕಲಾವಿದರ ಒಂದು ದಂಡೇ ಸಿಐಡಿ ಟೀಮ್‌ನಲ್ಲಿದೆ. ಬಿ.ಪಿ. ಸಿಂಗ್, ಪ್ರದೀಪ್ ಹೂಪರ್ ಇದರ ನಿರ್ಮಾಪಕರು.
ದಯಾ(ದಯಾನಂದ ಶೆಟ್ಟಿ) ಕಿನ್ನಿಗೋಳಿಯ ಶಿಮಂತ್ತೂರು ಮಜಲುಗುತ್ತು ಮನೆತನದ ಹುಡುಗ. ಶಾಟ್‌ಪುಟ್, ಡಿಸ್ಕಸ್‌ನ ರಾಷ್ಟ್ರೀಯ ಪ್ರತಿಭೆ. ಕ್ರೀಡೆಯಲ್ಲಿ ತೊಡಗಿದ್ದಾಗ ಆದ ಅಪಘಾತ ಕ್ರೀಡಾಬದುಕಿನ ಫುಲ್‌ಸ್ಟಾಪ್‌ಗೆ ಕಾರಣವಾಯಿತು. ದಯಾ ಹುಟ್ಟಿದ್ದು ಕಿನ್ನಿಗೋಳಿಯಲ್ಲದರೂ ಬೆಳೆದದ್ದು ಮುಂಬಯಿಯಲ್ಲಿ. ಪ್ರಾಥಮಿಕ ಶಿಕ್ಷಣ ಹಾಗೂ ಬಿಕಾಂ ಪದವಿ ಎಲ್ಲವೂ ಮರಾಠಿ ಶಾಲೆಗಳಲ್ಲಿ.
ಸಿಐಡಿ ಆದದ್ದು
ಪುತ್ರನ ವಿದ್ಯಾಭ್ಯಾಸ ಬಳಿಕ ತಂದೆ ಚಂದ್ರಶೇಖರ್ ಕಾಂದೀವಿಲಿಯಲ್ಲಿ ‘ಸಂಧ್ಯಾ’ ಹೋಟೆಲ್ ತೆರೆದರು. ಈ ಸಂದರ್ಭ ಚಂದ್ರಶೇಖರ್ ಶೆಟ್ಟಿ ನಿಧನರಾದರು. ಹೋಟೆಲ್ ಗಲ್ಲಾ ಪೆಟ್ಟಿಗೆ ಮೇಲೆ ದಯಾನಂದ ಶೆಟ್ಟಿ ವಿರಾಜಮಾನರಾದರು. ಇದೇ ಸಮಯ ಸೋನಿ ಚಾನೆಲ್‌ನ ಸಿಐಡಿ ಸೀರಿಯಲ್‌ಗಾಗಿ ಸಮರ್ಥ ಪೊಲೀಸ್ ಅಕಾರಿ ಪಾತ್ರಕ್ಕಾಗಿ ಅಡಿಷನ್ ನಡೆಯಿತು. ೧೯೯೮ ಜ.೧ರಂದು ದೇಶ, ವಿದೇಶದ ಲಕ್ಷಾಂತರ ಮಂದಿಯ ಅಡಿಷನ್ ನಡುವೆ ದಯಾ ಎಂಬ ‘ಮಸಲ್‌ಮ್ಯಾನ್’ ಕೂಡ ಭಾಗವಹಿಸಿದರು. ಜಡ್ಜ್‌ಗಳು ದಯಾರ ಪರ್ಸನಾಲಿಟಿ, ಡೈಲಾಗ್ ಡೆಲಿವರಿಗೆ ದಂಗಾಗಿದ್ದರು.
‘ಮೊದಲ ಸಲವೇ ಜಡ್ಜ್‌ಗಳಿಂದ ‘ಯೂ ಆರ್ ಸೆಲೆಕ್ಟ್ ಫಾರ್ ಸಿಐಡಿ ಟೀಮ್’ ಎಂದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ಸಿಐಡಿ ಸೀರಿಯಲ್‌ನ್ನು ಬಹಳ ಸೀರಿಯಸ್ಸಾಗಿ ನೋಡುತ್ತಿದ್ದೆ. ಆದರೆ ಇದೇ ಸೀರಿಯಲ್‌ನಲ್ಲಿ ನಟಿಸುವ ಭಾಗ್ಯ ಬರುತ್ತದೆ ಎಂಬ ಕನಸು ಮಾತ್ರ ಎಂದಿಗೂ ಇರಲಿಲ್ಲ.’ಎನ್ನುತ್ತಾರೆ ದಯಾನಂದ ಶೆಟ್ಟಿ. ಅಂದಿನಿಂದ ಸಿಐಡಿಯಲ್ಲಿ ಫುಲ್‌ಟೈಮ್ ಸೀನಿಯರ್ ಇನ್‌ಸ್ಪೆಕ್ಟರ್ ಆಗಿ ದಯಾ ಮಿಂಚುತ್ತಿದ್ದಾರೆ.
ತಂದೆ ಬಂಗಾರದ ಲಿಫ್ಟರ್
ದಯಾರ ತಂದೆ ಚಂದ್ರಶೇಖರ್ ಶೆಟ್ಟಿ ೧೯೫೮ರಿಂದ ೧೯೬೫ರ ವರೆಗೆ ರಾಷ್ಟ್ರಮಟ್ಟದ ಖ್ಯಾತ ವೇಟ್‌ಲಿಫ್ಟರ್. ರಾಷ್ಟ್ರಮಟ್ಟದಲ್ಲಿ ೮ಕ್ಕಿಂತ ಹೆಚ್ಚು ಚಿನ್ನದ ಬೇಟೆಯಾಡಿದ ಕ್ರೀಡಾಪಟು. ಕೇಂದ್ರ ರೈಲ್ವೆ ಇಲಾಖೆಯಲ್ಲಿನ ಕೆಲಸದಿಂದಾಗಿ ಕಿನ್ನಿಗೋಳಿ ಬಿಟ್ಟು ಮುಂಬಯಿಗೆ ಬಂದು ನೆಲೆಸಿದರು. ವಿಶ್ವದ ಟಾಪ್‌ಲಿಫ್ಟರ್‌ಗಳ ಪಟ್ಟಿಯಲ್ಲಿ ಶೆಟ್ಟರ ಹೆಸರು ದಾಖಲಾಗಿತ್ತು. ಆದರೆ ಜಕಾರ್ತದಲ್ಲಿನ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಶೆಟ್ಟಿ ಮರಾಠಿ ಸಮುದಾಯದ ವ್ಯಕ್ತಿ ಅಲ್ಲ ಎಂಬ ಕಾರಣ ನೀಡಿ ಈ ಸ್ಪರ್ಧೆಯಲ್ಲಿ ರೈಲ್ವೆ ಇಲಾಖೆ ಚಂದ್ರಶೇಖರ್‌ರಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಬಿಟ್ಟಿತು. ಇದೇ ಕೊರಗಿನಿಂದ ಚಂದ್ರಶೇಖರ್ ಶೆಟ್ಟಿ ರೈಲ್ವೆ ಇಲಾಖೆ ಬಿಟ್ಟರು. ತನ್ನ ಕೊನೆಗಾಲದವರೆಗೂ ಇದೇ ಚಿಂತೆಯಲ್ಲಿದ್ದರು ಎಂದು ಅವರ ಸಂಬಂ ಕಿನ್ನಿಗೋಳಿಯ ಪುಷ್ಪರಾಜ್ ಶೆಟ್ಟಿ ಹೇಳುತ್ತಾರೆ. ‘ದಯಾನಂದ ಕೂಡ ಒಳ್ಳೆಯ ಕ್ರೀಡಾಪಟು. ಆದರೆ ತಂದೆಯ ಈ ಕೊರಗು ಹಾಗೂ ಕ್ರೀಡಾಕ್ಷೇತ್ರದಲ್ಲಿರುವ ರಾಜಕೀಯದಾಟ ಇವರಿಗೆ ಸರಿಬರಲಿಲ್ಲ. ಇದೇ ಸಮಯದಲ್ಲಾದ ಅಪಘಾತದಿಂದ ದಯಾರ ಕಾಲಿಗೆ ದೊಡ್ಡ ಪೆಟ್ಟು ಬಿತ್ತು ’ಎಂದು ಹೇಳುತ್ತಾರೆ ಪುಷ್ಪರಾಜ್.
ಕುಡ್ಲ ಎಂದರೆ ಪಂಚಪ್ರಾಣ
ಕುಡ್ಲ ಎಂದರೆ ದಯಾರಿಗೆ ಪಂಚಪ್ರಾಣ. ಅದಕ್ಕಾಗಿ ಮೂಲ್ಕಿಯಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. ವರ್ಷದಲ್ಲಿ ಒಂದೆರಡು ವಾರ ಈ ಮನೆಯಲ್ಲಿರುತ್ತಾರೆ. ಕಿನ್ನಿಗೋಳಿಯಲ್ಲಿ ತಾಯಿ ಉಮಾ ಶೆಟ್ಟಿಯವರ ಮನೆಯಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಧಾರ್ಮಿಕ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಂದೀವಿಲಿಯಲ್ಲಿರುವ ಫ್ಲ್ಯಾಟ್‌ನಲ್ಲಿ ದಯಾ ತನ್ನ ತಾಯಿ, ಪತ್ನಿ, ಪುಟ್ಟ ಮಗಳು ವೀವಾಳೊಂದಿಗೆ ಇದ್ದಾರೆ. ಪತ್ನಿ ಸ್ಮಿತಾ ಮೂಲತಃ ಮಂಗಳೂರಿನ ಹಂಪನಕಟ್ಟೆಯವರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಯಾರ ತಂಗಿಯರಾದ ಸಂಧ್ಯಾ, ನಯನಾ ಮುಂಬಯಿಯಲ್ಲಿಯೇ ವಿವಾಹವಾಗಿ ನೆಲೆನಿಂತಿದ್ದಾರೆ.
ಹಾಸ್ಯ ಸರಣಿಯಲ್ಲಿಯೂ ಇದ್ದಾರೆ:
ಸೋನಿಯ ಸಬ್ ಟಿವಿ( ಶ್ರೀ ಅಕಾರಿ ಬ್ರದರ್‍ಸ್)ನಲ್ಲಿ ದಯಾನಂದ ಶೆಟ್ಟಿ ಒಂದು ಹಾಸ್ಯ ಸರಣಿಯಲ್ಲಿ ಪ್ರತಿವಾರ ಬರುತ್ತಿದ್ದಾರೆ. ಅದೇ ‘ಗುಟುರುಗು’. ೨೦೦೭ರಲ್ಲಿ ಹಿಂದಿಯ ‘ಜಾನಿ ಗದ್ಧಾರ್’ ಹಾಗೂ ೨೦೦೯ ‘ರನ್‌ವೇ’ ಚಿತ್ರದಲ್ಲಿ ದಯಾ ಪೊಲೀಸ್ ಅಕಾರಿ ಪಾತ್ರದಲ್ಲಿ ನಟಿಸಿದ್ದರು. ತಮಿಳು ಚಿತ್ರವೊಂದರಲ್ಲಿ ನಟಿಸುವ ಅವಕಾಶ ಬಂದಿತ್ತು, ಬ್ಯೂಸಿಯಾಗಿರುವುದರಿಂದ ನಿರಾಕರಿಸಿದೆ. ಕನ್ನಡ ಅಥವಾ ತುಳು ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ನಟಿಸುವುದಾಗಿ ದಯಾ ನಗುತ್ತಾ ಹೇಳುತ್ತಾರೆ.


ಸಿಐಡಿ ‘ಫಸ್ಟ್’
ಸಿಐಡಿ ನನ್ನ ಮೊದಲ ಆಯ್ಕೆ. ಇಲ್ಲಿ ಒಳ್ಳೆಯ ಪಾತ್ರ, ಕೈತುಂಬಾ ಸಂಭಾವನೆ ಎಲ್ಲವೂ ಇದೆ. ಒಂದು ಎಪಿಸೋಡ್ ಶೂಟಿಂಗ್‌ಗಾಗಿ ಬರೋಬ್ಬರಿ ೪ರಿಂದ ೫ ದಿನ ಬೇಕಾಗುತ್ತದೆ. ವಿದೇಶದಲ್ಲೂ ಶೂಟಿಂಗ್ ನಡೆಯುತ್ತದೆ. ಎಲ್ಲ ರೀತಿಯಲ್ಲೂ ಸಿಐಡಿ ಉತ್ತಮ. ಆದರೆ ಸಿನಿಮಾ ನಿರ್ಮಾಪಕರು ಕೇಳುವ ಡೇಟ್ಸ್, ಸಂಭಾವನೆ ಎರಡರಲ್ಲೂ ವ್ಯತ್ಯಾಸ ಹಾಗೂ ನಕಾರಾತ್ಮಕ ಅಂಶ ಜಾಸ್ತಿ ಇರುತ್ತದೆ ಎಂದು ದಯಾ ತನ್ನ ಅನುಭವ ಲವಲವಿಕೆ ಜತೆ ಹಂಚಿಕೊಂಡರು.











Saturday, March 19, 2011

ಕೊಂಕಣಿ ಬ್ಯಾಂಡ್ ‘ಮೈಲ್‌ಸ್ಟೋನ್’


ಕೊಂಕಣಿ ಸಂಗೀತ ಕ್ಷೇತ್ರದಲ್ಲೂ ಹೊಸ ಹೊಸ ಬಗೆಯ ಮ್ಯಾಜಿಕ್‌ಗಳು ನಿಧಾನವಾಗಿ ನಡೆಯುತ್ತಾ ಸಾಗುತ್ತಿದೆ ಎಂಬುವುದಕ್ಕೆ ತಾಜಾ ಸಾಕ್ಷಿ ಇಲ್ಲಿದೆ. ನಾಲ್ವರು ಯುವಕರು ಈಗ ‘ಮೈಲ್‌ಸ್ಟೋನ್’ ಕಟ್ಟಿದ್ದಾರೆ. ಬನ್ನಿ ಏನ್ ವಿಷ್ಯಾ ಅಂತಾ ಕೇಳೋಣ..


ಕರಾವಳಿಯಲ್ಲಿ ಕೊಂಕಣಿ ಸಂಗೀತ ಎಂದಾಗ ಹುಚ್ಚೆದ್ದು ಕುಣಿಯುವ ಕೊಂಕಣಿ ಸಂಗೀತ ಪ್ರೇಮಿಗಳಿದ್ದಾರೆ. ಗೋವಾದ ಸ್ಟೈಲ್ ಜತೆಯಲ್ಲಿ ಕರಾವಳಿಯ ಥಡ್‌ಕಾ ಬಿದ್ದಾಗ ಡಿಫರೆಂಟ್ ಕೊಂಕಣಿ ಸಂಗೀತ ಲೋಕ ತೆರೆದು ಕೂರುತ್ತೆ. ಕೊಂಕಣಿ ಸಂಗೀತ ಕ್ಷೇತ್ರದಲ್ಲೂ ಹೊಸ ಹೊಸ ಬಗೆಯ ಮ್ಯಾಜಿಕ್‌ಗಳು ನಿಧಾನವಾಗಿ ನಡೆಯುತ್ತಾ ಸಾಗುತ್ತಿದೆ ಎನ್ನುವುದಕ್ಕೆ ತಾಜಾ ತಾಜಾ ಸಾಕ್ಷಿ ಮೈಲ್‌ಸ್ಟೋನ್( ಮೈಲಿಗಲ್ಲು). ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಒಂದು ಗಡಿ ರೇಖೆ ಇದೆ. ಮುಂಬಯಿ, ಗೋವಾ, ಗಲ್ಪ್ ಆಂಡ್ ಕರಾವಳಿಯ ಕೊಂಕಣಿ ಪ್ರೇಮಿಗಳು ಬಿಟ್ಟರೆ ಅದಕ್ಕೆ ಬದುಕಲು ಬೇರೆ ದಾರಿಯಿಲ್ಲ. ಈ ಊರುಗಳಲ್ಲಿ ದುಡಿಯುವ ಕೊಂಕಣಿ ಪ್ರೇಮಿಗಳು ಬಹಳಷ್ಟು ಕೊಂಕಣಿ ಸಂಗೀತ ಕಲಾವಿದರನ್ನು ಬೆಳೆಸಿದ್ದಾರೆ ಎಂಬ ಮಾತು ನೂರಕ್ಕೆ ಇನ್ನೂರು ಶೇಕಡಾದಷ್ಟು ಸತ್ಯ.
ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ನೂರಾರು ಸಿಡಿ, ಡಿವಿಡಿಗಳು ಪ್ರತಿ ವರ್ಷ ಬೆಳಕು ಕಾಣುತ್ತಿದೆ. ಹೊಸ ಗಾಯಕ- ಗಾಯಕಿಯರು ಹುಟ್ಟುತ್ತಾ ಸಾಗುತ್ತಿದ್ದಾರೆ. ಅವರಿಗಾಗಿ ಹೊಸ ಹೊಸ ವೇದಿಕೆಗಳು, ಮಾಂಡ್ ಸೊಭಾಣ್‌ನಂತಹ ಸಂಸ್ಥೆಗಳು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಈ ಎಲ್ಲ ವಿಚಾರಗಳ ಮಧ್ಯೆ ‘ಮೈಲ್‌ಸ್ಟೋನ್ ’ ಸಂಗೀತ ಬ್ಯಾಂಡ್ ಕೊಂಚ ಡಿಫರೆಂಟ್ ಲುಕ್‌ನಲ್ಲಿದೆ. ನಾಲ್ವರು ಯುವಕರ ತಂಡ ಕೊಂಕಣಿಯ ಎರಡನೇಯ ಸಂಗೀತ ಬ್ಯಾಂಡ್ ಕಟ್ಟಿದ್ದಾರೆ. ಸ್ವರಚಿತ ಕೊಂಕಣಿ ಹಾಡುಗಳನ್ನು ಮಾತ್ರ ಈ ತಂಡ ಹಾಡುತ್ತಿದೆ. ಕೊಂಕಣಿ ಫ್ಲೇವರ್ ಇದ್ದ ಕಾರಣ ಮೈಲ್ ಸ್ಟೋನ್ ಕೊಂಕಣಿ ಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತಾರೆ. ತಮ್ಮದೇ ಹಾಡುಗಳ ಮೂಲಕ ಹೊಸ ಕ್ರೇಜ್‌ಗೂ ನಾಂದಿ ಹಾಡುತ್ತಿದ್ದಾರೆ.
ಎಲ್ಲಕ್ಕೂ ಮುಖ್ಯ ಕೊಂಕಣಿಯಲ್ಲಿ ಬ್ಯಾಂಡ್ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ ಬಿಡಿ. ‘ಬಂಡವಾಳ ಇಲ್ಲ, ಕೇಳುಗರಿಲ್ಲ, ಬೆಳೆಯುವವರಿಗೆ ಸರಿಯಾದ ವೇದಿಕೆಗಳಿಲ್ಲ ಮೊದಲಾದ ‘ಇಲ್ಲ’ಗಳ ನಡುವೆ ಮೈಲ್‌ಸ್ಟೋನ್ ನಿಜಕ್ಕೂ ಒಂದು ಮೈಲಿಗಲ್ಲು. ಬ್ಯಾಂಡ್‌ನ ಬ್ಯಾಕ್‌ಬೋನ್ ಕೇವಿನ್ ಮಿಸ್ಕಿತ್ ಒಬ್ಬ ಒಳ್ಳೆಯ ಯುವ ಕೊಂಕಣಿ ಹಾಡುಗಾರ ಈಗಾಗಲೇ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಎರಡು- ಮೂರು ಆಲ್ಬಂಗಳ ಮೂಲಕ ಕರಾವಳಿಯಲ್ಲಿ ತನ್ನದೇ ಖಾತೆ ತೆರೆದವರು. ಇವರಿಗೆ ಸಾಥ್ ನೀಡಲು ಅಲೋಷಿಯಸ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಸಂಜಯ್ ರಾಡ್ರಿಗಸ್, ಬಿಸಿಎ ವಿದ್ಯಾರ್ಥಿ ಪ್ಲೋಯಿಡ್ ಪಿರೇರಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿರುವ ಅಶ್ವಿನ್ ಸಿಕ್ವೇರಾ ಹಾಗೂ ಜೋಯೆಲ್ ಮಿಲಾನ್ ಇದ್ದಾರೆ. ಎಲ್ಲರೂ ಟ್ವಿಂಟಿ ಪ್ಲಸ್‌ನ ಆಸುಪಾಸಿನವರು. ಇವರಿಗೆ ಕೊಂಕಣಿ ಸಂಗೀತ, ಕಲ್ಚರ್ ಎಂದಾಗ ಏನೋ ಒಂದು ಥರದ ಆಂಟಾಜ್‌ಮೆಂಟ್. ಅಂದಹಾಗೆ ಹೊಸ ಬ್ಯಾಂಡ್‌ಗೆ ಬೆನ್ನು ತಟ್ಟಿ ಹೇಳಿ. ವಿ ವಿಶ್ ಯೂ ಬೆಸ್ಟ್ ಆಫ್ ಲಕ್.
ಸಂಪರ್ಕಕ್ಕೆ ಬನ್ನಿ: kevinmisquith@rediffmail.com,9964667653,9590777303

ಕೇವಿನ್ ಮಲ್ಟಿ ಟ್ಯಾಲೆಂಟರ್ !
ಮಂಗಳೂರಿನಲ್ಲಿ ಕಂಪ್ಯೂಟರ್ ಸೇಲ್ಸ್ ಆಂಡ್ ಸರ್ವಿಸಿಂಗ್ ಕೆಲಸ ಮಾಡುತ್ತಿರುವ ಕೇವಿನ್ ಮಿಸ್ಕಿತ್ ಮೂಲತಃ ಸುರತ್ಕಲ್‌ನವರು. ಸಂಗೀತದ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಬಂದ ಮಲ್ಟಿ ಟ್ಯಾಲೆಂಟ್ ಹುಡುಗ. ಒಳ್ಳೆಯ ಕೊಂಕಣಿ ಹಾಡುಗಾರ ಜತೆಗೆ ರಾಗ ಸಂಯೋಜಕ, ಸಾಹಿತ್ಯದಲ್ಲೂ ಕೈಯಾಡಿಸಿದ ಪ್ರತಿಭಾವಂತ. ನಾಲ್ಕು ವರ್ಷದಲ್ಲಿ ರುಪ್ಣೆಂ( ಮುಖ), ತುಜೀ ಯಾದ್( ನಿನ್ನ ನೆನಪು) ಹಾಗೂ ಹೀ ಜಿಣಿ( ಈ ಬದುಕು) ಎಂಬ ಕೊಂಕಣಿ ಸಂಗೀತ ಆಲ್ಬಂಗಳನ್ನು ಕೊಟ್ಟಿದ್ದಾರೆ. ಎಲ್ಲವೂ ಈಗ ಸೋಲ್ಡ್ ಔಟ್. ಈಗಲೂ ಕೊಂಕಣಿಗರ ಮದುವೆ ಕಾರ್‍ಯಕ್ರಮಗಳಲ್ಲಿ ಹಾಡುಗಾರರು ಇವರ ಹಾಡುಗಳನ್ನೇ ಜಾಸ್ತಿಯಾಗಿ ಹಾಡುತ್ತಾರೆ. ಕೇಳುಗರು ಕೂಡ ಅದನ್ನೇ ಬಯಸುತ್ತಾರೆ. ಇದು ನಿಜಕ್ಕೂ ಸಂಗೀತಗಾರನಿಗೆ ಸಲ್ಲುವ ಕೀರ್ತಿ.

ಮೈಲ್‌ಸ್ಟೋನ್ ಡಿಫರೆಂಟ್ !
‘ನಿಜಕ್ಕೂ ‘ಮೈಲ್‌ಸ್ಟೋನ್’ ಎಂಬ ಹೆಸರು ಥಟ್ ಅಂತಾ ಬಂತು. ಅದನ್ನೇ ತೆಗೆದುಕೊಂಡು ಬ್ಯಾಂಡ್‌ಗೆ ಇಟ್ಟುಕೊಂಡೇವು, ಕೊಂಚ ಹೊಸತು ಅನ್ನಿಸಿತು. ನಾವೆಲ್ಲರೂ ಕೊಂಕಣಿ ಸಂಗೀತದಲ್ಲಿ ಏನಾದರೂ ಮಾಡಬೇಕು ಎಂಬ ಕನಸು ಕಂಡವರು. ಈ ಹೆಸರೇ ನಮ್ಮ ಬ್ಯಾಂಡ್‌ಗೆ ಸೂಕ್ತ ಅನ್ನಿಸಿ ಹೋಯಿತು ಎನ್ನುತ್ತಾರೆ ಬ್ಯಾಂಡ್‌ನ ಕೇವಿನ್ ಮಿಸ್ಕಿತ್.
ಈ ಬ್ಯಾಂಡ್‌ನಲ್ಲಿ ನಮ್ಮದೇ ರಚಿತ ಕೊಂಕಣಿ ಹಾಡುಗಳ ಜತೆಯಲ್ಲಿ ಪಾಪ್, ರಾಕ್, ಡಿಸ್ಕೋ, ಜಾನಪದ, ಫ್ಯೂಶನ್, ಬೈಲಾ ಸಾಂಗ್‌ಗಳನ್ನು ಜಾಸ್ತಿಯಾಗಿ ಬಳಸಿಕೊಳ್ಳುತ್ತೇವೆ. ಕೊಂಕಣಿಯ ಮೊದಲ ಬ್ಯಾಂಡ್ ಪಿಯೇಗಾ.. ಪಿಯೇಗಾ ಇತ್ತು. ಅದರಲ್ಲಿ ಎಲ್ಲರೂ ಪ್ರತಿಭಾವಂತರೇ ಆಗಿದ್ದರು. ಆದರೆ ನಮ್ಮಲ್ಲಿ ಎಲ್ಲರೂ ಹೊಸಬರು. ಇನ್ನಷ್ಟೂ ಬೆಳೆಯಬೇಕು ಎಂದುಕೊಂಡು ಬಂದವರು ಜಾಸ್ತಿ ಇದ್ದಾರೆ ಎನ್ನೋದು ಕೇವಿನ್‌ರ ಮಾತು.

ಕುಡ್ಲದ ಯುವಕರ ನ್ಯೂ ಐಡಿಯಾ ೩೩೩ ಆಲ್ಬಂ


ಫೋಟೋಗಳು ಸಾವಿರಾರು ವರ್ಷಗಳ ಕಾಲ ಆಲ್ಬಂಗಳ ಹಂಗಿಲ್ಲದೇ ಬದುಕುತ್ತದೆ ಅಂದ್ರೆ ಯಾರಾದರೂ ನಂಬುವ ವಿಚಾರನಾ..? ಇದು ನಿಜಕ್ಕೂ ಸಾಧ್ಯ ಅಂತಾ ಮಂಗಳೂರಿನ ಯುವಕರ ತಂಡ ವೊಂದು ತೊಡೆತಟ್ಟಿ ನಿಂತಿದೆ. ತಮ್ಮ ಹೊಸ ಅಂರ್ತಜಾಲವೊಂದರ ಮೂಲಕ ಕರಾವಳಿಯಲ್ಲಿ ಮೆಲ್ಲನೇ ಸುನಾಮಿಯ ಅಲೆಯನ್ನು ಎಬ್ಬಿಸುತ್ತಿದ್ದಾರೆ. ಬನ್ನಿ ಏನ್ ವಿಷ್ಯ ಅಂತಾ ಕೇಳೋಣ....


ಇಡೀ ವಿಶ್ವವೇ ಪುಟ್ಟ ಗ್ರಾಮವಾಗುತ್ತಿದೆ ಎಂಬ ಸಮಾಜಶಾಸ್ತ್ರಜ್ಞರ ಮಾತು ಈಗ ದಿಟವಾಗುತ್ತಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ನಾಗಲೋಟದಲ್ಲಿ ಓಡುತ್ತಿದೆ. ಶ್ರೀ ಸಾಮಾನ್ಯರ ಬದುಕಿನ ಪುಟಗ ಯಾರಿಗೂ ತಿಳಿಯದೇ ಏಕ್‌ದಂ ಚೇಂಜ್ ಆಗುತ್ತಿದೆ. ಕಂಪ್ಯೂಟರ್ ಎಂಬ ಬ್ರಹ್ಮಾಂಡ ಈಗ ಶ್ರೀ ಸಾಮಾನ್ಯರ ಮೂಲಭೂತ ಅವಶ್ಯಕತೆಗಳ ಪಟ್ಟಿಯೊಳಗೆ ನುಸುಳಿಕೊಂಡಿದೆ. ಇಂತಹ ಯುಗಕ್ಕೊಂದು ಹೊಸ ಅಂರ್ತಜಾಲ ಹುಟ್ಟಿಕೊಂಡಿದೆ. ಇದು ೩೩೩ ಆಲ್ಬಂ . ಟೋಟಲಿ ಹೊಸತು ಎನ್ನುವ ಕಾನ್ಸಪ್ಟ್...
ಇದರ ವಿಶೇಷತೆ ಏನಪ್ಪಾ ಅಂದರೆ ಇದೊಂದು ಪಕ್ಕಾ ಫೋಟೋ ಆಲ್ಬಂ. ನೀವು ಅಂದುಕೊಂಡಿರುವಂತೆ ಸಾಮಾನ್ಯವಾದ ಫೋಟೋ ಆಲ್ಬಂ ಆಗಿದ್ದಾರೆ ಅದು ಡಿಫರೆಂಟ್ ಮಾತು. ಅಂರ್ತಜಾಲದ ಮುಖಪುಟದಲ್ಲಿ ಮ್ಯಾರೇಜ್, ಬರ್ತ್‌ಡೇ, ಸ್ಕೂಲ್ ಡೇ, ಕಾಲೇಜ್ ಡೇ ಹೀಗೆ ಯಾವುದೇ ಇರಲಿ ಎಲ್ಲವೂ, ಯಾವಾಗ ಬೇಕಾದರೂ ನಿಮ್ಮ ಕೈಗೆ ಸಿಕ್ಕರೆ ಹೇಗಿರುತ್ತೆ.. ಟೋಟಲಿ ಗ್ರೇಟ್ ಅನ್ನಿಸೊಲ್ವಾ..? ಇಂತಹ ಯೋಜನಾಲಹರಿಯಲ್ಲಿ ಮೂಡಿ ಬಂದಿದೆ ೩೩೩ ಆಲ್ಬಂ. ವಿದೇಶದಲ್ಲಿರುವ ಹೆತ್ತವರಿಗೆ ತಮ್ಮ ಮಕ್ಕಳ ಸ್ಕೂಲ್ ಡೇ ನೋಡಬೇಕು ಎಂದುಕೊಂಡಾಗ ಅವರ ಮುಂದೆ ಈ ಅಂರ್ತಜಾಲ ತೆರೆದು ಕೂರುತ್ತೆ. ಮದುವೆ ಫೋಟೊಗಳನ್ನು ಹತ್ತು ವರ್ಷದ ನಂತರ ದಂಪತಿಗಳು ಮತ್ತೊಂದು ಸಾರಿ ನೋಡಬೇಕು ಅಂದ್ರೆ ಮತ್ತೆ ಅಂರ್ತಜಾಲವನ್ನು ಕ್ಲಿಕ್ ಮಾಡಿದರೆ ಮುಗಿಯಿತು. ಹೊಸ ಮದುವೆಯ ಅನುಭವ ತಂದು ಕೊಡುತ್ತದೆ.
ಅಂದಹಾಗೆ ಗೂಗಲ್‌ನ ಪಿಕಾಸೋ ಇದೇ ರೀತಿಯ ಕೆಲಸವನ್ನು ಮೊದಲು ಮಾಡಿತ್ತು. ಇದೇ ಪಿಕಾಸೋನಿಂದ ಪ್ರಭಾವಿತರಾಗಿ ಈ ಯುವಕರ ತಂಡ ಈ ೩೩೩ ಆಲ್ಬಂವನ್ನು ಕಟ್ಟಿ ಕೂರಿಸಿದ್ದಾರೆ. ಗೂಗಲ್‌ನಲ್ಲಿ ಪೋಟೋಗಳನ್ನು ಕಾಪಿ ಮಾಡಿಕೊಳ್ಳುವ ಅವಕಾಶ ಕೊಂಚ ಮಟ್ಟಿಗೆ ಇದೆ. ಆದರೆ ಈ ಆಲ್ಬಂನಲ್ಲಿ ಹಾಕುವ ಫೋಟೋಗಳಿಗೆ ನೂರು ಶೇಕಡಾದಷ್ಟು ಟೋಟಲಿ ಭದ್ರತೆ ಇದೆ. ಇದರಿಂದ ಫೋಟೋಗಳನ್ನು ಕಾಪಿ ಮಾಡುವ ಹೆದರಿಕೆ ಇರೋದಿಲ್ಲ . ಜತೆಯಲ್ಲಿ ಸಾವಿರಾರು ಪೋಟೋಗಳನ್ನು ಆಪ್‌ಲೋಡ್ ಮಾಡಿಕೊಂಡು ಅಂರ್ತಜಾಲದಲ್ಲಿ ಹಾಕುವ ತಾಕತ್ತನ್ನು ಈ ಆಲ್ಬಂ ಪಡೆದುಕೊಂಡಿದೆ.
೩೩೩ ಆಲ್ಬಂ ಯಾಕೆ ಬಂತು..?
ಕರಾವಳಿ ಸೇರಿದಂತೆ ನಾನಾ ಕಡೆಗಳಿಂದ ಬರುವ ಸಂಸ್ಕೃತಿ,ಆಚಾರ- ವಿಚಾರ, ಸಂಪ್ರದಾಯಗಳನ್ನು ಒಟ್ಟು ಸೇರಿಸಿಕೊಳ್ಳುವ ಕೆಲಸಕ್ಕಾಗಿ ಈ ಅಲ್ಬಂನ್ನು ಸಿದ್ದಪಡಿಸಿಕೊಂಡಿದ್ದೇವೆ ಎಂದು ಅಂರ್ತಜಾಲದ ಮೈನ್ ಬ್ಯಾಕ್‌ಬೋನ್ ರೋಷನ್ ಕ್ಯಾಸ್ಟಲಿನೋ ಹೇಳುತ್ತಾರೆ. ‘ಇಂತಹ ಒಂದು ಆಲ್ಬಂವನ್ನು ಕಟ್ಟುವ ಕೆಲಸ ಬಹಳ ಹಿಂದೆಯೇ ಆರಂಭವಾಗಿತ್ತು. ವ್ಯಕ್ತಿಯ ಬದುಕಿನ ಕೆಲವೊಂದು ಅಮೂಲ್ಯ ಪುಟಗಳನ್ನು ಸಂಗ್ರಹಮಾಡಿ ಕೊಡಬೇಕು ಎನ್ನುವ ಇರಾದೆಯನ್ನು ಇಟ್ಟುಕೊಂಡಿದ್ದೇವು’ ಎಂದು ಸ್ಟೀವನ್ ಡಿ ಸೋಜ ಹೇಳುತ್ತಾರೆ. ಅವರು ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಅಂರ್ತಜಾಲದ ಟೆಕ್ನಿಕಲ್ ಇನ್‌ಚಾರ್ಜ್ ಆಗಿದ್ದಾರೆ.
‘ವಿದೇಶದಲ್ಲಿರುವ ಹೆತ್ತವರಿಗೆ ತಮ್ಮ ಮಕ್ಕಳ ಚಟುವಟಿಕೆಗಳನ್ನು ನೋಡುವ ಹಾಗೂ ತಮ್ಮ ಕೆಲವೊಂದು ಸಮಾರಂಭಗಳ ನೆನಪುಗಳನ್ನು ಸದಾ ಹಸಿರಾಗಿಡಲು ಇಂತಹ ಅಂರ್ತಜಾಲದ ಅವಶ್ಯಕತೆಯನ್ನು ಗಮನಿಸಿ ಈ ತಯಾರಿ’ ಎನ್ನುತ್ತಾರೆ ವಿದೇಶದಲ್ಲಿರುವ ಮಂಗಳೂರು ಮೂಲದ ರೋಷನ್ ರಾಡ್ರಿಗಸ್. ಇವರು ವಿದೇಶದಲ್ಲಿ ನಿಂತು ಈ ಅಂರ್ತಜಾಲದ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ‘೩೩೩ ಆಲ್ಬಂಗಳಲ್ಲಿ ಫೋಟೋಗಳನ್ನು ಬೇಕಾದಂತೆ ಬಳಸಿಕೊಳ್ಳುತ್ತಿಲ್ಲ ಬದಲಾಗಿ ಆಯ್ಕೆ ಆಧಾರದ ಮೇಲೆ ಇದು ನಿರ್ಧಾರವಾಗುತ್ತದೆ ’ಎನ್ನುತ್ತಾರೆ ಅಂರ್ತಜಾಲದ ಫೋಟೋ ಆಯ್ಕೆದಾರನಾಗಿ ಕೆಲಸ ಮಾಡುತ್ತಿರುವ ಗುರುಪುರದ ನಾಬರ್ಟ್ ಕ್ರಾಸ್ತಾ.
ವಂಶವೃಕ್ಷದ ಐಡಿಯಾ:
ಈಗಾಗಲೇ ೩೩೩ ಆಲ್ಬಂನ ಯಶಸ್ಸಿನಿಂದ ಈ ಯುವಕರು ಈಗ ವ್ಯಕ್ತಿಯ ವಂಶವೃಕ್ಷದ ಬಗ್ಗೆ ಆಲ್ಬಂ ಹಾಗೂ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಂಶವೃಕ್ಷದ ಮುಖ್ಯ ಪ್ಲಸ್ ಪಾಯಿಂಟ್ ಏನಪ್ಪಾ ಅಂದರೆ ವ್ಯಕ್ತಿಯ ಸಂಪೂರ್ಣ ಬಯೋಗ್ರಾಫಿ ಆತನ ಬಾಲ್ಯದ ಹುಡುಕಾಟ, ಚಿತ್ರ, ಸಾಧನೆ, ಸಾಮಾಜಿಕ ಕ್ಷೇತ್ರದಲ್ಲಿ ಅವನ ಪಾತ್ರ ಈ ಎಲ್ಲ ವಿಚಾರಗಳು ಅದರಲ್ಲಿ ಜಾಗ ಪಡೆಯಲಿದೆ. ‘ಇದೊಂದು ಹೊಸ ಕಲ್ಪನೆ. ಸಾಧಕರನ್ನು ಮತ್ತೊಂದು ಪೀಳಿಗೆಗೆ ಪರಿಚಯಿಸುವ ಕೆಲಸ ಈ ಮೂಲಕ ನಡೆಯುತ್ತದೆ ಎಂಬ ಇರಾದೆಯಿಂದ ನಾವು ಹೊಸ ಪ್ರಯತ್ನಕ್ಕೆ ಇಳಿದಿದ್ದೇವೆ’ ಎನ್ನುತ್ತಾರೆ ರೋಷನ್ ಕ್ಯಾಸ್ಟಲಿನೋ.
‘೩೩೩ ಆಲ್ಬಂಗಳಲ್ಲಿ ಫೋಟೋಗಳನ್ನು ತುಂಬಿಸುವವರು ಬರೀ ೧ ಸಾವಿರ ರೂ.ಗಳನ್ನು ಸರ್ವರ್ ಚಾರ್ಜ್‌ಗಳಾಗಿ ನೀಡಬೇಕಾಗುತ್ತದೆ. ಇದರಲ್ಲಿ ಸ್ಕೂಲ್ ಡೇ ಇತ್ಯಾದಿ ಕಾರ್‍ಯಕ್ರಮಗಳಿಗೆ ವಿನಾಯಿತಿ ಇದೆ. ಅಂದಹಾಗೆ ೩೩೩ ಆಲ್ಬಂ ಗ್ಲೋಬಲ್ ಮಾರ್ಕೆಟ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಇಳಿದಿರುವ ಈ ಸೈಟ್ ಇದಾಗಿದೆ. ಇತ್ತೀಚೆಗಷ್ಟೇ ಬಾಲಿವುಡ್‌ನ ಹಾಸ್ಯನಟ ಜಾನಿ ಲೀವರ್ ಈ ಸೈಟ್‌ನ್ನು ಅಕೃತವಾಗಿ ಬಿಡುಗಡೆ ಮಾಡಿದ್ದರು. ಅವರು ನೋಡಿ ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿ ಹಾರೈಸಿದರು’ ಎನ್ನುತ್ತಾರೆ ರೋಷನ್. ಟೋಟಲಿ ಮಂಗಳೂರಿನ ಯುವಕರು ನಿಧಾನವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಸುನಾಮಿ ಎಬ್ಬಿಸುತ್ತಿರುವ ಮಾತು ಮಾತ್ರ ಸುಳ್ಳಲ್ಲ.


ಭಜ್ಜಿ ದೂಸ್ರಾಗೆ ಬಾಸ್ರಾ ಔಟ್


ಇದು ಸಿಕ್ರೇಟ್ ಕ್ರಿಕೆಟ್ ಪಂದ್ಯಾಟ. ಎರಡು ಹೃದಯಗಳ ನಡುವಿನ ಪಂದ್ಯಾಟ.. ಟೀಮ್ ಇಂಡಿಯಾ ಸ್ಪಿನ್ನರ್ ಭಜ್ಜಿಯ ಅವರ ದೂಸ್ರಾ ಬೌಲಿಂಗ್‌ಗೆ ಬಾಲಿವುಡ್ ನಟಿ ಗೀತಾ ಬಾಸ್ರಾ ಔಟ್ ಆಗಿದ್ದಾರೆ. ಆದರೆ ನಿರ್ಧಾರ ಥರ್ಟ್ ಅಂಪಾಯರಿಂಗ್‌ನಲ್ಲಿ ಬಾಕಿ ಉಳಿದಿದೆ..


ಭಾರತದ ಖ್ಯಾತ ಸ್ಪಿನ್ನರ್ ಹರಭಜನ್ ಸಿಂಗ್‌ರ ದೂಸ್ರಾ ಬೌಲಿಂಗ್ ಮೋಡಿಗೆ ಬಾಲಿವುಡ್ ನಟಿ ಗೀತಾ ಬಾಸ್ರಾ ತನ್ನ ವಿಕೆಟ್‌ನ್ನು ಕಳೆದುಕೊಂಡಿದ್ದಾರೆ. ಅಂದಾಹಾಗೆ ಇವರ ನಡುವೆ ಯಾವಾಗ ಕ್ರಿಕೆಟ್ ನಡೆಯಿತು ಎಂದು ಪ್ರಶ್ನೆ ಕೇಳ ಬೇಡಿ. ಕಾರಣ ಇದೊಂದು ಸಿಕ್ರೇಟ್ ಪಂದ್ಯಾಟ. ಇಬ್ಬರ ಹೃದಯಗಳ ನಡುವೆ ಈ ಪಂದ್ಯಾಟ ನಡೆದಿದ್ದು.. ಯಾವಾಗ ಅಂತೀರಾ...? ಕಳೆದ ಐದು ತಿಂಗಳುಗಳಿಂದ ಈ ಪಂದ್ಯಾಟ ನಡೆಯುತ್ತಾ ಇತ್ತು. ಆದರೆ ಪಂದ್ಯಾಟದ ಫಲಿತಾಂಶಗಳು ಈಗ ಹೊರ ಬರುತ್ತಿದೆ.
ಸಾರ್ವಜನಿಕ ಪಾರ್ಟಿಗಳಲ್ಲಿ.. ಪಾರ್ಕ್... ಹೀಗೆ ಇಬ್ಬರಿಗೂ ಹತ್ತಿರವಾದ ಸ್ಥಳಗಳಲ್ಲಿ ಅವರು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಇಬ್ಬರ ಅಭಿಮಾನಿಗಳು ತದೇಕ ಚಿತ್ತದಿಂದ ಈ ಪಂದ್ಯಾಟದ ಕಾಮೆಂಟರಿ ಮಾತ್ರ ಕೇಳಲು ಆರ್ಹರಾಗಿದ್ದಾರೆ ಎಂದು ಒಂದು ವಲಯ ಹೇಳಿಕೊಳ್ಳುತ್ತಿದೆ. ‘ಪಂಜಾಬ್ ಕಾ ಪುತ್ತರ್’ಭಜ್ಜಿಯ ಮನೆಗೆ ಗೀತಾ ಎರಡು ದಿನಗಳ ಮೊದಲು ದಿಢೀರ್ ಎಂದು ಭೇಟಿ ಕೊಟ್ಟಿದ್ದಾರೆ. ಇದು ಬರೀ ಕ್ಯಾಸುವಲ್ ಭೇಟಿ ಅಂತಾ ನೀವು ತಿಳಿದುಕೊಳ್ಳಬೇಡಿ. ಭಜ್ಜಿಯ ಹೆತ್ತವರ ಜತೆಯಲ್ಲಿ ತುಂಬಾ ಹೊತ್ತು ಗೀತಾ ಮಾತನಾಡಿಕೊಂಡು ಖುಷಿಯಿಂದ ಹೊರ ಬಂದಿದ್ದಾರೆ ಎಂಬ ಸೂಚನೆಯೊಂದು ಅವರ ಆಪ್ತರ ವಲಯ ಹೇಳಿದೆ.
ಜಲಂಧರ್‌ನಲ್ಲಿ ಇತ್ತೀಚೆಗೆ ಭಜ್ಜಿಯ ಸಹೋದರಿ ಸಂದೀಪ್ ಕೌರ್ ಅವರ ವಿವಾಹ ಸಮಾರಂಭದಲ್ಲಿ ಗೀತಾ ಬಾಸ್ರಾ ತುಂಬಾ ಮುತುವರ್ಜಿ ವಹಿಸಿಕೊಂಡು ಮದುವೆ ಮನೆಯಲ್ಲಿ ಓಡಾಡುತ್ತಿದ್ದರು. ಭಜ್ಜಿಯ ಕುಟುಂಬದ ಸದಸ್ಯೆಯಂತೆ ಮದುವೆಗೆ ಬರುವ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದ ರೀತಿ ಗೀತಾರ ಮುಂದಿನ ಹೆಜ್ಜೆಯ ಸೂಚನೆ ನೀಡಿತ್ತು. ಇತ್ತೀಚೆಗೆ ಮುಂಬಯಿ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯಾಟಗಳು ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿ ಕೂತ ಗೀತಾರ ನೋಟ ಭಜ್ಜಿಯ ಬೌಲಿಂಗ್ ಮೇಲೆ ಇತ್ತು. ಟಿವಿ ವಾಹಿನಿಗಳು ಪದೇ ಪದೇ ಗೀತಾರನ್ನು ತೋರಿಸುತ್ತಿದ್ದಾಗ ಭಜ್ಜಿಯ ದೂಸ್ರಾದಲ್ಲೂ ಈ ಹೊಳಪು ಕಾಣಿಸಿಕೊಳ್ಳುತ್ತಿತ್ತು.
ಈ ಕುರಿತು ಗೀತಾರಲ್ಲಿ ಮಾಧ್ಯಮಗಳು ಪ್ರಶ್ನೆ ಎತ್ತಿದಾಗ ಮುಂಬಯಿ ಇಂಡಿಯನ್ಸ್ ಮಾಲೀಕರಾದ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಆಹ್ವಾನದ ಮೇರೆಗೆ ತಾನು ಮುಂಬಯಿ ಟೀಮ್‌ನ್ನು ಚಿಯರ್ ಮಾಡಲು ಬಂದಿದ್ದೆ ಎಂದು ಹೇಳಿಕೆ ನೀಡಿದ್ದರು. ಗೀತಾ ತನ್ನ ಹಾಗೂ ಭಜ್ಜಿರ ಸಂಬಂಧವನ್ನು ಅಲ್ಲಗೆಳೆಯುತ್ತಾ ತಾವಿಬ್ಬರೂ ಗುಡ್ ಫ್ರೆಂಡ್ಸ್.. ಉಳಿದಂತೆ ನಟನಾ ವೃತ್ತಿಯ ಕುರಿತು ತಾನು ಸಿರೀಯಸ್ ಆಗಿದ್ದೇನೆ ಎಂದು ನಗುತ್ತಾ ಉತ್ತರಿಸಿದ್ದರು. ಅವರು ನಿಜಕ್ಕೂ ಯಾವುದರಲ್ಲಿ ಸಿರೀಯಸ್ ಆಗಿದ್ದಾರೆ ಎಂಬ ಡಾಲರ್ ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಎದುರುಗೊಂಡಿದೆ.

‘ನಂದಿನಿ’ ಎಂಬ ದೂದ್ ಕಾ ಪೇಡಾ


ಬಾಲಿವುಡ್‌ನ ‘ಪಾಂಡವು’,‘ಪ್ಲ್ಯಾಟ್ ಪಾರಂ’ ಸ್ಯಾಂಡಲ್‌ವುಡ್‌ನ ‘ಸಮರ’, ‘ಬಾ ನಲ್ಲೆ ಮಧು ಚಂದ್ರಕೆ’ ಕೊಂಕಣಿಯ‘ ಭೊಗ್ಸಾಣೆ’ಯ ನಟಿ ನಂದಿನಿ ಎಲ್ಲಿ ಹೋದರು ಎಂದು ಭೂತಗನ್ನಡಿಯಲ್ಲಿ ಹುಡುಕಾಡಿದಾಗ ಕೆನಡಾದ ಐಷಾರಾಮಿ ಮನೆಯೊಂದರಲ್ಲಿ ಮುಂಬಯಿಯ ಲೋಖನ್‌ವಾಲಾದ ಹುಡುಗನೊಂದಿಗೆ ಲೀವಿಂಗ್ ರಿಲೇಷನ್ ಶಿಪ್‌ನಲ್ಲಿ ಸ್ವರ್ಗ ಸುಖ ಕಾಣುತ್ತಿದ್ದಾರೆ ಎಂದು ನಂದಿನಿ ಫೇಸ್ ಬುಕ್‌ನಲ್ಲಿ ಖುಲ್ಲಂ ಖುಲ್ಲಾ ಹೇಳಿಕೊಂಡಿದ್ದಾರೆ.


ಅವಳು ಮುಖಕ್ಕೆ ಬಣ್ಣ ಹಚ್ಚಿ ಕೊಳ್ಳದೇ ಬರೋಬರಿ ಹದಿನೈದು ವರ್ಷಕ್ಕಿಂತ ಜಾಸ್ತಿಯಾಗಿರಬಹುದು ಮಾರಾಯ್ರೆ. ಈಗ ಆಕ್ಟಿಂಗ್ ಎಂದಾಗ ಮುಖ ಸಿಂಡರಿಸಿಕೊಳ್ಳುತ್ತಾಳೆ. ಅಪರೂಪಕ್ಕೊಮ್ಮೆ ಕಾಲ್ ಮಾಡುತ್ತಿದ್ದಳು. ತುಂಬಾನೇ ಸಾಫ್ಟ್ ಹುಡುಗಿ. ಮನೆ- ಕುಟುಂಬ ಅಂತಾಲೇ ಬಡಬಡಿಸುತ್ತಿದ್ದಳು. ಆಕ್ಟಿಂಗ್ ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತಿದ್ದಳು. ಒಳ್ಳೆಯ ಪ್ರತಿಭಾವಂತೆ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೂ ಕಳೆದ ಕೆಲವು ವರ್ಷಗಳಿಂದ ಟಚ್‌ನಲ್ಲಿ ಇಲ್ಲ ಸಾರ್ ಎಂದು ನಿರ್ದೇಶಕ ರಿಚ್ಚಿ ಲವಲವಿಕೆಗೆ ನಗುತ್ತಾ ಹೇಳುತ್ತಿದ್ದರು.
ಕರಾವಳಿಯ ಕೊಂಕಣಿ ಪ್ಲಸ್ ತುಳುವಿನಲ್ಲಿ ರಿಚರ್ಡ್ ಕ್ಯಾಸ್ಟೋಲಿನೋ ಹೆಸರು ಬಹಳ ಓಡುತ್ತಿದೆ. ಎರಡು- ಮೂರು ವರ್ಷಕ್ಕೊಂದು ಬಾರಿ ಊರಿಗೆ ಜಾತ್ರೆ ಬಂತು ಎನ್ನುವ ರೀತಿಯಲ್ಲಿ ರಿಚ್ಚಿ ಸಿನ್ಮಾ ತೆಗೆಯೋದು ಗ್ಯಾರಂಟಿ ಬಿಡಿ ಅಂತಾ ಕಂಕನಾಡಿಯ ಕೋಸ್ತಾ ಹೋಟೆಲ್‌ನಲ್ಲಿ ಚಿಕನ್ ಮೆಲ್ಲುತ್ತಾ ಮಾತನಾಡುವವರು ಬೇಕಾದಷ್ಟು ಮಂದಿ ಸಿಗ್ತಾರೆ ಬಿಡಿ. ಅಂದಹಾಗೆ ರಿಚ್ಚಿ ನಿರ್ದೇಶನದ ಕರ್ನಾಟಕ ಸರಕಾರದ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ಪಡೆದ ಕೊಂಕಣಿಯ ‘ಭೊಗ್ಸಾಣೆ’ ಚಿತ್ರವೇ ಈ ನಟಿಯ ಕೊನೆಯ ಚಿತ್ರ. ಅಲ್ಲಿಂದ ನಟಿಯ ಸಿನ್ಮಾ ಪುಟಗಳು ಮುಗಿದು ಹೋಗುತ್ತದೆ.
ಅವಳು ನಂದಿನಿ ಸಿಂಗ್ ಎಲ್ಲರೂ ಕರೆಯುವುದು ನಂದಿನಿ ಅಂತಾ. ಮೂಲತಃ ಸಿಂದಿ ಬೆಡಗಿ. ಹಾಲಿನಂತಹ ವೈಟ್ ಆಂಡ್ ವೈಟ್ ಬ್ವೂಟಿ. ದೂದ್ ಕಾ ಪೇಡಾ ಇದ್ದ ಹಾಗೆ ಮಾರಾಯ್ರೆ. ಡಯಟ್‌ಗೆ ಬೀಳದಿದ್ದರೂ ನಂದಿನಿದ್ದು ಸ್ಲೀಮ್ ಬಾಡಿ ಎನ್ನೋದು ಬಹಳಷ್ಟು ಪ್ರೇಕ್ಷಕರ ಮಾತು. ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್‌ರ ‘ಬಾ ನಲ್ಲೆ ಮಧು ಚಂದ್ರಕೆ’ ಸಿನ್ಮಾದ ನಾಯಕಿಯಾಗಿದ್ದು ಕೂಡ ಕನ್ನಡ ಪ್ರೇಕ್ಷಕರು ಮರೆತಿರಲು ಸಾಧ್ಯವಿಲ್ಲ. ೧೯೯೩ರಲ್ಲಿ ಬಿಡುಗಡೆಯಾದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ‘ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ ಬಂದಾಳೋ.... ’ ಎಂಬ ಜನಪ್ರಿಯ ಹಾಡು ಈಗಲೂ ಸಂಗೀತ ಪ್ರೇಮಿಗಳಿಗೆ ಹೊಸ ಲೋಕವನ್ನು ತೋರಿಸುವಂತಿದೆ.
ನಂದಿನಿಗೆ ಈ ಚಿತ್ರ ದೊಡ್ಡ ಬ್ರೇಕ್ ನೀಡಿತ್ತು ನಿಜ.
ಅಲ್ಲಿಂದ ನಂದಿನಿ ಬಾಲಿವುಡ್‌ಗೂ ಹೋಗಿ ಅಕ್ಷಯ್ ಕುಮಾರ್ ಜತೆಯಲ್ಲಿ ‘ಪಾಂಡವು’, ’ಪ್ಲ್ಯಾಟ್ ಪಾರಂ’ ಚಿತ್ರದಲ್ಲೂ ನಟಿಸಿ ಬಂದಿದ್ದರು. ಕನ್ನಡದ ‘ಸಮರ’ದಲ್ಲೂ ಕ್ಲಬ್ ಸಾಂಗ್‌ನಲ್ಲಿ ಕುಣಿದ ನಂದಿನಿ ಪ್ರಪಾತಕ್ಕೆ ಇಳಿಯುತ್ತಾ ಸಾಗಿದ್ದು ಮಾತ್ರ ಯಾರಿಗೂ ಗೊತ್ತೇ ಆಗಿಲ್ಲ ಬಿಡಿ. ನಂದಿನಿ ಎಲ್ಲಿ ಹೋದರು ಎಂದು ಭೂತಗನ್ನಡಿಯಲ್ಲಿ ಹುಡುಕಾಡಿದಾಗ ಕೆನಡಾದ ಐಷಾರಾಮಿ ಮನೆಯೊಂದರಲ್ಲಿ ಮುಂಬಯಿಯ ಲೋಖನ್‌ವಾಲಾದ ಹುಡುಗನೊಂದಿಗೆ ಲೀವಿಂಗ್ ರಿಲೇಷನ್ ಶಿಪ್‌ನಲ್ಲಿ ಸ್ವರ್ಗ ಸುಖ ಕಾಣುತ್ತಿದ್ದಾರೆ ಎನ್ನುವ ಶಾಕಿಂಗ್ ನ್ಯೂಸ್ ಲವಲವಿಕೆಗೆ ಬಡಿಯಿತು. ಇಂತಹ ಸಂಬಂಧ ತಪ್ಪಲ್ಲ ಕಣ್ರಿ ಅಂತಾ ಸರಕಾರವೇ ಕಾನೂನಿನ ಮೂಲಕ ಹೇಳಿಕೊಂಡು ತಿರುಗಾಡುತ್ತಿರುವಾಗ ಈ ಸಂಬಂಧಗಳನ್ನು ಕೆದಕುವುದು ಸರಿಯಲ್ಲ. ಸಿನ್ಮಾ ಲ್ಯಾಂಡ್‌ನಲ್ಲಿ ಇರುವವರಿಗೆ ಇದೆಲ್ಲ ಕಾಮನ್ ವಿಚಾರ ಬಿಟ್ಟು ಬಿಡಿ. ಬಹಳ ವರ್ಷಗಳಿಂದ ‘ಕರಿಮಣಿ’ ಸರ ಕಟ್ಟಿ ಕೊಳ್ಳದೇ ನಂದಿನಿ ಬದುಕು ನಡೆಸೋದು ರಿಯಾಲಿ ಗ್ರೇಟ್ ಮಾರಾಯ್ರೆ. ಫೇಸ್ ಬುಕ್‌ನಲ್ಲಿ ನಂದಿನಿ ಈ ಎಲ್ಲ ಸಿಕ್ರೇಟ್ ವಿಚಾರಗಳನ್ನು ಬಿಚ್ಚಿಟ್ಟಿರೋದು ಮಾತ್ರ ಅವರ ‘ಎದೆಗಾರಿಕೆ’ ಯನ್ನು ತೋರಿಸುತ್ತಿದೆ.
.....
ಚಿತ್ರ: ಸುನೀಲ್ ದಾರಂದಕುಕ್ಕು
...........


Friday, March 18, 2011

ಶಿವಪ್ಪ ಕಾಯೋ ತಂದೆ.....?


ಸ್ಯಾಂಡಲ್‌ವುಡ್ ಹೀರೋ ವಸಂತ್‌ಕುಮಾರ್ ನಾನು‘ಕೆಳದಿಯ ಶಿವಪ್ಪ ನಾಯಕ ’ನಾಗಿ ಬರುತ್ತಾನೆ ಎಂದು ಉದ್ದ ಕೂದಲು ಬಿಟ್ಟು ಮಂಗಳೂರಿನ ಮಾವನ ಮನೆಯಲ್ಲಿ ಕೂತಿದ್ದರು. ಕೈಯಲ್ಲಿ ಚಿತ್ರಗಳಿಲ್ಲದೇ ರಾಜಕೀಯದಲ್ಲೂ ನೆಲೆಯಿಲ್ಲದ ವಸಂತರ ಬದುಕಿನ ಹುಡುಕಾಟದಲ್ಲಿ ......


ಅದು ವಸಂತ್ ಕುಮಾರ್ ಅಲ್ಲ ಮಾರಾಯ್ರೆ ಅಂತಾ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿಯಲ್ಲಿ ಹೂ ಮಾರುತ್ತಿದ್ದ ಪೂವಪ್ಪಣ್ಣ ಲವಲವಿಕೆಯ ತಂಡಕ್ಕೆ ಹೇಳಿಬಿಟ್ರು. ಸ್ಯಾಂಡಲ್‌ವುಡ್ ನಟ ವಸಂತ್ ಕುಮಾರ್ ಪೂವಪ್ಪಣ್ಣರಿಗೆ ಬಹಳ ಹತ್ತಿರದ ಪರಿಚಯ. ಮಂಗಳಾದೇವಿ ದೇವಸ್ಥಾನದ ಪಕ್ಕದ ಓಣಿಯಲ್ಲಿಯೇ ವಸಂತ್‌ಕುಮಾರ್‌ಗೆ ಹೆಣ್ಣು ಕೊಟ್ಟು ಮಾವನ ಮನೆ ಇರೋದು.. ಈ ಓಣಿಯ ಮುಂಭಾಗದಲ್ಲಿ ಪೂವಪ್ಪಣ್ಣ ಹೂವಿನ ಅಂಗಡಿ ಹಾಕಿರೋದು. ವಸಂತ್‌ಕುಮಾರ್ ಯಾರ ಕೈಯಿಂದಲೂ ತಪ್ಪಿಸಿಕೊಳ್ಳಬಹುದು ಆದರೆ ಪೂವಪ್ಪಣ್ಣ ಕೈಯಿಂದ ‘ನೋ ಚಾನ್ಸ್ ’ಎಂದು ಮಲ್ಲಿಗೆ ಹೂವಿನ ಚೆಂಡಿಗೆ ಕೈ ಹಾಕಿ ನಕ್ಕು ಬಿಟ್ರು.
ಬಹಳ ವರ್ಷಗಳಿಂದ ಪೂವಪ್ಪಣ್ಣ ಈ ಹೂವಿನ ವ್ಯಾಪಾರದಲ್ಲಿ ಸಖತ್ ಖುಶ್ ಆಗಿದ್ದಾರೆ. ವಸಂತ್ ಕುಮಾರ್ ಮಂಗಳಾದೇವಿಗೆ ಬಂದಾಗ ಪೂವಪ್ಪಣ್ಣರಿಗೆ ಕೈ ಎತ್ತಿ ಸಲಾಂ ಹಾಕಿದ್ರೆ ಸಾಕು. ಪೂವಪ್ಪಣ್ಣ ಮೊಗ ದಾಳಿಂಬೆ ಹಣ್ಣಿನಂತೆ ಆಗಿ ಹೋಗುತ್ತಿತ್ತು. ಆದರೆ ಈ ಬಾರಿ ವಸಂತ್ ಕುಮಾರ್ ಕೈ ಎತ್ತಿದರೂ ಪೂವಪ್ಪಣ್ಣ ಕೈ ಎತ್ತಿಲ್ಲ.. ನಿಜಕ್ಕೂ ಪೂವಪ್ಪಣ್ಣ ಗೊಂದಲದ ಗೂಡಾಗಿದ್ದರು. ವಸಂತ್ ಕುಮಾರ್ ಬಹಳಷ್ಟು ಬದಲಾಗಿದ್ದರು. ಜಡೆ ಕಟ್ಟಿ ಬೀಡುವಂತಹ ಉದ್ದುದ್ದ ಕೂದಲು, ವಿಚಿತ್ರ ವೇಷ- ಭೂಷಣ ಎಲ್ಲವೂ ವಸಂತ್ ಕುಮಾರ್‌ರ ಪರಿಚಯ ಮರೆಮಾಸುತ್ತಿತ್ತು. ಅಂದಹಾಗೆ ವಸಂತ್ ಕುಮಾರ್ ಎಂದರೆ ಯಾರು ಅಂದುಕೊಂಡಿದ್ದೀರಾ...
೮೦ರ ದಶಕದಲ್ಲಿ ‘ವಿಜಯೋತ್ಸವ ’ದ ಮೂಲಕ ಸ್ಯಾಂಡಲ್‌ವುಡ್ ಸಿನಿಮಾ ಜಗತ್ತಿಗೆ ಬಂದವರು. ಹಾಲಿವುಡ್‌ನ ‘ಬ್ಲೂ ಕ್ರಿಸ್ಟಲ್ ’ ಸೇರಿದಂತೆ ಸ್ಯಾಂಡಲ್‌ವುಡ್‌ನ ‘ಶರವೇಗದ ಸರದಾರ’, ‘ನಿರ್ಬಂಧ’, ‘ತೇಜ’, ‘ಕ್ಷೀರಸಾಗರ’, ‘ಅಂಗೈಯಲ್ಲಿ ಅಪ್ಸರೆ’, ‘ಚೈತ್ರದ ಚಿಗುರು’ ‘ನವತಾರೆ’ ಹೀಗೆ ಹತ್ತಾರು ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದು ನಿಂತರೂ ಕೂಡ ಅವರನ್ನು ಕರೆಯುವುದು ‘ಕುಮಾರ್ ಬಂಗಾರಪ್ಪ ’ಎಂದು... ವಸಂತ್‌ಕುಮಾರ್ ಎನ್ನುವುದು ಕುಮಾರ್ ಬಂಗಾರಪ್ಪರ ಮೂಲ ನಾಮಧೇಯ. ಆದರೆ ವಿಜಯೋತ್ಸವ ಯಾವಾಗ ಸೆಟ್ಟೇರಿ ಕೂತಿತೋ ಅದೇ ಟೈಮ್‌ನಲ್ಲಿ ತಂದೆ ಬಂಗಾರಪ್ಪ ರಾಜ್ಯದ ಮುಖಮಂತ್ರಿಯಾಗಿ ಕಂಗೋಳಿಸಿದರು. ವಸಂತ್ ಎನ್ನುವ ಹೆಸರು ಕಿತ್ತಾಕಿ ಅದರ ಜಾಗದಲ್ಲಿ ಬಂಗಾರಪ್ಪ ಬಂದು ಹೋದ್ರು.
ಅಲ್ಲಿಂದ ‘ಕುಮಾರ್ ಬಂಗಾರಪ್ಪ ’ಎಂದೇ ಎಲ್ಲರಿಗೂ ಗೊತ್ತಿರುವ ಸತ್ಯ. ಅರ್ಧ ಸಿನಿಮಾ ಆಂಡ್ ಅರ್ಧ ರಾಜಕಾರಣ ಎರಡರಲ್ಲೂ ಕುಮಾರ್ ಮಾಡಿದ್ದು ಏನೂ ಇಲ್ಲ ಬಿಡಿ. ಶಿವಮೊಗ್ಗದ ‘ಸೊರಬ’ ಬಂಗಾರಪ್ಪರ ಮನೆಯಂತಿತ್ತು. ಅದೇ ಕ್ಷೇತ್ರದಿಂದ ಗೆದ್ದು ಬರುತ್ತಿದ್ದ ಕುಮಾರ್ ಬಂಗಾರಪ್ಪ ಈ ಬಾರಿ ಸಂಪೂರ್ಣವಾಗಿ ರಾಜಕೀಯ ರಂಗದಿಂದ ನಿವೃತ್ತಿ ಘೋಷಣೆ ಮಾಡುವಂತಹ ಪರಿಸ್ಥಿತಿ ಎಲ್ಲರಿಗೂ ಗೊತ್ತಿರೋದು ಬಿಡಿ. ಸಿನ್ಮಾಕ್ಕೂ ಬಂದರೆ ‘ಅಶ್ವಮೇಧ’ ಚಿತ್ರ ಬಿಟ್ಟರೆ ಬೇರೆ ಯಾವ ಚಿತ್ರಗಳು ಕುಮಾರ್ ಬಂಗಾರಪ್ಪರನ್ನು ಕನ್ನಡದ ಪ್ರೇಕ್ಷಕರು ಸರಿಯಾಗಿ ಗುರುತಿಸಿಲ್ಲ. ಹತ್ತಾರು ಸಿನ್ಮಾಗಳು ಬಂದರೂ ಪ್ರೇಕ್ಷಕರಿಗೆ ಕುಮಾರ್ ಬಂಗಾರಪ್ಪ ಬರೀ ಬಂಗಾರಪ್ಪ ಅವರ ಪುತ್ರ ಎಂದೇ ಗೊತ್ತು ಬಿಡಿ.
ಸಿನ್ಮಾ ಮಾಡುವ ಹೊಸ ಹುಚ್ಚು :
ಮಂಗಳೂರಿನಲ್ಲಿ ಕುಟುಂಬಿಕರ ಮದ್ವೆಗಾಗಿ ಬಂದಿದ್ದ ಕುಮಾರ್ ಬಂಗಾರಪ್ಪ ಲವಲವಿಕೆಯ ತಂಡಕ್ಕೆ ಸಿಕ್ಕಿ ಬಿದ್ದಿದ್ದರು. ಉದ್ದ ಕೂದಲಿನ ರಹಸ್ಯವನ್ನು ಭೇದಿಸಿದಾಗ ತಮ್ಮ ‘ರೇಣುಕಾಂಬ ಬ್ಯಾನರ್ ಅಡಿಯಲ್ಲಿ ಐತಿಹಾಸಿಕ ಚಿತ್ರವೊಂದನ್ನು ತಯಾರು ಮಾಡುತ್ತಿದ್ದೇನೆ. ಅದಕ್ಕಾಗಿ ಉದ್ದ ಕೂದಲು ಬಿಟ್ಟಿದ್ದೇನೆ. ‘ರಕ್ತ ಕಣ್ಣೀರು’ ನಂತರ ನಟಿಸುವ ಚಿತ್ರ ಇದಾಗಿದೆ ಎಂದು ಮಾತು ಆರಂಭ ಮಾಡಿದರು.
ನಿರ್ದೇಶಕ ನಾಗಭರಣರ ಜತೆಯಲ್ಲಿ ಐತಿಹಾಸಿಕ ಚಿತ್ರ ‘ಕೆಳದಿಯ ಶಿವಪ್ಪ ನಾಯಕ’ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡು ಕಳೆದ ಎರಡು ವರ್ಷಗಳಿಂದ ಕುಮಾರ್ ಬಂಗಾರಪ್ಪ ಉದ್ದ ಕೂದಲು ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇತ್ತ ಕಡೆ ನಿರ್ದೇಶಕ ನಾಗಭರಣ ಟಿವಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಮಾರ್ ಬಂಗಾರಪ್ಪ ಮಂಗಳೂರು ಪ್ಲಸ್ ಸೊರಬ ಎಂದು ಮಾಧ್ಯಮಗಳ ಕಣ್ಣು ತಪ್ಪಿಸಿಕೊಂಡು ತಿರುಗಾಡ ಪ್ರದರ್ಶನ ಆರಂಭ ಮಾಡಿದ್ದಾರೆ.
ಹೊಸ ಚಿತ್ರದ ಕತೆ ಏನ್ರಿ ಎಂದರೆ.. ಐತಿಹಾಸಿಕ ಚಿತ್ರ ಇನ್ನೂ ಒಂದೆರಡು ವರ್ಷ ಕಾಯಬೇಕಾಗಬಹುದು. ಈಗಾಗಲೇ ಶೂಟಿಂಗ್ ಸ್ಪಾಟ್‌ಗಳ ಬೇಟೆ ಆರಂಭ ಮಾಡಿಕೊಂಡಿದ್ದೇವೆ ಎಂದೇಳಿ ಆಗಸ ತೋರಿಸುತ್ತಾರೆ. ಚಿತ್ರ ನಿರ್ಮಾಣಕ್ಕೆ ಇಳಿದಿರುವ ಈ ರೇಣುಕಾಂಬ ಸಂಸ್ಥೆ, ಜತೆಯಲ್ಲಿ ಎಡಿಟಿಂಗ್ ಹೌಸ್, ಥಿಯೇಟರ್, ಕ್ಯಾಮಾರಾ ಯೂನಿಟ್ ಇಷ್ಟು ಬಿಟ್ಟರೆ ಕುಮಾರ್ ಬಂಗಾರಪ್ಪ ಆಸ್ತಿತ್ವವನ್ನು ಹೇಳುವ ಪುರಾವೆಗಳು ಈಗ ಯಾವುದು ಸಿಗುತ್ತಿಲ್ಲ. ಈಗಾಗಲೇ ಶಿವಮೊಗ್ಗದ ಪೇಟೆಯಲ್ಲಿ ಕುಮಾರ್ ಬಂಗಾರಪ್ಪ ಸೊರಬದಿಂದ ಔಟ್.. ಸಿನ್ಮಾ ಇಂಡಸ್ಟ್ರಿಯಿಂದಲೂ ಔಟ್ ಎಂದು ಹೇಳಿಕೊಂಡು ತಿರುಗಾಡುವವರು ಜಾಸ್ತಿಯಾಗಿದ್ದಾರೆ.
ಕಾಲ್ ಮಾಡಿ ಮೊಬೈಲ್ ಎತ್ತಲ್ಲ ಬಿಡಿ:
ಸಿನ್ಮಾ ಇಂಡಸ್ಟ್ರಿಯಲ್ಲಿ ‘ಹೆಚ್ಚುಮಾತುಗಾರ ’ಎಂದು ಕನ್ನಡದ ಸಿನಿಮಾ ಪತ್ರಕರ್ತರಿಂದ ಕರೆಸಿಕೊಂಡ ಕುಮಾರ್ ಬಂಗಾರಪ್ಪ ಅವರ ಬಳಿಯಲ್ಲಿ ಒಂದು ಮೊಬೈಲ್ ಇದೆ. ಅದರಲ್ಲಿ ಏನಪ್ಪಾ ವಿಶೇಷ ಅಂದ್ರೆ ಯಾರು ಬೇಕಾದರೂ ಈ ಸಂಖ್ಯೆಗೆ ಕಾಲ್ ಮಾಡಬಹುದು. ಆದರೆ ಹತ್ತು, ಹದಿನೈದು ಬಾರಿ ಮಿಸ್ ಕಾಲ್ ಕೊಟ್ಟ ಬಳಿಕ ರಿಸೀವ್ ಮಾಡುವಷ್ಟು ಗಟ್ಟಿ ಮನುಷ್ಯ ಅವರು ಎನ್ನೋದು ಅವರ ಆಪ್ತ ವಲಯದ ಮಾತು. ಇದೇ ಒಂದು ಅವರ ವರ್ತನೆ ಖ್ಯಾತ ಸಿನ್ಮಾ ನಿರ್ದೇಶಕ, ನಿರ್ಮಾಪಕರಿಂದ ದೂರ ಮಾಡಿದೆ ಎಂಬ ಮಾತು ಪ್ರಚಲಿತದಲ್ಲಿದೆ. ಟೋಟಲಿ ಕುಮಾರ್ ಬಂಗಾರಪ್ಪ ‘ಅಶ್ವಮೇಧ’ದ ಟೂ ಫೇಮಸ್ ಸಾಂಗ್ ‘ಹೃದಯ ಸಮುದ್ರವ ಕಲುಕಿ..’ ಹಾಡುತ್ತಾ, ಕುಣಿಯುತ್ತಾ ಇರುವುದನ್ನು ಪ್ರೇಕ್ಷಕರು ನೋಡಿದರೆ ಅಶ್ಚರ್ಯ ಪಡಬೇಕಾಗಿಲ್ಲ ..
.........
ಚಿತ್ರ: ಡಿ.ಸಿ. ನಾಗೇಶ್
..............

ಗಾನ ಲೋಕದ ಗಂಧರ್ವ ‘ಜೇಸುದಾಸ್’


ಬರೀ ೫೦ ಸಾವಿರ ಹಾಡುಗಳು..ಜಾಸ್ತಿಯಾಗದ ಏಳು ರಾಷ್ಟ್ರಪ್ರಶಸ್ತಿಗಳು..ಕೇರಳ ರಾಜ್ಯ ಸರಕಾರದ ಪ್ರಶಸ್ತಿಗಳು ಯುವ ಹಿನ್ನೆಲೆ ಹಾಡುಗಾರರಿಗೆ ಹೋಗಲಿ ಎಂದು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಕೇರಳದ ಆಸ್ಥಾನ ಹಾಡುಗಾರ ಕೆ.ಜೆ. ಜೇಸುದಾಸ್ ಅವರೊಂದಿಗೆ ಒಂದು ಲವಲವಿಕೆಯ ಟಾಕ್ ಟೈಮ್.
ಕೇರಳ ಶೈಲಿಯ ಬಿಳಿ ವೈಟ್ ಆಂಡ್ ವೈಟ್ ದೋತಿ, ಜುಬ್ಬಾ ... ಮುಖದಲ್ಲೊಂದು ಶೇವ್ ಗೀವ್‌ಗೆ ಒಗ್ಗದ- ಬಗ್ಗದ ಗಡ್ಡ. ಇದು ಭಾರತೀಯ ಸಂಗೀತ ಕ್ಷೇತ್ರದ ಬೃಹತ್ ಮೈಲಿಗಲ್ಲು ಕೆ.ಜೆ. ಜೇಸುದಾಸ್‌ರ ಸ್ಮಾಲ್ ಪರಿಚಯ. ಕಟ್ಟೆಶ್ಶೇರಿ ಜೋಸೆಪ್ ಜೇಸುದಾಸ್ ಇದು ಜೇಸುದಾಸ್ ಅವರ ಪೂರ್ತಿ ಹೆಸರು. ಕೆಲವೊಂದು ಬಾರೀ ಕೆ.ಜೆ. ಜೇಸುದಾಸ್ ಎಂದೇ ಶಾರ್ಟ್ ಆಂಡ್ ಸ್ವೀಟ್ ಆಗಿ ಕರೆಯುವ ಅಭಿಮಾನಿ ವರ್ಗವೇ ದೊಡ್ಡದಿದೆ. ರಾಜ್ಯದ ಹಲವು ಭಾಷೆಗಳ ಮೇಲೆ ಹಿಡಿತ ಇರುವ ಗಟ್ಟಿ ಮನುಷ್ಯ ಜೇಸುದಾಸ್, ವಿವಿಧ ಭಾಷೆಗಳಲ್ಲಿ ಈಗಾಗಲೇ ೫೦ ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಏಳು ಬಾರೀ ರಾಷ್ಟ್ರ ಪ್ರಶಸ್ತಿಗಳ ಜತೆಯಲ್ಲಿ ವಿವಿಧ ರಾಜ್ಯಗಳ ಹತ್ತಾರು ಸಿನಿಮಾ ಪ್ರಶಸ್ತಿಗಳು ಅವರ ಮನೆಯ ಶೋಕೇಸ್‌ನೊಳಗೆ ಭದ್ರವಾಗಿ ಕೂತಿದೆ. ಇದು ಬರೀ ಒಬ್ಬ ಹಿನ್ನೆಲೆ ಹಾಡುಗಾರನ ಸಾಧನೆ ಮಾತ್ರವಲ್ಲ . ಇಡೀ ಸಂಗೀತ ಕ್ಷೇತ್ರದಲ್ಲೊಂದು ಅಳಿಸಲಾಗದ ದಾಖಲೆ.
೭೦ ಹಾಗೂ ೮೦ರ ದಶಕದಲ್ಲಿ ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ಮಲಯಾಳಂ ಚಿತ್ರರಂಗದ ಸಂಗೀತದಲ್ಲಿ ಹೊಸ ಆಯಾಮವನ್ನು ಸೃಷ್ಟಿಮಾಡಿದವರು. ೧೯೬೦ರ ದಶಕದಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಕಾಲ ಪದಕ್ಕಳ್’ನಿಂದ ಹೊರಟ ಅವರ ಸಂಗೀತ ಯಾತ್ರೆ ಈಗಲೂ ಭರ್ಜರಿಯಾಗಿ ಮುಂದುವರಿಯುತ್ತಿದೆ. ೨೦೦೧ರಲ್ಲಿ ಸಂಸ್ಕೃತ,ಲ್ಯಾಟಿನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಂದ ಅವರ ‘ಅಹಿಂಸಾ’ ಸಂಗೀತ ಆಲ್ಬಂ ಕರ್ನಾಟಿಕ್ ಸಂಗೀತ ಕ್ಷೇತ್ರದಲ್ಲಿ ಎಬ್ಬಿಸಿದ ಕ್ರಾಂತಿ ಈಗಲೂ ಅದರ ಒರಿಜಿನಾಲ್ ಸಿಡಿಗಳು ಹುಡುಕಾಟಕ್ಕೂ ಅಲಭ್ಯವಾಗಿದೆ. ಭಾರತೀಯ ಸಂಗೀತ ಲೋಕದ ಬ್ರ್ಯಾಂಡ್ ಅಂಬಾಸೀಡರ್‌ನಂತೆ ಕೆಲಸ ಮಾಡಿದ ಜೇಸುದಾಸ್ ಮಲಯಾಳಂನ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರು. ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಪದೇ ಪದೇ ಭೇಟಿ ನೀಡುವ ಜೇಸುದಾಸ್ ಈ ಬಾರೀ ಸಿಕ್ಕಿದ್ದು ಸುರತ್ಕಲ್ ಬಳಿಯ ಶಿಬರೂರಿನ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕದಲ್ಲಿ ಅವರ ಜತೆ ಲವಲವಿಕೆಯ ಒಂದು ಟಾಕ್ ಟೈಮ್..
* ನಿಮಗೆ ಬಹಳ ಇಷ್ಟವಾದ ಸಂಗೀತ ಪ್ರಕಾರ ಯಾವುದು?
- ಹಿಂದೂಸ್ತಾನಿ, ಶಾಸ್ತ್ರೀಯ ಹಾಗೂ ಕರ್ನಾಟಿಕ್‌ನಲ್ಲಿ ನಾನು ಹಾಡಬಲ್ಲೆ. ಆದರೆ ನನಗೆ ಶಾಸ್ತ್ರೀಯ ಸಂಗೀತದಿಂದ ಮಾತ್ರ ಅತೀ ಹೆಚ್ಚಿನ ತೃಪ್ತಿ ಇದೆ. ನನ್ನ ತಂದೆ ಆಗಸ್ಟಿನ್ ಜೋಸೆಪ್ ಅವರು ಶಾಸ್ತ್ರೀಯ ಸಂಗೀತದಲ್ಲಿ ನನಗೆ ಹೆಚ್ಚಿನ ಒಲವು ಮೂಡಿಸಲು ಕಾರಣರಾದರು. ಅವರು ಕೂಡ ನಟ ಹಾಗೂ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ದೊಡ್ಡ ಹೆಸರು. ನಿಜಕ್ಕೂ ತಂದೆಯೇ ನನ್ನ ಪಾಲಿನ ಮೊದಲ ಗುರು.
*ಕರಾವಳಿ ತೀರದಲ್ಲಿ ನಿಮ್ಮ ಶೋಗಳು ಜಾಸ್ತಿಯಾಗುತ್ತಿದೆ ಅಲ್ಲ?
- ಇಲ್ಲ. ಎಲ್ಲ ಕಡೆ ಒಂದೇ ರೀತಿಯಲ್ಲಿ ಜೇಸುದಾಸ್ ನೈಟ್‌ಗಳು ನಡೆಯುತ್ತಿದೆ. ಮುಖ್ಯವಾಗಿ ಕೇರಳ ಹಾಗೂ ಗಲ್ಪ್ ದೇಶಗಳಲ್ಲಿ ಜಾಸ್ತಿ ಎನ್ನಬಹುದು. ಆದರೆ ಕರಾವಳಿಯಲ್ಲಿ ನನ್ನ ಅಭಿಮಾನಿ ವರ್ಗ ಜಾಸ್ತಿ ಇದೆ. ಎಲ್ಲಕ್ಕೂ ಮುಖ್ಯವಾಗಿ ಕರಾವಳಿ ತೀರದ ದೇವಸ್ಥಾನಗಳಿಗೆ ನಾನು ಭೇಟಿ ನೀಡುವುದು ಜಾಸ್ತಿ ಅಂತಾ ಹೇಳಬಹುದು.
* ನೀವು ಭಾರತದ ಎಲ್ಲ ಭಾಷೆಗಳಲ್ಲಿ ಹಾಡಿದ್ದೀರಿ ಅಂತೆ ?
- ಒಂದು ಅರ್ಥದಲ್ಲಿ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ಕಾಶ್ಮೀರಿ, ಅಸ್ಸಾಮೀ ಹಾಗೂ ಕೊಂಕಣಿಯಲ್ಲಿ ನಾನು ಹಾಡಿಲ್ಲ. ಲ್ಯಾಟಿನ್, ಇಂಗ್ಲೀಷ್,ಮಲಯಾ, ರಷ್ಯಾ,ಅರೇಬಿಕ್‌ನಲ್ಲೂ ಕೆಲವೊಂದು ಹಾಡುಗಳನ್ನು ಹಾಡಿದ್ದೇನೆ. ಅಂದಹಾಗೆ ಈ ಎಲ್ಲ ಭಾಷೆಗಳು ನನಗೆ ಬರುತ್ತದೆ ಅಂತಾ ಯಾವುದೇ ಗ್ಯಾರಂಟಿ ಇಲ್ಲ. ಆದರೆ ಹಾಡಿಗೆ ಯಾವುದೇ ಭಾಷೆ ಮುಖ್ಯವಲ್ಲ ಎಂದು ನಂಬಿದವರ ಸಾಲಿನಲ್ಲಿ ನಾನು ಸೇರಿಕೊಂಡಿದ್ದೇನೆ.
* ನಿಮ್ಮ ನೆಚ್ಚಿನ ರೋಲ್ ಮೊಡಲ್‌ಗಳು?
-ನನ್ನ ರೋಲ್ ಮೊಡಲ್‌ಗಳ ಪಟ್ಟಿ ದೊಡ್ಡದಿದೆ. ಅದರಲ್ಲೂ ನನ್ನ ನೆಚ್ಚಿನ ರೋಲ್ ಮೊಡಲ್‌ಗಳೆಂದರೆ ಬಾಲಿವುಡ್‌ನ ಮಹಮ್ಮದ್ ರಫೀ, ಬಾಲಮುರಳಿಕೃಷ್ಣ ಹಾಗೂ ಚೆಂಬಿ ವೈದ್ಯನಾಥ್ ಭಗವತರ್. ಆದರೆ ನಾರಾಯಣ ಗುರು ಅವರ ಸಂದೇಶ ನನಗೆ ಬಹಳ ಇಷ್ಟ. ‘ಒಂದು ಜಾತಿ, ಒಂದು ಧರ್ಮ, ಒಂದು ದೇವರು’ ಈ ಸಂದೇಶದ ಮೇಲೆ ನನ್ನ ಬದುಕು ರೂಪಿತಗೊಂಡಿದೆ.
* ಕೊಲ್ಲೂರು ದೇವಸ್ಥಾನಕ್ಕೆ ಭೇಟಿಯ ಹಿಂದಿರುವ ರಹಸ್ಯ.?
- ಕಳೆದ ೩೦ ವರ್ಷಗಳಿಂದ ನಾನು ಪ್ರತಿಯೊಂದು ನನ್ನ ಹುಟ್ಟಿದ ದಿನದಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬರುತ್ತೇನೆ. ಇದು ದೇವಿಯ ಮೇಲಿಟ್ಟಿರುವ ನಂಬಿಕೆ ಮಾತ್ರ. ಇದರ ಹಿಂದೆ ಯಾವುದೇ ದೊಡ್ಡ ರಹಸ್ಯ ಇಲ್ಲ. ಈ ದೇವಿಯಿಂದ ನಾನು ಬಹಳಷ್ಟು ಪಡೆದುಕೊಂಡಿದ್ದೇನೆ. ಅದನ್ನು ಈಗ ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ೬೦ನೇ ವರ್ಷದ ಹುಟ್ಟುಹಬ್ಬದಂದು ಇಲ್ಲಿ ಸಂಗೀತ ಕೀರ್ತನೆಗಳ ಜತೆಯಲ್ಲಿ ೯ ದಿನಗಳ ಸಂಗೀತ ಮಹೋತ್ಸವನ್ನು ನಡೆಸಿದ್ದೇನೆ. ಇಲ್ಲಿ ಮತ್ತಷ್ಟೂ ಸಂಗೀತ ಮಹೋತ್ಸವಗಳನ್ನು ನಡೆಸುವ ಇರಾದೆನೂ ಇದೆ.
* ನಟನಾ ಕ್ಷೇತ್ರವನ್ನು ಯಾಕೆ ಬಿಟ್ಟು ಹೋದ್ರಿ?
ಹೌದು, ಸಂಗೀತದ ಜತೆಯಲ್ಲಿ ನಾನು ನಾಲ್ಕೈದು ಮಲಯಾಳಂ ಚಿತ್ರಗಳಲ್ಲಿ ನಟಿಸಿಕೊಂಡು ಬಂದಿದ್ದೆ. ಆದರೆ ನಾನು ನಟನೆಯನ್ನು ನಿಜಕ್ಕೂ ಸಿರೀಯಸ್ ಎಂದುಕೊಂಡು ಬಂದವನಲ್ಲ. ಈ ಸಿನಿಮಾಗಳಲ್ಲಿ ನಾನು ಬರೀ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡೆ ಅಷ್ಟೇ..ಈಗ ನಟಿಸುವ ವಯಸ್ಸು ಕೂಡ ನನ್ನಲ್ಲಿ ಇಲ್ಲ ಬಿಡಿ.
* ಕೇರಳ ಸರಕಾರದ ರಾಜ್ಯ ಪ್ರಶಸ್ತಿ ಬೇಡ ಅಂದ್ರಾ..?
-ನಿಜ. ನನಗೆ ಈಗಾಗಲೇ ೨೭ಬಾರಿ ಕೇರಳ ರಾಜ್ಯ ಸರಕಾರದ ಸಿನಿಮಾ ಪ್ರಶಸ್ತಿಗಳು ಬಂದಿದೆ. ಈ ಪ್ರಶಸ್ತಿಯ ಮೇಲೆ ನನಗೆ ಗೌರವ ಭಾವನೆ ಇದೆ. ಆದರೆ ಹೊಸ ಹಾಗೂ ಯುವ ಪೀಳಿಗೆಯ ಹಿನ್ನೆಲೆ ಹಾಡುಗಾರರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂಬ ಕಾರಣದಿಂದ ಪ್ರಶಸ್ತಿ ಬೇಡ ಅಂದೆ. ಇದರಲ್ಲಿ ಬೇರೆ ಯಾವುದೇ ಬೇರೆ ವಿಚಾರ ಇರಲಿಲ್ಲ.
* ನೀವು ಆರಂಭಿಸಿದ ‘ಶಾಂತಿ ಸಂಗೀತ ಯಾತ್ರೆ’ ಕುರಿತು ಹೇಳಿ ?
- ೨೦೦೯ರಲ್ಲಿ ನಾನು ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧ ಸಂಗೀತ ಸಮರವನ್ನು ಆರಂಭಿಸಿದ್ದೆ. ತಿರುವನಂತಪುರದಿಂದ ಹೊರಟ ಈ ಸಂಗೀತ ಯಾತ್ರೆ ಮುಂಬಯಿಯಲ್ಲಿ ಕೊನೆಗೊಂಡಿತ್ತು. ಮುಂಬಯಿ ಸ್ಪೋಟದಲ್ಲಿ ಮಡಿದ ಹೇಮಂತ್ ಕರ್ಕರೆಯ ಪತ್ನಿ ಕವಿತಾ ಕರ್ಕರೆ ಈ ಯಾತ್ರೆಯ ಜ್ಯೋತಿ ಹಿಡಿದು ಮುನ್ನಡೆಸಿದವರು. ನಿಜಕ್ಕೂ ಇದೊಂದು ಒಳ್ಳೆಯ ಪ್ರಯತ್ನ ಎಂದು ಬಹಳಷ್ಟು ಜನರು ನನಗೆ ತಿಳಿಸಿದ್ದರು.
* ನಿಮ್ಮ ‘ತರಂಗಿಣಿ ’ ಸಂಸ್ಥೆಯ ಕಾರ್‍ಯ ಚಟುವಟಿಕೆ ಏನು?
- ೧೯೮೦ರಲ್ಲಿ ‘ತರಂಗಿಣಿ’ ಸಂಗೀತ ಸ್ಟುಡಿಯೋ ತಿರುವನಂತಪುರದಲ್ಲಿ ಆರಂಭ ಆಯಿತು. ೧೯೯೨ರ ನಂತರ ಇದನ್ನು ಚೆನ್ನೈಗೆ ಸ್ಥಳಾಂತರ ಮಾಡಬೇಕಾಯಿತು. ೧೯೯೮ರಲ್ಲಿ ಅಮೆರಿಕದ ಸಂಸ್ಥೆಯೊಂದರ ಜತೆಯಲ್ಲಿ ಒಪ್ಪಂದ ಮಾಡಿಕೊಂಡು ಅಲ್ಲಿಯೂ ಕಚೇರಿಯೊಂದು ಆರಂಭವಾಯಿತು. ಕೇರಳದಲ್ಲಿ ಮಲಯಾಳಂ ಸಿನಿಮಾಗಳ ಸ್ಟಿರಿಯೋ ಟೈಪ್‌ನ ಕ್ಯಾಸೆಟ್‌ಗಳನ್ನು ಬಿಡುಗಡೆ ಮಾಡಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ‘ತರಂಗಿಣಿ’ ಪಾತ್ರವಾಗಿದೆ. ಹೊಸ ಗಾಯಕರಿಗೆ ಒಳ್ಳೆಯ ವೇದಿಕೆ ನೀಡಲು ‘ತರಂಗಿಣಿ’ ಸಂಸ್ಥೆ ಸದಾ ಮುಂದಾಗಿದೆ.
...............
ಚಿತ್ರ: ಲೋಕೇಶ್ ಸುರತ್ಕಲ್
......................

Wednesday, March 16, 2011

‘ಪಾನಿ’ ಮೇಲೊಂದು ಹಾಲಿವುಡ್ ಸಿನ್ಮಾ


‘ಪಾನಿ’ ಎಂಬ ಅನ್ ರಿಲೀಸ್ಡ್ ಹಾಲಿವುಡ್ ಚಿತ್ರ. ಬಿಜಾಪುರದ ನೀರಿನ ಸಮಸ್ಯೆಯನ್ನು ವರ್ಲ್ಡ್ ಕ್ಲಾಸ್ ಪ್ರೇಕ್ಷಕರ ಮುಂದೆ ತರಲಿದೆ. ಭಾರತೀಯ ಮೂಲದ ಹಾಲಿವುಡ್ ನಿರ್ದೇಶಕ ಶೇಖರ್ ಕಪೂರ್ ಪಾನಿಯನ್ನು ಜಾಗತಿಕ ಮಟ್ಟದಲ್ಲಿ ತೆರೆಗೆ ತರುವ ಮಹಾರಥಿಯಂತೆ... ಹೆಚ್ಚಿನ ಮಾಹಿತಿಗೆ ಕೆಳಗಡೆ ಓದಿ...


ಭಾರತೀಯ ಮೂಲದ ಹಾಲಿವುಡ್ ಫೇಮ್ ನಿರ್ದೇಶಕ ಶೇಖರ್ ಕಪೂರ್ ‘ಪಾನಿ’ ಮೇಲೊಂದು ಸಿನ್ಮಾ ಮಾಡಲು ಎಲ್ಲ ರೀತಿಯಲ್ಲೂ ರೆಡಿಯಾಗಿದ್ದಾರೆ. ಅಂದಾಹಾಗೆ ‘ಪಾನಿ’ ಎಂದರೆ ‘ಎಚ್‌ಟು ಒ’ ಅಂತಾ ಗೊತ್ತಾಯಿತು ಅಲ್ವಾ ಮಾರಾಯ್ರೆ.. ಈ ‘ಪಾನಿ’ಗೂ ನಮ್ಮ ಬಿಜಾಪುರಕ್ಕೂ ಬಹಳ ಹತ್ತಿರದ ನಂಟಿದೆ ಎಂಬ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ‘ಪಾನಿ’ಯ ನಿರ್ದೇಶಕ ಶೇಖರ್ ಕಪೂರ್ ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ತೋರಿಸಲು ಕತೆ ಆಯ್ಕೆ ಮಾಡಿದ್ದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಹೋಗುತ್ತಿರುವ ನಮ್ಮ ರಾಜ್ಯದ ಬಿಜಾಪುರವನ್ನು !! ಕನ್ನಡದ ವಾಹಿನಿಯೊಂದು ಬಿಜಾಪುರದ ನೀರಿನ ಸಮಸ್ಯೆಯನ್ನು ಪದೇ ಪದೇ ತೋರಿಸುತ್ತಿದ್ದಾಗ ಶೇಖರ್ ಕಪೂರ್ ಪಾನಿಯ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಿನ್ಮಾ ಮಾಡಿದರೆ ಹೇಗೆ ಎಂದು ತಲೆಯನ್ನು ಕೆರೆದುಕೊಂಡರಂತೆ..! ತಕ್ಷಣ ಹೊಳೆದದ್ದು ಪಾನಿ ಚಿತ್ರ ಎಂದು ಖುದ್ದು ಶೇಖರ್ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ಏನ್ ಹೇಳ್ತಾರೆ ಶೇಖರ್...
ನಿರ್ದೇಶಕ ಶೇಖರ್ ಕಪೂರ್ ಬ್ಲಾಗಿನಲ್ಲಿ ಏನು ಹೇಳಿಕೊಂಡಿದ್ದಾರೆ ಅಂದ್ರೆ: ‘ನಾನು ಇಂದು ಕನ್ನಡದ ವಾಹಿನಿಯೊಂದರಲ್ಲಿ ಬಿಜಾಪುರದ ಹಳ್ಳಿಯೊಂದು ನೀರಿನ ಸಮಸ್ಯೆಯಿಂದ ಕೆಂಗೆಟ್ಟು ಜನರು ಪ್ರತಿಭಟನೆಗೆ ಮುಂದಾಗಿರುವ ದೃಶ್ಯವನ್ನು ಕಂಡೆ. ನೀರಿಗಾಗಿ ಅವರು ಸ್ಥಳೀಯ ನೀರು ಸರಬರಾಜು ಸಂಸ್ಥೆಗೆ ದಾಳಿ ನಡೆಸಿದರು. ಆದರೆ ನೀರು ಸರಬರಾಜು ಮಾಡುತ್ತಿದ್ದ ಅಕಾರಿಗಳು ನೀರನ್ನು ಟ್ಯಾಂಕ್‌ನಲ್ಲಿ ಭದ್ರವಾಗಿ ಇಟ್ಟುಕೊಂಡು ಅದನ್ನು ಸ್ಥಳೀಯ ರಾಜಕೀಯ ಮುಖಂಡರಿಗೆ ಹಾಗೂ ಪ್ರಭಾವಿ ಉದ್ಯಮಿಗಳಿಗೆ ಮಾತ್ರ ಸರಬರಾಜು ಮಾಡುತ್ತಿರುವ ಅಂಶ ಬೆಳಕಿಗೆ ಬಂತು. ನೀರು ಎಲ್ಲರಿಗೂ ಬೇಕಾದದ್ದು ಮಾತ್ರವಲ್ಲ ಅದು ಎಲ್ಲರ ಹಕ್ಕು. ಈ ಹಕ್ಕಿನ ಕುರಿತು ಚಿತ್ರ ಮಾಡಲು ನಾನು ನಿರ್ಧಾರ ತೆಗೆದುಕೊಂಡೆ.. ರಾಜಕೀಯ ಮುಖಂಡರ ಪ್ರಭಾವ ಬಳಸಿ ನಿಮ್ಮ ಟ್ಯಾಪ್‌ನಲ್ಲೂ ನೀರು ಬರಲು ಒತ್ತಡ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಮುಂದೆ ಬರಬಹುದು. ಇದೇ ನನ್ನ ಚಿತ್ರ ‘ಪಾನಿ’ಯ ಮುಖ್ಯ ತಿರುಳು. ಕಳೆದ ೧೨ ವರ್ಷಗಳಿಂದ ಇಂತಹ ಕತೆಗಾಗಿ ಹುಡುಕಾಟ ಮಾಡುತ್ತಿದ್ದೆ.. ಎಲ್ಲರೂ ಫ್ಯಾಂಟಸಿ ಚಿತ್ರಗಳನ್ನು ನಿರ್ಮಾಣ ಮಾಡಿ ಹಣ ದೋಚುತ್ತಾರೆ. ಆದರೆ ಎಲ್ಲರೂ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಗತ್ಯತೆ ಇದೆ. ಅದೇ ಪಾನಿಯ ಸಮ್ಮರಿ’
ಪಾನಿಯಲ್ಲಿ ಹೃತಿಕ್:
ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮಹಾತ್ವಕಾಂಕ್ಷೆಯ ಚಿತ್ರ ‘ಕೈಟ್’ ಈ ತಿಂಗಳಲ್ಲಿ ಬಾನಾಡಿಯಂತೆ ಹಾರಾಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೈಟ್‌ನಲ್ಲಿ ನಟಿಸಿರುವ ವಿದೇಶಿ ರೂಪದರ್ಶಿ ಬಾರ್ಬರಾ ಮೋರಿಯಂತಹ ಬಿಳಿ ತೊಗಲಿನ ಹುಡುಗಿ ‘ಪಾನಿ’ಯಲ್ಲೂ ಇದ್ದ್ದಾರೆ. ಹಾಲಿವುಡ್ ನಟಿ ಕ್ರಿಸ್ಟಿನ್ ಸ್ಟಿವಾರ್ಟ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಾಲಿವುಡ್‌ನಲ್ಲಿ ಭರ್ಜರಿಯಾಗಿ ಗಲ್ಲಾ ಪೆಟ್ಟಿಗೆ ದೋಚಿದ ‘ಟ್ವಿಲೈಟ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಾಯಕಿ ಕ್ರಿಸ್ಟಿನ್ ಚಿತ್ರದ ಕತೆ ನೋಡಿ ಒಪ್ಪಿಕೊಂಡಿದ್ದಾರೆ. ‘ಪಾನಿ’ ಆಂಗ್ಲ ಭಾಷೆಯಲ್ಲಿ ಬಿಡುಗಡೆ ಕಂಡ ನಂತರ ಅದನ್ನು ಭಾರತೀಯ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಯೋಜನೆ ಕೂಡ ಇದೆ ಎಂದು ನಿರ್ದೇಶಕ ಶೇಖರ್ ಕಪೂರ್ ಹೇಳಿಕೊಂಡಿದ್ದಾರೆ.
‘ಪಾನಿ’ಯಲ್ಲಿ ಯಾವುದೇ ನಾಯಕ ನಾಯಕಿಗಿಂತ ಹೆಚ್ಚಾಗಿ ನೀರಿನ ಮಹತ್ವದ ಕುರಿತು ಜಾಗೃತಿಯನ್ನು ಹುಟ್ಟಿಸುವ ಕೆಲಸ ಮಾತ್ರ ನಡೆಯುತ್ತದೆ. ಈಗಾಗಲೇ ಚಿತ್ರದ ಶೂಟಿಂಗ್ ಕಾರ್‍ಯಗಳು ಆರಂಭಗೊಂಡಿದ್ದು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ತರುವ ಕುರಿತು ಪ್ಲಾನ್‌ಗಳನ್ನು ಮಾಡಲಾಗುತ್ತದೆ ಎಂದು ಶೇಖರ್ ಹೇಳಿಕೊಂಡಿದ್ದಾರೆ.
ಪಾನಿ ಯಾಕೆ ಡಿಫರೆಂಟ್:
ಚಿತ್ರ ಹೇಳುವಂತೆ ‘ಪಾನಿ’ಯ ಕುರಿತು ಜಾಗೃತಿ ಹುಟ್ಟು ಹಾಕುವ ಜತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಬರುವುದರಿಂದ ‘ಪಾನಿ’ಗೆ ಇನ್ನಷ್ಟು ಕಿಮ್ಮತ್ತು ಬರಲಿದೆ. ಬಾಲಿವುಡ್‌ನ ಸೂಪರ್ ಹೀರೋ ಹೃತಿಕ್ ರೋಷನ್ ಹಾಗೂ ಹಾಲಿವುಡ್ ನಟಿ ಕ್ರಿಸ್ಟಿನ್ ಮೊದಲ ಬಾರಿಗೆ ಜತೆಯಾಗುತ್ತಿದ್ದಾರೆ. ಶೇಖರ್ ಕಪೂರ್ ಬಹಳ ವರ್ಷಗಳ ನಂತರ ಬಾಲಿವುಡ್ ಹಾಗೂ ಹಾಲಿವುಡ್ ಶೈಲಿಗಳನ್ನು ಮಿಕ್ಸಿಂಗ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯದ ಬಿಜಾಪುರದ ನೀರಿನ ಸಮಸ್ಯೆ ಹಾಲಿವುಡ್ ಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ ಅದು ವಿಶೇಷ ಅಲ್ವಾ...?

Tuesday, March 15, 2011

ಕತ್ತರಿ ಕಲಾವಿದ


ಕತ್ತಲೆ ಕೋಣೆಯಲ್ಲಿ ನಿರ್ದೇಶಕನ ಜತೆ ಕೂತು ಕತ್ತರಿ ಪ್ರಯೋಗ ಮಾಡಿ ಚಿತ್ರವನ್ನು ಅದ್ದುತವಾಗಿ ಹೊರ ತಂದ ಸಂಕಲನಕಾರ ಎಲ್ಲಿಯೋ ಮರೆಯಾಗಿ ಹೋಗುತ್ತಾನೆ. ಸಿನ್ಮಾಲ್ಯಾಂಡ್‌ನಲ್ಲಿ ಅವರು ಔಟ್ ಆಫ್ ಫೋಕಸ್ .ರಾಜ್ಯದಿಂದ ಗುಳೇ ಹೊರಟು ಗೆದ್ದು ಬಂದ ಸುರೇಶ್ ಅರಸ್ ನಮ್ಮ ಮುಂದೆ ನಿಂತು ಸಿನ್ಮಾಲ್ಯಾಂಡ್ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ.

ಸುರೇಶ್ ಅರಸ್. ಹೆಮ್ಮೆಯಿಂದ ಹೇಳಿಬಿಡಬಹುದು ಅವರು ಕನ್ನಡದ ಸುಪುತ್ರ. ರಾಜ್ಯದಿಂದ ಹೊರಗಡೆ ಹೋಗಿ ಶೈನ್ ಆದ ನಟರಾದ ಕೋಕಿಲ ಮೋಹನ್, ರಜನಿಕಾಂತ್, ಮುರುಳಿ, ಪ್ರಕಾಶ್ ರಾಜ್, ಅರ್ಜುನ್ ಸರ್ಜಾ ಸಾಲಿನಲ್ಲಿ ಸುರೇಶ್ ಅರಸ್ ಕೂಡ ಇದ್ದಾರೆ. ದಕ್ಷಿಣ ಭಾರತೀಯ ಸಿನಿಮಾ ಸಂಕಲನ ಕ್ಷೇತ್ರದಲ್ಲಿ ಸುರೇಶ್ ಅರಸ್‌ರ ದು ಬಹಳ ದೊಡ್ಡ ಹೆಸರು. ಅಂದಹಾಗೆ ‘ಅರಸ್’ ಕನ್ನಡ ಸಿನ್ಮಾ ಲ್ಯಾಂಡ್‌ನಲ್ಲಿ ಬಹಳ ಚಿರಪರಿಚಿತ ಸರ್‌ನೇಮ್. ಕನ್ನಡದ ಖ್ಯಾತ ನಟ, ಡಬ್ಬಿಂಗ್ ಕಲಾವಿದ, ನಿರ್ದೇಶಕ ಹೀಗೆ ಹಲವಾರು ನೇಮ್ ಪ್ಲೇಟ್‌ಗಳನ್ನು ತೂಗಾಡಿಸಿಕೊಂಡಿದ್ದ ದಿ.ಸುಂದರ್ ಕೃಷ್ಣ ಅರಸ್ ಫ್ಯಾಮಿಲಿ ಮೆಂಬರ್‌ಗಳ ಲೀಸ್ಟ್‌ನಲ್ಲಿ ಸುರೇಶ್ ಅರಸ್ ಕೂಡ ಒಬ್ಬರು.
ಸುಂದರ್ ಕೃಷ್ಣ ಅರಸ್ ಅವರ ತಾಯಿ ಹಾಗೂ ಸುರೇಶ್ ಅರಸ್‌ರ ತಾಯಿ ಅಕ್ಕ- ತಂಗಿಯಂದಿರು. ಎಲ್ಲಕ್ಕೂ ಮುಖ್ಯವಾಗಿ ಸುಂದರ್ ಆಕ್ಟಿಂಗ್ ಫೀಲ್ಡ್ ಆಯ್ಕೆ ಮಾಡಿಕೊಂಡರೆ ಸುರೇಶ್ ಅರಸ್ ಸಂಕಲನ ಕ್ಷೇತ್ರವನ್ನು ಸೆಲೆಕ್ಟ್ ಮಾಡಿದರು. ಸುರೇಶ್ ಎಲ್ಲಿಯಾದರೂ ಆಕ್ಟಿಂಗ್ ಕ್ಷೇತ್ರವನ್ನು ಅಪ್ಪಿಕೊಂಡು ಬಿಟ್ಟಿದ್ದಾರೆ ಕತೆ ಅಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ ಸುರೇಶ್ ಆಯ್ಕೆ ಮಾಡಿದ ಕ್ಷೇತ್ರದಿಂದ ಅವರ ಹೆಸರಿಗೊಂದು ಕಿಮ್ಮತ್ತು ಕುದುರಿಸಿದೆ. ಭಾರತೀಯ ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕ ಮಣಿರತ್ನಂರಂತಹ ಕೈಕೆಳಗೆ ಸುರೇಶ್ ಕೆಲಸ ಮಾಡಿದ್ದಾರೆ.
ತಮಿಳಿನಲ್ಲಿ ತೆರೆಕಂಡ ‘ದಳಪತಿ’ ‘ಇರುವರ್’ ‘ತಿರುಡಾ ತಿರುಡಾ’ ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಬಂದ ‘ರೋಜಾ’ ‘ಬಾಂಬೆ’ ಹಾಗೂ ‘ದಿಲ್ ಸೇ’ ಬರೀ ನಿರ್ದೇಶಕ ಮಣಿಗೆ ಹೆಸರು ತಂದುಕೊಟ್ಟಿಲ್ಲ. ಬದಲಾಗಿ ರಾಜ್ಯದ ಸುಪುತ್ರ ಸುರೇಶ್ ಅರಸ್‌ಗೂ ಬಹಳ ದೊಡ್ಡ ಹೆಸರನ್ನು ತಂದು ಕೊಟ್ಟಿತು. ಕನ್ನಡದ ನಟ, ನಿರ್ದೇಶಕ ಶಂಕರ್‌ನಾಗ್ ಅವರ ಮಾಸ್ಟರ್ ಪೀಸ್ ವರ್ಕ್ ‘ಮಾಲ್ಗುಡಿ ಡೇಸ್’ಗೂ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ಹೀಗೆ ಮಣಿಯ ಚಿತ್ರಗಳು ಮಾತ್ರವಲ್ಲ ಅವರ ೩೫ ವರ್ಷಗಳ ಸಿನ್ಮಾ ಫೀಲ್ಡ್‌ನಲ್ಲಿ ತಮಿಳು, ಕನ್ನಡ, ಮಳಯಾಳಂ, ಬೆಂಗಾಲಿ, ತೆಲುಗು, ತುಳು,ಕೊಂಕಣಿ, ಕೊಡವ, ಹಿಂದಿಯ ಸೇರಿದಂತೆ ೫೫೦ಕ್ಕಿಂತ ಅಕ ಚಿತ್ರಗಳಿಗೆ ಸಂಕಲನ ಕೆಲಸ ಮಾಡಿದ್ದಾರೆ. ಜತೆಗಿಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಸುರೇಶ್ ಅರಸ್ ಇತ್ತೀಚೆಗೆ ಮಂಗಳೂರಿನ ಖಾಸಗಿ ಕಂಪ್ಯೂಟರ್ ಸಂಸ್ಥೆಯೊಂದರಲ್ಲಿ ಎಡಿಟಿಂಗ್ ಕುರಿತು ವಿದ್ಯಾರ್ಥಿಗಳಿಗೆ ಬರೋಬರಿ ಒಂದು ದಿನದ ಕ್ಲಾಸ್ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳ ಎಡಿಟಿಂಗ್ ಗೊಂದಲ, ಪ್ರಶ್ನೆ, ಸಂದೇಹಗಳಿಗೆ ಉತ್ತರ ಕೊಡುತ್ತಿದ್ದ ಸುರೇಶ್ ಲವಲವಿಕೆಯ ಜತೆಯಲ್ಲೂ ಒಂಚೂರು ಮಾತನಾಡಿದರು. ‘ಅರ್ಧ ಗಂಟೆ ಮಾತು. ಉಳಿದದ್ದು ಪ್ರ್ಯಾಕ್ಟಿಕಲ್’ ಎನ್ನುವ ಉಪನ್ಯಾಸಕರ ಸಿದ್ಧಾಂತಕ್ಕೆ ಅರಸರು ಗಂಟು ಬಿದ್ದಿದ್ದರು. ಲವಲವಿಕೆಯ ಮಾತಿನ ನಡುನಡುವೆ ತನ್ನ ಪುಟ್ಟ ಲ್ಯಾಪ್‌ಟಾಪ್‌ನಲ್ಲಿ ಎಡಿಟಿಂಗ್ ಮಾಡಿದ ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಕತ್ತಲೆ ಕೋಣೆ ವರ್ಸಸ್ ಕತ್ತರಿಯ ಜುಗಲ್‌ಬಂಯ ಬಗ್ಗೆ ಲವಲವಿಕೆ ಕೇಳಿದಾಗ, ‘ಸಂಕಲನ ಎನ್ನುವುದು ಬರೀ ಒಂದು ಕತ್ತರಿಯ ಪ್ರಯೋಗವಲ್ಲ. ಅಲ್ಲಿ ತಾಳ್ಮೆ ಬೇಕು. ಎಲ್ಲಕ್ಕೂ ಮುಖ್ಯವಾಗಿ ಕತೆಗೆ ಪೂರಕವಾಗಿರಬೇಕು. ವೃತ್ತಿಯ ಬಗ್ಗೆ ಆಳವಾದ ಜ್ಞಾನ, ತಂತ್ರಜ್ಞಾನದ ಅರಿವು ಇರಬೇಕು. ಜತೆಗೆ ನಿರ್ದೇಶಕನ ಉತ್ಸುಕತೆನೂ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ಒಳ್ಳೆಯ ಚಿತ್ರ ಹೊರ ಬರುತ್ತದೆ. ಎಲ್ಲಕಿಂತ ಮುಖ್ಯವಾಗಿ ಥಿಯೇಟರ್‌ಗೆ ಬರುವ ಪ್ರೇಕ್ಷಕ ಚಿತ್ರವನ್ನು ನೋಡಿದಾಗ ಎಲ್ಲಿಯೂ ಕತ್ತರಿ ಪ್ರಯೋಗ ನಡೆದಿಲ್ಲ ಎಂದು ತಿಳಿದುಕೊಳ್ಳಬೇಕು ಎನ್ನೋದು ಅರಸ್ ಅವರ ವಾದ.
ಸುರೇಶ್ ಅರಸ್ ದಿನದ ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ೧೮ ಗಂಟೆಗಳ ಕಾಲ ದುಡಿಯುತ್ತಾರೆ. ಅದರಲ್ಲೂ ಮನೆ ಹಾಗೂ ಕಚೇರಿ ಎರಡು ಜತೆಜತೆಗಿದೆ. ಎಂಟು ಮಂದಿಯ ಎಡಿಟಿಂಗ್ ಟೀಮ್ ಇದೆ. ಕರ್ನಾಟಕದಲ್ಲಿ ಯಾವುದಾದರೂ ಕನ್ನಡ ಸಿನ್ಮಾ ಒಪ್ಪಿಕೊಂಡರೆ ಅಪರೂಪಕ್ಕೊಮ್ಮೆ ಬೆಂಗಳೂರಿಗೆ ಬರುತ್ತಾರೆ. ಸುರೇಶ್ ಇರೋದೆಲ್ಲ ಚೆನ್ನೈಯಲ್ಲಿರುವ ‘ಸಾಲಿಗ್ರಾಮಂ’ ಎಂಬ ಪುಟ್ಟ ನಗರದಲ್ಲಿ ಅವರ ಕೆಲಸ ಕಾರ್‍ಯಗಳು ನಿರಂತರವಾಗಿ ನಡೆಯುತ್ತಿದೆ. ಅವರ ಜತೆಯಲ್ಲಿ ಪುತ್ರ ರಾಘವ್ ಅರಸ್ ಕೂಡ ಇದ್ದಾರೆ. ವಿಶುವಲ್ ಕಮ್ಯೂನೀಕೇಷನ್‌ನಲ್ಲಿ ಪದವಿ ಪಡೆದಿರುವ ರಾಘವ್ ಚಿತ್ರ ನಿರ್ದೇಶಕನಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಅಪ್ಪನ ಜತೆಯಲ್ಲಿ ನಿಂತು ಸಿನ್ಮಾ ತಂತ್ರಜ್ಞಾನವನ್ನು ನಿಧಾನವಾಗಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನೊಬ್ಬ ಪುತ್ರ ಗೌತಮ್ ಅರಸ್ ಬೆಂಗಳೂರಿನಲ್ಲಿ ಬಿಬಿಎಂ ಅಧ್ಯಯನ ಮಾಡುತ್ತಿದ್ದಾರೆ. ಅದಷ್ಟೂ ಬೇಗನೆ ಸಿನ್ಮಾ ಲ್ಯಾಂಡ್‌ಗೆ ಎಂಟ್ರಿಯಾಗಬೇಕೆನ್ನುವುದು ಗೌತಮ್‌ರ ಕನಸು ಎನ್ನುತ್ತಾರೆ ಸುರೇಶ್.
ಅರಸರ ಜೋಳಿಗೆಯಿಂದ:
‘ಕನ್ನಡದ ನಿರ್ದೇಶಕ ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಚಿತ್ರದ ಸಂಕಲನ ಕಾರ್‍ಯವನ್ನು ನೋಡಿದ ಮಣಿರತ್ನಂ ನನ್ನನ್ನು ‘ದಳಪತಿ’ ಚಿತ್ರಕ್ಕೆ ಎಡಿಟಿಂಗ್ ಮಾಡಲು ಕರೆದರು. ದೊಡ್ಡ ನಿರ್ದೇಶಕರೊಬ್ಬರು ಈ ರೀತಿಯಲ್ಲಿ ಕರೆದಾಗ ಖುಷಿ ಆಯಿತು. ತಕ್ಷಣ ಒಪ್ಪಿಕೊಂಡೆ. ನಂತರ ಮಣಿ ನಿರ್ದೇಶನದ ನಾಲ್ಕೈದು ಚಿತ್ರಗಳಿಗೆ ಸಂಕಲನಕಾರನಾಗಿ ಕೆಲಸ ಮಾಡಿದೆ. ಒಳ್ಳೆಯ ಹೆಸರು ಕೂಡ ಕೊಟ್ಟಿತು. ದೊಡ್ಡ ನಿರ್ದೇಶಕನ ಕೈಕೆಳಗೆ ಕೆಲಸ ಮಾಡಿದ ಅನುಭವ ಕೂಡ ಲಭ್ಯವಾಯಿತು. ಅದು ನನ್ನ ಪುಣ್ಯ.. ಎಂದರು ಸುರೇಶ್ ಅರಸ್. ‘ಮಣಿರತ್ನಂರ ಆರಂಭದ ಬಹುತೇಕ ಚಿತ್ರಗಳಿಗೆ ಸಂಕಲನಕಾರನಾಗಿ ದುಡಿದ ಬಿ.ಲೆನಿನ್ ‘ಒರುಕ್ಕು ನೂರು ಪೇರ್’ ಚಿತ್ರ ನಿರ್ಮಾಣ ಮಾಡಿದರು. ಅವರು ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರರಾಗಿದ್ದರೂ ಕೂಡ ಅವರ ಚಿತ್ರವನ್ನು ನನ್ನ ಕೈಯಲ್ಲಿ ಎಡಿಟಿಂಗ್ ಮಾಡಿಸಿದರು ಇದೆಲ್ಲವೂ ಸಂಕಲನಕಾರನ ಬದುಕಿನಲ್ಲಿ ಮರೆಯಲಾಗದ ಕ್ಷಣಗಳು’ ಎಂದು ನೆನಪುಗಳ ಮೂಟೆಯನ್ನು ಬಿಚ್ಚಿಟ್ಟರು ಸುರೇಶ್ ಅರಸ್.
೩೫ ವರ್ಷಗಳ ಹಿಂದೆ ಇದೇ ಮಂಗಳೂರಿನ ಪೀಟರ್ ಗೊನ್ಸಾಲ್ವೀಸ್ ಕೊಂಕಣಿಯಲ್ಲಿ ‘ತಿಸ್ರಿ ಚೀಟ್’ಎನ್ನುವ ಚಿತ್ರವನ್ನು ನನ್ನ ಎಡಿಟಿಂಗ್ ಟೇಬಲ್ ಮೇಲೆ ಇಟ್ಟುಹೋದರು. ಅದೇ ನನ್ನ ಮೊದಲ ಸಂಕಲನ ಚಿತ್ರ. ಕರಾವಳಿಯಲ್ಲಿರುವ ದೇವಸ್ಥಾನಗಳ ಮೇಲೆ ನನಗೆ ವಿಶೇಷ ಮೋಹ. ಟೈಮ್ ಸಿಕ್ಕಾಗ ಇಲ್ಲಿಗೆ ಬಂದು ಹೋಗುತ್ತೇನೆ. ಈ ಬಾರಿ ಬಂದಾಗಲೂ ಕದ್ರಿಗೆ ಹೋದೆ, ಹಳೆಯ ನೆನಪುಗಳು ಒಂದೊಂದಾಗಿ ಬಿಚ್ಚಿಕೊಂಡವು ಪದೇ ಪದೇ ಕರಾವಳಿಗೆ ಭೇಟಿ ಕೊಡಬೇಕು ಎನ್ನುವುದು ಕೂಡ ನನ್ನ ಬಯಕೆ ಎಂದರು ಅರಸರು.
ಮತ್ತೆ ಸಿನ್ಮಾಲ್ಯಾಂಡ್ ಕುರಿತು ಮಾತು ಹರಿಯಿತು. ಸುರೇಶ್ ಅರಸ್ ಮತ್ತೆ ಮನಸಿನಾಳದ ದುಗುಡಗಳನ್ನು ಬಿಚ್ಚಿಡಲಾರಂಭಿಸಿದರು. ಕನ್ನಡ ವರ್ಸಸ್ ತಮಿಳು ಚಿತ್ರಗಳ ಕುರಿತು ಪುಟ್ಟ ಚರ್ಚೆಯೇ ಪ್ರಕೋಪಕ್ಕೆ ಹೋಗುತ್ತಿದೆಯೇ ಎಂದುಕೊಂಡಾಗ ಅರಸರು ಮತ್ತೆ ಕೂಲ್ ಆಗಿ ಉತ್ತರ ಕೊಟ್ಟರು. ‘ಕರ್ನಾಟಕ ಬಿಟ್ಟು ಹೋಗದಿದ್ದಾರೆ ನಾನು ಬೆಳೆಯುತ್ತಿರಲಿಲ್ಲ. ಗಾಂನಗರದಲ್ಲಿ ರಾಜ್ಯದವರಿಗೆ ಅವಕಾಶ ಕಡಿಮೆ. ಎಲ್ಲವೂ ಹೊರರಾಜ್ಯದ ಮಂದಿಗೆ ಮೊದಲ ಮಣೆ ಹಾಕುತ್ತಾರೆ. ಆದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ಆಗಿಲ್ಲ ಬಿಡಿ. ಅಲ್ಲಿ ಪ್ರತಿಭೆ, ಪ್ರಾಮಾಣಿಕತೆಗೆ ಮೊದಲ ಮಣೆ ಇಡುತ್ತಾರೆ. ಅದರಲ್ಲೂ ತಮಿಳಿಗೆ ವಿಸ್ತಾರವಾದ ಮಾರುಕಟ್ಟೆ ಇದೆ. ಗಾಂನಗರಕ್ಕೆ ಅದು ಇಲ್ಲ. ಕೈಯಲ್ಲಿ ಹಣ ಇದೆ ಎಂದುಕೊಂಡು ಕನ್ನಡದಲ್ಲಿ ಸಿನ್ಮಾ ಮಾಡುತ್ತಾರೆ. ಅದೇ ಕಳಪೆ ಗುಣಮಟ್ಟದ ಚಿತ್ರಗಳಿಗೆ ಕಾರಣವಾಗುತ್ತಿದೆ ಎನ್ನುವುದು ಅರಸರ ಬೇಸರ.
ಎಲ್ಲಕ್ಕೂ ಒಂದು ಟೈಮ್ ಇದೆ ಸರ್. ಕನ್ನಡ ಸಿನಿಮಾಗಳು ಕೂಡ ಬೆಳೆಯುತ್ತದೆ. ಹೊಸಬರಿಗೂ ಅವಕಾಶಗಳಿವೆ. ಆದರೆ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಗಾಂನಗರಕ್ಕೆ ಬರಬೇಕು. ಹೊಸ ಪ್ರಯತ್ನಗಳು ನಡೆಯುತ್ತಿದೆ ಜತೆಗೆ ಅದನ್ನು ಮಾರುಕಟ್ಟೆಗೆ ಬಿಡುವ ಕೆಸಲ ಮಾಡಬೇಕು. ಈ ವಿಚಾರದಲ್ಲಿ ತಮಿಳು ಸಿನ್ಮಾ ಇಂಡಸ್ಟ್ರಿ ಬಹಳಷ್ಟು ಮಟ್ಟಿಗೆ ಗೆದ್ದು ಬಂದಿದೆ. ಅಲ್ಲಿ ಸೋತ ವ್ಯಕ್ತಿ ಕೂಡ ಗೆದ್ದು ಬರುತ್ತಾನೆ. ಸೋತವನಿಗೂ ಗೆಲ್ಲುವ ಅವಕಾಶ ತಮಿಳು ಸಿನ್ಮಾ ನೀಡುತ್ತಿದೆ ಎನ್ನುವುದು ಖುಶಿಯ ವಿಚಾರ ಎನ್ನುತ್ತಾರೆ ಅರಸರು.
ಸಧ್ಯಕ್ಕೆ ಅರಸರ ಎಡಿಟಿಂಗ್ ಟೇಬಲ್ ಮ್ಯಾಲೆ ತಮಿಳಿನ ಆರ್. ಬಾಲನ್ ನಿರ್ದೇಶನದ ‘ಅವನ್ ಇವನ್’ ಕನ್ನಡದಲ್ಲಿ ದಿಗಂತ್ ಅಭಿನಯದ ‘ಪುತ್ರ’ ನಿರ್ದೇಶಕ ಶಿವರುದ್ರಯ್ಯರ ‘ಮಾಗಿಯ ಕಾಲ’ ಹಾಗೂ ಬರಗೂರು ರಾಮಚಂದ್ರಪ್ಪ ಅವರ ‘ಭೂಮಿತಾಯಿ’ ಇದೆ. ಉಳಿದಂತೆ ಬಂಗಾಳಿಯ ಆರ್ಟ್ ಮೂವಿಗಳು, ತುಳುವಿನ ಒಂದು ಸಿನ್ಮಾ ಈಗಾಗಲೇ ಬುಕ್ ಆಗಿದೆಯಂತೆ. ಮಣಿಯ ಜತೆಗಿನ ಮುಂದಿನ ವರ್ಕ್ ಯಾವುದಾದರೂ ಇದೆಯಾ ಅಂತಾ ಲವಲವಿಕೆ ಪ್ರಶ್ನೆ ಎತ್ತಿದಾಗ ‘ ನಿಜಕ್ಕೂ ಮಣಿಯ ಜತೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಅವರು ಒಂದು ಚಿತ್ರ ನಿರ್ದೇಶನಕ್ಕೆ ತೆಗೆದುಕೊಳ್ಳುವ ಅವ ಸುದೀರ್ಘವಾಗಿರುತ್ತದೆ. ಈ ಸಮಯದಲ್ಲಿ ಬೇರೆ ಚಿತ್ರಗಳಿಗೆ ಒಪ್ಪಿಕೊಂಡ ಎಲ್ಲ ಕೆಲಸಗಳು ಬಾಕಿ ಉಳಿಯುತ್ತದೆ. ಮಣಿಯ ಜತೆಗೆ ಇನ್ನಷ್ಟೂ ಕೆಲಸ ಮಾಡಬೇಕು ಎನ್ನುವುದು ಕೂಡ ನನ್ನ ಉದ್ದೇಶ ’ ಎನ್ನುತ್ತಾರೆ ಸುರೇಶ್ ಅರಸ್.
ತನ್ನ ಕೆಲಸವೇ ದೇವರು ಎನ್ನುವ ಅರಸರ ಯಶಸ್ಸಿನ ಹಿಂದೆ ಇರುವ ಶಕ್ತಿ ಪ್ರಾಮಾಣಿಕತೆ ಹಾಗೂ ಕೆಲಸದ ಮೇಲಿನ ನಿಷ್ಠೆ. ಏನೂ ತಪ್ಪಿದೆ ಅಂತಾ ನೇರವಾಗಿ ತಿಳಿಸುವ ಧೈರ್ಯ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎನ್ನುವುದು ಅವರ ಜತೆಗೆ ಮಾತಿಗೆ ಇಳಿದಾಗ ಗೊತ್ತಾಗುತ್ತದೆ. ಚದುರಿದ ಚಿತ್ರಗಳನ್ನು ಸರಿಯಾಗಿ ಪೋಣಿಸಿಕೊಂಡು ಪ್ರೇಕ್ಷಕನ ಮುಂದೆ ಇಡುವ ಸಂಕಲನಕಾರ ಸಿನ್ಮಾಲ್ಯಾಂಡ್‌ನ ಗ್ಲಾಮರ್ ಇಲ್ಲದೇ ಫೋಕಸ್ ಇಲ್ಲದೇ ಕೆಲಸ ಮಾಡುವುದು ಮಾತ್ರ ಗ್ರೇಟ್‌ನೆಸ್ ಅಲ್ವಾ..?
...............
ಚಿತ್ರ: ಸುಧಾಕರ್ ಎರ್ಮಾಳ್
...................

Monday, March 14, 2011

ಬೆಂಕಿಯಲ್ಲಿ ಅರಳಿದ ಸಿಲ್ಕ್ ಸ್ಮಿತಾ


ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಸೆಕ್ಸ್ ಸಿಂಬಲ್ ಖ್ಯಾತಿಯ ಸಿಲ್ಕ್ ಸ್ಮಿತಾ ಯಾರಿಗೆ ತಾನೇ ಗೊತ್ತಿಲ್ಲ? ಒಂದು ಲೆಕ್ಕಚಾರದ ಪ್ರಕಾರ ಸಿಲ್ಕ್ ಇದ್ರೆ ಸಾಕು ಸಿನಿಮಾ ಕಲೆಕ್ಷನ್ ಗ್ಯಾರಂಟಿ ಎನ್ನುವ ಮಾತಿತ್ತು. ಅಂತಹ ಸಿಲ್ಕ್ ಈಗ ತೆರೆಗೆ ಬರುತ್ತಿದ್ದಾಳೆ. ಅದೇ ‘ದಿ ಡರ್ಟಿ ಪಿಕ್ಟರ್’ಮಾತು.


‘ನಾನು ಬಹಳಷ್ಟು ಬಳಲಿ ಬೆಂಡಾಗಿದ್ದೇನೆ. ಬಣ್ಣದ ಲೋಕದ ಮಂದಿ ನನಗೆ ಬದುಕು ನೀಡಿದ್ದಾರೆ. ಆದರೆ ಈಗ ಸೋಲುಗಳು ನನ್ನನ್ನು ಮುತ್ತಿಕೊಂಡಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ನನ್ನ ಕಲಾಭಿಮಾನಿಗಳಿಗೆ ಧನ್ಯವಾದ’
ಸೆಪ್ಟೆಂಬರ್ ೨೩, ೧೯೯೬
ಚೆನ್ನೈ ಸಾಲಿಗ್ರಾಮಂ
ನಿಮ್ಮ ಸಿಲ್ಕ್
ಚೆನ್ನೈಯ ಸಾಲಿಗ್ರಾಮಂನ ಫ್ಲ್ಯಾಟ್‌ವೊಂದರಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಸಿನಿಮಾ ಇಂಡಸ್ಟ್ರಿಯನ್ನು ಬಿಟ್ಟು ಹೋದ ಸಿಲ್ಕ್ ಸ್ಮಿತಾ ತನ್ನ ಬದುಕಿನ ಕೊನೆಯ ಗಳಿಗೆಯಲ್ಲಿ ತೆಲುಗಿನಲ್ಲಿ ಬರೆದಿಟ್ಟ ಪತ್ರವಿದು. ಅಂದಹಾಗೆ ನೋಡುಗನನ್ನು ನಶೆಯಲ್ಲಿ ಬೀಳಿಸುವ ಮಾದಕ ಕಣ್ಣು. ಮದಹುಟ್ಟಿಸುವ ತುಟಿ. ಎಂತವರನ್ನು ಖೆಡ್ಡಾಕ್ಕೆ ದೂಡಿಹಾಕುವ ಬ್ಯೂಟಿ. ಟೋಟಲಿ ಅವಳು ಮದಿರೆಕ್ಕಿಂತ ಜಾಸ್ತಿ ಕಿಕ್ ಕೊಡುವ ಮಾದಕರಸ.
ಸರಿಸುಮಾರು ೭೦-೮೦ರ ದಶಕಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಬಿಡಿಸಿದ ದಕ್ಷಿಣ ಭಾರತದ ಸೆಕ್ಸ್ ಸಿಂಬಲ್ ಖ್ಯಾತಿಯ ಸಿಲ್ಕ್ ಸ್ಮಿತಾ ಯಾರಿಗೆ ತಾನೇ ಗೊತ್ತಿಲ್ಲ? ಆಂಧ್ರಪ್ರದೇಶದ ಎಲ್ಲೂರಿನ ರಾಯಲ್‌ಸೀಮೆಯ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಮನೆಯಲ್ಲಿ ತುಂಬು ಬಡತನ. ತುತ್ತು ಅನ್ನಕ್ಕೂ ಕೈಚಾಚಿ ಬಿಡುವ ಪರಂಪರೆಯಲ್ಲಿ ಅರಳಿ ಬಂದವಳು ವಿಜಯಲಕ್ಷ್ಮಿ.
ಸಿಲ್ಕ್‌ರ ಆರಂಭದ ಹೆಸರು ವಿಜಯ ಲಕ್ಷ್ಮಿ. ಕಲಿಯಬೇಕೆನ್ನುವ ತುಡಿತ ಮನೆಯಲ್ಲಿ ಬಿಡದೇ ಕಾಡುವ ಬಡತನ ವಿಜಯಲಕ್ಷ್ಮಿ ಡೈರೆಕ್ಟ್ ಎಂಟ್ರಿ ಪಡೆದದು, ದಕ್ಷಿಣ ಭಾರತದ ಹಾಲಿವುಡ್ ಎಂದೇ ಕರೆಯಲಾಗುವ ಮದ್ರಾಸ್ ಈಗ ಚೆನ್ನೈಗೆ. ಅಲ್ಲಿ ವಿಜಯಲಕ್ಷ್ಮಿಯ ದೂರದ ಸಂಬಂಯೊಬ್ಬರು ನೆಲೆ ನಿಂತಿದ್ದರು. ಹುಡುಗಿ ನೋಡಲು ಅಪ್ಸರೆಯಂತಿರುವುದನ್ನು ನೋಡಿದ ಸಂಬಂ ಸಿನಿಮಾ ನಿರ್ದೇಶಕನ ಬಳಿಗೆ ಕರೆದುಕೊಂಡು ಹೋದರು.
ಅಲ್ಲಿ ಬದಲಾಯಿತು ನೋಡಿ ವಿಜಯಲಕ್ಷ್ಮಿಯ ಅದೃಷ್ಟ. ೧೯೭೯ರ ‘ವಂಡಿ ಚಕ್ರಂ’ನಲ್ಲಿ ಸಣ್ಣ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಅಲ್ಲಿಯ ಅವಳ ಪಾತ್ರದ ಹೆಸರೇ ಸಿಲ್ಕ್. ಈ ಚಿತ್ರದ ನಂತರ ವಿಜಯಲಕ್ಷ್ಮಿಯ ಹೆಸರು ಮರೆಯಾಗಿ ‘ಸಿಲ್ಕ್ ಸ್ಮಿತಾ’ ಬಂದು ಬಿಟ್ಟಿತು. ಅಲ್ಲಿಂದ ಸಿಲ್ಕ್ ನಟಿಸಿದ ಸಿನ್ಮಾಗಳ ಸಂಖ್ಯೆ ೨೦೦ಕ್ಕಿಂತ ಅಕ. ಅದು ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಎಲ್ಲದರಲ್ಲೂ ಐಟಂ ಸಾಂಗ್ಸ್‌ಗಳು ಸಿಲ್ಕ್‌ಗೆ ರಿಸರ್ವ್ ಆಗಿತ್ತು.
ಚಿತ್ರದ ಲೀಡ್ ರೋಲ್‌ನಲ್ಲಿ ಕಾಣುವಷ್ಟು ತಾಕತ್ತು ಸಿಲ್ಕ್ ಬಳಿ ಇದ್ರೂ ಅವಳು ಸಿನಿಮಾ ಜಗತ್ತಿನಲ್ಲಿ ಬರೀ ಐಟಂ ಬೊಂಬೆಯಾಗಿ ಮೆರೆದು ನಿಂತಳು. ೭೦-೮೦ರ ದಶಕಗಳಲ್ಲಿ ಬರೀ ಬಿಕಿನಿಯಲ್ಲಿ ಸಿಲ್ಕ್ ಕುಣಿಯುವ ಮೂಲಕ ದಕ್ಷಿಣ ಭಾರತದ ಐಟಂ ಸಾಂಗ್‌ನಲ್ಲಿ ಮಾದಕತೆಯನ್ನು ಬಿಚ್ಚಿಟ್ಟಳು. ಸಿಲ್ಕ್ ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದಾಗಲೂ ಪ್ರೇಕ್ಷಕರು ಅವಳನ್ನು ಸೆಕ್ಸ್ ಸಿಂಬಲ್ ರೀತಿಯಲ್ಲಿ ನೋಡಲು ಬಯಸಿದರು. ಅದರಲ್ಲೂ ‘ಮೂನ್‌ಡ್ರಮ್ ಪಿರೈ’ ತಮಿಳು ಸಿನಿಮಾ ಸಿಲ್ಕ್ ಸ್ಮಿತಾರನ್ನು ಒಂದು ಪಕ್ಕಾ ಕೌಟುಂಬಿಕ ಹುಡುಗಿಯ ಇಮೇಜ್ ಕ್ರಿಯೇಟ್ ಮಾಡಿ ಕೊಟ್ಟಿತ್ತು. ಅದೇ ಚಿತ್ರ ಹಿಂದಿಯಲ್ಲಿ ‘ಸದ್ಮಾ’ ಎನ್ನುವ ಹೆಸರಿನಲ್ಲಿ ರಿಮೇಕ್ ಆಯಿತು.
ಒಂದು ನಿರ್ಧಾರ ಬದುಕು ಕೈ ಬಿಟ್ಟಿತು:
ಸಿಲ್ಕ್ ಸ್ಮಿತಾ ಬರೀ ನಟನೆಯಲ್ಲಿ ಮಿಂಚುತ್ತಿದ್ದಾಗ ಯಾಕೋ ಗೊತ್ತಿಲ್ಲ. ಒಂದು ಕೆಟ್ಟ ನಿರ್ಧಾರಕ್ಕೆ ಬಂದು ನಿಂತುಬಿಟ್ಟಳು. ತಾನೇ ಒಂದು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಬೇಕು. ಆ ಚಿತ್ರಕ್ಕೆ ಬಂಡವಾಳ ಸುರಿಯಬೇಕು ಎನ್ನುವ ಒಂದು ನಿರ್ಧಾರ ಇಡೀ ಬದುಕು ಕೈಕೊಟ್ಟಿತು. ಹೇಗೆ ಅಂತೀರಾ... ಮುಂದೆ ನೋಡಿ. ನೂರಾರು ಚಿತ್ರಗಳಲ್ಲಿ ಗಳಿಸಿದ್ದ ಹಣವನ್ನು ತಂದು ತನ್ನ ಕನಸ್ಸಿನ ಪ್ರಾಜೆಕ್ಟ್‌ಗಾಗಿ ಸಂಪೂರ್ಣವಾಗಿ ಸುರಿದು ಬಿಟ್ಟಳು. ಚಿತ್ರದ ಆರಂಭದ ನಡೆಯೇ ಬಹಳ ಭಯ ಹುಟ್ಟಿಸಿ ಬಿಟ್ಟಿತು. ಚಿತ್ರದ ಅರ್ಧ ಭಾಗ ಮುಗಿದು ಹೋಗುತ್ತಿದ್ದಾಗಲೇ ಸಿಲ್ಕ್‌ರ ಜೋಳಿಗೆಯಲ್ಲಿದ್ದ ಹಣವೆಲ್ಲವೂ ಖಾಲಿಯಾಗುತ್ತಿತ್ತು. ಬಹಳಷ್ಟು ನಂಬಿಕೆ ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್ ಕತೆ ಈ ರೀತಿಯಾದರೆ, ತಾನು ಬಿದ್ದು ಬಿದ್ದು ಪ್ರೀತಿಸಿದ್ದ ಪ್ರೇಮಿಯೊಬ್ಬ ಸಿಲ್ಕ್‌ರನ್ನು ದೂರ ಮಾಡಿಬಿಟ್ಟ. ಸಿಲ್ಕ್‌ರ ಬದುಕು ಸೂತ್ರವಿಲ್ಲದ ಗಾಳಿಪಟದಂತೆ ಹಾರಾಡುತ್ತಿತ್ತು.
ಭಾವನೆಗಳ ಜತೆಯಲ್ಲಿ ನರಳಾಟ. ಆರ್ಥಿಕ ಸೋಲಿನ ಭೀತಿಯಿಂದ ಸಿಲ್ಕ್ ನಲುಗಿ ಹೋಗಿದ್ದಳು. ಒತ್ತಡದ ಬದುಕಿನಲ್ಲಿ ತನಗೆ ಗೊತ್ತಿಲ್ಲದೇ ಮಾದಕ ಹುಡುಗಿ ಮದಿರೆಯ ದಾಸಳಾಗಿ ಬಿಟ್ಟಿದ್ದಳು. ಅದು ಕುಡಿತದ ಮತ್ತೋ ಗೊತ್ತಿಲ್ಲ. ಆದರೆ ಮತ್ತೊಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ಮಾಡಿದ್ದಳು. ಸೆಪ್ಟೆಂಬರ್ ೨೩, ೧೯೯೬ ರಂದು ತಾನು ಉಳಿದು ಕೊಂಡಿದ್ದ ಚೆನ್ನೈ ಸಾಲಿಗ್ರಾಮಂ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಟೇಬಲ್ ಮೇಲೊಂದು ಪುಟ್ಟ ಬಿಳಿ ಕಾಗದವಿತ್ತು. ಅದೇ ಸಿಲ್ಕ್‌ರ ಪುಟ್ಟ ಸೂಸೈಡ್ ನೋಟ್. ಅಲ್ಲಿಗೆ ಸಿಲ್ಕ್ ಸ್ಮಿತಾ ಎನ್ನುವ ಐಟಂ ಹುಡುಗಿಯ ಮಾತಿಗೆ ಫುಲ್‌ಸ್ಟಾಪ್. ಅಲ್ಲಿಂದ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ‘ಸಿಲ್ಕ್ ’ ಎನ್ನುವ ಐಟಂ ಹುಡುಗಿ ಮರೆಯಾಗಿ ಹೋದಳು. ಕಾಲ ಬದಲಾಯಿತು ಸಿನಿಮಾಗಳು ಸಾಲು ಸಾಲಾಗಿ ಬಂದವು.. ಆದರೆ ಅಂದಿನ ಐಟಂ ಹುಡುಗಿ ಸಿಲ್ಕ್‌ನನ್ನು ಹೋಲುವ ಐಟಂ ಹುಡುಗಿಯರು ಮತ್ತೆ ಪ್ರೇಕ್ಷಕರ ಬಂದೇ ಇಲ್ಲ. ಅದೇ ನೋಡಿ ಸಿಲ್ಕ್‌ಗೆ ಇದ್ದ ಕಿಮ್ಮತ್ತು. ಬೆಂಕಿಯಲ್ಲಿ ಅರಳಿದ ಹೂವು ಕೊನೆಗೆ ಬೆಂಕಿಯಲ್ಲಿ ಬೆಂದು ಹೋದವಳ ಪಟ್ಟಿಯಲ್ಲಿ ಸಿಲ್ಕ್ ಖಂಡಿತವಾಗಿಯೂ ಸ್ಥಾನ ಪಡೆದುಕೊಂಡಿದ್ದಾಳೆ.
ದಿ ಡರ್ಟಿ ಪಿಕ್ಟರ್:
ಈಗ ಇದೇ ಸಿಲ್ಕ್‌ರ ಆತ್ಮಕತೆಯನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ. ಸಿಲ್ಕ್ ಹೋಗಿ ಬಹಳ ವರುಷಗಳೇ ಉರುಳಿ ಹೋಗಿದೆ. ಇಂತಹ ಟೈಮ್‌ನಲ್ಲಿ ಚಿತ್ರ ಯಾಕೆ ಎನ್ನೋದು ಬಹಳಷ್ಟು ಜನರ ಮಿಕ್ಸಡ್ ಅಭಿಪ್ರಾಯ. ಆದರೆ ಸಿಲ್ಕ್ ಚಿತ್ರ ಬರಬೇಕು ಎನ್ನೋದು ಖ್ಯಾತ ಕಿರುತೆರೆಯ ಹಿರಿ ಬ್ಯಾನರ್‌ನ ನಿರ್ಮಾಪಕಿ ಏಕ್ತಾಕಪೂರ್ ಅವರ ಅಭಿಪ್ರಾಯ. ಅದಕ್ಕಾಗಿ ಏಕ್ತಾ ಕಪೂರ್ ‘ದಿ ಡರ್ಟಿಪಿಕ್ಚರ್’ ಎನ್ನುವ ಹೆಸರಿನಲ್ಲಿ ಸಿಲ್ಕ್ ಸ್ಮಿತಾರ ಬಯೋಗ್ರಾಫಿಯನ್ನು ತೆರೆಗೆ ತರುತ್ತಿದ್ದಾರೆ. ರಿಯಲ್ ಸ್ಟೋರಿಯ ರೀಲ್ ನಾಯಕಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದು ಕಾಲದಲ್ಲಿ ದಕ್ಷಿಣ ಭಾರತ ಸಿನಿಮಾಗಳ ಅವಿಭಾಜ್ಯ ಅಂಗವಾಗಿದ್ದ ಐಟಂ ಹುಡುಗಿ ಸಿಲ್ಕ್ ಸ್ಮಿತಾಳ ದುರಂತ ಬದುಕು ಮತ್ತು ಸಾವಿನ ಕಥಾನಕವುಳ್ಳ ಈ ಚಿತ್ರ ಪ್ರೇಕ್ಷಕ ವರ್ಗದಲ್ಲಿ ಆಸಕ್ತಿ ಹುಟ್ಟಿಸುವುದರಲ್ಲಿ ಸಂಶಯವಿಲ್ಲ ಎನ್ನುವುದು ನಿರ್ಮಾಪಕಿ ಏಕ್ತಾ ಕಪೂರ್‌ರ ಮಾತು. ೭೦ರ ದಶಕದಲ್ಲಿ ಪುರುಷ ಪ್ರಧಾನವಾಗಿದ್ದ ಸಿನಿಮಾಗಳಲ್ಲಿ ಸ್ತ್ರೀಯರನ್ನು ಕೇವಲ ಒಂದು ಸೆಕ್ಸ್ ಸಿಂಬಲ್‌ಗಳಾಗಿ ಮಾತ್ರವೇ ಬಿಂಬಿಸಲಾಗುತ್ತಿತ್ತು. ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಹೇಗಿದ್ದಳೆಂಬುದನ್ನೆಲ್ಲಾ ತಿಳಿಯಲು ಖಂಡಿತ ಜನ ಕುತೂಹಲ ತಾಳುತ್ತಾರೆ ಎನ್ನುತ್ತಾರೆ ಏಕ್ತಾ.
ಮೂಲಗಳು ಹೇಳುವ ಪ್ರಕಾರ ಸಿಲ್ಕ್ ಸ್ಮಿತಾ ಕಾಲದ ಚಿತ್ರ ನಿರ್ಮಾಪಕನ ಪಾತ್ರವನ್ನು ಅಜಯ್ ದೇವಗನ್ ವಹಿಸಿಕೊಳ್ಳುತ್ತಾರೆ. ಈಗಾಗಲೇ ‘ವನ್ಸ್ ಆಪನ್ ಟೈಮ್ ಇನ್ ಮುಂಬಯಿ’ಯಲ್ಲಿ ‘ಸುಲ್ತಾನ್’ ಎನ್ನುವ ಡಾನ್ ಪಾತ್ರ ಮಾಡಿದ ಅಜಯ್ ಈ ಪಾತ್ರಕ್ಕೆ ಒಗ್ಗಿಕೊಳ್ಳುತ್ತಾರೆ ಎನ್ನೋದು ಚಿತ್ರದ ನಿರ್ದೇಶಕ ಮಿಲನ್ ಲೂತ್ರಿಯಾರ ಮಾತು. ಈಗಾಗಲೇ ವಿದ್ಯಾಬಾಲನ್ ‘ಪರಿಣಿತಾ’, ‘ಇಷ್ಕಿಯಾ’ ಚಿತ್ರಗಳಲ್ಲಿ ಗಮನ ಸೆಳೆದಿದ್ದು, ಹಳ್ಳಿಯ ಬಡ ಹುಡುಗಿಯಿಂದ ಮಾದಕ ನಟಿಯ ಮಟ್ಟಕ್ಕೆ ಬೆಳೆದ ಸಿಲ್ಕ್ ಸ್ಮಿತಾಳ ಸಂಕೀರ್ಣ ಮತ್ತು ದುರಂತಗಾಥೆಯನ್ನು ಬಿಂಬಿಸುವ ಪಾತ್ರಕ್ಕೆ ಎಷ್ಟರ ಮಟ್ಟಿಗೆ ವಿದ್ಯಾಬಾಲನ್ ಜೀವ ತುಂಬುತ್ತಾರೆಂಬುವುದನ್ನು ಕಾದು ನೋಡಬೇಕು.

ಇದು‘ಕೆರೆ ಮರೆ’ಯಾದ ಕತೆ


ಕೆರೆಗಳನ್ನು ನಮಗೆ ಬೇಕಾದಂತೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇದ್ದ ಕೆರೆಗಳನ್ನು ಬಲಿ ಕೊಡುವ ಬದಲು ಅದನ್ನು ಜೋಪಾನವಾಗಿ ಉಳಿಸಿಬೆಳೆಸಬೇಕು. ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಎಂಬ ಆಧುನಿಕ ಪ್ರಪಂಚದ ಕಾಮಗಾರಿಯಿಂದ ಕೆರೆಗಳು ಮರೆಯಾಗುತ್ತಿದೆ. ಬೆಂಗಳೂರಿನ ಪತ್ರಕರ್ತರಿಬ್ಬರು ‘ಕೆರೆಮರೆ’ಯ ಕತೆಯನ್ನು ಕಟ್ಟಿಕೊಟ್ಟಿದ್ದಾರೆ .


ಒಂದು ಕಾಲದಲ್ಲಿ ಬೆಂಗಳೂರಿಗೆ ನಾವಿಲ್ಲದಿದ್ದರೆ ನಡೆಯುತ್ತಿರಲಿಲ್ಲ. ನಾವೇನು ಸ್ವತಃ ಇಲ್ಲಿ ಹುಟ್ಟಿ ಬಂದವರೂ ಆಗಿರಲಿಲ್ಲ. ನಮ್ಮಲ್ಲಿ ಹೆಚ್ಚಿನವರನ್ನು ನಿಮ್ಮವರೇ ಸೃಷ್ಟಿ ಮಾಡಿದ್ದರು. ಕೆಲವರು ಬಲ್ಲರು. ಕೇವಲ ಕೆಲವರು ಭವಿಷ್ಯದ ಬಗ್ಗೆ ಕಾಳಜಿ ಇದ್ದವರು. ಆದರೀಗ ನಾವಿಲ್ಲದಿದ್ದರೂ ಬದುಕಬಲ್ಲೆವೆಂದು ಬೆಂಗಳೂರು ನಗರ ಹೇಳಿದಂತಿದೆ ಎಂದು ಹವ್ಯಾಸಿ ಪತ್ರಕರ್ತ ಬಡೆಕ್ಕಿಲ ಕೃಷ್ಣ ಪ್ರದೀಪ ಕೆರೆಗಳ ಬಗ್ಗೆ ಲೇಖನೊಂದನ್ನು ಬರೆಯುತ್ತಾರೆ.
ಈ ಬರವಣಿಗೆ ಬರೀ ಬರಹಕ್ಕೆ ಸೀಮಿತವಾಗಿಲ್ಲ. ಬಡೆಕ್ಕಿಲ ವಿದ್ ರತ್ನಾಕರ್ ಎಂಬ ಸ್ನೇಹಿತನ ಜತೆಗೂಡಿ ಒಂದು ಸಾಕ್ಷ್ಯಚಿತ್ರದ ರೂಪು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ತೆರೆ ಮರೆಗೆ ಸರಿಯುತ್ತಿರುವ ಕೆರೆಗಳ ಕುರಿತು ಹತ್ತು ನಿಮಿಷಗಳ ‘ತಪ್ಪಿನಿಂದಾಗಿ ಸಿಕ್ಕ ಶಾಪವೇ ಸತ್ಯ ಎಂಬ ಸಾಕ್ಷ್ಯಾಚಿತ್ರ ರೆಡಿಯಾಗಿದೆ. ಇನ್ಪೋಸೀಸ್‌ನ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ನಡೆಸುತ್ತಿರುವ ಎನ್‌ಜಿಒ ಸಂಸ್ಥೆ ‘ಇಂಡಿಯಾ ವಾಟರ್ ಪೊರ್ಟಲ್’ ಅವರು ನಡೆಸಿದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಕ್ಷ್ಯಾಚಿತ್ರ ಎಂಬ ಪ್ರಶಸ್ತಿಯನ್ನು ಇದು ಪಡೆದುಕೊಂಡಿದೆ. ದೇಶದ ನಾನಾ ಕಡೆಗಳಿಂದ ಬಂದ ೪೦ಕ್ಕೂ ಅಕ ಸಾಕ್ಷ್ಯಾಚಿತ್ರಗಳ ನಡುವೆ ಈ ಯುವಕರ ಥೀಮ್ ಎಲ್ಲರನ್ನು ಬೀಟ್ ಮಾಡಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಕೆರೆಗೆ ಬಂದ ಯುವಕರು:
ಅಂದಹಾಗೆ ಬಡೆಕ್ಕಿಲ ಕೃಷ್ಣ ಪ್ರದೀಪ, ಈ ಹೆಸರು ಮಾಧ್ಯಮದಲ್ಲಿ ಇದ್ದವರಿಗೆ ತೀರಾ ಕಾಮನ್. ಮುದ್ರಣ, ಎಲೆಕ್ಟ್ರಾನಿಕ್, ರೇಡಿಯೋ ಜಾಕಿ ಹೀಗೆ ಬಡೆಕ್ಕಿಲ ಮಾಧ್ಯಮದಲ್ಲಿ ಮಾಡದ ಕೆಲಸ ಸಧ್ಯಕ್ಕೆ ಯಾವುದು ಇಲ್ಲ. ತುಂಬಾ ಪ್ರತಿಭಾವಂತ ಎಂಬ ಕಾರಣದಿಂದ ಯಾವ ಮಾಧ್ಯಮದಲ್ಲೂ ಫುಲ್ ಟೈಮ್ ನಿಂತು ಕೆಲಸ ಮಾಡಿಲ್ಲ. ಎಲ್ಲ ಕಡೆನೂ ಫ್ರಿಲಾನ್ಸ್ ಮಾಡುತ್ತಾ ಬೆಂಗಳೂರಿನಲ್ಲಿ ಬದುಕುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈಗ ಸುವರ್ಣ ವಾಹಿನಿಯಲ್ಲಿ ಬರುವ ಬಹುತೇಕ ಕಾರ್‍ಯಕ್ರಮದಲ್ಲಿ ‘ಬಡೆಕ್ಕಿಲ’ ವಾಯ್ಸ್ ಪದೇ ಪದೇ ಕೇಳಿಸುತ್ತಾ ಇರುತ್ತದೆ.
ಇಂತಹ ಪ್ರತಿಭಾವಂತನ ಜತೆಯಲ್ಲಿ ನಿಶಾಂತ್ ರತ್ನಾಕರ್ ಸೇರಿಕೊಂಡಿದ್ದಾರೆ. ನಿಶಾಂತ್ ರತ್ನಾಕರ್ ಮಾಹಿತಿ ವಿಜ್ಞಾನದಲ್ಲಿ ಪದವಿ ಮುಗಿಸಿಕೊಂಡು ತನಗೂ ಮಾಡಿದ ಪದವಿಗೂ ಸಂಬಂಧ ಇಲ್ಲ ಅಂತಾ ಹೇಳಿ ಪತ್ರಿಕೋದ್ಯಮ ರಂಗಕ್ಕೆ ಎಂಟ್ರಿ ಹೊಡೆದವರು. ‘ಬೆಂಗಳೂರು ಮಿರರ್’ನಿಂದ ಥಟ್ ಅಂತಾ ‘ಡಿಎನ್‌ಎ ’ಪತ್ರಿಕೆಗೆ ಜಂಪ್ ಆಗಿ ಈಗ ಪತ್ರಿಕೆಯ ಚೀಫ್ ಫೋಟೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸೇರಿ ಬೆಂಗಳೂರಿನ ಕೆರೆಗಳ ಕುರಿತು ಸಿರೀಯಸ್ ಆಗಿ ವರ್ಕ್ ಮಾಡಿ ಸಖತ್ ಮಾಹಿತಿ ನೀಡುವ ಪುಟ್ಟ ಸಾಕ್ಷ್ಯಾಚಿತ್ರ ಗೂಗಲ್‌ನ ‘ಯೂ ಟ್ಯೂಬ್’ನಲ್ಲಿ ಹಾಕಿಬಿಟ್ಟಿದ್ದಾರೆ.
ಬಸ್ ನಿಲ್ದಾಣಕ್ಕೆ ಕೆರೆ ಮಾಯ:
ದಿನವೊಂದಕ್ಕೆ ಲಕ್ಷಾಂತರ ಮಂದಿ ಬಂದು ಸೇರುವ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಅಥವಾ ಕೆಂಪೇಗೌಡ ಬಸ್ ನಿಲ್ದಾಣ ಎಲ್ಲರಿಗೂ ಗೊತ್ತಿದೆ. ಈ ಬಸ್ ನಿಲ್ದಾಣದ ಜಾಗದಲ್ಲಿ ಸುಂದರವಾದ ಕೆರೆ ಇತ್ತು ಎನ್ನೋದು ಇಂದಿನ ಯುವಪೀಳಿಗೆಗೆ ಗೊತ್ತೇ ಇಲ್ಲ. ಈ ಬಸ್ ನಿಲ್ದಾಣದ ಜಾಗದಲ್ಲಿ ಖ್ಯಾತ ‘ಧರ್ಮಮ್‌ಬೂದಿ’ ಕೆರೆಯಿತ್ತು ಎನ್ನೋದು ಬೆಂಗಳೂರಿನ ಹಿರಿ ತಲೆಗಳಿಗೆ ಮಾತ್ರ ಗೊತ್ತು. ಇಂತಹ ಕೆರೆಯ ಕುರಿತು ಈ ಸಾಕ್ಷ್ಯಾಚಿತ್ರದಲ್ಲಿ ಹೇಳಲಾಗಿದೆ. ಇಬ್ಬರು ಪ್ರತಿಭಾವಂತರು ಎಂಬ ಕಾರಣಕ್ಕೆ ಸಾಕ್ಷ್ಯಾಚಿತ್ರದಲ್ಲಿ ಆಧುನಿಕ ಪ್ರಪಂಚದ ಹೊಳಪಿದೆ. ಭಾಷೆಯಲ್ಲೂ ಕೊಂಚ ಭಿನ್ನತೆ ಕಾಣಿಸಿಕೊಂಡಿದೆ.
ಐತಿಹಾಸಿಕ ಪಾಯಿಂಟ್ ಆಫ್‌ವೀವ್‌ನಿಂದ ಎಸ್.ಕೆ. ಅರುಣಿ, ಪರಿಸರದ ಕಾಳಜಿಯಿಂದ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ವೈಜ್ಞಾನಿಕವಾಗಿ ಟಿ.ವಿ ರಾಮಚಂದ್ರ ಅವರು ಸಾಕ್ಷ್ಯಾಚಿತ್ರದಲ್ಲಿ ಮಾತುಗಳನ್ನಾಡಿದ್ದಾರೆ. ಜತೆಗೆ ಈ ಹಿಂದೆ ಬೆಂಗಳೂರಿನಲ್ಲಿದ್ದ ಕೆರೆಗಳು ಯಾವ ರೀತಿ ನಗರ ಬೆಳೆಯುತ್ತಿದ್ದಂತೆ ವಿನಾಶದ ಹಾದಿಯಲ್ಲಿ ಸಾಗಿದವು. ಬೆಂಗಳೂರಿನಲ್ಲಿ ಮುಂದೆ ಕೆರೆಗಳೇ ಇಲ್ಲದೇ ಇದ್ದಾಗ ಪರಿಸ್ಥಿತಿ ಯಾವ ಹಂತಕ್ಕೆ ಮುಟ್ಟಿ ನಿಲ್ಲುತ್ತದೆ ಎನ್ನುವ ಮುಂದುವರಿದ ಕಾಳಜಿ ಇಲ್ಲಿ ಸುಂದರವಾಗಿ ಚಿತ್ರೀತವಾಗಿದೆ.
ಸಿಂಫಲ್ ಕ್ಯಾಮೆರಾ ವರ್ಕ್:
ಇಡೀ ಸಾಕ್ಷ್ಯಾಚಿತ್ರವನ್ನು ಕ್ಯಾನಾನ್ ಮಾರ್ಕ್೧೧ ಡಿಎಸ್‌ಎಲ್ ಆರ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿರುವ ಎಚ್‌ಡಿ ಗುಣಮಟ್ಟ ಸಾಕ್ಷ್ಯಾಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ಕ್ಯಾಮೆರಾ ಬಳಕೆ ಇತ್ತೀಚಿನ ಸಾಕ್ಷ್ಯಾಚಿತ್ರದಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಗುಣಮಟ್ಟದ ಡಾಕ್ಯುಮೆಂಟರಿ ನೀಡಲು ಇಂತಹ ಕ್ಯಾಮೆರಾ ಬಹಳಷ್ಟು ಸಹಾಯ ಮಾಡಿದೆ. ೧೦ ನಿಮಿಷದವರೆಗೂ ನಿರಂತರವಾಗಿ ಚಿತ್ರೀಕರಣ ಮಾಡುವ ಸಾಮರ್ಥ್ಯವನ್ನು ಈ ಕ್ಯಾಮೆರಾ ಹೊಂದಿದೆ ಎನ್ನುತ್ತಾರೆ ಬಡೆಕ್ಕಿಲ ಕೃಷ್ಣ ಪ್ರದೀಪ.
ಸಧ್ಯಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಸಾಕ್ಷ್ಯಾಚಿತ್ರ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಕನ್ನಡದಲ್ಲೂ ತರುವ ಕೆಲಸ ನಡೆಯುತ್ತಿದೆ. ಈ ಸಾಕ್ಷ್ಯಾಚಿತ್ರದ ‘ಡಿವಿಡಿ’ ತರುವ ಮೂಲಕ ಬೆಂಗಳೂರಿನ ವಿವಿಧ ಶಾಲೆ, ಕಾಲೇಜು, ಲೈಬ್ರೆರಿ ಹಾಗೂ ಕಾರ್ಪೊರೇಟ್ ಕಾರ್‍ಯಕ್ರಮಗಳಲ್ಲಿ ಪ್ರದರ್ಶನ ಮಾಡುವ ಇರಾದೆನೂ ಇದೆ ಎನ್ನುತ್ತಾರೆ ಬಡೆಕ್ಕಿಲ. ಈ ಸಾಕ್ಷ್ಯಾಚಿತ್ರದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕಳುಹಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಬೆಂಗಳೂರಿನ ಕೆರೆಗಳನ್ನು ಕೊಂದು ಅದರ ಮೇಲೆ ಕಟ್ಟಡ ಕಟ್ಟುವ ನಮ್ಮವರ ಹುಚ್ಚಾಟ ನಿಲ್ಲಬೇಕು. ಜಲಕೊಯ್ಲು, ಕೆರೆ ಉಳಿಸುವ ಸಂಸ್ಕೃತಿ ನಮ್ಮಲ್ಲಿ ಅರಳಿ ನಿಲ್ಲಬೇಕು ಎನ್ನುವುದು ನಮ್ಮ ಉದ್ದೇಶ ಎನ್ನುತ್ತಾರೆ ಬಡೆಕ್ಕಿಲ.
ಕೆರೆಗಳನ್ನು ನಮಗೆ ಬೇಕಾದಂತೆ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇದ್ದ ಕೆರೆಗಳನ್ನು ಬಲಿ ಕೊಡುವ ಬದಲು ಅದನ್ನು ಜೋಪಾನವಾಗಿ ಉಳಿಸಿಬೆಳೆಸಬೇಕು. ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಎಂಬ ಆಧುನಿಕ ಪ್ರಪಂಚದ ಕಾಮಗಾರಿಯಿಂದ ಕೆರೆಗಳು ಸಾಯುತ್ತಿದೆ. ಕೆರೆಗಳೇ ಇಲ್ಲದೇ ಹೋದರೆ ಬೆಂಗಳೂರಿನಲ್ಲಿ ಮಳೆಯೇ ಒಂದು ವರ್ಷ ಬರದೇ ಹೋದರೆ ಮುಂದಿನ ಸ್ಥಿತಿ ಏನಾಗಬಹುದು ಎಂಬ ಸಂದೇಶ ಇಡೀ ಸಾಕ್ಷ್ಯಾಚಿತ್ರ ನೋಡಿದ ನಂತರ ಶ್ರೀಸಾಮಾನ್ಯನಿಗೂ ಅನ್ನಿಸಿಬಿಡುತ್ತದೆ. ಹೆಚ್ಚಿನ ಮಾಹಿತಿಗೆ ನೋಡಿ ಹಾಗೂ ಸಂಪೂರ್ಣ ಸಾಕ್ಷ್ಯಾಚಿತ್ರಕ್ಕೆ ಕ್ಲಿಕ್ ಮಾಡಿ
badekkila.blogspot.com (English) and badekkila.wordpress.com (Kannada) $ÂbñÜÅPæR QÉP… ÊÜÞw www.youtube.com/watch?v=sh8OQ0C14Yc

Sunday, March 13, 2011

ದರ್ಶನ್ ಜತೆ ಆಫೇರ್ ಇಲ್ಲ !


ಕೋ- ಸ್ಟಾರ್ ಜತೆ ಫ್ರೆಂಡ್ಲಿಯಾಗಿ ಮೂವ್ ಆದ್ರೆ ಅದಕ್ಕೆ ಆಫೇರ್ ಅಂತಾರಾ.. ಎರಡು ಮೂರು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಮಾತ್ರಕ್ಕೆ ನನಗೂ ದರ್ಶನ್‌ಗೂ ಆಫೇರ್ ಇದೆ ಎನ್ನೋದು ಬರೀ ಸುಳ್ಳು ಎಂದ್ರು ನಿಖಿತಾ... ಓವರ್ ಟು ನಿಖಿತಾ...


ಇದೆಲ್ಲ ಬರೀ ಕಟ್ಟುಕತೆ. ಕೋ- ಸ್ಟಾರ್ ಜತೆ ಫ್ರೆಂಡ್ಲಿಯಾಗಿ ಮೂವ್ ಆದ್ರೆ ಅದಕ್ಕೆ ಆಫೇರ್ ಅಂತಾರಾ.. ಎರಡು ಮೂರು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಮಾತ್ರಕ್ಕೆ ನನಗೂ ದರ್ಶನ್‌ಗೂ ಆಫೇರ್ ಇದೆ ಎನ್ನೋದು ಬರೀ ಸುಳ್ಳು ಎಂದ್ರು ಕೂಲ್ ಗರ್ಲ್ ನಿಖಿತಾ. ಆದರೆ ಕರಾವಳಿಯ ಬಿಸಿಲಿಗೆ ಗರಂ ಆಗಿ ಬಿಟ್ಟ್ರು... ಮಂಗಳೂರಿನ ಖ್ಯಾತ ಜುವೆಲ್ಲರಿ ಮಳಿಗೆಗೆ ಇತ್ತೀಚೆಗೆ ಭೇಟಿ ನೀಡಿದಾಗ ಲವಲವಿಕೆಯ ಮಾತಿಗೆ ನಿಖಿತಾ ಸಿಕ್ಕಿಕೊಂಡಿದ್ದರು. ದರ್ಶನ್‌ಗೂ ನಿಖಿತಾಗೂ ಆಫೇರ್ ಇದೆ ಎಂಬ ಗಾಂನಗರದಲ್ಲಿ ಮಾತು ಇದೆಯಲ್ಲ ಎನ್ನುವ ಒಂದೇ ಪ್ರಶ್ನೆಗೆ ನಿಖಿತಾ ಉರಿದುಬಿದ್ದರು. ಅಷ್ಟರವರೆಗೆ ಮುಖದಲ್ಲಿದ್ದ ನಿಂತಿದ್ದ ನಗು ಮರೆಯಾಯಿತು.
ಪ್ರಶ್ನೆಗೆ ಸೀದಾ ಉತ್ತರ ಕೊಡಲು ನಿಖಿತಾ ಮುಂದಾದರೂ ‘ಸೆಟ್‌ನಲ್ಲಿ ಎಲ್ಲರ ಜತೆಯಲ್ಲೂ ಫ್ರೀಯಾಗಿ ಮೂವ್ ಆಗುತ್ತೇನೆ. ಜಾಲಿಯಾಗಿ ಕೆಲಸ ಮಾಡೋದು ನನ್ನ ಪ್ಲಸ್ ಪಾಯಿಂಟ್. ಈ ರೀತಿಯಲ್ಲಿದ್ದಾಗ ನನಗೆ ಬೇರೆಯವರ ಜತೆಯಲ್ಲಿ ಆಫೇರ್ ಇದೆ ಅನ್ನೋದು ಸರಿಯಲ್ಲ. ಇತ್ತೀಚೆಗಷ್ಟೇ ನನ್ನ ತಂದೆ ವಿವಶರಾದರು. ಇಂತಹ ಟೈಮ್‌ನಲ್ಲಿ ಈ ರೀತಿಯ ಗಾಸಿಪ್ ನನಗೆ ಬಹಳ ದುಃಖ ಕೊಟ್ಟಿದೆ ಎಂದರು.
ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಿ ಚಿತ್ರಗಳಲ್ಲಿ ಈಗಾಗಲೇ ನಟಿಸಿ ಬಂದಿರುವ ನಿಖಿತಾಗೆ ಇದೇ ಮೊದಲ ಬಾರಿ ಇಂತಹ ಒಂದು ರೂಮರ್ ಕಿವಿ ಬಂದು ಬಿದ್ದಿದೆಯಂತೆ. ಈ ಹಿಂದೆನೂ ದರ್ಶನ್ ಹಾಗೂ ರಕ್ಷಿತಾ ಜತೆ ಆಫೇರ್ ಇದೆ ಎನ್ನುವ ಮಾತಿತ್ತು. ಅದೆಲ್ಲ ಸುಳ್ಳು ಎನ್ನುವ ಮಾತು ಎಲ್ಲರಿಗೂ ನಂತರ ಅರಿವಿಗೆ ಬಂತು. ಅದೇ ರೀತಿ ನನ್ನ ಕತೆನೂ... ಎಂದು ಬಿಟ್ಟ್ರು ನಿಖಿತಾ ಮೇಡಂ.
‘ಯೋಧ’, ಪ್ರಿನ್ಸ್ ಹಾಗೂ ಇತ್ತೀಚೆಗೆ ಚಿತ್ರೀಕರಣವಾಗುತ್ತಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನದಲ್ಲೂ ದರ್ಶನ್‌ಗೆ ನಾಯಕಿಯಾಗಿ ನಿಖಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜತೆಗೆ ನಮ್ಮಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗುತ್ತದೆ ಅಂತ ಮಾಧ್ಯಮವೊಂದರಲ್ಲಿ ನಿಖಿತಾ ಹೇಳಿಕೊಂಡಿದ್ದರು. ಈ ಕೆಮೆಸ್ಟ್ರಿ ವರ್ಕ್ ಔಟ್ ಈಗ ಆಫೇರ್ ಆಗಿ ತಿರುಗಿ ಬಂದಿದೆ ಎನ್ನುವುದು ನಿಖಿತಾರ ಮಾತು.
ನಿರ್ದೇಶಕ ನಾಗಣ್ಣರಿಗೆ ದರ್ಶನ್ ನಿಖಿತಾ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ತನ್ನ ನಾಯಕಿಯಾಗಿ ಅಭಿನಯಿಸಲಿ ಎಂದು ರೆಕಮೆಂಡ್ ಮಾಡಿದ್ರಂತೆ ಎಂದು ಕೇಳಿದ್ರೆ... ಇದೆಲ್ಲ ನಂಬಬೇಡಿ. ‘ದುಬೈಬಾಬು’ ಚಿತ್ರದ ಅಭಿನಯ ನೋಡಿ ನಾಗಣ್ಣ ನನಗೆ ಸಂಗೊಳ್ಳಿ ರಾಯಣ್ಣದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು ಎನ್ನುತ್ತಾರೆ ನಿಖಿತಾ.
ಅಂದಹಾಗೆ ಸಧ್ಯಕ್ಕೆ ನಿಖಿತಾ ನಿರ್ದೇಶಕ ಓಂ ಪ್ರಕಾಶ್ ಅವರ ‘ಕಾಟನ್‌ಪೇಟೆ’ಯಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತಿದೆ. ಆದರೆ ನಿಖಿತಾ ಈ ವಿಚಾರದಲ್ಲಿ ಏನೂ ಹೇಳ್ತಿಲ್ಲ...ಉಳಿದಂತೆ ಈ ವರ್ಷ ಮದುವೆಗೆ ಹುಡುಗ ಹುಡುಕಿ ಮುಂದಿನ ವರ್ಷದಲ್ಲಿ ಮದುವೆಯಾಗುವ ಪ್ಲ್ಯಾನ್‌ವೊಂದನ್ನು ನಿಖಿತಾ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಆದರೆ ನಿಖಿತಾರಿಗೆ ಇನ್ನೂ ಕೂಡ ಅಂತಹ ಹುಡುಗರು ಸಿಕ್ಕಿಲ್ಲ ಎನ್ನುವುದು ಗಮನಿಸಿಬೇಕಾದ ವಿಷ್ಯಾ.

ಚಿತ್ರ : ಸುಧಾಕರ ಎರ್ಮಾಳ್

ಬಾಲಿವುಡ್‌ಗೆ ಕುಡ್ಲದ ಬೆಳಕು !


ಇಡೀ ಬಾಲಿವುಡ್‌ಗೆ ಬೆಳಕು ನೀಡುವವರು ಕುಡ್ಲದವರು ಎಂದರೆ ಅದೊಂದು ಸಿಂಪಲ್ ಸಬ್ಜೆಕ್ಟ್ ಅಲ್ವೇ ಅಲ್ಲ..ಕುಡ್ಲದ ಕಾಪುವಿನ ಕಲ್ಯಾಮೂಡು ಮನೆಯ ಪ್ರದೀಪ್ ಜೆ.ಶೆಟ್ಟಿ, ಪ್ರಕಾಶ್ ಜೆ.ಶೆಟ್ಟಿ ಹಾಗೂ ಪ್ರಶಾಂತ್ ಜೆ. ಶೆಟ್ಟಿ ಸಹೋದರರು ಶ್ರೀ ಗಣೇಶ್ ಮೂವಿ ಲೈಟ್ಸ್ ಎಂಬ ಕಂಪನಿಯನ್ನು ಕಟ್ಟಿಕೊಂಡು ಬಾಲಿವುಡ್‌ಗೆ ಬೆಳಕು ನೀಡುತ್ತಿದ್ದಾರೆ.

ಫುಲ್ ಲೈಟ್ಸ್
ಇದು ಯಾವುದೇ ಸಿನಿಮಾ ಆರಂಭವಾಗುವುದಕ್ಕಿಂತ ಮೊದಲ ಮಾತು. ನಂತರ ಜಗಮಗಿಸುವ ಲೈಟ್‌ಗಳು ಹೊಳೆಯುತ್ತಿರುತ್ತದೆ. ಸಿನಿಮಾ ಕ್ಷೇತ್ರದವರಿಗೆ ಬೆಳಕಿನ ಜತೆಗಿನ ಒಡನಾಟ ಬಹಳಷ್ಟಿರುತ್ತದೆ. ಪ್ರತಿಯೊಂದು ಸೀನ್‌ಗಳ ಮೇಲೆ ಬೆಳಕಿನಾಟದ ಅಧ್ಯಯನವನ್ನು ಸಿರೀಯಸ್ ಆಗಿ ಪ್ರೇಕ್ಷಕರು ಸ್ಟಡಿ ಮಾಡಬೇಕಾದರೆ ಅವರು ಸಿನಿಮಾ ಥಿಯೇಟರ್‌ಗಳಿಗೆ ಹೋಗಬೇಕಾಗುತ್ತದೆ. ಕತ್ತಲೆಯನ್ನು ಬದಿಗೆ ಸರಿಸಿ ಮಿಂಚುವ ಈ ಬೆಳಕಿನ ಕುರಿತು ವ್ಯಾಖ್ಯೆನ ನೀಡುವುದು ಕವಿಗಳಿಗೆ ಮಾತ್ರ ಸಾಧ್ಯ.
ಇಡೀ ಬಾಲಿವುಡ್‌ಗೆ ಬೆಳಕು ನೀಡುವವರು ಕುಡ್ಲದವರು ಎಂದರೆ ಅದೊಂದು ಸಿಂಪಲ್ ಸಬ್ಜೆಕ್ಟ್ ಅಲ್ವೇ ಅಲ್ಲ.. ಕುಡ್ಲದ ಕಾಪುವಿನ ಕಲ್ಯಾಮೂಡು ಮನೆಯ ಪ್ರದೀಪ್ ಜೆ. ಶೆಟ್ಟಿ, ಪ್ರಕಾಶ್ ಜೆ. ಶೆಟ್ಟಿ ಹಾಗೂ ಪ್ರಶಾಂತ್ ಜೆ. ಶೆಟ್ಟಿ ಸಹೋದರರು ಶ್ರೀ ಗಣೇಶ್ ಮೂವಿ ಲೈಟ್ಸ್ ಎಂಬ ಕಂಪನಿಯನ್ನು ಕಟ್ಟಿಕೊಂಡು ಬಾಲಿವುಡ್‌ಗೆ ಬೆಳಕು ನೀಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ಬೆಳಕಿನ ಜತೆಯಲ್ಲಿ ಆಡುವ ಸಂಜಯ್ ಲೀಲಾ ಬನ್ಸಾಲಿ ತನ್ನ ‘ಬ್ಲ್ಯಾಕ್’ಚಿತ್ರಕ್ಕಾಗಿ ಈ ಸಹೋದರರನ್ನು ಬಳಸಿಕೊಂಡಿದ್ದರು. ಬರೀ ಲೈಟಿಂಗ್‌ಗಾಗಿಯೇ ಬನ್ಸಾಲಿ ಸಾಹೇಬ್ರು ಎರಡೂವರೆ ಕೋಟಿ ರೂ.ಗಿಂತ ಅಕ ಖರ್ಚು ಮಾಡಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಹೆಸರು ಮಾಡಿತ್ತು.
ಅದಕ್ಕಿಂತಲೂ ಹೆಚ್ಚು ಗಟ್ಟಿ ಕತೆ ಹಾಗೂ ಬೆಳಕಿನಾಟದಲ್ಲಿ ಪ್ರೇಕ್ಷಕರನ್ನು ಚಿತ್ರ ಗಟ್ಟಿಯಾಗಿ ಹಿಡಿದುಕೊಂಡಿತ್ತು. ಬನ್ಸಾಲಿ ಅವರ ‘ಸಾವರಿಯಾ’ಕೂಡ ಬೆಳಕಿನಾಟದಿಂದ ಡಿಫರೆಂಟ್ ಸಿನಿಮಾ ಅನ್ನಿಸಿಕೊಂಡಿತ್ತು. ಸೂಪರ್ ಸ್ಟಾರ್ ಶಾರೂಕ್ ಖಾನ್‌ರ ‘ರೆಡ್ ಚಿಲ್ಲಿಸ್’ ಬ್ಯಾನರ್ ಇರಬಹುದು. ಕರಣ್ ಜೋಹರ್‌ರ ‘ಧರ್ಮ ಪ್ರೊಡಕ್ಷನ್’ ಇರಬಹುದು. ಬಾಲಿವುಡ್‌ನ ದೊಡ್ಡ ಬ್ಯಾನರ್ ಯಶ್‌ರಾಜ್‌ರಿಗೂ ಬೆಳಕಿನ ವಿಚಾರದಲ್ಲಿ ನೆರವು ನೀಡುವವರು ಕಾಪುವಿನ ಸಹೋದರರು ಎಂದರೆ ಅದು ಖಂಡಿತಕ್ಕೂ ಮಿರಕಲ್.
ಹಾಲಿವುಡ್‌ನ ಖ್ಯಾತ ಸಿನಿಮಾಟೋಗ್ರಾಫರ್ ಸ್ವೀವೆನ್ ಬ್ಯಾಸ್ಟಿನ್ ಕೂಡ ಬೆಳಕಿನ ವಿಚಾರಕ್ಕೆ ಬಂದಾಗ ಮೊದಲು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯುವುದು ಕೂಡ ಈ ಸಹೋದರರಿಂದ ಅದು ಖಂಡಿತಕ್ಕೂ ಹೆಚ್ಚುಗಾರಿಕೆ ಎನ್ನಿಸುವುದಿಲ್ಲ. ಶಾರೂಕ್ ಖಾನ್‌ರ ಹೊಸ ಚಿತ್ರ ‘ರಾ-ವನ್’ ವಿದೇಶ ತಂತ್ರಜ್ಞಾನರಿಂದ ಈಗಾಗಲೇ ಸುದ್ದಿ ಮಾಡಿದೆ. ಈ ವಿದೇಶಿ ತಂತ್ರಜ್ಞಾನರು ಬರೀ ಹಾಲಿವುಡ್‌ನ ಶೈಲಿಗೆ ಹೆಚ್ಚು ಒತ್ತು ನೀಡುತ್ತಾರೆ. ಅವರ ಜತೆಯಲ್ಲಿ ಲೈಟಿಂಗ್ ಕೆಲಸ ಮಾಡುವುದು ಕೂಡ ಸುಲಭದ ಕೆಲಸವಲ್ಲ. ಇಂತಹ ಕಷ್ಟದ ಕೆಲಸವನ್ನು ಈ ಸಹೋದರರು ಮಾಡುತ್ತಿದ್ದಾರೆ.
ಬೆಳಕಿನ ಹಿಂದಿನ ಶಕ್ತಿ:
ಪ್ರದೀಪ್ ಜೆ.ಶೆಟ್ಟಿ ಗ್ರಾಜ್ಯುವೇಶನ್ ಮುಗಿಸಿಕೊಂಡು ಮುಂಬಯಿಯ ಸಿನಿಮಾ ಕ್ಷೇತ್ರದಲ್ಲಿದ್ದ ತನ್ನ ಮಾವ ಮೋಹನ್ ಶೆಟ್ಟಿ ಜತೆಯಲ್ಲಿ ಲೈಟ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡರು. ಭಾರ ಭಾರದ ಲೈಟ್‌ಗಳನ್ನು ಹೊತ್ತುಕೊಂಡು ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸಹೋದರ ಪ್ರಕಾಶ್ ಶೆಟ್ಟಿ ಕೂಡ ಅವರ ಕೆಲಸಕ್ಕೆ ಜತೆಗೂಡಿದರು. ಇತ್ತ ಕಡೆ ಇದ್ದ ಒಬ್ಬ ಸಹೋದರ ಪ್ರಶಾಂತ್ ಬೇರೆ ಉದ್ಯೋಗದಲ್ಲಿ ಇರಲಿ ಎನ್ನುವುದು ಇಬ್ಬರು ಸಹೋದರರ ಬಯಕೆಯಾಗಿತ್ತು. ಯಾಕೋ ಏನೋ ಬೇರೆ ವೃತ್ತಿ ಬೇಡ ಎಂದುಕೊಂಡು ಪ್ರಶಾಂತ್ ಕೂಡ ಸಹೋದರರ ಜತೆಗೆ ಸೇರಿಕೊಂಡರು.
೨೦೦೧ರಲ್ಲಿ ಪ್ರಶಾಂತ್ ತಮ್ಮದೇ ಆದ ಶ್ರೀ ಗಣೇಶ್ ಮೂವಿ ಲೈಟ್ಸ್ ಕಂಪನಿಯನ್ನು ತೆರೆದರು. ಇಬ್ಬರು ಸಹೋದರರು ಈ ಕಂಪನಿಯನ್ನು ಸೇರಿಕೊಂಡು ಕೆಲಸ ಮಾಡಲು ಅಣಿಯಾದರು. ಎರಡು- ಮೂರು ವರ್ಷಗಳಲ್ಲಿ ಇಡೀ ಬಾಲಿವುಡ್‌ನ ಮೂವಿ ಲೈಟಿಂಗ್ಸ್ ನಲ್ಲಿ ಪ್ರಾಬಲ್ಯ ಮೆರೆದ ಮಲ್ಲಿಕ್ ಮೂಲ್‌ಚಂದಾನಿ ಲೈಟಿಂಗ್ಸ್ ಕಂಪನಿಗೆ ಪೈಪೋಟಿ ನೀಡಲು ಆರಂಭ ಮಾಡಿದರು. ಬಿಗ್ ಬಜೆಟ್ ಚಿತ್ರಗಳಿಗೆ ಲೈಟಿಂಗ್ ಮಾಡುವ ಸರದಿಯಲ್ಲಿ ಮೂಲ್ ಚಂದಾನಿ ಕಂಪನಿ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಎರಡನೇ ಸ್ಥಾನ ನಮ್ಮ ಕುಡ್ಲದ ಸಹೋದರರ ಶ್ರೀಗಣೇಶ್ ಮೂವಿ ಲೈಟ್ಸ್‌ಗೆ ಎಂದರೆ ಅದು ಕುಡ್ಲದವರು ಹೆಮ್ಮೆ ಪಡಬೇಕಾದ ವಿಷ್ಯಾ.
ಲೈಟಿಂಗ್ ಕ್ಷೇತ್ರದಲ್ಲಿ ಕ್ರಾಂತಿ:
ಕಪ್ಪು- ಬಿಳುಪು ಚಿತ್ರಗಳ ಜಮಾನದಿಂದಲೂ ಲೈಟ್ಸ್‌ಗಳ ಕಂಬಗಳು ಲೋಹದಿಂದ ಕೂಡಿರುತ್ತಿತ್ತು. ಅದಕ್ಕಿಂತಲೂ ಹೆಚ್ಚಾಗಿ ಬಹಳ ಭಾರ ಇರುತ್ತಿತ್ತು. ಅದನ್ನು ಒಬ್ಬರು ಹೊತ್ತುಕೊಂಡು ಹೋಗಿ ಸಿನಿಮಾದ ಬೇರೆ ಬೇರೆ ಜಾಗದಲ್ಲಿ ಇಡಲು ಸಾಧ್ಯವಿಲ್ಲ. ಆದರೆ ಲೈಟ್‌ಮ್ಯಾನ್‌ಗಳಾಗಿ ಕೆಲಸ ಮಾಡಿದ ಅನುಭವ ಇದ್ದ ಶೆಟ್ಟಿ ಸಹೋದರರು ಇದಕ್ಕೊಂದು ಹೊಸ ಪ್ಲಾನ್ ಮಾಡಿದರು. ಲೋಹದ ಜಾಗದಲ್ಲಿ ಸ್ಟೀಲ್‌ರಾಡ್‌ಗಳು ಬಂತು.
ಬಾಳ್ವಿಕೆ, ಹೊತ್ತು ಕೊಂಡು ಹೋಗಲು ಸುಲಭ ಹಾಗೂ ನೋಡಲು ಸುಂದರ ಇರುವ ಈ ಸ್ಟೀಲ್ ರಾಡ್‌ಗಳು ಸಿನಿಮಾದ ಲೈಟಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿತು. ಇದು ಶೆಟ್ಟಿ ಸಹೋದರರ ಸಾಧನೆ. ಪ್ರದೀಪ್ ಜೆ. ಶೆಟ್ಟಿ ಲೈಟಿಂಗ್ ಉದ್ಯಮವನ್ನು ನಡೆಸುತ್ತಿದ್ದಾರೆ. ಸಹೋದರ ಪ್ರಕಾಶ್ ಶೆಟ್ಟಿ ಲೈಟಿಂಗ್‌ನ ಡಿಸೈನ್ ಮೇಲೆ ಕೆಲಸ ಮಾಡುತ್ತಾರೆ. ಲೈಟಿಂಗ್‌ನ ತಂತ್ರಜ್ಞಾನದ ಮೇಲೆ ಪ್ರಶಾಂತ್ ಕೈಯಾಡಿಸುತ್ತಾರೆ.
ಟೋಟಲಿ ಶೆಟ್ಟಿ ಸಹೋದರರ ಪ್ರಯತ್ನ, ಪ್ರಾಮಾಣಿಕತೆ, ಗುರಿ ಮುಟ್ಟುವ ತನಕ ನಿಲ್ಲದ ಹೋರಾಟದ ಬದುಕು ಕೋಟ್ಯಂತರ ರೂಪಾಯಿ ಬೆಳೆಬಾಳುವ ಕಂಪನಿಯ ಮಾಲೀಕರಾಗಿ ಮಾಡಿದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ರಿಲೀಸ್ ಆಗುವ ದೊಡ್ಡ ದೊಡ್ಡ ಸಿನಿಮಾಗಳ ಪೋಸ್ಟರ್‌ಗಳಲ್ಲಿ ಈ ಮೂವರು ಸಹೋದರರ ಹೆಸರುಗಳಿರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಬೆಳಕಿನ ವರ್ಣನೆ ಇರುತ್ತದೆ. ಅದನ್ನು ನೋಡಿಕೊಂಡು ಸಿನಿಮಾಕ್ಕೆ ಬರುವ ಪ್ರೇಕ್ಷಕರು ಕೂಡ ಇದ್ದಾರೆ ! ನಿಜಕ್ಕೂ ಶೆಟ್ಟಿ ಸಹೋದರರು ನೆಲದಿಂದ ಏಕ್‌ದಂ ಮೇಲೆ ಬಂದರೂ ಇಂದಿಗೂ ಅವರ ಕಾಲು ನೆಲದದಲ್ಲಿಯೇ ಇದೆ ಎನ್ನುವ ಮಾತು ಅವರನ್ನು ನೋಡಿದಾಗ ನಿಜ ಅನ್ನಿಸಿಬಿಡುತ್ತದೆ. ಒಂದು ಕಾಲದಲ್ಲಿ ಲೈಟ್‌ಮ್ಯಾನ್‌ಗಳಾಗಿ ಹೊಟ್ಟೆ ಹೊರೆಯುತ್ತಿದ್ದ ಶೆಟ್ಟಿ ಸಹೋದರರು ಈಗ ಇಡೀ ಬಾಲಿವುಡ್‌ಗೆ ಬೆಳಕು ನೀಡುತ್ತಿರುವ ವಿಚಾರ ನಿಜಕ್ಕೂ ಅವರನ್ನು ನೋಡಿ ಹ್ಯಾಟ್ಸಾಫ್ ಎನ್ನಲೇಬೇಕು.