ನಂದಿನಿ ಅವಳು ನಮ್ಮವಳು ಎನ್ನದ ಕರಾವಳಿಗರಿಲ್ಲ. ಕನಕಗಿರಿಯಿಂದ ಹಿಡಿದು ಸಸಿಹಿತ್ಲುವಿನ ತನಕ ಅಂಕುಡೊಂಕು ವೈಯಾರದಿಂದ ಓಡಾಡಿಕೊಂಡಿರುವ ನಂದಿನಿ ಭವಿಷ್ಯದ ಪುಟದಲ್ಲಿ ಮರೆಯಾಗಿ ಹೋಗುತ್ತಾಳಾ..? ನಂದಿನಿಯ ಓಡಾಟಕ್ಕೆ ಧಕ್ಕೆ ಮಾಡಿದವರಾರು..? ಈ ಪ್ರಶ್ನೆಗೆ ಉತ್ತರದ ಹುಡುಕಾಟ ಇಲ್ಲಿ ನಡೆದಿದೆ. ಸರಾಗವಾಗಿ ಹರಿದಾಡುವ ಒಂದು ನದಿ ಹಲವು ನಾಗರಿಕತೆಯ ಉಗಮಕ್ಕೆ ಕಾರಣ ಎನ್ನುವ ಮಾತನ್ನು ಇತಿಹಾಸದ ನೂರಾರು ಪುಟಗಳು ಬಾಯಿ ಬಡಿದುಕೊಂಡು ಹೇಳುತ್ತಿದೆ. ದೇಶದ ಬಹುತೇಕ ನಾಗರಿಕತೆಗಳು ನದಿ ತಟದಲ್ಲಿ ಬೆಳೆದು, ವಿನಾಶ ಹಾದಿಯನ್ನು ಹಿಡಿದುಕೊಂಡ ಉದಾಹರಣೆಗಳಿವೆ. ಇಂತಹವುಗಳ ನಡುವೆ ಕರಾವಳಿಯ ನಂದಿನಿ ಬಂದು ನಿಂತುಬಿಟ್ಟಿದ್ದಾಳೆ. ಕರಾವಳಿಯ ಪುಟ್ಟ ನದಿ ನಂದಿನಿಯ ಅಧ್ಯಾಯ ಕೊನೆಗೊಳ್ಳುತ್ತದೆ ಎನ್ನುವ ಭಯ ಈಗ ದಟ್ಟವಾಗಿ ಹುಟ್ಟಿಕೊಂಡಿದೆ.
ಅಂದಹಾಗೆ ಇಲ್ಲಿ ಒಂದು ಭವ್ಯವಾದ ನಾಗರಿಕತೆ ಎದ್ದು ನಿಂತಿಲ್ಲ. ಆದರೂ ಪ್ರತಿನಿತ್ಯ ಸಾವಿರಾರು ಮಂದಿ ನಂದಿನಿಯ ಕೃಪಾಕಟಾಕ್ಷದಿಂದ ಬದುಕು ಕಟ್ಟುತ್ತಿದ್ದಾರೆ. ನಂದಿನಿ ನದಿ ಕಟೀಲು ದೇವಸ್ಥಾನದ ಉಗಮಕ್ಕೆ ಕಾರಣವಾದರಿಂದ ಅವಳಿಗೊಂದು ಪ್ರತ್ಯೇಕವಾದ ಗೌರವ ಭಾವನೆ ಕರಾವಳಿಗರ ಮನಸ್ಸಿನಲ್ಲಿದೆ.
೪೦ ಕಿ.ಮೀ.. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ನದಿ ಉಗಮವಾಯಿತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತಾ ಮೂಚ್ಚುರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಹರಿಯುವ ನಂದಿನಿ ಕಡಲಿಗೆ ಸೇರಿ ಮುಕ್ತಿ ಕಾಣುತ್ತಾಳೆ.
ನಂದಿನಿ ಎಂಬ ಜೀವ ಜಲ:ಒಂದು ಲೆಕ್ಕಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಬರೋಬರಿ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನಿ ಉದ್ದ ೪೦ ಕಿ.ಮೀ. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ. ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.
ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು,ಗುಂಡಾವು,ನೀರ್ಕೆರೆ, ಮುಚ್ಚೂರು ಕಾನ, ಕಾಯರ್ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು,ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗೆ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತದೆ.
ಹಾಡು ಮಿಜಾರು ವಿಷ್ಣು ಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿದೆ.
ಯಾರಿಗೆ ಹೇಳೋದು ಪ್ರಾಬ್ಲಂ:ಅಂದಹಾಗೆ ನಂದಿನಿಯಲ್ಲಿ ಈಗ ಸಮಸ್ಯೆಗಳು ಕಾಣಲು ಆರಂಭವಾಗಿದೆ. ಪಾವಂಜೆ,ಚಿತ್ರಾಪು, ಕೊಳವೈಲು, ಸಸಿಹಿತ್ಲು, ಮುಂಡ ಸೇರಿದಂತೆ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಖಾಂಡ್ಲಾ ಗಿಡಗಳು ನದಿಯ ಹರಿವನ್ನು ಬದಲಾಯಿಸಲು ಹೊರಟಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳು ನದಿಯ ಆಳವನ್ನು ಕಡಿಮೆ ಮಾಡುತ್ತಾ ಬಂದಿದೆ. ನದಿ ಭೂಮಿ ಅತ್ರಿಕ್ರಮಣ ಸಮಸ್ಯೆಯಿಂದ ನಂದಿನಿ ತನ್ನ ಹರಿವಿಕೆಯ ಪಥವನ್ನು ಮುಂಡದಲ್ಲಿ ಬದಲಾಯಿಸಿಕೊಂಡಿದೆ. ನಂದಿನಿಯ ಓಡಾಟದ ಪ್ರದೇಶಗಳಲ್ಲಿ ನದಿಯನ್ನು ಕಟ್ಟಿಹಾಕುವ ಪ್ರಯತ್ನಗಳು ನಿರಂತರವಾಗಿ ಮುಂದುವರಿದರ ಪಲವಾಗಿ ನಂದಿನಿಯ ಭವಿಷ್ಯ ಕತ್ತಲಿನಲ್ಲಿ ಮುಳುಗಿದೆ.
ನದಿ ಭೂಮಿ ಅತಿಕ್ರಮಣ, ಖಾಂಡ್ಲಾ ಗಿಡಗಳ ತೊಂದರೆ, ನದಿಯ ಹೂಳೆತ್ತಲು ಇರುವ ಸಮಸ್ಯೆಗಳು ನಂದಿನಿಯ ಭವಿಷ್ಯ ಮುಂದಿನ ಕೆಲವು ವರ್ಷಗಳಲ್ಲಿ ಮುಗಿದು ಹೋಗುತ್ತದೆ ಎನ್ನುವುದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್ ಅವರ ಮಾತು. ಅವರು ಹೇಳುವಂತೆ ‘ ನದಿ ಭೂಮಿ ಅತಿಕ್ರಮಣ ಮಾಡುವ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಮುಂದೆ ದೂರು ಕೊಟ್ಟಿದ್ದೇವೆ. ಖಾಂಡ್ಲಾ ಗಿಡಗಳನ್ನು ತೆಗೆಯುವಂತೆ ಈ ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೂ ಅರಣ್ಯ ಇಲಾಖೆ ಅದನ್ನು ಗಮನಕ್ಕೆ ತಂದುಕೊಂಡಂತೆ ಇಲ್ಲ. ಈ ಖಾಂಡ್ಲಾದಿಂದ ಅಲ್ಲಿಯೇ ಕಸಕಡ್ಡಿ, ಮಣ್ಣು ಸೇರಿ ಪ್ರತ್ಯೇಕವಾದ ಗುಡ್ಡೆಗಳು ನದಿಯಲ್ಲಿ ನಿರ್ಮಾಣಗೊಂಡಿದೆ. ಇದು ನಂದಿನಿ ನಿರಂತರ ಓಡಾಟಕ್ಕೆ ಬ್ರೇಕ್ ಕೊಟ್ಟಿದೆ ಅನ್ನೋ ದು ಅವರ ಮಾತು.
ಹೂಳು ನಂದಿನಿಯಲ್ಲಿ ಸಧ್ಯಕ್ಕೆ ಉದ್ಭವಿಸಿರುವ ಸಮಸ್ಯೆ. ಈ ಹೂಳಿನಿಂದ ನಂದಿನಿಯ ಆಳ ಕಡಿಮೆಯಾಗುತ್ತಿದ್ದಂತೆ ನದಿಯಲ್ಲಿ ಓಡುವ ನೀರು ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ಓಡುತ್ತಿದೆ. ಬೇಸಿಗೆಯಲ್ಲಿ ನಂದಿನಿ ಬರ ಪೀಡಿತಳಂತೆ ಕಂಡರೆ ಮಳೆಗಾಲದಲ್ಲಿ ಉಕ್ಕಿಬಿಕ್ಕಿ ಹರಿಯುತ್ತಾಳೆ. ನಂದಿನಿ ಉಕ್ಕಿ ಹರಿಯುವುದರಿಂದ ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಳ್ಳುತ್ತದೆ.
ಸರಕಾರಿ ಲೆಕ್ಕಚಾರದ ಪ್ರಕಾರ ನದಿಯ ಹೂಳೆತ್ತಲು ಯಾವುದೇ ಅನುದಾನವಿಲ್ಲ. ಆದರೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನದಿಯ ಹೂಳೆತ್ತಲು ಅವಕಾಶವಿದೆ. ಆದರೆ ಸಂಬಳದ ಆಧಾರದಲ್ಲಿ ಯೋಜನೆ ನಡೆಯುವುದರಿಂದ ಯಾರು ಕೂಡ ಮುಂದೆ ಬರಲು ಒಪ್ಪುತ್ತಿಲ್ಲ. ಜಿಲ್ಲೆಯ ನದಿಗಳಲ್ಲಿರುವ ಹೂಳನ್ನು ತೆಗೆಯಲು ಪ್ರತ್ಯೇಕವಾದ ಅನುದಾನವೊಂದನ್ನು ಸರಕಾರ ಇಟ್ಟಿರಬೇಕು ಎನ್ನೋದು ಮಹಾಬಲ ಸಾಲ್ಯಾನ್ರ ಅಭಿಮತ.
ಇದು ಬರೀ ನಂದಿನಿಯ ಎಂಡ್ ಪಾಯಿಂಟ್ ಮಾತು. ಆದರೆ ನದಿಯ ಆರಂಭದಲ್ಲೂ ಸಮಸ್ಯೆಗಳಿವೆ. ಕಟೀಲಿನ ಮೂಲಕ ಹರಿಯುವ ನಂದಿನಿಯಲ್ಲಿ ಅಪಾರ ಪ್ರಮಾಣದಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಳೆಯ ದೇವರ ಪೋಟೋಗಳ ಸಮೇತ, ಪ್ಲಾಸ್ಟಿಕ್ ಲಕೋಟೆಗಳನ್ನು ತಂದು ನೀರಿನಲ್ಲಿ ಬಿಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟೀಲಿನಲ್ಲಿ ನಂದಿನಿಯ ಹೂಳೆತ್ತುವ ಸಂದರ್ಭ ಈ ತ್ಯಾಜ್ಯಗಳು ಕಾಣಿಸಿಕೊಂಡಿತ್ತು !
ಕೇಳ್ರೋಪ್ಪೋ ನದಿ ಪುರಾಣ ಭೂಮಿಯಲ್ಲಿ ಹನ್ನೆರಡು ವರ್ಷಗಳ ಕಾಲ ಭೀಕರ ಬರಗಾಲ. ಎಲ್ಲೆಲ್ಲೂ ಜನರ ಹಾಹಾಕಾರ. ಇದರಿಂದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿಕೊಂಡು ಕಾಮಧೇನುವನ್ನು ತರಲು ದೇವಲೋಕಕ್ಕೆ ಪ್ರಯಾಣ ಬೆಳೆಸಿದ. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನು ವರುಣಲೋಕಕ್ಕೆ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನಿಯನ್ನು ಕಳುಹಿಸಿಕೊಡುವುದಾಗಿ ಹೇಳಿಕೊಂಡನು. ಅದರಂತೆ ನಂದಿನಿಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು.
ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ ಜಾಬಾಲಿ ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು ಎನ್ನುವ ಕತೆಯೊಂದು ಪುರಾಣದಲ್ಲಿ ಓಡಾಡಿಕೊಂಡಿದೆ.
ನಂದಿನಿಯಿಂದ ಕರೆಂಟು !ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಸುತ್ತಲೂ ಹರಿಯುವ ನಂದಿನಿ ನದಿಯಲ್ಲಿ ೨೫ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯೊಂದು ಸುದ್ದಿಯಲ್ಲಿದೆ. ನಂದಿನಿ ಹತ್ತು ತಿಂಗಳ ಮಟ್ಟಿಗೆ ಸರಾಗವಾಗಿ ಹರಿಯುವ ಕಾರಣ ಕಟೀಲು ದೇವಸ್ಥಾನಕ್ಕೆ ವಿದ್ಯುತ್ ಪೂರೈಕೆ ಮಾಡಬಹುದು ಎನ್ನೋದು ಜಿ.ಕೆ. ರತ್ನಾಕರ್ ಅವರ ಹೇಳಿಕೆ. ಈಗಾಗಲೇ ೨೭೭ ಕಡೆಗಳಲ್ಲಿ ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಹೇಳುವಂತೆ ಸುಮಾರು ನೂರು ಮೀಟರ್ ದೂರದಲ್ಲಿರುವ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪ್ ಮೂಲಕ ವೇಗವಾಗಿ ಹರಿಸಿದರೆ ೪ತಿಂಗಳ ಕಾಲ ಒಂದು ಮೆಗಾವ್ಯಾಟ್ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್ನಿಂದ ನೂರು ಕೆವಿಯಷ್ಟು ವಿದ್ಯುತ್ನ್ನು ಆರು ತಿಂಗಳ ಕಾಲ ನಿರಂತರವಾಗಿ ಪಡೆಯಬಹುದು.