Sunday, August 28, 2011

ಯೋಡ್ಲಿಂಗ್ ಕಿಂಗ್ ‘ಕಿಶೋರ’


ಕಿಶೋರ್ ಕುಮಾರ್ ಎಂದರೆ ಬರೀ ಹಾಡುಗಾರ ಎಂದೇ ಬಹಳಷ್ಟು ಜನರಿಗೆ ಗೊತ್ತು. ಆದರೆ ಕಿಶೋರ್ ಕುಮಾರ್ ಒಬ್ಬ ಸಂಪೂರ್ಣ ಕಲಾವಿದ. ಸಿನಿಮಾದಂತೆ ಬದುಕಿದ ಕಲಾವಿದ ಕಿಶೋರ್ ಯಾಕೆ ಇಷ್ಟವಾಗುತ್ತಾರೆ ಗೊತ್ತಾ..?

ಕಿಶೋರ್ ಕುಮಾರ್ ಬರೀ ಗಾಯಕನಲ್ಲ ಒಬ್ಬ ಸಂಪೂರ್ಣ ಕಲಾವಿದ ಎಂದು ಹೇಳಿಕೊಂಡವರು ಬೇರೆ ಯಾರು ಅಲ್ಲ ಮಾರಾಯ್ರೆ ಗಾನ ಕೋಗಿಲೆ ಲತಾ ಮಂಗೇಶ್ಕರ್. ಈ ಮಾತು ನೂರಕ್ಕೆ ನೂರರಷ್ಟು ನಿಜ. ಕಿಶೋರ್ ಬರೀ ಹಿನ್ನೆಲೆ ಗಾಯಕನಾಗಿ ಉಳಿದು ಹೋಗಲಿಲ್ಲ. ಆದರೆ ಕಿಶೋರ್ ಕುಮಾರ್ ಎಂದರೆ ಅವರು ಬರೀ ಹಾಡುಗಾರರು ಎಂದೇ ಸಿನಿಮಾ ಮಂದಿಗೆ, ಅವರ ಅಭಿಮಾನಿಗಳಿಗೆ ಗೊತ್ತಿತ್ತು. ಕಿಶೋರ್ ಎಲ್ಲ ಕ್ಷೇತ್ರದಲ್ಲೂ ಪಳಗಿ ಬಂದವರು. ನಟನೆ, ಗಾಯನ, ನಿರ್ದೇಶನ, ನಿರ್ಮಾಪಕ, ಸಾಹಿತ್ಯ, ಚಿತ್ರಕತೆ ಹೀಗೆ ಎಲ್ಲವೂ ಕಿಶೋರ್ಗೆ ತುಂಬಾ ಇಷ್ಟವಾಗಿತ್ತು.
ಕಿಶೋರ್ ಕುಮಾರ್ ಹಾಡುಗಳೆಂದರೆ ಮಧುರತೆ ಜತೆಯಲ್ಲಿ ಕೊಂಚ ರಾಕ್ ಆಂಡ್ ರೋಲ್ ಕಲ್ಚರ್ ಮಿಕ್ಸ್ ಆಗಿ ಕೇಳುವ ಕಿವಿಗಳಿಗೆ ಹೊಸ ಅನುಭವ ಹುಟ್ಟುಹಾಕುತ್ತಿತ್ತು. ಆರ್ಡಿ ಬರ್ಮನ್ ಸಂಗೀತ ನಿರ್ದೇಶನದ ‘ಸಾಗರ್’ಚಿತ್ರದ ‘ಸಾಗರ್ ಕಿನಾರೆ...’ ಹಾಡುಗಳು ಮತ್ತೆ ಕೇಳುತ್ತಿದ್ದಾಗ ತಣ್ಣನೆ ಮನಸ್ಸನ್ನು ಅಲ್ಲಿಯೇ ಸವರಿಕೊಂಡಂತೆ ಆಗಿ ಬಿಡುತ್ತದೆ ಎಂದು ಖ್ಯಾತ ಗಾಯಕ ಮುಕೇಶ್ ಹೇಳಿದ್ದರು. ಕಲ್ಯಾಣ್ ಆನಂದ್ಜೀ ಸಂಗೀತ ನಿರ್ದೇಶನದ ‘ಕೋರಾ ಕಾಗಾಜ್’ ಚಿತ್ರದ ‘ಮೇರಾ ಜೀವನ್ ಕೋರಾ ಕಾಗಾಜ್..’ ಹಾಡು ಮತ್ತೊಂದು ಸಾರಿ ರೇಡಿಯೋ, ಟಿವಿಯಲ್ಲಿ ಕೇಳುತ್ತಿದ್ದಾರೆ ಸಾಕು ಜೀವನ ಪಾವನವಾಯಿತು ಎಂದುಕೊಳ್ಳಬೇಕು ಎಂದು ಗಾಯಕಿ ಆಶಾಜೀ ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ.
ಇದೇ ಕಿಶೋರ್ ಕುಮಾರ್ ಅವರ ಹಾಡುಗಳಿಗೆ ಇದ್ದ ಬೇಡಿಕೆ. ಈಗಲೂ ಗೂಗಲ್ ಸರ್ಚ್ ಎಂಜಿನ್ನೊಳಗೆ ಹುಡುಕಾಡಿ ನೋಡಿದರೆ ಸಾಕು. ಕಿಶೋರ್ ಕುಮಾರ್ ಹಾಡುಗಳ ಅಭಿಮಾನಿಗಳ ಸಂಖ್ಯೆ ಬರೋಬರಿ ನಾಲ್ಕು ಮಿಲಿಯಕ್ಕಿಂತ ಜಾಸ್ತಿ ಇದೆ. ಈಗಲೂ ಹಳೆಯ ಟಾಪ್ ಟೆನ್ ಸಾಂಗ್ ಲೀಸ್ಟ್ನಲ್ಲಿ ಕಿಶೋರ್ ಕುಮಾರ್ ಅವರ ಹಾಡುಗಳು ಭದ್ರ ಸ್ಥಾನ ಪಡೆದುಕೊಂಡಿದೆ. ಆದರೂ ಕಿಶೋರ್ ಕುಮಾರ್ ಎಂದರೆ ಒಬ್ಬ ಕ್ರೇಜಿಮ್ಯಾನ್ ಜತೆಗೆ ಮನರಂಜನೆ ಕೊಡುವ ಮನುಷ್ಯ.
ಕಿಶೋರ್ ಕುಮಾರ್ರ ಮೂಲ ಹೆಸರು ಅಬ್ಬಾಸ್ ಕುಮಾರ್ ಗಂಗೋಲಿ. ಬಾಂಬೇ ಟಾಕೀಸ್ ಸಿನಿಮಾದ ಮೂಲಕ ಕಿಶೋರ್ ಕುಮಾರ್ ಎಂದು ಹೆಸರು ಬದಲಾಯಿಸಿ ಬಿಟ್ಟರು. ಮಧ್ಯಪ್ರದೇಶದ ಮಧ್ಯವರ್ಗದ ಕುಟುಂಬದಲ್ಲಿ ಕಿಶೋರ್ ಹುಟ್ಟಿದವರು. ಅಂದಹಾಗೆ ನಟ ಅಶೋಕ್ ಕುಮಾರ್ ಹಾಗೂ ನಟ ಕಲ್ಯಾಣ್ ಕುಮಾರ್ ಕಿಶೋರ್ ಕುಮಾರ್ರ ಹಿರಿಯ ಸಹೋದರರು. ಅಶೋಕ್ ಕುಮಾರ್ಗೂ ತಮ್ಮ ಕಿಶೋರ್ ಒಳ್ಳೆಯ ನಟ ಆಗಬೇಕೆಂಬ ಕನಸ್ಸಿತ್ತು. ಆ ಕಾಲದಲ್ಲಿ ನಟರಿಗೆ ಒಳ್ಳೆಯ ಸಂಭಾವಣೆ ಬರುತ್ತಿತ್ತು.
ಕಿಶೋರ್ಗೂ ನಟನೆಯ ಜತೆಯಲ್ಲಿ ಹಾಡುವ ತಾಕತ್ತು ಇದೆ ಎಂದು ಗೊತ್ತಾದ ಕೂಡಲೇ ಅಶೋಕ್ ಕುಮಾರ್ ಕಿಶೋರ್ ಕುಮಾರ್ಗೆ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಕಿಶೋರ್ ಕೆಲವೊಂದು ಚಿತ್ರಗಳಲ್ಲಿ ನಟಿಸಿದ ನಂತರ ನಟನೆ ಬೋರ್ ಅನ್ನಿಸಿಬಿಟ್ಟಿತ್ತು. ಹಾಡುವ ಚಾನ್ಸ್ಗಾಗಿ ಕಿಶೋರ್ ಸಂಗೀತ ನಿರ್ದೇಶಕರ ಬಳಿ ಓಡಲಾರಂಭಿಸಿದರು. ಆದರೆ ಕಿಶೋರ್ ಆರಂಭದಲ್ಲಿ ಸಂಗೀತ ನಿರ್ದೇಶಕರ ಬಳಿ ಹೋದಾಗ ‘ ಆಪ್ಕೀ ಅವಾಜ್ ಮೇ ವೋ ಬಾತ್ ನಹೀ ಹೈ’( ನಿಮ್ಮ ಕಂಠದಲ್ಲಿ ಅಂತಹ ಮಾತಿಲ್ಲ) ಎಂದು ಹೇಳಿ ಕಿಶೋರ್ರ ಉತ್ಸಾಹಕ್ಕೆ ತಣ್ಣೀರು ಹಾಕಿಬಿಟ್ಟರು. ಆದರೆ ಕಿಶೋರ್ ಹಾಡುಗಾರಿಕೆಯನ್ನು ಅಪಾರ ಪ್ರೀತಿಸಿದರು. ಜತೆಗೆ ಹಾಡುಗಳ ಮೂಲಕ ನಿರಂತರವಾಗಿ ಬೆಳೆಯುತ್ತಾ ಹೋದರು.
೧೯೪೮ರಲ್ಲಿ ದೇವಾನಂದ್ ನಟಿಸಿದ ಚಿತ್ರವೊಂದರಲ್ಲಿ ಕಿಶೋರ್ ಕುಮಾರ್ ಹಾಡುವ ಮೂಲಕ ಬಾಲಿವುಡ್ ಸಂಗೀತ ಲೋಕಕ್ಕೆ ಹೊಸ ಸೈಗಲ್ ಶೈಲಿಯನ್ನು ಪರಿಚಯಿಸಿದರು. ಈ ಶೈಲಿ ಕಿಶೋರ್ ಹಾಡುಗಳಲ್ಲಿ ಖಾಯಂ ಆಗಿ ಕೇಳಿಬರುತ್ತಿತ್ತು. ಹಾಡಿನ ಜತೆಯಲ್ಲಿ ‘ಆಪ್ ಟಿಕೇಟ್’, ‘ಚಾಲ್ತಿ ಕಾ ನಾಮ್ ಘಾಡಿ’ ‘ಪಂಟ್ಯೂಸ್’, ‘ಪಡೋಸನ್’ ಚಿತ್ರಗಳ ಮೂಲಕ ಕಿಶೋರ್ ಹಾಸ್ಯ ಚಕ್ರವರ್ತಿಯಾಗಿ ಮರೆದರು.
ಬಾಲಿವುಡ್ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್( ಸಚಿನ್ ದೇವ್ ಬರ್ಮನ್)ರ ಬಹುತೇಕ ಸಂಗೀತ ನಿರ್ದೇಶನದ ಹಾಡುಗಳಿಗೆ ಕಿಶೋರ್ ಕುಮಾರ್ ಅವರು ಹಿನ್ನೆಲೆ ಗಾಯಕರಾಗಿ ಇರುತ್ತಿದ್ದರು. ಎಸ್.ಡಿ. ಬರ್ಮನ್ರ ೧೧೨ ಹಾಡುಗಳನ್ನು ಕಿಶೋರ್ ಕುಮಾರ್ ಒಬ್ಬರೇ ಹಾಡಿಕೊಂಡು ಬಂದಿದ್ದಾರೆ. ಎಸ್.ಡಿ. ಬರ್ಮನ್ರ ನಂತರ ಬಂದ ಅವರ ಪುತ್ರ ಆರ್.ಡಿ. ಬರ್ಮನ್ರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಹಾಡಿದ್ದರು. ಈ ಮೂಲಕ ಎರಡು ಪೀಳಿಗೆಯ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡಿದ ಅನುಭವ ಕಿಶೋರ್ ಬಗಲಿಗಿತ್ತು. ಅದರಲ್ಲೂ ನಟ ರಾಜ್ ಕಪೂರ್ ಯಾವುದೇ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಕಿಶೋರ್ ಕುಮಾರ್ ಹಾಡುಗಳು ಇರಲೇ ಬೇಕಿತ್ತು.
ಆದರೆ ಕಿಶೋರ್ ಕುಮಾರ್ ಆರ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ಬಂದ ‘ಕಟಿ ಪತಂಗ್’ ಚಿತ್ರದ ‘ಯೇ ಜೋ ಮೊಹಬ್ಬತ್’ ‘ಅಮರ್ ಪ್ರೇಮ್’ ಚಿತ್ರದ ‘ಚಿಂಗಾರಿ ಕೋಯಿ ಬಡ್ಕೇ’ ಹಾಡುಗಳು ಯುವ ಪೀಳಿಗೆಯನ್ನು ಅತಿಯಾಗಿ ಇಷ್ಟಪಟ್ಟಿತು. ೧೯೬೯ರಲ್ಲಿ ಬಾಲಿವುಡ್ನಲ್ಲಿ ಬಿಡುಗಡೆಯಾದ ‘ಆರಾಧನಾ’ ಚಿತ್ರ ‘ಮೇರಿ ಸಪ್ನೋಕಿ ರಾಣಿ...’ ಮತ್ತು ‘ರೂಪ್ ತೇರಾ ಮಸ್ತಾನಾ’ ಹಾಡುಗಳು ಯುವಪೀಳಿಗೆಯಲ್ಲಿ ಕಿಶೋರ್ ಕುಮಾರ್ರ ಸ್ಥಾನವನ್ನು ಭದ್ರ ಮಾಡಿತು.
ಕಿಶೋರ್ ಕುಮಾರ್ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಹೊಸ ಶೈಲಿಯ ಯೋಡ್ಲಿಂಗ್ ಸಂಗೀತವನ್ನು ನೀಡುವ ಮೂಲಕ ಸಂಗೀತದಲ್ಲಿ ಬದಲಾವಣೆಗಳು ಅವಶ್ಯಕ ಎಂದು ತೋರಿಸಿ ಬಿಟ್ಟರು. ಅದರಲ್ಲೂ ‘ಮೇ ಹೂ ಜುಮುರೂ’ ಹಾಗೂ ‘ಹಾಲ್ ಕೈಸಾ ಹೇ ಜನಾಬ್ ಅಪ್ಕಾ’ ಹಾಡುಗಳು ಸಂಗೀತ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು.
ದೇಶದ ಬಹುತೇಕ ಭಾಷೆಗಳಲ್ಲಿ ಹಾಡಿರುವ ಕಿಶೋರ್ ಕುಮಾರ್ ೮ಕ್ಕೂ ಅದಿಕ ಫಿಲ್ಮ್-ರ್ ಅವಾರ್ಡ್ಗಳನ್ನು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪಡೆದುಕೊಂಡಿದ್ದರು. ಕಿಶೋರ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಂತೆ ವೈವಾಹಿಕ ಬದುಕಿನಲ್ಲಿ ಹಾದಿ ತಪ್ಪಿ ಬಿಟ್ಟಿದ್ದರು. ಕಿಶೋರ್ ಕುಮಾರ್ ನಾಲ್ವರನ್ನು ವಿವಾಹವಾಗಿದ್ದರು. ರೂಮಾ ಗುವಾ, ಮಧುಬಾಲ, ಯೋಗಿತಾ ಬಾಲಿ ಹಾಗೂ ಕೊನೆಯದಾಗಿ ಲೀನಾ ಚಂದ್ವಾರ್ಕರ್ ಕಿಶೋರ್ ಕುಮಾರ್ ಪತ್ನಿಯಾಗಿ ಸ್ಥಾನ ಪಡೆದುಕೊಂಡಿದ್ದರು. ಆರಂಭದ ಪತ್ನಿ ರೂಮಾರಿಗೆ ಅಮಿತ್ ಕುಮಾರ್ ಎಂಬ ಪುತ್ರನಿದ್ದಾನೆ. ಹಿನ್ನೆಲೆ ಗಾಯಕನಾಗಿ ಅಮಿತ್ ಕುಮಾರ್ ಬಹಳಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ. ಲೀನಾ ಚಂದ್ವಾರ್ಕರ್ಗೆ ಸುಮಿತ್ ಕುಮಾರ್ ಎಂಬ ಪುತ್ರನಿದ್ದಾನೆ.
ಕಿಶೋರ್ ಕುಮಾರ್ ತನ್ನ ಬದುಕಿನ ಕೊನೆಯವರೆಗೂ ಸಂಗೀತ ಕ್ಷೇತ್ರವನ್ನು ಬಿಟ್ಟಿರಲಿಲ್ಲ. ಕೊನೆಗಾಲದಲ್ಲಿ ಸಿನಿಮಾಗಳನ್ನು ಬಿಟ್ಟು ವೇದಿಕೆಗಳಲ್ಲಿ ನಿಂತು ಹಾಡಲು ಆರಂಭ ಮಾಡಿದ್ದರು. ಯಾರಾದರೂ ಈ ವಿಚಾರದಲ್ಲಿ ಕಿಶೋರ್ ಬಳಿ ಪ್ರಶ್ನೆ ಕೇಳುತ್ತಿದ್ದಾಗ ‘ ಸ್ಟೇಜ್ ಶೋಗಳಿಂದ ಬಂದ ಹಣವನ್ನು ತೆರಿಗೆ ಕಟ್ಟಲು ಬಳಸುತ್ತಿದ್ದೇನೆ’ ಎನ್ನುತ್ತಿದ್ದರಂತೆ !! ಅದರಲ್ಲೂ ಸಿನಿಮಾಗಳಲ್ಲಿ ನಟಿಸುವಾಗಲೂ ನಿರ್ಮಾಪಕ ಸರಿಯಾಗಿ ಸಂಭಾವನೆ ಕೊಡದೇ ಹೋದರೆ ಅರ್ಧ ಮೇಕಪ್ ಮಾಡಿ ನಟನೆ ಮಾಡುತ್ತಿದ್ದರು ಎನ್ನುವ ವಿಚಾರ ಅವರ ಆಪ್ತ ವಲಯದಿಂದ ಹೊರಬರುತ್ತದೆ.
ಕಿಶೋರ್ ಕುಮಾರ್ ವ್ಯಕ್ತಿತ್ವನೂ ಬಹಳಷ್ಟು ವಿಚಿತ್ರವಾಗಿತ್ತು. ಕಿಶೋರ್ ತಮ್ಮ ಸುತ್ತಮುತ್ತಲಿರುವ ಮರಗಳ ಜತೆಯಲ್ಲಿ ಮಾತಿಗೆ ನಿಂತುಬಿಡುತ್ತಿದ್ದರು. ಮನೆಯಲ್ಲಿರುವ ಮರಗಳಿಗೂ ಒಂದೊಂದು ಹೆಸರುಗಳನ್ನು ಕೊಟ್ಟಿದ್ದರು. ಅದರ ಮೂಲಕವೇ ಮರಗಳ ಜತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಕಿಶೋರ್ ಕುಮಾರ್ ಬದುಕಿನಲ್ಲೂ ಅಷ್ಟೇ ಮನರಂಜನೆ ನೀಡುವ ವ್ಯಕ್ತಿಯಾಗಿ ಎಲ್ಲರಿಗೂ ಕಾಣಿಸುತ್ತಿದ್ದರು. ಕಿಶೋರ್ ಕುಮಾರ್ ಕೊನೆಗಾಲದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಹೋದರೂ ಕೂಡ ಅವರ ಹಾಡುಗಳು ಇಂದಿಗೂ ಕಿಶೋರ್ ಅಮರ ಎನ್ನುತ್ತಿದೆ.

Friday, August 26, 2011

ಮಂಗಾಥ ಇದು ಅಜಿತ್ ಆಟ !


ತಮಿಳಿನ ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಈ ಬಾರಿ ‘ಅಂದರ್ ಬಾಹರ್’ ಆಟ ಆಡುತ್ತಿದ್ದಾರೆ. ಅಂದಹಾಗೆ ಇದು ಅಜಿತ್ ಕುಮಾರ್ನ ೫೦ನೇ ಆಟ. ಕಾಲಿವುಡ್ನಲ್ಲಿ ಈ ಆಟ ಸಖತ್ ಆಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಮಹಾಪ್ರಭು ಅನ್ಸರ್ ಕೊಡಬೇಕು.

ಗಣೇಶನ ಹಬ್ಬಕ್ಕೆ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ‘ಅಂದರ್ ಬಾಹರ್’ ಆಟ ಆರಂಭವಾಗಲಿದೆ ಎನ್ನೋದು ತಮಿಳಿನ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರ ಮಾತು. ಅರೇ... ಇದೇನ್ ‘ಅಂದರ್ ಬಾಹರ್’ ಆಟ ಎನ್ನುವ ಮೊದಲು ಆ.೩೧ ರಂದು ಕ್ಲೌಡ್ ನೈನ್ ಮೂವೀಸ್ ಬ್ಯಾನರ್ನಡಿಯಲ್ಲಿ ‘ಮಂಗಾಥ’ ಸಿನಿಮಾ ಥಿಯೇಟರ್ಗಳಿಗೆ ಒಮ್ಮೆಲೆ ದಾಳಿ ಮಾಡಲಿದೆ. ಇದು ತಮಿಳಿನ ಅಲ್ಟಿಮೇಟ್ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ೫೦ ನೇ ಚಿತ್ರ ಅನ್ನೋದು ಗೊತ್ತಿರಬೇಕು.
ಅಂದಹಾಗೆ ತಮಿಳಿನಲ್ಲಿ ಅಜಿತ್ ಸಿನಿಮಾ ಬಂದು ಬಹಳಷ್ಟು ದಿನಗಳೇ ಆದವು. ‘ಅಸಲ್’ ಈ ಹಿಂದಿನ ಚಿತ್ರ. ೨೦೧೦ ಪೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಒಂದರ್ಥದಲ್ಲಿ, ಅಲ್ಲಿಂದ ಇಲ್ಲಿವರೆಗೆ ಅಜಿತ್ ಕಾಣೆಯಾಗಿದ್ದರು! ಅದೇನೋ, ಪೆರಾರಿ ಕಾರ್ ರೇಸ್ ಮಾಡುತ್ತೇನೆ ಅಂತ ಹೇಳಿಕೊಂಡು ಹೋಗಿದ್ದ ಅಜಿತ್, ಈಗ ಮರಳಿ ಬಂದಿದ್ದಾರೆ. ಹಾಗೆ ಸುಮ್ಮನೇ ಬರುತ್ತಿಲ್ಲ ಅವರು. ಈ ಬಾರಿ ತಮ್ಮ ಅಭಿಮಾನಿಗಳಿಗೆ ಭೂರಿ ಭೋಜನ ಹೊತ್ತೇ ಬರುತ್ತಿದ್ದಾರೆ.
‘ಅಸಲ್’, ಅಜಿತ್ ಅವರ ೪೯ನೇ ಸಿನಿಮಾ. ಇದೀಗ ಅವರ ಅಭಿನಯದ ೫೦ನೇ ಸಿನಿಮಾ ಬಿಡುಗಡೆಗೆ
ಸಿದ್ಧವಾಗಿದೆ. ಅದರ ಹೆಸರು ಮಂಗಾಥ. ಹೀಗೆಂದರೆ, ತಮಿಳಿನಲ್ಲಿ ‘ಅಂದರ್ ಬಾಹರ್’ ಎಂದರ್ಥ. ಇನ್ನು
ಸಿಂಪಲ್ ಆಗಿ ಹೇಳಬೇಕೆಂದರೆ, ಜೂಜಾಟ ! ಶೀರ್ಷಿಕೆಯಲ್ಲೇ, ‘ಗೇಮ್’ ಇರುವುದರಿಂದ ಇಡೀ
ಸಿನಿಮಾ ಸಖತ್ ‘ಗೇಮ್ ಪ್ಲ್ಯಾನ್’ನಲ್ಲೇ ನಡೆದಿದ್ದು, ಸಿನಿಮಾ ಗೇಮ್ ಕೂಡ ಸೂಪರ್ ಆಗಿಯೇ ಇರಲಿದೆ
ಎಂದುಕೊಂಡರೆ ಅದು ಪ್ರೇಕ್ಷಕನ ತಪ್ಪಲ್ಲ ಬಿಡಿ.
‘ಮಂಗಾಥ’ ಬಹು ತಾರಾಗಣ ಹೊಂದಿರುವ ಚಿತ್ರ. ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಅಲ್ಲದೇ , ಅರ್ಜುನ್ ಸರ್ಜಾ ಹಾಗೂ ತೆಲುಗಿನ ವೈಭವ್ ರೆಡ್ಡಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ತ್ರಿಷಾ ಕೃಷ್ಣನ್ ನಾಯಕಿ. ಕನ್ನಡದ ಲಕ್ಷ್ಮೀ ರೇ ಕೂಡ ಚಿತ್ರದಲ್ಲಿದ್ದಾರೆ. ಇತ್ತೀಚೆಗೆ ತಮಿಳಿನ ಕಮರ್ಷಿಯಲ್ ಚಿತ್ರಗಳ ತಯಾರಿಕೆಯಲ್ಲಿ ಬಹಳ ಮುಂದಿರುವ ದಯಾನಿದಿ ಅಳಗಿರಿಯ ಕ್ಲೌಡ್ ನೈನ್ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದರಿಂದ ಪ್ರಚಾರದ ವಿಚಾರದಲ್ಲಿ ಚಿತ್ರ ಈಗಾಗಲೇ ದೊಡ್ಡ ಮಾರ್ಕೆಟ್ನ್ನು ಕಟ್ಟಿ ಕೊಡುವಲ್ಲಿ ಸಕ್ಸಸ್ ಕಂಡಿದೆ.
ಪವಿತ್ರ ರಂಜಾನ್ ಮತ್ತು ಗೌರಿ-ಗಣೇಶ ಹಬ್ಬವನ್ನು ಟಾರ್ಗೆಟ್ ಮಾಡಿಕೊಂಡು ಸಿನಿಮಾ ಬರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಯುವನ್ ಶಂಕರ್ ರಾಜಾ ಅವರಿಗೆ ಮತ್ತೆ ಮೂವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಲ್ಲಿ ಸಹಾಯ ಮಾಡುತ್ತಿದ್ದಾರಂತೆ. ಕಾರ್ತಿಕ್ ರಾಜಾ, ಭಾವತರಣಿ ಮತ್ತು ಪ್ರೇಮ್ಜಿ ಅವರೇನ್ ಆ ಮೂವರು.
ಟೋಟಲಿ ‘ಅಂದರ್ ಬಾಹರ್’ ಆಟ ಕಾಲಿವುಡ್ನಲ್ಲಿ ಭರ್ಜರಿಯಾಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಪ್ರಭುವೇ ಅನ್ಸರ್ ಕೊಡಬೇಕು. ಅದರಲ್ಲೂ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಅವರ ೫೦ ನೇ ಚಿತ್ರ ‘ಸುರ’ ದೊಡ್ಡ ಮಟ್ಟದ ಯಶಸ್ಸು ಸಿಗದೇ ಕಾಲಿವುಡ್ನಲ್ಲಿ ಹೆಸರು ಉಳಿಸಿಕೊಂಡ ರೀತಿ ನೋಡುತ್ತಿದ್ದಾರೆ ‘ಮಂಗಾಥ’ ಚಿತ್ರದ ಗತಿಯೇನು ಎನ್ನೋದು ಪ್ರೇಕ್ಷಕನ ಮನದಲ್ಲಿ ಕಾಡದೇ ಇರಲಾರದು. ಏನೇ ಆದರೂ ಅಜಿತ್ ಕುಮಾರ್ ೫೦ನೇ ಚಿತ್ರ ಹಿಟ್ ಆದರೆ ಮುಂದಿನ ‘ಬಿಲ್ಲಾ-೨’ ಚಿತ್ರದ ಕುರಿತು ನಿರೀಕ್ಷೆಗಳು ಗರಿಕೆದರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಾಗಿಲ್ಲ ಎನ್ನಬಹುದು.

Thursday, August 25, 2011

ಸಾಂಗ್ ಆಫ್ ದಿ ಲಿಟಲ್ ರೋಡ್...ಪಥೇರ್ ಪಾಂಚಾಲಿ




ಅದೊಂದು ಕರಾಳ ರಾತ್ರಿ... ಹೊರಗೆ ಭಯಂಕರವಾದ ಸುಂಟರ ಗಾಳಿ... ರಭಸವಾಗಿ ಸುರಿಯುವ ಮಳೆ... ಪುಟ್ಟ ಹೆಂಚಿನ ಮನೆಯೊಳಗಿಂದ ಕೇಳುತ್ತಿದೆ ನರಳಾಟದ ದನಿ. ಕುದಿಯುವ ಜ್ವರದಲ್ಲಿ ಮಲಗಿದ್ದಾಳೆ ದುರ್ಗಾ. ತಾಯಿ ಸರ್ಬಜಯಾ ಮುಖದಲ್ಲಿ ಆತಂಕ. ಮನೆಯೊಳಗೆ ಬೇರಾರು ಇಲ್ಲ. ಉರಿಯುತ್ತಿರುವ ಪುಟ್ಟ ದೀಪ ಬೀಸುವ ಗಾಳಿಯೊಡನೆ ಹೋರಾಡುತ್ತಿದೆ. ಮನೆಯೊಳಗೆ ನುಗ್ಗುತ್ತಿರುವ ಮಳೆ ನೀರನ್ನು ತಡೆಯಲು ತಾಯಿ ಶತಪ್ರಯತ್ನ ನಡೆಸುತ್ತಿದ್ದಾಳೆ. ಸುರಿಯುವ ಮಳೆಯ ವೇಗದೊಡನೆ ಹೆಚ್ಚುತ್ತಿರುವ ಮಗಳ ನರಳಾಟಕ್ಕೆ ಆಕೆ ಅಸಹಾಯಕಳಾಗಿದ್ದಾಳೆ. ಒಂದೇ ಕ್ಷಣ ಮಳೆಯ ಆರ್ಭಟ ತಾರಕಕ್ಕೇರುತ್ತದೆ. ಉರಿಯುತ್ತಿದ್ದ ದೀಪ ಗಾಳಿಯ ಹೊಡೆತಕ್ಕೆ ನಂದಿ ಹೋಗುತ್ತದೆ. ದುರ್ಗಾ ತಾಯಿಯನ್ನು ಬಲವಾಗಿ ಅಪ್ಪಿ ಹಿಡಿಯುತ್ತಾಳೆ ..ಆಕೆಯ ನರಳಾಟ ನಿಂತು ಹೋಗುತ್ತದೆ. ಸರ್ಬಜಯಾ ದುರ್ಗಾಳ ಹಣೆಯ ಮೇಳೆ ಕೈಯ್ಯನ್ನಿಡುತ್ತಾಳೆ... ದುರ್ಗಾ ತಣ್ಣಗಾಗಿರುತ್ತಾಳೆ. ವೀಕ್ಷಕ ನಿಟ್ಟುಸಿರೊಂದನ್ನು ಬಿಡುತ್ತಾನೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತೀಯ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಏಕೈಕ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ . ಇವರ ನಿರ್ದೇಶನದ ಮೊದಲ ಬಂಗಾಲಿ ಚಿತ್ರ ಪಥೇರ್ ಪಾಂಚಾಲಿ ಭಾರತೀಯ ಚಿತ್ರರಂಗವನ್ನು ಜಗತ್ತಿಗೇ ಪರಿಚಯಿಸಿತು. ರೇ ನಿರ್ದೇಶನದ ಪಥೇರ್ ಪಂಚಾಲಿ, ಅಪರಾಜಿತೋ ಮತ್ತು ಅಪುರ್ ಸಂಸಾರ್ ಈ ಮೂರೂ ಚಿತ್ರಗಳು ’ಅಪ್ಪು ಟ್ರಿಲಾಜಿ’ ಎಂಬ ಹೆಸರಿನಡಿಯಲ್ಲಿ ಇಂದು ಜಾಗತಿಕ ಚಿತ್ರರಂಗದಲ್ಲಿ ಗುರುತಿಸಲ್ಪಡುತ್ತವೆ.
ಅಪ್ಪು ಟ್ರಿಲಾಜಿಯಲ್ಲಿರುವ ಎಲ್ಲಾ ಚಿತ್ರಗಳ ನಾಯಕ ಕೇವಲ ಒಬ್ಬ ವ್ಯಕ್ತಿ...ಆತನೇ ಅಪ್ಪು. ಅಪ್ಪು ಟ್ರಿಲಾಜಿ ಸಾಮಾನ್ಯ ವ್ಯಕ್ತಿಯ ಸಾಮಾನ್ಯ ಕಥೆ. ಅಪ್ಪುವಿನ ಜನನಕ್ಕೂ ಮುಂಚಿನಿಂದ ಪ್ರಾರಂಭವಾಗುವ ಚಿತ್ರ ಕೊನೆಗೊಳ್ಳುವುದು ಆತನ ಮತ್ತು ಆತನ ಮಗನ ಒಂದಾಗುವಿಕೆಯಿಂದ. ಈ ಎರಡು ಘಟನೆಗಳ ನಡುವೆ ಅಪ್ಪುವಿನ ಜೀವನವೇ ಅಡಗಿದೆ. ನೋವು, ನಲಿವು, ಅಸಹಾಯಕತೆ, ಅನಿರೀಕ್ಷಿತತೆ...ಹೀಗೆ ನೂರಾರು ಭಾವಗಳ ಮೇಳೈಸುವಿಕೆಯಿಂದಾಗಿ ಅಪ್ಪು ಟ್ರಿಲಾಜಿ ಇಂದಿಗೂ ಜೀವಂತವಾಗಿದೆ.
ಪಥೇರ್ ಪಾಂಚಾಲಿ ಅಪ್ಪು ಟ್ರಿಲಾಜಿ ಸರಣಿಯ ಮೊದಲ ಚಿತ್ರ. ಬಂಗಾಲೀ ಬ್ರಾಹ್ಮಣ ಕುಟುಂಬವೊಂದರ ಕಥಾಧಾರಿತ ಚಿತ್ರ ಇದು. ಈ ಚಿತ್ರದ ತಂದೆಯ ಪಾತ್ರಕ್ಕೆ ( ಹರಿಲಾಲ್) ಸಾಹಿತ್ಯದ ಗೀಳು. ಹೆಸರು ಗಳಿಸುವ ಆಸೆಯಲ್ಲಿ ಮನೆಯನ್ನೇ ಮರೆತವನಾತ. ಕಡುಬಡತನದಲ್ಲಿ ಸಂಸಾರ ನೌಕೆಯನ್ನು ಸಾಗಿಸಲು ಹರಸಾಹಸ ಪಡುವವಳು ತಾಯಿ ಸರ್ಬಜಯಾ. ವೃದ್ಧಾಪ್ಯದಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಕುಟುಂಬದ ಎಲ್ಲಾ ವಿಚಾರಗಳಲ್ಲಿ ಮೂಗು ತುರಿಸಿ ಆಗಾಗ್ಗೆ ಸೊಸೆಯ ಕೋಪಕ್ಕೆ ತುತ್ತಾಗುವ ಅಜ್ಜಿ ಇಂದಿರ್. ಪ್ರಪಂಚದ ಗೊಡವೆ ಇಲ್ಲದೇ ಪ್ರತಿನಿತ್ಯವೂ ಬಾಲ್ಯದ ಸವಿಯನ್ನುಣ್ಣುವ ಮಗಳು ದುರ್ಗಾ...ಹೀಗೆ ಪಥೇರ್ ಪಾಂಚಾಲಿಯ ಕಥೆ ಸಾಗುತ್ತಿರುತ್ತದೆ...ಅಷ್ಟರಲ್ಲೇ ಚಿತ್ರಕ್ಕೆ ಹೊಸ ಪಾತ್ರವೊಂದರ ಪ್ರವೇಶವಾಗುತ್ತದೆ.
ಅದೇ ಅಪ್ಪುವಿನ ಜನನ.
ಮಗನ ಜನನದಿಂದ ಹರಿಲಾಲ್ ಬದಲಾಗುವುದಿಲ್ಲ. ಆತನ ಬೇಜವಾಬ್ಧಾರೀತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಅದೊಂದು ದಿನ ಏನನ್ನೋ ಅರಸುತ್ತಾ ಮನೆಯಿಂದ ಹೊರಟ ಆತ ಅದೆಷ್ಟೋ ತಿಂಗಳುಗಳು ಬಿಟ್ಟು ಮನೆಗೆ ಬಂದಾಗ ಮನೆ ತುಂಬಾ ಮೌನ. ಮಡದಿಯ ಕಣ್ಣುಗಳಲ್ಲಿ ಕಂಬನಿ...ಕಣ್ಣ ಮುಂದೆ ಓಡಾಡುತ್ತಿದ್ದ ದುರ್ಗಾ ಅಂದೇಕೋ ಆತನಿಗೆ ಕಾಣಿಸುವುದಿಲ್ಲ. ದುರ್ಗಾಳ ಸಾವು ಅಪ್ಪುವಿನ ಜೀವನದ ಮೊದಲ ಆಘಾತ. ಆಕೆ ಆತನ ಅಕ್ಕನಲ್ಲ ತಾಯಿಯಂತಿದ್ದವಳು. ಪ್ರತಿನಿತ್ಯ ಚಲಿಸುವ ರೈಲನ್ನು ಹಿಂಬಾಲಿಸುತ್ತಾ ಗದ್ದೆಗಳ ನಡುವೆ ತಾನು ದುರ್ಗಾ ಕೈ ಹಿಡಿದು ಓಡಿದ್ದು... ಕ್ಯಾಂಡೀ ಮಾಮನನ್ನು ಪೀಡಿಸಿ ಐಸ್ ಕ್ಯಾಂಡಿ ತಿಂದದ್ದು...ಹೊಲಗಳಲ್ಲಿ ಕಬ್ಬಿನ ಜಲ್ಲೆಯನ್ನು ಮೆದ್ದದ್ದು ಇವೆಲ್ಲವೂ ಅಪ್ಪುವಿನ ಜೀವನದಲ್ಲಿ ಎಂದೂ ಮಾಸದ ಸವಿ ನೆನಪುಗಳು...ನೆನಪಾದಾಗಲೆಲ್ಲಾ ಆತನ ಕಣ್ಣುಗಳು ಹನಿಗೂಡುತ್ತವೆ...ಏಕಾಂತ ಕಾಡುತ್ತದೆ.
ದುರ್ಗಾಳ ಸಾವು ಕಥೆಗೆ ಹೊಸ ತಿರುವೊಂದನ್ನು ನೀಡುತ್ತದೆ. ಹರಿಲಾಲ್ ಕುಡುಂಬ ಹಳ್ಳಿ ಬಿಟ್ಟು ಬನಾರಸಿಗೆ ತೆರಳುತ್ತದೆ. ಪಟ್ಟಣದ ಜೀವನ ಪ್ರಾರಂಭವಾಗುತ್ತದೆ. ಪಥೇರ್ ಪಾಂಚಾಲಿ ಕೊನೆಗೊಂಡರೂ ಅಪ್ಪುವಿನ ಕತೆ ಮುಂದುವರಿಯುತ್ತದೆ. ಅಪರಾಜಿತೋ ಅಪ್ಪುವಿನ ಕಿಶೋರ ಜೀವನವನ್ನು ಚಿತ್ರಿಸುತ್ತದೆ. ಪಟ್ಟಣಕ್ಕೆ ಬಂದ ಕೆಲವೇ ದಿನಗಳಲ್ಲಿ ಹರಿಲಾಲ್ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ತಾಯಿ-ಮಗ ಭವಿಷ್ಯದ ಕುರಿತು ಚಿಂತಿತರಾಗುತ್ತಾರೆ. ಸರ್ಬಜಯಾ ಮಗನ ಶಿಕ್ಷಣಕ್ಕಾಗಿ ಕೂಲಿಯವಳಾಗಿ ಬಿಡುತ್ತಾಳೆ. ಅಪ್ಪು ಹೆಚ್ಚಿನ ಓದಿಗಾಗಿ ಕಲ್ಕತ್ತಾ ಸೇರುತ್ತಾನೆ. ತಾಯಿ ಒಂಟಿಯಾಗುತ್ತಾಲೆ. ಅನಾರೋಗ್ಯ ಆಕೆಯನ್ನು ಕಾಡುತ್ತಿರುತ್ತದೆ. ಅದೊಂದು ದಿನ ಮಗನ ಬರುವಿಕೆಯನ್ನು ನಿರೀಕ್ಷಿಸುತ್ತಾ ಸರ್ಬಜಯಾ ತಾನು ಕುಳಿತ ಮರದಡಿಯೇ ಪ್ರಾಣ ಬಿಡುತ್ತಾಳೆ. ಅಪ್ಪು ವಿರಾಗಿಯಾಗುತ್ತಾನೆ. ತಾಯಿಯ ಸಾವು ಆತನಿಗೆ ಪ್ರಪಂಚವನ್ನೇ ಮರೆಸುತ್ತದೆ.
ಅಪುರ್ ಸಂಸಾರ ಅಪ್ಪು ಟ್ರಿಲಾಜಿಯ ಕೊನೆಯ ಚಿತ್ರ. ಗೆಳೆಯನೊಬ್ಬನೇ ಈಗ ಅಪ್ಪುವಿನ ಪ್ರಪಂಚ. ಜೀವನದುದ್ದಕ್ಕೂ ತಾನು ಅನಾಥ ಎಂಬ ಭಾವನೆ ಅಪ್ಪುವಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಅದೊಂದು ದಿನ ಗೆಳೆಯನ ತಂಗಿಯ ಮದುವೆಗೆಂದು ಹೋದ ಅಪ್ಪು ವಿಯಾಟದಿಂದ ತಾನೇ ಮದುಮಗನಾಗುತ್ತಾನೆ. ವಿವಾಹವಾಗಿ ಸಂಸಾರಸ್ಥನಾಗುತ್ತಾನೆ. ಸಂಸಾರ ಸುಖದಲ್ಲಿ ತೇಲಾಡುತ್ತಾನೆ. ಅಷ್ಟರಲ್ಲೇ ಇನ್ನೊಂದು ಸಾವು...ಗರ್ಬಿಣಿಯಾಗಿದ್ದ ಮಡದಿ ಗಂಡು ಮಗುವಿಗೆ ಜನ್ಮವಿತ್ತು ಕಣಚ್ಚುತ್ತಾಳೆ.
ಅಪ್ಪು ಸೋತು ಹೋಗುತ್ತಾನೆ. ಸಾವುಗಳ ನೋವಿನಿಂದ ತಲ್ಲಣಿಸುತ್ತಾನೆ. ಸಂಬಂಧಗಳೇ ದುಖಃಕ್ಕೆ ಕಾರಣವೆಂದು ಎಲ್ಲಾ ಸಂಬಂಧಗಳನ್ನು ಕಳಚಿಕೊಳ್ಳಲು ಯತ್ನಿಸುತ್ತಾನೆ. ತನ್ನ ನವಜಾತ ಶಿಶುವಿನ ಮುಖವನ್ನೂ ನೋಡದೇ ಲೋಕ ಪರ್ಯಟನೆಗೆ ಹೊರಡುತ್ತಾನೆ. ಚಿತ್ರ ಕೊನೆ ತಲುಪುತ್ತಿದ್ದಂತೇ ಒಂಟಿತನ ಆತನನ್ನು ಕಾಡುತ್ತದೆ. ರಕ್ತ ಸಂಬಂಧದ ಸೆಳೆತ ಹೆಚ್ಚಾಗುತ್ತದೆ. ಅಪ್ಪು ಹಾಗೂ ಆತನ ಮಗ ಒಂದಾಗುತ್ತಾರೆ. ಅಪ್ಪುವಿನ ನವಜೀವನಕ್ಕೆ ನಾಂದಿ ಹಾಡುತ್ತಾ ಅಪ್ಪು ಟ್ರಿಲಾಜಿ ಮುಕ್ತಾಯಗೊಳ್ಳುತ್ತದೆ.
ಅಪ್ಪು ಟ್ರಿಲಾಜಿಯ ಮೂರು ಚಿತ್ರಗಳಲ್ಲಿ ಪಥೇರ್ ಪಾಂಚಾಲಿಯನ್ನು ಅತ್ಯತ್ತಮ ಚಿತ್ರವೆಂದು ಪರಿಗಣಿಸಲಾಗುತ್ತದೆ. ಇಪ್ಪತ್ತರ ದಶಕದಲ್ಲಿದ್ದ ಬಂಗಾಲದ ಗ್ರಾಮೀಣ ಜೀವನವನ್ನು ಚಿತ್ರಿಸುವ ಈ ಚಿತ್ರ ಭಾವನಾತ್ಮಕವಾಗಿ ವೀಕ್ಷಕರನ್ನು ಸೆರೆ ಹಿಡಿಯುತ್ತದೆ. ಮಾನವ ಸಂಬಂಧಗಳ ವಿಭಿನ್ನ ತಿರುವುಗಳನ್ನು ಅವರ ಮುಂದಿಡುವ ಮೂಲಕ ಚಿಂತನೆಗೆ ಎಡೆಮಾಡಿ ಕೊಡುತ್ತದೆ. ಚಿತ್ರದುದ್ದಕ್ಕೂ ರವಿಶಂಕರ್ ಅವರು ನೀಡಿದ ಅದ್ಭತ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದೆ. ಸುಬ್ರಾತ ಮಿತ್ರಾ ಅವರ ಕ್ಯಾಮರಾವರ್ಕ್ನಲ್ಲಿ ಮೂಡಿಬಂದ ಚಿತ್ರದ ಎಲ್ಲಾ ಶಾಟ್ಗಳು ಕಲಾತ್ಮಕವಾಗಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿವೆ.

ಸತ್ಯಜಿತ್ ರೇ...
ಸಾಹಿತ್ಯ ಪ್ರಿಯರಾದ ಸತ್ಯಜಿತ್ ರೇ ಭಿಭೂತೀ ಭೂಷಣ ಬಂಧೋಪಾಧ್ಯಾಯರ ಕಾದಂಬರಿಯೊಂದರಿಂದ ಪ್ರಭಾವಿತರಾಗಿ ತಮ್ಮ ಮೊದಲ ಚಿತ್ರ ಪಥೇರ್ ಪಾಂಚಾಲಿಯನ್ನು ನಿರ್ದೇಶಿಸಿದ್ದರು. ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಯಿತು. ರೇ ತಮ್ಮ ನಿರ್ದೇಶನವನ್ನು ಮುಂದುವರಿಸಿದರು. ಅಪ್ಪು ಟ್ರಿಲಾಜಿಯ ಬಳಿಕ ಚಾರುಲತಾ, ಜಲ್ಸಾಘರ್, ದೇವಿ ..ಹೀಗೆ ಒಂದರ ಮೇಲೊಂದು ಯಶಸ್ವೀ ಚಿತ್ರಗಳನ್ನು ನೀರುತ್ತಾ ಬಂದರು. ಚಿತ್ರಗಳ ಜತೆಗೆ ಡಾಕ್ಯೂಮೆಂಟರಿಗಳನ್ನು ನಿರ್ದೇಶಿಸಿದರು. ಪ್ರತಿಯೊಂದರಲ್ಲೂ ತಮ್ಮದೇ ಆದ ಭಿನ್ನತೆಯನ್ನು ಕಾಯ್ದುಕೊಂಡರು. ಪಾಶ್ಚಾತ್ಯ ನಿಯೋರಿಯಲಿಸ್ಟಿಕ್ ಚಿತ್ರಗಳಿಂದ ಅತಿಯಾಗಿ ಪ್ರಭಾವಿತರಾದ ರೇ ತಮ್ಮ ಚಿತ್ರಗಳಲ್ಲೂ ಮಧ್ಯಮ ವರ್ಗದ ಜೀವನವನ್ನು ಬಿಂಬಿಸತೊಡಗಿದರು. ಆ ಮೂಲಕ ಭಾರತದಲ್ಲೂ ನಿಯೋ ರಿಯಲಿಸ್ಟಿಕ್ ಸಂಪ್ರದಾಯವನ್ನು ಹುಟ್ಟು ಹಾಕಿದರು.
ರೇ ನಿರ್ದೇಶನದ ಚಿತ್ರಗಳಲ್ಲಿ ಮಾನವೀಯ ಸಂಬಂಧಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ. ನೈಜ ಜೀವನವಷ್ಟೇ ಅವರ ಚಿತ್ರದ ಕಥಾವಸ್ತು. ಇವರ ಚಿತ್ರಗಳಲ್ಲಿ ಸಾವು ಪ್ರತಿಯೊಬ್ಬರಿಗೂ ಎದುರಾಗುವ ಸಹಜ ಕ್ರಿಯೆ. ಆಧುನಿಕ ಚಿತ್ರಗಳಲ್ಲಿ ಕಾಣಸಿಗುವ ಸಾವಿನ ಭೀಕರತೆ ಇವರ ಚಿತ್ರಗಳಲ್ಲಿ ಹುಡುಕಿದರೂ ಕಾಣಿಸುವುದಿಲ್ಲ. ಇವರ ಒಂದೊಂದು ಚಿತ್ರಗಳಲ್ಲೂ ಜೀವನದ ಒಂದೊಂದು ಮುಖದ ಪರಿಚಯ ವೀಕ್ಷಕನಿಗಾಗುತ್ತದೆ. ರೇ ಚಿತ್ರಗಳ ಕಥಾವಸ್ತು ಎಷ್ಟು ನೈಜವೋ ಅಷ್ಟೇ ನೈಜ ಇವರ ಸಿನಿಮ್ಯಾಟಿಕ ಟೆಕ್ನೀಕ್. ಇವರ ಚಿತ್ರಗಳಲ್ಲಿ ಕಾಣ ಸಿಗುವ ಚಲಿಸುವ ರೈಲು, ಓಡಾಡುವ ಮೋಡಗಳು, ಸುರಿಯುವ ಮಳೆ ಎಲ್ಲವೂ ನೈಜ. ಕೃತಕ ಶಾಟ್ಗಳಿಗೆ ರೇ ಚಿತ್ರಗಳಲ್ಲಿ ಕಡಿಮೆ ಪ್ರಾಧಾನ್ಯತೆ.
ಸಾಂಕೇತಿಕವಾಗಿ ವಿಷಯಗಳನ್ನು ಕಮ್ಯೂನಿಕೇಟ್ ಮಾಡುವ ಪಾಶ್ಚಾತ್ಯರ ನಿರ್ದೇಶನ ಶೈಲಿಯನ್ನು ರೇ ತಮ್ಮ ಚಿತ್ರಗಳಲ್ಲೂ ಅಳವಡಿಸಿಕೊಂಡಿದ್ದರು. ಇವರ ಚಿತ್ರಗಳಲ್ಲಿ ಮಳೆ ಸುರಿಯುತ್ತಿದೆ ಎಂದರೇ ಪ್ರೇಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆತಂಕ. ರೇ ಚಿತ್ರಗಳಲ್ಲಿ ಮಳೆ ಟ್ರಾಜಿಡಿಯ ಸಂಕೇತ. ಪಥೇರ್ ಪಾಂಚಾಲಿಯಲ್ಲಿ ರೇ ಸಾವನ್ನು ಸೂಚಿಸುವ ಸಂಕೇತವಾಗಿ ಮಳೆಯನ್ನು ಬಳಸಿರುವ ಪರಿ ಅದ್ಭುತ. ಅನಿರೀಕ್ಷಿತ ಆಘಾತಗಳು ರೇ ಚಿತ್ರಗಳ ಸ್ಪೆಷಾಲಿಟಿ. ಎಷ್ಟೇ ಕಷ್ಟವಾದರೂ ಸರಿ ಪಾತ್ರಕ್ಕೆ ನ್ಯಾಯ ಕೊಡುವವರು ಸಿಕ್ಕುವವರೆಗೆ ಇವರು ತಮ್ಮ ಹುಡುಕಾಟವನ್ನು ನಿಲ್ಲಿಸುತ್ತಿರಲಿಲ್ಲ. ಪಥೇರ್ ಪಾಂಚಾಲಿ ಚಿತ್ರದಲ್ಲಿನ ಇಂದಿರ್ ಎಂಬ ಪಾತ್ರದ ನಿರ್ವಹಣೆಗಾಗಿ ನೂರರ ಸಮೀಪದ ಬಂಗಾಳಿ ನಾಟಕ ಕಲಾವಿದೆ ಚುನ್ನಿಬಾಲಾ ದೇವಿಗಾಗಿ ರೇ ಹಲವಾರು ತಿಂಗಳುಗಳ ಕಾಲ ಚಿತ್ರವನ್ನು ಸ್ಥಗಿತಗೊಳಿಸಿ ಹುಡುಕಾಟ ನಡೆಸಿದ್ದರು ಎಂದರೆ ಆಶ್ಚರ್ಯವೆನಿಸಬಹುದು.
ಸತ್ಯಜಿತ್ ರೇ ಚಿತ್ರಗಳಲ್ಲಿ ಬಳಸಲ್ಪಡುವ ಹಾಡುಗಳ ತುಂಬಾ ಕಥೆಯ ಭಾವಗಳೇ ವ್ಯಕ್ತವಾಗುತ್ತವೆ. ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸಂಗೀತವನ್ನಷ್ಟೇ ತಮ್ಮ ಚಿತ್ರಗಳ ಹಿನ್ನೆಲೆಗೆ ಉಪಯೋಗಿಸುತ್ತಿದ್ದ ರೇ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಬಹಳ ಮುಂಚಿತವಾಗಿ ಅದರ ಸಂಗೀತದ ಬಗ್ಗೆ ಯೋಚಿಸುತ್ತಿದ್ದರು. ಒಬ್ಬ ಉತ್ತಮ ಚಿತ್ರ ನಿರ್ದೇಶಕನ ಜತೆಜತೆಗೇ ರೇ ಒಬ್ಬ ಅತ್ಯತ್ತಮ ವಿಮರ್ಶಕ ಹಾಗೂ ಸಿನಿಮಾಟೊಗ್ರಾಫರ್ ಕೂಡಾ ಆಗಿದ್ದರು. ಪಾಶ್ಚಾತ್ಯ ಸಿನಿಮಾವನ್ನು ಭಾರತೀಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ೧೯೪೭ರಲ್ಲಿ ಕಲ್ಕತ್ತಾ ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಿದರು. ಆ ಮೂಲಕ ಸಿನಿಮಾ ಅಧ್ಯಯನ ಯೋಗ್ಯ ವಿಚಾರವೆಂದು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದರು.
ಮೂವತ್ತೆರಡು ನಾಷನಲ್ ಫಿಲ್ಮ್ ಅವಾರ್ಡ್ಗಳು ಹಾಗೂ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೇಲು ರೇ ಅವರ ಸಿನಿಮಾ ನಿರ್ದೇಶನದ ತೆವಲು ಕಡಿಮೆಯಾಗಲಿಲ್ಲ. ಮನಸ್ಸು ಯೌವ್ವನದಲ್ಲಿದ್ದರೂ ದೇಹ ಮುಪ್ಪಾಗಿತ್ತು. ಅನಾರೋಗ್ಯದ ನಡುವೆಯೇ ’ಘರ್ ಬೈರೆ’ ಚಿತ್ರವನ್ನು ನಿರ್ದೇಶಿಸಿದರು. ಸಾವಿಗೆ ಕೆಲವೇ ವಾರಗಳ ಮುಂಚೆ ಶ್ರೇಷ್ಟ ಗೌರವ ಆಸ್ಕರ್ ಪ್ರಶಸ್ತಿಯನ್ನು ಪಡೆದ ರೇ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದೇ ಆಗಸ್ಟ್ ೨೬ಕ್ಕೆ ಸತ್ಯಜಿತ್ ರೇ ನಿರ್ದೇಶನದ ಮೊದಲ ಚಿತ್ರ ಪಥೇರ್ ಪಾಂಚಾಲಿ ಬಿಡುಗಡೆಗೊಂಡು ಐವತ್ತಾರು ವರುಷಗಳು ತುಂಬುತ್ತವೆ. ಕಮರ್ಶಿಯಲ್ ಚಿತ್ರಗಳ ಅಬ್ಬರದ ನಡುವೆ ಇಂದು ಹಳೆಯ ಕಲಾತ್ಮಕ ಚಿತ್ರಗಳ ನೆನಪುಗಳು ಮಸುಕಾಗಿ ಬಿಟ್ಟಿವೆ. ಕಲಾತ್ಮಕ ಚಿತ್ರಗಳನ್ನು ಆಸ್ವಾದಿಸುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂಬ ಕೂಗು ಇಂದು ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಿರ್ದೇಶಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಮರ್ಶಿಯಲ್ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕಲಾತ್ಮಕ ಚಿತ್ರಗಳು ಚಿತ್ರರಂಗದಲ್ಲಿ ಮಿಂಚಿ ಮರೆಯಾಗುತ್ತಿವೆ. ಯುವನಜತೆಯಲ್ಲಿ ಕಲಾತ್ಮಕ ಚಿತ್ರಗಳ ಕುರಿತು ಅರಿವು ಮೂಡಬೇಕಾದಲ್ಲಿ ಇಂತಹ ಅರ್ಥಪೂರ್ಣ ಚಿತ್ರಗಳನ್ನೊಮ್ಮೆ ಮೆಲುಕು ಹಾಕುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

* ಅಕ್ಷತಾ ಭಟ್. ಸಿ.ಎಚ್.
( ನಗರದ ಖಾಸಗಿ ಕಾಲೇಜುವೊಂದರಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯಾಗಿ ಅಕ್ಷತಾ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಜತೆಯಲ್ಲಿ ಹಳೆಯ ಸಿನಿಮಾಗಳನ್ನು ನೋಡಿ ಬರೆಯವುದು ಅವರ ನೆಚ್ಚಿನ ಆಸಕ್ತಿ ಕ್ಷೇತ್ರವಾಗಿದೆ. ‘ಪಥೇರ್ ಪಾಂಚಾಲಿ’ ಸಿನಿಮಾ ಬಂದು ಆ.೨೬ರಂದು ಬರೋಬರಿ ೫೬ ವರ್ಷಗಳು ಸಲ್ಲುತ್ತಿದೆ. ಈ ನೆಪದಲ್ಲಿ ಚಿತ್ರ, ನಿರ್ದೇಶಕನ ಸುತ್ತ ಅಕ್ಷತಾ ಬರೆದುಕೊಂಡಿದ್ದಾರೆ)

ಶಿಲ್ಪಾ ಶೆಟ್ಟಿಯ ಗುಡ್ ನ್ಯೂಸ್ !



‘ಮದುವೆ ಆಗಿ ಇಷ್ಟು ದಿನ ಆಯ್ತು, ಏನು ಗುಡ್ ನ್ಯೂಸ್ ಇಲ್ವಾ? ...’ಅಂತಾ ಕುಡ್ಲದ ಪೊಣ್ಣು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯಲ್ಲಿ ಯಾರೆಲ್ಲ ಪ್ರಶ್ನೆ ಕೇಳುತ್ತಿದ್ದಾರೋ ಅವರಿಗೆಲ್ಲ ಶಿಲ್ಪಾ ಶೆಟ್ಟಿ ಗುಡ್ ನ್ಯೂಸ್ ಬಿಟ್ಟು ಕೊಟ್ಟಿದ್ದಾರೆ. ಅದೇನ್ ನ್ಯೂಸ್ ಅಂತೀರಾ.. ಮುಂದೆ ಓದಿ...


‘ಮದುವೆ ಆಗಿ ಇಷ್ಟು ದಿನ ಆಯ್ತು, ಏನು ಗುಡ್ ನ್ಯೂಸ್ ಇಲ್ವಾ? ...’ ಅಂತಾ ಕುಡ್ಲದ ಪೊಣ್ಣು( ಕರಾವಳಿಯ ಹುಡುಗಿ) ಶಿಲ್ಪಾ ಶೆಟ್ಟಿ ಹೋದ, ಬಂದ ಕಡೆಗಳಲ್ಲೆಲ್ಲಾ ಇಂಥದ್ದೊಂದು ಪ್ರಶ್ನೆ ಎದ್ದು ನಿಲ್ಲುತ್ತದೆಯಂತೆ. ಶಿಲ್ಪಾಳಿಗಂತೂ ಈ ಪ್ರಶ್ನೆಗಳಿಗೆ ಅನ್ಸರ್ ಕೊಟ್ಟು ಕೊಟ್ಟು ಸಾಕೋ ಸಾಕಾಗಿ ಹೋಗಿದೆ. ಅದರಲ್ಲೂ ಮಾಧ್ಯಮಗಳು ಇದೇ ವಿಚಾರದ ಮೇಲೆ ಮತ್ತೆ ಮತ್ತೆ ಕಟುಕಿದಾಗ ಮಾತ್ರ ಶಿಲ್ಪಾ ಕಂಗಾಲಾಗಿ ಹೋಗುತ್ತಾರಂತೆ ! ಆದರೆ, ಈಗ ಶಿಲ್ಪಾ ಅದೆಲ್ಲವನ್ನೂ ತಲೆಯಿಂದ ಹೊರಹಾಕಿ ತನ್ನ ಚಿತ್ರಗಳ ಕಡೆಗೆ ಗಮನ ಕೊಡುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಶಿಲ್ಪಾ ಟ್ಟಿಟ್ ಮಾಡಿದ್ದಾರೆ.
ಆದರೆ ಮಾಧ್ಯಮವೊಂದರಲ್ಲಿ ಶಿಲ್ಪಾ ಶೆಟ್ಟಿ ನೀಡಿದ ಸಂದರ್ಶನದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎನ್ನುವ ಹೇಳಿಕೆಯನ್ನು ಕೊಟ್ಟು ದಂಗು ಮೂಡಿಸಿದ್ದಾರೆ. ಅರೇ... ಮೊದಲ ಗುಡ್ ನ್ಯೂಸ್ ಹೇಳಿದ್ದು, ಕೇಳಿಲ್ಲ. ಈಗ ಮೂರನೇ ಗುಡ್ ನ್ಯೂಸ್ ಯಾವುದಪ್ಪಾ ಅಂತಾ ಕೇಳಿದರೆ. ಶಿಲ್ಪಾರ ನೆಚ್ಚಿನ ಹೆಣ್ಣು ನಾಯಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ ! ಈ ಎರಡು ಮುದ್ದಾದ ಮರಿಗಳು ತನ್ನದು ಎಂದು ಉದಾರತೆ ತೋರಿಸಿದ್ದಾರೆ.
ಅಂದಹಾಗೆ ಶಿಲ್ಪಾ ಮತ್ತು ತಾಯಿ ಸುನಂದಾ ಶೆಟ್ಟಿ ಜತೆಗೂಡಿ ಹೊಸ ಪ್ರಾಡ್ರಕ್ಷನ್ ಕಂಪನಿಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ಶಿಲ್ಪಾರ ಮೂರನೇ ಗುಡ್ ನ್ಯೂಸ್ ಕಮ್ ಮೂರನೇ ಮಗುವಂತೆ ! ಇಂಡೋ- ಜಪಾನ್ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗುತ್ತಿರುವ ‘ದೀ ಡಿಸೈಯರ್: ಎ ಜರ್ನಿ ಆಫ್ ದೀ ವುಮನ್ ’ಎನ್ನುವ ಚಿತ್ರ ಈಗಾಗಲೇ ಹಲವು ಫಿಲ್ಮ್ ಫೆಸ್ಟಿವಲ್ಗಳಿಗೆ ನಾಮಂಕಿತಗೊಂಡಿದೆ. ೯೫ ನಿಮಿಷಗಳಿಗೆ ಇಳಿಸಿರುವ ಈ ಚಿತ್ರದಲ್ಲಿ ನಾಟ್ಯಗಾರ್ತಿಯೊಬ್ಬರ ಸುತ್ತ ಹಣೆದ ಕಥೆಯಾಗಿದ್ದು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಖುದ್ದು ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವಹಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ಪ್ರಾಡಕ್ಷನ್ ಕಂಪನಿಯ ಕೆಲಸಗಳು ಆರಂಭವಾಗಲಿದೆ. ಇದರ ಜತೆಯಲ್ಲಿ ಖಾಸಗಿ ಟಿವಿ ವಾಹಿನಿಗಳಿಗೆ ಈ ಕಂಪನಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಿದೆ. ಈ ಕಂಪನಿ ಹುಟ್ಟುವುದಕ್ಕೆ ಕಾಯುತ್ತಿದ್ದಾರೆ ಶಿಲ್ಪಾ. ಅದೂ ಆದರೆ, ಶಿಲ್ಪಾ ಮೂರು ಮಕ್ಕಳ ತಾಯಿಯಾದಂತೆ. ಬರೀ ಬೇರೆಯವರ ಮಕ್ಕಳ ಬಗ್ಗೆ ತಲೆ ಕರೆದುಕೊಂಡರೇ ಸಾಕೇ..? ನಮ್ಮ ಮಗು ಯಾವಾಗ ಎಂದು ಶಿಲ್ಪಾರ ಪತಿ ರಾಜ್ ಕುಂದ್ರಾ ಸಿಟ್ಟಾಗಿ ಕೇಳಿದ್ರೂ ತಪ್ಪಿಲ್ಲ ಅಲ್ವಾ..?
ಈ ಎಲ್ಲ ವಿಷ್ಯಾಗಳನ್ನು ಕೇಳುತ್ತಾ ಇದ್ರೆ, ಇದೇ ವರ್ಷದ ಮಾರ್ಚ್ ತಿಂಗಳ ಕೊನೆಯಲ್ಲಿ ಕಾರ್ಕಳದ ಗುತ್ತಿನ ನಾಗಬನದಲ್ಲಿ ಕರಾವಳಿಯ ಪೊಣ್ಣು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜತೆ ಸೇರಿಕೊಂಡು ನಾಗಬನದ ಸುತ್ತ ಬರೀ ಕಾಲಲ್ಲಿ ಪ್ರದರ್ಶನ ಹಾಕಿ ಬೇಡಿದ ಪ್ರಾರ್ಥನೆಯಂತೂ ನಾಗ ಲೋಕಕ್ಕೆ ಮುಟ್ಟಿರಬಹುದು ಎಂದು ಕುಡ್ಲ ಪೇಟೆ ಮೂಲೆಯಲ್ಲಿ ನಿಂತು ಎಲೆ ಅಡಕೆ ಜಗಿಯುವ ಹಿರಿಯರು ವಟಗುಟ್ಟುತ್ತಿದ್ದಾರೆ. ಅದೇನ್ ಇರಲಿ ಈ ಮೂರು ಗುಡ್ ನ್ಯೂಸ್ಗಳನ್ನು ಬಿಟ್ಟು ನಾಲ್ಕನೇ ಗುಡ್ ನ್ಯೂಸ್ ಯಾವಾಗ ಅಂತಾ ಶಿಲ್ಪಾರಲ್ಲಿ ಕೇಳಲೇ ಬೇಕು. ಈ ಗುಡ್ ನ್ಯೂಸ್ ಬೇರೆ ನ್ಯೂಸ್ಗಳ ಜತೆಯಲ್ಲಿ ಮಿಕ್ಸ್ ಆಫ್ ಹಾಗದಿದ್ದಾರೇ ಸಾಕು ಅಲ್ವಾ..?

ಬಾಲ್ಡ್ ಬ್ಯೂಟಿ ಶಿಲ್ಪಾ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯಶ್ರಾಜ್ ಬ್ಯಾನರ್ನ ‘ದೋಸ್ತಾನಾ’ ಚಿತ್ರದ ಐಟಂ ಸಾಂಗ್ನ ನಂತರ ‘ದೀ ಡಿಸೈಯರ್’ ಚಿತ್ರದಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಭಾರತೀಯ ಕಲೆ, ಸಂಸ್ಕೃತಿ, ನೃತ್ಯ ಮೊದಲಾದ ವಿಚಾರಗಳ ಸುತ್ತ ಗೌತಮಿ ಎಂಬ ನಾಟ್ಯಗಾರ್ತಿ ಚೀನಾದ ವ್ಯಕ್ತಿಯೊಬ್ಬನನ್ನು ಪ್ರೀತಿಸುವ ಕಥಾ ಹಂದರವನ್ನು ಚಿತ್ರ ಹೊಂದಿದೆ. ಚಿತ್ರದ ಕೇಂದ್ರ ಬಿಂದುವಿನಲ್ಲಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕೂದಲು ಕಳೆದುಕೊಂಡು ಬಾಲ್ಡ್ಯಾಗಿ ಶಿಲ್ಪಾ ನಟಿಸುವ ಮೂಲಕ ಬಾಲಿವುಡ್ನಲ್ಲಿ ಹೊಸ ಗೆಟಪ್ಗೆ ಶಿಲ್ಪಾ ನಾಂದಿ ಹಾಡಿದ್ದಾರೆ. ಎಲ್ಲವೂ ಬಾಲಿವುಡ್ನಲ್ಲಿ ಉಳಿಯುವ ಕಸರತ್ತು ಎಂದು ಬಣ್ಣದ ನಗರಿಯ ಪಂಡಿತರ ಮಾತು.

Wednesday, August 24, 2011

ವಾಸಿಂ ಅಕ್ರಂ ಮತ್ತೆ ಬೋಲ್ಡ್ !


ಶಾರೂಕ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ವಾಸಿಂ ಅಕ್ರಂ ಭಾರತಕ್ಕೆ ಬಂದಿದ್ದಾಗ, ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಕೂಡ ಜತೆಯಲ್ಲಿದ್ದರಂತೆ ! ಅಂದಹಾಗೆ ವಾಸಿಂ ಆಂಡ್ ಮಲ್ಲಿಕಾ ಕತೆ ಏನ್ ಗೊತ್ತಾ ..?

ವಾಸಿಂ ಅಕ್ರಂ. ಈ ಹೆಸರು ಕ್ರಿಕೆಟ್ ನೋಡುವ ಬಹಳಷ್ಟು ಮಂದಿಗೆ ಬಹಳ ಹತ್ತಿರದಿಂದ ಗೊತ್ತಿರಬಹುದು. ವಾಸಿಂ ಅಕ್ರಂ ಬೌಲಿಂಗ್ ಮಾಡ್ತಾರೆ ಎಂದಾದರೆ ಬ್ಯಾಟ್ಸ್ಮನ್ಗಳ ಮನದ ಮೂಲೆಯಲ್ಲಿ ಭಯದ ನೆರಳು ಭೂತದಂತೆ ಕಾಡುತ್ತದೆ. ಒಂದ್ ಸಾರಿ ವಾಸಿಂ ಓವರ್ ಮುಗಿದರೆ ಸಾಕು ಅನ್ನಿಸಿಬಿಡುತ್ತದೆ ಎಂದು ವಿಶ್ವದ ಶ್ರೇಷ್ಟ ಬ್ಯಾಟ್ಸ್ಮನ್ ಅನ್ನಿಸಿಕೊಂಡ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಬ್ರಯಾನ್ ಲಾರಾ ವಾಸಿಂ ಕುರಿತು ಮಾಧ್ಯಮವೊಂದರಲ್ಲಿ ಬಹಿರಂಗವಾಗಿ ಹೇಳಿಕೆಕೊಟ್ಟಿದ್ದರು.
ಅಂದಹಾಗೆ ಈಗ ಬ್ರಯಾನ್ ಲಾರಾ ಕೂಡ ಕ್ರಿಕೆಟ್ ಬಗ್ಗೆ ಮಾತನಾಡುತ್ತಿಲ್ಲ. ವಾಸಿಂ ಕೂಡ ಕ್ರಿಕೆಟ್ ಜೀವನಕ್ಕೆ ವಿರಾಮ ಹಾಡಿದ್ದಾರೆ. ಇಬ್ಬರೂ ತಮಗೆ ಇಷ್ಟ ಬಂದಾಗ ಕ್ರಿಕೆಟ್ ಗ್ಯಾಲರಿಯಲ್ಲಿ ಕೂತು ಒಮ್ಮೊಮ್ಮೆ ಕ್ರಿಕೆಟ್ ನೋಡುವುದು, ಕ್ರಿಕೆಟ್ ಕುರಿತು ತಮಗೂ ಮಾತನಾಡಲು ಬರುತ್ತೆ ಅಂತಾ ಹೇಳಿಕೊಂಡು ಕಮೆಂಟರಿ ಹೊಡೆಯುವುದು, ಕ್ರಿಕೆಟ್ ಆಟಗಾರರಿಗೆ ತರಬೇತಿ ಕೊಡುವ ಕೋಚ್ ಆಗಿ ಫೀಲ್ಡ್ಗೆ ಬಂದರೆ ಬಿಟ್ಟರೆ ಬೇರೆ ಅವರೇನು ಮಾಡುತ್ತಾರೆ ಎನ್ನುವ ಕುತೂಹಲ ವಿಶ್ವದಲ್ಲಿ ಧರ್ಮದಂತೆ ಹರಡಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ.
ಅದರಲ್ಲೂ ವಾಸಿಂ ಅಕ್ರಂ ಕುರಿತು ಕುತೂಹಲ ಇನ್ನೂ ಕೂಡ ಜಾಸ್ತಿ. ವಾಸಿಂ ಪಕ್ಕದ ದೇಶ ಪಾಕಿಸ್ತಾನದವರು, ಜತೆಯಲ್ಲಿ ಬೋರ್ ಅನ್ನಿಸಿದಾಗಲೆಲ್ಲಾ ಭಾರತಕ್ಕೆ ಬಂದು ಕುಟುಂಬ ಸಹಿತ ಠಿಕಾಣಿ ಹೂಡುತ್ತಾರೆ. ಕುಟುಂಬದವರಿಗೆ ಏನೇ ಬೇಕಾದರೂ ಭಾರತದಲ್ಲಿ ಅದಕ್ಕೆ ಮದ್ದು ಹುಡುಕುವ ವಾಸಿಂ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಭಾರತವನ್ನು ಪ್ರೀತಿಸುತ್ತಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಹ್ಯೂಮಾ ಮುಫ್ತಿ ಇವರು ವಾಸಿಂ ಅಕ್ರಂರ ಪ್ರೀತಿಯ ಮಡದಿ. ನಾನಾ ಅಂಗವೈಪಲ್ಯ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರನ್ನು ಚೆನ್ನೈಯಲ್ಲಿರುವ ಅಪೋಲೋ ಹಾಸ್ಪಿಟಲ್ಗೆ ಸೇರಿಸಿದ್ದರು. ಆದರೆ ಯಾಕೋ ಏನೋ ೨೫ ಅಕ್ಟೋಬರ್ ೨೦೦೯ರಲ್ಲಿ ಹ್ಯೂಮಾ ಚಿಕಿತ್ಸೆ ಪಲಕಾರಿಯಾಗದೇ ವಾಸಿಂರ ಕೈ ಬಿಟ್ಟು ಹೋದರು. ಈ ನಂತರ ವಾಸಿಂ ಪದೇ ಪದೇ ಭಾರತದಲ್ಲಿಯೇ ನಿಲ್ಲುವ ಮನಸ್ಸು ಮಾಡಿದ್ದರು. ಹ್ಯೂಮಾ ಹೋದ ನಂತರ ಹೊಸ ಬಾಳಿನ ಗೆಳತಿ ಕಮ್ ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಜತೆಯಲ್ಲಿ ಭಾರತದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು ಎಂದು ಮಲ್ಲಿಕ್ ಈಗ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ರೆಡ್ ಚಿಲ್ಲಿ ಹಾಗೂ ಶಾರೂಕ್ ಖಾನ್ ಮಾಲೀಕತ್ವದ ಐಪಿಎಲ್ ತಂಡ ಕೊಲ್ಕತ್ತಾ ನೈಟ್ರೈಡರ್ಸ್ (ಕೆಕೆಆರ್)ಪರವಾಗಿ ವಾಸಿಂ ಬೌಲಿಂಗ್ ಕೋಚ್ ಆಗಿ ಭಾರತಕ್ಕೆ ಬಂದಿದ್ದರು. ಆದರೆ ವಾಸಿಂ ಈ ಸಮಯದಲ್ಲಿ ಮಲ್ಲಿಕಾರನ್ನು ಜತೆಯಲ್ಲಿಯೇ ಕರೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ನಿಧಾನವಾಗಿ ಪಾಕ್ನ ಮಾಧ್ಯಮಗಳ ಮೂಲಕ ಹೊರಬಂದಿದೆ. ಆದರೆ ಮಲ್ಲಿಕಾ ವಾಸಿಂ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ. ಎಲ್ಲರೂ ಸೇರಿ ವಾಸಿಂ ಹಾಗೂ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವಾಸಿಂಗೆ ಎರಡು ಮಕ್ಕಳಿವೆ ಜತೆಯಲ್ಲಿ ನನಗೂ ಕೇರಿಯರ್,ಕುಟುಂಬವಿದೆ ಇದೆಲ್ಲವೂ ಸುಳ್ಳು ಎಂದು ಕಡ್ಡಿ ತುಂಡಾಗುವ ರೀತಿಯಲ್ಲಿ ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂರ ಗರ್ಲ್ಪ್ರೆಂಡ್ ಎಂದು ಹೇಳಿಕೊಂಡು ತಿರುಗಾಡುವ ಅವಶ್ಯಕತೆ ನನಗೇನೂ ಬಿದ್ದಿಲ್ಲ. ನನಗೆ ಈಗ ವೃತ್ತಿ ಬದುಕೇ ದೊಡ್ಡದು. ನಾನು ಭಾರತಕ್ಕೆ ಹೋಗಿದ್ದು ಬರೀ ಕೆಕೆ ಆರ್ ತಂಡವನ್ನು ಹುರಿದುಂಬಿಸಲು ಮಾತ್ರ ಹೋಗಿದ್ದೆ, ವಾಸಿಂ ತಂಡದಲ್ಲಿದ್ದಾರೆ ಎಂಬ ವಿಚಾರಕ್ಕೆ ನಾನು ಅಲ್ಲಿಗೆ ಹೋಗಿಲ್ಲ . ಪಾಕ್ ಮಾಧ್ಯಮಗಳು ಈ ವಿಚಾರವನ್ನೇ ದೊಡ್ಡದು ಮಾಡಿವೆ ಇದು ಸರಿಯಲ್ಲ ಎಂದು ಮಲ್ಲಿಕಾ ವಾಹಿನಿಯಲ್ಲಿ ತಿಳಿಸಿದ್ದಾರೆ.
ವಾಸಿಂ ಹಾಗೂ ನಾನು ಜಸ್ಟ್ ಒಳ್ಳೆಯ ಗೆಳೆಯರು. ನಮ್ಮ ಜತೆಯಲ್ಲಿ ಅಂತಹ ಯಾವುದೇ ಸಂಬಂಧಗಳಿಲ್ಲ. ವಾಸಿಂರ ಮಕ್ಕಳಿಬ್ಬರನ್ನು ಕಂಡರೆ ನನಗೆ ಬಹಳ ಪ್ರೀತಿ. ಅದಕ್ಕಾಗಿ ಅವರ ಮನೆಗೆ ಹೋದರೆ ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಭಾರತದಲ್ಲಿರುವ ಮಾಧ್ಯಮಗಳಿಗಂತೂ ಹಳದಿ ರೋಗ ಅಂಟಿಬಿಟ್ಟಿದೆ. ಕ್ರಿಕೆಟರ್ ಜತೆಯಲ್ಲಿ ಸೆಲೆಬ್ರಿಟಿ ಕಾಣಿಸಿಕೊಂಡರೆ ಅವರ ನಡುವೆ ಲಿಂಕ್ ಕೊಡುವ ಪರಂಪರೆ ಹುಟ್ಟಿದೆ.
ವಾಸಿಂ ಭಾರತದ ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋವಿನಲ್ಲಿ ಜಡ್ಜ್ ಆಗಿದ್ದಾಗ ಸುಸ್ಮಿತಾ ಸೇನ್ ಜತೆಯಲ್ಲೂ ಲಿಂಕ್ ಇದೆ ಎನ್ನುವ ಮಾಹಿತಿಯನ್ನು ಭಾರತದ ಮಾಧ್ಯಮಗಳು ಹರಿಯಬಿಟ್ಟಿದ್ದರು. ಇದೆಲ್ಲವೂ ರಿಯಾಲಿಟಿ ಶೋವಿನ ಪ್ರಚಾರಕ್ಕಾಗಿ ಮಾಡಿದ ತಂತ್ರ ಎಂದು ನಂತರ ಗೊತ್ತಾಯಿತು. ಮಾಧ್ಯಮಗಳು ಹೇಳುವ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಮಲ್ಲಿಕಾ ವಾಹಿನಿಯೊಂದರಲ್ಲಿ ಬಿಚ್ಚು ಮಾತನಾಡಿದ್ದಾರೆ. ಆದರೆ ವಾಸಿಂ ಈ ಕುರಿತು ಯಾವುದೇ ಮಾಧ್ಯಮಗಳಿಗೆ ಹೇಳಿಕೆ ಕೊಡಲು ಮುಂದೆ ಬಂದಿಲ್ಲ. ಅಂದಹಾಗೆ ಮಲ್ಲಿಕಾರ ಮಾತಿನ ಮುಂದೆ ವಾಸಿಂ ಅಕ್ರಂ ಮಾತು ಡಲ್ ಹೊಡೆದಿದೆ ಎಂದು ಬಿಡೋಣ ಅಲ್ವಾ..?

Sunday, August 21, 2011

ನಿತ್ಯಾ ಬೆಳದಿಂಗಲು


ನಿತ್ಯಾ ಬರೀ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿ ಹೋಗಿಲ್ಲ. ಮಲಯಾಳಂ, ತೆಲುಗು, ತಮಿಳು ಎಲ್ಲ ಕಡೆ ಹೋಗಿ ಬಂದವಳು. ಹುಡುಗಿಯ ಸರ್ನೇಮ್ ನೋಡಿದರೆ ಮಾತ್ರ ಅವಳು ಮಲಯಾಳಂ ಕುಟ್ಟಿ ಅನ್ನಿಸಿಬಿಡುತ್ತದೆ. ನ್ಯಾಚುರಲಿ ಅವಳು ಕನ್ನಡದ ಕುವರಿ.


ಬೆಳದಿಂಗಲ ಬಟ್ಟಲಲ್ಲಿ ಅದ್ದಿ ತೆಗೆದ ಮುಖ. ಹುಟ್ಟಿನಿಂದ ಪಕ್ಕದಲ್ಲಿ ನಿಂತು ಸಮಾಧಾನಿಸಿದ ನಗು. ಮತ್ತೆ ಮತ್ತೇ ಪ್ರೇಕ್ಷಕನನ್ನು ಕುಕ್ಕಿ ಬಿಡುವ ಕುಡಿ ನೋಟ. ನಮ್ಮನ್ನೇ ಹುಡುಗಿ ಎಂದು ಅಪ್ಪಿಕೊಂಡು ಬಿಡುವ ಮುಗ್ದತೆ. ಯಾವುದೇ ವರ್ಗದ ಪ್ರೇಕ್ಷಕನನ್ನು ಮೋಡಿ ಮಾಡಿ ಬಿಡುವ ಹುಡುಗಿಯ ಬಿಂದಾಸ್ ವ್ಯಕ್ತಿತ್ವ. ಎಲ್ಲವೂ ಜತೆಯಲ್ಲಿ ಕೂತು ನೋಡಬಹುದಾದ ಹುಡುಗಿ ನಿತ್ಯಾ ಮೆನನ್.
ಅವಳು ಒಂದು ಲೆಕ್ಕಚಾರದ ಪ್ರಕಾರ ಕನ್ನಡದ ಹುಡುಗಿ. ಮೆನನ್ ಎಂಬ ಸರ್ನೇಮ್ ಜತೆಗೂಡಿದಾಗ ಮಾತ್ರ ಮಲಯಾಳಂ ಬೆಡಗಿ ಎಂದುಕೊಂಡು ದೂರ ಮಾಡಿಬಿಡಬಹುದು. ಅಂದಹಾಗೆ ನಿತ್ಯಾ ಮೆನನ್ ಕನ್ನಡಿಗರಿಗೆ ತೀರಾ ಪರಿಚಿತ ಮುಖ. ಕರಾವಳಿ ಮೂಲದ ನಿರ್ದೇಶಕ ಕಮ್ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ತಮ್ಮ ಮೊದಲ ಚಿತ್ರ ‘ಸೆವೆನ್ ಓ ಕ್ಲಾಕ್’ನಲ್ಲಿ ನಿತ್ಯಾ ‘ಅನು’ ಪಾತ್ರದಲ್ಲಿ ಗಮನ ಸೆಳೆದಿದ್ದಳು.
ಚಿತ್ರ ಸಾಧಾರಣ ಓಟದಿಂದ ನಿತ್ಯಾಳಿಗೆ ಕನ್ನಡದಲ್ಲಿ ಅಂತಹ ದೊಡ್ಡ ಚಾನ್ಸ್ಗಳು ಇರಲಿಲ್ಲ ಅಂದುಕೊಂಡಿರುವಾಗ ಪಕ್ಕದ ಸಿನ್ಮಾ ಇಂಡಸ್ಟ್ರಿ ಮಾತ್ರ ನಿತ್ಯಾಳಿಗೆ ಚಾನ್ಸ್ ಮೇಲೆ ಚಾನ್ಸ್ ಕೊಡುತ್ತಾ ಹೋಯಿತು. ನಿತ್ಯಾ ಬರೀ ಕನ್ನಡ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿ ಹೋಗಿಲ್ಲ. ಮಲಯಾಳಂ, ತೆಲುಗು, ತಮಿಳು ಎಲ್ಲ ಕಡೆ ಚಿತ್ರಗಳನ್ನು ಮಾಡಿಕೊಂಡು ಶಹಬ್ಬಾಸ್ ಅನ್ನಿಸಿಕೊಂಡಿದ್ದಾಳೆ.
ಕನ್ನಡದ ನಿರ್ದೇಶಕ ಶಿವಮಣಿ ಅವರ ‘ಜೋಶ್’, ವಿ.ಕೆ. ಪ್ರಕಾಶ್ ನಿರ್ದೇಶನದ ‘ಐದ್ ಒಂದ್ಲ ಐದು’ನಲ್ಲೂ ನಿತ್ಯಾ ತನ್ನ ನಟನೆಯ ಮೂಲಕ ದಂಗು ಮೂಡಿಸಿದ್ದರು. ಅದರಲ್ಲೂ ಜೋಶ್ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗೆ ನಾಮಕಿಂತಗೊಂಡಿದ್ದರು. ನಿತ್ಯಾ ನಟನೆಗಿಂತ ಹೆಚ್ಚಾಗಿ ಪತ್ರಕರ್ತೆಯಾಗಲೂ ಇಷ್ಟಪಟ್ಟಿದ್ದರು. ಅದರಲ್ಲೂ ಸಿನಿಮಾಟೋಗ್ರಾಫಿ ಇಂಟೆರೆಸ್ಟಿಂಗ್ ಫೀಲ್ಡ್. ನಿತ್ಯಾ ನಟನೆಯ ಜತೆಗೆ ಹಾಡುವುದರಲ್ಲೂ ಎತ್ತಿದ ಕೈ. ನಿತ್ಯಾ ಮೆನನ್ ಹೇಳಿಕೊಳ್ಳದ ಮಾತುಗಳು ಬಹಳಷ್ಟಿದೆ. ಅದರಲ್ಲೂ ತುಂಬಾ ಸಿಕ್ರೇಟ್ಸ್ ಮಾತುಗಳು ಇಲ್ಲಿವೆ.
ಅಂದಹಾಗೆ ನಿತ್ಯಾ ಮೆನನ್ರಿಗೆ ಚಾಕಲೇಟ್ಗಳೆಂದರೆ ಪಂಚಪ್ರಾಣ. ನಾನಾ ಬ್ರಾಂಡ್ ಚಾಕಲೇಟ್ಗಳನ್ನು ತಂದು ಪ್ರೀಜರ್ನಲ್ಲಿಟ್ಟುಕೊಂಡು ಟೈಮ್ ಸಿಕ್ಕಾಗಲೆಲ್ಲ ಚಾಕಲೇಟ್ ತಿನ್ನುತ್ತಾ ಇರುತ್ತಾರೆ. ಅದರಲ್ಲೂ ಕೆಲವೊಂದು ಬ್ರಾಂಡ್ ಚಾಕಲೇಟ್ಗಳನ್ನು ತನ್ನ ವ್ಯಾನಿಟಿ ಬ್ಯಾಗ್ನಲ್ಲಿ ಸದಾ ಇಟ್ಟಿರುತ್ತಾರೆ. ಮನೆಯಲ್ಲಿ ಅಡುಗೆ ಮಾಡುವುದೆಂದರೆ ನಿತ್ಯಾರಿಗೆ ಇಷ್ಟವಿಲ್ಲ. ಅದಷ್ಟೂ ಹೊರಗಡೆ ಹೋಗಿ ತಿನ್ನೋದು ಎಂದರೆ ಬಹಳ ಖುಷಿ.
ಟೈಮ್ ಸಿಕ್ಕಾಗಲೆಲ್ಲ ಓದುವುದು, ಫ್ರೆಂಡ್ಸ್ಗಳ ಜತೆಯಲ್ಲಿ ಲಾಂಗ್ ಟೂರ್ ಹೋಗೋದು ನಿತ್ಯಾರಿಗೆ ಬಹಳ ಇಷ್ಟ ಎನ್ನೋದು ಅವರ ಆಪ್ತ ವಲಯದ ಮಾತು. ಕಲಾತ್ಮಕ ಚಿತ್ರಗಳ ನಡುವಿನಲ್ಲಿ ಆಗಾಗ ಕಮರ್ಷಿಯಲ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ವಿಶೇಷವಾಗಿ ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ವಿಚಾರದಲ್ಲಿ ನಿತ್ಯಾ ಕಟ್ಟುನಿಟ್ಟು. ಆಫ್ಬೀಟ್ ಮೂವಿಗಳೇ ಓಕೆ ಎಂದು ಬಿಡುವ ನಿತ್ಯಾ ಕತೆ, ಪಾತ್ರಕ್ಕೆ ಜಾಸ್ತಿ ಮಹತ್ವ ಕೊಡುತ್ತಾರೆ.
ಬದುಕು ಬಹಳಷ್ಟು ಹೇಳಿಕೊಟ್ಟಿದೆ. ಅಲ್ಲಿನ ಮೌಲ್ಯಯುತವಾದ ಪಾಠಗಳು ತನಗೆ ದಾರಿ ದೀಪವೆಂದು ಬಹಳಷ್ಟು ಸಲ ನಿತ್ಯಾ ತನ್ನ ಸ್ನೇಹಿತರ ವರ್ಗದಲ್ಲಿ ಹೇಳಿಕೊಳ್ಳುತ್ತಾ ಇರುತ್ತಾರಂತೆ! ಅಂದಹಾಗೆ ನಿತ್ಯಾ ಮೆನನ್ ಪಾಲಿಗೆ ನಾಯಕನೆಂದರೆ ಹೇಗಿರಬೇಕು ಗೊತ್ತಾ..? ಮಾನವ ಸಂಬಂಧಗಳಿಗೆ ರೆಸ್ಪೆಕ್ಟ್ ಕೊಡುವಂತಹ ಮನೋಭಾವ ಹೊಂದಿರಬೇಕು. ಬದುಕಿನ ಸವಾಲುಗಳನ್ನು ಎದುರಿಸುವ ಎದೆಗಾರಿಕೆ ಇರಬೇಕು ಎನ್ನೋದು ಅವರ ಟ್ವಿಟ್ಟರ್ ಮಾತು.
ನಿತ್ಯಾ ಮೆನನ್ ಸೆಕ್ಸಿ ಇಮೇಜ್ನಿಂದ ಕೂಲ್ ಹುಡುಗಿ ಎನ್ನಿಸಿಕೊಳ್ಳಲು ಜಾಸ್ತಿ ಬಯಸುತ್ತಾರೆ. ಅದಕ್ಕಾಗಿ ಬಿಂದಾಸ್ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಾಳೆ ಇರುತ್ತಾರೆ ಎನ್ನೋದು ಅವರ ಗೆಳೆಯರ ಮಾತು. ಟೋಟಲಿ ನಿತ್ಯಾ ಮೆನನ್ ಕನ್ನಡಕ್ಕಿಂತ ಜಾಸ್ತಿಯಾಗಿ ಉಳಿದ ಸಿನ್ಮಾ ಫೀಲ್ಡ್ನಲ್ಲಿ ಕಾಣಿಸಿಕೊಳ್ಳುವುದು ಬೇಡಿಕೆ ಇರುವ ನಟಿಮಣಿ ಎನ್ನುವ ವಿಚಾರಕ್ಕೆ ಪುಷ್ಠಿ ನೀಡುವಂತಿದೆ ಅಲ್ವಾ..?

Saturday, August 20, 2011

ಒಂದು ಕಾರ್ಟೂನ್ ಮತ್ತು ಶೆಟ್ಟರು !


ನನ್ನ ಹೆಮ್ಮೆಯ ವಿಜಯ ಕರ್ನಾಟಕ ದಿನಪತ್ರಿಕೆಯ ವಿಶಿಷ್ಟ ಪುರವಣಿ ಲವಲವಿಕೆಯಲ್ಲಿ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿಯ ಕುರಿತು ಬಂದ ‘ಮೆಟ್ರೋದಲ್ಲಿ ಕುಡ್ಲ ಸಿಟಿ’ ಎಂಬ ಲೇಖನವನ್ನು ಮೆಚ್ಚಿ ಬಹಳಷ್ಟು ಮಂದಿ ಮೊಬೈಲ್ ಹಾಗೂ ಇಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿದ್ದಾರೆ. ಅದರಲ್ಲಿ ಕುಡ್ಲದ ಕಾರ್ಟೂನಿಷ್ಟ್ ಹರಿಶ್ಚಂದ್ರ ಶೆಟ್ಟಿ ಕೇರಾಪ್ ಹರಿಣಿ ಈ ರೀತಿ ಹೇಳುತ್ತಾರೆ : ನಿಮ್ಮ ಮೆಟ್ರೋ ಸಿಟಿ.. ಪ್ರಕಾಶ್ ಶೆಟ್ಟಿ ಯಾ ಮುರಾಲ್.. ಉತ್ತಮ ಬರಹ. ಮಂಗಳೂರಿನಲ್ಲಿ ಕೂತು ಬೆಂಗಳೂರಿನ ಮೆಟ್ರೋ ಸಿಟಿಯ ಬಗ್ಗೆ ಒಳ್ಳೆ ಬರೆದಿದ್ರಲ್ಲ. ಸೊಲ್ಮೆಲು ಹರಿಣಿ ಜತೆಗೊಂದು ನನ್ನ ಕಾರ್ಟೂನ್ ಕಳುಹಿಸಿದ್ದಾರೆ.

Friday, August 19, 2011

ಹಾಕಿಗೂ ಬಂತು ಐಪಿಎಲ್ ಕಿಕ್ಕು !


ವಿಜಯ ಕರ್ನಾಟಕದಲ್ಲಿ ಬಂದ ವಿಶೇಷ ವರದಿ

ಡಿಆರ್ಸಿ ವರ್ಲ್ಡ್ ಚಾಂಪಿಯನ್ ಶಿಪ್ ಇದು ಮುಂಬರುವ ದಿನಗಳಲ್ಲಿ ಹಾಕಿ ಕ್ರೀಡೆಯಲ್ಲಿ ಬರುವ ಐಪಿಎಲ್ ಮಾದರಿ ಚಾಂಪಿಯನ್ ಶಿಪ್ನ ಟೈಟಲ್ ಕಾರ್ಡ್. ಕ್ರಿಕೆಟ್, ವಾಲಿಬಾಲ್, ಕಾರ್ ರೇಸಿಂಗ್ ಈಗ ಹಾಕಿಗೂ ಐಪಿಎಲ್ ರಂಗು ಬಂದಿದೆ. ಇದೇ ಬರುವ ಡಿ.೧೫ರಿಂದ ಜ.೧೫ರ ವರೆಗೆ ದೇಶದ ನಾನಾ ಭಾಗಗಳಲ್ಲಿ ಈ ಹಾಕಿ ಪಂದ್ಯಾಟಗಳು ನಡೆಯಲಿದೆ ಎನ್ನುವ ಮಾಹಿತಿಯನ್ನು ವಿಕಕ್ಕೆ ಬಹಿರಂಗ ಮಾಡಿದ್ದು ಭಾರತದ ಮಾಜಿ ಹಾಕಿ ಕಪ್ತಾನ ಧನರಾಜ್ ಪಿಳ್ಳೆ.
ಬಡಗ ಎಡಪದವಿನಲ್ಲಿ ಸ್ವಾತಂತ್ಯ್ರೋತ್ಸವದ ಅಂಗವಾಗಿ ನಡೆದ ಶ್ರೀ ಭೂತನಾಥೇಶ್ವರ ಮಾನ್ಸೂನ್ ಮ್ಯಾರಥಾನ್ಗೆ ಚಾಲನೆ ನೀಡಲು ಬಂದಿದ್ದ ಧನರಾಜ್ ಪಿಳ್ಳೆ ವಿಕದ ಜತೆಗೆ ಮಾತನಾಡಿದರು.
ಅವರು ಹೇಳಿದ್ದಿಷ್ಟು
* ನಿಂಬಸ್ ಕಂಪನಿ ಹಾಕಿ ಐಪಿಎಲ್ ಪ್ರಾಯೋಜಕತ್ವ ಪಡೆದಿದೆ. ಭಾರತದ ೧೩೦ ಹಾಗೂ ವಿದೇಶದ ೪೦ ಹಾಕಿ ಆಟಗಾರರು ಐಪಿಎಲ್ ಹರಾಜಿಗೆ ಸಹಿ ಹಾಕಿದ್ದಾರೆ. ಪಂದ್ಯಾಟದ ಸ್ಥಳಗಳನ್ನು ಶೀಘ್ರ ಅಂತಿಮಗೊಳಿಸಲಾಗುವುದು. ೨ ತಿಂಗಳ ಒಳಗೆ ಸ್ಪಷ್ಟ ಮಾಹಿತಿ ನೀಡಲಾಗುವುದು. ಹಾಕಿ ಐಪಿಎಲ್ನಲ್ಲಿ ಪಂದ್ಯಾಟದ ಅವ ಮೊಟಕು ಮಾಡುವ ಕುರಿತು ಈಗಾಗಲೇ ಹಾಕಿ ಫೆಡರೇಶನ್ ಆಫ್ ಇಂಡಿಯಾದ ಜತೆ ಮಾತುಕತೆ ನಡೆದಿದೆ.
* ಕ್ರಿಕೆಟ್ ಮುಂದೆ ಹಾಕಿ ಮಂಕಾಗುತ್ತಿದೆ ಎಂಬ ಕುರಿತು ಆರಂಭದಲ್ಲಿ ಭಯ ಹುಟ್ಟಿತ್ತು. ಈಗ ಹಾಕಿನೂ ಐಪಿಎಲ್ ಮಟ್ಟಕ್ಕೆ ಹೋಗುತ್ತಿದೆ. ಪ್ರಾಯೋಜಕರು ಸಿಗುತ್ತಿದ್ದಾರೆ. ಆಟಗಾರರ ಹರಾಜು ನಡೆಯಲಿದೆ. ಇದೆಲ್ಲ ಹಾಕಿಗೆ ಭವಿಷ್ಯವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.
* ಭಾರತೀಯ ಹಾಕಿ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡಿದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕ್ರಿಕೆಟ್ನಲ್ಲಿ ವಿದೇಶಿ ಕೋಚ್ ನೇಮಕ ಮಾಡಬಹುದಾದರೆ ಹಾಕಿಯಲ್ಲಿ ಯಾಕಿಲ್ಲ. ಕ್ರಿಕೆಟ್ ಕೂಡ ಒಂದು ಕ್ರೀಡೆಯಾದರೆ ಹಾಕಿನೂ ಅದರಷ್ಟೇ ದೊಡ್ಡ ಕ್ರೀಡೆ. ಭಾರತೀಯ ಹಾಕಿ ತಂಡದ ಈಗಿನ ಕೋಚ್ ನೋಬ್ಸ್ ಈಗಷ್ಟೇ ಬಂದಿದ್ದಾರೆ. ಅವರಿಗೆ ಕೊಂಚ ಟೈಮ್ ಕೊಡುವುದು ಮುಖ್ಯ. ಅವರು ಕೂಡ ಸಮಯ ಕೇಳಿದ್ದಾರೆ, ಮುಂದೆ ನೋಡೋಣ.
* ಕರ್ನಾಟಕದ ಅರ್ಜುನ್ ಹಾಲಪ್ಪ, ವಿನಯ್, ಪ್ರಭು, ಎಸ್.ವಿ. ಸೂರ್ಯ ಒಳ್ಳೆಯ ಪ್ರತಿಭಾವಂತ ಆಟಗಾರರು. ಇಂತಹ ಆಟಗಾರರು ಇನ್ನೂ ತಂಡಕ್ಕೆ ಅವಶ್ಯಕತೆ ಇದೆ. ಹಾಕಿ ತರಬೇತಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಇದೆಲ್ಲವೂ ಕರ್ನಾಟಕದಲ್ಲಿ ಹಾಕಿ ಬೆಳೆಯುತ್ತಿದೆ ಎಂಬುವುದಕ್ಕೆ ಸ್ವಷ್ಟ ಉದಾಹರಣೆ.
* ಹಾಕಿಯಲ್ಲಿ ರಾಜಕಾರಣ ಮೊದಲಿನ ರೀತಿಯಲ್ಲಿ ಇಲ್ಲ. ಆದರೂ ಲೈಕ್ಸ್ ಆಂಡ್ ಡಿಸ್ಲೈಕ್ ಅದನ್ನು ಮ್ಯಾನೇಜ್ ಮಾಡುವುದರಲ್ಲಿ ಭಾರತೀಯ ಹಾಕಿ ತಂಡ ನಿರತವಾಗಿದೆ. ಇಂತಹ ಪ್ರಕ್ರಿಯೆ ತಂಡದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಒಲಿಂಪಿಕ್ಸ್ನಲ್ಲಿ ಹಾಕಿ ಪದೇ ಪದೇ ಎಡವಿ ಬೀಳೋದು ಇದೇ ಕಾರಣಕ್ಕೆ.
* ಮುಂಬಯಿಯಲ್ಲಿ ಧನರಾಜ್ ಪಿಳ್ಳೆ ಹಾಕಿ ಅಕಾಡೆಮಿ ಸ್ಥಾಪನೆ ಮಾಡಿದ್ದೆ. ಹಾಕಿಯಲ್ಲಿರುವ ರಾಜಕಾರಣ ಅದನ್ನು ಬೆಳೆಯಲು ಬಿಡಲಿಲ್ಲ. ಈಗ ಮತ್ತೆ ಆರಂಭ ಮಾಡಬೇಕು ಎಂದು ಅಲೋಚನೆ ಮಾಡುತ್ತಿದ್ದೇನೆ. ಪ್ರಾಯೋಜಕತ್ವದ ಕೊರತೆ ಇದೆ. ಹಾಕಿ ಆಟಗಾರರಿಗೆ ಹೊಸ ಚೇತನ ನೀಡಲು ನಾನು ಯಾವಾಗಲೂ ಸಿದ್ಧ. ಅಕಾಡೆಮಿ ಮೂಲಕ ಭಾರತೀಯ ಹಾಕಿ ತಂಡಕ್ಕೆ ಹೊಸ ಆಟಗಾರರನ್ನು ಕೊಡಬೇಕು ಎನ್ನೋದು ನನ್ನ ಕನಸು.

ಮದುವೆ ಬೇಕಿಲ್ಲ ಹಾಕಿ ಇದೆಯಲ್ಲ
ಭಾರತದ ಮಾಜಿ ಹಾಕಿ ಕಪ್ತಾನ ಧನರಾಜ್ ಪಿಳ್ಳೆ ಇನ್ನೂ ಪಕ್ಕಾ ಬ್ಯಾಚುಲರ್. ಮದುವೆ ಯಾಕೆ ಆಗಿಲ್ಲ ಅಂತಾ ಯಾರಾದರೂ ಪ್ರಶ್ನೆ ಹಾಕಿದರೆ ಹೇಳುವುದಿಷ್ಟು: ಆರಂಭದಲ್ಲಿ ಮದುವೆ ಕುರಿತು ಯೋಚಿಸಲು ಟೈಮ್ ಇಲ್ಲದೇ ಹೋಯಿತು. ಹಾಕಿ ಕ್ರೀಡೆಯನ್ನು ಸೀರಿಯಸ್ ಆಗಿ ತೆಗೆದುಕೊಂಡ ನಂತರ ಹಾಕಿಯೇ ನನ್ನ ಹೆಂಡ್ತಿ. ಈಗಂತೂ ಮದುವೆಯ ವಿಚಾರನೇ ಬೇಡ ಅನ್ನಿಸುತ್ತಿದೆ. ಹಾಕಿ ಆಡುತ್ತಿದ್ದಾಗ ಬಹಳಷ್ಟು ಹುಡುಗಿಯರು ಲವ್ ಮಾಡುತ್ತಿದ್ದರು. ನಾನು ಕೂಡ ಲವ್ಗೆ ಬಿದ್ದಿದ್ದೆ. ನಂತರ ಬೇರೆ ವಿಚಾರಗಳಿಂದ ಲವ್ನಿಂದ ಹೊರಬಂದೆ ಎಂದು ತಮ್ಮ ಬದುಕಿನ ಸಿಕ್ರೇಟ್ಸ್ಗಳನ್ನು ಧನರಾಜ್ ತೆರೆದಿಟ್ಟರು.

ಕುಡ್ಲ ಬಲ ಪೊರ್ಲುಂಡು
ಕರಾವಳಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ‘ಕುಡ್ಲ ಬಲ ಪೊರ್ಲುಂಡು’ ಎಂದು ಧನರಾಜ್ ತುಳುವಿನಲ್ಲಿ ಹೇಳಿದರು. ಇಂತಹ ಅತಿಥಿ ಸತ್ಕಾರ ಬೇರೆಲ್ಲೂ ಕಂಡಿಲ್ಲ. ಗ್ರಾಮೀಣ ಕ್ರೀಡೆಗೆ ಇಲ್ಲಿ ಅವಕಾಶದ ಜತೆಯಲ್ಲಿ ಹಣಕಾಸಿನ ನೆರವು ಕೂಡ ಇದೆ. ಇಲ್ಲಿನ ಪರಿಸರ, ಸಂಸ್ಕೃತಿ, ಆಚರಣೆಗಳನ್ನು ಕೇಳಿದ್ದೆ. ಆದರೆ ಈಗ ಅದನ್ನೆಲ್ಲಾ ನೋಡುವ ಭಾಗ್ಯ ನನ್ನದಾಗಿದೆ ಎಂದರು ಧನರಾಜ್.

(vk daily published dis news on 16.08.2011)

Saturday, August 13, 2011

ಬಿರಿಯಾನಿ ಹುಡುಗಿ ಸಾನಿಯಾ


ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಮಹಿಳೆಯರು ಈ ಪಾಟಿ ಟೆನಿಸ್ ಆಡುತ್ತಾರೆ ಎಂದು ಹುಡುಗರಿಗೆ ಗೊತ್ತಾಗಿದ್ದು ಇದೇ ಸಾನಿಯಾ ಮಿರ್ಜಾರಿಂದ ಅಂತೆ ! ಈಗ ಸಾನಿಯಾ ಮಿರ್ಜಾ ದೇಹ ಊದಿಕೊಳ್ಳುತ್ತಿದೆ ಎಂದು ಖುದ್ದು ಟ್ವಿಟ್ವರ್ನಲ್ಲಿ ಟ್ವಿಟ್ ಮಾಡಿದ್ದಾಳೆ.

‘ಶೋಯಿ ಪ್ರೀತಿಯಿಂದ ನಾನು -ಟ್ ಆಗುತ್ತಿದ್ದೇನೆ. ಪ್ರಾಕ್ಟೀಸ್ ಮಾಡುವ ಟೈಮ್ನಲ್ಲಿ ಸುತ್ತಾಡೋಣ ಅಂತಾ ಹೇಳಿ ತಿರುಗಾಡಿ ಬರುತ್ತೇವೆ. ಅಲ್ಲಿ ಇಲ್ಲಿ ತಿನಿಸುಗಳನ್ನು ತಿಂದು ತೂಕ ಹೆಚ್ಚುತ್ತಿದೆ ಎಂಬ ಭಯ ಕಾಡುತ್ತಿದೆ ಎಂದು ಟ್ವಿಟ್ವರ್ನಲ್ಲಿ ಹೇಳಿಕೊಂಡಿದ್ದು ಬೇರೆ ಯಾರು ಅಲ್ಲ ಹೈದರಾಬಾದ್ ಬಿರಿಯಾನಿ ಹುಡುಗಿ ಸಾನಿಯಾ ಮಿರ್ಜಾ.
ಅಂದಹಾಗೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ಮಹಿಳೆಯರು ಈ ಪಾಟಿ ಟೆನಿಸ್ ಆಡುತ್ತಾರೆ ಎಂದು ಹುಡುಗರಿಗೆ ಗೊತ್ತಾಗಿದ್ದು ಇದೇ ಸಾನಿಯಾ ಮಿರ್ಜಾರಿಂದ ಅಂತೆ ! ಸಾನಿಯಾ ಟೆನಿಸ್ ಕೋರ್ಟ್ಗೆ ಇಳಿದು ಬಂದಿದ್ದಾಳೆ ಅಂತಾ ಗೊತ್ತಾದ ತಕ್ಷಣ ಕೋರ್ಟ್ ಗ್ಯಾಲರಿಯಲ್ಲಿ ಹುಡುಗರು ಬಂದು ನಿಲ್ಲುತ್ತಿದ್ದರು. ಸಾನಿಯಾಳ ಟೆನಿಸ್ ಮ್ಯಾಚ್ ಇದೆ ಎಂದು ಗೊತ್ತಾದ ತಕ್ಷಣ ೨೪ ಇಂಚಿನ ಟಿವಿಗಳು ರನ್ ಆಗುತ್ತಿತ್ತು.
ಎಲ್ಲ ವಯೋಮಾನದವರು ಟಿವಿ ಮುಂದೆ ಕೂತು ಸಾನಿಯಾರ ಮ್ಯಾಚ್ ವಿದ್ ಡ್ರೆಸ್ ಸೆನ್ಸ್ ಕುರಿತು ಗಂಟೆಗಟ್ಟಳೆ ಮಾತಿಗೆ ಇಳಿಯುತ್ತಿದ್ದರು. ಕೆಲವೇ ವರ್ಷಗಳಲ್ಲಿ ಸಾನಿಯಾ ಟೆನಿಸ್ ಕೋರ್ಟ್ಗಿಂತ ಹೆಚ್ಚಾಗಿ ಹುಡುಗರ ಪಾಲಿನ ಆರಾಧ್ಯ ದೇವತೆಯಾಗಿ ಹೋದಳು. ಸಾನಿಯಾ ಟೆನಿಸ್ ಲೋಕದಲ್ಲಿ ಏರಿಳಿತ ಕಂಡ ಹುಡುಗಿ ಸದಾ ಕಾಲ ಸುದ್ದಿಮನೆಯಲ್ಲಿ ಆಟವಾಡುತ್ತಿದ್ದಳು.
ಈಗ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್( ಶೋಯಿ) ಜತೆ ಮದುವೆಯಾಗಿ ಮಸ್ತ್ ಆಗಿದ್ದಾರೆ. ಆದರೆ ಶೋಯೆಬ್ ಮಲ್ಲಿಕ್ ತನ್ನ ಪತ್ನಿ ಸಾನಿಯಾ ಮಿರ್ಜಾರನ್ನು ಲೆಕ್ಕಕ್ಕಿಂತ ಜಾಸ್ತಿ ಪ್ರೀತಿಸುತ್ತಾರಂತೆ ! ಈ ಪ್ರೀತಿಯಿಂದ ಸಾನಿಯಾ ದಢೂತಿಯಾಗುವ ಭಯವನ್ನು ಟ್ವಿಟ್ವರ್ನಲ್ಲಿ ತನ್ನ ಅಭಿಮಾನಿಗಳ ಜತೆಯಲ್ಲಿ ಹೇಳಿಕೊಂಡಿದ್ದಾರೆ.
ಸಾನಿಯಾ ಭಾರತದಲ್ಲಿದ್ದಾಗ ಅತೀ ಹೆಚ್ಚು ಇಷ್ಟ ಪಡುತ್ತಿದ್ದ ಆಹಾರವೆಂದರೆ ಹೈದರಾಬಾದ್ ಬಿರಿಯಾನಿ. ಈ ಬಿರಿಯಾನಿ ಪಾಕ್ನಲ್ಲಿ ಎಲ್ಲಿ ಎಲ್ಲ ಸಿಗುತ್ತೋ ಎಂದು ಪಟ್ಟಿ ತಯಾರಿಸಿ ಹೋಟೆಲ್ಗಳಿಗೆ ಹೋಗಿ ತಿನ್ನೋದು ಈಗ ಇಬ್ಬರ ದೈನಂದಿನ ಕೆಲಸವಾಗಿ ಬಿಟ್ಟಿದೆಯಂತೆ ! ಪ್ರಾಕ್ಟೀಸ್ ಮಾಡುವ ಹೊತ್ತಿನಲ್ಲಿ ಹೋಟೆಲ್ನಲ್ಲಿ ಕೂತು ತಿಂದರೆ ದೇಹದಲ್ಲಿ ಎಲ್ಲಿ ಕೊಬ್ಬು ಬೆಳೆದುಬಿಡುತ್ತೋ ಎಂಬ ಹೆದರಿಕೆಯಲ್ಲಿ ಸಾನಿಯಾ ಟ್ವಿಟ್ವರ್ ಮೂಲಕ ತನ್ನ ಅಭಿಮಾನಿಗಳಿಂದ ಪ್ಯಾಟ್ ಇಳಿಸುವ ಸಲಹೆಗಳನ್ನು ಕೇಳಿದ್ದಾರೆ.
ಸ್ಲಿಮ್ಗಾಗಿ ಸಾನಿಯಾ ಈಗಾಗಲೇ ಕೆಲವೊಂದು ಟಿಪ್ಸ್ಗಳನ್ನು ಪಡೆದುಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಟಿಪ್ಸ್ಗಳಿಂದ ಸಾನಿಯಾ ಮಿರ್ಜಾ ‘ಜೀರೋ ಸೈಜ್’ಗೆ ಇಳಿದು ಬಿಡುತ್ತಾರಾ ಎನ್ನೋದು ಕ್ವಶನ್ ಮಾರ್ಕ್ ಆಗಿ ಮುಂದೆ ನಿಂತಿದೆ. ಸಾನಿಯಾರ ಅಚ್ಚುಮೆಚ್ಚಿನ -ಡ್ ಐಟಂನಿಂದ ‘ಹೈದರಾಬಾದ್ ಬಿರಿಯಾನಿ’ ಡಿಲೀಟ್ ಆಗಬಹುದು ಅಲ್ವಾ..? ಅದಕ್ಕೂ ಮುಂಚೆ ಸಾನಿಯಾ ಅಭಿಮಾನಿಗಳು ಮೈ ಭಾರ ಇಳಿಸುವ ಟಿಪ್ಸ್ಗಳನ್ನು ಕೊಟ್ಟು ಬಿಡಿ.

ಸಾನಿಯಾ ಸಿಕ್ರೇಟ್ಸ್:
ಸಾನಿಯಾ ಮಿರ್ಜಾ ಟೆನಿಸ್ ಟೂರ್ನಿಗಳು ಇಲ್ಲದೇ ಇದ್ದಾಗ ಏನೂ ಮಾಡುತ್ತಾರೆ ಎನ್ನುವ ಕುತೂಹಲ ಅವರ ಬಹುಸಂಖ್ಯಾತ ಅಭಿಮಾನಿಗಳಲ್ಲಿ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಬಾಲಿವುಡ್, ಟಾಲಿವುಡ್ ಸಿನ್ಮಾಗಳ ಹಾಡುಗಳನ್ನು ಕೇಳುವುದು. ಅದರಲ್ಲೂ ಹಿಪ್-ಹಾಪ್, ರ್ಯಾಪ್ ಹಾಗೂ ಹಿಂದಿ ರಿಮಿಕ್ಸ್ ಸಾಂಗ್ಸ್ಗಳೆಂದರೆ ಸಾನಿಯಾರಿಗೆ ಬಹಳ ಖುಷಿಯಂತೆ.
ಇನ್ನೂ ಟೈಮ್ ಉಳಿತ ಅಂದ್ರೆ ತನ್ನ ಸ್ನೇಹಿತರ ಜತೆಯಲ್ಲಿ ಗಂಟೆಗಟ್ಟಳೆ ಹರಡುತ್ತಾಳೆ. ಕಾರ್ಟೂನ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ಬರುವ ಟಾಮ್ ಆಂಡ್ ಜೆರ್ರಿ, ಟ್ವೀಟಿ ಕಾರ್ಟೂನ್ಗಳೆಂದರೆ ಸಾನಿಯಾರಿಗೆ ಅಚ್ಚುಮೆಚ್ಚು. ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಮೂವೀಸ್ ಜತೆಯಲ್ಲಿ ಬ್ರಾಂಡ್ ಪಿಟ್ ಚಿತ್ರಗಳು ಖುಷಿ ಕೊಡುತ್ತದೆಯಂತೆ. ಶಾರೂಕ್ ಖಾನ್ರ ಡಿಡಿಎಲ್ಜೆ( ದಿಲ್ ವಾಲೇ ದುಲ್ಹಾನೀಯಾ ಲೇ ಜಾಹೇಂಗೆ) ಚಿತ್ರವನ್ನು ೧೦೦ಕ್ಕಿಂತ ಸಲ ಸಾನಿಯಾ ನೋಡಿದ್ದಾರೆ.
ನ್ಯೂಯಾರ್ಕ್ ಸಿಟಿ ಎಂದರೆ ಸಾನಿಯಾರ ಪೇವರಿಟ್ ಟೂರಿಸ್ಟ್ ಸ್ಪಾಟ್. ಕೆಂಪು ಬಣ್ಣ ಎಂದರೆ ಸಾನಿಯಾರಿಗೆ ಖುಷಿ. ಮೂಗುತಿ ಹಾಗೂ ತನ್ನ ನೆಚ್ಚಿನ ಜುವೆಲ್ಲರಿಗಳನ್ನು ಸಾನಿಯಾ ಜತೆಯಲ್ಲಿಯೇ ಇಟ್ಟಿರುತ್ತಾರೆ. ಕ್ಲೇವಿನ್ ಕೇಲಿನ್ ಈಪೋರಿಯಾ ಇಷ್ಟ ಪಡುವ ಪರ್ಪ್ಯುಮ್. ಬ್ಲ್ಯಾಕ್ಬೆರ್ರಿ, ಐಪೋನ್, ಮ್ಯಾಕ್ ಬುಕ್ ಸದಾ ಜತೆಯಲ್ಲಿಯೇ ಇರುತ್ತದೆ. ಬಿಎಂಡಬ್ಲ್ಯೂ೭ ಸಿರೀಸ್ ಹಾಗೂ ಮರ್ಸೆಡೀಸ್ ಕಾರು ಸಾನಿಯಾ ಮೆಚ್ಚಿನ ಕಾರುಗಳು. ಟೆನಿಸ್ ಎಂದರೆ ಸಾನಿಯಾರಿಗೆ ಪಂಚಪ್ರಾಣ. ಆದರೆ ಕ್ರಿಕೆಟ್ ಕೂಡ ಅಷ್ಟೇ ಇಷ್ಟ

Thursday, August 11, 2011

ಬೆಲೆ ಬಾಳುವ ‘ಹೀರೋಯಿನ್’


ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ರೊಬೋಟ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದುಕೊಂಡ ಸಂಭಾವನೆ ೬.೫ ಕೋಟಿ. ಈಗ ಕರೀನಾ ಕಪೂರ್ ‘ಹೀರೋಯಿನ್’ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಬರೀ ೮ ಕೋಟಿಯಂತೆ !

ಹೋದಲ್ಲಿ, ಬಂದಲ್ಲೆಲ್ಲ ಭಾರೀ ಸುದ್ದಿಗೆ ಗ್ರಾಸವಾಗುತ್ತಿರುವ ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಮದುವೆಮಾಡಿಕೊಳ್ಳಲು ಮನಸ್ಸು ಮಾಡಿ ಅದೆಷ್ಟೋ ದಿನಗಳೇ ಆಗಿವೆ. ಆದರೆ, ಆಗಿರಲಿಲ್ಲ. ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಾ ಅದರ ಶೂಟಿಂಗ್ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿತ್ತು ಈ ಜೋಡಿ. ಕೊನೆಗೂ, ಈಗ ತಮ್ಮ ಮದುವೆಗೆ ಮುಹೂರ್ತ ಪಿಕ್ಸ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕರೀನಾ ಮತ್ತು ಸೈಫ್.
ಅದೂ, ಮುಂದಿನ ವರ್ಷ. ಫೆಬ್ರವರಿಗೆ ನಿಶ್ಚಿತಾರ್ಥ, ಅಕ್ಟೋಬರ್ ಹೊತ್ತಿಗೆ ಮದುವೆ. ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಅವರ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿಯೇ ನಡೆಯಲಿದೆ. ಈ ಕುರಿತು, ಎರಡು ಕುಟುಂಬಗಳು ಈಗಾಗಲೇ ಚರ್ಚೆ ನಡೆಸಿದ್ದು ಪೂರ್ವ ತಯಾರಿ ಕಡೆ ಗಮನ ಕೊಟ್ಟಿದ್ದಾರಂತೆ.
ಭೋಪಾಲ್ನಲ್ಲಿ ನಡೆಯಲಿರುವ ಈ ತಾರಾ ಜೋಡಿ ಎಂಗೇಜ್ಮೆಂಟ್ ಗೆ ಬಾಲಿವುಡ್ ಸ್ಟಾರ್ಗಳಷ್ಟೇ ಅಲ್ಲದೇ, ಖಾನ್ತ್ರಯರೂ ಆಗಮಿಸಲಿದ್ದಾರಂತೆ.
ಶಾರುಖ್, ಅಮೀರ್ ಮತ್ತು ಸಲ್ಮಾನ್ ಖಾನ್ ಮೂವರೊಟ್ಟಿಗೂ ಕರೀನಾ ಅಭಿನಯಿಸಿದ್ದಾರೆ. ಹಾಗಾಗಿ, ಈ ಮೂವರನ್ನು ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಫೆಬ್ರವರಿ ೧೪ಕ್ಕೆ ಕರೀನಾ-ಸೈಫ್ ಎಂಗೇಜ್ಮೆಂಟ್ ನಡೆಯಲಿದೆಯಂತೆ. ಪ್ರೇಮಿಗಳ ದಿನವಾಗದಿದ್ದರೆ, ಫೆಬ್ರವರಿ ಅಂತ್ಯಕ್ಕಂತೂ ಗ್ಯಾರಂಟಿ. ಇದು ಮುಗಿದ ಒಂಬತ್ತು ತಿಂಗಳಿಗೆ ಸರಿಯಾಗಿ ಹಸೆಮಣೆಯೇರಲು ಈ ಜೋಡಿ ನಿರ್ಧರಿಸಿದೆ. ಅಷ್ಟರೊಳಗೆ, ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಟ್ಟು ‘ವಿರಾಮ’ವಾಗಿ ಹನಿಮೂನ್ಗೆ ರೆಡಿಯಾಗಲು ತಯಾರಿ ನಡೆಸಿದ್ದಾರಂತೆ ಕರೀನಾ.
ಅಂದಹಾಗೆ, ಕರೀನಾ ಮತ್ತು ಸೈಫ್ ಎಂಗೇಜ್ಮೆಂಟ್ಗೆ ೧೫ ದಿನ, ಮದುವೆಗೆ ೧೦ದಿನ ರಜೆ ಘೋಷಿಸಿಕೊಂಡಿದ್ದಾರೆ !
ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಐಶ್ವರ್ಯಾ ರೈ ತಾಯಿಯಾಗುವ ಖುಷಿಯಲ್ಲಿ ಬಿಟ್ಟುಹೋದ ‘ಹೀರೋಯಿನ್’ ಪಟ್ಟಕ್ಕೆ ಕರೀನಾ ಕಪೂರ್ ಎಂಟ್ರಿ ಕೊಟ್ಟಿದ್ದಾರೆ ಎನ್ನೋದು ತುಂಬಾ ಓಲ್ಡ್ ನ್ಯೂಸ್ ಅಲ್ವಾ..? ಈಗ ಬಂದಿರುವ ಗರಂ ಗರಂ ಸುದ್ದಿಯೆಂದರೆ ಮಧುರ್ ಭಂಡಾರ್ ಕರ್ ನಿರ್ದೇಶನದ ಈ ಚಿತ್ರಕ್ಕೆ ಕರೀನಾ ಬರೋಬ್ಬರಿ ಎಂಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.
ಅದರಲ್ಲೂ ಮೊದಲು ೧೦ ಕೋಟಿಯ ಮಾತುಕತೆ ನಡೆದಿತ್ತು. ಯುಟಿವಿ ಬ್ಯಾನರ್ನ ನಿರ್ಮಾಪಕ ದೊರೆಗಳು ಈಗ ೮ ಕೋಟಿ ಕೊಡುತ್ತೇವೆ ಉಳಿದ ಹಣವನ್ನು ಚಿತ್ರ ಬಿಡುಗಡೆಯ ಟೈಮ್ನಲ್ಲಿ ಕೊಟ್ಟು ಬಿಡುತ್ತೇವೆಂದು ಒಪ್ಪಂದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಕರೀನಾನೂ ಓಕೆ ಎಂದುಕೊಂಡು ೮ ಕೋಟಿ ಪಡೆದುಕೊಂಡಿದ್ದಾರೆ. ಆ ಮೂಲಕ, ಬಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ‘ಹೀರೋಯಿನ್’ ಆಗಿ ಹೊರಹೊಮ್ಮಿದ್ದಾರೆ ಕರೀನಾ.
ಅಂದಹಾಗೆ ಮಧುರ್ ಭಂಡಾರ್ಕರ್ ಅವರ ‘ಹೀರೋಯಿನ್’ಚಿತ್ರಕ್ಕೆ ಐಶ್ ನಂತರ ನಾಯಕಿಯ ಪಟ್ಟ ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್ಗೆ ಒಳಿದಿತ್ತು. ಆದರೆ ಪ್ರಿಯಾಂಕಾ ಮಧುರ್ ಅವರ ‘ಫ್ಯಾಶನ್’ ಚಿತ್ರದಲ್ಲಿ ನಟಿಸಿರುವುದರಿಂದ ಇದೇ ರೀತಿಯ ಕತೆ ಹೊಂದಿರುವ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲು ಇಷ್ಟ ಪಡಲಿಲ್ಲ. ಉಳಿದಂತೆ ವಿದ್ಯಾ ಬಾಲನ್ ಏಕ್ತಾ ಕಪೂರ್ ಬ್ಯಾನರ್ನ ‘ಡರ್ಟಿ ಪಿಕ್ಚರ್’ನಲ್ಲಿ ಫುಲ್ ಬ್ಯುಸಿಯಾಗಿರುವುದರಿಂದ ಈ ಚಿತ್ರ ಕರೀನಾರ ಪಾಲಿಗೆ ಒಳಿದಿತ್ತು.
ಮಧುರ್ ಭಂಡಾರ್ ಕರ್ಗೂ ಕರೀನಾ ಈ ಚಿತ್ರಕ್ಕೆ ಸರಿಯಾದ ನಟಿ ಎಂದೇ ಚಿತ್ರದ ಕಥೆಯನ್ನು ರಚಿಸಿಕೊಂಡಿದ್ದರಂತೆ ! ಕರೀನಾ ಈಗಾಗಲೇ ‘ಬಾಡಿಗಾರ್ಡ್’ ‘ಏಜೆಂಟ್ ವಿನೋದ್’ ಮತ್ತು ‘ಒನ್ಸ್ ಆಫನ್ ಟೈಮ್ ಇನ್ ಮುಂಬಯಿ-೨’ಯಲ್ಲಿ ಬ್ಯುಸಿ ಇರುವ ನಟಿ. ಮಧುರ್ ಹೇಳಿದ ಕೂಡಲೇ ಚಿತ್ರಕ್ಕೆ ನಾನೇ ಹೀರೋಯಿನ್ ಆಗ್ತೀನಿ ಎಂದು ಕರೀನಾ ಒಪ್ಪಿಗೆ ಕೊಟ್ಟಿದ್ದರಂತೆ.
ಅಲ್ಲಿಗೆ, ಕರೀನಾ ಮದುವೆ ಖರ್ಚಿನ ಬಗ್ಗೆ ಅವರಪ್ಪ ತಲೆ ಕೆಡಿಸಿಕೊಳ್ಳವಂತಿಲ್ಲ ಬಿಡಿ. ಝೀರೋ ಸೈಜ್ ‘ಹೀರೋಯಿನ್’ನ ಸಂಭಾವನೆಯನ್ನೇ ಇಲ್ಲಿ ವ್ಯಯಿಸಿದರಾಯಿತು ಎನ್ನುವ ಮಾತುಗಳು ಮುಂಬಯಿಯ ಗಲ್ಲಿಯಲ್ಲಿ ಠಪೋರಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ !

ಬಾಲಿವುಡ್ನಲ್ಲಿ ಬಿಗ್ ಸಂಭಾವನೆ

* ಶಂಕರ್ ನಿರ್ದೇಶನದ ರಜನಿಕಾಂತ್ ಅಭಿನಯದ ‘ರೊಬೋಟ್’ ಚಿತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಪಡೆದುಕೊಂಡ ಸಂಭಾವನೆ ೬.೫ ಕೋಟಿ ರೂಪಾಯಿ.
* ಹ್ಯಾರಿ ಬೇವಾಜಾ ಅವರ ‘ಲವ್ ಸ್ಟೋರಿ-೨೦೫೦’ಯ ನಟನೆಗಾಗಿ ಪ್ರಿಯಾಂಕಾ ಚೋಪ್ರಾ ೧.೫ ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.
* ದೀಪಕ್ ಚೋಪ್ರಾ ನಿರ್ದೇಶನದ ‘ಹೇ ಜಿದಾಂಗೀ ಹೈ ಪ್ಯಾರ್ ಕೇ’ಯಲ್ಲಿ ಪ್ರೀತಿ ಜಿಂಟಾ ಹತ್ತು ವರ್ಷಗಳ ಹಿಂದೆ ಪಡೆದುಕೊಂಡ ಸಂಭಾವನೆ ೯೧ ಲಕ್ಷ. ಇದೇ ಚಿತ್ರಕ್ಕೆ ಕರೀನಾರ ಆಯ್ಕೆ ಕೂಡ ನಡೆದಿತ್ತು. ಹೊಸ ಮುಖ ಎಂಬ ಕಾರಣಕ್ಕೆ ಕರೀನಾ ಚಿತ್ರದಿಂದ ಹೊರಗೆ ಉಳಿದಿದ್ದರು.

Wednesday, August 10, 2011

ಡಿಸೈನಿಗೂ ಕತ್ರಿನಾ !


‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರದಲ್ಲಿ ಕತ್ರಿನಾ ಕೈಫ್ ನಟನೆಯ ಜತೆಗೆ ‘ಕತ್ತರಿ’ನೂ ಹಿಡಿತಾರೆಯಂತೆ !

ಬಾಲಿವುಡ್ ಇಂಡಸ್ಟ್ರಿಯ ಬಾರ್ಬಿ ಡಾಲ್ ಕತ್ರಿನಾ ಕೈಫ್ ಗೊತ್ತಾಲ್ಲ. ಹಿಂದಿ ಬರೋಲ್ಲ ಅಂತಾ ಹೇಳಿಕೊಂಡು ಬರೋಬರಿ ಹತ್ತು ನಿಮಿಷ ಬಿಡದೇ ಹಿಂದಿಯಲ್ಲಿ ಮಾತನಾಡಿ ದಂಗು ಮೂಡಿಸುತ್ತಿದ್ದ ಅದೇ ಹುಡುಗಿ ಇನ್ನೂ ಮುಂದೆ ತನ್ನ ಸಿನ್ಮಾಗಳಲ್ಲಿ ನಟಿಸುವ ಜತೆಯಲ್ಲಿ ತನ್ನ ಪಾತ್ರಗಳಿಗೆ ತಾನೇ ವಸ್ತ್ರವಿನ್ಯಾಸ ಮಾಡುತ್ತೇನೆ ಎಂದು ಕೂತುಬಿಟ್ಟಿದ್ದಾಳೆ.
ಈ ಮೂಲಕ ಇಷ್ಟರವರೆಗೆ ಕತ್ರಿನಾ ಸಿನ್ಮಾಗಳಿಗೆ ಡಿಸೈನ್ ಮಾಡುತ್ತಿದ್ದ ಡಿಸೈನರ್ಗಳಿಗೆ ಕತ್ರಿನಾ ಕತ್ರಿ ಕೊಡುಬಿಟ್ಟಿದ್ದಾಳೆ ಎಂದು ಮುಂಬಯಿ ಗಲ್ಲಿಯಲ್ಲಿ ಮಾತು ಹರಡಿದೆ. ಅಂದಹಾಗೆ ಕತ್ರಿನಾ ಕೈಫ್ ಸಿನ್ಮಾ ಇಂಡಸ್ಟ್ರಿಗೆ ಬರುವ ಮೊದಲು ಲಂಡನ್ನಲ್ಲಿ ಮೊಡೆಲಿಂಗ್ ಮಾಡಿಕೊಂಡಿದ್ದರು. ಬರೀ ೧೪ರ ಹರೆಯದಲ್ಲಿ ರ್ಯಾಂಪ್ ಮೇಲೆ ನಡೆದು ಸಭಿಕರನ್ನು ದಂಗು ಮೂಡಿಸಿದ್ದರು. ಲಂಡನ್ ಫ್ಯಾಶನ್ ವೀಕ್ನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಮೊಡೆಲಿಂಗ್ ಜತೆಯಲ್ಲಿ ಡಿಸೈನಿಂಗ್ ಫೀಲ್ಡ್ನಲ್ಲೂ ಕೈಯಾಡಿಸಿದ್ದರು.
ಒಂದ್ ಸಾರಿ ರ್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕುತ್ತಿದ್ದ ಕತ್ರಿನಾ ಲಂಡನ್ ಮೂಲದ ಚಿತ್ರ ನಿರ್ದೇಶಕ ಕಾಜೀದ್ರ ಕಣ್ಣಿಗೆ ಬಿದ್ದು ಬಿಟ್ಟರು. ಅಲ್ಲಿಂದ ‘ಬೂಮ್’ ಚಿತ್ರದ ಮೂಲಕ ಸಿನ್ಮಾ ಇಂಡಸ್ಟ್ರಿಗೆ ಲ್ಯಾಂಡಿಗೆ ಆದರು. ಬಾಲಿವುಡ್ ಸೇರಿದಂತೆ ಕಾಲಿವುಡ್, ಟಾಲಿವುಡ್, ಮೊಲಿವುಡ್ಗಳಲ್ಲೂ ಬೇಡಿಕೆಯ ನಟಿಯಾಗಿ ಕತ್ರಿನಾ ಮಿಂಚಿದ್ದರು. ಈಗ ನಟನೆಯ ಜತೆಯಲ್ಲಿ ತನ್ನ ಪಾತ್ರಗಳಿಗೇ ತಾನೇ ವಸ್ತ್ರ ವಿನ್ಯಾಸಕಿಯಾಗಿ ಆಗಿ ಕತ್ರಿನಾ ಬರುತ್ತಿದ್ದಾಳೆ.
ಬಾಲಿವುಡ್ನ ದೊಡ್ಡ ಬ್ಯಾನರ್ ಯಶ್ರಾಜ್ ಅಡಿಯಲ್ಲಿ ಬರುತ್ತಿರುವ ಶಾರೂಕ್ ಖಾನ್ ಅಭಿನಯದ ಚಿತ್ರದಲ್ಲಿ ಕತ್ರಿನಾ ವಸ್ತ್ರ ವಿನ್ಯಾಸದ ಕೆಲಸಕ್ಕೂ ರೆಡಿಯಾಗಿದ್ದಾಳೆ. ಈಗಾಗಲೇ ಬಿಡುಗಡೆಯ ಹಾದಿಯಲ್ಲಿರುವ ‘ಮೇರಿ ಬ್ರದರ್ ಕೀ ದುಲ್ಹಾನ್’ನ ವಸ್ತ್ರ ವಿನ್ಯಾಸಕ ರಾಕಿ ಜತೆಯಲ್ಲಿ ಕತ್ರಿನಾ ಡಿಸೈನಿಂಗ್ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಜತೆಯಲ್ಲಿ ಕ್ಲೋತ್ ಡಿಸೈನಿಂಗ್ಗೆ ಬೇಕಾದ ಅರ್ಧದಷ್ಟೂ ಬಟ್ಟೆಗಳನ್ನು ತನ್ನ ಮನೆಯಲ್ಲಿ ತಂದು ಹಾಕಿದ್ದಾರೆ.
ಡಿಸೈನರ್ ರಾಕಿಯ ನೆರವು ಕತ್ರಿನಾ ಫುಲ್ ಜೋಶ್ನಿಂದ ಯಶ್ರಾಜ್ ಬ್ಯಾನರ್ನ ಮತ್ತೊಂದು ಚಿತ್ರಕ್ಕೆ ತಾನೇ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತೇನೆಂದು ಯಶ್ರಾಜ್ ಬ್ಯಾನರ್ನ ಆದಿತ್ಯ ಚೋಪ್ರಾರಲ್ಲಿ ವಿನಂತಿಸಿಕೊಂಡಿದ್ದಾಳೆ. ಚಿತ್ರದ ನಿರ್ಮಾಪಕ ಆದಿತ್ಯನೂ ಕತ್ರಿನಾರ ಬಯಕೆಗೆ ಓಕೆ ಎಂದಿದ್ದಾರೆ. ಈ ಮೂಲಕ ಕತ್ರಿನಾ ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯ ಮೊದಲ ನಟಿ ಕಮ್ ಫ್ಯಾಶನ್ ಡಿಸೈನರ್ ಎನ್ನಿಸಿಕೊಂಡಿದ್ದಾರೆ.
‘ನಾನು ಬಾಲ್ಯದಿಂದಲೂ ಫ್ಯಾಶನ್ ಲೋಕವನ್ನು ಬಹಳ ಇಷ್ಟಪಡುತ್ತಿದ್ದೆ. ರ್ಯಾಂಪ್ ಮೇಲೆ ನಾನಾ ಡಿಸೈನರ್ಗಳ ಡಿಸೈನ್ಡ್ ಬಟ್ಟೆಗಳನ್ನು ಹಾಕುತ್ತಾ ನಡೆಯುತ್ತಿದ್ದಾಗ ನಾನು ಕೂಡ ಫ್ಯಾಶನ್ ಡಿಸೈನರ್ ಆಗಬೇಕೆಂದು ಕನಸ್ಸು ಕಾಣುತ್ತಿದೆ. ನಟನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳದಿದ್ದಾರೆ ಒಳ್ಳೆಯ ಫ್ಯಾಶನ್ ಡಿಸೈನರ್ ಆಗುತ್ತಿದ್ದೆ . ಯಶ್ರಾಜ್ರ ಮತ್ತೊಂದು ಚಿತ್ರದಲ್ಲಿ ನನ್ನ ಪಾತ್ರಗಳಿಗೆ ನಾನೇ ಡಿಸೈನ್ ಮಾಡುತ್ತಿದ್ದೇನೆ ಎಂದು ಕತ್ರಿನಾ ಕೈಫ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
‘ಜಿಂದಿಗಿ ನಾ ಮಿಲೇಗಿ ದುಬಾರಾ’ ಹಾಗೂ ‘ಮೇರಿ ಬ್ರದರ್ ಕೀ ದುಲ್ಹಾನ್’ ಚಿತ್ರದಲ್ಲಿ ಕತ್ರಿನಾ ಕೈಫ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಬಟ್ಟೆಗಳ ಕುರಿತು ತುಂಬಾ ಸಿರೀಯಸ್ ಆಗಿದ್ದಾರೆ ಎಂಬ ಸೂಚನೆ ಈ ಚಿತ್ರಗಳ ಮೂಲಕ ನೀಡಿದ್ದಾರೆ. ದೇಶಿ ಉಡುಪುಗಳ ಜತೆಯಲ್ಲಿ ವಿದೇಶಿ ಬಟ್ಟೆಗಳ ಮಿಶ್ರಣದಲ್ಲಿ ಮೂಡುವ ಬಟ್ಟೆಗಳನ್ನು ಜಾಸ್ತಿ ಲೈಕ್ ಮಾಡುವ ಕತ್ರಿನಾ ತಾನು ನಟಿಸುವ ಮುಂದಿನ ಎಲ್ಲ ಚಿತ್ರಗಳಿಗೂ ಡಿಸೈನಿಂಗ್ ಮಾಡುತ್ತಾರಾ ಎನ್ನುವುದು ಮಾತ್ರ ಇನ್ನೂ ಕೂಡ ಗೊತ್ತಾಗಿಲ್ಲ.

Monday, August 8, 2011

ಮೆಟ್ರೋದಲ್ಲಿ ‘ಕುಡ್ಲ’ ಸಿಟಿ !


ಬೆಂಗಳೂರುನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಪ್ರಕಾಶ್ ಶೆಟ್ಟಿಯ ಮ್ಯೂರಲ್ ಆರ್ಟ್ನಿಂದಾಗಿ ಬನ್ನಿ ನೋಡಿ ಬರೋಣ...

ಬೆಂಗಳೂರು ನಂತಹ ಮೆಟ್ರೋ ಸಿಟಿಯಲ್ಲಿ ನಿಂತು ಕರಾವಳಿಯ ನಾನಾ ವೈರೆಟಿಯ ಮೀನು ಹಿಡಿಯುವ ಮೊಗವೀರ ಸಮಾಜವನ್ನು ನೋಡಬಹುದು. ಕರಾವಳಿಯ ಬಂದರಿನೊಳಗೆ ಎಂದಿಗೂ ಕಾಲಿಡದ ಮಂದಿನೂ ಬಂದರಿನಲ್ಲಿ ನಡೆಯುವ ಮೀನಿನ ವ್ಯವಹಾರ ಕಾಣಬಹುದು. ಸ್ಟೇಟ್ ಬ್ಯಾಂಕ್ನ ಮುಂಭಾಗದಲ್ಲಿ ಕೂತು ಮೀನಿಗಾಗಿ ಅರಚಾಡುವ ಗಟ್ಟಿ ಮುಟ್ಟಾದ ಮಹಿಳಾ ಮಣಿಗಳ ದರ್ಶನ ಭಾಗ್ಯ ಬೆಂಗಳೂರಿನಲ್ಲಿಯೇ ಕೂತು ಪಡೆಯಬಹುದು. ಅರೇ ಇಷ್ಟೆಲ್ಲಾ ನಡೆಯಬೇಕಾದರೆ..ಬೆಂಗಳೂರಿಗೆ ಯಾವಾಗ ಕರಾವಳಿಯ ಸಮುದ್ರ ಬಂತು ಅಂತಾ ಕೇಳಬೇಡಿ ! ಇದೆಲ್ಲ ಸಾಧ್ಯವಾಗಿರೋದು ಮಾತ್ರ ಗ್ಯಾರಂಟಿ ಮಾರಾಯ್ರೆ.
ಇಡೀ ಕರಾವಳಿಯ ಪ್ರತಿಷ್ಠಿತ ವಿಚಾರಗಳೆಲ್ಲವೂ ಬೆಂಗಳೂರಿಗೆ ಬಂದು ಮುಟ್ಟಿದೆ. ನವರಾತ್ರಿ ಟೈಮ್ನಲ್ಲಿ ಕರಾವಳಿಯಲ್ಲಿ ಕಾಣಸಿಗುವ ಹುಲಿವೇಷಧಾರಿಗಳು, ನಗರದ ಹಳೇ ಚರ್ಚ್ಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್ನ ಧಾರ್ಮಿಕ ಕಾರ್ಯಗಳು, ಕರಾವಳಿಯ ಕೋಣಗಳ ಕಂಬಳ, ಕೋರಿಕಟ್ಟ(ಕಾಕ್ ಪೈಟ್), ಹಂಪನಕಟ್ಟೆಯ ಬ್ಯುಸಿ ಟ್ರಾಫಿಕ್ ಜಾಮ್, ಬಾವುಟಗುಡ್ಡೆಯಲ್ಲಿರುವ ಪಡ್ಡೆ ಹೈಕಳ ಠಾಗೋರ್ ಪಾರ್ಕ್ ಎಲ್ಲವೂ ಬೆಂಗಳೂರಿನ ಪ್ರೇಜರ್ಟೌನ್ನಲ್ಲಿರುವ ‘ಮಂಗಳೂರು ಪೆರ್ಲ್’ನಲ್ಲಿ ಮೀನು ಪ್ರೈ, ಮಸಾಲ ಅರ್ಡರ್ ಮಾಡುತ್ತಾ ಕಾರ್ಟೂನ್ ಮಜಾ ಉಡಾಯಿಸಬಹುದು.
ಇದು ಮ್ಯೂರಲ್ ಕಾರ್ಟೂನ್. ದೇವಾಲಯದಲ್ಲಿರುವ ಮ್ಯೂರಲ್ ಪೈಟಿಂಗ್ಸ್(ಗೋಡೆ ಮೇಲಿನ ರಚನೆ)ನಂತೆ ಇದೊಂದು ಹೊಸ ಪ್ರಯೋಗ. ಭಾರತದಲ್ಲಂತೂ ತುಂಬಾನೇ ಅಪರೂಪದ ಆರ್ಟ್ ಎಂದೇ ಕರೆಯಲಾಗುತ್ತದೆ. ಇಡೀ ಭಾರತದಲ್ಲಿ ಮಂಗಳೂರು ಮೂಲದ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಮಾತ್ರ ಇಂತಹ ಮ್ಯೂರಲ್ ಕಾರ್ಟೂನ್ಗಳ ಹಿಂದೆ ಬಿದ್ದಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಂತೂ ಇಂತಹ ಮ್ಯೂರಲ್ ಆರ್ಟ್ ಜಸ್ಟ್ ಸೆಕೆಂಡ್. ಮಂಗಳೂರಿನ ಪಬ್ವೊಂದರಲ್ಲಿ ಇಂತಹ ಕಾರ್ಟೂನ್ಗಳು ಗೋಡೆಯನ್ನು ಆಲಂಕರಿಸಿದ್ದು ಮಾತ್ರವಲ್ಲ ಪೆಗ್ ಏರಿಸುವವರನ್ನು ಕಾರ್ಟೂನ್ ಮೂಲಕ ನಶೆ ಏರಿಸಿದ ಪ್ರಸಂಗಗಳು ನಡೆದಿವೆ. ಈಗ ಬೆಂಗಳೂರಿನ ‘ಮಂಗಳೂರು ಪೆರ್ಲ್’ನಲ್ಲಿ ಸುಮಾರು ೧೩೦ಅಡಿ ಉದ್ದ ಹಾಗೂ ೩ ಅಡಿ ಎತ್ತರದಲ್ಲಿ ಈ ಮ್ಯೂರಲ್ ಕಾರ್ಟೂನ್ಗಳನ್ನು ಕಾಣಬಹುದು.
ಒಂದು ಲೆಕ್ಕಚಾರದ ಪ್ರಕಾರ ರಾಜ್ಯದಲ್ಲಿ ಮ್ಯೂರಲ್ ಕಾರ್ಟೂನ್ಗಳಿಗೆ ಜೀವಕೊಡುವ ಪ್ರಕಾಶ್ ಶೆಟ್ಟಿ ಹೇಳುವಂತೆ ಬಹುಶಃ ದೇಶದ ಯಾವೊಬ್ಬ ವ್ಯಂಗ್ಯ ಚಿತ್ರಕಾರನೂ ಗೋಡೆಯ ಮೇಲೆ ಬೃಹತ್ ಆಕಾರದಲ್ಲಿ ಸ್ವಯಂ ಆಗಿ ಕಾರ್ಟೂನ್ ರಚಿಸಿಲ್ಲ. ಈ ಡಿಜಿಟಲ್ ಯುಗದಲ್ಲಿ ಕಲಾವಿದರು ಬೃಹತ್ ರಚನೆಯ ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ. ಆದರೆ ನಾನೀಲ್ಲಿ ಒರಿಜಿನಲ್ ಆರ್ಟ್ಗೆ ಅದರದ್ದೇ ಆದ ಮಹತ್ವ ಇರುವುದರಿಂದ ಈ ರೀತಿಯ ಪ್ರಯೋಗಕ್ಕೆ ಇಳಿದಿದ್ದೇನೆ ಎನ್ನುತ್ತಾರೆ ಅವರು.
‘ನಾನು ಮೂಲತಃ ಮಂಗಳೂರಿನ ಕ್ಯಾಥೋಲಿಕ್ ಸಮುದಾಯದಿಂದ ಬಂದವ. ನನಗೆ ಹುಟ್ಟಿ ಬೆಳೆದ ಮಂಗಳೂರು ಇಡೀಯಾಗಿ ನನ್ನ ಹೋಟೆಲ್ನಲ್ಲಿ ತೋರಿಸಬೇಕು ಎನ್ನುವ ಕನಸ್ಸಿತ್ತು. ಪ್ರಕಾಶ್ ಶೆಟ್ಟಿ ಇಂತಹ ಮ್ಯೂರಲ್ ಕಾರ್ಟೂನ್ಗಳಿಗೆ ತುಂಬಾನೇ ಪೇಮಸ್ ಎನ್ನುವ ವಿಚಾರ ಗೊತ್ತಾದ ಕೂಡಲೇ ಅವರನ್ನು ಸಂಪರ್ಕಿಸಿ ಕಾರ್ಟೂನ್ಸ್ ಬಿಡಿಸಲು ಹೇಳಿದೆ. ಅವರು ಬ್ಯುಸಿ ಶೆಡ್ಯುಲ್ ಮಧ್ಯೆನೂ ಬಂದು ಕಾರ್ಟೂನ್ಸ್ ಬಿಡಿಸಿದ್ದಾರೆ. ಹೋಟೆಲ್ಗೆ ಭೇಟಿ ನೀಡುವವರು ಇದನ್ನು ನೋಡಿ ಮನಸ್ಸು ಪೂರ್ತಿ ನಗಲಿ ಎನ್ನುವುದು ನನ್ನ ಉದ್ದೇಶ’ ಎನ್ನುತ್ತಾರೆ ಮಂಗಳೂರು ಪೆರ್ಲ್ ಮಾಲೀಕ ಸ್ಟೀವನ್ ಪಿಂಟೋ.
ಬೆಂಗಳೂರಿನ ನೂರಾರು ಹೋಟೆಲ್ಗಳ ನಡುವೆ ‘ಮಂಗಳೂರು ಪೆರ್ಲ್’ ತನ್ನ ಕ್ರೇಜಿ ಐಡಿಯಾದಿಂದ ಡಿಪರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ ಎನ್ನುವುದು ಗಮನಿಸಬೇಕಾದ ವಿಷ್ಯಾ. ಟೋಟಲಿ ಪ್ರಕಾಶ್ ಶೆಟ್ಟರು ಕ್ಯಾನ್ವಾಸ್ ಬಿಟ್ಟು ಗೋಡೆಗಳಿಗೆ ಜೋರಾಗಿ ಅಂಟಿಬಿಟ್ಟಿದ್ದಾರೆ ಎನ್ನಬಹುದು ಅಲ್ವಾ..? ಸೊರಗಿ ಹೋಗುತ್ತಿರುವ ವ್ಯಂಗ್ಯಚಿತ್ರಕಲೆಯನ್ನು ಶೆಟ್ಟರು ಈ ರೀತಿ ಬಳಸುತ್ತಿರುವುದರಂದ ಅದರ ಮೌಲ್ಯ ಹೆಚ್ಚಾಗುತ್ತಿದೆ ಎಂಬುದಕ್ಕೆ ಯಾವುದೇ ಡೌಟ್ ಉಳಿದಿಲ್ಲ.

Sunday, August 7, 2011

‘ನಿಖಿಲ್’ ಅದ್ವಾನ !



ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಮಾಡಿದ ಮೂರು ಚಿತ್ರಗಳಲ್ಲಿ ಪಠಿಸಲು ಸಿಗಲೇ ಇಲ್ಲ. ಆದರೂ ಮತ್ತೆ ಫೀನಿಕ್ಸ್ ಹಕ್ಕಿಯಂತೆ ‘ಡೆಲ್ಲಿ ಸಫಾರಿ’ಯಲ್ಲಿ ಬರುತ್ತಿದ್ದಾರೆ.

ಒಂದಲ್ಲ ಎರಡಲ್ಲ ಬರೋಬರಿ ಮೂರು ಚಿತ್ರಗಳು ಬಾಲಿವುಡ್ ಪಡಸಾಲೆಗೆ ಇಳಿದು ವಾರ ಮುಗಿಯುವುದರೊಳಗೆ ಡಬ್ಬಾ ಪೆಟ್ಟಿಗೆ ಸೇರಿ ಹೋಯಿತು. ಆದರೂ ಸಿನ್ಮಾ ನನ್ನ ಖಯಾಲಿ ಮಾಡಿಯೇ ಸಿದ್ಧ. ಸತತ ಸೋಲು ಗೆಲುವಿನ ಹಾದಿಗೆ ಮುನ್ನುಡಿ ಎಂದುಕೊಂಡು ಈಗಲೂ ಬಾಲಿವುಡ್ ಬಿಡದ ಹುಡುಗ ನಿರ್ದೇಶಕ ನಿಖಿಲ್ ಅಡ್ವಾನಿ.
ಈಗ ಯಾಕೋ ೩ಡಿ ಸಿನ್ಮಾ ಇಟ್ಟುಕೊಂಡು ಮುಂಬಯಿಗೆ ಮತ್ತೆ ಬಂದು ನಿಂತಿದ್ದಾರೆ. ಚಿತ್ರ ಬಾಕ್ಸಾಫೀಸ್ನಲ್ಲಿ ಗೆಲುತ್ತಾ ಇಲ್ಲವೇ ಮಕಾಡೆ ಬಿದ್ದು ನರಳುತ್ತಾ ಎನ್ನುವುದು ಕಾದು ನೋಡಬಹುದು. ಆದರೆ ನಿಖಿಲ್ ಅಡ್ವಾನಿ ಎಂಬ ಹುಡುಗನ ಕತೆ ಮಾತ್ರ ಎಲ್ಲೂ ಕೇಳಿಸಲು ಸಿಗೋಲ್ಲ. ನಿಖಿಲ್ ಅಡ್ವಾನಿ ನಿಜಕ್ಕೂ ಲಕ್ಕಿಬಾಯ್. ಬಾಲಿವುಡ್ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ನ ಅಡಿಯಲ್ಲಿ ‘ಕುಚ್ ಕುಚ್ ಹೋತಾ ಹೈ’, ‘ಕಬೀ ಕುಷಿ ಕಬೀ ಗಮ್’ನಂತಹ ಚಿತ್ರಗಳಿಗೆ ಸಹ ನಿರ್ದೇಶಕನ ಸ್ಥಾನದಲ್ಲಿ ಕೂತು ಕೆಲಸ ಮಾಡುವ ಅವಕಾಶ ನಿಖಿಲ್ಗೆ ಒಳಿದಿತ್ತು.
ಆದರೆ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಬಂದ ‘ಕಲ್ ಹೋ ನಾ ಹೋ’ ತನ್ನ ನಿರ್ದೇಶನದ ಚಿತ್ರ ಬಾಲಿವುಡ್ನಲ್ಲಿ ಯಾರ್ರಾ ಬಿರ್ರಿ ಹಿಟ್ ಅನ್ನಿಸಿಕೊಂಡಿದ್ದೆ ತಡ ನಿಖಿಲ್ ಒಂದೇ ಬಾರಿ ಸ್ಟಾರ್ ನಿರ್ದೇಶಕನ ಪಟ್ಟಕ್ಕೆ ಸೂಟೇಬಲ್ ವ್ಯಕ್ತಿ ಅನ್ನಿಸಿಕೊಂಡರು.
ಆದರೆ ಯಾಕೋ ಗೊತ್ತಿಲ್ಲ . ನಿಖಿಲ್ ನಂತರ ನಿರ್ದೇಶನ ಮಾಡಿದ ‘ಸಲಾಂ-ಇ- ಈಷ್ಕ್’ ದೊಡ್ಡ ಸ್ಟಾರ್ ನಟರ ದಂಡೇ ಇತ್ತು. ಬರೋಬರಿ ಎರಡು ವಾರಗಳ ಓಟ ಆರಂಭ ಮಾಡುತ್ತಿದ್ದಾಗಲೇ ಥಿಯೇಟರ್ಗೆ ಪ್ರೇಕ್ಷಕ ಮಾತ್ರ ಬರಲಿಲ್ಲ ಎಂದುಕೊಂಡು ಚಿತ್ರ ಅಲ್ಲಿಂದ ಥಿಯೇಟರ್ ಮಾಲೀಕರು ಸಿನ್ಮಾವನ್ನು ಎತ್ತಿಬಿಟ್ಟ್ರು. ೨೦೦೯ರಲ್ಲಿ ಮತ್ತೊಂದು ಪ್ರಯತ್ನ ಮಾಡಿಬಿಡೋಣ ಎಂದುಕೊಂಡು ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಇರುವ ‘ಚಾಂದಿನಿ ಚೌಕ್ ಟು ಚೈನಾ’ ಚಿತ್ರ ನಿರ್ದೇಶನ ಮಾಡಿಬಿಟ್ಟ್ರು ನಿಖಿಲ್ ಅಲ್ಲೂ ಗೆಲುವು ಕೈ ಕೊಟ್ಟಿತ್ತು.
ಎರಡು ವರ್ಷಗಳ ನಂತರ ಮತ್ತೊಂದು ಚಿತ್ರ ‘ಪಾಟಿಯಾಲ ಹೌಸ್’ ಬಂತು. ಅಕ್ಷಯ್ ಕುಮಾರ್ ಈ ಕಾಲದಲ್ಲಿ ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅಂತಹ ನಟನ ಜತೆಯಲ್ಲಿ ಅನುಷ್ಕಾ ಶರ್ಮ ನಟಿಸಿದರೂ ಚಿತ್ರ ಆರಂಭದಲ್ಲಿಯೇ ಮುಗ್ಗರಿಸಿ ಬಿತ್ತು. ಅಲ್ಲೂ ಯಶಸ್ಸು ಎಂಬ ಮಂತ್ರ ನಿಖಿಲ್ ಅಡ್ವಾನಿಗೆ ಪಠಿಸಲು ಸಿಗಲೇ ಇಲ್ಲ. ನಿಖಿಲ್ ಅಡ್ವಾನಿ ಬಾಲಿವುಡ್ ಮಂದಿಗೆ ಮಾತ್ರ ಐರಾನ್ಲೆಗ್ಯಾಗಿ ಉಳಿದು ಹೋದರು.
ಡೆಲ್ಲಿಗೆ ಸಫಾರಿ:
೨೦೦೮ರಲ್ಲಿ ಬಾಲಿವುಡ್ ಇಂಡಸ್ಟ್ರಿಯೇ ೩ಡಿ ಸಿನ್ಮಾಗಳಿಗೆ ಕೈ ಹಾಕದ ಟೈಮ್ನಲ್ಲಿ ನಿಖಿಲ್ ‘ಡೆಲ್ಲಿ ಸಫಾರಿ’ ಎನ್ನುವ ೩ಡಿ ಚಿತ್ರ ನಿರ್ಮಾಣ, ನಿರ್ದೇಶನ ಮಾಡುವ ಕನಸ್ಸು ಕಂಡಿದ್ದರು. ೨೦೦೮ರಲ್ಲಿ ಆರಂಭವಾದ ‘ಡೆಲ್ಲಿ ಸಫಾರಿ’ ಚಿತ್ರ ನಿರ್ಮಾಣ ಕಾರ್ಯ ಈಗ ಪೂರ್ತಿಯಾಗಿದೆ. ಆಗಸ್ಟ್ ತಿಂಗಳ ಕೊನೆ ಭಾಗದಲ್ಲಿ ‘ಡೆಲ್ಲಿ ಸಫಾರಿ’ ಸಿನ್ಮಾ ಥಿಯೇಟರ್ಗಳಿಗೆ ಏಕ್ದಂ ನುಗ್ಗಲಿದೆ. ಒಂದು ಲೆಕ್ಕಚಾರದ ಪ್ರಕಾರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ೩ಡಿ ಸಿನ್ಮಾ ನಿರ್ದೇಶನ ಮಾಡುತ್ತಿರೋದು ನಿಖಿಲ್ ಅಡ್ವಾನಿ ಮೊದಲಿಗರು.
ಚಿತ್ರದ ಪ್ರಮುಖ ಪಾತ್ರಗಳಿಗೆ ಬಾಲಿವುಡ್ನ ಸ್ಟಾರ್ ನಟರಾದ ಅಕ್ಷಯ್ ಖನ್ನಾ, ಗೋವಿಂದ, ಸುನಿಲ್ ಶೆಟ್ಟಿ, ಬೊಮ್ಮನ್ ಇರಾನಿ, ಉರ್ಮಿಳಾ ಮಾಂತೋಡ್ಕರ್ ಧ್ವನಿಗೂಡಿಸಿದ್ದಾರೆ. ಪರಿಸರ ನಾಶದ ಕುರಿತಾಗಿ ಬೋರಿವಿಲಿಯ ಅರಣ್ಯದಲ್ಲಿರುವ ೫ ಪ್ರಾಣಿಗಳು ಮುಂಬಯಿಯಿಂದ ದಿಲ್ಲಿಯಲ್ಲಿರುವ ರಾಜಕಾರಣಿಗಳಿಗೆ ಪರಿಸರ ನಾಶದ ಕುರಿತಾಗಿ ಮನವಿ ಕೊಡುವ ಸಾರಾಂಶ ಹೊಂದಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಶಂಕರ್-ಎಸಾನ್- ಲಾಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಮೀರ್ ಲೇಖನಿಯಿಂದ ಒಳ್ಳೆಯ ಹಾಡುಗಳು ಮೂಡಿದೆ.
ಆದರೆ ಇಂತಹ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರಾ..? ನಿಖಿಲ್ ಈ ಚಿತ್ರದ ಮೂಲಕವಾದರೂ ಗೆದ್ದು ಬರುತ್ತಾರಾ..? ಎಂಬ ಪ್ರಶ್ನೆಗಳ ಮೂಟೆ ಚಿತ್ರ ನೋಡುವ ಎಲ್ಲರಲ್ಲೂ ಇದೆ. ಆದರೆ ಈ ಚಿತ್ರ ಕೈ ಕೊಟ್ಟರೆ ನಿಖಿಲ್ ಅಡ್ವಾನಿ ಏನೂ ಮಾಡುತ್ತಾರೆ ಗೊತ್ತಾ? ಮತ್ತೊಂದು ಬಾಲಿವುಡ್ ಚಿತ್ರ ಮಾಡಿ ದಂಗು ಮೂಡಿಸುತ್ತಾರೆಯಂತೆ ! ಇದು ಖುದ್ದು ನಿಖಿಲ್ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದ ಮಾತು. ಅದೇ ಕಣ್ರಿ ಸೋಲುವ ಹುಡುಗ ಮತ್ತೆ ಮತ್ತೆ ಕನಸ್ಸುಗಳ ಮೂಲಕ ಗೆಲ್ಲಲು ಹೊರಟಿರೋದು ಗಮನಿಸಬೇಕಾದ ವಿಷ್ಯಾ.

Friday, August 5, 2011

ಸಂಪಾದಕರ ಮೇಜಿನಿಂದ ‘ರೇಗೊ’ ಬರೆಯುತ್ತಾರೆ


‘ರೇಗೊ ಬಾಲ್ಕನಿ’ ನನ್ನ ಬ್ಲಾಗ್ ಸಖತ್ ಹಿಟ್ ಆಗುತ್ತಿದೆ. ಈಗಾಗಲೇ ೫ ಸಾವಿರದ ಓಟ ಮುಗಿಸಿ ಇನ್ನೂ ಓಡುತ್ತಿದೆ. ನಿಲ್ಲುವ ಮಾತೇ ಕೇಳುತ್ತಿಲ್ಲ. ಬ್ಲಾಗ್ ಹಿಟ್ ಆಗುತ್ತಿರೋ ಖುಷಿ ಒಂದು ಕಡೆಯಾದರೆ ಬ್ಲಾಗ್ ನೋಡಿ ಮೊಬೈಲ್ ಡಯಲ್ ಮಾಡುವ ಸಂಖ್ಯೆನೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲರಿಗೂ ಥ್ಯಾಂಕ್ಸ್ ...ಇನ್ನೂ ಇಂತಹ ಹತ್ತಾರು ಶುಭ ಹಾರೈಕೆಗಳ ಎಸ್ಎಂಎಸ್ಗಳು ನನ್ನ ಮೊಬೈಲ್ನ ಇನ್ಬಾಕ್ಸ್ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ. ಎಲ್ಲವನ್ನು ಇಲ್ಲಿ ಕೊಟ್ಟಿಲ್ಲ. ಕೆಲವೇ ಕೆಲವು ಇಲ್ಲಿ ಕೊಟ್ಟಿದ್ದೇನೆ ಉಳಿದವುಗಳು ನಂತರದ ದಿನಗಳಲ್ಲಿ ಬ್ಲಾಗ್ನಲ್ಲಿ ತುಂಬಿಸಿಬಿಡುತ್ತೇನೆ.

ನಿಮ್ಮವ
ಸ್ಟೀವನ್ ರೇಗೊ, ದಾರಂದಕುಕ್ಕು


‘ಎದುರಿಗೆ ಸಿಕ್ಕಾಗ ಮಾತಾಡೋ ಥರವೇ ಬರಹದ ಮೂಲಕ ಓದುಗರನ್ನು ಮುತ್ತುವ ನಿಮ್ಮ ಶೈಲಿ ಬಹಳ ಇಷ್ಟವಾಯಿತು. ಗ್ಲಾಮರ್ ಜಗತ್ತಿನ ಹೊರತ್ತಾಗಿ ನಿಮ್ಮ ಸುತ್ತಲಿರುವ ಇಂಟೆರೆಸ್ಟಿಂಗ್ ವಿಷ್ಯಾಗಳ ಮೇಲೆ ಹೆಚ್ಚು ಬೆಳಕು ಚೆಲ್ಲಿ ಇದೊಂದು ನನ್ನ ಕೋರಿಕೆ.
- ಸುರೇಶ್ ಕೆ.
ಹಿರಿಯ ಸಿನಿಮಾ ಪತ್ರಕರ್ತರು ಬೆಂಗಳೂರು
-

‘ರೇಗೊ ನಿಮ್ಮ ಸ್ಟೋರಿಗಳು ನನಗೆ ಬಹಳ ಲೈಕ್ ಆಗುತ್ತಿದೆ. ಬಣ್ಣದ ಲೋಕದಲ್ಲಿ ತೆರೆಮರೆಗೆ ಸರಿದವರನ್ನು ಹುಡುಕಿ ಬರೆಯುವ ನಿಮ್ಮ ಪ್ರಯತ್ನ ನನಗೆ ಖುಷಿ ಕೊಡುವ ವಿಷ್ಯಾ. ನಿಮ್ಮ ಬರಹದಲ್ಲಿ ಮಾತನಾಡಿಸುವ ಶೈಲಿ ಇದೆ. ಶ್ರೀಸಾಮಾನ್ಯನಿಗೂ ಅದು ಇಷ್ಟವಾಗುತ್ತದೆ. ಅದೇ ನಿಮ್ಮ ಸಕ್ಸಸ್ ಮಂತ್ರ.
- ಗಣೇಶ್ ಕಾಸರಗೋಡು
ಹಿರಿಯ ಸಿನಿಮಾ ಪತ್ರಕರ್ತ, ಬೆಂಗಳೂರು
-

‘ಮಂಗಳೂರಿನಲ್ಲಿ ನಿಂತು ಹೇಗೆ ಅಷ್ಟೊಂದು ಸ್ಟೋರಿ ಮಾಡುತ್ತೀರಿ..? ಬೆಂಗಳೂರು ಕಡೆ ಬಂದುಬಿಡಿ. ನಿಮ್ಮ ಬರಹದ ಶೈಲಿ ನನಗೆ ಮೆಚ್ಚುಗೆಯಾಗಿದೆ’
- ವಾಸು,
ಹಿರಿಯ ಸಿನಿಮಾ ಪತ್ರಕರ್ತ, ಬೆಂಗಳೂರು


‘ಮಗಾ ಬ್ಲಾಗ್ ಸಖತ್ ಉಂಟು ಮಾರಾಯ. ಕುಡ್ಲದಲ್ಲಿ ಕೂತು ಮೆಟ್ರೋ ಸಿಟಿಗೆ ಲಗ್ಗೆ ಹಾಕುವ ನಿನ್ನ ಸ್ಟೋರಿಗಳು ನನಗೆ ಬಹಳ ಇಷ್ಟ. ಲವಲವಿಕೆ ನೋಡುವಾಗ ನಿನ್ನದೇ ಮುಖ ಬಂದು ಬಿಡುತ್ತದೆ.
- ರವಿ ಪ್ರಕಾಶ್ ರೈ
ಸಿನಿಮಾ ಪತ್ರಕರ್ತ, ಬೆಂಗಳೂರು

ನನ್ನ ಪತ್ರಿಕೆ ನನ್ನ ಬರಹ-9



( vk daily lvk puravani published dis article on 05.08.2011)

Monday, August 1, 2011

ನೀವಿನ್ನೂ ಈ ‘ಬಾಲ್ಕನಿ’ ಗೆ ಬಂದಿಲ್ಲವೇ?


ಬಾಲ್ಕನಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ? ಕನ್ನಡ ಬ್ಲಾಗ್
ಲೋಕದಲ್ಲೊಂದು ಅಂತಹ ಒಂದು ಬಾಲ್ಕನಿ ಇದೆ.
ಅದಕ್ಕೆ ‘ರೇಗೊ ಬಾಲ್ಕನಿ’ ಎಂಬ ಹೆಸರಿದೆ. ಇಲ್ಲಿ ನಿಂತುಕೊಂಡರೆ
ನಮಗೆ ಕಾಣುವುದು ಓಹ್!....ಅಬ್ಬ!.... ಅಹುದೇನೋ!....
ಅನ್ನುವಂತಹ ಕುತೂಹಲಕಾರಿ ವಿಷಯಗಳೇ. ನಿಜ, ಈ ಬ್ಲಾಗ್ನಲ್ಲಿ
ಕಣ್ಣರಳಿಸಿ ಓದಿಸಿಕೊಂಡು ಹೋಗುವ ಬರಹಗಳಿವೆ.
‘ರೇಗೊ ಬಾಲ್ಕನಿ’ ಯ ವಾರಸುದಾರರು ಬೇರಾರೂ ಅಲ್ಲ. ‘ವಿಜಯ
ಕರ್ನಾಟಕ’ ದಿನಪತ್ರಿಕೆಯಲ್ಲಿ ಆಗಾಗ ‘ಸ್ಟೈಲಿಶ್’ ಆಗಿ ಬರೆಯುವ
ಸ್ಟೀವನ್ ರೇಗೊ. ವಿ.ಕ. ದ ಓದುಗರಲ್ಲದವರು, ವಿ.ಕ.ದ
ಓದುಗರಾಗಿದ್ದು ಓದಲು ಮರೆತವರು, ವಿದೇಶಿ ಕನ್ನಡಿಗರು,
ಎಲ್ಲರೂ ಈ ‘ಬಾಲ್ಕನಿ’ಯಲ್ಲಿ ಬಂದು ನಿಂತರೆ ಸಾಕು.
ಸ್ಟೀವನ್ ರ ವಿಶೇಷ ಏನೆಂದರೆ ಮಂಗಳೂರಿನಲ್ಲಿದ್ದುಕೊಂಡೇ
ಮಂಗಳೂರು ಮೂಲದ, ಹೊರನಾಡಲ್ಲಿ ಖ್ಯಾತರಾದವರನ್ನು
ಹೆಕ್ಕಿ ಅವರ ಬಗ್ಗೆ ಸಮಸ್ತ ಕನ್ನಡಿಗರಿಗೂ ಇಷ್ಟವಾಗುವಂತೆ
ಬರೆಯುತ್ತಾರೆ. ಹಾಗೇ ಅವರ ಬರಹಗಳು ‘ಲೋಕಲೈಸ್ಡ್
ಐಟಂ’ ಅಂತ ತಪ್ಪಿಸಿಕೊಂಡು ಭಲೇ ಅನ್ನಿಸಿ ಬಿಡುತ್ತವೆ.
ಅಂದ ಹಾಗೇ ‘ರೇಗೋ ಬಾಲ್ಕನಿ’ ಬಗ್ಗೆ ಬರೆಯಲು ಇವಷ್ಟೇ
ಕಾರಣವಲ್ಲ. ಹುಟ್ಟಿದ ಐದೇ ತಿಂಗಳಲ್ಲಿ
ಭರ್ಜರಿ ಜನಪ್ರಿಯತೆ ಪಡೆದಿದೆ. ಅಂದರೆ ಬರೋಬ್ಬರಿ ೫೦೦೦
ನೋಡುಗರ ಸಂಖ್ಯೆಗೆ ಮುಟ್ಟಿದೆ! ಕನ್ನಡದ ಮಟ್ಟಿಗೆ ಇದು
ಸಾಧಾರಣ ಸಾಧನೆಯೇನಲ್ಲ. ನಮ್ಮ ಬಾಕಿ ಪತ್ರಕರ್ತತಲೆಗಳ ನಡುವೆ ಭಿನ್ನವಾಗಿ
ನಿಲ್ಲುವ ಸ್ಟೀವನ್ ರೇಗೋರ ಬಾಲ್ಕನಿಗೆ ಬರುವವರು
ಜಾಸ್ತಿಯಾಗುತ್ತಲೇ ಹೋಗಬಹುದು. ಸ್ಟೀವನ್ ಅವರ
ಉತ್ಸುಕತೆಯೂ ಹಾಗೇ ಏರುತ್ತಲೇ ಹೋಗಬೇಕು.

*ಪ್ರಕಾಶ್ ಶೆಟ್ಟಿ, ವ್ಯಂಗ್ಯಚಿತ್ರಕಾರರು.
( ಇದು ‘ರೇಗೊ ಬಾಲ್ಕನಿಯ’ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ತಮ್ಮ ಬ್ಲಾಗ್ ‘ಪ್ರಕಾಶ್ ಶೆಟ್ಟಿ ಪಂಚ್’ನಲ್ಲಿ ಹೇಳಿಕೊಂಡಿದ್ದಾರೆ. ಜತೆಯಲ್ಲಿ ನನ್ನ ಕ್ಯಾರಿಕೇಚರ್ ಕೂಡ ಕಳುಹಿಸಿದ್ದಾರೆ.)