Monday, October 31, 2011

ಟಾಲಿವುಡ್ಡಿನಲ್ಲಿ ಮತ್ತೆ ನಾಯಕ ಲವರ್ ಬಾಯ್ ಸುಮನ್ !


ಪಂಚಭಾಷೆ ತಾರೆ ಸುಮನ್ ಈ ವಯಸ್ಸಿನಲ್ಲೂ ಲವ್ ಮಾಡಲು ಹೊರಟ್ಟಿದ್ದಾರೆ. ಸುಮನ್‌ಗೆ ಮದುವೆಯಾಗಿದೆ.. ಮುದ್ದಾದ ಮಗಳಿದ್ದಾರೆ. ಆದರೂ ಲವ್ವಾ.. ಮಾರಾಯ್ರೆ ಅಂತೀರಾ..? ಬನ್ನಿ ಸುಮನ್ ಹಾಡು- ಪಾಡು ಇಲ್ಲಿ ಕೇಳಿಬಿಡಿ.

ಪ್ರೀತಿ ಚಿಗೋರೋದು ಗೊತ್ತಿಲ್ಲ. ಮುರುಟಿ ಬೀಳೋದು ಗೊತ್ತಿಲ್ಲ. ವಿಶೇಷ ಅಂದ್ರೆ ಪ್ರೀತಿಗೆ ಯಾವುದೇ ಆರ್ಹತೆ ಎನ್ನುವ ತಡೆಗೋಡೆಗಳಿಲ್ಲ. ಶ್ರೀಮಂತ-ಬಡವ, ವಯಸ್ಸು- ಜಾತಿ ಯಾವುದು ಕೂಡ ಪ್ರೀತಿ ಮಾಡುವವನ ಕಣ್ಣಿಗೆ ಬೀಳೋದಿಲ್ಲ. ಅಲ್ಲಿ ಕಾಣೋದು ಬರೀ ಪ್ರೀತಿ. ಈ ಪ್ರೀತಿಯ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ಅವರೇ ಪಂಚಭಾಷೆ ತಾರೆ ಸುಮನ್ ತಲ್ವಾರ್.

ಅಂದಹಾಗೆ ಸುಮನ್ ಈಸ್ ಎ ಜೆಮ್ ಪರ್ಸನ್ ಎನ್ನುವ ವಿಚಾರ ಇಡೀ ಭಾರತೀಯ ಸಿನ್ಮಾ ಇಂಡಸ್ಟ್ರಿಗೇ ಗೊತ್ತಿದೆ. ಸುಮನ್ ಶ್ರೀಷಾ ಅವರನ್ನು ಮದುವೆಯಾಗಿ ಮುದ್ದಾದ ಮಗಳು ಅಖಿಲಾಚಾ ಪ್ರತ್ಯುಶಾ ಅವರೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಈ ಟೈಮ್‌ನಲ್ಲಿ ಲವ್ವಿ-ಡವ್ವಿನ ಅಂತಾ ಪ್ರಶ್ನೆ ಮಾತ್ರ ಎಸೆಯಲು ಹೋಗಬೇಡಿ. ಸುಮನ್ ತಲ್ವಾರ್ ಲವ್‌ನಲ್ಲಿ ಬೀಳುತ್ತಾರೆ ನಿಜ. ಆದರೆ ಅದು ರಿಯಲ್ ಬದುಕಿನಲ್ಲಿ ಅಲ್ಲ. ರೀಲ್ ಬದುಕಿನಲ್ಲಿ ಸುಮನ್ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದು ಕೂತಿದ್ದಾರೆ. ೫೦ರ ಹರೆಯದಲ್ಲಿ ಸುಮನ್ ಸ್ಪುರದ್ರೂಪಿ ನಟ ಮತ್ತೆ ಹೀರೋವಾಗಿ ರೀಲಾಂಜ್ ಆಗುತ್ತಿದ್ದಾರೆ.

ತೆಲುಗಿನ ಇನ್ನೂ ಹೆಸರಿಟ್ಟಿಲ್ಲದ ಚಿತ್ರದಲ್ಲಿ ಸುಮನ್ ಪಕ್ಕಾ ಲವರ್‌ಬಾಯ್ ಆಗಲು ಹೊರಟ್ಟಿದ್ದಾರೆ. ಇದು ಸುಮನ್ ತಲ್ವಾರ್ ವಿಲನ್ ಗೆಟಪ್‌ನಿಂದ ಹೀರೋ ಗೆಟಪ್‌ಗೆ ಶಿಪ್ಟ್ ಆಗುತ್ತಿರುವ ಚಿತ್ರ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಚಿತ್ರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿ ಹೊಸ ರೆಕಾರ್ಡ್ ಬರೆಯಬಹುದಾದ ಚಿತ್ರವಂತೆ. ಇಲ್ಲಿ ಸುಮನ್ ಒಬ್ಬರೇ ಪುರುಷ. ಉಳಿದ ಎಲ್ಲ ಸ್ಟಾರ್ ಕಾಸ್ಟ್‌ಗಳು ಮಹಿಳಾ ಮಣಿಗಳು. ಅದು ನಿರ್ದೇಶಕರಿಂದ ಹಿಡಿದು ಕಟ್ಟಕಡೆಯ ಕಾಸ್ಟ್ಯೂಮ್ ಡಿಸೈನರ್ ವರೆಗೂ ಮಹಿಳೆಯರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಮೊದಲು ತಮಿಳು ಸಿನ್ಮಾದಲ್ಲೊಂದು ನಿರ್ದೇಶಕಿ ರೇವತಿ ಇಂತಹ ಪ್ರಯತ್ನ ಮಾಡಿದ್ದರು. ಅಲ್ಲಿ ಯಾರು ಕೂಡ ಪುರುಷರು ಇರಲಿಲ್ಲ. ಆದರೆ ತೆಲುಗಿನ ಈ ಚಿತ್ರದಲ್ಲಿ ಸುಮನ್ ಇದ್ದಾರೆ. ಈಗ ಈ ಚಿತ್ರ ಕೂಡ ರೆಕಾರ್ಡ್ ಅಬೇಲ್ ಚಿತ್ರವಾಗಲಿದೆ ಎಂಬ ಮಾತು ಬಿಸಿಲು ನಾಡಿನ ಆಂಧ್ರದಿಂದ ಹೊರ ಬಂದ ಮಾಹಿತಿ.ಕಳೆದ ವಾರವಷ್ಟೇ ಚಿತ್ರಕ್ಕೆ ಹೈದರಾಬಾದ್‌ನ ಪ್ರಖ್ಯಾತ ರಾಮನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ಮಾಡಲಾಗಿದೆ.

ಖುದ್ದು ರಾಮನಾಯ್ಡು ಬಂದು ಕ್ಯಾಮೆರಾ ಚಾಲು ಮಾಡಿದ್ದರು. ಆಂಧ್ರದ ನಾನಾ ಕಡೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರಕ್ಕೆ ತೆಲುಗು ಪ್ರೇಕ್ಷಕರೇ ಹೆಸರು ಸೂಚಿಸಿಬಿಡಿ ಎಂದು ಆಂಧ್ರದ ಬಹುತೇಕ ಮಾಧ್ಯಮಗಳಲ್ಲಿ ಚಿತ್ರ ತಂಡ ಜಾಹೀರಾತು ನೀಡುತ್ತಿದೆ. ವರ್ಷದ ಕೊನೆಯಲ್ಲಿ ಚಿತ್ರವಂತೂ ತೆರೆಗೆ ಬರೋದು ನೂರಕ್ಕೆ ನೂರರಷ್ಟು ಖಚಿತ ಎನ್ನೋದು ಚಿತ್ರ ತಂಡದ ಭರವಸೆಯ ಮಾತು.

ಸುಮನ್ ತಲ್ವಾರ್ ಹೇಳುವಂತೆ: ಚಿತ್ರದಲ್ಲಿ ಎರಡನೇ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ೫೦ರ ಹರೆಯದಲ್ಲಿ ಲವರ್ ಬಾಯ್ ಪಾತ್ರ. ಪ್ರೀತಿಗೆ ವಯಸ್ಸಿನ ಬ್ಯಾರಿಯರ್ ಇರೋದಿಲ್ಲ ಎಂದುಹೇಳಿಕೊಳ್ಳುವ ಈ ಚಿತ್ರ ಯುವಜನತೆಗೆ ಒಂದು ಹೊಸ ಸಂದೇಶ ಕೊಡುತ್ತದೆ. ನನ್ನ ಪಾಳಿಗೆ ಇದು ಸೆಕೆಂಡ್ ಚಾನ್ಸ್. ಮೊದಲು ತಮಿಳಿನ ‘ಶಿವಾಜಿ’ ಚಿತ್ರದಲ್ಲಿ ಸಿಕ್ಕಿದ ವಿಲನ್ ಪಾತ್ರ ಬಣ್ಣದ ಬದುಕಿಗೆ ಹೊಸ ಟರ್ನಿಂಗ್ ಪಾಯಿಂಟ್ ಕೊಟ್ಟಿತು. ಈ ಚಿತ್ರ ಮತ್ತೊಂದು ಟರ್ನಿಂಗ್ ಪಾಯಿಂಟ್ ಕೊಡುತ್ತದೆ ಎನ್ನೋದು ಅವರ ಭರವಸೆಯ ಮಾತು.

ಅಂದಹಾಗೆ ಸುಮನ್ ತಲ್ವಾರ್ ಈಗಾಗಲೇ ತೆಲುಗಿನಲ್ಲಿ ನೂರಕ್ಕೂ ಅಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ಇಂಗ್ಲೀಷ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದ ಸುಮನ್ ತಮ್ಮ ವೃತ್ತಿ ಬದುಕಿನ ಸೆಕೆಂಡ್ ಹಾಫ್‌ನಲ್ಲಿ ವಿಲನ್ ಪಾತ್ರಕ್ಕೆ ಒಗ್ಗಿಕೊಂಡರು. ಈಗ ತಮ್ಮ ಮೂರನೇ ಅವತಾರದಲ್ಲಿ ನಾಯಕರಾಗುತ್ತಿದ್ದಾರೆ.

ತೆಲುಗಿನಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೆ ಒಂದು ಕಾಲದಲ್ಲಿ ಚಿರಂಜೀವಿಯ ಜತೆಯಲ್ಲಿ ತೊಡೆತಟ್ಟಿ ಹೋರಾಡಿದ ಸುಮನ್ ಮಂಗಳೂರಿನ ಮೂಲ್ಕಿ-ಹೆಜಮಾಡಿನವರು. ವರ್ಷದಲ್ಲಿ ಒಂದರೆಡು ಬಾರಿ ತಮ್ಮ ಊರಿಗೆ ಬಂದು ನಾಗ ದೇವರಿಗೆ ಕೈ ಮುಗಿದು ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಹೆಚ್ಚೆಚ್ಚು ನಟಿಸಬೇಕೆನ್ನುವ ಮಹಾದಾಸೆ ಹೊತ್ತುಕೊಂಡವರು. ಆದರೆ ಕನ್ನಡ ಸಿನ್ಮಾ ಇಂಡಸ್ಟ್ರಿಯವರು ಮಾತ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಇದು ಮಹಾ ದುರಂತವೇ ಸರಿ ಅಲ್ವಾ..?

Sunday, October 30, 2011

ನನ್ನ ಪತ್ರಿಕೆ ನನ್ನ ಬರಹ-31



(vk daily nk main page lead story on 31.10.2011)

ಬಾಜಿ ಕಟ್ಟುವ ಬನ್ಸಾಲಿ


ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಕಳೆದ ೭ ವರ್ಷಗಳಿಂದ ಈ ಚಿತ್ರ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಆದರೂ ಚಿತ್ರವಂತೂ ಇನ್ನೂ ತೆರೆಗೆ ಬರುವ ಮಾತು ಕೇಳ್ತಿಲ್ಲಾವಂತೆ.. ಏನ್ ಕತೆ ಅಂತ್ತೀರಾ..?

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಳೆದ ೭ ವರ್ಷಗಳಿಂದ ಚಿತ್ರದ ಹೆಸರೊಂದು ಬಹಳವಾಗಿ ಕಿವಿಗೆ ಬಡಿಯುತ್ತಿದೆ. ಆದರೆ ಚಿತ್ರವಂತೂ ಈಗಲೂ ತೆರೆಗೆ ಬಂದಿಲ್ಲ ಅನ್ನೋದು ಬೇರೆ ವಿಷ್ಯಾ. ಅಂದಹಾಗೆ ಚಿತ್ರ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಓಡಾಡಿಕೊಂಡಿದ್ದ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೆ ಎಂಬ ಸುದ್ದಿ ಹರಡಿಕೊಂಡಿತ್ತು. ಆದರೆ ಈಗ ಸಲ್ಲುಗೆ ಕಾದು ಸುಸ್ತಾದ, ಬನ್ಸಾಲಿ, ಸಲ್ಮಾನ್‌ನ ಬದ್ಧ ವೈರಿ ಶಾರೂಖ್‌ಗೆ ಗಾಳ ಹಾಕಿದ್ದಾರಂತೆ !
ಬನ್ಸಾಲಿ ೨೦೦೩ರಲ್ಲಿ ಈ ಸಿನಿಮಾವನ್ನು ಘೋಷಿಸುವುದರೊಂದಿಗೆ ಅಂದಿನ ಹಾಟ್ ಜೋಡಿಯಾದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಟಿಸಲಿದ್ದಾರೆಂದೂ ಹೇಳಿದ್ದರು. ಆದರೆ ಯಾರ ಅದೃಷ್ಟ ಕೈ ಕೊಟ್ಟಿತೋ ಗೊತ್ತಿಲ್ಲ, ಸಲ್ಲು-ಐಶು ಜೋಡಿ ಬೇರೆಯಾಗಿ ಬಿಟ್ಟಿತು. ನಂತರ ೨೦೦೫ರಲ್ಲಿ ಕರೀನಾ ಕಪೂರ್ ಹಾಗೂ ಸಲ್ಮಾನ್ ನಟಿಸಲಿದ್ದಾರೆಂಬ ಸುದ್ದಿಯೂ ಬಂತು. ಆದರೆ ಕರೀನಾ ಆ ಆಫರ್‌ನ್ನು ತಿರಸ್ಕರಿಸಿದಳು. ನಂತರ ಮಸ್ತಾನಿ ಪಾತ್ರವನ್ನು ರಾಣಿ ಮುಖರ್ಜಿ ಮಾಡಲಿದ್ದಾಳೆ ಎನ್ನುವುದರೊಂದಿಗೆ ಆ ಸಿನಿಮಾ ಸುದ್ದಿ ತಣ್ಣ ಗಾಯಿತು.
ಆ ಮೇಲೆ ಬನ್ಸಾಲಿ ಸಾಹೇಬ್ರು ‘ಸಾವರಿಯಾ’ ಹಾಗೂ ‘ಗುಜಾರೀಶ್’ ಸಿನಿಮಾಗಳು ಬಂದು ಹೋಯಿತು. ಈಗ ಮತ್ತೆ ‘ಬಾಜಿರಾವ್ ಮಸ್ತಾನಿ’ಗೆ ಜೀವ ಕಳೆ ಬಂದಿದೆ. ಸಲ್ಲು ಕಡೆಯಿಂದ ಈ ಸಿನಿಮಾದ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲದೇ ಬೇಸತ್ತ ಬನ್ಸಾಲಿ ಶಾರೂಖ್‌ಗೆ ಕಥೆ ಹೇಳಲು ಮುಂದಾಗಿದ್ದಾರೆ. ಈಗಾಗಲೇ ಶಾರೂಖ್‌ನನ್ನು ಸಂಪರ್ಕಿಸಿದ್ದಾರಂತೆ. ಅದಕ್ಕೆ ಶಾರುಖ್ ಕಡೆಯಿಂದ ಕೂಡ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ ಎನ್ನೋದು ಆಪ್ತ ಮೂಲವೊಂದರಿಂದ ಬಂದ ಮಾತು.
ಹಾಗೆ ನೋಡಿದರೆ ಶಾರೂಖ್ ಖಾನ್‌ಗೂ, ಬನ್ಸಾಲಿಗೂ ೨೦೦೭ರಲ್ಲೊಮ್ಮೆ ಮನಸ್ತಾಪ ಉಂಟಾಗಿತ್ತು. ಏಕೆಂದರೆ ಬನ್ಸಾಲಿಯವರ ‘ಸಾವರಿಯಾ’ ಹಾಗೂ ಶಾರೂಖ್‌ನ ‘ಓಂ ಶಾಂತಿ ಓಂ’ ಒಂದೇ ದಿನ ಅಂದರೆ ೨೦೦೭ ನವೆಂಬರ್ ೯ರಂದೇ ತೆರೆಗೆ ಬಂದಿತ್ತು. ಆ ಸಮಯದಲ್ಲಿ ಚಿತ್ರವನ್ನು ಮುಂದಕ್ಕುವಂತೆ ಶಾರೂಖ್ ಬನ್ಸಾಲಿಗೆ ಹೇಳಿದರೂ ಅವರು ಕೇಳಲಿಲ್ಲ. ಆ ನಂತರ ಇತ್ತೀಚೆಗೆ ತೆರೆಕಂಡ ‘ಗುಜಾರೀಶ್’ ಸಿನಿಮಾ ಸಮಯದಲ್ಲಿ ಪ್ಯಾಚ್‌ಅಪ್ ಆಯಿತು.
‘ಗುಜಾರೀಶ್’ ಸಿನಿಮಾ ನೋಡಿದ ಶಾರೂಖ್, ಬನ್ಸಾಲಿಯವರನ್ನು ಮನೆಗೆ ಕರೆದು ಬೆನ್ನುತಟ್ಟುವ ಮೂಲಕ ಇಬ್ಬರು ರಾಜಿಯಾಗಿದ್ದರು. ಆ ರಾಜಿಯ ಫಲವೇ ಈ ಸಿನಿಮಾಕ್ಕೆ ನಾಂದಿ ಎನ್ನಲಾಗುತ್ತಿದೆ. ‘ಬಾಜಿರಾವ್ ಮಸ್ತಾನಿ’ ಮರಾಠ ರಾಜನೊಬ್ಬನ ಸ್ಟೋರಿ. ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಈಗ ಚಿತ್ರ ಸರಿಯಾಗಿ ತೆರೆಗೆ ಬರುತ್ತಾ ಎನ್ನೋದು ಡಾಲರ್ ಪ್ರಶ್ನೆಯಾಗಿ ಮುಂದೆ ನಿಂತಿದೆ.

ಪೋಕಿರಿ ಮಹೇಶನ ಹುಡುಗಿ ನಮ್ರತಾ !


ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ತೆಲುಗಿನ ಪೋಕಿರಿ, ದೂಕುಡು ಚಿತ್ರದ ಪ್ರಿನ್ಸ್ ಮಹೇಶ್ ಬಾಬುಗಾಗಿ ಚಿತ್ರರಂಗವನ್ನು ತೊರೆದು ಸತಿ ಸಾವಿತ್ರಿಯಾಗಲು ಹೊರಟ್ಟಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಕೋಲು ಮುಖ. ಯಾರನ್ನೋ ಹುಡುಕಾಟದಲ್ಲಿರುವ ಸುಂದರ ಕಣ್ಣುಗಳು. ತುಟಿ ತುಂಬಿ ಬಿಡದ ನಗು ಎಲ್ಲವೂ ಒಟ್ಟು ಸೇರಿಸಿ ಹೇಳುವುದಾದರೆ ನಮ್ರತಾ ಶಿರೋಡ್ಕರ್ ತಕ್ಕಮಟ್ಟಿಗೆ ಗ್ಲಾಮ್ ಜತೆಯಲ್ಲಿ ದೇಸಿ ತಡ್ಕಾ ಹುಡುಗಿ. ಅಂದಹಾಗೆ ನಮ್ರತಾ ಇಷ್ಟ ಪಟ್ಟುಕೊಂಡು ಸಿನ್ಮಾ ಲ್ಯಾಂಡ್‌ಗೆ ಬಂದವರು ಅಲ್ಲ. ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ಅಂದಹಾಗೆ ನಮ್ರತಾ ಹೇಳಿಕೊಳ್ಳುವಂತೆ ಆಕ್ಟಿಂಗ್ ಘರಾಣಾದಲ್ಲಿ ಹುಟ್ಟಿ ಬೆಳೆದು ನಿಂತ ಬಾಲೆ.
ಖ್ಯಾತ ಮರಾಠಿ ನಟಿ ಮೀನಾಕ್ಷಿ ಶಿರೋಡ್ಕರ್ ನಾವು ಹೇಳ ಹೊರಟಿರುವ ನಮ್ರತಾರ ಅಜ್ಜಿ. ಮೀನಾಕ್ಷಿ ಬ್ರಹ್ಮಚಾರಿ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಬಂದು ಜೋರಾಗಿ ಹೆಸರು ಮಾಡಿಕೊಂಡಿದ್ದರು. ಜತೆಗೆ ಸ್ವಿಮ್ಮಿಂಗ್ ಸೂಟ್ ಧರಿಸಿ ಈಜು ಕೊಳದಲ್ಲಿ ಮಿಂದು ಬರುವ ತಾಕತ್ತು ತೋರಿಸಿದ ದಿಟ್ಟೆ ನಾಯಕಿಯ ಮೊಮ್ಮಗಳು ಎನ್ನುವ ಕಾರಣಕ್ಕೆ ಸಿನ್ಮಾ ಜಗತ್ತು ನಮ್ರತಾರನ್ನು ಒಂದು ನಾಯಕಿಯಾಗಿ ಕಂಡಿತ್ತು.
೧೯೯೮ರಲ್ಲಿ ಸನ್ಮಾನ್ ಖಾನ್ ಹಾಗೂ ಟ್ವಿಂಕಲ್ ಖನ್ನಾ ನಟಿಸಿದ ಚಿತ್ರ ‘ಜಬ್ ಪ್ಯಾರ್ ಕೈಸೇ ಹೋತಾ ಹೈ’ಯ ಮೂಲಕ ನಮ್ರತಾ ಬಣ್ಣದ ಜಗತ್ತಿಗೆ ಅಬ್ಬೆಕಾಲ್ಟಿಟಳು. ಸಂಜಯ್ ದತ್ ಜತೆಯಲ್ಲಿ ‘ವಾಸ್ತವ್’ ಚಿತ್ರದ ಮೂಲಕ ನಮ್ರತಾ ನಾಯಕಿಯ ಇಮೇಜ್ ಉಳಿಸಿಕೊಂಡರು ಎನ್ನುವುದು ಸಿನ್ಮಾ ವಿಮರ್ಶಕರು ಹೇಳಿಕೊಳ್ಳುವ ಮಾತು. ಯಾಕೋ ಗೊತ್ತಿಲ್ಲ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಸಿನ್ಮಾ ನಗರಿಯ ಜನ ನಮ್ರತಾರನ್ನು ಬರೀ ಪೋಷಕ ಪಾತ್ರಕ್ಕೆ ಮಾತ್ರ ಸೀಮಿತ ಮಾಡಿಬಿಡುವ ಪರಂಪರೆ ಬೆಳೆಯಿತು. ನಮ್ರತಾ ಎಲ್ಲ ಪೋಷಕ ಪಾತ್ರಗಳಿಗೆ ಜೀವ ತುಂಬಿ ಮಾಡುತ್ತಿರುವುದರಿಂದ ಅಂತಹ ಪಾತ್ರಗಳಿಗೆ ಖಾಯಂ ಗಿರಾಕಿಯಾಗಿ ಹೋದರು.
ಒಂದು ವರ್ಷ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದು ಚಿತ್ರಗಳನ್ನು ಒಪ್ಪಿಕೊಂಡು ಬಾಲಿವುಡ್‌ನಲ್ಲೂ ಹೇಳಿಕೊಳ್ಳುವಂತಹ ಚಿತ್ರಗಳನ್ನು ಕೊಡದೇ ಅಲ್ಲಿಂದ ಹೊರಬಿದ್ದು ಮಲಯಾಳಂ, ತೆಲುಗು, ತಮಿಳು, ಕನ್ನಡ ಚಿತ್ರಗಳತ್ತ ನಮ್ರತಾ ಗಮನ ಹರಿಯಿತು. ಮಲಯಾಳಂನಲ್ಲಿ ಮಮ್ಮುಟ್ಟಿ, ತೆಲುಗಿನಲ್ಲಿ ಚಿರಂಜೀವಿ, ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕೆಲವೊಂದು ನಾಯಕರ ಜತೆ ಕಾಣಿಸಿಕೊಂಡು ಕೊನೆಗೆ ಬಂದು ಬಿದ್ದದ್ದು ನಟ ಮಹೇಶ್‌ಬಾಬು ಅವರ ತೆಕ್ಕೆಗೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲಿಕ್ಕಿಲ್ಲ.
ಏನಪ್ಪಾ ಕತೆ ಅಂದ್ರೆ ೨೦೦೦ರಲ್ಲಿ ತೆಲುಗಿನಲ್ಲಿ ಬಂದ ‘ವಂಶಿ ’ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆಯಲ್ಲಿ ನಮ್ರತಾ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಪ್ರೇಮ ಹುಟ್ಟಿತು. ೨೦೦೫ರ ಪೆಬ್ರವರಿಯಲ್ಲಿ ಇಬ್ಬರ ವಿವಾಹ ಕೂಡ ನಡೆದು ಹೋಯಿತು. ಈಗ ನಮ್ರತಾ ಪ್ರಿನ್ಸ್ ಮಹೇಶ್‌ರ ಜತೆ ಪುತ್ರ ಗೌತಮ್ ಕೃಷ್ಣ ಲಾಲನೆ- ಪಾಲನೆ ನೋಡಿಕೊಂಡು ಚಿತ್ರ ನಗರಿಯಿಂದ ಅಡುಗೆ ಮನೆಯಲ್ಲಿ ಸೆಟ್ಲ್ ಆಗಿ ಹೋಗಿದ್ದಾರೆ. ಕಳೆದ ಆರು ವರ್ಷಗಳಿಂದ ನಮ್ರತಾ ಸಿನ್ಮಾ ಲ್ಯಾಂಡ್‌ಗೆ ಸರಿಯಾಗಿ ಮುಖ ಮಾಡಿಲ್ಲ. ಮಾಧ್ಯಮಗಳ ಜತೆಯಲ್ಲೂ ಕಣ್ಣು ಮುಚ್ಚಾಳೆಯಾಡುವ ನಮ್ರತಾ ಪತಿರಾಯ ಪ್ರಿನ್ಸ್ ಮಹೇಶ್ ಬಾಬುರ ಕುರಿತು ಸಿಕ್ರೇಟ್ಸ್ ಮಾತನ್ನು ಮಾಧ್ಯಮವೊಂದರ ಮುಂದೆ ಆಡಿದ್ದಾರೆ. ಓವರ್ ಟೂ ನಮ್ರತಾ ಮೇಡಂ..
ಪೋಕಿರಿ ಹುಡುಗ ಮಹೇಶ:
ತೆಲುಗು ಸಿನ್ಮಾದ ಸೂಪರ್‌ಸ್ಟಾರ್ ಮಹೇಶ್‌ಬಾಬು ತುಂಬಾ ಸಿಂಪಲ್ ಮನುಷ್ಯ ಎನ್ನೋದು ನಮ್ರತಾರ ಮಾತು. ಹೈದರಾಬಾದ್‌ನಲ್ಲಿ ನಡೆಯುವ ಪೇಜ್-೩ ಪಾರ್ಟಿಗಳಂತೂ ಅವರಿಬ್ಬರೂ ಕಾಣಿಸಿಕೊಳ್ಳುವುದು ಕಡಿಮೆ. ಮನೆಯಲ್ಲಿ ಗೌತಮ್ ಜತೆ ಇರೋದು ಇಬ್ಬರಿಗೂ ಬಹಳ ಖುಷಿಯಂತೆ. ಪುತ್ರ ಗೌತಮ್ ಎಂದರೆ ಮಹೇಶ್‌ಬಾಬುವಿಗೆ ಬಹಳ ಇಷ್ಟವಂತೆ. ಗೌತಮ್ ಹೇಳಿದ ಎಲ್ಲ ಮಾತುಗಳನ್ನು ಚಾಚು ತಪ್ಪದೇ ಮಹೇಶ್ ಪಾಲಿಸುತ್ತಾರೆ. ಗೌತಮ್ ಈಗಾಗಲೇ ತಂದೆಯ ಹತ್ತಿರ ಕಾರು ಕೇಳಿದ್ದ ಅದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದರು. ಆದರೆ ನಾನು ಬಂದು ಅಡ್ಡ ನಿಂತು ಬಿಟ್ಟೆ ಎನ್ನೋದು ನಮ್ರತಾರ ಮಾತು.
ಮಹೇಶ್ ಚಿತ್ರ ರಂಗವನ್ನು ಅತೀಯಾಗಿ ಪ್ರೀತಿಸುತ್ತಾರೆ. ಅವರಿಗೆ ಕುಟುಂಬಕ್ಕಿಂತ ಮೊದಲು ಚಿತ್ರರಂಗ. ಅದಕ್ಕಾಗಿ ಈಗಲೂ ತೆಲುಗು ಸಿನ್ಮಾದಲ್ಲಿ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ವಿವಾಹಕ್ಕಿಂತ ಮೊದಲು ಮಹೇಶ್‌ರ ಬಣ್ಣದ ಬದುಕು ಏರಿಳಿತಗಳಿಂದ ಕೂಡಿತ್ತು. ಆದರೆ ವಿವಾಹದ ನಂತರ ಯಾವಾಗಲೂ ಹಿಟ್ ಸಿನ್ಮಾಗಳನ್ನೇ ಕೊಡುತ್ತಾ ಹೋದರು ಎನ್ನುವುದು ನಮ್ರತಾ ಮಹೇಶ್‌ರ ಬಾಕ್ಸಾಫೀಸ್ ಹಿಟ್‌ಗಳ ಕುರಿತು ಕೊಡುವ ಸಮಜಾಯಿಸಿ.
ನಮ್ರತಾ ಆಕ್ಟಿಂಗ್ ಫೀಲ್ಡ್‌ಗೆ ಮತ್ತೆ ಬರೋದಿಲ್ಲ ಕಾರಣ ಆಕ್ಟಿಂಗ್ ಹಾಗೂ ಕುಟುಂಬ ಎರಡನ್ನು ಒಟ್ಟಾಗಿ ಸಾಗಿಸುವುದು ತುಂಬಾ ಕಷ್ಟವಂತೆ. ಇತ್ತೀಚಿನ ಬಾಲಿವುಡ್ ನಾಯಕಿಯರ ಬಗ್ಗೆ ನಮ್ರತಾರಿಗೆ ಬಹಳ ಬೇಸರವಿದೆ. ಸರಿಯಾಗಿ ಹಿಂದಿ ಬಾರದ ಹುಡುಗಿಯರು ಬಾಲಿವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದು ಸರಿಯಲ್ಲ ಎನ್ನೋದು ನಮ್ರತಾ ಮೇಡಂರ ವಾದ. ಟೋಟಲಿ ಮಹೇಶ್‌ಬಾಬು ಜತೆಯಲ್ಲಿ ಸುಖವಾಗಿ ಬದುಕು ಮಾಡುವುದು ಮಾತ್ರ ನನ್ನ ಬದುಕಿನ ಮುಂದಿರುವ ಕನಸ್ಸು ಎನ್ನುವ ನಮ್ರತಾ ಬಣ್ಣದ ನಗರಿಯಲ್ಲಿ ಮಿಂಚೊಂದನ್ನು ತರಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಯಾವಾಗಲೂ ಜತೆಯಲ್ಲಿ ಇರುತ್ತದೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ.

Saturday, October 29, 2011

ಬಾಕ್ಸಾಫೀಸ್‌ನಲ್ಲಿ ಬಿದ್ದು ಹೋದ ರಾ.ವನ್


ಬಾಲಿವುಡ್‌ನ ಈ ವರ್ಷದ ಅತೀ ನಿರೀಕ್ಷಿತ ಚಿತ್ರ ರಾ.ವನ್‌ನಲ್ಲಿ ಪಾಪ್ ಗಾಯಕ್ ಎಕಾನ್ ‘ಚಮಕ್ ಚಲ್ಲೋ ’ ಎಂದು ಹಾಡಿ ಕುಣಿದಿದ್ದು ಎಲ್ಲರಿಗೂ ಗೊತ್ತು. ಆದರೆ ರಾ.ವನ್ ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆದು ಬಿಡುವ ಭಯದಿಂದ ಶಾರೂಕ್ ಚಿತ್ರದ ಪೋಸ್ಟ್ ರಿಲೀಸ್‌ಗಾಗಿ ಪಾಪ್ ಗಾಯಕಿ ಲೇಡಿ ಗಾಗಾರನ್ನು ಕರೆದುತಂದಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಬಾಲಿವುಡ್‌ನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಚಿತ್ರ ‘ರಾ.ವನ್’ ಗಲ್ಲಾ ಪೆಟ್ಟಿಗೆಯಲ್ಲಿ ಪಲ್ಟಿ ಹೊಡೆಯುವ ಸೂಚನೆ ಕೊಡುವ ರಿಪೋರ್ಟ್ ಕಾರ್ಡ್‌ವೊಂದು ಮೊದಲ ವಾರದ ಆರಂಭದಲ್ಲಿಯೇ ಬಂದು ಬಿಟ್ಟಿದೆ. ರಾ.ವನ್ ಚಿತ್ರ ನೋಡಿ ಬಂದ ಪ್ರೇಕ್ಷಕರು ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ವಿಷ್ಯಾವಿಲ್ಲ. ಚಿತ್ರದ ತುಂಬಾ ಓಡಾಡುವ ನವೀನ ತಂತ್ರಜ್ಞಾನದ ಮುಂದೆ ಕತೆ ಪೇಲವ ಅನ್ನಿಸಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ಚಿತ್ರ ಬರೀ ಮಕ್ಕಳ ವಯಸ್ಸಿಗೆ ಓಕೆ ಅಂದುಬಿಟ್ಟಿದ್ದಾರೆ.
ಆದರೆ ಕೋಟಿ ಕೋಟಿಗೆ ಮಾರಾಟವಾಗಿರುವ ಚಿತ್ರದ ಸ್ಯಾಟಲೈಟ್ ರೈಟ್ಸ್‌ಗಳು, ಹಾಡುಗಳು, ಪ್ರಾಯೋಜಕತ್ವದಿಂದ ಬಂದ ಹಣವೆಲ್ಲ ಚಿತ್ರ ಬಾಕ್ಸಾಫೀಸ್‌ನಲ್ಲಿ ಬೀಳುವ ಮೊದಲೇ ಶಾರೂಖ್ ಬಾಚಿಕೊಂಡಿದ್ದಾರೆ. ಚಿತ್ರ ಬಿಡುಗಡೆ ಕಂಡ ನಂತರ ಚಿತ್ರದ ಪ್ರಮೋಶನ್‌ಗಾಗಿ ರಾ.ವನ್ ಚಿತ್ರದ ಸೂಪರ್ ಹೀರೋಗಳನ್ನು ಹೋಲಿಕೆಯಾಗುವ ಅಟಿಕೆ ಸಾಮಗ್ರಿಗಳನ್ನು ತಂದು ಮಾರುಕಟ್ಟೆಗೆ ಸುರಿದು ಬಿಟ್ಟಿರುವ ಶಾರೂಖ್‌ಗೆ ಈಗ ಚಿತ್ರ ಓಡುತ್ತದೋ ಎನ್ನುವ ಭಯ ಹುಟ್ಟಿದೆ.
ಚಿತ್ರದಲ್ಲಿ ಕರೀನಾ, ಅರ್ಜುನ್ ರಾಂಪಾಲ್ ನಟನೆಯ ವಿಚಾರದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎನ್ನುವ ಅಂಶ ಬೆಳಕಿಗೆ ಬರುವ ಜತೆಯಲ್ಲಿ ಪಾಪ್ ಗಾಯಕ ಎಕಾನ್‌ರ ‘ಚಮಕ್ ಚಲ್ಲೋ’ ಹಾಡೊಂದು ಪದೇ ಪದೇ ಕೇಳುವಂತೆ ಮಾಡುತ್ತಿದೆ. ಶಾರೂಖ್‌ನ ಸೂಪರ್ ಹೀರೋ ಪಾತ್ರ ಮಕ್ಕಳ ವಲಯದಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಚಿತ್ರದಲ್ಲಿ ಒಂದು ಉತ್ತಮ ಕತೆ ಮಿಸ್ ಆಗಿರುವುದು ಕೇವಲ ವಿಡಿಯೋ ಗೇಮ್‌ನಿಂದ ಹೊರ ಬರುವ ಪಾತ್ರದಿಂದ ಚಿತ್ರ ನಡೆಯುವ ವಿಚಾರದಲ್ಲಿ ಪ್ರೇಕ್ಷಕರು ಚಿತ್ರದ ಮೇಲೆ ಮುನಿಸು ತೋರಿಸಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಶಾರೂಖ್ ಖಾನ್‌ರ ಟೇಬಲ್‌ಗೆ ಬಂದು ಬಿಟ್ಟಿದೆ.
ರೆಡ್‌ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಅತೀ ಹೆಚ್ಚು ೧೭೫ ಕೋಟಿ ರೂ. ಬಜೆಟ್‌ನ ರಾ.ವನ್ ಚಿತ್ರ ಬಿದ್ದು ಹೋಗುವ ಮುನ್ನ ಶಾರೂಖ್ ಬಾಕ್ಸಾಫೀಸ್‌ನಲ್ಲಿ ಚಿತ್ರವನ್ನು ಏನಾದರೂ ಮಾಡಿ ಗೆಲ್ಲಿಸಿ ಬಿಡಬೇಕೆನ್ನುವ ಹಟಕ್ಕೆ ಬಿದ್ದು ಬಿಟ್ಟಿದ್ದಾರೆ. ಅದಕ್ಕಾಗಿ ಚಿತ್ರದ ಪ್ರಮೋಶನ್‌ಗಾಗಿ ಮತ್ತೆ ಕೆಲವು ಕೋಟಿ ರೂ. ಸುರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆಪ್ತ ವಲಯದಿಂದ ಬಂದ ಮಾಹಿತಿ. ಎಕಾನ್‌ರ ಹಾಡು ಯಾವ ರೀತಿಯಲ್ಲಿ ರಾ.ವನ್ ಚಿತ್ರದ ಓಟಕ್ಕೆ ನೆರವು ನೀಡುತ್ತಿದೆಯೋ ಅದರಂತೆ ಚಿತ್ರ ಬಿಡುಗಡೆಯ ನಂತರ ಅದರ ಓಡಾಟಕ್ಕೆ ನೆರವು ನೀಡಲು ಇನ್ನೊಬ್ಬ ಪಾಪ್ ಗಾಯಕಿ ಲೇಡಿ ಗಾಗಾರನ್ನು ಹೊತ್ತು ತರುವ ಯೋಜನೆಯೊಂದು ಬಾಲಿವುಡ್‌ನಲ್ಲಿ ನಡೆಯುತ್ತಿದೆ.
ಎಕಾನ್ ಹಾಡಿದ ‘ಚಮಕ್ ಚಲ್ಲೋ’ ಹಾಡನ್ನು ಲೇಡಿ ಗಾಗಾ ಚಿತ್ರ ಬಿಡುಗಡೆಯಾದ ನಂತರ ಹಾಡಲಿದ್ದಾರೆ. ಅದಕ್ಕಾಗಿ ಶಾರೂಖ್ ಹಾಗೂ ಲೇಡಿ ಗಾಗಾ ಒಂದು ಸುತ್ತಿನ ಮಾತುಕತೆಯನ್ನು ಮುಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಸಂಗೀತ ನಿರ್ದೇಶಕರಾದ ವಿಶಾಲ್ ಶೇಖರ್ ಲೇಡಿ ಗಾಗಾರಿಗೆ ಟ್ಯೂನ್‌ವೊಂದನ್ನು ರೆಡಿ ಮಾಡಿಕೊಂಡು ನಿಂತಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿದೆ. ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಈ ಹಾಡನ್ನು ಚಿತ್ರದಲ್ಲಿ ಸೇರಿಸಿಕೊಳ್ಳುವ ನಿರ್ಧಾರಕ್ಕೂ ಬಂದು ನಿಂತಿದ್ದಾರೆ. ಅಂದಹಾಗೆ ಎರಡು- ಮೂರು ವಾರದಲ್ಲಿ ರಾ.ವನ್ ಚಿತ್ರದ ಪ್ರಮೋಶನಲ್ ಹಾಡಿನಲ್ಲಿ ಲೇಡಿ ಗಾಗಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಬೆಳೆದು ನಿಂತಿದೆ. ಆದರೆ ಇಬ್ಬರ ಡೇಟ್ಸ್‌ಗಳು ಹೊಂದಾಣಿಕೆಯಾಗದ ಕಾರಣ ಈ ಹಾಡು ಚಿತ್ರದಲ್ಲಿ ಬರಲು ಕೊಂಚ ಟೈಮ್ ಹಿಡಿಯುವ ಚಾನ್ಸು ಇದೆ ಎನ್ನುವುದು ಅನುಭವ್‌ರ ಮಾತು. ರಾ.ವನ್ ಚಿತ್ರ ಲೇಡಿ ಗಾಗಾರ ಹಾಡಿನ ಮೂಲಕವೇ ಹಿಟ್ ಆಗುತ್ತೋ ಕಾದು ನೋಡಬೇಕು ಅಲ್ವಾ..?

Monday, October 24, 2011

ಕರಾವಳಿಯಲ್ಲಿ ನಂದಿನಿ ಮಾಯ !


ನಂದಿನಿ ಅವಳು ನಮ್ಮವಳು ಎನ್ನದ ಕರಾವಳಿಗರಿಲ್ಲ. ಕನಕಗಿರಿಯಿಂದ ಹಿಡಿದು ಸಸಿಹಿತ್ಲುವಿನ ತನಕ ಅಂಕುಡೊಂಕು ವೈಯಾರದಿಂದ ಓಡಾಡಿಕೊಂಡಿರುವ ನಂದಿನಿ ಭವಿಷ್ಯದ ಪುಟದಲ್ಲಿ ಮರೆಯಾಗಿ ಹೋಗುತ್ತಾಳಾ..? ನಂದಿನಿಯ ಓಡಾಟಕ್ಕೆ ಧಕ್ಕೆ ಮಾಡಿದವರಾರು..? ಈ ಪ್ರಶ್ನೆಗೆ ಉತ್ತರದ ಹುಡುಕಾಟ ಇಲ್ಲಿ ನಡೆದಿದೆ.

ಸರಾಗವಾಗಿ ಹರಿದಾಡುವ ಒಂದು ನದಿ ಹಲವು ನಾಗರಿಕತೆಯ ಉಗಮಕ್ಕೆ ಕಾರಣ ಎನ್ನುವ ಮಾತನ್ನು ಇತಿಹಾಸದ ನೂರಾರು ಪುಟಗಳು ಬಾಯಿ ಬಡಿದುಕೊಂಡು ಹೇಳುತ್ತಿದೆ. ದೇಶದ ಬಹುತೇಕ ನಾಗರಿಕತೆಗಳು ನದಿ ತಟದಲ್ಲಿ ಬೆಳೆದು, ವಿನಾಶ ಹಾದಿಯನ್ನು ಹಿಡಿದುಕೊಂಡ ಉದಾಹರಣೆಗಳಿವೆ. ಇಂತಹವುಗಳ ನಡುವೆ ಕರಾವಳಿಯ ನಂದಿನಿ ಬಂದು ನಿಂತುಬಿಟ್ಟಿದ್ದಾಳೆ. ಕರಾವಳಿಯ ಪುಟ್ಟ ನದಿ ನಂದಿನಿಯ ಅಧ್ಯಾಯ ಕೊನೆಗೊಳ್ಳುತ್ತದೆ ಎನ್ನುವ ಭಯ ಈಗ ದಟ್ಟವಾಗಿ ಹುಟ್ಟಿಕೊಂಡಿದೆ.
ಅಂದಹಾಗೆ ಇಲ್ಲಿ ಒಂದು ಭವ್ಯವಾದ ನಾಗರಿಕತೆ ಎದ್ದು ನಿಂತಿಲ್ಲ. ಆದರೂ ಪ್ರತಿನಿತ್ಯ ಸಾವಿರಾರು ಮಂದಿ ನಂದಿನಿಯ ಕೃಪಾಕಟಾಕ್ಷದಿಂದ ಬದುಕು ಕಟ್ಟುತ್ತಿದ್ದಾರೆ. ನಂದಿನಿ ನದಿ ಕಟೀಲು ದೇವಸ್ಥಾನದ ಉಗಮಕ್ಕೆ ಕಾರಣವಾದರಿಂದ ಅವಳಿಗೊಂದು ಪ್ರತ್ಯೇಕವಾದ ಗೌರವ ಭಾವನೆ ಕರಾವಳಿಗರ ಮನಸ್ಸಿನಲ್ಲಿದೆ.
೪೦ ಕಿ.ಮೀ.. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ನದಿ ಉಗಮವಾಯಿತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತಾ ಮೂಚ್ಚುರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಹರಿಯುವ ನಂದಿನಿ ಕಡಲಿಗೆ ಸೇರಿ ಮುಕ್ತಿ ಕಾಣುತ್ತಾಳೆ.
ನಂದಿನಿ ಎಂಬ ಜೀವ ಜಲ:
ಒಂದು ಲೆಕ್ಕಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಬರೋಬರಿ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನಿ ಉದ್ದ ೪೦ ಕಿ.ಮೀ. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ. ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.
ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು,ಗುಂಡಾವು,ನೀರ್‌ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು,ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗೆ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತದೆ.
ಹಾಡು ಮಿಜಾರು ವಿಷ್ಣು ಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿದೆ.
ಯಾರಿಗೆ ಹೇಳೋದು ಪ್ರಾಬ್ಲಂ:
ಅಂದಹಾಗೆ ನಂದಿನಿಯಲ್ಲಿ ಈಗ ಸಮಸ್ಯೆಗಳು ಕಾಣಲು ಆರಂಭವಾಗಿದೆ. ಪಾವಂಜೆ,ಚಿತ್ರಾಪು, ಕೊಳವೈಲು, ಸಸಿಹಿತ್ಲು, ಮುಂಡ ಸೇರಿದಂತೆ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಖಾಂಡ್ಲಾ ಗಿಡಗಳು ನದಿಯ ಹರಿವನ್ನು ಬದಲಾಯಿಸಲು ಹೊರಟಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳು ನದಿಯ ಆಳವನ್ನು ಕಡಿಮೆ ಮಾಡುತ್ತಾ ಬಂದಿದೆ. ನದಿ ಭೂಮಿ ಅತ್ರಿಕ್ರಮಣ ಸಮಸ್ಯೆಯಿಂದ ನಂದಿನಿ ತನ್ನ ಹರಿವಿಕೆಯ ಪಥವನ್ನು ಮುಂಡದಲ್ಲಿ ಬದಲಾಯಿಸಿಕೊಂಡಿದೆ. ನಂದಿನಿಯ ಓಡಾಟದ ಪ್ರದೇಶಗಳಲ್ಲಿ ನದಿಯನ್ನು ಕಟ್ಟಿಹಾಕುವ ಪ್ರಯತ್ನಗಳು ನಿರಂತರವಾಗಿ ಮುಂದುವರಿದರ ಪಲವಾಗಿ ನಂದಿನಿಯ ಭವಿಷ್ಯ ಕತ್ತಲಿನಲ್ಲಿ ಮುಳುಗಿದೆ.
ನದಿ ಭೂಮಿ ಅತಿಕ್ರಮಣ, ಖಾಂಡ್ಲಾ ಗಿಡಗಳ ತೊಂದರೆ, ನದಿಯ ಹೂಳೆತ್ತಲು ಇರುವ ಸಮಸ್ಯೆಗಳು ನಂದಿನಿಯ ಭವಿಷ್ಯ ಮುಂದಿನ ಕೆಲವು ವರ್ಷಗಳಲ್ಲಿ ಮುಗಿದು ಹೋಗುತ್ತದೆ ಎನ್ನುವುದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್ ಅವರ ಮಾತು. ಅವರು ಹೇಳುವಂತೆ ‘ ನದಿ ಭೂಮಿ ಅತಿಕ್ರಮಣ ಮಾಡುವ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಮುಂದೆ ದೂರು ಕೊಟ್ಟಿದ್ದೇವೆ. ಖಾಂಡ್ಲಾ ಗಿಡಗಳನ್ನು ತೆಗೆಯುವಂತೆ ಈ ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೂ ಅರಣ್ಯ ಇಲಾಖೆ ಅದನ್ನು ಗಮನಕ್ಕೆ ತಂದುಕೊಂಡಂತೆ ಇಲ್ಲ. ಈ ಖಾಂಡ್ಲಾದಿಂದ ಅಲ್ಲಿಯೇ ಕಸಕಡ್ಡಿ, ಮಣ್ಣು ಸೇರಿ ಪ್ರತ್ಯೇಕವಾದ ಗುಡ್ಡೆಗಳು ನದಿಯಲ್ಲಿ ನಿರ್ಮಾಣಗೊಂಡಿದೆ. ಇದು ನಂದಿನಿ ನಿರಂತರ ಓಡಾಟಕ್ಕೆ ಬ್ರೇಕ್ ಕೊಟ್ಟಿದೆ ಅನ್ನೋ ದು ಅವರ ಮಾತು.
ಹೂಳು ನಂದಿನಿಯಲ್ಲಿ ಸಧ್ಯಕ್ಕೆ ಉದ್ಭವಿಸಿರುವ ಸಮಸ್ಯೆ. ಈ ಹೂಳಿನಿಂದ ನಂದಿನಿಯ ಆಳ ಕಡಿಮೆಯಾಗುತ್ತಿದ್ದಂತೆ ನದಿಯಲ್ಲಿ ಓಡುವ ನೀರು ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ಓಡುತ್ತಿದೆ. ಬೇಸಿಗೆಯಲ್ಲಿ ನಂದಿನಿ ಬರ ಪೀಡಿತಳಂತೆ ಕಂಡರೆ ಮಳೆಗಾಲದಲ್ಲಿ ಉಕ್ಕಿಬಿಕ್ಕಿ ಹರಿಯುತ್ತಾಳೆ. ನಂದಿನಿ ಉಕ್ಕಿ ಹರಿಯುವುದರಿಂದ ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಳ್ಳುತ್ತದೆ.
ಸರಕಾರಿ ಲೆಕ್ಕಚಾರದ ಪ್ರಕಾರ ನದಿಯ ಹೂಳೆತ್ತಲು ಯಾವುದೇ ಅನುದಾನವಿಲ್ಲ. ಆದರೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನದಿಯ ಹೂಳೆತ್ತಲು ಅವಕಾಶವಿದೆ. ಆದರೆ ಸಂಬಳದ ಆಧಾರದಲ್ಲಿ ಯೋಜನೆ ನಡೆಯುವುದರಿಂದ ಯಾರು ಕೂಡ ಮುಂದೆ ಬರಲು ಒಪ್ಪುತ್ತಿಲ್ಲ. ಜಿಲ್ಲೆಯ ನದಿಗಳಲ್ಲಿರುವ ಹೂಳನ್ನು ತೆಗೆಯಲು ಪ್ರತ್ಯೇಕವಾದ ಅನುದಾನವೊಂದನ್ನು ಸರಕಾರ ಇಟ್ಟಿರಬೇಕು ಎನ್ನೋದು ಮಹಾಬಲ ಸಾಲ್ಯಾನ್‌ರ ಅಭಿಮತ.
ಇದು ಬರೀ ನಂದಿನಿಯ ಎಂಡ್ ಪಾಯಿಂಟ್ ಮಾತು. ಆದರೆ ನದಿಯ ಆರಂಭದಲ್ಲೂ ಸಮಸ್ಯೆಗಳಿವೆ. ಕಟೀಲಿನ ಮೂಲಕ ಹರಿಯುವ ನಂದಿನಿಯಲ್ಲಿ ಅಪಾರ ಪ್ರಮಾಣದಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಳೆಯ ದೇವರ ಪೋಟೋಗಳ ಸಮೇತ, ಪ್ಲಾಸ್ಟಿಕ್ ಲಕೋಟೆಗಳನ್ನು ತಂದು ನೀರಿನಲ್ಲಿ ಬಿಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟೀಲಿನಲ್ಲಿ ನಂದಿನಿಯ ಹೂಳೆತ್ತುವ ಸಂದರ್ಭ ಈ ತ್ಯಾಜ್ಯಗಳು ಕಾಣಿಸಿಕೊಂಡಿತ್ತು !
ಕೇಳ್ರೋಪ್ಪೋ ನದಿ ಪುರಾಣ
ಭೂಮಿಯಲ್ಲಿ ಹನ್ನೆರಡು ವರ್ಷಗಳ ಕಾಲ ಭೀಕರ ಬರಗಾಲ. ಎಲ್ಲೆಲ್ಲೂ ಜನರ ಹಾಹಾಕಾರ. ಇದರಿಂದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿಕೊಂಡು ಕಾಮಧೇನುವನ್ನು ತರಲು ದೇವಲೋಕಕ್ಕೆ ಪ್ರಯಾಣ ಬೆಳೆಸಿದ. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನು ವರುಣಲೋಕಕ್ಕೆ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನಿಯನ್ನು ಕಳುಹಿಸಿಕೊಡುವುದಾಗಿ ಹೇಳಿಕೊಂಡನು. ಅದರಂತೆ ನಂದಿನಿಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು.
ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ ಜಾಬಾಲಿ ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು ಎನ್ನುವ ಕತೆಯೊಂದು ಪುರಾಣದಲ್ಲಿ ಓಡಾಡಿಕೊಂಡಿದೆ.
ನಂದಿನಿಯಿಂದ ಕರೆಂಟು !
ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಸುತ್ತಲೂ ಹರಿಯುವ ನಂದಿನಿ ನದಿಯಲ್ಲಿ ೨೫ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯೊಂದು ಸುದ್ದಿಯಲ್ಲಿದೆ. ನಂದಿನಿ ಹತ್ತು ತಿಂಗಳ ಮಟ್ಟಿಗೆ ಸರಾಗವಾಗಿ ಹರಿಯುವ ಕಾರಣ ಕಟೀಲು ದೇವಸ್ಥಾನಕ್ಕೆ ವಿದ್ಯುತ್ ಪೂರೈಕೆ ಮಾಡಬಹುದು ಎನ್ನೋದು ಜಿ.ಕೆ. ರತ್ನಾಕರ್ ಅವರ ಹೇಳಿಕೆ. ಈಗಾಗಲೇ ೨೭೭ ಕಡೆಗಳಲ್ಲಿ ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಹೇಳುವಂತೆ ಸುಮಾರು ನೂರು ಮೀಟರ್ ದೂರದಲ್ಲಿರುವ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪ್ ಮೂಲಕ ವೇಗವಾಗಿ ಹರಿಸಿದರೆ ೪ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತ್‌ನ್ನು ಆರು ತಿಂಗಳ ಕಾಲ ನಿರಂತರವಾಗಿ ಪಡೆಯಬಹುದು.

ನನ್ನ ಪತ್ರಿಕೆ ನನ್ನ ಬರಹ-29



(vk daily lvk puravani published dis article on 24.10.2011)

Friday, October 21, 2011

ರೇಗೊ ಬಾಲ್ಕನಿಯಲ್ಲಿ ಮೇಕಿಂಗ್ ಆಫ್ ರಾ.ವನ್


ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಜತೆಗೂಡಿದ ಮಂಗಳೂರು ಸಹೋದರರು ಹೇಳಿದ ಮಾತಿದು.

ರಾ.ವನ್ ಇದು ಬಾಲಿವುಡ್‌ನ ಹೈ ಬಜೆಟ್ ಸಿನ್ಮಾ. ಇನ್ನೂ ಕೂಡ ಥಿಯೇಟರ್ ಕಡೆ ಮುಖ ಮಾಡದ ಸಿನ್ಮಾ ಕುರಿತು ಈಗಾಗಲೇ ದೊಡ್ಡ ಹೈಪ್ ಪ್ರೇಕ್ಷಕರ ವಲಯದಲ್ಲಿ ಬಂದು ಬಿಟ್ಟಿದೆ.
ಶಾರೂಖ್ ಖಾನ್‌ರ ಸಿನ್ಮಾ ಬದುಕಿನಲ್ಲಿ ಇದೊಂದು ಮಹತ್ತರ ಚಿತ್ರವಾಗಲಿದೆ ಎನ್ನುವ ಮಾತು ಬಾಲಿವುಡ್ ಪಡಸಾಲೆಯಲ್ಲಿ ಹರಡಿಕೊಂಡು ಬಿಟ್ಟಿದೆ. ಸ್ವಂತ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಬರುವ ಚಿತ್ರ ಎನ್ನು ಕುತೂಹಲ ಕೂಡ ಬೀಡು ಬಿಟ್ಟಿದೆ.
ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬರಿ ೩೫ ಕೋಟಿಗೆ ಸ್ಟಾರ್ ಟಿವಿಗೆ ಬಿಕರಿಯಾಗಿದೆ. ಚಿತ್ರದ ಹಾಡೊಂದನ್ನು ಅಮೆರಿಕದ ಖ್ಯಾತ ಸಿಂಗರ್ ಎಕೋನ್ ಹಾಡಿದ್ದಾರೆ. ಈಗಾಗಲೇ ಎಕೋನ್‌ರ ‘ಚಮಕ್ ಚಲ್ಲೋ’ ಹಾಡು ಟಾಫ್ ಟೆನ್ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತು ಕೇಕೆ ಹಾಕುತ್ತಿದೆ.
ರಾ.ವನ್ ಕೋಟಿಗಟ್ಟಲೆ ಬಜೆಟ್‌ನ ನಡುವೆ ಕಾಮಿಕ್ಸ್, ವಿಡಿಯೋ ಗೇಮ್ಸ್, ಆನ್‌ಲೈನ್ ಪಬ್ಲಿಸಿಟಿ ಅಂತಾ ಹೇಳಿಕೊಂಡು ಸರಿಸುಮಾರು ೨೦೦ ಕೋಟಿಯ ರಾ.ವನ್ ಭಾರತೀಯ ಚಿತ್ರಲೋಕದಲ್ಲಿ ಹೊಸ ಪತಾಕೆ ಹಾರಿಸುವ ಎಲ್ಲ ನಿರ್ಧಾರವನ್ನು ಮಾಡಿಕೊಂಡು ಬಂದಿದೆ. ಹಿಂದಿ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ಬರುವ ರಾ.ವನ್ ಚಿತ್ರದಲ್ಲಿ ಬಹುತೇಕ ಹಾಲಿವುಡ್ ಚಿತ್ರಗಳ ಟೆಕ್ನಿಷಿಯನ್‌ಗಳು ಕೆಲಸ ಮಾಡಿದ್ದಾರೆ.
ಬಾಲಿವುಡ್‌ನ ಹೈ ಬಜೆಟ್ ಚಿತ್ರ ರಾ.ವನ್‌ನ ಬಿಡುಗಡೆಗೆ ಮೊದಲೇ ಕುತೂಹಲಕಾರಿ ಅಂಶಗಳು ಒನ್ ಆಂಡ್ ಒನ್‌ಲೀ ಲವಲವಿಕೆಗೆ ಸಿಕ್ಕಿ ಬಿಟ್ಟಿದೆ. ರಾ.ವನ್ ಮುಹೂರ್ತದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಶಾರೂಕ್ ಹಾಗೂ ಚಿತ್ರ ನಿರ್ದೇಶಕ ಅನುಭವ್ ಸಿನ್ಹಾರಿಗೆ ಸಾಥ್ ಕೊಟ್ಟ ಮಂಗಳೂರು ಮೂಲ್ಕಿ ಮೂಲದ ಮೂಡು ಮನೆಯ ಪ್ರದೀಪ್ ಜೆ.ಶೆಟ್ಟಿ, ಪ್ರಕಾಶ್ ಜೆ.ಶೆಟ್ಟಿ ಹಾಗೂ ಪ್ರಶಾಂತ್ ಜೆ.ಶೆಟ್ಟಿ ರಾ.ವನ್ ಚಿತ್ರದ ಸಿಕ್ರೇಟ್ಸ್ ಹಾಗೂ ತೀರಾ ಅಪರೂಪದ ಚಿತ್ರಗಳನ್ನು ಲವಲವಿಕೆಯ ಜತೆಯಲ್ಲಿ ಹಂಚಿಕೊಂಡಿದ್ದಾರೆ.
‘ರಾ.ವನ್ ಟೋಟಲಿ ಹಾಲಿವುಡ್ ಮಾದರಿಯ ಚಿತ್ರ. ಬಜೆಟ್, ಸ್ಟೋರಿಲೈನ್, ಮೇಕಿಂಗ್ ವರ್ಶನ್‌ನಿಂದ ಹಿಡಿದು ತಾಂತ್ರಿಕ ವರ್ಗದ ವರೆಗೂ ಎಲ್ಲವೂ ಹಾಲಿವುಡ್ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಕಳೆದ ೨೦ ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಮಾರಾಯ್ರೆ. ಇಂತಹ ವಿಶೇಷ ಅನುಭವ ಈ ಮೊದಲು ಖಂಡಿತ ಆಗಿಲ್ಲ. ಸವಾಲುಗಳ ಜತೆಯಲ್ಲಿ ಕೆಲಸ ಮಾಡೋದು ಸುಲಭವಲ್ಲ ಎನ್ನುತ್ತಾರೆ ಪ್ರಕಾಶ್ ಶೆಟ್ಟಿ.
ಶಾರೂಕ್ ಜತೆಯಲ್ಲಿ ಇದು ಐದನೇ ಮೂವೀ. ಶಾರೂಕ್ ಎಂದರೆ ಅಹಂಕಾರ ಇಲ್ಲದ ಮನುಷ್ಯ.
ಲೈಟ್ಸ್ ಮ್ಯಾನ್‌ಗಳಿರಲಿ ಚಿತ್ರದ ಉಳಿದ ಕಾಸ್ಟ್‌ಗಳಿರಲಿ ಎಲ್ಲರ ಜತೆಯಲ್ಲಿ ಬೆರೆತುಕೊಂಡು ಕೆಲಸ ಮಾಡುತ್ತಾರೆ. ಅನುಭವ್ ನಿರ್ದೇಶಕರಾಗಿ ಬಹಳ ಒಳ್ಳೆಯವರು ಆದರೆ ಟೆಕ್ನಿಕಲಿ ತುಂಬಾ ವೀಕ್. ದೊಡ್ಡ ಬಜೆಟ್ ಚಿತ್ರವನ್ನು ತುಂಬಾ ಉತ್ತಮವಾಗಿ ಪರದೆಗೆ ತಂದುಕೊಟ್ಟಿದ್ದಾರೆ ಎನ್ನೋದು ಹೆಮ್ಮೆಯ ವಿಷ್ಯಾ ಅಂತಾರೆ ಪ್ರಕಾಶ್.
‘ರಾ.ವನ್ ಮಾರ್ಚ್೨೨,೨೦೧೦ರಂದು ಮುಂಬಯಿಯಲ್ಲಿ ಶೂಟಿಂಗ್ ಆರಂಭ ಮಾಡಿತ್ತು. ಮುಂಬಯಿ, ಲೊನಾವಾಲಾ, ಗೋವಾ, ಹೈದರಾಬಾದ್, ಲಂಡನ್ ಹೀಗೆ ಎಲ್ಲ ಕಡೆ ಸುತ್ತಾಡಿಕೊಂಡು ಚಿತ್ರ ಮಾಡಲಾಗಿದೆ. ರಜನೀಕಾಂತ್ ಅಭಿನಯದ ರೊಬೋಟ್ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದಲ್ಲಿ ಒರಿಜಿನಾಲಿಟಿಗೆ ಬಹಳಷ್ಟು ಮಹತ್ವ ಕೊಡಲಾಗಿದೆ. ರೊಬೋಟ್‌ನಲ್ಲಿ ಸೂಪರ್‌ಇನ್ಪೋ ಮಾಡಿ ಚಿತ್ರೀಕರಣ ಮಾಡಿದರೆ ಅದಕ್ಕಿಂತ ಭಿನ್ನವಾಗಿ ರಿಯಾಲಿಟಿಗೆ ತಾಗುವಂತೆ ಚಿತ್ರವನ್ನು ತರಲಾಗಿದೆ. ಕತೆಯಲ್ಲೂ ತುಂಬಾ ಭಿನ್ನತೆಯನ್ನು ಕಾಯ್ದುಕೊಳ್ಳಲಾಗಿದೆ ಎನ್ನೋದು ಪ್ರಕಾಶ್‌ರ ಸಹೋದರ ಪ್ರಶಾಂತ್ ಶೆಟ್ಟಿಯ ಮಾತು.
‘ರಾ.ವನ್‌ನಲ್ಲಿ ಶಾರೂಕ್ ಹಾಗೂ ಅರ್ಜುನ್ ರಾಂಪಾಲ್‌ಗಾಗಿ ವಿದೇಶದಿಂದ ತಂದ ೭ ಬಾಡಿ ಶೂಟ್‌ಗೆ ಬರೋಬರಿ ೧೭ ಕೋಟಿ ಖರ್ಚು ಮಾಡಲಾಗಿದೆ. ಈ ಬಾಡಿಶೂಟ್‌ಗಳು ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗೆ ಬಾಡಿ ಶೂಟ್ ಮಾಡಿಕೊಡುತ್ತಿದ್ದ ಕಂಪನಿಯಿಂದ ತರಿಸಲಾಗಿತ್ತು. ಅದರಲ್ಲೂ ಅದರ ಮೈನ್‌ಟೈನ್ ಮಾಡಲು ಮೂವರು ಸಹಾಯಕರಿದ್ದರು. ಅವರಿಗೆ ದಿನವೊಂದಕ್ಕೆ ೫೦ ಸಾವಿರ ಖರ್ಚು ಮಾಡಲಾಗುತ್ತಿತ್ತು. ಖರ್ಚಿನ ವಿಚಾರಲ್ಲಿ ರಾ.ವನ್ ಹಾಲಿವುಡ್ ಚಿತ್ರಗಳನ್ನೇ ಮೀರಿಸುವಂತಿದೆ ಎನ್ನೋದು ಮತ್ತೊಬ್ಬ ಸಹೋದರ ಪ್ರದೀಪ್ ಶೆಟ್ಟಿಯ ಮಾತು.
‘ಚಿತ್ರದ ಪ್ರಮುಖ ಭಾಗವೊಂದರಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ರಜನೀಕಾಂತ್ ಸೇರಿದಂತೆ ಸಂಜಯ್ ದತ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಶಾರೂಕ್ ಚಿತ್ರದಲ್ಲಿ ಜೀ-ವನ್ ಎನ್ನುವ ವಿಡಿಯೋ ಗೇಮ್ ತಯಾರಿಸುವ ವ್ಯಕ್ತಿ. ತನ್ನ ಮಗನ ದೃಷ್ಟಿಯಲ್ಲಿ ಶಾರೂಕ್ ಹೀರೋ ಆಗಲು ಹೋಗಿ ವಿಡಿಯೋ ಗೇಮ್‌ವೊಂದನ್ನು ತಯಾರಿಸುತ್ತಾನೆ. ಅದರಲ್ಲಿ ಅರ್ಜುನ್ ರಾಂಪಾಲ್ ರಾ-ವನ್ ಎನ್ನುವ ವಿಲನ್ ಆಗಿ ಬಂದರೆ ಇತ್ತಕಡೆ ಶಾರೂಕ್ ಜೀ-ವನ್ ಆಗಿ ಬರುತ್ತಾನೆ. ಇದರ ನಡುವೆ ನಡೆಯುವ ಸನ್ನಿವೇಶಗಳು, ಕ್ಲೈಮಾಕ್ಸ್ ಸೀನ್‌ಗಳು ನೋಡಲು ಥಿಯೇಟರ್‌ಗೆ ಹೋಗಬೇಕು ಎನ್ನೋದು ಪ್ರಕಾಶ್ ಶೆಟ್ಟಿಯ ಮಾತು.
ಅಂದಹಾಗೆ ರಾ-ವನ್ ಇದೇ ಅಕ್ಟೋಬರ್ ಅಂತ್ಯದೊಳಗೆ ನಿಮ್ಮ ನೆಚ್ಚಿನ ಥಿಯೇಟರ್ ಮಂದಿರಗಳಿಗೆ ದಾಳಿ ಮಾಡಲಿದೆ. ೩ಡಿಯಲ್ಲೂ ಚಿತ್ರ ಕೆಲವೊಂದು ಥಿಯೇಟರ್‌ಗಳಿಗೆ ಬರಲಿದೆ. ಹಾಡುಗಳು ಈಗಾಗಲೇ ಸೂಪರ್ರೋ ಅಂತಾ ಹೇಳಿಕೊಂಡು ಆಗಿದೆ. ಇನ್ನೂಳಿದಂತೆ ಚಿತ್ರ ನೋಡಿಕೊಂಡು ಬನ್ನಿ ಮತ್ತೇ ನೀವೇ ಹೇಳ್ತೀರಾ ರಾ.ವನ್ ಈಸ್ ಎ ಬಿಗ್ ವನ್ ಅಂತಾ..!

Thursday, October 20, 2011

ನನ್ನ ಪತ್ರಿಕೆ ನನ್ನ ಬರಹ-29



( vk daily nammakaravali published dis article on 18.10.2011)

ನೀರು ಕಂಡರೆ ಊರಿಗೆ ಭೀತಿ !


ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ. ಇದೇನಪ್ಪಾ ನೀರಿನ ಕತೆ ಅಂತಾ ಕೇಳ್ತೀರಾ..?
ಒಂದಲ್ಲ ಎರಡಲ್ಲ ಬರೋಬರಿ ೮ ವರ್ಷಗಳಿಂದ ರೈತರು ನೀರಿಗೆ ಹೆದರಿಕೊಂಡು ಬದುಕು ಕಟ್ಟುತ್ತಿದ್ದಾರೆ. ಯಾಕೋ ಗೊತ್ತಿಲ್ಲ ಎಕರೆಗಟ್ಟಲೆ ಕೃಷಿ ಭೂಮಿ ಈ ನೀರಿನಿಂದ ಹೆದರಿ ಕೂತಿದೆ. ಅರೇ..ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ.
ಇದು ಕಾಸ್ಮೋಪಾಲಿಟನ್ ಸಿಟಿಯ ನಡುವೆ ಎದುರಿಸಿರು ಬಿಟ್ಟುಕೊಂಡು ಬದುಕು ದೂಡುತ್ತಿರುವ ಸಹಿಹಿತ್ಲು ಬಳಿಯ ಮೂಡುಕೊಪ್ಲ, ಕದಿಕೆ, ಮುಂಡ ಅಸುಪಾಸಿನ ಪ್ರದೇಶದಲ್ಲಿರುವ ರೈತರ ಪ್ರತಿ ವರ್ಷದ ಗೋಳು. ಇದೆಲ್ಲವೂ ಸರಾಗವಾಗಿ ಹರಿದುಹೋಗುತ್ತಿರುವ ನಂದಿನಿ ನದಿಯ ಉಪ್ಪು ನೀರಿನ ಕಾಟ. ಮೂಲ್ಕಿ- ಮೂಡುಬಿದರೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಳೆಯಂಗಡಿ ಗ್ರಾಮಪಂಚಾಯಿತಿಯೊಳಗೆ ಇರುವ ಈ ಊರಿಗೆ ಉಪ್ಪು ನೀರೇ ಭೂಲೋಕದಲ್ಲಿ ನರಕ ನಿರ್ಮಾಣ ಮಾಡಿಬಿಟ್ಟಿದೆ.
ವರ್ಷಕ್ಕೆ ಆರಾಮವಾಗಿ ನೂರು ಮುಡಿಯಷ್ಟು ಬೆಳೆ ತೆಗೆದು ಮೀಸೆ ತಿರುವುತ್ತಿದ್ದ ರೈತರು ಈ ನೀರಿನ ಶಾಪಕ್ಕೆ ತತ್ತರಗೊಂಡಿದ್ದಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಏದುರಿಸಿರು ಬಿಡುತ್ತಾ ನಲ್ಲಿ ನೀರಿನ ಮುಂದೆ ನಿಲ್ಲಬೇಕಾದ ಅನಿವಾರ್ಯತೆಯೊಂದು ಈ ಪುಟ್ಟ ಊರಿನಲ್ಲಿ ಉದ್ಬವವಾಗಿ ಬಹಳ ವರ್ಷಗಳೇ ಸಂದಿದೆ. ನೂರು ಮುಡಿಗಿಂತ ಜಾಗದಲ್ಲಿ ಈಗ ಒಂದು ಮುಡಿ ತೆಗೆಯಲು ಕೂಡಾ ವಿಪಲರಾಗಿದ್ದಾರೆ.
ಉಪ್ಪು ನೀರಿಗೆ ನೂರಾರು ತೆಂಗಿನ ಮರಗಳು ಸದ್ದಿಲ್ಲದೇ ಮುದುಡಿ ಕೂತಿದೆ. ೨೦ಕ್ಕಿಂತ ಹೆಚ್ಚು ರೈತರು ಉಪ್ಪು ನೀರಿನ ಕಾಟದಿಂದ ದಿನಾಲೂ ಕಣ್ಣೀರು ಸುರಿಸುತ್ತಿದ್ದಾರೆ. ಅದರಲ್ಲೂ ಸಸಿಹಿತ್ಲುವಿನ ಅಗ್ಗಿದಕಳಿಯ, ಕದಿಕೆ ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಉಪ್ಪುನೀರು ಕಾರುಬಾರು ಮಾಡಿಕೊಂಡು ಬರುತ್ತಿದೆ.
ಬೆಳೆ ನಾಶವಾಯಿತು ಎಂದು ಕೊಂಡು ಇಲಾಖೆಗೆ ಕಡೆ ಮುಖ ಮಾಡಿದರೆ ಇಲಾಖೆಗಳು ರೈತರಿಗೆ ಎಕರೆಗೆ ೬೦೦ರಿಂದ ೮೦೦ ರೂ.ಗಳ ಪರಿಹಾರ ಮಾತ್ರ ನೀಡುತ್ತಿವೆ. ಅದೆಲ್ಲ ಪರಿಹಾರ ಪಡೆಯಲು ಇಲಾಖೆಗೆ ಹತ್ತು ಸಾರಿ ಸುತ್ತಾಡಿಕೊಂಡು ಬಂದರೆ ಮುಗಿದು ಹೋಗುತ್ತದೆ ಎನ್ನುವುದು ಸಸಿಹಿತ್ಲು ನಿವಾಸಿ ರಾಮದಾಸ್‌ರ ಅನುಭವದ ಮಾತು.
ಶಾಂಭವಿ, ನಂದಿನಿ ನದಿಗಳೆರಡು ಸಸಿಹಿತ್ಲುವಿನಲ್ಲಿ ಹರಿದು ಹೋಗುತ್ತಿದೆ. ಟೂರಿಸಂಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಈ ಉಪ್ಪು ನೀರು ಮಾತ್ರ ಕೆಲವೊಂದು ಗದ್ದೆ, ಮನೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆಲ್ಲ ಪರಿಹಾರ ಕೊಡುತ್ತೇವೆ ಎಂದು ಬಹಳಷ್ಟು ಜನಪ್ರತಿನಿದಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನುದಾನನೂ ಸರಕಾರದಿಂದ ಬಂದಿದೆ. ಆದರೆ ಜನರ ಕಷ್ಟ ಮಾತ್ರ ಕೊನೆಯಾಗಿಲ್ಲ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಜಯಣ್ಣ.
ಯಾರಿಗೇಳೋಣ ನಮ್ ಪ್ರಾಬ್ಲಂ:
ಸುರತ್ಕಲ್- ಕುಂದಾಪುರ ಚತುಷ್ಪಥ ಕಾಮಗಾರಿ ಯೋಜನೆ ಸಂದರ್ಭ ನಂದಿನಿ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಇದು ಕೂಡಾ ಈ ಸಮಸ್ಯೆ ತೀವ್ರವಾಗಲು ಕಾರಣ ಎನ್ನುವುದು ಸಸಿಹಿತ್ಲುವಿನ ಸ್ಥಳೀಯರ ಅಭಿಪ್ರಾಯ.
ನಂದಿನಿ ನದಿಯ ಹೊಳೆತ್ತುವ ಕೆಲಸ ಬಹಳ ವರ್ಷಗಳಿಂದ ನಡೆದೇ ಇಲ್ಲ. ನಂದಿನಿ ನದಿಯೇ ಮುಂದೊಂದು ದಿನ ಮಾಯವಾಗಿ ಬಿಡುವ ಸಾಧ್ಯತೆ ಇದೆ. ಅದರಲ್ಲೂ ನದಿಯ ಬದಿಯಲ್ಲಿ ನೆಟ್ಟ ಖಾಂಡ್ಲಾವನಗಳಲ್ಲಿ ನದಿಗಳಿಗೆ ಎಸೆದ ತ್ಯಾಜ್ಯಗಳು ಸೇರಿಕೊಂಡು ಗುಡ್ಡವಾಗಿ ಬೆಳೆದು ನೀರೆಲ್ಲವೂ ಗದ್ದೆ, ಬಾವಿಗಳಿಗೆ ಹೋಗಿ ಬೀಳುತ್ತದೆ ಎನ್ನುತ್ತಾರೆ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್.
ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರದೇಶಗಳ ಕುಡಿಯುವ ನೀರಿಗಾಗಿ ತುಂಬೆಯಿಂದ ಮುಕ್ಕಾದ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ಭಾಗಗಳಿಗೆ ಉಪ್ಪು ನೀರಿನ ಸಮಸ್ಯೆ ತೀವ್ರವಾಗಿದೆ. ನದಿ ಭಾಗವನ್ನು ಬಹಳಷ್ಟು ಜನರು ಆಕ್ರಮಿಸಿಕೊಂಡು ಕೃಷಿ ಮಾಡಿದ್ದರಿಂದ ನಂದಿನಿ ನದಿಯ ವಿಸ್ತಾರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಹಾಬಲರು.
ಪದೇ ಪದೇ ಈ ಸಮಸ್ಯೆ ಕಾಣಿಸಿಕೊಂಡಾಗ ಇಲ್ಲಿನ ರೈತರು ಜನಪ್ರತಿನಿದಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಈ ಮೊರೆ ಆಳುವ ದೊರೆಗಳಿಗೆ ಕೇಳಿಸಿಕೊಳ್ಳುವುದೇ ಇಲ್ಲ. ಚುನಾವಣೆ ಬಂದಾಗ ಈ ಊರಿನ ಜನರ ಸಮಸ್ಯೆ ಕೇಳಲು ಮಾತ್ರ ಜನಪ್ರತಿನಿಽಗಳು ಹಾಜರಾಗುತ್ತಾರೆ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಗಣೇಶ್ ಸನಿಲ್‌ರ ಮಾತು.
ಇಲ್ಲಿನ ರಕ್ತೇಶ್ವರಿ ದೈವಸ್ಥಾನ ಬಳಿ ಸುಮಾರು ೨-೩ಫರ್ಲಾಂಗ್ ಉದ್ದಕ್ಕೆ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಿದಲ್ಲಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕೊಡಲು ಸಾಧ್ಯ ಎನ್ನುತ್ತಾರೆ ಮೂಡುಕೊಪ್ಲ ಕೃಷಿಕ ರಮೇಶ್ ಸನಿಲ್. ಪ್ರಕೃತಿ ಮಾನವನ ನಡುವಿನ ಹೊಡೆದಾಟದಲ್ಲಿ ಕೊನೆಗೂ ಪ್ರಕೃತಿ ಮೇಲುಗೈ ಸಾದಿಸಿಕೊಂಡು ತನ್ನ ಪರಾಕ್ರಮ ಮೆರೆದು ನಿಂತಿದೆ ಎನ್ನುವುದಕ್ಕೆ ಈ ಊಪ್ಪು ನೀರಿನ ಊರೇ ಸಾಕ್ಷಾತ್ ಉದಾಹರಣೆ ಅಲ್ವಾ..?

(vk daily nammakaravali front page article published on 18.10.2011)

Saturday, October 15, 2011

ನನ್ನ ಪತ್ರಿಕೆ ನನ್ನ ಬರಹ-28



(vk daily lvk puravani published dis article on 15.10.2011)

ಉಜ್ವಾಡಿನಲ್ಲಿ ಪ್ರೇಕ್ಷಕನಿಗೆ ಕತ್ತಲು


ಚಿತ್ರ ವಿಮರ್ಶೆ
ಚೌಕಟ್ಟಿನಲ್ಲಿ ನಿಲ್ಲದ ಕತೆ, ಪದೇ ಪದೇ ಕಾಣಿಸಿಕೊಳ್ಳುವ ಕ್ಲೋಸಫ್ ಶಾಟ್‌ಗಳು,ಅನಗತ್ಯವಾಗಿ ತುರುಕಿಸಲಾಗಿರುವ ಹಾಡು ಚಿತ್ರದ ಓಡಾಟಕ್ಕೆ ಅಲ್ಲಲ್ಲಿ ಬ್ರೇಕ್‌ಕೊಟ್ಟು ಪ್ರೇಕ್ಷಕನಿಗೆ ವಿಚಿತ್ರ ಸಂಕಟಕ್ಕೆ ದೂಡುವ ಉಜ್ವಾಡು ಕೊಂಕಣಿ ಪ್ರೇಕ್ಷಕರ ನಿರೀಕ್ಷಿತ ಮಟ್ಟವನ್ನು ತಲುಪಲೇ ಇಲ್ಲ. ಕಳೆದ ೩೫ ವರ್ಷಗಳಿಂದ ಜಿಎಸ್‌ಬಿ ಕೊಂಕಣಿ ಸಮುದಾಯದಲ್ಲಿ ಚಿತ್ರಗಳಿಲ್ಲದೇ ಬರದ ಪರಿಸ್ಥಿತಿಯಲ್ಲಿ ನೀರಿನ ಒರತೆಯಂತೆ ಬಂದು ನಿಂತ ಉಜ್ವಾಡು ಪ್ರೇಕ್ಷಕರ ಮುಂದೆ ಬರೀ ಡಾಕ್ಯುಮೆಂಟರಿ ಚಿತ್ರದಂತೆ ಭಾಸವಾಗುತ್ತಿದೆ.
ಉಜ್ವಾಡು(ಬೆಳಕು) ಎನ್ನುವ ಆಶ್ರಮದ ಕತೆಯ ಜತೆಯಲ್ಲಿ ಥಳಕು ಹಾಕುವ ಜಿಎಸ್‌ಬಿ ಸಮುದಾಯದ ಸಂಸ್ಕೃತಿ, ಆಚಾರ- ವಿಚಾರ, ಬಾಳಿಗರ ಹೋಟೆಲ್, ಹೋಳಿ ಹಬ್ಬವನ್ನು ಅಲ್ಲಲ್ಲಿ ತುರುಕಿಸಲಾದರೂ ಎಲ್ಲವನ್ನು ಸಮರ್ಥವಾಗಿ ಎಳೆದುಕೊಂಡು ಹೋಗಲು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಬಹುತೇಕವಾಗಿ ವಿಫಲವಾಗಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ನಟ- ನಟಿಯರು, ತಂತ್ರಜ್ಞರು ಇದ್ದರೂ ಸಮರ್ಥವಾಗಿ ಚಿನ್ನಾ ಬಳಸಿಕೊಳ್ಳಲೇ ಇಲ್ಲ ಎನ್ನುತ್ತದೆ ಉಜ್ವಾಡು ಚಿತ್ರ.
ಮಲಯಾಳಂನ ಖ್ಯಾತ ಛಾಯಾಗ್ರಾಹಕ ಉತ್ಪಲ್ ನಾಯನಾರ್ ಅವರ ಕ್ಯಾಮೆರಾವರ್ಕ್ ಚಿತ್ರದಲ್ಲಿ ಸಾಕಷ್ಟು ವರ್ಕ್ ಔಟ್ ಆಗಿದೆ ಎಂದುಕೊಳ್ಳುವ ಮೊದಲೇ ಚಿತ್ರದಲ್ಲಿ ತುಂಬಾ ಕ್ಲೋಸಫ್ ಶಾಟ್‌ಗಳು ಓಡಾಡಿಕೊಂಡು ಛಾಯಾಗ್ರಾಹಕನ ಕೆಲಸವನ್ನು ಡಲ್ ಮಾಡುತ್ತದೆ. ಜಯಂತ್ ಕಾಯ್ಕಿಣಿಯ ‘ರಂಗ ಪಂಚಮಿ’ ಹಾಡು ಚಿತ್ರದಲ್ಲಿ ಕೇಳಲು ಕೊಂಚ ಇಂಪು ಅನ್ನಿಸುತ್ತದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಚಿತ್ರಕ್ಕೆ ಕತೆ ಜೀವಾಳ ಎಂದುಕೊಂಡು ಬಂದ ಪ್ರೇಕ್ಷಕರಿಗೆ ಏನೂ ಸಿಗದಿದ್ದರೂ ಗಜ್ಜು( ಗಜಾನನ) ಎನ್ನುವ ಬಾಲಪ್ರತಿಭೆ ಬಹಳ ಹತ್ತಿರವಾಗುತ್ತದೆ. ಹಿರಿಯ ಚಿತ್ರ ನಟ ಸದಾಶಿವ್ ಬ್ರಹ್ಮಾವರ್ , ಉಮಾಶ್ರೀ, ನೀತು ತಕ್ಕ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರುತೆರೆ ನಟ ಶಿವಧ್ವಜ್ ನಟನೆಯನ್ನು ಮರೆತು ಕೂತವರಂತೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಸರಗೋಡು ಚಿನ್ನಾ ಚಿತ್ರವನ್ನು ಇನ್ನಷ್ಟೂ ಉತ್ತಮವಾಗಿ ತೆರೆಗೆ ತರಬಹುದಿತ್ತು ಎನ್ನುವ ಅಶಯ ಭಾವನೆ ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೆ ಕಾಡದೇ ಇರದು. ಆದರೂ ಕೊಂಕಣಿ ಚಿತ್ರ ಬೆಳೆಯಬೇಕು ಎನ್ನುವ ಉದ್ದೇಶದಿಂದ ಮಾತ್ರ ಥಿಯೇಟರ್‌ಗೆ ಹೋದರೆ ಚಿತ್ರ ಸೂಪರ್ ಕ್ಲಾಸ್ ಎನ್ನುವುದರಲ್ಲಿ ಯಾವುದೇ ಡೌಟ್ ಉಳಿಯೋಲ್ಲ.

Thursday, October 13, 2011

ಚಿನ್ನಾ ಕ್ಯಾಂಪ್‌ನಲ್ಲಿ ಉಜ್ವಾಡು !


ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಅ.೧೪ ರಂದು ಬಿಡುಗಡೆಯಾಗುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ. ಕರಾವಳಿಯಲ್ಲಿ ‘ಅಸಲ್’ ಚಿತ್ರದ ಸೂಪರ್ ಓಟ.. ಉಜ್ವಾಡು ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಮತ್ತೆ ಚೇತರಿಕೆ ಕಾಣಿಸಿಕೊಂಡಿದೆ. ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ‘ಒರಿಯರ್ದೊರಿ ಅಸಲ್’ನ ಸೂಪರ್ ಕಲೆಕ್ಷನ್ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಸಿನ್ಮಾ ಅ.೧೪ರಂದು ಕರಾವಳಿಯ ಥಿಯೇಟರ್‌ಗಳಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಬಹಳ ಕಡಿಮೆ ಟೈಮ್‌ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಭರ್ಜರಿಯಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನೋದು ರಂಗಭೂಮಿ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು.
ಅಂದಹಾಗೆ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ. ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ ‘ಉಜ್ವಾಡು’ ಮೂಡಿ ಬರುತ್ತಿರುವುದರಿಂದ ನಿರೀಕ್ಷೆಗಳ ಮೂಟೆ ಜಾಸ್ತಿಯಾಗಿದೆ ಎನ್ನೋದು ಕರಾವಳಿಯಲ್ಲಿ ಓಡಾಡಿಕೊಂಡಿರುವ ಮಾತು.
ಚಿನ್ನಾ ಟಾಕಿಂಗ್:
‘ಉಜ್ವಾಡು’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿರುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಿದೆ. ‘ಉಜ್ವಾಡು’ ಚಿತ್ರ ಅಸಲ್ ಚಿತ್ರದಂತೆ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ’ ಎನ್ನೋದು ಕಾಸರಗೋಡು ಚಿನ್ನಾ ಅವರ ಮಾತು.
ಚಿತ್ರವನ್ನು ಆರಂಭದಲ್ಲಿ ಕರಾವಳಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ನಂತರ ಉಳಿದ ಭಾಗಗಳಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ‘ಉಜ್ವಾಡು’ ಚಿತ್ರ ಬರೀ ಒಂದು ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿಲ್ಲ. ಎಲ್ಲ ಸಮುದಾಯದ ಜನರು ಬಂದು ಸಿನ್ಮಾ ನೋಡಬೇಕು. ಅದಕ್ಕಾಗಿ ಎಲ್ಲರಿಗೂ ಸಂದೇಶ ತಲುಪುವಂತೆ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಚಿತ್ರದ ಆಡಿಯೋ ಭರ್ಜರಿಯಾಗಿ ಮಾರಾಟವಾಗಿದೆ. ಇನ್ನೂ ಕೂಡ ಆಡಿಯೋಗಾಗಿ ಬೇಡಿಕೆ ಬಂದಿದೆ ಎನ್ನುವುದು ಕಾಸರಗೋಡು ಚಿನ್ನಾರ ಮಾತು.
ಉಜ್ವಾಡು ಹುಡುಕಾಟದಲ್ಲಿ:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕಿದ್ದಾರೆ. ಚಿತ್ರ ಕಾರ್ಕಳ, ಮಂಗಳೂರಿನ ಅಸುಪಾಸು ಚಿತ್ರೀಕರಣವಾಗಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಹಾಡುಗಳನ್ನು ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.

ಅಸಲ್ ಮಾತು ಅಸಲಿ ಟಾಕ್ ವಿದ್ ಕೊಡಿಯಾಲ್‌ಬೈಲ್


ಕರಾವಳಿಯ ಮನೆ- ಮನಗಳಲ್ಲಿ ಈಗ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್‌ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ಅಸಲ್ ಚಿತ್ರಕ್ಕೆ ನೀಡಿದೆ. ನೂರು ದಿನಗಳನ್ನು ಪೂರೈಸಿಕೊಂಡು ನೂರವೈತ್ತು ದಿನಗಳತ್ತ ಮೈಗೆದರಿಕೊಂಡು ಓಡಲಾರಂಭಿಸಿದೆ.

ಅಸಲ್ ಸೂಪರ್ರೋ ಸೂಪರ್.. ಮಾರಾಯ್ರೆ. ಇದು ಥಿಯೇಟರ್‌ನಲ್ಲಿ ಒರಿಯರ್ದೊರಿ ಅಸಲ್ ಸಿನ್ಮಾವನ್ನು ೧೪ ಬಾರಿ ನೋಡಿಕೊಂಡು ಹೊರಬಂದ ವಿಠಲ ಸಾಹೇಬ್ರ ಗಟ್ಟಿ ಮಾತು. ಅಸಲ್ ಚಿತ್ರವಿರುವ ನಗರದ ಥಿಯೇಟರ್‌ಗಳಲ್ಲಿ ಈಗಲೂ ಹೌಸ್‌ಪುಲ್ ನೇಮ್‌ಪ್ಲೇಟ್ ತೂಕಾಡಿಸಿದ್ದು ಕಾಣಬಹುದು. ಅಸಲ್ ನೂರು ದಿನ ಓಟ ಮುಗಿಸಿಕೊಂಡು ನೂರೈವತ್ತು ದಿನಗಳತ್ತ ಕಣ್ಣು ಹಾಕಿದರೂ, ಪ್ರೇಕ್ಷಕ ಮಾತ್ರ ಅಸಲ್ ಚಿತ್ರವನ್ನು ಆರಂಭದಲ್ಲಿ ನೋಡಿದ ಜೋಶ್‌ನಂತೆ ನೋಡುತ್ತಿದ್ದಾನೆ ಎನ್ನುತ್ತಾರೆ ನಗರದ ಜ್ಯೋತಿ ಥಿಯೇಟರ್‌ನ ಕೌಂಟರ್‌ನಲ್ಲಿ ಕೂತು ಟಿಕೇಟ್ ಹರಿದುಕೊಡುತ್ತಿರುವ ರಂಜಿತ್.
ಇದು ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ಅತೀ ದೊಡ್ಡ ರೆಕಾರ್ಡ್. ನಲವತ್ತು ವರ್ಷಗಳ ತುಳು ಸಿನ್ಮಾ ಲ್ಯಾಂಡ್‌ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದೆ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್’ ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಈ ತುಳು ಸಿನ್ಮಾದ ಮೂಲಕ ಹೊಸ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತು. ಅವರ ಕಂಪನಿಯಿಂದ ಹೊರಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್. ಅದರಲ್ಲೂ ‘ಅಸಲ್’ ಇಡೀ ತುಳು ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ಯಶಸ್ವಿನಿಂದ ಕರಾವಳಿಯಲ್ಲಿ ತುಳು ನಾಟಕ ಮಾಡುವ ಉಮೇದು ಹುಟ್ಟಿಕೊಂಡಿತು.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಅಂದಹಾಗೆ ಅಕ್ಟೋಬರ್ ೨೧ರಂದು ಮುಂಬಯಿ, ಪುಣೆಯಲ್ಲೂ ಸಿನ್ಮಾವನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮಧ್ಯ ಪ್ರಾಚ್ಯದೇಶಗಳಲ್ಲಿಯೂ ಚಿತ್ರವನ್ನು ಥಿಯೇಟರ್‌ಗೆ ಇಳಿಸಬೇಕು ಎನ್ನೋದು ವಿಜಯ್‌ಕುಮಾರ್ ಕೊಡಿಯಾಲ್ ಬೈಲ್‌ರ ತಲೆಯಲ್ಲಿ ಓಡುತ್ತಿರುವ ಮಾಸ್ಟರ್ ಪ್ಲಾನ್.
ಅಸಲ್ ಮೋಲಿವುಡ್ ಎಂಟ್ರಿ:
‘ಒರಿಯರ್ದೊರಿ ಅಸಲ್’ ಚಿತ್ರವನ್ನು ಮಲಯಾಳಂನ ನಿರ್ದೇಶಕರೊಬ್ಬರು ರಿಮೇಕ್ ಮಾಡಲು ಕೇಳಿದ್ದರು. ಆದರೆ ಕೋಸ್ಟಲ್‌ವುಡ್‌ನಲ್ಲಿ ಅಸಲ್ ಕಂಡ ಸಕ್ಸಸ್ ಹಾಗೂ ಬೇರೆ ಸಿನ್ಮಾ ಉದ್ದಿಮೆಯಲ್ಲಿ ಸಕ್ಸಸ್ ಪಾಯಿಂಟ್‌ಗಳು ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ಬೇರೆ ಭಾಷೆಯಲ್ಲೂ ನಾನೇ ಅಸಲ್ ಚಿತ್ರವನ್ನು ನಿರ್ದೇಶನ ಮಾಡಬೇಕು ಎನ್ನೋದು ನನ್ನ ಕನಸ್ಸು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್.
‘ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ಹನ್ನೆರಡು ಚಿತ್ರಗಳು ಮುಹೂರ್ತ ಮಾಡಿಕೊಂಡಿದೆ. ಅದು ಅಸಲ್ ಹಿಟ್ ಆಗಿದೆ ಎನ್ನುವುದಕ್ಕೆ ತುಳು ಸಿನ್ಮಾ ಇಂಡಸ್ಟ್ರಿ ಕೊಟ್ಟ ಉದಾಹರಣೆ. ಅಸಲ್ ಬರೀ ಓಡಿದ್ದಲ್ಲ ..ಅದು ತಟಸ್ಥವಾಗಿ ನಿಂತು ಹೋದ ತುಳು ಸಿನ್ಮಾ ಇಂಡಸ್ಟ್ರಿಯನ್ನು ಓಡಿಸಿದೆ ಎನ್ನುವುದು ವಿಜಯಣ್ಣನ ಅಸಲಿ ಮಾತು.
ಅಸಲ್ ವಾಟ್ ನೆಕ್ಸ್ಟ್:
ಬಹುತೇಕ ಮಂದಿ ‘ಅಸಲ್’ ನಂತರ ಮತ್ತೊಂದು ತುಳು ಸಿನ್ಮಾ ಮಾಡುತ್ತೇನೆ ಎನ್ನುವ ಸುದ್ಧಿ ಹಬ್ಬಿದೆ. ನಿಜಕ್ಕೂ ಅಸಲ್ ಚಿತ್ರವನ್ನು ಇಡೀ ವರ್ಷ ಕರಾವಳಿ ಸೇರಿದಂತೆ ಮುಂಬಯಿ, ಮಧ್ಯಪ್ರಾಚ್ಯ ದೇಶಗಳ ಉದ್ದಗಲಕ್ಕೂ ಓಡಿಸಿದ ನಂತರವೇ ಮತ್ತೊಂದು ಚಿತ್ರವನ್ನು ಮಾಡಬೇಕು ಎನ್ನೋದು ನನ್ನ ಅಲೋಚನೆ. ಸಧ್ಯಕ್ಕೆ ಅಸಲ್‌ನ ಓಡಾಟದಲ್ಲಿ ಬ್ಯುಸಿ. ಇನ್ನೂಳಿದ ಟೈಮ್‌ನಲ್ಲಿ ತುಳು ರಂಗಭೂಮಿಗೆ ಹೊಸ ನಾಟಕ ‘ಅಜ್ಜೇರ್’ ತರಬೇಕು.
ಅಜ್ಜೇರ್’ ಕತೆ ಪಾತ್ರವರ್ಗ ಎಲ್ಲವೂ ಸಿದ್ಧವಾಗಿದೆ. ಸಧ್ಯಕ್ಕೆ ಅದನ್ನು ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದ್ದೇನೆ. ನಂತರ ನನ್ನ ಹಳೆಯ ನಾಟಕವೊಂದನ್ನು ಮತ್ತೊಂದು ತುಳು ಚಿತ್ರರಂಗಕ್ಕೆ ಸಿದ್ಧ ಮಾಡುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದಾರೆ ಬರುವ ವರ್ಷದಲ್ಲಿಯೇ ಮತ್ತೊಂದು ಚಿತ್ರವನ್ನು ಪ್ರೇಕ್ಷಕರಿಗೆ ಕೊಡುತ್ತೇನೆ ಎನ್ನುತ್ತಾರೆ ವಿಜಯ್ ಕುಮಾರ್.
ತುಳು ಚಿತ್ರವನ್ನು ಸಾಟಲೈಟ್ ಚಾನೆಲ್‌ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್‌ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್‌ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್‌ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಅದರಲ್ಲೂ ನೂರು ದಿನ ಭರ್ಜರಿಯಾಗಿ ಓಡಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?

Wednesday, October 12, 2011

ಕರಾವಳಿಯಲ್ಲಿ ಚಿನ್ನಾದಂತಹ ‘ಉಜ್ವಾಡು’


ಹೊಸ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ‘ಉಜ್ವಾಡು’ ಚಿತ್ರ ಥಿಯೇಟರ್‌ಗೆ ಇಳಿಯುತ್ತಿದೆ.

ಕತ್ತಲೆಯನ್ನು ದೂರಕ್ಕೆ ಓಡಿಸಿ ಬೆರಗು ಕಣ್ಣಿನಿಂದ ನೋಡುವಂತಹ ಲೋಕವನ್ನು ಸೃಷ್ಟಿ ಮಾಡಬಲ್ಲ ಸಾಮರ್ಥ್ಯ ಇರುವ ಬೆಳಕು ಎಲ್ಲಕ್ಕೂ ಮುಖ್ಯ ಅನ್ನೋದು ಎಲ್ಲರ ಅನುಭವದ ಮಾತು. ಇದೇ ಬೆಳಕು ಈಗ ಕೋಸ್ಟಲ್‌ವುಡ್ ಸಿನ್ಮಾ ಲ್ಯಾಂಡ್‌ನಲ್ಲೂ ಬರುತ್ತಿದೆ. ಹೌದು. ಕರಾವಳಿ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾರ ನಿರ್ದೇಶನದಲ್ಲಿ ಬರುತ್ತಿರುವ ‘ಉಜ್ವಾಡು’ ಶುಕ್ರವಾರ(ಅ.೧೪)ದಂದು ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಗೆ ಬರುತ್ತಿದೆ.
ಕಾಸರಗೋಡು ಚಿನ್ನಾ ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವುದರಿಂದ ಚಿತ್ರದ ಕುರಿತು ಕರಾವಳಿಯ ಪ್ರೇಕ್ಷಕರಿಗೆ ನಿರೀಕ್ಷೆ ಮೂಟೆ ಜಾಸ್ತಿಯಾಗಿದೆ. ಈಗಾಗಲೇ ಕರಾವಳಿಯ ರಂಗಭೂಮಿಯಲ್ಲಿ ವಿಭಿನ್ನ ಮಾದರಿಯ ಕೊಂಕಣಿ ಸೇರಿದಂತೆ ನಾನಾ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶನ ಮಾಡಿ ಹೆಸರು ಉಳಿಸಿಕೊಂಡಿರುವ ಕಾಸರಗೋಡು ಚಿನ್ನಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬೆಳೆಯುವ ಕನಸ್ಸು ಕಾಣುತ್ತಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕೊಂಕಣಿ ಭಾಷೆಯಲ್ಲಿ ಸಿನ್ಮಾಗಳು ಥಿಯೇಟರ್‌ಗೆ ಬರುವುದೇ ತೀರಾ ಅಪರೂಪ. ಸೀಮಿತ ಮಾರುಕಟ್ಟೆಯೊಳಗೆ ಕೊಂಕಣಿ ಚಿತ್ರಗಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನುವ ಯೋಚನೆಯಿಂದ ಯಾವ ನಿರ್ಮಾಪಕ, ನಿರ್ದೇಶಕ ಚಿತ್ರ ಮಾಡುವ ಕೆಲಸಕ್ಕೆ ಕೈ ಹಾಕೋದಿಲ್ಲ. ಅದರಲ್ಲೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಜಾಗ ಪಡೆಯಲು, ಪ್ರಶಸ್ತಿ ಬಾಚಲು ಮಾತ್ರ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಆರೋಪಗಳೇ ಜಾಸ್ತಿ.
ಆದರೆ ‘ಉಜ್ವಾಡು’ ಈ ಎಲ್ಲ ಆರೋಪಗಳಿಂದ ಮುಕ್ತವಾಗಿ ಬರೀ ಕರಾವಳಿಯ ಪ್ರೇಕ್ಷಕ ವರ್ಗವನ್ನು ಮಾತ್ರ ಸೆಳೆಯಲು ನಿರ್ಧಾರ ಮಾಡಿಕೊಂಡಿದೆ ಎನ್ನೋದು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು. ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಕಳೆದ ೩೫ ವರ್ಷಗಳಿಂದ ಕೊಂಕಣಿ ಚಿತ್ರ ಬಂದಿಲ್ಲ. ‘ಉಜ್ವಾಡು’ ಇಷ್ಟು ವರ್ಷಗಳ ನಂತರ ಥಿಯೇಟರ್‌ಗೆ ಬರುತ್ತಿದೆ ಎನ್ನೋದು ಕರಾವಳಿಯ ಕೊಂಕಣಿಗರಿಗೆ ಹೆಮ್ಮೆ ಪಡಬೇಕಾದ ವಿಷಯ ಎನ್ನುತ್ತಾರೆ ಚಿನ್ನಾ.
ಈ ಹಿಂದೆ ರಮೇಶ್ ಕಾಮತ್, ಅಮೃತ್ ಪ್ರಭು ಅವರ ‘ತಪಸ್ವಿನಿ’, ‘ಜನಮನ’ ಸಿನಿಮಾಗಳು ಹಾಗೂ ಕ್ಯಾಥೋಲಿಕ್ ಕೊಂಕಣಿ ಭಾಷೆಯಲ್ಲಿ ರಿಚರ್ಡ್ ಕ್ಯಾಸ್ಟಲಿನೊ ಅವರ ‘ಬೊಗ್ಸಾಣೆ’ ಮತ್ತು ‘ಕಾಜಾರ್’ ಚಿತ್ರ ಬಿಡುಗಡೆಗೊಂಡಿತ್ತು. ಈಗ ‘ಉಜ್ವಾಡು’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ ಕೊಂಕಣಿ ಸಿನ್ಮಾ ಇಂಡಸ್ಟ್ರಿಯನ್ನು ಇನ್ನಷ್ಟೂ ಶ್ರೀಮಂತ ಮಾಡಬೇಕು. ಅದರಲ್ಲೂ ಕೊಂಕಣಿ ಸಮುದಾಯದಲ್ಲಿರುವ ಸಂಸ್ಕೃತಿ, ಆಚರಣೆ, ಹೋಳಿ ಹಬ್ಬ, ಚೂಡಿ ಪೂಜೆ ಎಲ್ಲವನ್ನು ಇತರ ಸುಮುದಾಯದ ಬಂಧುಗಳಿಗೆ ತೋರಿಸಬೇಕು ಎನ್ನುವ ಕನಸ್ಸಿನಿಂದ ಚಿತ್ರ ನಿರ್ದೇಶನ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಚಿತ್ರವನ್ನು ಪ್ರಾಮಾಣಿಕವಾದ ರೀತಿಯಲ್ಲಿ ಹೊರ ತರಲು ಪ್ರಯತ್ನ ಪಟ್ಟಿರುವುದರಿಂದ ಚಿತ್ರ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎನ್ನುವ ಧೈರ್ಯದ ಮಾತುಗಳಿಂದ ಕಾಸರಗೋಡು ಚಿನ್ನಾ ನಗುತ್ತಾರೆ.
ಆರಂಭದಲ್ಲಿ ಚಿತ್ರವನ್ನು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉಳಿದಂತೆ ಕಾರ್ಕಳದ ಥಿಯೇಟರ್‌ನಲ್ಲಿ ಡಿಟಿಎಸ್ ಅಳವಡಿಸಿದ ಬಳಿಕ ಅಲ್ಲಿ ಹಾಗೂ ಉಡುಪಿ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕಮರ್ಷಿಯಲ್ ಸ್ಪರ್ಶ ಇಲ್ಲದೆ ಮೂಡಿ ಬಂದಿರುವ ಉಜ್ವಾಡು ಚಿತ್ರವನ್ನು ಕಾರ್ಕಳದಲ್ಲಿ ನಿರಂತರ ೧೮ ದಿನಗಳ ಕಾಲ ಹಾಗೂ ಜಿಎಸ್‌ಬಿ ಕುಲದೇವರು ಇರುವ ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಜ್ವಾಡು ಅಂದರೆ ಬೆಳಕು. ಸಿನಿಮಾದಲ್ಲಿ ವೃದ್ಧಾಶ್ರಮದ ಹೆಸರು ಉಜ್ವಾಡು. ವೃದ್ಧಾಶ್ರಮದಲ್ಲಿರುವ ಹಿರಿಯರ ಬದುಕೇ ಬೆಳಕು ಎಂಬುದು ಇದರ ಅರ್ಥ. ಇದು ಕೊಂಕಣಿ ಸಿನಿಮಾ ಆಗಿದ್ದರೂ ಭಾಷೆಗಿಂತ ಸಂವೇದನೆ ಮುಖ್ಯ ಎನ್ನುವುದು ಚಿನ್ನಾರ ಚಿನ್ನದಂತಹ ಮಾತು.
ಚಿನ್ನಾ ಅವರ ಜತೆ ಕಥೆ-ಚಿತ್ರಕಥೆಯಲ್ಲಿ ಸಹಕಾರ ನೀಡಿರುವ ಗೋಪಾಲಕೃಷ್ಣ ಪೈ, ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ಖ್ಯಾತ ಕೇರಳದ ಛಾಯಾಗ್ರಾಹಕ ಉತ್ಪಲ್ ವಿ.ನಾಯನಾರ್ ಅವರ ಛಾಯಾಗ್ರಹಣದ ಚುಂಬಕ ಶಕ್ತಿ ಚಿತ್ರದಲ್ಲಿ ಕಾಣ ಸಿಗುತ್ತದೆ. ವಿ.ಮನೋಹರ್ ಅವರ ಸುಮಧುರ ಸಂಗೀತ, ಶಶಿಧರ ಅಡಪರ ಕಲಾ ನಿರ್ದೇಶನದ ಕೈಚಳಕವಿದೆ.
ಭದ್ರಗಿರಿ ಅಚ್ಯುತದಾಸ ಮತ್ತು ಜಯಂತ ಕಾಯ್ಕಿಣಿ ಅವರ ಹಾಡುಗಳನ್ನು ಪುತ್ತೂರು ನರಸಿಂಹ ನಾಯಕ್, ಶಂಕರ್ ಶಾನುಭೋಗ್, ಸೀಮಾ ರಾಯ್ಕರ್ ಹಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿದೆ. ನಿರ್ಮಾಪಕರಾಗಿ ಕೆ.ಜೆ.ಧನಂಜಯ್ ಮತ್ತು ಅನುರಾಧಾ ಪಡಿಯಾರ್ ಇದ್ದಾರೆ.
ನಟವರ್ಗದಲ್ಲಿ ಸದಾಶಿವ ಬ್ರಹ್ಮಾವರ್, ನೀತು, ಉಮಾಶ್ರೀ, ಸಂಧ್ಯಾ ಪೈ, ಶಶಿಭೂಷಣ್ ಕಿಣಿ, ಪ್ರಕಾಶ್ ಶೆಣೈ, ಓಂಗಣೇಶ್, ಸತೀಶ್ ಭಟ್, ಪೂರ್ಣಿಮಾ ಸುರೇಶ್, ಸತೀಶ್ ನಾಯಕ್, ಮಂಜುನಾಥ್ ಕುಡ್ವ ಸೇರಿದಂತೆ ರಂಗಭೂಮಿಯ ೮೫ ಕಲಾವಿದರು ಅಭಿನಯಿಸಿದ್ದಾರೆ ಎನ್ನೋದು ‘ಉಜ್ವಾಡು’ ಚಿತ್ರದ ಹೈಲೇಟ್ ಆಗುವ ವಿಚಾರ. ಇನ್ನೂ ಹೆಚ್ಚಿನ ಮಾಹಿತಿಗೆ ‘ಉಜ್ವಾಡು’ ಚಿತ್ರವನ್ನು ತೆರೆ ಮೇಲೆ ನೋಡಿ ಬನ್ನಿ.

ನನ್ನ ಪತ್ರಿಕೆ ನನ್ನ ಬರಹ-26



(vk daily lvk puravani published dis article on 12.10.2011)

ನನ್ನ ಪತ್ರಿಕೆ ನನ್ನ ಬರಹ-25



(vk daily lvk puravani published dis article on 29.09.2011)

Saturday, October 8, 2011

ಮದಿರೆ ನಾಡಿನ ‘ಮಾರಿ’ಯೋ !



ಮಾರಿಯೋನ ಕ್ಯಾರಿಕೇಚರ್‌ನಲ್ಲೂ ಅದೇ ಗೋವಾದ ಫೆನ್ನಿ ಕಿಕ್‌ಯಿದೆ. ಅಂದಹಾಗೆ ವಿಶ್ವದ ಶ್ರೇಷ್ಟ ವ್ಯಂಗ್ಯ ಚಿತ್ರಕಾರ ಮಾರಿಯೋ ಅಜ್ಜ ಈಗ ೮೫ರಲ್ಲಿ ಬಂದು ನಿಂತಿದ್ದಾರೆ. ಬೆಡ್ ಮೇಲೆ ಮಲಗಿರೋ ಅಜ್ಜ ಈಗ ಸರಿಯಾಗಿ ಕಾರ್ಟೂನ್ ಮಾಡುತ್ತಿಲ್ಲ.. ಆದರೂ ಲಕ್ಷಾಂತರ ರೂ. ವಹಿವಾಟು ಅವರ ಕಾರ್ಟೂನ್‌ಗಳಿಂದ ಆಗುತ್ತಿದೆ ಎನ್ನುವ ವಿಷ್ಯಾ ಗೊತ್ತಾ..? ಮಾರಿಯೋ ಅಜ್ಜನ ಜಗುಲಿಯಲ್ಲಿ ಕೂತು ಕೇಳೋಣ ಬನ್ನಿ...

ಮಾರಿಯೋ ಮಿರಾಂಡಾ ಹೆಸರಿನ ಜತೆಯಲ್ಲಿ ಗೋವಾದ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಗೋವಾದ ಫೆನ್ನಿ ಎಷ್ಟು ಕಿಕ್ ಕೊಡುತ್ತೋ ಗೊತ್ತಿಲ್ಲ. ಅದಕ್ಕಿಂದ ಜಾಸ್ತಿ ಮಾರಿಯೋನ ಕ್ಯಾರಿಕೇಚರ್‌ಗಳು ಕಿಕ್ ನೀಡುತ್ತೆ ಎನ್ನೋದು ವ್ಯಂಗ್ಯಚಿತ್ರ ಲೋಕದ ರಿಯಲ್ ಮಾತು. ಇಡೀ ಗೋವಾದಲ್ಲಿ ಫೆನ್ನಿ ಬಹಳಷ್ಟು ರಾಜ್ಯಭಾರ ಮಾಡಿಕೊಂಡಿದ್ದಾರೆ. ಇತ್ತ ಮಾರಿಯೋನ ಕ್ಯಾರಿಕೇಚರ್‌ಗಳು ಗೋವಾಕ್ಕೆ ಅಷ್ಟೇ ಮರ್ಯಾದೆ ತಂದುಕೊಟ್ಟಿದೆ.
ಮಾರಿಯೋರ ಕ್ಯಾರಿಕೇಚರ್‌ಗಳಲ್ಲಿ ಅಂತಹ ವಿಷಯಗಳಿರುತ್ತದೆ. ಅವುಗಳನ್ನು ಅನುಭವಿಸಬೇಕಾದರೆ ಬರೋಬರಿ ಅರ್ಧ ಗಂಟೆ ಟೈಮ್‌ನ ಜತೆಯಲ್ಲಿ ತಾಳ್ಮೆ ಇರಬೇಕು. ಹಾಗಾದರೆ ಅದನ್ನು ರಚಿಸುವ ಮಾರಿಯೋಗೆ ಎಷ್ಟು ಟೈಮ್, ತಾಳ್ಮೆ ಬೇಕಾಗಿಲ್ಲ ?! ಮಾರಿಯೋ ಅವರ ಕುಸುರಿ ಕೆಲಸ, ವ್ಯಕ್ತಿಗಳು, ಅವರ ಹಾವಭಾವ, ಟ್ರಾಫಿಕ್, ಜನಸಂದಣಿ, ಪಾರ್ಟಿ, ಕಟ್ಟಡ, ನಾಯಿಗಳು ಅದು ಇದು ಅಂತಹ ಹೇಳಿ ಊಪ್ಸ್ ! ಪ್ರಪಂಚದಲ್ಲಿ ಇಂತಹ ತಾಳ್ಮೆ ಇರುವ ವ್ಯಂಗ್ಯಚಿತ್ರಕಾರ ಬೇರೆ ಇರಲು ಸಾಧ್ಯನೇ ಇಲ್ಲ ಅನ್ನಿಸಿಬಿಡೋದು ಇದೆ.
ಗೋವಾದಲ್ಲಿ ಒಳ್ಳೆಯ ಪೆನ್ನಿ ಸಿಗುತ್ತದೆ. ಆದರೆ ಒಳ್ಳೆಯ ವಿದ್ಯಾಭ್ಯಾಸ ಮಾತ್ರ ಸಿಗೋದಿಲ್ಲ ಹಾಗೆಂದು ಮಾರಿಯೋ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದಿದ್ದರು. ಕಾಲೇಜು ಶಿಕ್ಷಣಕ್ಕೆ ಮುಂಬಯಿ ಹೋಗಿದ್ದೇ ತಡ ಅವರಲ್ಲಿ ಅಡಗಿದ್ದ ಸೃಜನಶೀಲತೆಗೆ ರೆಕ್ಕೆ ಪುಕ್ಕಗಳು ಬೆಳೆಯಿತು.
ಎಲ್ಲರೂ ಡೈರಿಯಿಂದ ದಿನನಿತ್ಯದ ವಿಷಯಗಳನ್ನು ಬರೆದುಕೊಂಡರೆ ಮಾರಿಯೋ ಅದನ್ನೇ ವ್ಯಂಗ್ಯಚಿತ್ರದ ಮೂಲಕ ಬರೆದಿಟ್ಟುಕೊಂಡರು. ೧೯೪೭ರಿಂದ ಆರಂಭವಾಗಿ ೧೯೫೯ರ ವರೆಗೆ ಅವರು ನೈಜ ಚಿತ್ರಗಳನ್ನು ಬರೆದರು. ಆದರೆ ಅದರ ಹಾವಭಾವಗಳು ವ್ಯಂಗ್ಯತೆ ಅಡಗಿ ಕೂತಿತ್ತು.
‘ದೀ ಇಲ್ಲಸ್ಟ್ರೀಟೆಡ್ ವೀಕ್ಲಿ’ಯಲ್ಲಿ ಮೆಚ್ಚಿನ ವ್ಯಂಗ್ಯಚಿತ್ರಕಾರರಾಗಿದ್ದ ಮಾರಿಯೋ ಭಾರತದ ಗಡಿಯನ್ನು ದಾಟಿ ಬೆಳೆಯುವ ಮನಸ್ಸಾಯಿತು. ಲಂಡನ್‌ನಲ್ಲಿ ಚಿತ್ರ ರಚನೆಗಿಂತ ಹೆಚ್ಚಾಗಿ ಹೋಟೆಲ್‌ಗಳ ಪಾತ್ರೆ ತೊಳೆಯಬೇಕಾದ ಕೆಲಸಗಳನ್ನು ಮಾಡಬೇಕಾಯಿತು. ಅಮೆರಿಕದಲ್ಲಿ ಪೀನಟ್ ಖ್ಯಾತಿಯ ವ್ಯಂಗ್ಯ ಚಿತ್ರಕಾರ ಶುಲ್ಜ್‌ಗೆ ಸಹಾಯಕರಾಗಿ ದುಡಿದರು. ಅಲ್ಲೂ ಮಾರಿಯೋಗೆ ಸರಿ ಹೋಗಲಿಲ್ಲ. ವಾಪಾಸು ಮುಂಬಯಿಗೆ ಬಂದು ಇಳಿದಾಗ ಟೈಂಸ್‌ನಲ್ಲಿ ಅವಕಾಶಗಳು ಕಾದು ಕುಳಿತಿತ್ತು. ಎಕಾನಮಿಕ್, ಬ್ಯುಸಿನೆಸ್‌ನಲ್ಲಿ ಎಳ್ಳಷ್ಟೂ ಆಸಕ್ತಿ ಇಲ್ಲದೇ ಇದ್ದರೂ ‘ಎಕಾನಮಿಕ್ ಟೈಮ್ಸ್’ನಲ್ಲಿ ದಿನನಿತ್ಯ ಪಾಕೇಟ್ ಕಾರ್ಟೂನ್ ರಚಿಸತೊಡಗಿದರು.
ಅದು ಬಹಳಷ್ಟು ಜನಪ್ರಿಯವಾಯಿತು. ಈ ಜನಪ್ರಿಯತೆಯ ಹಿಂದೆ ಅವರು ರಚಿಸುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಇದ್ದ ಪಾತ್ರಗಳು. ಮಿಸ್ ಪೋನೆಸ್ಕೋ, ಗೋಡ್ ಬೋಲೆ,ಬಂಡಲ್‌ದಾಸ್, ಮೂನ್‌ದಾಸ್ ಫಿಲ್ಮಿಪೇರ್‌ಗಾಗಿ ರಜನಿ ನಿಂಬುಪಾನಿ ರಚಿಸಿದರು. ಕಾಗದದ ಮೇಲೆ ಪೊನೆಸ್ಕೋ, ರಜನಿ ನಿಂಬುಪಾನಿ ವ್ಯಂಗ್ಯಚಿತ್ರದಲ್ಲಿ ಅಂಕುಡೊಂಕುಗಳನ್ನು ಕಾಣಿಸಿಕೊಳ್ಳುತ್ತಿದ್ದಂತೆ ಅತ್ತ ವಿದೇಶಗಳಿಗೆ ಹೋಗಿ ‘ಅಂಕುಡೊಂಕು’ಗಳ ದರ್ಶನ ಭಾಗ್ಯ ಪಡೆದು ಬಂದರು.
ಪ್ಯಾರಿಸ್, ಪ್ರಾಂಕ್ ಪರ್ಟ್, ಟೋಕಿಯೋ, ಜರ್ಮನಿ, ಅಮೆರಿಕ ಅದರಲ್ಲೂ ಹ್ಯಾಂಗ್‌ಬರ್ಗ್‌ನಲ್ಲಿರುವ ಯಾವುದೇ ನಗ್ನ ನೃತ್ಯ ರೆಸ್ಟೋರೆಂಟ್‌ಗಳಿಗೆ ಭೇಟಿ ಕೊಡಲು ಮಾರಿಯೋ ಮರೆಯಲಿಲ್ಲ. ಅಲ್ಲಲ್ಲಿ ತನ್ನ ಕಲಾಕೃತಿಗಳನ್ನು ಪ್ರದರ್ಶನ ಭಾಗ್ಯ ಕೊಟ್ಟರು. ಜತೆಯಲ್ಲಿ ಮಾರಿಯೋ ಕಾರ್ಟೂನ್ ವರ್ಲ್ಡ್‌ನಿಂದ ಪುಸ್ತಕಗಳು ರಚನೆಗೊಂಡು ಮಾರುಕಟ್ಟೆಗೆ ಇಳಿಯಿತು. ಇತ್ತ ಮ್ಯೂರಲ್ ಆರ್ಟ್‌ಗಳನ್ನು ಮಾಡುತ್ತಾ ವಿಶ್ವದ ಶ್ರೀಮಂತ ಕಾರ್ಟೂನಿಸ್ಟ್ ಎನ್ನಿಸಿಕೊಂಡರು. ಜತೆಗೆ ಕೇಂದ್ರ ಸರಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಅವರ ಕಪಾಟಿನೊಳಗೆ ಬಿದ್ದುಕೊಂಡಿದೆ.
ಅಂದಹಾಗೆ ೮೫ರ ಹರೆಯ ಮಾರಿಯೋರ ಪೂರ್ತಿ ಹೆಸರು ಮಾರಿಯೋ ಜೋ ಆ ವೊ ಕಾರ್ಲೊಸ್ ರೊಜಾರಿಯೋ ಡಿ ಬ್ರಿಟ್ಟೋ ಅಂತೆ ಅವರ ವ್ಯಂಗ್ಯಚಿತ್ರದಂತೆ ಅವರ ಹೆಸರು ಕೂಡ ಮೈಲುಗಟ್ಟಲೆ ಇದೆ. ಆದರೆ ಅವರಿಗೆ ಮಾರಿಯೋ ಅಂತಾ ಕರೆದರೆ ಖುಷಿಯಾಗುತ್ತದೆ ಎಂದು ಒಂದ್ ಸಾರಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ಈಗಲೂ ಮಾರಿಯೋ ಅವರ ಕಲಾಕೃತಿಗಳು ನೋಡಿದಾಗ ಇಡೀ ಗೋವಾದ ದರ್ಶನ ಭಾಗ್ಯ ಎದುರುಗೊಳ್ಳುವ ಸತ್ಯ ಎಂದಿಗೂ ಮರೆಮಾಚಲು ಸಾಧ್ಯವಿಲ್ಲ.

Friday, October 7, 2011

ಮಲ್ಲಿಗೆ ಬೆಳೆಯ ಭಯಾನಕ ಕತೆ ‘ಶಂಕರಪುರ’ ಟ್ರ್ಯಾಜಿಡಿ ಊರು !


ಶಂಕರಪುರ ಎಂದಾಗ ಮಲ್ಲಿಗೆಯ ನೆನಪು ಕಾಡುತ್ತದೆ. ಈ ಊರಿಗೂ ಮಲ್ಲಿಗೆಗೂ ಬಹಳ ಹತ್ತಿರದ ನಂಟು. ಸಾವಿರಾರು ಕುಟುಂಬಗಳು ಈ ಮಲ್ಲಿಗೆ ಮ್ಯಾಲೆ ಬದುಕು ಕಟ್ಟುತ್ತಿವೆ. ಆದರೆ ಮಲ್ಲಿಗೆಗೆ ವಿಪರೀತವಾಗಿ ಬಳಸಲಾಗುತ್ತಿರುವ ಗೊಬ್ಬರ, ಕೀಟನಾಶಕ,ರೋಗನಾಶಕಗಳು ಶಂಕರಪುರವನ್ನು ಬರಡು ಮಾಡುತ್ತಿದೆಯಾ..? ಬೆಳೆಗಾರರ ಆರೋಗ್ಯ ಕೆಡಿಸುತ್ತಿದೆಯಾ ಎಂಬ ಪುಟ್ಟ ಕಳವಳ ಮಣ್ಣಿನ ಮಕ್ಕಳದ್ದು.. ಬನ್ನಿ ಅವರ ಬವಣೆ ಕೇಳೋಣ......

ಉಡುಪಿಯ ಶಂಕರಪುರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಸರು ಹೇಳುವಾಗಲೇ ಮಲ್ಲಿಗೆಯಂತೆ ಮುದ್ದಾಡಿ ಬಿಡೋಣ ಎನ್ನುವ ಆಪ್ತತೆಯೊಂದು ಈ ಊರಿನಲ್ಲಿ ಸೃಷ್ಟಿಯಾಗುತ್ತದೆ. ರಬ್ಬರ್‌ಗೆ ಕೊಚ್ಚಿನ್, ಕ್ಯಾಲಿಕಟ್ ಇದ್ದ ಹಾಗೆ ಮಲ್ಲಿಗೆ ಎಂದಾಗ ಶಂಕರಪುರದ ಮಾರ್ಕೆಟ್ ಕಾಣಿಸಿಕೊಳ್ಳುತ್ತದೆ. ಕಟಪಾಡಿಯಿಂದ ಕೊಂಚ ದೂರಕ್ಕೆ ಹೋದಾಗ ಅಲ್ಲಿ ಶಂಕರಪುರ ಎದುರುಗೊಳ್ಳುತ್ತದೆ. ಅಂದಿಗೂ ಇಂದಿಗೂ ಅಲ್ಲಿನ ಸಾವಿರಾರು ಕುಟುಂಬಗಳು ಮಲ್ಲಿಗೆಯ ಮ್ಯಾಲೆ ಬದುಕು ಕಟ್ಟುತ್ತಿವೆ. ಈ ಮಲ್ಲಿಗೆ ಬೆಳೆಗಾರರ ಬದುಕು ಹಿಂದಿನಂತೆ ಈಗ ಇಲ್ಲ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದ ವಿಚಾರ.
ಶಂಕರಪುರದ ಮಲ್ಲಿಗೆ ಈಗ ಕಳೆಗುಂದುತ್ತಿದೆ. ಮಲ್ಲಿಗೆ ಬೆಳೆದವರಿಗೂ ಅದರ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ವಾಸ್ತವವಾಗಿ ಇಲ್ಲಿ ರಸಗೊಬ್ಬರ, ಮನಬಂದಂತೆ ಪ್ರಯೋಗ ಮಾಡುವ ಕೀಟನಾಶಕ, ರೋಗನಾಶಕದ ಪರಿಣಾಮ ಈಗ ಇದ್ಯಾವುದಕ್ಕೂ ಮಲ್ಲಿಗೆ ಬಗ್ಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಂಕರಪುರದ ಫಲವತ್ತಾದ ಮಣ್ಣು ಮಲ್ಲಿಗೆ ಬೆಳೆಗಾರರಿಂದ ಕೈ ಬಿಟ್ಟು ಹೋಗುತ್ತಿದೆ ಎನ್ನುವ ಪುಟ್ಟ ಕಳವಳ ಬೆಳೆಗಾರರಿಗೂ ಬಂದು ಬಿಟ್ಟಿದೆ. ಅದಕ್ಕೆ ತಕ್ಕಂತೆ ಪದೇ ಪದೇ ಮಲ್ಲಿಗೆ ಗಿಡಗಳಿಗೆ ಅಂಟಿಕೊಳ್ಳುವ ಕಾಯಿಲೆಗಳು ಈ ಎಲ್ಲ ವಿಚಾರಗಳಿಗೆ ಮತ್ತಷ್ಟೂ ಪುಷ್ಠಿ ನೀಡುತ್ತಿದೆ. ಜತೆಗೆ ವಿಪರೀತವಾಗಿ ರೋಗನಾಶಕಗಳ ಬಳಕೆಯಿಂದ ಮಲ್ಲಿಗೆ ಬೆಳೆಗಾರರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತಿದೆ ಎನ್ನುವ ಅರಿವು ಕೂಡ ಅವರಲ್ಲಿ ಬೆಳದಂತೆ ಕಾಣಿಸುತ್ತಿಲ್ಲ.
ಇಲ್ಲಿನ ಮಲ್ಲಿಗೆ ಉಡುಪಿ, ಮಂಗಳೂರು, ಭಟ್ಕಳ, ಕಾಸರಗೋಡು ಸೇರಿದಂತೆ ಮುಂಬಯಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಕುದುರಿಸಿದೆ. ಶಂಕರಪುರ, ಬಂಟಕಲ್ಲು, ಮಂಚಕಲ್ಲು, ಶಿರ್ವ ಹೀಗೆ ಮಲ್ಲಿಗೆಯ ಹಾದಿ ಹಾಗೂ ಉತ್ಪಾದನೆ ಎರಡೂ ಸಾಕಷ್ಟು ಬೆಳೆದಿದೆ ನಿಜ. ಆದರೆ ಹಿಂದಿನಂತಹ ಪ್ರಗತಿ ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೀಟನಾಶಕಗಳ ಬಳಕೆ ಇಲ್ಲದೇ ಹೋದರೆ ಮಲ್ಲಿಗೆ ಗಿಡವೇ ಉಳಿಯುವುದಿಲ್ಲ ಎನ್ನುವುದು ಮಂಚಕಲ್ಲುವಿನ ಮಲ್ಲಿಗೆ ಬೆಳೆಗಾರ ರಾಮಯ್ಯ ಅವರ ಮಾತು.
ಶಂಕರಪುರದ ಕತೆ ಏನು:
ವಾಸ್ತವಾಗಿ ಇಲ್ಲಿ ಮಲ್ಲಿಗೆ ಬೆಳೆಯ ಬೆಳೆಗಾರರೇ ತಜ್ಞರು. ಅವರು ಮಾಡಿದ್ದೇ ಕೃಷಿ ಜತೆಗೆ ಅವರು ಮಾಡಿದ್ದೇ ಮದ್ದು. ಇಲ್ಲಿಯ ಗೊಬ್ಬರದಂಗಡಿಯವರೇ ವಿಜ್ಞಾನಿಗಳು. ಕೃಷಿ ವಿವಿಯಿಂದ ಬರುವ ಅಕಾರಿಗಳು ಹೇಳುವ ಮಾತಿಗೆ ಬೆಳೆಗಾರರು ಬರೀ ತಲೆಯಾಡಿಸುವುದರಲ್ಲಿಯೇ ಸಮಯ ಕಳೆದು ಬಿಡುತ್ತಾರೆಯೇ ಹೊರತು. ಅವರು ಹೇಳಿದ ಸಲಹೆಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವ ನಿರ್ಧಾರಕ್ಕಂತೂ ಬರೋದೆ ಇಲ್ಲ ಎನ್ನುವುದು ಕೃಷಿ ಅಕಾರಿ ರಾಜಣ್ಣ ಅವರ ಅಭಿಪ್ರಾಯ.
ಶಂಕರಪುರದ ಪಕ್ಕದ ಊರು ಇನ್ನಂಜೆಯ ದಡ್ಡುವಿನ ಶೋಭಾಕ್ಕ ೩೮ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದಾರೆ. ೩೮ ಗಿಡಗಳಿಗೆ ಬರೋಬರಿ ೧೦ ಸಾವಿರ ರೂ. ಖರ್ಚು ಮಾಡುತ್ತಾರೆ. ೫ ಸಾವಿರ ಕೊಟ್ಟು ಎರಡು ಟೆಂಪೊ ಲೋಡು ಹಟ್ಟಿ ಗೊಬ್ಬರ ತಂದು ಮಲ್ಲಿಗೆ ಗಿಡಗಳಿಗೆ ಸುರಿಯುತ್ತಾರೆ. ೮೦೦-೧೦೦೦ರೂ. ಕೊಟ್ಟು ರಾಸಾಯನಿಕ ಗೊಬ್ಬರ ಹಾಗೂ ಔಷಯನ್ನು ತರುತ್ತಾರೆ. ದಿನಕ್ಕೆ ೧೫ ಅಟ್ಟೆಯಷ್ಟು ಮಲ್ಲಿಗೆ ಕೊಯ್ಯುತ್ತಿದ್ದ ಶೋಭಾಕ್ಕನಿಗೆ ಮಳೆಗಾಲದಲ್ಲಿ ಕೊಯ್ಯಲು ಕೂಡ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಬಿಡಿ ಎಲೆಯೂ ಇಲ್ಲವಂತೆ. ಆದರೂ ಕೊಂಚನೂ ಧೈರ್ಯ ಕುಂದಿಲ್ಲ ಶೋಭಾಕ್ಕನಿಗೆ, ಈಗಲೂ ಪಕ್ಕದ ಔಷಧ ಅಂಗಡಿಯಿಂದ ತಂದು ರಾಸಾಯನಿಕಗಳನ್ನು ಗಿಡಗಳಿಗೆ ಸುರಿಯುತ್ತಿದ್ದಾರೆ.
ತುಂಬಾನೇ ಮುಗ್ದರು:
ಶಂಕರಪುರ, ಬಂಟಕಲ್ಲು, ಕಟಪಾಡಿ ಟೋಟಲಿ ಹತ್ತಕ್ಕಿಂತ ಜಾಸ್ತಿ ರಾಸಾಯನಿಕ ಹಾಗೂ ಕೀಟನಾಶಕಗಳ ದುಕಾನುಗಳಿವೆ. ಇವು ಬರೀ ದುಕಾನುಗಳು ಎಂದರೆ ತಪ್ಪಾಗುತ್ತದೆ. ಮೊಡರ್ನ್ ಭಾಷೆಯಲ್ಲಿ ‘ಚಿಕಿತ್ಸಾಲಯ’ಗಳು ಇದೇ ಸರಿಯಾದ ಪದ. ಶಂಕರಪುರ ಹಾಗೂ ಪಕ್ಕದ ಊರುಗಳಿಗೆ ಇಲ್ಲಿಂದಲೇ ರಾಸಾಯನಿಕಗಳು ಪೂರೈಕೆಯಾಗುತ್ತಿರುವುದು. ದುರಾದೃಷ್ಟವೆಂದರೆ ಕೆಲವು ಮಲ್ಲಿಗೆ ಬೆಳೆಗಾರರಿಗೆ ಈ ರಾಸಾಯನಿಕಗಳ ಹೆಸರೇ ಗೊತ್ತಿಲ್ಲ ಬಿಡಿ. ಅಂಗಡಿಯವರು ಹೇಳುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಮಲ್ಲಿಗೆ ಗಿಡಗಳಿಗೆ ಸುರಿಯಲಾಗುತ್ತಿದೆ. ಹಸಿರು ಪುಡಿ, ಕೇಸರಿ ಪುಡಿ, ತ್ರಿಕೋನ ಮಾರ್ಕಿನ ಬಾಟಲಿ, ಬಾಣ ಮಾರ್ಕಿನ ಸ್ಯಾಚೆಟ್ ಇದೆಲ್ಲವೂ ಇಲ್ಲಿನ ಬೆಳೆಗಾರರು ರಾಸಾಯನಿಕಗಳಿಗೆ ಇಟ್ಟ ಲೋಕಲ್ ಬ್ರಾಂಡ್‌ನೇಮ್‌ಗಳು.
ಮಂಚಕಲ್ಲಿನ ಅಪ್ಪಿ, ಸುಂದರಿ, ಸೂರ‍್ಯ ಮೂಲ್ಯ ಹೇಳುವಂತೆ ‘ಸಾವಯವದಲ್ಲಿ ಬೆಳೆಯುವ ಮಲ್ಲಿಗೆ ಗಿಡಗಳಿಗೆ ರೋಗಗಳು ಇಲ್ಲ ಎನ್ನುವಂತಿಲ್ಲ. ಅಲ್ಲೂ ಇದೆ ಆದರೆ ಅದರ ಪ್ರಮಾಣ ಕೊಂಚ ಕಡಿಮೆ. ಜತೆಗೆ ಇಳುವರಿಗೂ ಬಹಳ ಪೆಟ್ಟಿದೆ. ಕೀಟನಾಶಕಗಳು ಬಳಸದೇ ಇದ್ದರೆ ಮಲ್ಲಿಗೆ ಕೃಷಿ ಬಿಡಬೇಕಾದೀತು’ ಎನ್ನುತ್ತಾರೆ ಅವರು. ಮಲ್ಲಿಗೆಯಲ್ಲಿ ರೋಗಗಳು ಬರಲಿ ಅಥವಾ ಬರದೇ ಇರಲಿ ಕೀಟನಾಶಕಗಳನ್ನು ತಂದು ಹಾಕದೇ ಇದ್ದರೆ ಮುಂದಿನ ವರ್ಷದಿಂದ ಕಾಯಿಲೆಗಳು ಕಟ್ಟಿಟ್ಟ ಬುತ್ತಿ ಎನ್ನುವುದು ಅವರ ಅಭಿಪ್ರಾಯ.
ಹೊಸ ಹೊಸ ರೋಗಗಳು:
ಬಂಟಕಲ್ಲಿನ ರಾಮಕೃಷ್ಣ ಶರ್ಮ ‘ನಾವು ತಂದೆಯ ಕಾಲದಿಂದಲೂ ಮಲ್ಲಿಗೆ ಕೃಷಿ ಮಾಡುತ್ತಾ ಬರುತ್ತಿದ್ದೇವೆ. ಅಂದಿನ ಕಾಲದಲ್ಲಿ ಇಳುವರಿ ಹೆಚ್ಚಿತ್ತು ಜತೆಗೆ ಕಾಯಿಲೆಗಳು ಕೂಡ ಕಡಿಮೆ ಇದ್ದವು. ಆದರೆ ಈಗ ಮಲ್ಲಿಗೆಯ ಗಿಡ ಹಳದಿ ಬಣ್ಣಕ್ಕೆ ತಿರುಗುವುದು, ಎಲೆಗಳಿಗೆ ಚುಕ್ಕೆ ರೋಗ ಕಾಣಿಸಿಕೊಳ್ಳುವುದು, ಗಿಡವೇ ಸತ್ತು ಹೋಗುವುದು, ಹಾವಸೆಯಿಂದ ಇಡೀ ಮಲ್ಲಿಗೆ ಗಿಡವೇ ತುತ್ತಾಗುವುದು ಇತ್ಯಾದಿ ಕಾಯಿಲೆಗಳಿಗೆ ಪರಿಹಾರ ನೀಡಲು ಇಂದಿನ ವರೆಗೂ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಬೆಳೆಗಾರರು ಇಂತಹ ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಾರೆ’ ಎನ್ನುತ್ತಾರೆ ಅವರು.
‘ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಮಲ್ಲಿಗೆಗೆ ಬರುವ ಕಾಯಿಲೆಗಳನ್ನು ತಪಾಸಣೆ ಮಾಡಲು ಕೃಷಿ ವಿವಿಯ ವಿಜ್ಞಾನಿಗಳ ಜತೆಯಲ್ಲಿ ತಜ್ಞರನ್ನು ಕರೆಸಿಕೊಂಡಿದ್ದೇವು. ಆದರೆ ಈ ತಜ್ಞರಿಗೂ ಈ ಕಾಯಿಲೆಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳನ್ನು ಹಾವಸೆ ತಿಂದು ಮುಗಿಸುತ್ತದೆ. ಈ ಸಮಯದಲ್ಲಿ ಕೃಷಿಕರಿಗೆ ದಿಕ್ಕೆ ತೋಚುವುದಿಲ್ಲ. ರಾಸಾಯನಿಕ ಅಂಗಡಿಯವರು ಇಂತಹ ಮದ್ದು ಕೊಟ್ಟು ನೋಡಿ ಎಂದು ಬೆಳೆಗಾರರಿಗೆ ಸಲಹೆ ಕೊಡುತ್ತಾರೆ ಇಂತಹ ಉದಾಹರಣೆಗಳೇ ಬಹಳಷ್ಟು ಶಂಕರಪುರಂನಲ್ಲಿ ಕಾಣಿಸಿಕೊಳ್ಳುತ್ತಿದೆ ’ಎನ್ನುತ್ತಾರೆ ಅವರು.
ಕೃಷಿಗೂ,ಕೃಷಿಕರಿಗೂ ತೊಂದ್ರೆ:
ಕೃಷಿ ಪತ್ರಕರ್ತ ನಾ.ಕಾರಂತ ಪೆರಾಜೆ ‘ಕೀಟನಾಶಕ ಹಾಗೂ ರಾಸಾಯನಿಕಗಳ ಪ್ರಯೋಗದಿಂದ ಕೃಷಿ ಭೂಮಿಯ ಜತೆಗೆ ಕೃಷಿಕರ ಆರೋಗ್ಯ ಕೂಡ ಹದಗೆಡುತ್ತದೆ. ಯಾವ ಕೀಟನಾಶಕಗಳು ಯಾವಾಗ ಏನೂ ಮಾಡುತ್ತದೆ ಎನ್ನುವಂತಿಲ್ಲ. ಅದೆಲ್ಲವೂ ಲಾಂಗ್ ಟೈಮ್ ಎಫೆಕ್ಟ್ ಎನ್ನುವುದು ಮಾತ್ರ ನಿಜ. ಕೆಲವು ಕೀಟನಾಶಕಗಳು ಅವುಗಳ ಬಳಕೆಯ ಸಮಯದಲ್ಲಿಯೇ ತನ್ನ ಪ್ರಭಾವವನ್ನು ತೋರಿಸುತ್ತದೆ. ಕೀಟನಾಶಕಗಳನ್ನು ಸಿಂಪಡಣೆ ಮಾಡುವಾಗಲೇ ತಲೆಸುತ್ತು ಬರೋದು ಒಂದು ರೀತಿಯ ಎಫೆಕ್ಟ್ . ಕೆಲವು ವರ್ಷಗಳ ನಂತರ ಕೃಷಿಕರಿಗೆ ಬೇರೆ ರೀತಿಯ ಕಾಯಿಲೆಗಳು ಮುತ್ತಿಡುವ ಚಾನ್ಸ್ ಬಹಳಷ್ಟಿದೆ. ಇದೆಲ್ಲವೂ ಅಧ್ಯಯನದಿಂದ ಮಾತ್ರ ಸಾಧ್ಯ ’ಎನ್ನುತ್ತಾರೆ ಅವರು.
ಮಲ್ಲಿಗೆ ಬೆಳೆಗಾರ ಗೊಂದಲಕ್ಕೆ ಸಿಲುಕಿಕೊಂಡಿರುವುದು ನಿಜ. ರಾಸಾಯನಿಕ ವಸ್ತುಗಳಿಗೆ ಸಾಥ್ ಕೊಡಬೇಕಾ ಅಥವಾ ಸಾವಯವದತ್ತ ಮುಖ ಮಾಡಬೇಕಾ..? ಎಂಬ ಚಿಂತೆಯಲ್ಲಿ ಮುಳುಗಿ ಹೋಗಿದ್ದಾನೆ. ರಾಸಾಯನಿಕದ ಹಾದಿ ಮಲ್ಲಿಗೆ ಬೆಳೆಗಾರನನ್ನು ತಿರುಗಿ ಬರಲಾಗದಂತೆ ಮಾಡಿದೆ ಎನ್ನುವುದು ಶಂಕರಪುರ ಮಲ್ಲಿಗೆ ಊರನ್ನು ನೋಡಿದವರಿಗೆ ಅನ್ನಿಸದೇ ಇರಲಾರದು.

( ೨೦೧೦-೨೦೧೧ರ ಸಾಲಿನ ‘ಕಡಂದಲೆ ಪ್ರಶಸ್ತಿ ’ಪಡೆದುಕೊಂಡ ಲೇಖನವಿದು. ಈ ಲೇಖನ ವಿಜಯ ಕರ್ನಾಟಕದ ೨ನೇ ಮುಖಪುಟದಲ್ಲಿ ಈ ಹಿಂದೆ ಪ್ರಕಟಗೊಂಡಿತ್ತು. )

ಅವಾರ್ಡ್ ಬಂತು ನಿರೀಕ್ಷೆ ಹೆಚ್ಚಾಯಿತು






ವಿಜಯ ಕರ್ನಾಟಕ ಮಂಗಳೂರು ಆವೃತ್ತಿಗೆಉಪಸಂಪಾದಕ/ ವರದಿಗಾರನಾಗಿ ಬಂದು ಬರೋಬರಿ ಐದು ವರ್ಷಗಳು ಉರುಳಿ ಹೋಗಿದೆ. ಕೆಲಸದಲ್ಲಿ ನೆಮ್ಮದಿ, ತೃಪ್ತಿ ಜತೆಗೆ ಗೌರವ, ಹೆಸರು ಎಲ್ಲವೂ ಪುಟ್ಟ ಅವಽಯಲ್ಲಿ ಬಂದು ಆಗಿತ್ತು. ಆದರೆ ಪ್ರಶಸ್ತಿ ಎನ್ನುವ ವಿಚಾರ ಮರೀಚಿಕೆ ಎಂದೇ ನಾನು ನಂಬಿಕೆ ಇಟ್ಟುಕೊಂಡಿದ್ದೆ. ಪತ್ರಿಕೋದ್ಯಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ, ಸನ್ಮಾನಗಳು ಮೀಸಲಾಗಿದೆ ಎನ್ನುವ ಕಲ್ಪನೆಯ ಪ್ರಪಂಚದಲ್ಲಿ ದಿನಲೂ ತೇಲಾಡುತ್ತಿದ್ದೆ.
ಆದರೆ ಇದೆಲ್ಲವೂ ಸುಳ್ಳು ಅನ್ನಿಸಿದ್ದು ಮಾತ್ರ ಹಿರಿಯ ಪತ್ರಕರ್ತ ಕೆ.ಜೆ.ಶೆಟ್ಟಿ ಕಡಂದಲೆಯ ಹೆಸರಿನಲ್ಲಿ ಕಿನ್ನಿಗೋಳಿಯ ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡಿದ ಕಡಂದಲೆ ಪ್ರಶಸ್ತಿಸ್ವೀಕಾರ ಮಾಡಿದ ನಂತರ... ‘ಟ್ರ್ಯಾಜಿಡಿ ಊರು ಶಂಕರಪುರ ಮಲ್ಲಿಗೆಯ ಕಟುವಾಸನೆ’ ಎನ್ನುವ ನನ್ನ ಗ್ರಾಮೀಣ ವರದಿಗೆ ಕಡಂದಲೆ ಪ್ರಶಸ್ತಿ ಬಂದಿದೆ. ಕಿನ್ನಿಗೋಳಿಯಲ್ಲಿ ಅಕ್ಟೋಬರ್ ೨ರಂದು ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಪಡೆದುಕೊಂಡ ಕೆಲವೊಂದು ರಸ ನಿಮಿಷಗಳ ಚಿತ್ರವನ್ನು ನನ್ನ ಪತ್ರಕರ್ತ ಗೆಳೆಯ ಮನೋಜ್ ಹಾಗೂ ಸುನೀಲ್ ಹಳೆಯಂಗಡಿ ಸೆರೆ ಹಿಡಿದು ಇಮೇಲ್ ಕಳುಹಿಸಿ ಕೊಟ್ಟಿದ್ದಾರೆ.