Monday, April 7, 2014

ಬಣ್ಣದ ಬದುಕಿಗೆ ಮರಳಿದ ಅರವಿಂದ್ ಸ್ವಾಮಿ

* ಸ್ಟೀವನ್ ರೇಗೊ, ದಾರಂದಕುಕ್ಕು ಅರವಿಂದ ಸ್ವಾಮಿ ಎಂದಾಕ್ಷಣ ಬಾಲಿವುಡ್ ನಿರ್ದೇಶಕ ಮಣಿರತ್ನಂ ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಣಿ ಗರಡಿಯಲ್ಲಿ ಬಂದ ‘ಬಾಂಬೇ’ ಹಾಗೂ ‘ರೋಜಾ’ ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಂಡ ಅರವಿಂದ್ ಸ್ವಾಮಿ ಕೆಲವು ಚಿತ್ರಗಳಲ್ಲಿ ನಟಿಸಿ ನಂತರ ಬಹಳ ವರ್ಷಗಳ ಕಾಲ ಸಿನಿಮಾಗಳಿಂದ ದೂರಕ್ಕೆ ಉಳಿದುಬಿಟ್ಟಿದ್ದರು. ಒಂದು ಲೆಕ್ಕಚಾರದ ಪ್ರಕಾರ ಸ್ವಾಮಿ ಸಿನಿಮಾ ರಂಗವನ್ನೇ ಬಿಟ್ಟು ಹೋಗಿದ್ದಾರೆ ಎನ್ನುವ ಗುಸುಗುಸು ಕೂಡ ಹರಡಿತ್ತು.
ಸ್ವಾಮಿಯ ವೈವಾಹಿಕ ಬದುಕಿನ ಪಲ್ಲಟಗಳು ಈ ರೀತಿ ಸಿನಿಮಾ ರಂಗದಿಂದ ದೂರಕ್ಕೆ ಉಳಿಯಲು ಕಾರಣವಾಗಿತ್ತು ಎನ್ನುವ ಮಾತು ಕೂಡ ಇತ್ತು. ಆದರೆ ತೀರಾ ಇತ್ತೀಚೆಗೆ ಮಣಿರತ್ನಂ ಬಹು ನಿರೀಕ್ಷೆ ಹುಟ್ಟಿಹಾಕಿದ ಚಿತ್ರ ‘ಕಡಲ್’ನಲ್ಲಿ ನಾಯಕ ನಟನಿಗೆ ಬೆಂಬಲ ನೀಡುವ ಪೋಷಕ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದ ಬಳಿಕ ಅರವಿಂದ್ ಸ್ವಾಮಿ ಮತ್ತೆ ಕಾಣೆಯಾಗಿ ಹೋಗಿದ್ದರು. ಈಗ ಮತ್ತೆ ಅರವಿಂದ್ ಸ್ವಾಮಿ ಬಣ್ಣದ ಲೋಕಕ್ಕೆ ಮರು ಪ್ರವೇಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಲಿವುಡ್‌ನ ಬಿಗ್ ಬಜೆಟ್ ಚಿತ್ರಗಳ ನಿರ್ದೇಶಕ ಅಜಿತ್ ಗೌತಮ್ ಮೆನನ್‌ನ ಹೊಸ ಪ್ರಾಜೆಕ್ಟ್‌ನಲ್ಲಿ ಅರವಿಂದ್ ಸ್ವಾಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸುದ್ದಿ. ಇವರ ಜತೆಗೆ ನಟ ಅರುಣ್ ವಿಜಯ್ ಕೂಡ ನಟಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಈ ಬಾರಿ ಸ್ವಾಮಿ ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಮಾತಿದೆ. ಇದಕ್ಕಾಗಿಯೇ ಜಿಮ್‌ನಲ್ಲಿ ಬೆವರಿಳಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಆದರೆ ಅರವಿಂದ್ ಸ್ವಾಮಿ ತಾನು ಖಳನಾಯಕನಾಗಿ ನಟಿಸುವುದಿಲ್ಲ. ಇಂತಹ ಪಾತ್ರ ಮಾಡುವಂತೆ ಯಾವುದೇ ಚಿತ್ರಗಳು ನನ್ನ ಮುಂದೆ ಬಂದಿಲ್ಲ. ಈ ಕುರಿತು ಶೀಘ್ರವೇ ಟ್ವಿಟ್ವರ್‌ನಲ್ಲಿ ಬಹಿರಂಗ ಪಡಿಸುವುದಾಗಿ ಸ್ವಾಮಿ ಹೇಳಿಕೊಂಡಿದ್ದಾರೆ. ಈಗ ಗೌತಮ್ ಜತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಸಪ್ಟೆಂಬರ್ ತಿಂಗಳ ಆರಂಭದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ಕತೆ, ತಾರಾಗಣಗಳ ಕುರಿತು ಯಾವುದೇ ಮಾಹಿತಿಯನ್ನು ಸಧ್ಯಕ್ಕೆ ನೀಡುವುದಿಲ್ಲ. ಚಿತ್ರದ ತಂಡವೇ ಈ ಕುರಿತು ಹೆಚ್ಚುವರಿ ಮಾಹಿತಿಯನ್ನು ನೀಡುತ್ತದೆ ಎಂದಿದ್ದಾರೆ. ಟೋಟಲಿ ಅರವಿಂದ್ ಸ್ವಾಮಿಯ ಕಮ್ ಬ್ಯಾಕ್ ಸಿನಿಮಾ ಎಂದಾಕ್ಷಣ ಅವರ ಅಭಿಮಾನಿಗಳಿಗಂತೂ ನಿರೀಕ್ಷೆ ಇದ್ದೇ ಇದೆ.

No comments:

Post a Comment