Tuesday, February 26, 2013

ಯುವಕರಿಗೆ ಮುತ್ತು ಕೊಡ್ತಾಳೆ ಮಲ್ಲಿ !

ವೀಣಾ ಮಲ್ಲಿಕ್ ಈ ರಿಯಾಲಿಟಿ ಶೋನಲ್ಲಿ ನಿರಂತರವಾಗಿ ಮುತ್ತಿನ ಸುರಿಮಳೆ ಸುರಿಸುವ ಚಾನ್ಸ್ ಇದೆ. ಹೌದು. ಒಂದು ನಿಮಿಷಗಳ ಕಾಲ ನಿರಂತರವಾಗಿ ಯುವಕರ ಗಲ್ಲದ ಮೇಲೆ ವೀಣಾ ಮಲ್ಲಿಕ್ ತನ್ನ ತುಟಿಯ ಮುದ್ರೆಯನ್ನು ಮುದ್ರಿಸಲಿದ್ದಾರೆ. ಸ್ಟೀವನ್ ರೇಗೊ, ದಾರಂದಕುಕ್ಕು ಪಾಕ್ ಮೂಲದ ಫೈಯರ್ ಬ್ರಾಂಡ್ ಮತ್ತೆ ಸದ್ದು ಮಾಡಿದೆ. ಚಳಿ, ಮಳೆಯಲ್ಲಿ ಮಾತ್ರ ಹಾಟ್‌ನೆಸ್‌ನಲ್ಲಿ ಮುಳುಗಿ ಬರುತ್ತಿರುವ ವೀಣಾ ಮಲ್ಲಿಕ್ ಈ ಬಾರಿ ಕೊಂಚ ಭಿನ್ನ ವಿಚಾರಕ್ಕೆ ಸುದ್ದಿ ಅಂಗಳದಲ್ಲಿ ತುಟಿ ಬಿಚ್ಚಿ ನಿಂತಿದ್ದಾಳೆ. ವೀಣಾ ಮಲ್ಲಿಕ್ ತನ್ನ ಬಟ್ಟೆಯ ಬಿಚ್ಚಾಟದಲ್ಲಿ ತೋರಿಸುತ್ತಿದ್ದ ದಮ್ ಈ ಬಾರಿ ಮುತ್ತಿನಲ್ಲಿ ತೋರಿಸುವ ಇರಾದೆ ಇಟ್ಟುಕೊಂಡಿದ್ದಾಳೆ. ವೀಣಾ ಮಲ್ಲಿಕ್ ತನ್ನ ಬರ್ತ್‌ಡೇ ದಿನದಂದು ಖಾಸಗಿ ಚಾನೆಲ್‌ವೊಂದರ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ವೀಣಾ ಮಲ್ಲಿಕ್ ಈ ರಿಯಾಲಿಟಿ ಶೋನಲ್ಲಿ ನಿರಂತರವಾಗಿ ಮುತ್ತಿನ ಸುರಿಮಳೆ ಸುರಿಸುವ ಚಾನ್ಸ್ ಇದೆ. ಹೌದು. ಒಂದು ನಿಮಿಷಗಳ ಕಾಲ ನಿರಂತರವಾಗಿ ಯುವಕರ ಗಲ್ಲದ ಮೇಲೆ ವೀಣಾ ಮಲ್ಲಿಕ್ ತನ್ನ ತುಟಿಯ ಮುದ್ರೆಯನ್ನು ಮುದ್ರಿಸಲಿದ್ದಾರೆ. ಅದು ಕೂಡ ಲೈವ್ ರಿಯಾಲಿಟಿ ಶೋನಲ್ಲಿ ಇದರಲ್ಲಿ ಯಾವುದೇ ಟೇಕ್ ಹಾಗೂ ಕಟ್‌ಗಳು ಇರುವುದಿಲ್ಲ. ಒಂದು ನಿಮಿಷದಲ್ಲಿ ೧೦೦ ಮುತ್ತುಗಳನ್ನು ಯುವಕರ ಗಲ್ಲದ ಮೇಲೆ ಮೂಡಿಸುವ ಮೂಲಕ ವೀಣಾ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲೆಯಾಗುತ್ತದೆ. ಮುತ್ತಿಗಾಗಿ ಯುವಕರ ಬೇಟೆ: ಈ ಮುತ್ತಿನ ಪ್ರಹಸನವನ್ನು ಕಣ್ಣಾರೆ ಕಾಣಲು ಗಿನ್ನೆಸ್ ರೆಕಾರ್ಡ್ ತಂಡ ಕೂಡ ರಿಯಾಲಿಟಿ ಶೋನಲ್ಲಿ ಬೀಡು ಬಿಡಲಿದೆ. ‘ದೀ ಸಿಟಿ ದಟ್ ನೆವರ್ ಸ್ಲೀಪ್ಸ್ ಬಾಲಿವುಡ್ ಹಂಟ್’ ಎನ್ನುವ ಖಾಸಗಿ ವಾಹಿನಿಯ ರಿಯಾಲಿಟಿ ಶೋಗಾಗಿ ಈಗಾಗಲೇ ಮುತ್ತಿಗಾಗಿ ಯುವಕರ ಬೇಟೆಯನ್ನು ಆರಂಭಿಸಿದೆ. ವೀಣಾ ಮಲ್ಲಿಕ್ ಹೇಳುವಂತೆ: ನಾನು ಈ ಸ್ಪರ್ಧೆಯ ಕುರಿತು ತೀರಾ ನಿರೀಕ್ಷೆಯಲ್ಲಿದ್ದೇನೆ. ನನ್ನ ಬರ್ತ್‌ಡೇ ದಿನದಂದು ಇಂತಹ ಗಿನ್ನೆಸ್ ರೆಕಾರ್ಡ್ ಬ್ರೇಕ್ ಮಾಡೋ ಚಾನ್ಸ್ ಸಿಕ್ಕಿರೋದು ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಂತೆ. ಯುವಕರ ಗಲ್ಲದ ಮೇಲೆ ಮುತ್ತಿನ ಮತ್ತು ತೋರಿಸೋದು ನನಗೆ ಬಹಳ ಇಷ್ಟ. ಇದಕ್ಕಾಗಿ ರಿಯಾಲಿಟಿ ಶೋ ತಂಡದ ಜತೆಯಲ್ಲಿ ಚಿತ್ರ ನಿರ್ಮಾಪಕ ಸತೀಶ್ ರೆಡ್ಡಿ, ನಿರ್ದೇಶಕ ಹಾರೂನ್ ರಶೀದ್ ಅವರನ್ನು ನೆನೆಯಬೇಕು ಎಂದಿದ್ದಾರೆ. ಬಾಲಿವುಡ್‌ನ ಬ್ಯುಸಿ ಮಲ್ಲಿ: ನಟಿ ವೀಣಾ ಮಲ್ಲಿಕ್‌ಗೆ ಸದ್ಯ ನಿದ್ದೆ ಮಾಡಲೂ ಸಮಯವಿಲ್ಲ. ಒಂದರ ನಂತರ ಒಂದರಂತೆ ಆರು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟುವಂತೆ ಚಿತ್ರೀಕರಣದಲ್ಲಿ ನಿರತರಾಗಿರುವುದೇ ಇದಕ್ಕೆ ಕಾರಣ. ಪಂಜಾಬಿ ಚಿತ್ರ ‘ಜಟ್ಸ್ ಗೋಲ್‌ಮಾಲ್’ ಚಿತ್ರದ ಮೂಲಕ ಆರ್ಯನ್ ಬಬ್ಬರ್‌ಗೆ ಜತೆಯಾಗಿ ಪಂಜಾಬಿ ಚಿತ್ರಲೋಕವನ್ನು ಪ್ರವೇಶಿಸುತ್ತಿದ್ದಾರೆ. ಹಿಂದಿ ಚಿತ್ರದಲ್ಲೂ ಬಬ್ಬರ್ ಜತೆಯಲ್ಲಿಯೇ ‘ಜಿಂದಗಿ ೫೦-೫೦’ಯಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸ್ನೇಹಿತರಾಗಿದ್ದ ಅಶ್ಮಿತ್ ಪಟೇಲ್ ಜೊತೆಗೆ ‘ಸೂಪರ್ ಮಾಡೆಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೩ಡಿಯಲ್ಲಿ ಬರಲಿರುವ ಮುಂಬೈ ೧೨೫ ಕಿ.ಮೀ. ಎಂಬ ಥ್ರಿಲ್ಲರ್ ಚಿತ್ರದ ಚಿತ್ರೀಕರಣವೂ ನಡೆದಿದೆ. ಈ ಚಿತ್ರಗಳೂ ಸೇರಿದಂತೆ ಒಟ್ಟು ೬ ಚಿತ್ರಗಳು ೨೦೧೩ರಲ್ಲಿ ತೆರೆಗೆ ಬರಲಿವೆ. ಅಲ್ಪಾವಧಿಯಲ್ಲಿಯೇ ಇಷ್ಟೊಂದು ಅವಕಾಶಗಳು ಭಾರತದಲ್ಲಿ ದೊರೆತಿರುವುದು ಅದೃಷ್ಟ. ಭಾರತೀಯರ ಅಭಿಮಾನಕ್ಕೆ ಮೂಕಳಾಗಿದ್ದೇನೆ. ಅಭಾರಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ವೀಣಾ. ಭಾರತ ಹಾಗೂ ಪಾಕಿಸ್ತಾನೀಯರ ಎರಡು ಪ್ರಮುಖ ಆಕರ್ಷಣೆ ಎಂದರೆ ಒಂದು ಕ್ರಿಕೆಟ್, ಇನ್ನೊಂದು ಸಿನಿಮಾ. ನಾನು ಕ್ರಿಕೆಟ್ ಅಭಿಮಾನಿಯೂ ಹೌದು. ಸಿನಿಮಾ ನಟಿಯೂ ಹೌದು. ಕೇವಲ ಕಲೆ ಹಾಗೂ ಕ್ರೀಡೆ ಮಾತ್ರ ಎರಡೂ ದೇಶಗಳ ನಡುವಿನ ಕಹಿಯನ್ನು ನೀಗಿಸಬಲ್ಲದು ಎಂಬುವುದು ಅವರ ಅಭಿಪ್ರಾಯ. (vk lvk published dis article)

ನನ್ನ ಲೇಖನ ನನ್ನ ಪತ್ರಿಕೆ- 5

(vk lvk published dis artilc on 25.02.2013)

Sunday, February 24, 2013

ಬಾಲಿವುಡ್‌ಗೆ ಮತ್ತೆ ಬಂದರು ಸುಬ್ಬು !

ಸುಭಾಷ್ ಘಾಯ್ ಎನ್ನುವ ಮಹಾನ್ ಸಿನಿಮಾ ಮಾಂತ್ರಿಕ ಯಾಕೆ ಸುಮ್ಮನೆ ನಾಲ್ಕು ವರ್ಷ ಕೂತಿದ್ದರು ಎನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತು. ಈಗ ಈ ರಹಸ್ಯನೂ ಬಾಲಿವುಡ್ ಅಂಗಳಕ್ಕೆ ಬಿದ್ದು ಸಿಕ್ಕಿದೆ. ಸುಭಾಷ್ ಘಾಯ್ ಬಾಲಿವುಡ್‌ಗೆ ಮತ್ತೊಂದು ಅದ್ಭುತ ಕೊಡುಗೆ ನೀಡಲಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು ಒಂದಲ್ಲ ಎಡರಲ್ಲ ಬರೋಬರಿ ನಾಲ್ಕು ವರ್ಷಗಳಿಂದ ಸುಭಾಷ್ ಘಾಯ್ ಅವರ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿಲ್ಲ. ಬಹಳ ನಿರೀಕ್ಷೆಯಿಂದ ಹುಟ್ಟಿಕೊಂಡ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ ಸಿನಿಮಾ ‘ಯುವರಾಜ’ನೇ ಘಾಯ್ ಸಾಹೇಬ್ರು ಬಾಲಿವುಡ್‌ಗೆ ಕೊಟ್ಟ ಕೊನೆಯ ಸಿನಿಮಾ ಎನ್ನುವುದು ಅವರ ಅಭಿಮಾನಿಗಳಿಗೆ ಸರಿಯಾಗಿ ಗೊತ್ತಿದೆ. ಆದರೂ ಸುಭಾಷ್ ಘಾಯ್ ಎನ್ನುವ ಮಹಾನ್ ಸಿನಿಮಾ ಮಾಂತ್ರಿಕ ಯಾಕೆ ಸುಮ್ಮನೆ ನಾಲ್ಕು ವರ್ಷ ಕೂತಿದ್ದರು ಎನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತು. ಈಗ ಈ ರಹಸ್ಯನೂ ಬಾಲಿವುಡ್ ಅಂಗಳಕ್ಕೆ ಬಿದ್ದು ಸಿಕ್ಕಿದೆ. ಸುಭಾಷ್ ಘಾಯ್ ಬಾಲಿವುಡ್‌ಗೆ ಮತ್ತೊಂದು ಅದ್ಭುತ ಕೊಡುಗೆ ನೀಡಲಿದ್ದಾರೆ. ಅಂದಹಾಗೆ ಚಿತ್ರದ ಹೆಸರೇ ‘ಕಾಂಚಿ’. ಈ ಹಿಂದೆ ಯುವರಾಜ್ ಚಿತ್ರದ ಮುಂದುವರಿದ ಭಾಗದಂತೆ ಇಲ್ಲೂ ಸಂಗೀತದ ಸುರಿಮಳೆಯೇ ನಡೆಯಲಿದೆ. ಸುಭಾಷ್ ಚಿತ್ರಗಳೆಂದರೆ ಅಲ್ಲಿ ಸಂಗೀತದ ಜತೆಗೆ ಪ್ರೇಮಿಗಳಿಗೂ ಸಾಮಾನ್ಯ ಆದ್ಯತೆ ನೀಡುತ್ತಾರೆ. ಕಾಂಚಿಯಲ್ಲೂ ಇದೇ ವರಸೆ ಮುಂದುವರಿದಿದೆ. ಅಂದಹಾಗೆ ಬಾಲಿವುಡ್‌ನ ಯಾವುದೇ ನಾಯಕ/ ನಾಯಕಿಯನ್ನು ತೆಗೆದುಕೊಳ್ಳದೇ ಘಾಯ್ ಸಾಹೇಬ್ರು ಹೊಸ ನಾಯಕ ಹಾಗೂ ಹೊಸ ನಾಯಕಿಯನ್ನು ಹುಡುಕಿಕೊಂಡು ತಂದಿದ್ದಾರೆ. ಘಾಯ್ ಸಾಹೇಬ್ರು ಹೇಳುವಂತೆ ‘ ನಾಲ್ಕು ವರ್ಷಗಳಿಂದ ನಾನು ಬಾಲಿವುಡ್ ಚಿತ್ರಗಳಿಂದ ದೂರ ಇದ್ದೆ. ಹೊಸ ಕಾಲಕ್ಕೆ ತಕ್ಕಂತೆ ಹೊಸ ಕತೆ, ಹೊಸ ನಾಯಕ/ ನಾಯಕಿಯರನ್ನು ಹುಡುಕಾಟದಲ್ಲಿಯೇ ಇಷ್ಟೂ ಸಮಯವಾಯಿತು. ನನ್ನ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಈ ಚಿತ್ರ ಭಿನ್ನವಾಗಲಿದೆ. ಸಂಗೀತದ ವಿಚಾರದಲ್ಲಂತೂ ಈ ಚಿತ್ರ ಮೈಲುಗಲ್ಲು ಹಾಕುವುದರಲ್ಲಿ ಯಾವುದೇ ಸಂದೇಹ ಇಲ್ಲ . ನನ್ನ ಆರಂಭದ ಚಿತ್ರ ಕಾಳೀಚರಣ್ ತೆಗೆದಾಗಲೂ ಇದೇ ರೀತಿಯ ಹುಮ್ಮಸ್ಸು ಇತ್ತು. ಈಗಲೂ ಕಾಂಚಿಯಲ್ಲೂ ಅದು ಮುಂದುವರಿದಿದೆ. ಚಿತ್ರದ ಕತೆಯಲ್ಲಿ ನಾಯಕಿ ಸಾಹಸ ಕಾರ‍್ಯದಲ್ಲಿ ತೊಡಗುತ್ತಾಳೆ. ಇದು ನನ್ನ ಚಿತ್ರಗಳಲ್ಲಿಯೇ ಭಿನ್ನ ಎಂದು ಘಾಯ್ ಹೇಳಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಿಶಿ ಕಪೂರ್, ಮಿಥುನ್ ಚಕ್ರವರ್ತಿಯ ಜತೆಯಲ್ಲಿ ಹೊಸ ನಾಯಕ ಕಾರ್ತಿಕ್ ತಿವಾರಿ ಹಾಗೂ ಬಂಗಾಳಿ ಹುಡುಗಿ ಮಿಶ್ತಿ ಕಾಣಿಸಿಕೊಳ್ಳಲಿದ್ದಾರೆ. ಸುಭಾಷ್ ಘಾಯ್‌ಯ ‘ಕರ್ಮಾ’ ಚಿತ್ರ ಬಿಡುಗಡೆ ಕಂಡ ದಿನವೇ ಅಂದರೆ ಆಗಸ್ಟ್ ೧೫, ೨೦೧೩ರಲ್ಲಿ ಚಿತ್ರವನ್ನು ತೆರೆಗೆ ತರುವ ಕೆಲಸ ನಡೆಯಲಿದೆ. ಈ ಬಳಿಕ ಹೊಸ ಚಿತ್ರಕ್ಕೆ ಕತೆ ಸಿದ್ಧ ಪಡಿಸಿಕೊಳ್ಳುತ್ತಿದ್ದೇನೆ ಎಂದು ಘಾಯ್ ಸಾಹೇಬ್ರು ಟ್ವಿಟ್ಟರ್‌ನಲ್ಲಿ ಹೇಳಿಬಿಟ್ಟಿದ್ದಾರೆ. ಕಾಂಚಿಯಲ್ಲಿ ಹೊಸ ಮುಖ: ಬಾಲಿವುಡ್‌ನಲ್ಲಿ ಸಣ್ಣಗೆ ನಿರೀಕ್ಷೆ ಹುಟ್ಟಿಸಿದ ಚಿತ್ರ ಆಕಾಶವಾಣಿಯಲ್ಲಿ ನಟಿಸಿದ ಕಾರ್ತಿಕ್ ತಿವಾರಿಗೆ ‘ಕಾಂಚಿ’ ಎರಡನೇ ಚಿತ್ರ. ಸುಭಾಷ್ ಘಾಯ್ ಕಳೆದ ಒಂಬತ್ತು ತಿಂಗಳಿಂದ ‘ಕಾಂಚಿ’ಯ ನಾಯಕನಿಗೆ ಹುಟುಕಾಟ ಆರಂಭಿಸಿದ್ದರು. ಕಾರ್ತಿಕ್ ಸುಭಾಷ್ ಘಾಯ್ ಅವರ ವಿಸ್ಟಿಲಿಂಗ್ ವುಡ್ಸ್‌ನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾಗ ಘಾಯ್‌ಕಣ್ಣಿಗೆ ಬಿದ್ದರು. ಅಲ್ಲಿಂದ ಕಾಂಚಿಯ ನಾಯಕನಿಗಾಗಿ ಹುಡುಕಾಟ ನಿಂತಿತು. ಬಂಗಾಳಿ ಹುಡುಗಿ ಮಿಶ್ತಿ ಸುಭಾಷ್‌ಘಾಯ್ ಕಾಂಚಿ ಚಿತ್ರದ ಲೀಡ್ ನಾಯಕಿ. ಈ ಹಿಂದೆ ಸುಭಾಷ್ ಘಾಯ್ ಮೀನಾಕ್ಷಿ, ಮಾಧುರಿ ಹಾಗೂ ಮಹಿಮಾರ ನಂತರ ಈಗ ಇದೇ ‘ಎಂ’ ಎನ್ನುವ ಪದಕೋಶದ ಬಂಗಾಳಿ ಹುಡುಗಿ ಮಿಶ್ತಿ ನಾಯಕಿ ಸ್ಥಾನಕ್ಕೆ ಬುಕ್ ಆಗಿದ್ದಾಳೆ. ಬಂಗಾಳಿ ಭಾಷೆಯಲ್ಲಿ ‘ಮಿಶ್ತಿ’ ಎಂದರೆ ಸಿಹಿ ತಿಂಡಿ ಎಂದಾರ್ಥವಂತೆ ! ಅಂದಹಾಗೆ ಕರ್ಜ್ ಚಿತ್ರದ ನಂತರ ರಿಶಿ ಕಪೂರ್ ಮೊದಲ ಬಾರಿಗೆ ಘಾಯ್ ಜತೆ ಸೇರಿದ್ದಾರೆ. ಇವರ ಜತೆಯಲ್ಲಿ ಮಿಥುನ್ ಚಕ್ರವರ್ತಿ ಕೂಡ ಬಣ್ಣ ಹಾಕುವ ಸಾಧ್ಯತೆ ಇದೆ. ಅಂದಹಾಗೆ ಚಿತ್ರದಲ್ಲಿ ಇಬ್ಬರು ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಗಮನಿಸಿಕೊಳ್ಳಬೇಕಾದ ವಿಷ್ಯಾ. ಚಿತ್ರಕ್ಕೆ ಸಂಗೀತವನ್ನು ಇಸ್ಮಾಯಿಲ್ ದರ್ಬಾರ್ ಹಾಗೂ ಸಲೀಂ ಸುಲೈಮಾನ್ ನೀಡಿದ್ದಾರೆ. ಉತ್ತರಖಂಡಾದ ಸಾಮಾನ್ಯ ಹುಡುಗಿಯೊಬ್ಬಳ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸೈನ್ಯದಲ್ಲಿರುವ ಹುಡುಗಿಯ ತಂದೆ ವಿರೋಧಿ ಸೈನಿಕರ ಗುಂಡೇಟಿಗೆ ಬಲಿಯಾಗುವ ನಂತರದಲ್ಲಿ ಹುಡುಗಿ ಬದುಕಿನಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳೇ ಚಿತ್ರದ ಜೀವಾಳ. ಬರೋಬರಿ ೩೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಭಾಷ್ ಘಾಯ್ ನಿರ್ದೇಶನದ ಚಿತ್ರ ಕಾಂಚಿ ನಿಜಕ್ಕೂ ಬಿಡುಗಡೆಯ ಮೊದಲೇ ಹೊಸ ಹವಾ ಸೃಷ್ಟಿ ಮಾಡಿದೆ. .... lvk published dis article

ಶಿಂಬು ಹಾಡಿಗೆ ಬರೀ ೨ ಲಕ್ಷ !

ಇಡೀ ವಿಶ್ವಕ್ಕೆ ಲವ್ ಆಂಥಂಮ್ ಕಲಿಸಿಕೊಟ್ಟ ಶಿಂಬು ಈಗ ತಮ್ಮ ಚಿತ್ರಗಳಿಗೆ ಮಾತ್ರವಲ್ಲ ಇತರ ಚಿತ್ರಗಳಿಗೂ ಹಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಒಂದು ಹಾಡಿಗೆ ಶಿಂಬು ಕೇಳುವ ಸಂಭಾವನೆ ಬರೀ ೨ ಲಕ್ಷ ಮಾತ್ರ ! * ಸ್ಟೀವನ್ ರೇಗೊ, ದಾರಂದಕುಕ್ಕು ಕಾಲಿವುಡ್‌ನಲ್ಲಿ ಈಗ ಬದಲಾವಣೆಯ ಗಾಳಿ ತಣ್ಣಗೆ ಜೋರಾಗಿ ಹೊಡೆಯುತ್ತಿದೆ. ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ಇಡೀ ಸಿನ್ಮಾ ರಂಗದಲ್ಲಿ ಹೊಸ ಹೆಜ್ಜೆ ಹಾಕಲು ಕಾಲಿವುಡ್ ಮಂದಿ ತುದಿಕಾಲಿನಲ್ಲಿ ನಿಮತು ಕುಣಿಯುತ್ತಿರುವಾಗ ಇಲ್ಲಿನ ನಾಯಕ ನಟ, ನಟಿಯರು ಮೈಕ್ ಹಿಡಿದುಕೊಂಡು ಹಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ಕಾಲಿವುಡ್ ಹಿನ್ನೆಲೆ ಗಾಯಕ, ಗಾಯಕಿಯರಿಗೆ ಟಾಂಗ್ ಕೊಡುವ ಸೂಚನೆ ಜತೆಗೆ ಸಂಗೀತದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಸಮಯ ಬಂದಿದೆ. ಕಾಲಿವುಡ್‌ನ ಮಾಸ್ ಹಿಟ್ ಹಾಡು ‘ಕೊಲೆವೆರಿ ಡಿ’ ಯ ಮೂಲಕ ನಟ ಧನುಷ್ ಹೊಸ ಗಾಯಕನಾಗಿ ಕಾಲಿವುಡ್ ಪಡಸಾಲೆಯನ್ನು ಹೊಸ ಮಿಂಚು ಹರಿಸಿದ್ದು ಎಲ್ಲರಿಗೂ ಗೊತ್ತಿದೆ. ಮತ್ತೊಂದೆಡೆ ಖ್ಯಾತ ನಟ ಕಮಲ್ ಪುತ್ರಿ ಶ್ರುತಿ ಹಾಸನ್ ಕೂಡ ಕಾಲಿವುಡ್‌ನ ರಾಂಕಿಂಗ್ ಸಾಂಗ್ಸ್‌ಗಳ ಮೂಲಕ ಗಾಯಕಿಯಾಗಿ ಕಂಗೋಳಿಸುತ್ತಿರುವ ವಿಚಾರ ಕೂಡ ಈಗ ಬಹಿರಂಗವಾಗಿದೆ. ಈಗ ನಟ ಶಿಂಬು ಸರದಿ. ಆಲಿಯಾಸ್ ಟಿ. ಆರ್. ಶಿಲಬರಸನ್ . ಇಡೀ ವಿಶ್ವಕ್ಕೆ ಲವ್ ಆಂಥಂಮ್ ಕಲಿಸಿಕೊಟ್ಟ ಶಿಂಬು ಈಗ ತಮ್ಮ ಚಿತ್ರಗಳಿಗೆ ಮಾತ್ರವಲ್ಲ ಇತರ ಚಿತ್ರಗಳಿಗೂ ಹಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಒಂದು ಹಾಡಿಗೆ ಶಿಂಬು ಕೇಳುವ ಸಂಭಾವನೆ ಬರೀ ೨ ಲಕ್ಷ ಮಾತ್ರ ! ಶಿಂಬು ಎನ್ನುವ ಹಾಡುಗಾರ: ನಟ ಶಿಂಬು ಎನ್ನುವ ಪಕ್ಕಾ ಆಕ್ಷನ್, ರೋಮ್ಯಾಂಟಿಕ್ ನಟ ಯಾಕೆ ಹಾಡುಗಾರನಾಗಲು ಹೋದ ಎನ್ನುವ ಕುರಿತು ಶಿಂಬು ಈ ರೀತಿ ಹೇಳುತ್ತಾರೆ: ನಾನು ಬದುಕಿನಲ್ಲಿ ಸಿರೀಯಸ್ ಸಿಂಗರ್ ಎನ್ನಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಸಂಗೀತವನ್ನು ಕೂಡ ನಾನು ಬಹಳ ಸಿರೀಯಸ್ ಆಗಿ ಅಧ್ಯಯನ ಕೂಡ ಮಾಡಿಲ್ಲ. ಆದರೆ ಬಾಲ್ಯದಲ್ಲಿ ಹೆತ್ತವರು ನನ್ನ ಪಾಕೆಟ್ ಮನಿಯನ್ನು ಕಟ್ ಮಾಡುತ್ತಿದ್ದಾಗ ಹಾಡುವ ಚಟ ಬೆಳೆಸಿಕೊಂಡೆ. ಇದು ಅನೇಕ ರಸಮಂಜರಿ ಕಾರ‍್ಯಕ್ರಮಗಳಿಂದ ಹಿಡಿದು ದೊಡ್ಡ ದೊಡ್ಡ ಸಮಾರಂಭಗಳ ವರೆಗೂ ಮುಂದುವರಿಯಿತು. ನಂತರ ನನ್ನ ಅಗತ್ಯಗಳಿಗೆ ಹೆತ್ತವರನ್ನು ಬಿಟ್ಟು ಹಾಡುಗಾರಿಕೆಯನ್ನು ಆಯ್ದು ಕೊಂಡು ಮುಂದುವರಿದೆ. ಇದೇ ನನ್ನ ಸಿಂಗರ್ ಹಿಂದಿನ ಕತೆ ಎನ್ನೋದು ಶಿಂಬು ಮಾತು. ನಟ ಶಿಂಬು ಬಳಿಯಲ್ಲಿ ಇರುವ ಅತ್ಯಾಧುನಿಕ ಗ್ಯಾಜೆಟ್‌ಗಳ ಹಿಂದೆ ತಮ್ಮ ಹಾಡುಗಾರಿಕೆಯಿಂದ ಬಂದ ಪಾಕೆಟ್ ಮನಿಯ ಕತೆ ಇದೆ ಎನ್ನೋದು ಶಿಂಬು ಟ್ವಿಟ್ಟರ್‌ನಲ್ಲಿ ಈ ಹಿಂದೆ ಬರೆದುಕೊಂಡಿದ್ದರು. ಈಗ ಇದೇ ಶಿಂಬು ಚಿತ್ರಗಳು ಇಲ್ಲದೇ ಇದ್ದಾಗ ಹಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ತಮ್ಮ ಚಿತ್ರಗಳಿಗೆ ಮಾತ್ರ ಹಾಡುವ ಖಯಾಲಿ ಬೆಳೆಸಿಕೊಂಡ ಶಿಂಬು ಈಗ ಇತರ ಚಿತ್ರಗಳಿಗೂ ಹಾಡಲು ರೆಡಿ ಇದ್ದಾರೆ. ಕಾಲಿವುಡ್ ನಟ ಅಜಿತ್ ಚಿತ್ರವೊಂದರಲ್ಲಿ ಶಿಂಬು ಹಾಡುವ ಕುರಿತು ಸುದ್ದಿಯೊಂದು ಹೊರಚಿಮ್ಮಿದೆ. ಇದು ಶಿಂಬು ಬೆಳೆಸಿಕೊಮಡಿರುವ ಸೈಡ್ ಬ್ಯುಸಿನೆಸ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ ತಾನೇ..? ಶಿಂಬು ಲವ್ ಸಾಂಗ್‌ನಲ್ಲಿ ಏನಿತ್ತು ಅಂತೀರಾ..? ವಿಶ್ವ ಶಾಂತಿ, ಪ್ರೇಮಕ್ಕಾಗಿ ತುಡಿಯುವ ಮನಸ್ಸುಗಳು ಈಗ ಬಹಳ ವಿರಳವಾಗುತ್ತಿದೆ. ಅದರಲ್ಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವ ಸ್ಥಿತಿ ಇಲ್ಲದೇ ಹೋಗಿದೆ. ಇಂತಹ ಸಮಯದಲ್ಲಿ ವಿಶ್ವವೇ ಶಾಂತಿ, ಪ್ರೇಮವನ್ನು ಬಯಸುವ ಗೀತೆ ಬೇಕಾಗಿದೆ ಎನ್ನೋದು ನನ್ನ ಬಹಳ ದಿನಗಳ ಕನಸ್ಸು ಎಂದು ಶಿಂಬು ಹೇಳಿದ್ದರು. ಕಾಲಿವುಡ್‌ನ ಹಾಡಿನಿಂದ ವಿಶ್ವ ಪ್ರೇಮ ಸಾಧ್ಯನಾ..ಎನ್ನುವ ಪ್ರಶ್ನೆಗೆ ಶಿಂಬು ಕೊಡುವ ಉತ್ತರ ಇಲ್ಲಿದೆ: ಈ ಹಾಡಿನಿಂದ ವಿಶ್ವ ಶಾಂತಿ, ಪ್ರೇಮ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಇಂತಹ ಪ್ರಯೋಗಗಳು ಮುಂದೆ ಕೂಡ ನಡೆಯಲಿ ಎನ್ನುವ ಸದಾಶಯ ನನ್ನದು. ಹೊಸ ಯೋಚನೆ, ಚಿಂತನೆಗಳು ಯುವಜನರಲ್ಲಿ ಇನ್ನಷ್ಟೂ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ಹಾಡನ್ನು ಸಿದ್ಧಪಡಿಸಿದ್ದೇನೆ ಎನ್ನುವುದು ಶಿಂಬು ಮಾತು. ಈ ಹಾಡಿನ ಸಂಪೂರ್ಣ ಹೊಣೆಗಾರಿಕೆಯನ್ನು ಎಲಾನ್ ಮೋರಿಸನ್ ವಹಿಸಿಕೊಂಡಿದ್ದರು. ಈಗಾಗಲೇ ಎಲಾನ್ ಹೊಸ ಹಾಡುಗಾರರನ್ನು ಹುಡುಕಾಡಿಕೊಂಡು ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಟೋಟಲಿ ಶಿಂಬು ಲವ್ ಸಾಂಗ್ಸ್ ಅಂತೂ ಯೂಟ್ಯೂಬ್‌ನಲ್ಲಿ ಎರ್ರಾಬಿರ್ರಿ ಹಿಟ್ ಆಗಿದೆ ಎನ್ನೋದು ಶಿಂಬು ಅಭಿಮಾನಿಗಳ ಮಾತು. ..... (lvk published dis story)

Friday, February 15, 2013

ಬದಲಾವಣೆಯ ಬಿರುಗಾಳಿ ಪೋಪ್ ಬೆನೆಡಿಕ್ಟ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಪೋಪ್ ಬೆನೆಡಿಕ್ಟ್ ೧೬ ತಮ್ಮ ಪೋಪ್ ಪದವಿಗೆ ರಾಜೀನಾಮೆ ನೀಡಿದ ಘಟನೆ ಬರೀ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರವಲ್ಲ ವಿಶ್ವದ ಪ್ರಮುಖ ಧರ್ಮಗಳ ಮುಖಂಡರಿಗೂ ಶಾಕಿಂಗ್ ಸುದ್ದಿ. ವಿಶ್ವದಲ್ಲಿರುವ ೧.೫ ಮಿಲಿಯನ್ ರೋಮನ್ ಕ್ಯಾತೋಲಿಕರಿಗೆ ಪೋಪ್ ರಾಜೀನಾಮೆಯ ವಿಚಾರ ಅರಗಿಸಿಕೊಳ್ಳಲಾಗದ ಕಟು ಸತ್ಯ. ಕ್ರೈಸ್ತ ಧರ್ಮ ಹಾಗೂ ಚರ್ಚ್‌ಗಳಲ್ಲಿ ಎಲ್ಲ ವಿಚಾರಗಳಿಗೂ ಪೋಪ್ ಅಂತಿಮ. ಅಂತವರು ರಾಜೀನಾಮೆ ಯಾರಿಗೆ ಕೊಡಬೇಕು ಹಾಗೂ ಅದನ್ನು ಸ್ವೀಕಾರ ಮಾಡುವವರು ಯಾರು ಎನ್ನುವ ಗೊಂದಲ ನಿರ್ಮಾಣವಾಗಿತ್ತು. ಆದರೆ ರೋಮನ್ ಕ್ಯಾತೋಲಿಕ್( ಆರ್‌ಸಿ)ಯಲ್ಲಿರುವ ಕೋಡ್ ಆಫ್ ಕ್ಯಾನೋನ್ ಲಾದಲ್ಲಿ ತಿಳಿಸಿರುವಂತೆ ಪೋಪ್ ನಿರ್ಭಯವಾಗಿ ಯಾವುದೇ ಅಡೆತಡೆಗಳಿಗೆ ಬಲಿಯಾಗದೇ ಸಮುದಾಯದ ಮುಂದೆ ಬಂದು ತಾನು ಪೋಪ್ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದರೆ ಸಾಕು. ಅದುವೇ ರಾಜೀನಾಮೆಗೆ ಇರುವ ಸೂತ್ರ ಎನ್ನುವುದು ಕ್ಯಾನೋನ್ ಲಾದಲ್ಲಿ ತಿಳಿಸಲಾಗಿದೆ. ಈಗಾಗಲೇ ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಸರಿಸುಮಾರು ೧೦ಮಂದಿ ಪೋಪ್‌ಗಳು ರಾಜೀನಾಮೆ ನೀಡಿದ್ದಾರೆ. ೬೦೦ ವರ್ಷಗಳ ಹಿಂದೆ ಪೋಪ್ ಗ್ರೆಗೋರಿ ೧೨ ಅವರ ರಾಜೀನಾಮೆಯ ನಂತರ ಇಂತಹ ಬೆಳವಣಿಗೆ ಪೋಪ್ ಬೆನೆಡಿಕ್ಟ್ ೧೬ರ ರಾಜೀನಾಮೆಯ ಮೂಲಕ ಮತ್ತೆ ನಡೆದಿದೆ. ಈ ಹಿಂದಿನ ಪೋಪ್‌ಗಳು ಅಂತರಿಕ ಕಲಹ, ರಾಜರ ಒತ್ತಡ, ರಾಜಕೀಯ ತಿರುವು, ಯುದ್ಧ ಮುಂತಾದ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದರು. ಆದರೆ ಪೋಪ್ ಬೆನೆಡಿಕ್ಟ್ ಮಾತ್ರ ತಮ್ಮ ದೈಹಿಕ ರೋಗ್ಯದ ಕುರಿತಾಗಿ ರಾಜೀನಾಮೆ ನೀಡಿದ್ದಾರೆ. ಕ್ರೈಸ್ತ ಧರ್ಮದ ಇತಿಹಾಸದಲ್ಲಿಯೇ ಪೋಪ್ ಬೆನೆಡಿಕ್ಟ್ ೧೬ ಭಿನ್ನವಾಗಿ ನಿಲ್ಲುತ್ತಾರೆ. ಅತೀ ಹಿರಿಯ ವಯಸ್ಸಿನವರು ಪೋಪ್ ಸ್ಥಾನಕ್ಕೆ ಬಂದದ್ದು, ಸಲಿಂಗ ಕಾಮ, ಕೃತಕ ಗರ್ಭ ಧಾರಣೆ, ಗಂಡು- ಹೆಣ್ಣಿನ ನಡುವೆ ಲೈಂಗಿಕತೆ ಹಾಗೂ ಕ್ರೈಸ್ತ ಧರ್ಮಗುರುಗಳು ಲೈಂಗಿಕ ಚಟುವಟಿಕೆಗಾಗಿ ಮಕ್ಕಳನ್ನು ದುರ್ಬಳಕೆ ಮಾಡುವ ಕುರಿತು ಪೋಪ್ ಬೆನೆಡಿಕ್ಟ್ ಮುಕ್ತವಾಗಿ ಮಾತನಾಡುವ ಜತೆಯಲ್ಲಿ ಆಧುನಿಕ ತಂತ್ರಜ್ಞಾನದ ಕುರಿತು ನೀಡಿದ ಒತ್ತು ಎಲ್ಲವೂ ಪೋಪ್ ಬೆನೆಡಿಕ್ಟ್ ಅವರನ್ನು ಭಿನ್ನತೆ ಸಾಲಿಗೆ ಸೇರಿಸುತ್ತದೆ. ಕ್ರೈಸ್ತ ಧರ್ಮದಲ್ಲಿ ಪೋಪ್ ಹುದ್ದೆಗೆ ತನ್ನದೇ ಆದ ಮಹತ್ವವಿದೆ. ಮುಖ್ಯವಾಗಿ ಪೋಪ್ ಹುದ್ದೆಯಲ್ಲಿ ಇರುವವರು ವ್ಯಾಟಿಕನ್ ಸಿಟಿಯ ಮುಖ್ಯಸ್ಥನಾಗುವ ಜತೆಯಲ್ಲಿ ವಿಶ್ವದ ಕ್ರೈಸ್ತ ಚರ್ಚ್‌ಗಳ ಅಧಿಪತಿಯಾಗುವ ಅವಕಾಶ ಲಭ್ಯವಾಗುತ್ತದೆ. ಅಂದಹಾಗೆ ಪೋಪ್ ಬೆನೆಡಿಕ್ಟ್ ೧೬ ಅವರ ಮೂಲ ಹೆಸರು ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್. ಜರ್ಮನಿಯ ಬವೇರಿಯಾದಲ್ಲಿ ರೆಟ್‌ಜಿಂಗರ್ ೧೬ ಏಪ್ರಿಲ್ ೧೯೨೭ರಲ್ಲಿ ಜನಿಸಿದವರು. ಕ್ರೈಸ್ತರ ಪಾಲಿಗೆ ಈ ತಿಂಗಳು ಪವಿತ್ರ ಎನ್ನಲಾಗುತ್ತದೆ. ಜರ್ಮನಿಯ ಪೊಲೀಸ್ ಅಧಿಕಾರಿಯಾಗಿದ್ದ ಜೋಸಫ್ ರೆಟ್‌ಜಿಂಗರ್ ಹಾಗೂ ಮರಿಯಾ ರೆಟ್‌ಜಿಂಗರ್ ಅವರ ಮೂವರು ಮಕ್ಕಳಲ್ಲಿ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ಹಿರಿಯ ಪುತ್ರ ಉಳಿದಂತೆ ಜಾರ್ಜ್ ರೆಟ್‌ಜಿಂಗರ್ ಕ್ರೈಸ್ತ ಧರ್ಮಗುರು ಹಾಗೂ ಅವಿವಾಹಿತೆ ಸಹೋದರಿ ಮರಿಯಾ ರೆಟ್‌ಜಿಂಗರ್ ಹಿರಿಯ ಸಹೋದರ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ಅವರ ಆಶ್ರಯದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ೫ರ ಹರೆಯದಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಇತರ ಮಕ್ಕಳೊಂದಿಗೆ ಮ್ಯೂನಿಚ್‌ಗೆ ಬಂದಿದ್ದ ಕಾರ್ಡಿನಲ್‌ಗಳಿಗೆ ಹೂಗುಚ್ಛ ನೀಡುವ ತಂಡದಲ್ಲಿದ್ದರು. ಈ ಸಮಯದಲ್ಲಿ ಕಾರ್ಡಿನಲ್ ಒಬ್ಬರಿಂದ ಆಕರ್ಷಣೆಗೆ ಒಳಗಾದ ಅಲೋಶಿಯಸ್ ರೆಟ್‌ಜಿಂಗರ್ ತಮಗೂ ಕಾರ್ಡಿನಲ್ ಆಗಬೇಕು ಎಂದು ಕನಸ್ಸು ಕಂಡಿದ್ದರು. ಈ ಬಳಿಕ ಹೈಸ್ಕೂಲ್ ಶಿಕ್ಷಣ ಪೂರೈಸುತ್ತಿದ್ದಾಗ ಜರ್ಮನಿಯ ಹಿಟ್ಲರ್ ಯೂತ್ ಕ್ಲಬ್‌ನಲ್ಲಿ ಸಕ್ರೀಯ ಸದಸ್ಯನಾಗಿ ಹೋದ ಅಲೋಶಿಯಸ್ ರೆಟ್‌ಜಿಂಗರ್ ತಮ್ಮ ಸಹೋದರನಿಗೆ ನಾಜಿಗಳು ನೀಡಿದ ಕಿರುಕುಳ ಬೇಸತ್ತು ಹಿಟ್ಲರ್ ಯೂತ್ ಕ್ಲಬ್‌ಗೆ ರಾಜೀನಾಮೆ ನೀಡಿದ್ದರು. ೨೯ ಜೂನ್ ೧೯೫೧ರಲ್ಲಿ ಕ್ರೈಸ್ತ ಧರ್ಮಗುರುವಾಗಿ ದೀಕ್ಷೆ ಪಡೆದುಕೊಂಡ ಅಲೋಶಿಯಸ್ ರೆಟ್‌ಜಿಂಗರ್ ನಂತರ ನಿಧಾನವಾಗಿ ಕ್ರೈಸ್ತ ಚರ್ಚ್‌ಗಳಲ್ಲಿ ನಾನಾ ಹುದ್ದೆಯನ್ನು ಆಲಂಕರಿಸಿಕೊಂಡು ಮುನ್ನಡೆಯುತ್ತಾ ಹೋದರು. ೧೯೫೮ರಲ್ಲಿ ಮತ ಧರ್ಮಶಾಸ್ತ್ರಗಳಲ್ಲಿ ವಿಶೇಷ ಪರಿಣತಿ ಪಡೆದುಕೊಂಡು ನಂತರ ಇದೇ ವಿಚಾರದಲ್ಲಿ ಪ್ರಾಧ್ಯಾಪಕರಾಗಿ ಜರ್ಮನಿಯ ನಾನಾ ಪ್ರತಿಷ್ಠಿತ ವಿವಿಗಳಲ್ಲಿ ಮತ ಧರ್ಮಶಾಸ್ತ್ರವನ್ನು ಭೋದಿಸ ತೊಡಗಿದರು. ವಿಶ್ವದ ಖ್ಯಾತ ರೆಗೆನ್ಸ್‌ಬರ್ಗ್ ವಿವಿಯಲ್ಲಿ ಮತಧರ್ಮಶಾಸ್ತ್ರದ ಕುರಿತು ಕೊನೆಯದಾಗಿ ಉಪನ್ಯಾಸ ನೀಡಿದರು. ಇದೇ ವಿವಿಯಲ್ಲಿ ಉಪಾಧ್ಯಕ್ಷನ ಸ್ಥಾನದಲ್ಲಿ ನಿಂತು ದುಡಿದರು(೧೯೭೬-೭೭) ಈ ಬಳಿಕ ಮ್ಯೂನಿಚ್‌ಗೆ ಅರ್ಚ್ ಬಿಷಪ್‌ರಾಗಿ ನಿಯುಕ್ತಿಗೊಂಡರು. ೧೯೭೭ರಲ್ಲಿ ಪೋಪ್ ಜೋನ್ ಪೌಲ್ ೨ ಅವರಿಗೆ ಆಪ್ತರಾಗಿದ್ದ ಅಲೋಶಿಯಸ್ ರೆಟ್‌ಜಿಂಗರ್ ಕಾರ್ಡಿನಲ್ ಆಗಿ ನೇಮಕ ಗೊಂಡರು. ಕ್ರೈಸ್ತ ಧರ್ಮದಲ್ಲಿ ಅತೀ ಹೆಚ್ಚು ಕಾಲ ಕಾರ್ಡಿನಲ್ ಆಗಿ ದುಡಿದವರಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಮೊದಲಿಗರು. ೨೦೦೨ರ ತನಕ ಕಾರ್ಡಿನಲ್ ಕಾಲೇಜುಗಳ ಸಬ್-ಡೀನ್ ಸ್ಥಾನದಲ್ಲಿದ್ದ ಅಲೋಶಿಯಸ್ ರೆಟ್‌ಜಿಂಗರ್ ನಂತರ ಡೀನ್ ಸ್ಥಾನಕ್ಕೆ ಬಂದು ನಿಂತರು. ಪೋಪ್ ಪೌಲ್ ೪ನೇ ಅವರ ನಂತರ ಅಲೋಶಿಯಸ್ ರೆಟ್‌ಜಿಂಗರ್ ಮೊತ್ತ ಮೊದಲ ಬಾರಿಗೆ ಡೀನ್ ಸ್ಥಾನದಲ್ಲಿದ್ದ ಪೋಪ್ ಎಂದು ಗುರುತಿಸಲಾಗುತ್ತದೆ. ರೋಮ್ ಸಾಮ್ರಾಜ್ಯದಲ್ಲಿ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ಅತ್ಯಂತ ಪ್ರಭಾವಶಾಲಿ ಧರ್ಮಗುರು ಎಂದು ಗುರುತಿಸಿಕೊಂಡಿದ್ದರು. ಕಾರ್ಡಿನಲ್ ಕಾಲೇಜುಗಳ ಡೀನ್ ಸ್ಥಾನದಲ್ಲಿದ್ದ ಅಲೋಶಿಯಸ್ ರೆಟ್‌ಜಿಂಗರ್ ಪೋಪ್ ಜೋನ್ ಪೌಲ್ ೨ನೇ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಪೋಪ್ ಜೋನ್ ಪೌಲ್-೨ ನಿಧನರಾದಾಗ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ತಕ್ಷಣವೇ ಕಾರ್ಡಿನಲ್‌ಗಳನ್ನು ಜತೆ ಸೇರಿಸಿಕೊಂಡು ಸಮಾವೇಶ ಕರೆದು ಒಂದು ದಿನ ಉಪವಾಸ ಮಾಡುವಂತೆ ಕರೆ ನೀಡಿದ್ದರು. ರೋಮ್ ಸಾಮ್ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಅಲೋಶಿಯಸ್ ರೆಟ್‌ಜಿಂಗರ್ ಕಾರ್ಡಿನಲ್ ಸ್ಥಾನದಲ್ಲಿದ್ದುಕೊಂಡು ವಿಶೇಷ ಗೌರವ, ಪ್ರಭಾವವನ್ನು ಬೆಳೆಸಿಕೊಂಡಿದ್ದರು. ಜರ್ಮನಿ ಮೂಲದವರಾಗಿದ್ದ ಅವರು ಫ್ರೆಂಚ್ ಮತ್ತು ಇಟಲಿ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಲ್ಯಾಟಿನ್ ಸೇರಿದಂತೆ ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ಭಾಷೆಗಳಲ್ಲೂ ಪ್ರೌಢಿಮೆ ಬೆಳೆಸಿಕೊಂಡಿದ್ದರು. ಪೋರ್ಚ್ ಗೀಸ್ ಭಾಷೆಯಲ್ಲೂ ಜ್ಞಾನ ಬೆಳೆಸಿದ್ದರು. ಹಳೆಯ ಗ್ರೀಕ್ ಹಾಗೂ ಹಿಬ್ರೂ ಭಾಷೆಯನ್ನು ಬರೆಯಲು ಹಾಗೂ ಓದಲು ಬಲ್ಲವರಾಗಿದ್ದರು. ಅನೇಕ ವೈಜ್ಞಾನಿಕ ಅಕಾಡೆಮಿಗಳಲ್ಲಿ ಸದಸ್ಯರಾಗಿ ದುಡಿದಿದ್ದರು. ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಅಲೋಶಿಯಸ್ ರೆಟ್‌ಜಿಂಗರ್ ಪಿಯೋನೋ ನುಡಿಸುವಿಕೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಸಾಧಿಸಿದ್ದರು. ನಾನಾ ರೀತಿಯ ಪಿಯೋನೋಗಳ ಸಂಗ್ರಹ ಹಾಗೂ ದೇಶದ ನಾನಾ ಕಡೆಯ ಬೆಕ್ಕುಗಳನ್ನು ಬೆಳೆಸುವಲ್ಲಿಯೂ ಕೂಡ ಅವರು ತಮ್ಮ ಗಮನ ಕೇಂದ್ರಿತವಾಗಿತ್ತು. ದ್ವಿತೀಯ ವ್ಯಾಟಿಕನ್ ಮಹಾಸಭೆಯಲ್ಲಿ ಅಲೋಶಿಯಸ್ ರೆಟ್‌ಜಿಂಗರ್ ಸಕ್ರೀಯ ಸದಸ್ಯರಾಗಿದ್ದವರು. ಇದೇ ಮಹಾಸಭೆಯಲ್ಲಿ ಕ್ರೈಸ್ತ ಧರ್ಮದ ಪ್ರಮುಖ ಕಾನೂನುಗಳ ಗ್ರಂಥ: ‘ದೀ ಕೋಡ್ ಆಫ್ ಕ್ಯಾನೋನ್ ಲಾ’ವನ್ನು ಹೊಸದಾಗಿ ತಿದ್ದುಪಡಿ ತಂದು ಮತ್ತಷ್ಟೂ ಬಲಿಷ್ಠ ಗೊಳಿಸುವಲ್ಲಿ ಹಾಗೂ ಕ್ರೈಸ್ತ ಚರ್ಚ್‌ಗಳ ಅಧಿಕಾರ, ಸಮಸ್ಯೆ, ಸವಾಲಿಗಳಿಗೆ ಉತ್ತರ ನೀಡುವ ಕೈ ಗನ್ನಡಿಯಂತೆ ಈ ಕಾನೂನು ಸಫಲವಾಗಲು ಅಲೋಶಿಯಸ್ ರೆಟ್‌ಜಿಂಗರ್ ದುಡಿದಿದ್ದರು. ಸಾಹಿತ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ವಿಶಿಷ್ಟ ಪ್ರತಿಭೆ ಹೊಂದಿದ್ದ ಅಲೋಶಿಯಸ್ ರೆಟ್‌ಜಿಂಗರ್ ೧೯೬೯ರಲ್ಲಿ ‘ಕೋಮಿನೋ’ ಎನ್ನುವ ಆಧ್ಯಾತ್ಮಿಕ ಪತ್ರಿಕೆಯನ್ನು ಹುಟ್ಟುಹಾಕಿದರು. ಈ ಪತ್ರಿಕೆ ಇಂದಿಗೂ ವಿಶ್ವದ ೧೭ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಅದರಲ್ಲೂ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಜರ್ಮನಿ ಭಾಷೆಯಲ್ಲಿ ಈ ಆಧ್ಯಾತ್ಮಿಕ ಪತ್ರಿಕೆ ತನ್ನದೇ ಪ್ರಾಬಲ್ಯವನ್ನು ಹೊಂದಿದೆ. ವಿಶ್ವದ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಚೀನಾದ ಹನ್ಸ್ ಕೂಂಗ್, ಎಡ್ವರ್ಡ್ ಸಿ, ಹೆನ್ರಿ ಡೀ ಲ್ಯೂಬ್ಯಕ್, ವಾಲ್ಟರ್ ಕೆಸ್ಪರ್ ಮೊದಲಾದವರು ತಮ್ಮ ಬರವಣಿಗೆಯನ್ನು ‘ಕೋಮಿನೋ’ಗೆ ನೀಡುತ್ತಿದ್ದರು. ೨೦೦೫ರ ಜನವರಿ ೨ರಂದು ಟೈಮ್ ಮ್ಯಾಗಜೀನ್ ವ್ಯಾಟಿಕನ್ ಅನಾಮಧೇಯ ಮೂಲವೊಂದರ ಆಧಾರದಲ್ಲಿ ಪೋಪ್ ಜಾನ್ ಪೌಲ್ ೨ರ ಉತ್ತರಾಧಿಕಾರಿಯಾಗಿ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ನೇಮಕವಾಗುತ್ತಾರೆ ಎಂದು ಭವಿಷ್ಯ ನುಡಿದಿತ್ತು. ಪೋಪ್ ಜೋನ್ ಪೌಲ್ ನಿಧನರಾಗಲಿ ಅಥವಾ ಪೋಪ್ ಪದವಿಯಿಂದ ಇಳಿದರು ಕೂಡ ತಮ್ಮ ಉತ್ತರಾಧಿಕಾರಿಯಾಗಿ ಅಲೋಶಿಯಸ್ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಫೈನಾನ್ಸಿಯಲ್ ಟೈಮ್ ಕೂಡ ಅಲೋಶಿಯಸ್ ರೆಟ್‌ಜಿಂಗರ್ ಅವರನ್ನು ಬೆಂಬಲಿಸಿಕೊಂಡು ಲೇಖನ ಬರೆದಿತ್ತು. ಮತ್ತೊಂದು ಲೇಖನದಲ್ಲಿ ವಿಶ್ವದ ನೂರು ಮಂದಿ ಪ್ರಭಾವಿ ವ್ಯಕ್ತಿಗಳಲ್ಲಿ ಅಲೋಶಿಯಸ್ ರೆಟ್‌ಜಿಂಗರ್‌ಗೂ ಒಂದು ಸ್ಥಾನ ನೀಡಿತ್ತು. ೨೦೦೫ರಲ್ಲಿ ಏಪ್ರಿಲ್ ತಿಂಗಳಲ್ಲಿ ಪೋಪ್ ಹುದ್ದೆಗೆ ಚುನಾವಣೆ ನಡೆಯಿತು. ೧೯ ಏಪ್ರಿಲ್ ೨೦೦೫ರಲ್ಲಿ ಜೋಸೆಫ್ ಅಲೋಶಿಯಸ್ ರೆಟ್‌ಜಿಂಗರ್ ೨೬೫ನೇ ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿದರು. ತಮ್ಮ ಮೊದಲ ಭಾಷಣದಲ್ಲಿ ಇಟಲಿ, ಫ್ರೆಂಚ್, ಸ್ಪ್ಯಾನಿಷ್, ಜರ್ಮನ್, ಇಂಗ್ಲೀಷ್ ಭಾಷೆಗಳನ್ನು ಬಳಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕ್ರೈಸ್ತ ಸಮುದಾಯದ ಜನರನ್ನು ಸೆಳೆದುಕೊಂಡರು. ಪೋಪ್ ಆಗಿ ಅಧಿಕಾರ ಸ್ವೀಕರಿಸಿದರ ನಂತರ ಜೋಸಫ್ ಅಲೋಶಿಯಸ್ ರೆಟ್‌ಜಿಂಗರ್ ‘ಬೆನೆಡಿಕ್ಟ್ ’ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಲ್ಯಾಟಿನ್ ಭಾಷೆಯಲ್ಲಿ ಬೆನೆಡಿಕ್ಟ್ ಎಂದರೆ ‘ದೇವರ ಅನುಗ್ರಹ’ ಪಡೆದವರು ಎಂದಾರ್ಥ. ಇವರ ೮ ವರ್ಷದ ಅಧಿಕಾರದ ಅವಧಿಯಲ್ಲಿ ವಿಶ್ವದ ನಾನಾ ಮಂದಿಗೆ ಸಂತ ಪದವಿಯಿಂದ ಉನ್ನತಿಕರಿಸಿದ್ದಾರೆ. ‘ಗಾಡ್ ಇಸ್ ಲವ್’ ‘ಸೇವುಡ್ ಬೈ ಹೋಪ್’ ಹಾಗೂ ‘ಲವ್ ಇನ್ ಟ್ರೂತ್’ ಎನ್ನುವ ಕೃತಿಗಳನ್ನು ಹೊರ ತಂದಿರುವ ಪೋಪ್ ಬೆನೆಡಿಕ್ಟ್ ೧೬ ತಮ್ಮ ವಿಚಾರಧಾರೆಗಳ ಮೂಲಕ ಸಾಕಷ್ಟು ಮಂದಿಯನ್ನು ಆಕರ್ಷಿಸಿದರೆ ಮತ್ತೊಂದೆಡೆ ಸಾಕಷ್ಟು ವಿವಾದಗಳಿಗೂ ಗುರಿಯಾಗಿದ್ದಾರೆ. ಪೋಪ್ ಬೆನೆಡಿಕ್ಟ್ ೧೬ ಕ್ರೈಸ್ತ ಧರ್ಮದ ಜತೆಯಲ್ಲಿ ಇತರ ಧರ್ಮಗಳ ಮುಖಂಡರ ಜತೆಯಲ್ಲಿ ಒಡನಾಟ ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಯೆಹೂದಿ ಧರ್ಮದ ಮುಖಂಡರ ಜತೆ ತೀರಾ ಹತ್ತಿರ ಒಡನಾಟ ಪೋಪ್‌ಗೆ ಇತ್ತು. ಅದೇ ರೀತಿ ಇಸ್ಲಾಂ ವಿದ್ವಾಂಸಕರನ್ನು ಹಾಗೂ ಕ್ರೈಸ್ತ ಮುಖಂಡರಿಗಾಗಿ ೨೦೦೯ರಲ್ಲಿ ಮಾರ್ಚ್ ೯ರಂದು ಸಮಾವೇಶವೊಂದನ್ನು ರೋಮ್‌ನಲ್ಲಿ ಪೋಪ್ ಹಮ್ಮಿಕೊಂಡಿದ್ದರು. ಈ ಸಮಾವೇಶದಲ್ಲಿ ಪೋಪ್ ಬೆನೆಡಿಕ್ಟ್ ನೀಡಿದ ಉಪನ್ಯಾಸವೊಂದು ಇಸ್ಲಾಂ ವಿದ್ವಾಂಸಕರನ್ನು ಕೆರಳಿಸಿತ್ತು. ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದ ಬೆನೆಡಿಕ್ಟ್ ೧೬ ಅವರನ್ನು ಶುಭ ಹಾರೈಸಲು ದಲೈ ಲಾಮಾ ರೋಮ್‌ಗೆ ಬರುವುದನ್ನು ಗಮನಿಸಿದ ಚೀನಾ ಸರಕಾರ ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಈ ಪ್ರವಾಸವನ್ನು ರದ್ದು ಮಾಡುವಂತೆ ಮಾಡಿತ್ತು. ೨೦೦೮ರಲ್ಲಿ ಅಮೆರಿಕಕ್ಕೆ ಪ್ರವಾಸಕ್ಕೆ ಹೋದ ಪೋಪ್ ಅಲ್ಲಿ ಕ್ರೈಸ್ತ ಧರ್ಮಗುರುಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳನ್ನು ಖುದ್ದಾಗಿ ಭೇಟಿ ಮಾಡಿದ್ದರು. ಈ ವಿಚಾರ ಕ್ರೈಸ್ತ ಧರ್ಮ ಗುರುಗಳಾ ಕರಾಳ ಮುಖವನ್ನು ಅನಾವರಣ ಮಾಡಿತ್ತು. ಅಮೇರಿಕಾದಲ್ಲಿರುವ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಕೃಷ್ಣಾನ ಪ್ರತಿನಿಧಿ ರಾಧಿಕಾ ರಮಣ್ ದಾಸ್ ಅವರ ಜತೆಯಲ್ಲಿ ಮಾತುಕತೆ ನಡೆಸಿದ ಪೋಪ್ ಬೆನೆಡಿಕ್ಟ್ ಗೆ ದಾಸ್ ಓಂ ಸಂಕೇತವನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಸ್ನೇಹವನ್ನು ಗಟ್ಟಿ ಮಾಡಿದ್ದರು. ಪೋಪ್ ಆಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ಮೂರು ವರ್ಷ ಬೆನೆಡಿಕ್ಟ್ ಬರೀ ಇಟಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಪ್ರವಾಸ ಮಾಡಿದ್ದರು. ಈ ಬಳಿಕ ಎರಡು ಬರೀ ಜರ್ಮನಿಗೆ, ಪೋಲ್ಯಾಂಡ್, ಸ್ಪೇನ್, ಟರ್ಕಿ ಭೇಟಿ ನೀಡಿದ್ದರು. ಅದರಲ್ಲೂ ರೇಗೆನ್ಸ್ ಬರ್ಗ್ ವಿವಿಯಲ್ಲಿ ಬೆನೆಡಿಕ್ಟ್ ಅವರು ನೀಡಿದ ಉಪನ್ಯಾಸವೊಂದು ಇಸ್ಲಾಂ ಧಾರ್ಮಿಕರನ್ನು ಮತ್ತಷ್ಟೂ ಕೆರೆಳಿಸಿತು. ವಿಶ್ವದ ತುಂಬಾ ನಾನಾ ಕಡೆ ಬೆನೆಡಿಕ್ಟ್ ವಿರುದ್ಧ ಪ್ರತಿಭಟನೆಗಳು ನಡೆಯಿತು. ಕೊನೆಗೆ ಬೆನೆಡಿಕ್ಟ್ ಕ್ಷಮೆಯಾಚಿಸುವ ಮೂಲಕ ಈ ವಿವಾದಕ್ಕೆ ತೆರೆಬಿತ್ತು. ೨೦೦೯ರಲ್ಲಿ ಆಫ್ರಿಕಾ ದೇಶಕ್ಕೆ ಭೇಟಿ ಪೋಪ್ ನೀಡಿದಾಗ ಲೈಂಗಿಕ ವರ್ತನೆಯೇ ಆಫ್ರಿಕಾದಲ್ಲಿರುವ ಏಡ್ಸ್‌ಗೆ ಮೂಲ ಉತ್ತರ ಎನ್ನುವ ಮೂಲಕ ಸಲಿಂಗ ಕಾಮದ ಪರವಾಗಿ ಪೋಪ್ ಮಾತನಾಡಿದ್ದು ಬಹಳಷ್ಟು ಮಂದಿಯನ್ನು ಕೆರಳಿಸಿತ್ತು. ಪೋಪ್ ಹುದ್ದೆಗೆ ಇದ್ದ ಉಡುಗೆ ತೊಡುಗೆಗಳಲ್ಲೂ ಮಹತ್ತರ ಬದಲಾವಣೆಗಳನ್ನು ಬೆನೆಡಿಕ್ಟ್ ೧೬ ಮಾಡಿದ್ದರು. ಈ ಮೊದಲು ಇಂತಹ ದೊಡ್ಡ ಬದಲಾವಣೆಯ ಕುರಿತು ಬರೀ ಚರ್ಚೆ ಮಾತ್ರ ನಡೆದಿತ್ತು. ಈ ಹಿಂದೆ ಪೋಪ್‌ಗಳು ಬಳಸುತ್ತಿದ್ದ ಕೆಂಪು ಬಣ್ಣದ ಶೂಗಳನ್ನು ಬೆನೆಡಿಕ್ಟ್ ಹಾಕಲು ನಿರಾಕರಿಸಿದರು. ಈ ಕಾರಣಕ್ಕೆ ಇಟಲಿಯ ಫ್ಯಾಶನ್ ಹೌಸ್‌ವೊಂದು ಪೋಪ್‌ಗಾಗಿ ವಿಶೇಷ ಮಾದರಿ ಶೂಗಳ ತಯಾರಿಕೆಗೆ ಗುತ್ತಿಗೆ ನೀಡಲಾಯಿತು. ಚಳಿಗಾಲದಲ್ಲಿ ಮಾತ್ರ ಪೋಪ್‌ಗಳು ಬಳಸುತ್ತಿದ್ದ ಕೆಂಪು ಬಣ್ಣದ ಹ್ಯಾಟ್‌ಗಳನ್ನು ಬೆನೆಡಿಕ್ಟ್ ಮತ್ತೇ ಚಾಲ್ತಿಗೆ ತಂದರು. ೨೦೦೫ರಲ್ಲಿಯೇ ಪೋಪ್ ಬೆನೆಡಿಕ್ಟ್ ತಮ್ಮ ಆರೋಗ್ಯ ಸಂಬಂಧ ವಿಚಾರದಲ್ಲಿ ಪೋಪ್ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಒಲವು ತೋರಿಸಿದ್ದರು. ಹ್ಯೂಮರೇಜ್ ಸ್ಟ್ರೋಕ್‌ನಿಂದಾಗಿ ಪೋಪ್ ತಮ್ಮ ಕಣ್ಣಿನ ದೃಷ್ಟಿಯನ್ನು ಕೊಂಚ ಕಳೆದುಕೊಂಡಿದ್ದರು. ಅವರ ದೇಹ ಸ್ಥಿತಿ ಕೂಡ ಆಗಾಗ ಕೈ ಕೊಡುತ್ತಿತ್ತು. ರೋಮನ್ ಕ್ಯಾತೋಲಿಕ್‌ರಿಂದ ಬಿಟ್ಟು ಹೋದ ಲೆಫೆಬ್ರೆ ಎನ್ನುವ ಸಮುದಾಯವನ್ನು ೨೦೦೯ರಲ್ಲಿ ಮತ್ತೆ ಕ್ರೈಸ್ತ ಸಮುದಾಯಕ್ಕೆ ಮರಳಿ ತಂದ ಕೆಲಸ ಬೆನೆಡಿಕ್ಟ್‌ನಿಂದ ನಡೆಯಿತು. ಇದರ ಜತೆಯಲ್ಲಿ ನಾಲ್ವರು ಲೆಫೆಬ್ರೆ ಬಿಷಪ್‌ರನ್ನು ಮತ್ತೆ ಆರ್‌ಸಿಗೆ ತಂದು ಕೂರಿಸಿದರು. ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಗೆ ಅಡುಗೆ ಮಾಡಿಕೊಡುತ್ತಿದ್ದ ಗೇಬ್ರಿಯೆಲ್ ವ್ಯಾಟಿಕನ್ ಸಿಟಿಯ ದಸ್ತಾವೇಜುಗಳನ್ನು ಇಟಲಿ ಮೂಲದ ಪತ್ರಕರ್ತನಿಗೆ ನೀಡುವ ಮೂಲಕ ವ್ಯಾಟಿಕನ್ ಸಿಟಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಮಾಹಿತಿ ರವಾನೆ ಮಾಡಿದ್ದ . ಈ ಪ್ರಕರಣವನ್ನು ‘ವ್ಯಾಟಿಲಿಕ್ಸ್’ ಎನ್ನಲಾಗುತ್ತದೆ. ಈ ವಿಚಾರದಿಂದ ಪೋಪ್ ಬೆನೆಡಿಕ್ಟ್ ಬಹಳಷ್ಟು ಘಾಸಿಗೊಂಡಿದ್ದರು. ಆದರೆ ಗೇಬ್ರಿಯೆಲ್‌ನ ಕೆಲಸವನ್ನು ಕ್ಷಮಿಸುವ ಮೂಲಕ ತನ್ನ ಪೋಪ್ ಉದಾರತೆಯನ್ನು ಮೆರೆದಿದ್ದರು. ಕುಟುಂಬ ಯೋಜನೆ ಹಾಗೂ ಏಡ್ಸ್ ರೋಗದ ಕುರಿತು ಪೋಪ್ ಬೆನೆಡಿಕ್ಟ್ ೧೬ ಮುಕ್ತವಾಗಿ ಮಾತಿಗೆ ಇಳಿದಿದ್ದರು. ಏಡ್ಸ್ ರೋಗ ನಿಯಂತ್ರಣ ಹಾಗೂ ಕುಟುಂಬ ಯೋಜನೆಗಾಗಿ ಕಾಂಡೋಮ್ ಬಳಸುವುದರಿಂದ ಇನ್ನಷ್ಟೂ ಇಂತಹ ಪ್ರಕರಣಗಳು ಹೆಚ್ಚುವ ಜತೆಯಲ್ಲಿ ಮುಕ್ತ ಲೈಂಗಿಕತೆಯನ್ನು ಬೆಂಬಲ ಸೂಚಿಸಿದಂತಾಗುತ್ತದೆ ಎನ್ನುವ ಮೂಲಕ ಪೋಪ್ ಬೆನೆಡಿಕ್ಟ್ ಕಾಂಡೋಮ್ ಕಂಪನಿಗಳ ವಿರೋಧದ ಜತೆಯಲ್ಲಿ ಅಂತಾರಾಷ್‌ರೀಯ ಮಟ್ಟದಲ್ಲೂ ತೀವ್ರ ಟೀಕೆಗೆ ಗುರಿಯಾಗಿದ್ದರು. ಚರ್ಚ್‌ಗಳಲ್ಲಿರುವ ಸಲಿಂಗಕಾಮತೆಯ ಕುರಿತು ಪೋಪ್ ಬೆನೆಡಿಕ್ಟ್ ೧೬ ಅದೊಂದು ಮಾನಸಿಕ ಅಸಮತೋಲನ ಕ್ರಿಯೆ. ಆದರೆ ಇಂತಹ ಕ್ರಿಯೆಯಲ್ಲಿರುವ ವ್ಯಕ್ತಿ ಮಾತ್ರ ಪಾಪಿ ಎನ್ನುವಂತಿಲ್ಲ ಎಂದಿದ್ದರು. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ವ್ಯಾಟಿಕನ್ ಸಿಟಿಯ ಮಾಧ್ಯಮ ಪ್ರತಿನಿಧಿ ಫಾ. ಫೆಡ್ರಿಕೋ ಲೊಂಬಾರ್ಡಿ ಪೋಪ್‌ನ ಹೇಳಿಕೆ ಕುರಿತು ಸ್ವಷ್ಟನೆ ನೀಡಬೇಕಾಗಿ ಬಂತು. ವಿಶ್ವದ ಆರ್ಥಿಕತೆಯ ಕುರಿತು ನಡೆದ ಸಮಾವೇಶದಲ್ಲಿ ಪರಿಸರ, ವಲಸೆ, ಭಯೋತ್ಪಾದನೆ, ಸೆಕ್ಸ್ ಪ್ರವಾಸೋದ್ಯಮ, ಅಣುಶಕ್ತಿ, ಮುಂತಾದರ ಕುರಿತು ಪೋಪ್ ಬೆನೆಡಿಕ್ಟ್ ೧೬ ತಮ್ಮ ಸಂವಾದದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಶಾಸ್ತ್ರೀಯ ಸಂಗೀತದ ಒಲವು, ೨೦೦೯ರ ನವೆಂಬರ್ ೩೦ರಂದು ಹೊರ ತಂದ ‘ಬ್ಲೇಸ್ಡ್ ವರ್ಜಿನ್ ಮೇರಿ’ ಎನ್ನುವ ಸಂಗೀತದ ಆಲ್ಬಂ ಸಾಕಷ್ಟು ಪ್ರಚಾರ ಪಡೆದಿತ್ತು. ೨೦೦೭ರಲ್ಲಿ ಬೆಕ್ಕುಗಳ ಕುರಿತಾಗಿ ‘ಜೋಸಫ್ ಆಂಡ್ ಚಿಕೋ’ ಕೃತಿ ಪೋಪ್‌ಗೆ ಬೆಕ್ಕುಗಳ ಕುರಿತು ಇರುವ ಆಸಕ್ತಿಯನ್ನು ಬಿಂಬಿಸುತ್ತದೆ. ೨೦೧೨ರಲ್ಲಿ ಪೋಪ್ ಬೆನೆಡಿಕ್ಟ್ ಆಧುನಿಕ ಸಾಮಾಜಿಕ ತಾಣ ಟ್ವಿಟ್ಟರ್‌ನಲ್ಲಿ ಅಕೌಂಟ್ ಮಾಡಿದ್ದರು. ಅದರಲ್ಲೂ ವ್ಯಾಟಿಕನ್ ಸಿಟಿಯ ಕುರಿತು ಯೂ ಟ್ಯೂಬ್‌ನಲ್ಲಿ ಚಾನೆಲ್‌ವೊಂದನ್ನು ಆರಂಭಿಸಿದ್ದರು. ಮೊತ್ತ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಪೋಪ್ ಬೆನೆಡಿಕ್ಟ್ ೧೬ ಈ ರೀತಿ ಟ್ವಿಟ್ಟ್ ಮಾಡಿದ್ದರು: ಪ್ರಿಯ ಗೆಳೆಯರೇ, ಟ್ವಿಟ್ಟರ್ ಮೂಲಕ ನಿಮ್ಮ ಜತೆಯಲ್ಲಿ ಸ್ನೇಹ ಬೆಳೆಸಲು ಇಷ್ಟ ಪಡುತ್ತೇನೆ. ನಿಮ್ಮ ಅಭಿಪ್ರಾಯಗಳಿಗೆ ನಾನು ಋಣಿ. ಹೃದಯಪೂರ್ವಕವಾಗಿ ನಿಮಗೆ ಒಳಿತು ಬಯಸುತ್ತೇನೆ ಎಂದಿದ್ದರು. ಇದಕ್ಕೆ ವಿಶ್ವದ ೬೫ ಸಾವಿರ ಮಂದಿ ಟ್ವಿಟ್ ಮಾಡಿದ್ದರು. ಸದಾ ಬದಲಾವಣೆಗೆ ಮೈಯೊಡ್ಡುತ್ತಿರುವ ಕ್ರೈಸ್ತ ಧರ್ಮದ ಚರ್ಚ್‌ಗಳಲ್ಲಿ ಅತೀ ಸಣ್ಣ ಅಧಿಕಾರದ ಅವಧಿಯಲ್ಲಿ ಪೋಪ್ ಬೆನೆಡಿಕ್ಟ್ ೧೬ ಬದಲಾವಣೆಯನ್ನಂತೂ ತಂದಿದ್ದರು. ಅತೀ ದೀರ್ಘ ಅವಧಿಯ ಪೋಪ್‌ಗಳ ನಡುವೆ ಒಂದು ಸಣ್ಣ ಅವಧಿಯ ಪೋಪ್‌ಗಳಿರುತ್ತಾರೆ ಎನ್ನೋದು ಮಾತು. ಇದು ಪೋಪ್ ಬೆನೆಡಿಕ್ಟ್ ೧೬ಗೆ ಸರಿಯಾಗಿ ಅನ್ವಯವಾಗುತ್ತದೆ. ಅವರ ರಾಜೀನಾಮೆ ಫೆ.೨೮ರಂದು ಅಂಗೀಕೃತವಾಗುತ್ತದೆ. ಮಾರ್ಚ್ ಕೊನೆಯ ವಾರದಲ್ಲಿ ನೂತನ ಪೋಪ್‌ರ ಆಯ್ಕೆ ನಡೆದು ಹೋಗುತ್ತದೆ. ಆದರೆ ಪೋಪ್ ಬೆನೆಡಿಕ್ಟ್ ೧೬ ಮಾತ್ರ ತಮ್ಮ ಹೆಸರಿನ ಜತೆಯಲ್ಲಿ ಅಧಿಕಾರವನ್ನು ಕಳೆದುಕೊಂಡು ಬರೀ ಜೋಸಫ್ ಅಲೋಶಿಯಸ್ ರೆಟಿಜಿಂಗರ್ ಆಗಿ ಉಳಿದು ಬಿಡುತ್ತಾರೆ. ಮುಕ್ತ ಮಾತುಕತೆಗೆ ಪೋಪ್ ಬೆನೆಡಿಕ್ಟ್ ಮಾತ್ರ ಎಂದಿಗೂ ಸಲ್ಲುವ ಹೆಸರು. ( vk daily main eddtion on 16.02.2013)

ನನ್ನ ಲೇಖನ ನನ್ನ ಪತ್ರಿಕೆ- ವಿಜಯ ನೆಕ್ಸ್ಟ್ 2

(vijyanext weekly pblished dis article on 15.02.2013)

Tuesday, February 12, 2013

ರಾಜಮೌಳಿ ಕಟ್ಟುವ ಬಾಹುಬಲಿ

‘ಈಗ’ದ ನಿರ್ದೇಶಕ ರಾಜಮೌಳಿ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಬಂದು ಕೂರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಬಾಹುಬಲಿ ಎನ್ನುವ ಶೀರ್ಷಿಕೆ ನೀಡಲಾಗಿದೆ. ಅದೊಂದು ಜಸ್ಟ್ ವರ್ಕಿಂಗ್ ಟೈಟಲ್ ಉಳಿದಂತೆ ಚಿತ್ರ ಟೈಟಲ್ ಕಾರ್ಡ್ ಬದಲಾಯಿಸುವ ಯೋಜನೆ ಕೂಡ ಇದೆ ಎಂದು ರಾಜಮೌಳಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹರಿಬಿಟ್ಟಿದ್ದಾg. * ಸ್ಟೀವನ್ ರೇಗೊ, ದಾರಂದಕುಕ್ಕು ಇಡೀ ಭಾರತೀಯ ಸಿನಿಮಾ ಲೋಕದಲ್ಲಿ ಒಂದು ನೋಣ ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಬಾಲಿವುಡ್ ಜತೆಗೆ ಹಾಲಿವುಡ್ ಮಂದಿನೂ ಕದ್ದುಮುಚ್ಚಿಕೊಂಡು ಸಿನ್ಮಾ ನೋಡಿ ಸಖತ್ ಇದೆ ಎಂದು ಸಲಾಂ
ಹಾಕಿಕೊಂಡು ಹೋದದ್ದು ಈಗಲೂ ಅಲ್ಲಿ ಇಲ್ಲಿ ಕೇಳಿಸಿಕೊಳ್ಳುತ್ತಿದೆ. ಅಂದಹಾಗೆ ಅದು ತೆಲುಗಿನ ‘ಈಗ’ ಚಿತ್ರ ಹಾಲಿವುಡ್ ಶೈಲಿಯನ್ನು ಮುಟ್ಟಿ ಭಾರತೀಯ ಚಿತ್ರಗಳ ಮೈನ್ ಪಾಯಿಂಟ್ ಪ್ರೀತಿಯನ್ನು ಇಟ್ಟುಕೊಂಡು ಬಂದ ‘ಈಗ’ ಚಿತ್ರವಂತೂ ಬಾಲಿವುಡ್ ನಲ್ಲಿ ‘ಮಕ್ಕಿ’ ಬಾಕ್ಸಾಫೀಸ್‌ನಲ್ಲಿ ಸಖತ್ ಕಲೆಕ್ಷನ್ ಒಟ್ಟು ಹಾಕಿತ್ತು. ಇದೇ ‘ಈಗ’ದ ನಿರ್ದೇಶಕ ರಾಜಮೌಳಿ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಬಂದು ಕೂರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಬಾಹುಬಲಿ ಎನ್ನುವ ಶೀರ್ಷಿಕೆ ನೀಡಲಾಗಿದೆ. ಅದೊಂದು ಜಸ್ಟ್ ವರ್ಕಿಂಗ್ ಟೈಟಲ್ ಉಳಿದಂತೆ ಚಿತ್ರ ಟೈಟಲ್ ಕಾರ್ಡ್ ಬದಲಾಯಿಸುವ ಯೋಜನೆ ಕೂಡ ಇದೆ ಎಂದು ರಾಜಮೌಳಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹರಿಬಿಟ್ಟಿದ್ದಾರೆ ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹಾಲಿವುಡ್ ಮಾದರಿಯಲ್ಲಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ ಎನ್ನುವ ಮಾಹಿತಿಗೆ ಪುಷ್ಠಿ ಕೊಟ್ಟಿದ್ದಾರೆ. ರಾಜಮೌಳಿಯ ಹೊಸ ಗಿಮಿಕ್: ಟಾಲಿವುಡ್ ಚಿತ್ರರಂಗದಲ್ಲಿ ಸದ್ಯಕ್ಕೆ ಸ್ಟಾರ್‌ಗಳ ನಡುವೆ ಪೈಪೋಟಿ ಆರಂಭವಾಗಿದೆ. ಟಾಲಿವುಡ್ ಮಹೇಶ್ ಬಾಬು ಜತೆಗೆ ಸರಿಯಾಗಿ ಪೈಪೋಟಿ ನೀಡುವಂತಹ ನಟ ಎಂದು ಬಿಂಬಿಸಲಾಗುತ್ತಿರುವ ಮಿರ್ಚಿಯ ನಾಯಕ, ರೆಬೆಲ್ ಸ್ಟಾರ್ ಪ್ರಭಾಸ್ ರಾಜಮೌಳಿಯ ಬಾಹುಬಲಿ ಚಿತ್ರದ ನಾಯಕರಲ್ಲಿ ಒಬ್ಬರು. ಇವರ ಜತೆಗೆ ರಾಣಾ ದಗ್ಗುಬಟ್ಟಿ ಕೂಡ ಲೀಡ್ ರೋಲ್‌ನಲ್ಲಿ ಇರುವುದರಿಂದ ಚಿತ್ರದ ಕುರಿತು ಈಗಾಗಲೇ ನಿರೀಕ್ಷೆಯ ಮೂಟೆ ಗರಿಬಿಚ್ಚಿಕೊಂಡಿದೆ. ನಾಯಕಿಯಾಗಿ ಅನುಷ್ಕಾ ಶರ್ಮ ಕಾಣಿಸಿಕೊಳ್ಳುವುದರಿಂದ ಗ್ಲಾಮರ್ ಹಾಗೂ ಮಸಾಲೆ ವಸ್ತುಗಳಿಗೆ ಚಿತ್ರದಲ್ಲಿ ಬರ ಇರುವುದಿಲ್ಲ ಎನ್ನುವ ಮಾತು ಖಾತರಿಯಾಗಿದೆ. ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ರಾಣಾ ಇಬ್ಬರು ಸಹೋದರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನೋದು ರಾಜಮೌಳಿ ಹರಿಯಬಿಟ್ಟಿರುವ ಮಾತು. ಚಿತ್ರದ ಎರಡನೇ ಹಂತದಲ್ಲಿ ಇಬ್ಬರು ಸಹೋದರರು ವಿಲನ್ ರೂಪಕ್ಕೆ ತಿರುಗುವುದು, ಕ್ಲೈಮಾಕ್ಸ್‌ನಲ್ಲಿ ಇಟ್ಟಿರುವ ಟ್ವಿಸ್ಟ್ ಎಲ್ಲವೂ ಚಿತ್ರದ ಕುರಿತು ಹೊಸ ಹೈಫ್ ಕ್ರಿಯೇಟ್ ಮಾಡಿಬಿಡುತ್ತದೆ. ಚಿತ್ರದಲ್ಲಿ ಹಾಲಿವುಡ್ ಸಾಹಸ ನಿರ್ದೇಶಕ ಪೀಟರ್ ಹೇನ್ ಕಾಣಿಸಿಕೊಳ್ಳುವುದರಿಂದ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳಿಗೆ ಜಾಗ ನೀಡುವ ಕುರಿತು ಮೊದಲೇ ಊಹಿಸಿಕೊಳ್ಳಬಹುದು. ಬಾಹುಬಲಿಯ ಕತೆಯನ್ನು ಆಧುನಿಕ ಜಗತ್ತಿನಲ್ಲಿ ವಿಶಿಷ್ಟ ಮಾದರಿಯಲ್ಲಿ ತೋರಿಸಲು ಹೊರಟಿರುವ ರಾಜಮೌಳಿ ಚಿತ್ರದ ಮಾಹಿತಿಗಳನ್ನು ಅದಷ್ಟೂ ಗೌಪ್ಯವಾಗಿಡಲು ಬಯಸಿದ್ದಾರೆ. ಅಂದಹಾಗೆ ಚಿತ್ರವನ್ನು ಪ್ರಸಾದ್ ದೇವಿನೀನಿ ಹಾಗೂ ಎಸ್. ಯಾರಾಗಾಡು ನಿರ್ಮಾಣ ಮಾಡುತ್ತಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಏಪ್ರಿಲ್ ೨೦೧೩ರ ಹೊತ್ತಿಗೆ ಚಿತ್ರೀಕರಣ ಆರಂಭವಾಗಲಿದೆ. ಉಳಿದಂತೆ ಚಿತ್ರವನ್ನು ೨೦೧೪ರ ಹೊತ್ತಿಗೆ ಹೊರ ತರುವ ಯೋಜನೆ ರಾಜಮೌಳಿ ರೂಪಿಸಿದ್ದಾರೆ. ಈ ಹಿಂದಿನ ‘ಈಗ’ ದಂತೆ ಬಾಹುಬಲಿ ಚಿತ್ರ ಕೂಡ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ‘ಬಾಹುಬಲಿ’ಗೆ ಕರ್ನಾಟಕದ ಲೋಕೇಷನ್: ಚಿತ್ರದ ನಿರ್ದೇಶಕ ರಾಜಮೌಳಿಯ ಹೊಸ ಚಿತ್ರ ‘ಬಾಹುಬಲಿ’ಯನ್ನು ತಮಿಳುನಾಡು, ಕೇರಳ ಸೇರಿದಂತೆ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲು ಯೋಜನೆ ರೂಪಿಸಿದ್ದಾರೆ. ಅದರಲ್ಲೂ ಕನ್ನಡಿಗರಾದ ರಾಜಮೌಳಿ ಕರ್ನಾಟಕದ ವಿಶಿಷ್ಟ ತಾಣಗಳನ್ನು ತನ್ನ ಚಿತ್ರದಲ್ಲಿ ತೋರಿಸಲು ಉತ್ಸುಕತೆ ತೋರಿಸಿದ್ದಾರೆ ಎನ್ನುವುದು ಅವರ ಆಪ್ತ ಮೂಲಗಳಿಂದ ಹೊರ ಬಂದ ಮಾತು. ‘ಬಾಹುಬಲಿ’ ಚಿತ್ರ ಐತಿಹಾಸಿಕ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುವುದರಿಂದ ಕರ್ನಾಟಕದ ಬಹುತೇಕ ಹಳೆಯ ರಾಜಮನೆತನದ ದೇವಸ್ಥಾನ, ಅರಮನೆ ಹಾಗೂ ಪ್ರವಾಸಿ ತಾಣಗಳನ್ನು ಚಿತ್ರದಲ್ಲಿ ಕಾಣಬಹುದು. ಈಗಾಗಲೇ ರಾಜಮೌಳಿ ತನ್ನ ತಂಡದ ಜತೆಯಲ್ಲಿ ರಾಜ್ಯದ ಕೆಲವು ಪ್ರವಾಸಿ ತಾಣಗಳನ್ನು ಚಿತ್ರಕ್ಕಾಗಿ ಬುಕ್ ಮಾಡಿದ್ದಾರೆ ಎಂಬ ಮಾತು ಕೇಳಿಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಚಿತ್ರದ ನಾಯಕರಾದ ರಾಣಾ ಹಾಗೂ ಪ್ರಭಾಸ್‌ರನ್ನು ರಾಜ್ಯದ ಕುಸ್ತಿ ಹಾಗೂ ಮಲ್ಲಕಂಬ ಏರುವ ನಾನಾ ಸ್ಪರ್ಧೆಗಳಿಗೆ ಸಿದ್ಧ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್‌ರನ್ನು ಈ ಚಿತ್ರಕ್ಕಾಗಿ ದೇಹದ ತೂಕ ಕಡಿಮೆ ಮಾಡಿಸಿಕೊಳ್ಳುವ ಷರತ್ತು ಕೂಡ ಹಾಕಲಾಗಿದೆ. ಬಾಲಿವುಡ್‌ನ ಓಂ ಶಾಂತಿ ಓಂ ಹಾಗೂ ರಾ.ವನ್, ಎಂದಿರನ್ ಚಿತ್ರಕ್ಕೆ ದುಡಿದ ಸಿನಿಮಾಟೋಗ್ರಾಫರ್ ಸಾಬು ಸಿರೀಲ್ ಈ ಚಿತ್ರದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಬಹುತಾರಾಗಣದ ಜತೆಯಲ್ಲಿ ಬಹು ತಂತ್ರಜ್ಞರ ಮೂಲಕ ಟಾಲಿವುಡ್‌ನ ಬಿಗ್ ಬಜೆಟ್ ಚಿತ್ರವಾಗಲಿದೆ ಎನ್ನೋದು ಗುಪ್ತ ಮಾತು. ಅಂದಹಾಗೆ ಬಾಹುಬಲಿ ಚಿತ್ರ ನಿರ್ಮಾಣಕ್ಕೆ ಸುರಿಯುತ್ತಿರುವ ಹಣ ಬರೋಬರಿ ೭೦ ಕೋಟಿ ರೂಪಾಯಿಗಳು ! ಇದು ಇನ್ನಷ್ಟೂ ಹೆಚ್ಚುವ ಸಾಧ್ಯತೆ ಕೂಡ ದಟ್ಟವಾಗಿದೆ. ಟೋಟಲಿ ಬಾಹುಬಲಿ ಚಿತ್ರೀಕರಣಕ್ಕೂ ಮೊದಲು ಸುದ್ದಿಯಾಗುತ್ತಿದೆ. (vk lvk published dis article on 13.02.2013)

ನನ್ನ ಲೇಖನ ನನ್ನ ಪತ್ರಿಕೆ- 3

(vk lvk publshed dis article 0n 12.02.2013)

Tuesday, February 5, 2013

ಸಿನಿಮಾರಂಗದ ಸ್ಪೋರ್ಟ್ಸ್ ಸ್ಟಾರ‍್ಸ್ !

ಸಿನಿಮಾದಲ್ಲಿ ಸ್ಟಾರ್ ಆಗದೇ ಹೋದರೂ ಇಲ್ಲಿ ಮಾತ್ರ ಸ್ಪೋಟ್ಸ್ ಸ್ಟಾರ್ ಎನ್ನುವ ಪಟ್ಟ ಖಾಯಂ ಆಗಿ ಉಳಿದು ಬಿಡುತ್ತದೆ. ಇಂತಹ ಹತ್ತಾರು ಸ್ಪೋರ್ಟ್ಸ್ ಸ್ಟಾರ್‌ಗಳು ಸಿನಿಮಾ ರಂಗದಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ಕ್ರೀಡಾ ಕ್ಷೇತ್ರವನ್ನೇ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು ಬಣ್ಣದ ಲೋಕದ ಮಾತೇ ಭಿನ್ನ. ಇಲ್ಲಿ ಎಲ್ಲವೂ ಉಂಟು. ಆದರೆ ಏನಿಲ್ಲ ಎನ್ನುವ ಮಾತು ಹರಿದಾಡುತ್ತದೆ. ಅದಕ್ಕೂ ಮುಖ್ಯವಾಗಿ ಬಣ್ಣದ ಲೋಕದಲ್ಲಿ ಏನೋ ಮಾಡಲು ಬಂದು ನಂತರ ಏನೋ ಆಗಿ ಸೈಲೆಂಟ್ ಆಗಿ ಹೋಗುತ್ತಾರೆ. ಇನ್ನೂ ಕೆಲವರು ಬಣ್ಣದ ಲೋಕದಲ್ಲಿ ಮಿಂಚಿ ತಮ್ಮ ಇತರ ಕ್ಷೇತ್ರದಲ್ಲೂ ಸಾಧನೆ ಮೆರೆಯುತ್ತಾರೆ. ಯಾಕೋ ಗೊತ್ತಿಲ್ಲ ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ನೆಚ್ಚಿನ ಆಟೋಟಗಳಲ್ಲಿ ಗಮನ ಸೆಳೆಯುತ್ತಾರೆ.
ಅವರನ್ನು ಶಾರ್ಟ್ ಆಂಡ್ ಸ್ವೀಟ್ ಆಗಿ ಹೇಳುವುದು ಒಂದೇ ಮಾತು ಈ ವಾಸ್ ಎ ಸ್ಪೋರ್ಟ್ಸ್ ಸ್ಟಾರ್. ಸಿನಿಮಾದಲ್ಲಿ ಸ್ಟಾರ್ ಆಗದೇ ಹೋದರೂ ಇಲ್ಲಿ ಮಾತ್ರ ಸ್ಪೋಟ್ಸ್ ಸ್ಟಾರ್ ಎನ್ನುವ ಪಟ್ಟ ಖಾಯಂ ಆಗಿ ಉಳಿದು ಬಿಡುತ್ತದೆ. ಇಂತಹ ಹತ್ತಾರು ಸ್ಪೋರ್ಟ್ಸ್ ಸ್ಟಾರ್‌ಗಳು ಸಿನಿಮಾ ರಂಗದಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಕೆಲವರು ಸಿನಿಮಾ ಬಿಟ್ಟು ಬರೀ ಕ್ರೀಡಾ ಕ್ಷೇತ್ರವನ್ನೇ ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. ಅಂದಹಾಗೆ ಬಾಲಿವುಡ್ ಅಂಗಳದ ನಟಿ ಚಿತ್ರಾಂಗದಾ ಸಿಂಗ್ ಸಿನಿಮಾದ ಶೂಟಿಂಗ್ ಇಲ್ಲದೇ ಹೋದರೆ ತಮ್ಮ ಉಳಿದ ಸಮಯವನ್ನು ಯಾವ ರೀತಿ ಕಳೆಯುತ್ತಾರೆ ಎನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಚಿತ್ರಾಂಗದಾ ಪಾಲಿಗೆ ಸಿನಿಮಾಗಳು ಇಲ್ಲದೇ ಹೋದಾಗ ಶೂಟಿಂಗ್‌ನಲ್ಲಿ ತುಂಬಾನೇ ಬ್ಯುಸಿಯಾಗಿ ಉಳಿಯುತ್ತಾರೆ. ಚಿತ್ರಾಂಗದಾ ಶೂಟಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆ. ಈ ವರ್ಷದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಜತೆಯಲ್ಲಿ ಗುದ್ದಾಡುವ ಸ್ಪರ್ಧಿಯಾಗಿ ಚಿತ್ರಾಂಗದಾ ಕಾಣಿಸಿಕೊಳ್ಳುತ್ತಾರೆ. ಬಾಲಿವುಡ್‌ನಲ್ಲಿ ಚಿತ್ರಗಳು ಇರಲೀ ಹೋಗಲಿ ಚಿತ್ರಾಂಗದಾ ಮಾತ್ರ ಈ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದೇ ಇಲ್ಲ ಎನ್ನೋದು ಅವರ ಆಪ್ತ ಮೂಲಗಳ ಮಾತು. ಇದು ಒಂದು ನಟ, ನಟಿಯರ ಮಾತಲ್ಲ. ಸಿನಿಮಾವನ್ನು ಇವರು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಯನ್ನು ಅವರು ತಮ್ಮ ನೆಚ್ಚಿನ ಕ್ರೀಡಾ ಕ್ಷೇತ್ರಗಳಲ್ಲಿ ಇಟ್ಟುಕೊಂಡಿದ್ದಾರೆ. ಸಿನಿಮಾ ರಂಗದವರಿಗೂ ಒಂಚೂರು ಹೇಳಿಕೊಳ್ಳದೇ ತಮ್ಮ ಕ್ರೀಡಾ ಕ್ಷೇತ್ರಗಳಲ್ಲಿ ಪದಕಗಳ ಮೇಲೆ ಪದಕಗಳನ್ನು ಹೊಡೆದು ತಮ್ಮ ಮನೆಯ ಶೋಕೇಸ್‌ನಲ್ಲಿ ಜೋಪಾನವಾಗಿ ತೂಗು ಹಾಕುತ್ತಾರೆ.
ಸಿನಿಮಾ ಲೋಕದ ವಿಶಿಷ್ಟ ಕ್ರೀಡೆಗಳು: ಸಿನಿಮಾ ನಟ/ನಟಿಯರ ಫೀಟ್‌ನೆಸ್ ಕುರಿತು ತಜ್ಞರು ಹೇಳುವ ಮಾತು ಹೀಗಿದೆ: ಸಿನಿಮಾ ನಟರು ಯಾವುದಾದರೂ ಒಂದು ಕ್ರೀಡೆಯಲ್ಲಿ ಇದ್ದಾರೆ ಒಳ್ಳೆಯದು. ಈ ಮೂಲಕ ಅವರು ತಮ್ಮ ದೇಹದ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಸಾಧ್ಯವಿದೆ. ಪಾತ್ರಗಳಲ್ಲೂ ಒಂದು ಹಿಡಿ ಜಾಸ್ತಿಯಾಗಿ ಭಾಗಿಯಾಗುವ ಕೆಲಸ ನಡೆಯುತ್ತದೆ ಎನ್ನುವುದು ಮಾತು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆಯಂತೆ ಒಳ್ಳೆಯ ಶಟ್ಲ್ ಆಟಗಾರ್ತಿ. ಈಗಾಗಲೇ ರಾಜ್ಯ ಮಟ್ಟದ ಹಲವು ಶಟ್ಲ್ ಆಟಗಳಲ್ಲಿ ಪದಕ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಂದು ಬಾರಿ ತಂದೆಯ ಕ್ರೀಡೆಗೆ ಸಾಥ್ ಕೊಡಲು ದೀಪಿಕಾ ಮಾಧ್ಯಮಗಳ ಮುಂದೆ ನಿಂತು ಶಟ್ಲ್ ಆಡುವ ಚಿತ್ರಗಳನ್ನು ಬಹುತೇಕ ಮಂದಿ ಕಂಡಿರಬಹುದು. ಅದರಲ್ಲೂ ಬಣ್ಣದ ಲೋಕದಲ್ಲಿ ದೀಪಿಕಾ ಮೆಟ್ಟಲುಗಳ ಮೇಲೆ ಮೆಟ್ಟಲುಗಳನ್ನು ಏರುತ್ತಾ ಸಾಗುತ್ತಿದ್ದಂತೆ ಶಟ್ಲ್ ಆಟಗಳಿಂದ ದೀಪಿಕಾ ದೂರವಾಗುತ್ತಾ ಹೋದಳು.
ಬಾಲಿವುಡ್ ನಟಿ ನೀತೂ ಚಂದ್ರಾ ಪಕ್ಕಾ ಬಾಸ್ಕೆಟ್ ಬಾಲ್ ಆಟಗಾರ್ತಿ ಜತೆಗೆ ಕರಾಟೆಯಲ್ಲೂ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಹುಡುಗಿ. ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟಗಳಲ್ಲಿ ಗೆದ್ದುಕೊಂಡು ಎನ್‌ಬಿಎಯಲ್ಲೂ ಕಾಲೂರಿದ ನಟಿ ನೀತೂ ಚಂದ್ರಾ ಸಿನಿಮಾದಲ್ಲೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಮೋಲಿವುಡ್ ಸ್ಟಾರ್ ಅನನ್ಯಾ ಕೂಡ ಬಿಲ್ಲುಗಾರಿಕೆಯಲ್ಲಿ ಎತ್ತಿದ ಕೈ. ಕೇರಳದಲ್ಲಿ ನಡೆಯುವ ರಾಜ್ಯ ಮಟ್ಟದ ಬಿಲ್ಲುಗಾರಿಕೆಯಲ್ಲಿ ಕೆಲವು ವರ್ಷಗಳಿಂದ ಅನನ್ಯಾ ಚಿನ್ನದ ಪದಕವನ್ನು ಗೆಲ್ಲುತ್ತಿದ್ದಾರೆ. ಮುಖ್ಯವಾಗಿ ಬಿಲ್ಲುಗಾರಿಕೆಯಿಂದ ರಾಷ್ಟ್ರೀಯ ಮಟ್ಟಕ್ಕೂ ಹೋಗಿರುವ ನಟಿ ಅನನ್ಯಾ ಸಿನಿಮಾದಲ್ಲೂ ಹೆಸರು ಬಲಪಡಿಸುತ್ತಿದ್ದಾರೆ. ಕನ್ನಡದ ಧ್ಯಾನ್ ( ಸಮೀರ್ ದತ್ತಾನಿ) ನಟನೆಗಿಂತ ಮೊದಲು ಒಬ್ಬ ಒಳ್ಳೆಯ ಸ್ಕೇಟಿಂಗ್ ಆಟಗಾರ. ಬಹಳಷ್ಟು ಪದಕಗಳನ್ನು ಪಡೆದುಕೊಂಡು ರಾಷ್ಟ್ರೀಯ ಸ್ಕೇಟಿಂಗ್ ತಂಡದಲ್ಲೂ ಗುರುತಿಸಿಕೊಂಡಿರುವ ಪ್ರತಿಭೆ. ಬಾಲಿವುಡ್ ನಟ ನಾನಾ ಪಟೇಕರ್ ಬರೀ ನಟನೆಯಲ್ಲಿ ಮಾತ್ರವಲ್ಲ ತಮ್ಮ ಮಾತಿನ ಹರಿತದಂತೆ ಶೂಟಿಂಗ್‌ನಲ್ಲೂ ಕರಾಮತ್ತು ತೋರಿಸಿದ್ದಾರೆ. ಅಬ್ ತಕ್ ಚಪ್ಪನ್ ಸಿನಿಮಾದಲ್ಲೂ ನಾನಾ ರಿಯಲ್ ಗನ್ ಮೂಲಕ ಆಟವಾಡಿ ಈ ಹಿಂದೆ ಸುದ್ದಿಯಾಗಿದ್ದರು. ರಾಷ್ಟ್ರ ಮಟ್ಟದ ಶೂಟಿಂಗ್ ಸ್ಫರ್ಧೆಯಲ್ಲಿ ಪದಕ ಗೆಲ್ಲುವ ಹೆಸರುಗಳಲ್ಲಿ ನಾನಾ ಕೂಡ ಸೇರಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾರ್ಶಲ್ ಆರ್ಟ್ಸ್‌ನಲ್ಲಿ ಪಳಗಿ ಬಂದವರು. ತಮ್ಮದೇ ಮಾರ್ಶಲ್ ಆರ್ಟ್ಸ್ ಶಾಲೆ, ಅಕಾಡೆಮಿಗಳನ್ನು ತೆರೆದು ಸಿನಿಮಾ ಶೂಟಿಂಗ್ ಇಲ್ಲದೇ ಹೋದಾಗ ಮಾರ್ಶಲ್ ಆರ್ಟ್ಸ್‌ನಲ್ಲಿ ಬಹಳ ಹೊತ್ತು ಕಳೆಯುತ್ತಾರೆ. ರಾಹುಲ್ ಬೋಸ್ ಪಕ್ಕಾ ಫುಟ್ಬಾಲ್, ರಗ್ಬಿ ಆಟಗಾರ. ಸಿನಿಮಾ ರಂಗಕ್ಕೆ ಬರುವುದಕ್ಕಿಂತಲೂ ಮೊದಲು ಈ ಎಲ್ಲ ಕ್ರೀಡೆಗಳಲ್ಲಿ ಸಖತ್ ಕ್ಲಿಕ್ ಆದವರು. ರಗ್ಬಿಯಲ್ಲಂತೂ ಅಂತಾರಾಷ್ಟ್ರೀಯ ಮಟ್ಟದ ೨೦ಕ್ಕೂ ಅಧಿಕ ಪಂದ್ಯಾಟಗಳಲ್ಲಿ ರಾಹುಲ್ ಆಟವಾಡಿದ್ದಾರೆ. ಇಂತಹ ನಾನಾ ಕ್ರೀಡಾ ಪ್ರತಿಭೆಗಳು ಸಿನಿಮಾ ರಂಗದಲ್ಲಿ ಇವೆ ಆದರೆ ಅದು ಸಿನಿಮಾ ನೋಡುವ ಪ್ರೇಕ್ಷಕನಿಗಂತೂ ಕಾಣಿಸಿಕೊಳ್ಳುವುದೇ ಇಲ್ಲ ಎನ್ನುವುದು ಗಮನಿಸಬೇಕಾದ ವಿಷ್ಯಾ.

ನನ್ನ ಲೇಖನ ನನ್ನ ಪತ್ರಿಕೆ- 2


(vk daily nammakarvali all eddition lead-6.02.2013)

Monday, February 4, 2013

ನನ್ನ ಲೇಖನ ನನ್ನ ಪತ್ರಿಕೆ- ೧

(vk lvk published on 5.02.2013)

ವಿದ್ಯುತ್ ಬೇಡದೆ ಬೆಳಕು ಕೊಡುವ ಹುಡುಗರು !

ಸ್ಟೀವನ್ ರೇಗೊ, ದಾರಂದಕುಕ್ಕು ಮಂಗಳೂರು ವಿದ್ಯುತ್ ಸಮಸ್ಯೆಯಿಂದ ನಗರಗಳು ಕಂಗೆಟ್ಟಿದ್ದರೆ, ಇದರ ಗೊಡವೆಯೇ ಇಲ್ಲದೆ ಕರಾವಳಿಯ ಗ್ರಾಮಗಳಲ್ಲಿ ಮನೆಗಳಿಗೆ ಬೆಳಕು ಕೊಡುವ ಕೆಲಸವನ್ನು ಆರು ಮಂದಿ ಇಂಜಿನೀಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಮಾಡುತ್ತಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ಕೊಡುವಷ್ಟು ಬೃಹತ್ ವಿದ್ಯುತ್‌ಗಾರ, ಕಿರು ವಿದ್ಯುತ್ ಘಟಕಗಳನ್ನು ಹೊಂದಿರುವ ಕರಾವಳಿಯಲ್ಲೇ ವಿದ್ಯುತ್ ಸಂಪರ್ಕವೇ ಕಾಣದ ಮನೆಗಳಿನ್ನೂ ಅಂಧಕಾರದಲ್ಲಿವೆ. ಬೀದಿ ದೀಪಗಳನ್ನು ಕಂಡು ಕಣ್ಣೆವೆ ತುಂಬಿಕೊಳ್ಳುತ್ತಿದ್ದ ಈ ಚಿಮಣಿ ದೀಪದ ಬಡವರಿಗೆ ಬೆಳಕು ಕೊಡುವ ಕೊಡುಗೆ ಈ ಯುವಕರದ್ದು. ಸ್ಟ್ರೀ (ಸಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡು ತಮ್ಮದೇ ಮೂಲ ಸಂಪನ್ಮೂಲಗಳನ್ನು ಹುಟ್ಟುಹಾಕಿಕೊಂಡು ಗ್ರಾಮಾಂತರ ಪ್ರದೇಶದಲ್ಲಿರುವ ಅದರಲ್ಲೂ ಬಡತನ ರೇಖೆಗಿಂತಲೂ ಕೆಳಗಿರುವ ಮನೆಗಳನ್ನು ಹುಡುಕಾಡಿಕೊಂಡು ಸೌರಶಕ್ತಿಯ ಮೂಲಕ ಬೆಳಕು ನೀಡುವ ಕೆಲಸವನ್ನು ಯುವಕರು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಹುಟ್ಟಿದ ಸಂಸ್ಥೆ: ನಾಲ್ಕು ವರ್ಷಗಳ ಹಿಂದೆ ಮೂಡುಬಿದಿರೆಯ ಆಳ್ವಾಸ್ ಹಾಸ್ಟೆಲ್‌ನ ನಾನಾ ರೂಮ್‌ಗಳಲ್ಲಿ ತಂಗಿದ್ದ ಯುವಕರ ತಂಡವೊಂದು ಬಡವರಿಗೆ ಬೆಳಕು ಕೊಡಲು ಯೋಜನೆ ರೂಪಿಸಿದ್ದರು. ಅಲ್ಲಿಯೇ ದುಡಿಯುತ್ತಿದ್ದ ಕೆಲಸದಾಳುಗಳ ಮನೆಗಳಿಗೆ ತಮ್ಮ ಪಾಕೆಟ್ ಮನಿಯನ್ನು ಜೋಡಿಸಿಕೊಂಡು ಸೌರಶಕ್ತಿಯ ಮೂಲಕ ಬೆಳಕು ಕೊಟ್ಟರು. ನಂತರ ಇಂತಹ ನಾನಾ ಕುಟುಂಬಗಳ ಹುಡುಕಾಟ ಆರಂಭವಾಯಿತು. ಅಲ್ಲಿಯೇ ಹುಟ್ಟಿದ್ದು ಸ್ಟ್ರೀ (ಸಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎಂಜಿನಿಯರ್ ವಿದ್ಯಾರ್ಥಿಗಳಾದ ಮೈಸೂರಿನ ಅಖಿಲ್, ಪವನ್, ವಿಶಾಲ್, ಶಾಶ್ವತ್, ಪುತ್ತೂರಿನ ಸಾಯಿಗಣೇಶ್, ನಿಂತಿಕಲ್ಲಿನ ಶೌಕತ್ ಎಲ್ಲರೂ ಸೇರಿಕೊಂಡು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದರು.
ಕರಾವಳಿಯಲ್ಲೇ ಐದು ಪ್ರಾಜೆಕ್ಟ್: ಎಂಜಿನಿಯರಿಂಗ್ ಕಲಿಯುತ್ತಿರುವ ಆರು ಮಂದಿ ಯುವಕರು ತಮ್ಮ ರಜಾ ಅವಧಿಯಲ್ಲೇ ಇಂತಹ ಸೌರಶಕ್ತಿಯ ಪ್ರಾಜೆಕ್ಟ್‌ಗೆ ಇಳಿಯುತ್ತಾರೆ. ಕರಾವಳಿಯಲ್ಲಿರುವ ತೀರಾ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಹುಡುಕಾಡಿ ವಿದ್ಯುತ್ ಸಂಪರ್ಕ ಇದೆಯೇ ಇಲ್ಲವೇ ಎನ್ನುವ ಖಾತರಿ ಪಡಿಸಿಕೊಂಡು ಯುವಕರು ಯೋಜನೆ ರೂಪಿಸುತ್ತಾರೆ. ಮುಖ್ಯವಾಗಿ ಬಿಪಿಎಲ್ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಆರಂಭದಲ್ಲಿ ಮೂಡುಬಿದರೆಯ ಎರಡು ಮನೆಗಳಿಗೆ ಸೌರಶಕ್ತಿ ಮೂಲಕ ಬೆಳಕು ಕೊಟ್ಟರು. ಈ ಬಳಿಕ ಪುತ್ತೂರಿನ ಕುಂಬುರ್ಗ, ಬೀರಹ್ನಿತ್ಲುನ ಆರು ಮನೆಗಳು, ಸವಣೂರಿನ ಆರು ಮನೆಗಳು, ಮೈಸೂರು ಎಚ್.ಡಿ ಕೋಟೆ ಪಂಜದಲ್ಲಿರುವ ಬಳ್ಪ ಗ್ರಾಮದ ೩೦ ಮನೆಗಳಿಗೆ ಸೌರಶಕ್ತಿಯಿಂದ ಬೆಳಕು ನೀಡಿದ್ದಾರೆ. ಮುಂದೆ ಕುಂದಾಪುರದಲ್ಲಿರುವ ಇಡೀ ಗ್ರಾಮಕ್ಕೆ ಬೆಳಕು ನೀಡುವ ಯೋಜನೆ ರೂಪಿಸಿದ್ದಾರೆ. ಬೆಳಕು ನೋಡದ ಮುಖದಲ್ಲಿ ಅರಳಿದ ಸಂತಸ: ಪಂಜದಿಂದ ಸ್ವಲ್ಪ ದೂರದಲ್ಲಿರುವ ಬಳ್ಪಗ್ರಾಮದ ಕೇನ್ಯಾ ಪ್ರದೇಶದ ನೇಲ್ಯಡ್ಕ, ಐನಡ್ಕ, ಕಣ್‌ಕಾಲಿನ ೩೦ ಬಿಪಿಎಲ್ ಪಟ್ಟಿಯಲ್ಲಿರುವ ಮನೆಗಳು ಎಂದಿಗೂ ಚಿಮಣಿ ದೀಪದಿಂದ ಹೊರಬಂದವರಲ್ಲ. ಬೀದಿ ದೀಪಗಳನ್ನೇ ನೋಡಿ ಮನದಲ್ಲಿ ಸಂತಸ ತುಂಬಿಕೊಂಡಿದ್ದರು. ಬೆಳಕು ಎನ್ನೋದು ಶ್ರೀಮಂತರಿಗೆ ಮಾತ್ರ ಇರುವ ಸವಲತ್ತು ಎಂದುಕೊಂಡೇ ತಮ್ಮ ಮಕ್ಕಳಿಗೆ ಚಿಮಣಿ ದೀಪಗಳನ್ನು ತೋರಿಸಿ ಮಲಗಿಸುತ್ತಿದ್ದರು. ಆದರೆ ಈಗ ಕೇನ್ಯಾದ ಚಿಮಣಿ ದೀಪಗಳು ನಂದಿ ಹೋಗಿದೆ. ಅವುಗಳ ಜಾಗದಲ್ಲಿ ಪಳಪಳ ಹೊಳೆಯುವ ಸೌರಶಕ್ತಿಯ ಬಲ್ಬ್‌ಗಳು ಜಾಗಪಡೆದುಕೊಂಡಿದೆ. ಈ ಯುವಕರು ೩೦ ಮನೆಗಳ ಮುಂಭಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕಿಕೊಂಡು ಮನೆಯೊಳಗೆ ಬಲ್ಬ್ ಹೊತ್ತಿಸುತ್ತಿದ್ದಾರೆ. ಒಂದು ಬಲ್ಬ್, ಸೋಲಾರ್ ಪ್ಯಾನೆಲ್, ಬ್ಯಾಟರಿ ಕೊಟ್ಟು ಮನೆಯ ಮೂಲೆಯಲ್ಲಿರುವ ಮಗು ಈಗ ಬೆಳಕು ನೋಡಿ ಕುಣಿಯುವಂತಾಗಿದೆ.
ಅಂದಹಾಗೆ ೩೦ ಮನೆಗಳಿಗೆ ಬೆಳಕು ನೀಡಲು ಧನ ಸಹಾಯ ಮಾಡಿದವರು ಮೈಸೂರಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ಸಿ. ರಾಜು ಎನ್ನುವವರು. ಹೀಗೆ ಕರಾವಳಿಯ ಕುಗ್ರಾಮದಲ್ಲಿರುವ ಒಂದು ಪುಟ್ಟ ಮನೆಯಲ್ಲಿ ಬೆಳಕು ಕೊಡಲು ಮೈಸೂರಿನ ಮಂದಿ ತಮ್ಮ ಉದಾರತೆಯನ್ನು ಮೆರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಪ್ರಾಜೆಕ್ಟ್‌ಗಳನ್ನು ಮಾಡಿದ್ದೇವೆ. ಆರು ತಿಂಗಳಿಗೊಮ್ಮೆ ಈ ಯೋಜನೆ ರೂಪಿಸಿದ ಹಳ್ಳಿಗಳಿಗೆ ಹೋಗಿ ಬ್ಯಾಟರಿ ಚೆಕ್ ಮಾಡಿಕೊಂಡು ಅವರಿಗೆ ಮತ್ತೊಂದು ಬಲ್ಬ್ ಹಾಗೂ ಮೊಬೈಲ್ ಚಾರ್ಜರ್ ಕೊಟ್ಟು ಬರುತ್ತೇವೆ. ಕರಾವಳಿಯಲ್ಲಿ ಇಂತಹ ಯೋಜನೆ ರೂಪಿಸಿದಾಗ ಹೊರ ಜಿಲ್ಲೆಯವರೇ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ತಂಡದ ಸದಸ್ಯ ಶೌಕತ್. ಪಕ್ಕದ ಮನೆಯಲ್ಲಿರುವಂತೆ ನಮ್ಮ ಮನೆಯಲ್ಲೂ ಟಿವಿ ನೋಡಬೇಕು. ಬಲ್ಬ್‌ನ ಅಡಿಯಲ್ಲಿ ಕೂತು ಪಾಠ ಓದಬೇಕು. ಚಿಮಣಿ ದೀಪ ನೋಡಿದಾಗಲೆಲ್ಲ ನಿದ್ದೆ ಬಂದು ಬಿಡುತ್ತದೆ ಎಂದು ಎರಡನೇ ತರಗತಿ ಗಣೇಶ ಹೇಳಿದ ಮಾತು. ಕುಗ್ರಾಮದಲ್ಲಿರುವ ಬಡವರ ಮನೆಗಳಿಗೆ ಬೆಳಕು ಕೊಟ್ಟು ಹುಡುಗರು ತಮ್ಮ ಸಾಧನೆ ಮೆರೆದಿದ್ದಾರೆ ಎನ್ನೋದು ಈ ಮೂಲಕ ಖಾತರಿ ಆಗುತ್ತದೆ.
* ಇಡೀ ರಾಜ್ಯದಲ್ಲಿ ಇಂತಹ ಸೌರ ಶಕ್ತಿಯ ಯೋಜನೆಯನ್ನು ರೂಪಿಸಬೇಕು ಎನ್ನೋದು ನಮ್ಮ ತಂಡದ ಕನಸ್ಸು. ರಾಜ್ಯದ ನಾನಾ ಕಡೆ ಇರುವ ಪರ್ಯಾಯ ಇಂಧನಗಳ ಶಕ್ತಿಗಳಾದ ಪವನ ಶಕ್ತಿ, ಹೈಡ್ರೋವನ್ನು ಬಳಕೆ ಮಾಡಿಕೊಂಡು ಬಡವರಿಗೆ ಬೆಳಕು ನೀಡಬೇಕು ಎನ್ನುವ ಯೋಜನೆ ಇದೆ. ಈ ಮೂಲಕ ವಿದ್ಯುತ್ ಕೊರತೆಯ ಸಮಯದಲ್ಲೂ ಇತತ ಇಂಧನಗಳಿಗೆ ಮೊರೆ ಹೋಗಬಹುದು. -ಅಖಿಲ್, ಸ್ಟ್ರೀ ತಂಡದ ಮುಖ್ಯಸ್ಥ . * ಬದುಕಿನಲ್ಲಿ ನಮ್ಮ ಮನೆಯಲ್ಲಿ ಬೆಳಕು ನೋಡುತ್ತೇವೆ ಎನ್ನುವ ಕನಸಿನಲ್ಲೂ ಇರಲಿಲ್ಲ. ಬೆಳಕು ಎನ್ನೋದು ಉಳ್ಲವರಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದೆ. ಆದರೆ ಈ ಹುಡುಗರು ರಾತ್ರಿ- ಹಗಲು ದುಡಿದು ನಮಗೆಲ್ಲ ನಿಜವಾದ ಬೆಳಕು ಕೊಟ್ಟಿದ್ದಾರೆ. -ಚೋಮ, ನೇಲ್ಯಡ್ಕ ಗ್ರಾಮ ನಿವಾಸಿ. ... (vk student eddition on-5.02.2013)and vk nammkarvali edition on-6.02.2013)

Sunday, February 3, 2013

ಬಾಲಿವುಡ್‌ಗೆ ಹಿಮ್ಮತ್ ಕೊಡುವ ಖಾನ್

ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಅಮ್ಜಾದ್ ಖಾನ್ ಇಡೀ ಬಾಲಿವುಡ್ ಅಂಗಳದಲ್ಲಿ ಅಬ್ಬರಿಸಿದ ನಟ. ಶೋಲೆಯ ಗಬ್ಬರ್‌ಸಿಂಗ್ ಪಾತ್ರವಂತೂ ಅಮ್ಜಾದ್ ಖಾನ್‌ನನ್ನು ಪದೇ ಪದೇ ಜೀವಂತವಾಗಿಡುತ್ತಿದೆ. ಅಮ್ಜಾದ್ ಖಾನ್ ಸಿನಿಮಾ ಲೋಕ ಬಿಟ್ಟು ಹತ್ತಾರು ವರ್ಷಗಳೇ ಆಗಿರಬಹುದು ಆದರೆ ಶೋಲೆಯ ಪಾತ್ರವಂತೂ ಸಿನಿಮಾ ಪ್ರೇಕ್ಷಕನಿಗೆ ಸದಾ ಕಾಡುತ್ತಾ ಸಾಗುತ್ತಿದೆ. ಇದು ಸಿನಿಮಾಕ್ಕೆ ಇರುವ ಶಕ್ತಿಯೋ ಇಲ್ಲವೇ ಅಮ್ಜಾದ್‌ಗೆ ಇರುವ ತಾಕತ್ತೋ ಗೊತ್ತಿಲ್ಲ. ಗಬ್ಬರ್ ಪಾತ್ರಕ್ಕೆ ಅಮ್ಜಾದ್ ಖಾನ್‌ರೇ ಸೂಟೇಬಲ್ ಮ್ಯಾನ್ ಎಂದೇ ನೂರು ವರ್ಷ ತುಂಬಿದ ಹಿಂದಿ ಸಿನಿಮಾ ರಂಗ ಕನವರಿಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಈಗ ಅಮ್ಜಾದ್ ಖಾನ್ ಮತ್ತೇ ಸಿನಿಮಾ ರಂಗದಲ್ಲಿಲ್ಲ. ಆದರೆ ಅಮ್ಜಾದ್ ಖಾನ್ ಅವರ ಕೊನೆಯ ಪುತ್ರ ಸೀಮಾಬ್ ಖಾನ್ ಚಿತ್ರರಂಗದಲ್ಲಿ ಅಂಬೆಕಾಲು ಹಾಕುತ್ತಿದ್ದಾರೆ. ಯಾಕೋ ಗೊತ್ತಿಲ್ಲ . ಅಪ್ಪ ಹೇಳಿಕೊಟ್ಟ ನಟನೆಯನ್ನು ಬಿಟ್ಟು ನಿರ್ದೇಶಕನಾಗಿ ಕುಳಿತುಕೊಳ್ಳಲು ಸೀಮಾಬ್ ಖಾನ್ ಯೋಚನೆ ಮಾಡಿದ್ದಾರೆ. ಅದರಲ್ಲೂ ಸಹಾಯಕ ನಿರ್ದೇಶಕನಾಗಿ ಈಗ ಸಿನಿಮಾವೊಂದನ್ನು ಹಿರಿತೆರೆಗೆ ತರುತ್ತಿದ್ದಾರೆ ಎನ್ನೋದು ಗಮನಿಸಬೇಕಾದ ವಿಷ್ಯಾ. ಹಿಮ್ಮತ್‌ವಾಲಾದಲ್ಲಿ ಖಾನ್ ವರಸೆ: ಬಾಲಿವುಡ್ ನಲ್ಲಿ ಸದ್ಯಕ್ಕೆ ಸುದ್ದಿಯಾಗುತ್ತಿರುವ ಚಿತ್ರ ‘ಹಿಮ್ಮತ್‌ವಾಲಾ’ ಕಾರಣ ಈ ಹಿಂದೆ ಇದೇ ಚಿತ್ರ ಹಿಂದಿಯಲ್ಲಿ ಬಂದಿತ್ತು. ಅದಕ್ಕೂ ಮುಖ್ಯವಾಗಿ ಖ್ಯಾತ ನಟ ಜೀತೇಂದ್ರ ಹಾಗೂ ಶ್ರೀದೇವಿಯ ಭರ್ಜರಿ ನಟನೆಯಿಂದ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಲಗ್ಗೆ ಹಾಕಿತ್ತು. ನಂತರ ಇಬ್ಬರ ಜೋಡಿ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೇ ಬೇಡಿಕೆ ಕೂಡ ಗಳಿಸಿದ್ದು ಈಗ ಒಂದು ತಿಹಾಸ ಸೇರಬೇಕಾದ ಪುಟ. ಆದರೆ ಬಾಲಿವುಡ್ ನಿರ್ದೇಶಕ ಸಜೀದ್ ಖಾನ್ ಇದೇ ಹೆಸರಿನಲ್ಲಿ ಚಿತ್ರವನ್ನು ಹೊರತರುತ್ತಿದ್ದಾರೆ. ಅಲ್ಲಿ ಜಿತೇಂದ್ರ ಕಾಣಿಸಿಕೊಂಡರೆ ಇಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಶ್ರೀದೇವಿಯ ಜಾಗದಲ್ಲಿ ತಮ್ನಾನಾ ಬಂದು ಕೂತಿದ್ದಾಳೆ. ಕತೆಯಲ್ಲೂ ಕೊಂಚ ಮಸಾಲೆ ಅರಿಯಲಾಗಿದೆ. ಈ ಹಿಂದೆ ಹಿಂದಿಯಲ್ಲಿ ಬಂದಿದ್ದ ‘ಅಗ್ನಿಪಥ್’ ಸಿನಿಮಾ ದಂತೆ ಇದರಲ್ಲೂ ಎರ್ರಾಬಿರ್ರಿಯಾಗಿ ಹೊಸತನದ ಅಂಟು ಮೆತ್ತಿಸಲಾಗಿದೆ. ನಿರ್ದೇಶಕ ಸಜೀದ್ ಖಾನ್ ಎಂದಾಗಲೇ ಅಲ್ಲಿ ಮಸಾಲೆ ಜತೆಯಲ್ಲೂ ಕೊಂಚ ಕಾಮಿಡಿಗೂ ಜಾಗ ನೀಡಲಾಗುತ್ತದೆ ಎನ್ನುವ ಗ್ಯಾರಂಟಿ ಮಾತು ಸಜೀದ್ ಖಾನ್‌ರ ಈ ಹಿಂದಿನ ಮಾತುಗಳು ಬಲಿಷ್ಟಗೊಳ್ಳುತ್ತದೆ. ಸಜೀದ್ ಹಿಡಿದ ಪ್ರತಿಭಾವಂತ ಖಾನ್:
ಬಾಲಿವುಡ್ ಅಂಗಳದಲ್ಲಿ ದೂರವೇ ನಿಂತು ನೋಡುತ್ತಿದ್ದ ಅಮ್ಜಾದ್ ಖಾನ್‌ರ ಕೊನೆಯ ಪುತ್ರ ಸೀಮಾಬ್ ಖಾನ್ ಅವರನ್ನು ಹುಡುಕಾಡಿಕೊಂಡು ಬಂದದ್ದು ಬೇರೆ ಯಾರು ಅಲ್ಲ. ‘ಹಿಮ್ಮತ್‌ವಾಲಾ’ದ ನಿರ್ದೇಶಕ ಸಜೀದ್ ಖಾನ್. ಸಜೀದ್‌ಗೆ ಅಮ್ಜಾದ್ ಖಾನ್ ಎನ್ನುವ ಹಿರಿಯ ನಟನ ಮೇಲೆ ವಿಶೇಷ ಪ್ರೀತಿ. ಅದಕ್ಕೂ ಮುಖ್ಯವಾಗಿ ಹಿರಿಯ ನಟನ ಪುತ್ರ ಸಿನಿಮಾದಿಂದ ದೂರ ಉಳಿದುಬಿಡೋದು ಸಜೀದ್‌ಗೆ ಸುತಾರಂ ಇಷ್ಟವಿರಲಿಲ್ಲ. ಈ ಕಾರಣವನ್ನೇ ಮುಂದೆ ಹಾಕಿಕೊಂಡು ಸೀಮಾಬ್ ರನ್ನು ತನ್ನ ಚಿತ್ರದ ಸಹಾಯಕ ನಿರ್ದೇಶಕನ ಕುರ್ಚಿಯಲ್ಲಿ ತಂದು ಕೂರಿಸಿದ್ದಾರೆ. ಚಿತ್ರ ಈಗಾಗಲೇ ಸಂಪೂರ್ಣವಾಗಿ ತೆರೆಗೆ ದಾಳಿ ಮಾಡಲು ರೆಡಿಯಾಗಿದೆ. ಮತ್ತೊಂದೆಡೆ ಸಜೀದ್‌ರ ಖಾಸಾ ಗೆಳೆಯ ಸಾಬಾಬ್ ಕೂಡ ಈ ಚಿತ್ರದ ಹಿಂದೆ ನಿಂತಿದ್ದಾರೆ. ಅಂದಹಾಗೆ ಸಾಬಾಬ್ ಬೇರೆ ಯಾರು ಅಲ್ಲ. ಸೀಮಾಬ್ ಅವರ ಹಿರಿಯ ಸಹೋದರ. ಅಮ್ಜಾದ್ ಖಾನ್‌ರ ಹಿರಿಯ ಪುತ್ರ. ಸೀಮಾಬ್ ಮುಂಬಯಿ ವಿವಿಯ ಕ್ರಿಕೆಟ್ ಟೀಮ್‌ನಲ್ಲಿ ಬೌಲರ್ ಆಗಿದ್ದವರು. ಸಿನಿಮಾ ರಂಗಕ್ಕೆ ಕಾಣಿಸಿಕೊಳ್ಳದಿದ್ದಾರೆ ಸೀಮಾಬ್ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿದ್ದರು. ಚಿತ್ರದ ಕುರಿತು ಸೀಮಾಬ್ ಅವರಲ್ಲಿ ಕೇಳಿದಾಗ ‘ ನನ್ನ ತಂದೆ ಈ ಹಿಂದಿ ಚಿತ್ರದಲ್ಲಿ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನು ನಿರ್ದೇಶಕ ಮಹೇಶ್ ಮಾಂಜ್ರೇಕರ್ ಮಾಡುತ್ತಿದ್ದಾರೆ. ತಂದೆಯ ಚಿತ್ರದಲ್ಲಿ ಸಹಾಯಕನಾಗಿ ದುಡಿದಿದ್ದೇನೆ. ಅದೇ ಅನುಭವ ಇಲ್ಲೂ ಅಳವಡಿಸಿದ್ದೇನೆ ಎನ್ನುತ್ತಾರೆ ಅವರು. ಟೋಟಲಿ ಹಿರಿಯ ನಟನ ಪುತ್ರನೊಬ್ಬ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರೋದು ಅಮ್ಜಾದ್ ಅಭಿಮಾನಿಗಳಿಗೆ ಖುಷಿಕೊಡಬಹುದು. (vk lvk publishe dis ariticle on 5.02.2013)

ನನ್ನ ಲೇಖನ ನನ್ನ ಪತ್ರಿಕೆ- ವಿಜಯ ನೆಕ್ಸ್ಟ್ ೧

(vijayanext published dis article on 1.02.2013)

Friday, February 1, 2013

ಕತ್ತಲ ಬದುಕಿಗೆ ಬೆಳಕು ಕೊಟ್ಟ ಹುಡುಗರು !

* ಸ್ಟೀವನ್ ರೇಗೊ, ದಾರಂದಕುಕ್ಕು
ಮಂಗಳೂರು: ಕರಾವಳಿ ಯಾಕೆ ಇಡೀ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆಯೆತ್ತಿ ಕುಣಿದಾಡುತ್ತಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆಯಿಂದ ಬೆಳಕು ಕಾಣದ ದಿನಗಳು ಗಟ್ಟಿಯಾಗುತ್ತಿದೆ. ಅಂದಹಾಗೆ ಇವುಗಳ ನಡುವೆ ಮನೆಯಲ್ಲಿ ವಿದ್ಯುತ್ ಸಂಪರ್ಕವೇ ಕಾಣದ ಅದೆಷ್ಟೋ ಮುಖಗಳು ಇನ್ನೂ ಕೂಡ ಕಪ್ಪು ಕತ್ತಲಿನಲ್ಲಿ ಬದುಕು ಕಳೆಯುತ್ತಿದೆ. ಬೀದಿ ದೀಪಗಳನ್ನು ಕಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಚಿಮಣಿ ದೀಪದ ಬಡವರಿಗೆ ಬೆಳಕು ಕೊಡುವ ಯುವಕರ ತಂಡವೊಂದು ಕರಾವಳಿಯ ಕುಗ್ರಾಮಗಳಲ್ಲಿ ದುಡಿಯುತ್ತಿದೆ. ಹೌದು. ಇದು ಸ್ಟ್ರೀ (ಸಬ್‌ಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡು ತಮ್ಮದೇ ಮೂಲ ಸಂಪನ್ಮೂಲಗಳನ್ನು ಹುಟ್ಟುಹಾಕಿಕೊಂಡು ಗ್ರಾಮಾಂತರ ಪ್ರದೇಶದಲ್ಲಿರುವ ಅದರಲ್ಲೂ ಬಡತನ ರೇಖೆಗಿಂತಲೂ ಕೆಳಗಿರುವ ಮನೆಗಳನ್ನು ಹುಡುಕಾಡಿಕೊಂಡು ಸೌರಶಕ್ತಿಯ ಮೂಲಕ ಬೆಳಕು ನೀಡುವ ಕೆಲಸವನ್ನು ಯುವಕರು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಹುಟ್ಟಿದ ಸಂಸ್ಥೆ:
ನಾಲ್ಕು ವರ್ಷಗಳ ಹಿಂದೆ ಮೂಡುಬಿದರೆಯ ಆಳ್ವಾಸ್ ಹಾಸ್ಟೆಲ್‌ನ ನಾನಾ ರೂಮ್‌ಗಳಲ್ಲಿ ತಂಗಿದ್ದ ಯುವಕರ ತಂಡವೊಂದು ಬಡವರಿಗೆ ಬೆಳಕು ಕೊಡಲು ಯೋಜನೆ ರೂಪಿಸಿದ್ದರು. ಅಲ್ಲಿಯೇ ದುಡಿಯುತ್ತಿದ್ದ ಕೆಲಸದಾಳುಗಳ ಮನೆಗಳಿಗೆ ತಮ್ಮ ಪಾಕೆಟ್ ಮನಿಯನ್ನು ಜೋಡಿಸಿಕೊಂಡು ಸೌರಶಕ್ತಿಯ ಮೂಲಕ ಬೆಳಕು ಕೊಟ್ಟರು. ನಂತರ ಇಂತಹ ನಾನಾ ಕುಟುಂಬಗಳ ಹುಡುಕಾಟ ಆರಂಭವಾಯಿತು. ಅಲ್ಲಿಯೇ ಹುಟ್ಟಿದ್ದು ಸ್ಟ್ರೀ (ಸಬ್‌ಸ್ಟೆನೇಬಲ್ ಟೆಕ್ನಾಲಜಿ ಆಂಡ್ ರೀನೇವೇಬಲ್ ಎನರ್ಜಿ ಫಾರ್ ಅರ್ಥ್) ಎಂಜಿನಿಯರ್ ವಿದ್ಯಾರ್ಥಿಗಳಾದ ಮೈಸೂರಿನ ಅಖಿಲ್, ಪವನ್, ವಿಶಾಲ್, ಶಾಶ್ವತ್, ಪುತ್ತೂರಿನ ಸಾಯಿಗಣೇಶ್, ನಿಂತಿಕಲ್ಲಿನ ಶೌಕತ್ ಎಲ್ಲರೂ ಸೇರಿಕೊಂಡು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದರು. ಕರಾವಳಿಯಲ್ಲೇ ಐದು ಪ್ರಾಜೆಕ್ಟ್:
ಎಂಜಿನಿಯರಿಂಗ್ ಕಲಿಯುತ್ತಿರುವ ಆರು ಮಂದಿ ಯುವಕರು ತಮ್ಮ ರಜಾ ಅವಧಿಯಲ್ಲೇ ಇಂತಹ ಸೌರಶಕ್ತಿಯ ಪ್ರಾಜೆಕ್ಟ್‌ಗೆ ಇಳಿಯುತ್ತಾರೆ. ಕರಾವಳಿಯಲ್ಲಿರುವ ತೀರಾ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಹುಡುಕಾಡಿ ವಿದ್ಯುತ್ ಸಂಪರ್ಕ ಇದೆಯೇ ಇಲ್ಲವೇ ಎನ್ನುವ ಖಾತರಿ ಪಡಿಸಿಕೊಂಡು ಯುವಕರು ಯೋಜನೆ ರೂಪಿಸುತ್ತಾರೆ. ಮುಖ್ಯವಾಗಿ ಬಿಪಿಎಲ್ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಆರಂಭದಲ್ಲಿ ಮೂಡುಬಿದರೆಯ ಎರಡು ಮನೆಗಳಿಗೆ ಸೌರಶಕ್ತಿ ಮೂಲಕ ಬೆಳಕು ಕೊಟ್ಟರು. ಈ ಬಳಿಕ ಪುತ್ತೂರಿನ ಕುಂಬುರ್ಗ, ಬೀರಹ್ನಿತ್ಲುನ ಆರು ಮನೆಗಳು, ಸವಣೂರಿನ ಆರು ಮನೆಗಳು, ಮೈಸೂರು ಎಚ್.ಡಿ ಕೋಟೆ ಪಂಜದಲ್ಲಿರುವ ಬಲ್ಪ ಗ್ರಾಮದ ೩೦ ಮನೆಗಳಿಗೆ ಸೌರಶಕ್ತಿಯಿಂದ ಬೆಳಕು ನೀಡಿದ್ದಾರೆ. ಮುಂದೆ ಕುಂದಾಪುರದಲ್ಲಿರುವ ಇಡೀ ಗ್ರಾಮಕ್ಕೆ ಬೆಳಕು ನೀಡುವ ಯೋಜನೆ ರೂಪಿಸಿದ್ದಾರೆ. ಬೆಳಕು ನೋಡದ ಮುಖದಲ್ಲಿ ಅರಳಿದ ಸಂತಸ: ಪಂಜದಿಂದ ಸ್ವಲ್ಪ ದೂರದಲ್ಲಿರುವ ಬಲ್ಪ ಗ್ರಾಮದ ಕೇನ್ಯಾ ಪ್ರದೇಶದ ನೇಲ್ಯಡ್ಕ, ಐನಡ್ಕ, ಕಣ್‌ಕಾಲಿನ ೩೦ ಬಿಪಿಎಲ್ ಪಟ್ಟಿಯಲ್ಲಿರುವ ಮನೆಗಳು ಎಂದಿಗೂ ಚಿಮಣಿ ದೀಪದಿಂದ ಹೊರಬಂದವರಲ್ಲ. ಬೀದಿ ದೀಪಗಳನ್ನೇ ನೋಡಿ ಮನದಲ್ಲಿ ಸಂತಸ ತುಂಬಿಕೊಂಡಿದ್ದರು. ಬೆಳಕು ಎನ್ನೋದು ಶ್ರೀಮಂತರಿಗೆ ಮಾತ್ರ ಇರುವ ಸವಲತ್ತು ಎಂದುಕೊಂಡೇ ತಮ್ಮ ಮಕ್ಕಳಿಗೆ ಚಿಮಣಿ ದೀಪಗಳನ್ನು ತೋರಿಸಿ ಮಲಗಿಸುತ್ತಿದ್ದರು. ಆದರೆ ಈಗ ಕೇನ್ಯಾದ ಚಿಮಣಿ ದೀಪಗಳು ನಂದಿ ಹೋಗಿದೆ. ಅವುಗಳ ಜಾಗದಲ್ಲಿ ಪಳಪಳ ಹೊಳೆಯುವ ಸೌರಶಕ್ತಿಯ ಬಲ್ಬ್‌ಗಳು ಜಾಗಪಡೆದುಕೊಂಡಿದೆ. ಈ ಯುವಕರು ೩೦ ಮನೆಗಳ ಮುಂಭಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕಿಕೊಂಡು ಮನೆಯೊಳಗೆ ಬಲ್ಬ್ ಹೊತ್ತಿಸುತ್ತಿದ್ದಾರೆ. ಒಂದು ಬಲ್ಬ್, ಸೋಲಾರ್ ಪ್ಯಾನೆಲ್, ಬ್ಯಾಟರಿ ಕೊಟ್ಟು ಮನೆಯ ಮೂಲೆಯಲ್ಲಿರುವ ಮಗು ಈಗ ಬೆಳಕು ನೋಡಿ ಕುಣಿಯುವಂತಾಗಿದೆ. ಅಂದಹಾಗೆ ೩೦ ಮನೆಗಳಿಗೆ ಬೆಳಕು ನೀಡಲು ಧನ ಸಹಾಯ ಮಾಡಿದವರು ಮೈಸೂರಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಪಿ.ಸಿ. ರಾಜು ಎನ್ನುವವರು. ಹೀಗೆ ಕರಾವಳಿಯ ಕುಗ್ರಾಮದಲ್ಲಿರುವ ಒಂದು ಪುಟ್ಟ ಮನೆಯಲ್ಲಿ ಬೆಳಕು ಕೊಡಲು ಮೈಸೂರಿನ ಮಂದಿ ತಮ್ಮ ಉದಾರತೆಯನ್ನು ಮೆರೆದಿದೆ. ಜಿಲ್ಲೆಯಲ್ಲಿ ಐದು ಪ್ರಾಜೆಕ್ಟ್‌ಗಳನ್ನು ಮಾಡಿದ್ದೇವೆ. ಆರು ತಿಂಗಳಿಗೊಮ್ಮೆ ಈ ಯೋಜನೆ ರೂಪಿಸಿದ ಹಳ್ಳಿಗಳಿಗೆ ಹೋಗಿ ಬ್ಯಾಟರಿ ಚೆಕ್ ಮಾಡಿಕೊಂಡು ಅವರಿಗೆ ಮತ್ತೊಂದು ಬಲ್ಬ್ ಹಾಗೂ ಮೊಬೈಲ್ ಚಾರ್ಜರ್ ಕೊಟ್ಟು ಬರುತ್ತೇವೆ. ಕರಾವಳಿಯಲ್ಲಿ ಇಂತಹ ಯೋಜನೆ ರೂಪಿಸಿದಾಗ ಹೊರ ಜಿಲ್ಲೆಯವರೇ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ತಂಡದ ಸದಸ್ಯ ಶೌಕತ್. ಇಡೀ ರಾಜ್ಯದಲ್ಲಿ ಇಂತಹ ಸೌರ ಶಕ್ತಿಯ ಯೋಜನೆಯನ್ನು ರೂಪಿಸಬೇಕು ಎನ್ನೋದು ತಂಡದ ಕನಸ್ಸು. ರಾಜ್ಯದ ನಾನಾ ಕಡೆ ಇರುವ ಪರ್ಯಾಯ ಇಂಧನಗಳ ಶಕ್ತಿಗಳಾದ ಪವನ ಶಕ್ತಿ, ಹೈಡ್ರೋವನ್ನು ಬಳಕೆ ಮಾಡಿಕೊಂಡು ಬಡವರಿಗೆ ಬೆಳಕು ನೀಡಬೇಕು ಎನ್ನುವ ಯೋಜನೆ ಇದೆ. ಈ ಮೂಲಕ ವಿದ್ಯುತ್ ಕೊರತೆಯ ಸಮಯದಲ್ಲೂ ಇತತ ಇಂಧನಗಳಿಗೆ ಮೊರೆ ಹೋಗಬಹುದು ಎನ್ನೋದು ತಂಡದ ಮುಖ್ಯಸ್ಥ ಅಖಿಲ್ ಅವರ ಮಾತು.
ನಾವು ಬದುಕಿನಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಬೆಳಕು ನೋಡುತ್ತೇವೆ ಎನ್ನುವ ಯೋಜನೆ ಕೂಡ ಇರಲಿಲ್ಲ. ಬೆಳಕು ಎನ್ನೋದು ಬರೀ ಕೆಲವರಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದೆ. ಆದರೆ ಈ ಹುಡುಗರು ರಾತ್ರಿ- ಹಗಲು ದುಡಿದು ಬೆಳಕು ಕೊಟ್ಟಿದ್ದಾರೆ ಎನ್ನುತ್ತಾರೆ ನೇಲ್ಯಡ್ಕದ ಚೋಮ ಹೇಳುತ್ತಾರೆ. ಪಕ್ಕದ ಮನೆಯಲ್ಲಿರುವಂತೆ ನಮ್ಮ ಮನೆಯಲ್ಲೂ ಟಿವಿ ನೋಡಬೇಕು. ಬಲ್ಬ್‌ನ ಅಡಿಯಲ್ಲಿ ಕೂತು ಪಾಠ ಓದಬೇಕು. ಚಿಮಣಿ ದೀಪ ನೋಡಿದಾಗಲೆಲ್ಲ ನಿದ್ದೆ ಬಂದು ಬಿಡುತ್ತದೆ ಎಂದು ಎರಡನೇ ತರಗತಿ ಗಣೇಶ ಹೇಳಿದ ಮಾತು. ಕುಗ್ರಾಮದಲ್ಲಿರುವ ಬಡವರ ಮನೆಗಳಿಗೆ ಬೆಳಕು ಕೊಟ್ಟು ಹುಡುಗರು ತಮ್ಮ ಸಾಧನೆ ಮೆರೆದಿದ್ದಾರೆ ಎನ್ನೋದು ಈ ಮೂಲಕ ಖಾತರಿ ಆಗುತ್ತದೆ. ( vk main edition- 2.02.2013)