Thursday, November 17, 2011

ಪ್ರಾದೇಶಿಕ ಭಾಷೆಗಳ ಚಿತ್ರ ಕನ್ನಡಕ್ಕೆ ಡಬ್ ಆಗಬೇಕು: ಸುಮನ್





ಮೂಲ್ಕಿ- ಹೆಜಮಾಡಿಯ ಹುಡುಗನೊಬ್ಬ ತಮಿಳು, ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದ ಘಟಾನುಘಟಿ ನಟರಿಗೆ ಪೈಪೋಟಿ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸುಮನ್ ಮಂಗಳೂರಿನ ವಿಕ ಕಚೇರಿಯಲ್ಲಿ ಬಂದು ಒಂದು ತಾಸುಗಳ ಕಾಲ ಹರಟಿದರು.


ಸ್ಟೀವನ್ ರೇಗೊ, ದಾರಂದಕುಕ್ಕು
ವಿಕ ಸುದ್ದಿಲೋಕ ಮಂಗಳೂರು
ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವುದು ಸರಿ. ಆದರೆ ರಾಜ್ಯದೊಳಗಿರುವ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಪ್ರಾದೇಶಿಕ ಚಿತ್ರಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದವರು ಪಂಚಭಾಷೆ ಸಿನಿಮಾ ತಾರೆ ಸುಮನ್ ತಲ್ವಾರ್ ಅವರು.
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ಪ್ರಕಟವಾದ ‘ಲವರ್ ಬಾಯ್ ಸುಮನ್ ಮತ್ತೆ ಟಾಲಿವುಡ್‌ಗೆ ಎಂಟ್ರಿ’ ಎನ್ನುವ ವಿಶೇಷ ವರದಿಯನ್ನು ಗಮನಿಸಿದ ಸುಮನ್ ನೂರಾರು ಕಿ.ಮೀ ದೂರದಲ್ಲಿರುವ ಹೈದರಾಬಾದ್‌ನಿಂದ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ಮಂಗಳೂರಿನ ವಿಕ ಕಚೇರಿಗೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿದರು. ಪತ್ರಿಕೆ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದ ಸಿಬ್ಬಂದಿಗಳ ಜತೆಯಲ್ಲಿ ಬರೋಬರಿ ಒಂದು ತಾಸಿನ ಕಾಲ ಸಿನಿಮಾ, ಭಾಷೆ, ಬದುಕು, ಕರಾವಳಿಯಂತಹ ನಾನಾ ಟಾಪಿಕ್‌ಗಳ ಮೇಲೆ ಸಮನ್ ಮಾತಿಗೆ ಕೂತಿದ್ದರು.
ಇಡೀ ಭಾರತದಲ್ಲಿ ಕರ್ನಾಟಕ ರಾಜ್ಯ ಸಂಪೂರ್ಣ ಭಿನ್ನ . ಇಲ್ಲಿ ಐದಾರು ಭಾಷೆಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಏಕತೆಯ ಮಂತ್ರವಿದೆ. ಆದರೆ ಉಳಿದ ರಾಜ್ಯಗಳಲ್ಲಿ ಒಂದೇ ಭಾಷೆ, ಭೂಮಿಗಾಗಿ ದಿನನಿತ್ಯ ಹೊಡೆದಾಟ ನಡೆಯುತ್ತದೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುವ ಹೋರಾಟ ದಿನಲೂ ಕಣ್ಣಾರೆ ನೋಡಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಡಬ್ ಮಾಡಿದರೆ ಇಲ್ಲಿನ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಬರುತ್ತದೆ ಎನ್ನುವುದು ಸುಮನ್ ಅವರ ಅಭಿಪ್ರಾಯ.
ತುಳು ಸಿನಿಮಾಕ್ಕೆ ರೆಡಿ:
ತುಳು ಸಿನಿಮಾಗಳು ಇತ್ತೀಚೆಗೆ ಹೆಚ್ಚಾಗಿ ಥಿಯೇಟರ್‌ಗಳಿಗೆ ಬರುತ್ತಿದೆ. ಆದರೆ ಗುಣಮಟ್ಟದ ಚಿತ್ರಗಳು ಇಲ್ಲಿ ಮೂಡಿ ಬರಬೇಕು. ಈಗ ನೆರೆಯ ರಾಜ್ಯಗಳ ಸಿನಿಮಾಗಳು ಇಲ್ಲಿನ ಥಿಯೇಟರ್‌ಗಳಿಗೆ ದಾಳಿ ಮಾಡುತ್ತಿರುವುದರಿಂದ ತುಳು ಚಿತ್ರಗಳ ಗುಣಮಟ್ಟ ಬಹಳಷ್ಟು ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ. ಸ್ಪರ್ಧೆ ಎನ್ನುವ ವಿಚಾರ ಬರೀ ತುಳು ಸಿನಿಮಾಗಳಿಗೆ ಮಾತ್ರವಲ್ಲ ಎಲ್ಲ ರಂಗಕ್ಕೂ ಮುಟ್ಟಿದೆ. ದೊಡ್ಡ ದೊಡ್ಡ ಬಜೆಟ್‌ಗಳ ಚಿತ್ರಗಳು ತುಳುವಿನಲ್ಲಿ ಬರದೇ ಹೋದರೂ ಚಿಂತಿಲ್ಲ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಳುವಿನ ಚಿತ್ರಗಳು ಸದ್ದು ಮಾಡಬೇಕು ಎನ್ನುವುದು ಸುಮನ್‌ರ ಮಾತು.
ತುಳು ಚಿತ್ರದಲ್ಲಿ ನಟಿಸಲು ನಾನು ರೆಡಿ. ಸಂಭಾವನೆ ಕೊಡದೇ ಇದ್ದ್ರೂ ಬೇಸರವಿಲ್ಲ. ಅವರು ಬರೀ ನನ್ನ ಸಿಬ್ಬಂದಿಗಳ ಖರ್ಚು ನೋಡಿದರೆ ಸಾಕು. ಆದರೆ ಚಿತ್ರದಲ್ಲಿ ಒಳ್ಳೆಯ ಸಂದೇಶ ಇರಬೇಕು. ಸಮಾಜದ ಕುರಿತು ಜಾಗೃತಿ ಮೂಡಿಸುವಂತಿರಬೇಕು. ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದ್ದೂ, ಕಡಿಮೆ ಖರ್ಚಿನಲ್ಲಿ ರಾಷ್ಟ್ರಮಟ್ಟದ ಮನ್ನಣೆ ಸಿಗುವಂತಾಗಬೇಕು. ಅಂತಹ ಚಿತ್ರಗಳಿಗೆ ನಾನು ಖಂಡಿತವಾಗಿಯೂ ಡೇಟ್ಸ್ ಕೊಡುತ್ತೇನೆ ಎನ್ನುತ್ತಾರೆ ಸುಮನ್.
ಸಿನ್ಮಾ ಬದುಕು ಕೊಟ್ಟಿದೆ:
ಕಳೆದ ೩೫ ವರ್ಷಗಳಿಂದ ಸಿನ್ಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲೂ ನಟಿಸಿ ಬಂದಿದ್ದೇನೆ. ಸಿನಿಮಾದಲ್ಲಿ ನಟಿಸುವುದು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಬಣ್ಣದ ಬದುಕು ನನಗೆ ಬಹಳಷ್ಟು ಕೊಟ್ಟಿದೆ ಹಾಗೂ ಬಹಳಷ್ಟು ಕಿತ್ತುಕೊಂಡಿದೆ. ಆದರೂ ಈ ಏರುಪೇರಿನ ಬದುಕಿನಲ್ಲೂ ನನಗೆ ಬಣ್ಣದ ಲೋಕ ಇಷ್ಟವಾಗಿದೆ ಎನ್ನುವ ಸುಮನ್ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಿದ್ದಾಂತಗಳು ಬಹಳ ಇಷ್ಟವಾಯಿತು.ಅದಕ್ಕಾಗಿ ಅವರಿಗೆ ಬೆಂಬಲ ಸೂಚಿಸಿದೆ. ಆದರೆ ರಾಜಕಾರಣಕ್ಕಂತೂ ಇಳಿಯುವ ಮಾತು ಸಾಧ್ಯಕ್ಕೆ ಇಲ್ಲ ಎನ್ನುತ್ತಾರೆ.
ತೆಲುಗಿನಲ್ಲಿ ನಾಯಕನಾಗಿ ಇತ್ತೀಚೆಗೆ ಸಿನ್ಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮರುಜನ್ಮ ಕೊಟ್ಟ ಸಿನಿಮಾ. ಇಡೀ ಸಿನ್ಮಾ ಹಿಸ್ಟರಿಯಲ್ಲಿ ನಾಯಕನಾಗಿ ಅಭಿನಯಿಸಿ ಮತ್ತೆ ವಿಲನ್ ಗೆಟಪ್‌ಗೆ ತಿರುಗಿ ಈಗ ಮತ್ತೆ ನಾಯಕನ ಸ್ಥಾನಕ್ಕೆ ಬರುವುದು ಸುಲಭವಲ್ಲ. ಅದರಲ್ಲೂ ಕರಾವಳಿಯ ಹುಡುಗನೊಬ್ಬ ಬೇರೆ ಸಿನ್ಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಾಧನೆಯ ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಬಣ್ಣದ ಜೀವನದಲ್ಲಿ ಇದೆಲ್ಲವೂ ಸಾಧ್ಯವಾಗಿದೆ. ಇದೆಲ್ಲವೂ ಅಭಿಮಾನಿಗಳ ದಯೆ ಹಾಗೂ ದೇವರ ಮೇಲೆ ನಾನಿಟ್ಟ ನಂಬಿಕೆ ಎನ್ನುವುದು ಸುಮನ್‌ರ ಅಂತಾರಾಳದ ಮಾತು.
ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಹತ್ತಾರು ಚಿತ್ರಗಳು ಕೈಯಲ್ಲಿರುವುದರಿಂದ ನನಗೆ ಟೈಮ್ ಸಿಕ್ಕೋದು ಬಹಳ ಕಡಿಮೆ. ನಟನೆ ಜತೆಯಲ್ಲಿ ದೂರ ದೂರದ ಊರುಗಳಿಗೆ ಪ್ರವಾಸ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಆದರೂ ಕರಾವಳಿಗೆ ವರ್ಷದಲ್ಲಿ ಒಂದೆರಡು ಬಾರಿ ಭೇಟಿ ಕೊಡುತ್ತೇನೆ. ಇಲ್ಲಿನ ದೇವಸ್ಥಾನ, ನಾಗಬನಗಳಿಗೆ ಭೇಟಿ ಕೊಡದೇ ಹೋದರೆ ಮನಸ್ಸಿನಲ್ಲಿ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎನ್ನುವ ಮಾತಿನ ಮೂಲಕ ಸುಮನ್ ಚಿಟ್‌ಚಾಟ್‌ಗೆ ಮುಕ್ತಾಯ ಗೀತೆ ಹಾಡಿದರು.

Sunday, November 13, 2011

ಊ..ಲಾ...ಲಾ ‘ಲಹರಿ’


ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿ ಲಹರಿಯ ‘ಊ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ.

ಬಪ್ಪಿ ಲಹರಿ ಎಂದರೆ ಥಟ್ ಅಂತಾ.. ಚಿನ್ನದ ಅಂಗಡಿಯ ನೆನಪು ಬಂದು ಬಿಡುತ್ತದೆ. ‘ವಿದ್ ಔಟ್ ಗೋಲ್ಡ್ ಬಪ್ಪಿ ನೋ ಮೋರ್’ ಎನ್ನುವ ಮಾತು ಇಡೀ ಸಿನ್ಮಾ ನಗರಿಗೆ ಗೊತ್ತಿದೆ. ಬಪ್ಪಿಯ ಕೈಯಲ್ಲಿರುವ ಹತ್ತು ಬೆರಳಿಗೂ ಚಿನ್ನದ ಉಂಗುರ, ಕುತ್ತಿಗೆ ತುಂಬಾ ಹಾರದಂತೆ ನೇತಾಡುತ್ತಿರುವ ಚಿನ್ನದ ಸರಗಳು ಎಲ್ಲರನ್ನು ಕೂಲ್ ಮಾಡಲು ಸನ್ ಗ್ಲಾಸ್, ತಲೆ ತುಂಬಾ ಉದ್ದ ಕೂದಲು, ೩೨ ಹಲ್ಲುಗಳು ಈಗಲೂ ಇದೆ ಎನ್ನುವಂತಹ ಒಂದು ಸುಂದರ ನಗು. ಕುರ್ತಾ, ಶೇರ್‌ವಾನಿಯೊಳಗೆ ದಡೂತಿ ದೇಹ ಎಲ್ಲವೂ ಬಪ್ಪಿ ಲಹರಿಯ ಶಾರ್ಟ್ ಇಂಟರ್‌ಡಕ್ಷನ್ ಮಾರ್ಕ್‌ಗಳು.
ಬಪ್ಪಿ ಲಹರಿ ಬಹಳ ಜನರಿಗೆ ಗೊತ್ತಿರುವಂತೆ ಸಿಂಗರ್, ಕಂಪೋಸರ್ ಆಂಡ್ ಆಕ್ಟರ್. ಮೂರರ ಹರೆಯದಲ್ಲಿ ತಬ್ಲಾದ ಜತೆ ಗುದ್ದಾಡಿಕೊಂಡು ಒಳ್ಳೆಯ ಹೆಸರು ಪಡೆದ ಬಪ್ಪಿಯ ಹೆತ್ತವರು ಕೂಡ ಸಂಗೀತದ ಆರಾಧಕರು. ಬರೀ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಹೆಸರು ಗಳಿಸಬೇಕೆನ್ನುವುದು ಬಪ್ಪಿ ಬಾಲ್ಯದಿಂದಲೂ ಬೆಳೆಸಿಕೊಂಡು ಬಂದ ಕನಸ್ಸಾಗಿತ್ತು. ಬಪ್ಪಿಯ ತಂದೆಗೆ ಸಿನಿಮಾ ನಗರಿಯಲ್ಲಿ ಒಳ್ಳೆಯ ಹೆಸರಿತ್ತು. ಅದೇ ಬಪ್ಪಿಯ ಸಿನ್ಮಾ ಎಂಟ್ರಿಗೆ ಗ್ರೀನ್ ಕಾರ್ಡ್ ಆಯಿತು.
ಬಪ್ಪಿಯ ಸಂಗೀತವೇ ವಿಚಿತ್ರ ಮಾರಾಯ್ರೆ. ಪಶ್ವಿಮ, ಪೂರ್ವ ದೇಶಗಳ ಸಂಗೀತದ ಪ್ರಭಾವದ ಜತೆಯಲ್ಲಿ ದೇಸಿಯ ಬೀಟ್‌ಗಳನ್ನು ಕೊಟ್ಟು ಕೇಳುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಬಪ್ಪಿಯ ಸಂಗೀತ ಹೊಂದಿದೆ. ೧೯ರ ಹರೆಯದಲ್ಲಿ ಬಾಲಿವುಡ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಬಪ್ಪಿಯ ಮೊದಲ ಚಿತ್ರ ಬಂಗಾಳಿ ಎರಡನೇ ಚಿತ್ರ ಹಿಂದಿಯಲ್ಲಿ ಬಂತು. ಆದರೆ ೧೯೭೫ರಲ್ಲಿ ಹಿಂದಿಯಲ್ಲಿ ಬಂದ ತಹೀರ್ ಹುಸೇನ್‌ರ ‘ಝಕ್ಮಿ’ಯಲ್ಲಿ ಬಪ್ಪಿ ಯ ಕಂಪೋಸಿಂಗ್ ಹಾಗೂ ಹಿನ್ನೆಲೆ ಗಾಯನ ಏಕ್‌ದಂ ಅವರಿಗೆ ಸ್ಟಾರ್ ಗಿರಿ ಕಿರೀಟ ಕೊಟ್ಟಿತ್ತು.
ಕ್ರಾಂತಿಕಾರ ಬಪ್ಪಿ:
ಬಪ್ಪಿ ಸಿನ್ಮಾ ಸಂಗೀತದಲ್ಲೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದರು. ‘ಚಲ್ತೇ ಚಲ್ತೇ’ ಹಾಗೂ ‘ಸುರಕ್ಷಾ’ ಚಿತ್ರಗಳು ಬಪ್ಪಿ ಸಂಗೀತದಿಂದ ಸೂಪರ್ ಹಿಟ್ಟ ಅನ್ನಿಸಿಕೊಂಡಿತು. ಮತ್ತೇ ಬಪ್ಪಿ ತಿರುಗಿ ನೋಡುವ ತಪ್ಪು ಮಾಡಲಿಲ್ಲ. ಅತೀ ಕಡಿಮೆ ಟೈಮ್‌ನಲ್ಲಿ ಬಪ್ಪಿ ಯುವಜನರ ಆರಾಧಕರಾಗಿ ಒಪ್ಪಿಕೊಂಡರು. ೧೯೮೦ರಲ್ಲಿ ಹಿಂದಿಯಲ್ಲಿ ಬಂದ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ‘ಐ ಯ್ಯಾಮ್ ಎ ಡಿಸ್ಕೋ ಡ್ಯಾನ್ಸರ್’ ಬಪ್ಪಿಯ ಮೋಸ್ಟ್ ಡಿಮ್ಯಾಂಡ್ ಹಾಡಾಗಿ ಹೋಯಿತು. ಈ ಬಳಿಕ ಬಪ್ಪಿಯನ್ನು ‘ಡಿಸ್ಕೋ ಕಿಂಗ್’ ಎಂದೇ ಬಾಲಿವುಡ್ ಮಂದಿಗಳು ಕರೆಯಲು ಆರಂಭ ಮಾಡಿದರು.
ಮಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್‌ಗಳ ಜತೆಯಲ್ಲಿ ಬಪ್ಪಿ ಡ್ಯುಯೆಟ್ ಸಾಂಗ್‌ಗಳನ್ನು ಹಾಡಿಸಿದರು. ಆಶಾ ಬೊಂಸ್ಲೆಂ, ಲತಾ ಮಂಗೇಶ್ಕರ್ ಸೇರಿದಂತೆ ಬಪ್ಪಿ ಕೆಲಸ ಮಾಡಿದರು. ಅಲೀಶಾ ಚಿನೋಯ್, ಉಷಾ ಉತ್ತುಪ್‌ರಂತಹ ಗಾಯಕರನ್ನು ಬಪ್ಪಿ ತಮ್ಮ ಗರಡಿಯಲ್ಲಿ ತಯಾರಿಸಿ ಬಾಲಿವುಡ್‌ಗೆ ಬಿಟ್ಟರು. ೧೯೯೦ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ‘ದಲಾಲ್’ಚಿತ್ರದ ‘ಗುಟುರ್ ಗುಟುರ್’ ಮಾಸ್ ಹಿಟ್ ಆಗಿ ಬಪ್ಪಿಗೆ ಹೊಸ ಇಮೇಜ್ ಕೊಟ್ಟಿತು.‘ಬಪ್ಪಿ ಮ್ಯಾಜಿಕ್- ದೀ ಅಸಲಿ ಬಾಪ್ ಮಿಕ್ಸ್’ ಬಪ್ಪಿಯ ಆಲ್ಬಂ ಮಸಾಲೆ ದೋಸೆಯಂತೆ ಖರ್ಚಾಗಿ ಹೋಯಿತು.
ಅಂದಹಾಗೆ ಬಪ್ಪಿಯ ಸಂಗೀತದ ಪಯಣ ಈಗಲೂ ಮುಂದುವರಿದೆ. ಇಂದಿಗೂ ಬಪ್ಪಿಯ ಸಂಗೀತ ಎಂದರೆ ಪ್ರೀತಿಸುವ, ಕುಣಿಯುವ, ಆರಾದಿಸುವ ಅಭಿಮಾನಿಗಳಿದ್ದಾರೆ. ಬಪ್ಪಿ ಕೂಡ ಇಂದಿನ ಯುವ ಪೀಳಿಗೆಯ ನಾಡಿಮಿಡಿತವನ್ನು ಹಿಡಿದುಕೊಂಡೇ ಹಾಡುತ್ತಿದ್ದಾರೆ ಎನ್ನೋದೇ ಖುಷಿಯ ವಿಷ್ಯಾ. ದಕ್ಷಿಣ ಭಾರತದ ಖ್ಯಾತ ಐಟಂ ಡ್ಯಾನ್ಸರ್ ಸಿಲ್ಕ್‌ಸ್ಮಿತಾ ಅವರ ಕತೆಯನ್ನು ಇಟ್ಟುಕೊಂಡು ಹೊರಬರುತ್ತಿರುವ ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿಯ ‘ಊ ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ ಅಲ್ವಾ..?

ಬಪ್ಪಿಯ ಚಿನ್ನದ ಮೋಹ
ಬಪ್ಪಿ ಲಹರಿಯ ಬಾಲ್ಯದ ಬದುಕು ಅಷ್ಟೊಂದು ಸುಂದರವಾಗಿರಲಿಲ್ಲ. ಕಡುಬಡತನದ ನಡುವೆ ಬಪ್ಪಿಯ ಬಾಲ್ಯ ಅರಳಿತ್ತು. ಒಂದು ಹೊತ್ತಿನ ಊಟಕ್ಕೂ ಬಪ್ಪಿ ಪರದಾಡಿದ್ದಾರೆ ಎನ್ನುವ ಮಾತನ್ನು ಬಪ್ಪಿ ತನ್ನ ಸ್ನೇಹಿತರ ವಲಯದಲ್ಲಿ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಬಪ್ಪಿ ಸಂಗೀತ ಕ್ಷೇತ್ರದಲ್ಲಿ ನಿಧಾನವಾಗಿ ಬೆಳೆಯುತ್ತಾ ಹೋದಾಗ ಮನೆಯ ಪರಿಸ್ಥಿತಿ ಚೇತರಿಕೆ ಕಂಡಿತ್ತು. ಬದುಕಿನ ಮಟ್ಟ ಒಂದು ಹಂತಕ್ಕೆ ನಿಲ್ಲುವ ಹೊತ್ತಿಗೆ ಚಿನ್ನದ ಆಭರಣಗಳ ಮೇಲೆ ವಿಶೇಷ ಮೋಹ ಇಟ್ಟುಕೊಂಡಿದ್ದ ಅವರ ತಾಯಿ ಬಪ್ಪಿಯನ್ನು ಬಿಟ್ಟು ಹೋದರಂತೆ..! ತಾಯಿ ನೆನಪಿಗಾಗಿ ಬಪ್ಪಿ ಮೈ ತುಂಬಾ ಚಿನ್ನದ ಆಭರಣಗಳನ್ನು ಇಟ್ಟುಕೊಂಡು ಈಗಲೂ ಓಡಾಡುತ್ತಿದ್ದಾರೆ. ಇದೇ ಚಿನ್ನದ ಗಣಿ ಬಪ್ಪಿಯ ಚಿನ್ನದ ಸ್ಟೋರಿ.

ಕಲಿಯುಗದ ಕರ್ಣ
ದಾನ ಧರ್ಮದಲ್ಲೂ ಬಪ್ಪಿ ಎತ್ತಿದ ಕೈ ಖಾಸಗಿ ಚಾನೆಲ್‌ವೊಂದು ಸಂಗೀತ ರಿಯಾಲಿಟಿ ಶೋವನ್ನು ನಡೆಸುತ್ತಿದ್ದಾಗ ಬಪ್ಪಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಯಾವ ವಿದ್ಯಾರ್ಥಿ ಉತ್ತಮವಾಗಿ ಹಾಡಿದನೋ ಅವರಿಗೆ ಬಪ್ಪಿ ಬರೀ ಶಹಬ್ಬಾಸ್ ಹೇಳುವ ಬದಲಾಗಿ ತನ್ನ ಕುತ್ತಿಗೆಯಲ್ಲಿರುವ ಚಿನ್ನದ ಸರಗಳನ್ನೇ ಕಿತ್ತು ಕೊಡುತ್ತಿದ್ದರು. ಹೀಗೆ ಕೊಡುತ್ತಾ ಚಿನ್ನದ ಸರಗಳು ಮುಗಿದು ಹೋಯಿತೋ.. ಅಲ್ಲಿಂದ ಕೈಯಲ್ಲಿದ್ದ ಉಂಗುರಗಳನ್ನು ಕೊಡಲು ಆರಂಭ ಮಾಡಿದರು. ಇದು ಬಪ್ಪಿಯ ದಾನ ಧರ್ಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ..

Friday, November 11, 2011

ಬದಲಾವಣೆ ನಿಮ್ಮಿಂದ ಸಾಧ್ಯ


ಈ ಕೆಳಗಿನ ಲೇಖನಗಳು ವಿಜಯನೆಕ್ಸ್ಟ್ ಪತ್ರಿಕೆಯಲ್ಲಿ ೧೧.೧೧.೨೦೧೧ ರಂದು ಪ್ರಕಟವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಮೂರು ವಿಶೇಷ ವ್ಯಕ್ತಿಗಳ ಬಾಲ್ಯದ ಗೆಖೆಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಪತ್ರ ಬರೆದುಕೊಂಡಿದ್ದಾರೆ.


ಪ್ರೀತಿಯ ಸದಾ,
ರಾಜ್ಯದ ಮುಖ್ಯ ಮಂತ್ರಿಯಾಗಿ ಗೆದ್ದುಗೆ ಹಿಡಿದುಕೂತಾಗ ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಪುತ್ತೂರಿನಲ್ಲಿದ್ದ ಬಹುತೇಕ ನಮ್ಮಿಬ್ಬರ ಸ್ನೇಹಿತ ವಲಯಕ್ಕೆ ಪೋನ್ ಮಾಡಿ ವಿಚಾರ ತಿಳಿಸಿದೆ. ಪುತ್ತೂರಿನಲ್ಲಿರುವ ನಮ್ಮಿಬ್ಬರ ಆರಾಧ್ಯ ದೇವರಾದ ಶ್ರೀಮಹಾಲಿಂಗೇಶ್ವರನಿಗೊಂದು ಧನ್ಯವಾದ ಮನದಲ್ಲಿಯೇ ಸಲ್ಲಿಸಿ ಸಂಭ್ರಮ ಪಟ್ಟೆ. ನೀನು ಮುಖ್ಯಮಂತ್ರಿಯಾಗುವ ವಿಚಾರ ಒಂದು ಮಿರಾಕಲ್ ಎನ್ನುವವರು ಇರಬಹುದು. ಆದರೆ ನಾನು ನಿನ್ನನ್ನು ನೂರಕ್ಕೆ ನೂರರಷ್ಟು ನಂಬುತ್ತೇನೆ.
ನಿನ್ನ ಆರ್ಹತೆ, ಪ್ರಾಮಾಣಿಕತೆ, ಕೆಲಸದ ಮೇಲಿರುವ ನಿಷ್ಠೆ, ಎಲ್ಲಕ್ಕೂ ಮುಖ್ಯವಾಗಿ ಜನರ ಕುರಿತಾಗಿ ನಿನ್ನ ಕಾಳಜಿ ಎಲ್ಲವೂ ನನಗೆ ಬಾಲ್ಯದಿಂದಲೇ ಗೊತ್ತಿತ್ತು ಅಲ್ವಾ..? ಒಂದಲ್ಲ ಒಂದು ದಿನ ನೀನು ಮುಂದೆ ಬಂದು ನಿಲ್ಲುತ್ತೀಯಾ ಎನ್ನುವ ಆತ್ಮವಿಶ್ವಾಸ ನಿನ್ನ ಮೇಲೆ ನನಗಿತ್ತು. ಈ ವಿಶ್ವಾಸದ ಮಾತುಗಳು ನಿನಗೊಬ್ಬನಿಗೆ ಹೇಳಿ ಬಿಟ್ಟರೆ ಎಲ್ಲಿ ವಿನಯನಿಗೆ( ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ) ಬೇಸರವಾಗುತ್ತದೋ ಎಂದು ನಾನು ಸುಮ್ಮನಿದ್ದೆ. ವಿನಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ನೀನು ಬಿಜೆಪಿ ಇಬ್ಬರು ನನಗೆ ಚಡ್ಡಿ ದೋಸ್ತ್‌ಗಳು. ಅದರಲ್ಲೂ ಒಬ್ಬನಿಗೆ ಮಾತ್ರ ನಾನು ಬೆಂಬಲ ಕೊಟ್ಟರೆ ಮತ್ತೊಬ್ಬನಿಗೆ ಅನ್ಯಾಯವಾಗಿ ಬಿಡುತ್ತದೆ ಎನ್ನುವ ಮಾತು ನನ್ನೊಳಗೆ ಬಚ್ಚಿಡುವಂತೆ ಮಾಡಿತು.
ಈ ಎಲ್ಲ ಮಾತುಗಳು ಈಗ ಸರಿಯಲ್ಲ ಅನ್ನಿಸಿ ಬಿಡುತ್ತದೆ. ಆದರೆ ನನಗೆ ಈಗಲೂ ನೆನಪಿದೆ ಸದಾ.. ಕೆಯ್ಯೂರಿನ ಸರಕಾರಿ ಶಾಲೆ, ಐದನೇ ಕ್ಲಾಸಿನಲ್ಲಿ ನಾವಿಬ್ಬರೂ ಕೂರುತ್ತಿದ್ದ ಬೆಂಚು, ನನ್ನ ಎಸ್ಜಿಡಿ ಬೈಕ್‌ನಲ್ಲಿ ಮೈಸೂರಿಗೆ ಪ್ರಯಾಣ ಎಲ್ಲವೂ ನಿನ್ನನ್ನು ನೋಡಿದಾಗ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕೆಯ್ಯೂರಿನಲ್ಲಿ ನಿನ್ನ ಚಿಕ್ಕಪ್ಪ ಚೆನ್ನಪ್ಪ ಮಾಸ್ಟ್ರು ಮನೆಯಿಂದ ಬರುತ್ತಿದ್ದಾಗ ನಿನ್ನ ಸಹಪಾಟಿಗಳಿಗೆ ನಿನ್ನ ಮೇಲೆ ಸೌಜನ್ಯದ ಭಾವನೆ ಇತ್ತು.
ಆದರೆ ಐದನೇ ಕ್ಲಾಸಿನಲ್ಲಿದ್ದಾಗ ನಿನ್ನ ಚುರುಕುಬುದ್ಧಿ, ಪ್ರಾಮಾಣಿಕತೆ, ವಿನಯವಂತಿಕೆ, ಸದಾ ನಗುವ ನಿನ್ನ ಗುಣ ಎಲ್ಲವೂ ನನಗೆ ಬಹಳವಾಗಿ ಹಿಡಿಸಿತ್ತು. ಯಾರ ಮೇಲೂ ಬೇಸರಪಟ್ಟುಕೊಂಡದ್ದು, ಕೂಗಾಡಿದ್ದು ನಾನು ನೋಡಿಯೇ ಇರಲಿಲ್ಲ ಅಲ್ವಾ..? ಈ ಎಲ್ಲ ವಿಚಾರಗಳಿಂದ ನೀನು ತುಂಬಾನೇ ಭಿನ್ನವಾಗಿ ನಿಲ್ಲುತ್ತಿದ್ದಿ ನಿನ್ನ ಸ್ನೇಹಕ್ಕಾಗಿ ನಾನು ನೀನು ಕೂರುತ್ತಿದ್ದ ಬೆಂಚಿಗೆ ಬಡ್ತಿ ಪಡೆದುಕೊಂಡು ಬಂದಿದ್ದು ನಿನಗೆ ನೆನಪಿರಬಹುದು ಅಲ್ವಾ..? ಶಾಲೆಗೆ ಬರುತ್ತಿದ್ದಾಗ ನೀನು ಹಾಕಿಕೊಂಡು ಬರುತ್ತಿದ್ದ ಶಾಸಿಟೋಪಿ ಕಂಡು ಬಹಳಷ್ಟು ಗೆಳೆಯರು ನಿನ್ನನ್ನು ಶಾಸಿಎಂದು ಕೂಗುತ್ತಿದ್ದಾಗ ನನಗೆ ಬಹಳ ಬೇಸರವಾಗುತ್ತಿತ್ತು. ಆದರೆ ಅವರ ಟೀಕೆಗಳಲ್ಲಿ ನಿನ್ನ ನಗು ಎಲ್ಲವನ್ನು ಮಡಚಿ ಹಾಕುತ್ತಿತ್ತು.
ಸದಾ ನೀನು ಉದ್ದಕ್ಕೆ ಬೆಳೆಯಲು ನನ್ನಲ್ಲಿ ಕೇಳಿದ ಐಡಿಯಾ. ನಾನು ಕೊಟ್ಟ ಸಲಹೆ ಈಗಲೂ ನನಗೆ ಯೋಚಿಸಿದಾಗ ನಗು ಉಕ್ಕಿ ಬರುತ್ತದೆ. ಯಾರೋ ನನಗೆ ಹೇಳಿದ್ರು ಬಾವಿಯಿಂದ ಬಿಂದಿಗೆಯಲ್ಲಿ ನೀರು ಎಳೆದರೆ ಉದ್ದಕ್ಕೆ ಬೆಳೆಯುತ್ತಾರಂತೆ ಅದನ್ನೇ ನಾನು ನಿಗೆ ಹೇಳಿದ್ದೆ. ಅಂದು ನೀನು ಉದ್ದಕ್ಕೆ ಬೆಳೆಯದೇ ಹೋಗಿರಬಹುದು. ಆದರೆ ಈಗ ನೀನು ಬಹಳ ಎತ್ತರಕ್ಕೆ ಬೆಳೆದು ಬಂದಿದ್ದೀಯಾ.. ಒಂದು ಬೇಸರ ನಾನು ಒಂದು ತರಗತಿಯಲ್ಲಿ ಪೇಲ್ ಆಗಿ ನೀನು ಪಾಸಾಗಿ ಮುಂದೆ ಹೋದ ನಂತರ ಮಾತ್ರ ನಾನು ಏಕಾಂಗಿಯಾಗಿ ಉಳಿದೆ. ನೀನು ತರಗತಿಯಿಂದ ತರಗತಿಗೆ ಜಂಪ್ ಆಗುತ್ತಾ ಹೋದೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗ ನಾವಿಬ್ಬರೂ ನನ್ನ ಎಸ್ಜಿಡಿ ಬೈಕ್‌ನಲ್ಲಿ ನಾಲ್ಕಾರು ಸಲ ಮೈಸೂರಿಗೆ ಹೋದ ಟೂರ್ ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಸುತ್ತಾಟ ಎಂದರೆ ಇಬ್ಬರಿಗೂ ಖುಷಿ. ಪುತ್ತೂರಿನ ಎಲ್ಲ ಮೂಲೆ ಮೂಲೆಗಳಿಗೂ ನನ್ನ ಎಸ್‌ಜ್ಡಿ ಬೈಕ್‌ನಲ್ಲಿ ಸುತ್ತಾಟ ಮಾಡಿಕೊಂಡಿದ್ದ ಆ ದಿನಗಳು ಈಗಲೂ ನೆನಪಿಗೆ ಬರುವುದಿದೆ. ಈಗಲೂ ನೆನಪುಗಳು ತೀವ್ರವಾಗಿ ಕಾಡಿದಾಗ ನಿನಗೆ ಪೋನ್ ಮಾಡಿ ಹೇಳುವುದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಸೊರಕೆ ಚುನಾವಣೆಗೆ ನಿಂತಾಗ ನಾನು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕಡೆ ಬಂದು ವಿನಯ್ ಕುಮಾರ್‌ಗೆ ಬೆಂಬಲ ನೀಡಿದ್ದೆ. ಕಾರಣ ನಿನ್ನಂತೆ ಅವನು ಕೂಡ ನನ್ನ ಸ್ನೇಹಿತ.
ಆದರೆ ಪುತ್ತೂರಿನಿಂದ ಬಿಜೆಪಿಯಲ್ಲಿ ನೀನು ಚುನಾವಣೆಗೆ ನಿಂತಾಗ ಇತ್ತ ಕಡೆ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಚುನಾವಣೆಗೆ ನಿಂತುಬಿಟ್ಟಿದ್ದ. ಆಗ ನೀನೇ ಬಂದು ‘ಇಬ್ಬರು ನಿನ್ನ ಸ್ನೇಹಿತರು. ಯಾರಿಗೂ ನೀನು ಚುನಾವಣೆಯಲ್ಲಿ ಬೆಂಬಲ ನೀಡ ಕೂಡದು’ ಎಂದಿದ್ದಿ. ಅಲ್ಲಿಂದ ನಾನು ನೀನು ಹೇಳಿದ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದೇನೆ. ಗೆಳೆಯ ಸದಾ ನೀನು ಇನ್ನಷ್ಟೂ ಬೆಳೆಯಬೇಕು. ಜತೆಗೆ ರಾಜ್ಯಕ್ಕೂ ನಿನ್ನ ಊರಿಗೆ ಬಹಳ ಕೆಲಸ ಮಾಡಬೇಕು ಅನ್ನೋದು ಗೆಳೆಯನ ಆಶಯ.

ನಿನ್ನ ದೋಸ್ತಿ
ಮುತ್ತಣ್ಣ( ಎನ್. ಮುತ್ತಪ್ಪ ರೈ)
............
ಎನ್. ಮುತ್ತಪ್ಪ ರೈ
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಎನ್. ಮುತ್ತಪ್ಪ ರೈ ಮೂಲತಃ ಪುತ್ತೂರಿನ ಕೆಯ್ಯೂರಿನವರು. ರಿಯಲ್ ಎಸ್ಟೇಟ್, ಕ್ರೀಡೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ಸದಾ ಕಾಲ ಬ್ಯುಸಿಯಾಗಿ ಇಟ್ಟುಕೊಂಡವರು. ಮುತ್ತಪ್ಪ ರೈ ಕೆಯ್ಯೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಿದ್ದಾಗ ಡಿ.ವಿ. ಸದಾನಂದ ಗೌಡರು ಒಂದೇ ತರಗತಿಯ ಒಂದೇ ಬೆಂಚಿನಲ್ಲಿ ಇದ್ದವರು. ಮುತ್ತಪ್ಪ ರೈ ಒಂದು ಕ್ಲಾಸಿನಲ್ಲಿ ಪೇಲ್ ಆದ ನಂತರ ಡಿವಿ ರೈ ಅವರನ್ನು ಬಿಟ್ಟು ಮುಂದೆ ಹೋದರು. ಆದರೆ ಅವರ ಸ್ನೇಹ ಈಗಲೂ ಗಟ್ಟಿ ಇದೆ.

ಒಂಚೂರು ಬದಲಾಗಿಲ್ಲ ಕಣೋ...


ಡಿಯರ್ ದೇವಿ,
ಗೆಳೆಯ ಎಂದು ಕರೆದರೆ ನನಗೆ ಏನೋ ಒಂದು ಥರದ ಮುಜುಗರ. ಎಲ್ಲಿ ಹೇಳಬೇಕಾದ ವಿಚಾರಗಳು ಮನಸ್ಸಿನಿಂದ ಮರೆಯಾಗಿ ಹೋಗಿ ಬಿಡುತ್ತದೋ ಎನ್ನುವ ಪುಟ್ಟ ಭಯ ಬಂದು ಬಿಡುತ್ತದೆ. ಅದಕ್ಕಾಗಿಯೇ ನಿನ್ನನ್ನು ನಾನು ‘ಸಹೋದರ’ ಎಂದೇ ಕರೆದು ಬಿಡುತ್ತೇನೆ ಗೆಳೆಯ. ಸೈಂಟ್ ಮೆರೀಸ್‌ನಿಂದ ಹಿಡಿದು ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜಿನವರೆಗೂ ನಾವಿಬ್ಬರೂ ಜತೆಯಾಗಿ ವಿದ್ಯಾಭ್ಯಾಸ ಮಾಡಿಕೊಂಡು ಬಂದವರು.
ಅಂದಿನಿಂದ ಇಂದಿನವರೆಗೂ ನೀನು ಒಂಚೂರು ಬದಲಾಗಿಲ್ಲ. ಕಾಲವಂತೂ ಸಾಕಷ್ಟು ಬದಲಾವಣೆಯ ಗಾಳಿಗೆ ಒಗ್ಗಿಕೊಂಡಿದೆ. ಆದರೆ ನಮ್ಮ ಗೆಳೆತನ ಈ ಎಲ್ಲ ಬದಲಾವಣೆಗಳನ್ನು ಮೆಟ್ಟಿ ನಿಂತುಕೊಂಡಿದೆ. ಹಣ, ಗೌರವ ಬಂದ ಕೂಡಲೇ ಬದಲಾಗುವ ಈ ಜಮಾನದಲ್ಲಿ ನೀನು ನಿಜಕ್ಕೂ ಭಿನ್ನ ಅನ್ನೋದು ನನ್ನ ದೃಢ ವಿಶ್ವಾಸ, ಭರವಸೆಯ ಮಾತಿದು. ನೀನು ನಿನ್ನ ಊರು ಕಿನ್ನಿಗೋಳಿಯೇ ಇರಲಿ ದೂರದ ಬೆಂಗಳೂರೇ ಇರಲಿ ಎಲ್ಲೂ ಕಿನ್ನಿಗೋಳಿಯ ಜನರಿಗೆ ಕೊಡುವ ಮರ್ಯಾದೆ, ಸ್ನೇಹಿತರಿಗೆ ಕೊಡುವ ಗೌರವದ ವಿಚಾರದಲ್ಲಿ ಎಂದಿಗೂ ಚ್ಯುತಿ ಬಂದಿಲ್ಲ.
ನನಗೆ ಈಗಲೂ ನೆನಪಿದೆ ಸಹೋದರ. ೪೦ ವರ್ಷಗಳ ಹಿಂದೆ ಸಂತ. ಅಲೋಶಿಯಸ್ ಕಾಲೇಜಿನ ಪುಟ್ಬಾಲ್ ಗ್ರೌಂಡ್‌ನಲ್ಲಿ ನಾನು ಪುಟ್ಬಾಲ್ ಆಡುತ್ತಿದ್ದಾಗ ನೀನು ಗ್ಯಾಲರಿಯಲ್ಲಿ ಕೂತು ಆಟ ನೋಡುತ್ತಿದ್ದೆ. ಪುಟ್ಬಾಲ್‌ಗೆ ಹೆಡ್ ಕೊಡುವ ನೆಪದಲ್ಲಿ ನಾನು ಹೆಡ್ ಕೊಟ್ಟಾಗ ತಪ್ಪಿ ನಾನು ಬಿದ್ದು ಮೂರ್ಚೆ ಹೋದಾಗ ನೀನು ಬಂದು ನೀರು ಕೊಟ್ಟು ಎಚ್ಚರಿಸಿದೆ. ಈ ನೆನಪು ನನಗೆ ಮಾತ್ರ ಇತ್ತು. ಕಾರಣ ಈ ಪುಟ್ಬಾಲ್ ಹೆಡ್‌ನಿಂದಾಗಿ ತಲೆಯ ಹತ್ತಿರ ರಕ್ತ ಹೆಪ್ಪುಗಟ್ಟಿ ತೀವ್ರ ತೊಂದರೆ ನೀಡುತ್ತಿತ್ತು.
ಆದರೆ ನಿನಗೂ ಈ ವಿಚಾರ ಗೊತ್ತಿದೆ ಎನ್ನೋದು ನೀನು ತೀರಾ ಇತ್ತೀಚೆಗೆ ಕಳುಹಿಸಿದ ಇಮೇಲ್ ಮೂಲಕ ಗೊತ್ತಾಯಿತು. ಇಮೇಲ್ ಈಗಲೂ ನನ್ನ ಇನ್‌ಬಾಕ್ಸ್‌ನಲ್ಲಿ ಭದ್ರವಾಗಿ ಕೂತಿದೆ. ನಿನ್ನ ನೆನಪು ಕಾಡಿದಾಗ ಮತ್ತೊಮ್ಮೆ ಅದನ್ನು ಓದಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೇನೆ. ಆಗಾಗ ನಿನ್ನ ಊರಿನ ಮನೆಗೂ ಹೋಗಿ ಶಾರದಾಕ್ಕನ ಪ್ರೇಮಕ್ಕೆ ನಾಲ್ಕು ಮಾತುಗಳನ್ನು ಆಡಿಕೊಂಡು ಬರುತ್ತೇನೆ. ನಿನ್ನ ಸಹೋದರರೆಲ್ಲರೂ ಊರಿನಲ್ಲಿ ಸಿಗುತ್ತಾರೆ. ನೀನು ಮಾತ್ರ ಮೊದಲಿನ ಹಾಗೆ ಸಿಗುತ್ತಿಲ್ಲ. ನನಗೂ ಗೊತ್ತು ಸಹೋದರ ನಿನ್ನ ಕೆಲಸ, ನಿನ್ನನ್ನು ನಂಬಿಕೊಂಡು ಬರುವ ಲಕ್ಷಾಂತರ ಮಂದಿಗೆ ನೀನೊಂದು ದೇವರದೂತ. ಅದೇ ಸಂತೃಪ್ತಿಯಿಂದ ನನಗೆ ನಿನ್ನ ಮೇಲೆ ಗೌರವ, ಹೆಮ್ಮೆ ಬೆಳೆದಿದೆ.
ಬಡವರ ಬಗ್ಗೆ ನಿನಗಿರುವ ಕಾಳಜಿ, ಪ್ರೀತಿ, ಸೇವೆ ಮಾಡುವ ಮನೋಭಾವ ಇನ್ನಷ್ಟೂ ಬೆಳೆಯಲಿ. ಭಾರತದ ಹಳ್ಳಿ ಹಳ್ಳಿಯಲ್ಲಿರುವ ದೀನದಲಿತರ ಸೇವೆಗೆ ನಿಂತ ದೇವರ ದೂತ ನೀನು.. ಇದೆ ಕೆಲಸ ಮುಂದುವರಿಸಿಕೊಂಡು ಹೋಗು. ಮತ್ತೊಂದು ಬದುಕು ಇದೆ ಎನ್ನುವ ಮಾತು ಸತ್ಯವಾದರೆ ನಾನು ಮತ್ತೊಮ್ಮೆ ನಿನ್ನ ಪ್ರೀತಿಯ ಗೆಳೆಯನಾಗಬೇಕು. ಅದು ಕೂಡ ಸಾಧ್ಯವಿಲ್ಲ ಎಂದಾದರೆ ಸಹೋದರನಾಗೋ ಹುಟ್ಟಿ ಬರಬೇಕು ಎನ್ನುವುದು ನನ್ನ ಹೆಬ್ಬಯಕೆ. ಅಂದಹಾಗೆ ಬರೆಯಲು ನಿನ್ನ ಬಗ್ಗೆ ಸ್ನೇಹದ ವಿಚಾರಗಳಿವೆ. ಆದರೆ ಎಲ್ಲವೂ ಬರೆಯಲು ಆಗುತ್ತಿಲ್ಲ. ಎಲ್ಲವೂ ಹೇಳಿಕೊಳ್ಳಲು ಆಗುತ್ತಿಲ್ಲ. ಇರಲಿ ಬಿಡು ಸಹೋದರ ನಿನ್ನ ಸಾಧನೆಯ ಬಗ್ಗೆ ನನಗೆ, ಊರಿಗೆ, ಕಲಿತ ಶಾಲೆಗೆ ಸದಾ ನೆನಪಿರುತ್ತದೆ.

ನಿನ್ನ ಪ್ರೀತಿಯ ಗೆಳೆಯ
ಎಡ್ಡಿ( ಎಡ್ವಿನ್)
..............
ಎಡ್ವಿನ್ ಎನ್. ಡಿ’ಮೆಲ್ಲೊ-
ಮಧ್ಯಪ್ರಾಚ್ಯ ದೇಶದ ಸುಲ್ತಾನ್ ಬೆನ್ ಎಕ್ಸಾ ಗೂಪ್‌ನ ಕಂಪನಿಯೊಂದರಲ್ಲಿ ೩೫ ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿ ಈಗ ಪ್ರಸ್ತುತ ಕಿನ್ನಿಗೋಳಿಯಲ್ಲಿ ನಿವೃತ್ತ ಬದುಕು ಕಟ್ಟುತ್ತಿದ್ದಾರೆ. ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ಹಿರಿಯ ಉಪಾಧ್ಯಕ್ಷರಾಗಿ, ಗ್ರಾಹಕ ಹಕ್ಕುಗಳ ಅನುಷ್ಠಾನ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಮುಖ್ಯಸ್ಥರಾಗಿ ದುಡಿಯುತ್ತಿದ್ದಾರೆ. ಎಡ್ವಿನ್ ಡಿ’ಮೆಲ್ಲೊ ದೇಶದ ಖ್ಯಾತ ಹೃದಯ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ತುಂಬಾ ಹತ್ತಿರದ ಹಾಗೂ ಕುಟುಂಬದ ಸ್ನೇಹಿತ. ಜತೆಗೆ ಸಂತ. ಅಲೋಶಿಯಸ್ ಕಾಲೇಜಿನಲ್ಲಿದ್ದಾಗ ಹಾಸ್ಟೆಲ್‌ನಲ್ಲಿ ರೂಮ್ ಮೇಟ್ ಆಗಿದ್ದವರು.

ಹೊಸ ಪತ್ರಿಕೆ, ಹೊಸ ಹುರುಪು , ಹೊಸ ಯೋಚನೆ


ವಿಜಯ ಕರ್ನಾಟಕದ ಮತ್ತೊಬ್ಬ ಸಹೋದರಪತ್ರಿಕೆ ‘ವಿಜಯ ನೆಕ್ಸ್ಟ್’ ಗಾಗಿ ನಾನು ಈಗ ಬರೆಯಲು ಹೊರಟಿದ್ದೇನೆ. ವಿಜಯ ಕರ್ನಾಟಕದ ಲವಲವಿಕೆಯಲ್ಲಿ ನನಗೆ ಕೊಟ್ಟ ಪ್ರೋತ್ಸಾಹ ಹಾಗೂ ಗೌರವ ಈ ಪತ್ರಿಕೆಯಲ್ಲೂ ಸಿಗುತ್ತದೆ ಎನ್ನುವ ಗ್ಯಾರಂಟಿ ಸಿಕ್ಕಿದ ನಂತರ ಈ ವಾರದಿಂದ ಅದಕ್ಕಾಗಿ ಬರೆದುಕೊಡುತ್ತಿದ್ದೇನೆ.
ಅಂದಹಾಗೆ ಮೊದಲ ವಾರದಲ್ಲಿಯೇ ನನ್ನ ಮೂರು ಲೇಖನಗಳು ಈ ಪತ್ರಿಕೆಯಲ್ಲಿ ಬಂದಿದೆ. ಮಕ್ಕಳ ದಿನಾಚರಣೆಯ ವಿಶೇಷಸಂಚಿಕೆ ‘ವಿಜಯ ನೆಕ್ಸ್ಟ್’ ಒಂದ್ ಸಾರಿ ಓದಿ ನೋಡಿ. ಹೊಸ ವಿಷಯ, ಹೊಸ ಹುರುಪು ನಿಮ್ಮಲ್ಲಿ ಮೂಡುವ ಗ್ಯಾರಂಟಿ ನಾನು ಕೊಡುತ್ತೇನೆ. ಇನ್ನೂ ಮುಂದೆ ವಿಜಯ ಕರ್ನಾಟಕದ ಜತೆಯಲ್ಲಿ ‘ವಿಜಯ ನೆಕ್ಸ್ಟ್’ ವನ್ನು ಕೊಂಡು ಓದಿ.



ಗಾಯ ಮಾಡಿಕೊಂಡಿದ್ದು ನೆನಪಿದೆಯಾ..?
ಪ್ರೀತಿಯ ಪಕ್ಕು,
ಬಾಲ್ಯದ ನೆನಪುಗಳು ಈಗಲೂ ಕಚಗುಳಿ ಇಡುತ್ತದೆ. ಪದೇ ಪದೇ ನೆನಪಿಗೆ ಬಂದು ಕಣ್ಣು ತೇವ ಮಾಡಿ ಬಿಡುತ್ತದೆ. ನಾನು ನೀನು ಯಾವಾಗಲೂ ಅಣ್ಣ-ತಮ್ಮಂದಿರಂತೆ ಇರಲಿಲ್ಲ ಅಂತಾ ನಿನಗೂ ಗೊತ್ತು ಅಲ್ವಾ..? ನೀನು ನನ್ನನ್ನು ಯಾವ ರೀತಿಯಲ್ಲಿ ನೋಡಿದ್ದೀಯಾ ಅಂತಾ ಗೊತ್ತಿಲ್ಲ ಮಾರಾಯ. ಆದರೆ ನನಗೆ ನೀನು ಒಬ್ಬ ಒಳ್ಳೆಯ ಸ್ನೇಹಿತ. ಕಷ್ಟ- ಸುಖಗಳನ್ನು ಹಂಚಿಕೊಂಡು ಧೈರ್ಯ ತುಂಬಿ ಕಳುಹಿಸುವ ಒಬ್ಬ ಮಾರ್ಗದರ್ಶಕ. ನಿನ್ನ ಅಂದಿನ- ಇಂದಿನ ಬದುಕು ಎಲ್ಲವೂ ನನಗೆ ಬದುಕು ಕಟ್ಟಲು ಕಾರಣವಾಗಿದೆ.
ಈಗಲೂ ನೆನಪಿಗೆ ಬರುವ ಒಂದು ವಿಷ್ಯಾ ಅಂದ್ರೆ ಕಡೇ ಶಿವಾಲಯದ ಪಾಂಡಿಬೆಟ್ಟುವಿನಲ್ಲಿದ್ದ ನಮ್ಮ ದೊಡ್ಡಮ್ಮನ ಮನೆ. ರಜೆ ಬಂದಾಗ ನಾವಿಬ್ಬರೂ ಅಲ್ಲಿಗೆ ಹೋಗಿ ಪುಟ್ಟ ಕೆರೆಯಲ್ಲಿ ಈಜಾಡಿಕೊಂಡು ಬರುತ್ತಿದ್ದೇವು.. ಮರಕೋತಿ ಆಡಿ ಬಿದ್ದು ಮಾಡಿದ ಗಾಯ, ನೋವಿನಿಂದ ಅತ್ತುಕೊಂಡು ಹೋಗಿದ್ದು, ದೊಡ್ಡಮ್ಮ ಬಂದು ಔಷಧ ಹಚ್ಚಿ ಸಮಾಧಾನ ಮಾಡಿದ್ದು, ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಂದಿನ ಮಕ್ಕಳಾಟಗಳನ್ನು ನೆನಪಿಸಿಕೊಂಡಾಗ ಈಗಲೂ ಜೋರಾದ ನಗು ಬರುತ್ತದೆ.
ತೀರಾ ಇತ್ತೀಚೆಗೆ ಖಾಸಗಿ ಟಿವಿಯಲ್ಲಿ ನಿರ್ದೇಶಕ ನಾಗತಿಹಳ್ಳಿಯ ‘ಬಾನಲ್ಲೆ ಮಧುಚಂದ್ರಕೆ’ ಚಿತ್ರ ನೋಡುತ್ತಿದ್ದೆ. ಆಗ ನೆನಪಿಗೆ ಬಂದದ್ದು ನಿನ್ನ ಮುಖ. ಕಾರಣ ಗೊತ್ತಲ್ಲ ಪಕ್ಕು.. ನಟ ಶಿವರಾಂ ರುದ್ರಭೂಮಿಯಲ್ಲಿ ಕೂತು ಕವನ ಬರೆಯುವ ರೀತಿಯಲ್ಲಿ ನೀನು ಮರದ ಮೇಲೆ ಕೂತು ಕತೆ, ಕವನ ಬರೆದುಕೊಂಡಿದ್ದಿ. ನನಗೆ ಕರಾವಳಿಯ ಗಂಡು ಕಲೆ ಯಕ್ಷಗಾನ ಇಷ್ಟವಾದರೆ ನಿನಗೆ ರಂಗಭೂಮಿಯೇ ಬಹಳ ಇಷ್ಟವಾಗಿತ್ತು.
ನೀನು ಆಯ್ಕೆ ಮಾಡಿಕೊಂಡಿದ್ದ ರಂಗಭೂಮಿ ನಿನಗೆ ಒಂದು ಹೊಸ ವೇದಿಕೆ ಕೊಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ನೀನು ಪಟ್ಟ ಕಷ್ಟಗಳಿಗೆ ಈಗಲಾದರೂ ಸರಿಯಾದ ಬೆಲೆ ಬಂತಲ್ಲ ಎನ್ನುವ ಖುಷಿ, ಸಂತೃಪ್ತಿ ನಿನಗಿಂತ ಜಾಸ್ತಿ ನನಗಿದೆ. ಈಗಲೂ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಸಿನ್ಮಾ ನೋಡುವಾಗ ನಿನ್ನ ನೆನಪು ಕಾಡುತ್ತದೆ. ಯಾಕ್ ಅಂತೀಯಾ.. ಮಾರಾಯ..ಲಾಲ್‌ಭಾಗ್‌ನ ಪಕ್ಕದಲ್ಲಿದ್ದ ಉರ್ವಶಿ ಥಿಯೇಟರ್‌ನಲ್ಲಿ ನಾವು ಜತೆಯಾಗಿ ನೋಡುತ್ತಿದ್ದ ಸಿನ್ಮಾಗಳಂತೂ ಲೆಕ್ಕಕ್ಕೆ ಸಿಗಲು ಸಾಧ್ಯವಿಲ್ಲ.
ಒಂದು ಸಾರಿ ಉರ್ವಶಿ ಥಿಯೇಟರ್‌ನಲ್ಲಿ ಡಾ.ರಾಜ್ ಕುಮಾರ್ ಅವರ ‘ಶಂಕರಗುರು’ ಸಿನ್ಮಾ ನೋಡಲು ಟಿಕೆಟ್‌ಗಾಗಿ ಕೌಂಟರ್‌ನಲ್ಲಿ ಮೈಲು ಉದ್ದದ ಸರತಿಯಲ್ಲಿ ನಿಂತು ಸುಸ್ತಾಗಿ ವಾಪಸು ಬಂದು ನಂತರ ಮರುದಿನ ಬೇಗನೆ ಹೋಗಿ ಟಿಕೆಟ್‌ಗಾಗಿ ಕ್ಯೂ ನಿಂತು ‘ಶಂಕರ್‌ಗುರು’ ಸಿನ್ಮಾ ನೋಡಿ ಖುಷಿಪಟ್ಟುಕೊಂಡದ್ದು ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದೆ ಅಂತಾ ಭಾಸವಾಗುತ್ತಿದೆ. ಲಾಲ್‌ಭಾಗ್‌ನ ಪಕ್ಕದಲ್ಲಿರುವ ನಿನ್ನ ಮನೆಯಲ್ಲಿ ಗೆಳೆಯ ಕಿರಣ್ ಜತೆಯಲ್ಲಿ ನಾವು ಆಡುತ್ತಿದ್ದ ಕೇರಂ ಆಟ. ಈಗ ನನ್ನ ಮಕ್ಕಳ ಜತೆಯಲ್ಲಿ ಆಡುವಾಗ ನೆನಪಿಗೆ ಗೊತ್ತಿಲ್ಲದೇ ಬಂದು ಬಿಡುತ್ತದೆ.
ನೀನು ಈಗ ಸಿನ್ಮಾ ರಂಗದಲ್ಲಿ ಬಹಳಷ್ಟು ಬೆಳೆದು ಬಂದಿದ್ದೀಯಾ.. ಈಗಲೂ ನಿನ್ನ ಊರಿನ ಮೂಲ ಮನೆಗೆ ಬಂದಾಗ ಅದೇ ಮೊದಲಿನ ಪಕ್ಕುವಿನ ರೀತಿಯಲ್ಲಿ ನನಗೆ ನೀನು ಕಾಣಿಸುತ್ತೀಯಾ..! ಅಂದಿಗೂ-ಇಂದಿಗೂ ಬಹಳ ವರ್ಷಗಳು ಉರುಳಿದೆ. ಆದರೆ ಮಾನವೀಯತೆ, ವಿಶ್ವಾಸ, ಪ್ರೀತಿ, ಗೆಳೆಯರ ಜತೆಯಲ್ಲಿ ನಡೆದುಕೊಳ್ಳುವ ನಿನ್ನ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆಗಳು ಕಂಡಿಲ್ಲ ಮಾರಾಯ. ಅಂದಹಾಗೆ ಭೇಟಿಯಾಗದೆ ತುಂಬಾ ದಿನಗಳಾಯಿತು ಬಿಡು. ಅಮ್ಮ, ಪ್ರಸಾದ,ಆಶಾ ಎಲ್ಲರೂ ನೆನಪಿಗೆ ಬರುತ್ತಾರೆ. ಈ ಬಾರಿಯ ಕ್ರಿಸ್‌ಮಸ್ ಹಬ್ಬಕ್ಕಂತೂ ನಾನು ನಿಮ್ಮ ಜತೆ ಸೇರುತ್ತೇನೆ. ಎಲ್ಲರೂ ಕೂತು ಹರಟೋಣ..
ಇಂತೀ ನಿನ್ನ
ಉದಯ್

...................
ಅಗರಿ ಉದಯ ಕುಮಾರ್
ದಕ್ಷಿಣ ಭಾರತದ ಖ್ಯಾತ ನಟ ಅಗರಿ ಪ್ರಕಾಶ್ ರೈ(ಪ್ರಕಾಶ್ ರಾಜ್)ಅವರ ದಾಯಾದಿ ಸಹೋದರ. ಜತೆಗೆ ಆಪ್ತ ಗೆಳೆಯ. ಪ್ರಕಾಶ್ ರೈ ನಟನೆಯ ಗೀಳು ಹಿಡಿದುಕೊಂಡು ಚೆನ್ನೈ, ಹೈದರಾಬಾದ್, ಮುಂಬಯಿಯನ್ನು ಸುತ್ತಾಡಿಕೊಂಡು ನಟರಾಗಿದ್ದಾರೆ. ಉದಯ್ ಯಕ್ಷಗಾನವನ್ನು ಹವ್ಯಾಸವಾಗಿ ಇಟ್ಟುಕೊಂಡು ತಮ್ಮದೇ ಹವ್ಯಾಸಿ ಯಕ್ಷಗಾನ ತಂಡ, ಹವ್ಯಾಸಿ ಮಕ್ಕಳ ತಂಡ ಕಟ್ಟಿಕೊಂಡು ಯಕ್ಷಗಾನ ಕಲೆಯನ್ನು ಬೆಳೆಸುತ್ತಿದ್ದಾರೆ. ಬಿ.ಸಿ.ರೋಡ್‌ನಲ್ಲಿ ತಮ್ಮದೇ ಪುಟ್ಟ ಶ್ರೀನಿದಿ ರೋಲಿಂಗ್ ಶೆಟರ್ ಕಂಪನಿ ಇಟ್ಟುಕೊಂಡು ಬದುಕು ಕಟ್ಟುತ್ತಿದ್ದಾರೆ.
.....

ನನ್ನ ಪತ್ರಿಕೆ ನನ್ನ ಬರಹ-34


(vk daily lvk puravani published dis article on 11.11.2011)

Monday, November 7, 2011

ಮದ್ರಾಸಿ ಹುಡುಗನ ಕತೆ ‘ಮಣಿ ’ ಮ್ಯಾಟರ್



ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಎಂದರೆ ಯಾರಿಗೂ ಗೊತ್ತಾಗಲ್ಲ ಸ್ವಾಮಿ. ಶಾರ್ಟ್ ಆಂಡ್ ಸ್ವೀಟಾಗಿ ಮಣಿರತ್ನಂ ಎಂದೇ ಕರೆಯಬೇಕು. ಮದ್ರಾಸಿನ ಹುಡುಗನೊಬ್ಬ ಸಿನ್ಮಾ ಲೋಕವನ್ನು ಶ್ರೀಮಂತ ಮಾಡಿದ ಕತೆ ಇಲ್ಲಿದೆ...


ಭಾರತೀಯ ಚಿತ್ರನಗರಿಯಲ್ಲಿ ಮಣಿ ಎಂದರೆ ಕೇರಾಫ್ ಕ್ರಿಯೇಟಿವಿಟಿ. ಕಳೆದ ೨೮ ವರ್ಷಗಳಿಂದ ಸಿನ್ಮಾ ಲ್ಯಾಂಡ್‌ನಲ್ಲಿ ಬಿದ್ದುಕೊಂಡಿದ್ದರೂ ಕೂಡಾ ಅವರ ಫಿಲ್ಮೋಗ್ರಾಫಿಯಲ್ಲಿರುವ ಸಿನ್ಮಾಗಳ ಸಂಖ್ಯೆ ಬರೀ ಮೂವತ್ತರ ಅಸುಪಾಸು. ಮಣಿಯ ಚಿತ್ರಗಳೆಂದರೆ ಬರೋಬರಿ ವರ್ಷಗಟ್ಟಲೆ ಕಾದು ನಿಲ್ಲಬೇಕಾದ ಅನಿವಾರ್ಯತೆ.
ಚಿತ್ರದ ಪ್ರತಿ ಸ್ಟೇಜ್‌ನಲ್ಲೂ ಮಣಿಯ ಕಾರುಬಾರು ಕಾಣ ಸಿಗೋದು ಗ್ಯಾರಂಟಿ. ಚಿತ್ರ ತೆರೆಗೆ ಬಂದಾಗ ಪ್ರತಿ ಪ್ರೇಮ್‌ನಲ್ಲೂ ಮಣಿಯ ಕೆಲಸ ಪ್ರೇಕ್ಷಕನಿಗೆ ದಂಗು ಮೂಡಿಸಿ ಬಿಡುತ್ತದೆ. ದಟ್ಸ್ ಕಾಲ್ಡ್ ಡೈರೆಕ್ಟರ್ ಮಣಿರತ್ನಂ. ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಇದು ಮಣಿರತ್ನಂರ ಪೂರ್ಣ ನಾಮಧೇಯ.
ಮಣಿಯ ಆರಂಭದ ಕನ್ನಡದ ‘ಪಲ್ಲವಿ ಅನುಪಲ್ಲವಿ’ಯಿಂದ ಹಿಡಿದು ತೀರಾ ಇತ್ತೀಚೆಗೆ ಬಂದು ಡಬ್ಬಾ ಸೇರಿಕೊಂಡ ‘ರಾವಣ್’ ವರೆಗೂ ಚಿತ್ರದಲ್ಲಿ ತಮ್ಮದೇ ಶೈಲಿಯನ್ನು ಆಳವಡಿಸಿಕೊಂಡು ಬಂದವರು.
‘ಮೌನ ರಾಗಂ’ ‘ಗೀತಾಂಜಲಿ’, ‘ಅಂಜಲಿ’, ‘ನಾಯಗನ್’, ‘ದಳಪತಿ’, ‘ರೋಜಾ’, ‘ಬಾಂಬೆ’, ‘ಇರುವರ್’, ‘ದಿಲ್ ಸೇ’, ‘ಕಣ್ಣತ್ತಿಲ್ ಮುತ್ತಂ ಇಟ್ಟಲ್’, ‘ಯುವ’, ‘ಗುರು’, ‘ರಾವಣ್’ ಚಿತ್ರಗಳು ತನ್ನ ವಿಶಿಷ್ಟ ಕತೆಯಿಂದ ಪ್ರೇಕ್ಷಕ ವರ್ಗವನ್ನು ಮಾತ್ರವಲ್ಲ ಪ್ರಶಸ್ತಿಗಳ ಖಜಾನೆಗೆ ಕಣ್ಣು ಹಾಕಿತ್ತು.
ಇಂದಿಗೂ ಮಣಿಯ ಚಿತ್ರಗಳು ಟಿವಿ ತೆರೆಯ ಮೇಲೆ ಮೂಡಿದಾಗ ಚಾನೆಲ್‌ಗಳ ಟಿಆರ್‌ಪಿ ರೇಟ್ ಕೂಡ ರೈಸ್ ಆಗುತ್ತದೆ ಎನ್ನುವ ಮಾತಿದೆ. ದೇಶಭಕ್ತಿಯ ಕಿಚ್ಚು ಹಚ್ಚಲು ಬಂದ ‘ರೋಜಾ’ ಸಿನ್ಮಾ ಪ್ರತಿ ಸ್ವಾತಂತ್ರ್ಯ,ಗಣರಾಜ್ಯ ದಿನ ಟಿವಿಯಲ್ಲಿ ಖಾಯಂ ಆಗಿ ಬಂದು ಬಿಡುತ್ತದೆ. ಹಿಂದೂ-ಮುಸ್ಲಿಂ ಕೋಮು ಸೌಹಾರ್ಧತೆ ಬಗ್ಗೆ ಸಂದೇಶ ಸಾರುವ ‘ಬಾಂಬೆ’ ಸಿನ್ಮಾವನ್ನು ಯಾರು ತಾನೇ ಮರೆಯಲು ಸಾಧ್ಯ. ಅಂದಹಾಗೆ ಮಣಿಯ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿಲ್ಲ ಅನ್ನೋದು ಕೂಡಾ ಅಷ್ಟೇ ನಿಜ. ಕಾಲಕ್ಕೆ ತಕ್ಕಂತೆ ಮಣಿ ಬದಲಾದರೂ ಕೆಲವೊಂದು ಇನ್ನರ್ ಕಾರಣಗಳಿಂದ ಚಿತ್ರ ಥಿಯೇಟರ್‌ನಲ್ಲಿ ಬಹಳಷ್ಟು ಸದ್ದು ಮಾಡದೇ ಮಣಿಯನ್ನು ಮೂಲೆ ಗುಂಪು ಮಾಡಿ ಹಾಕಿದ್ದು ಕೂಡಾ ಇದೆ.
ಮಣಿಯ ಚಿತ್ರಗಳು ಥಿಯೇಟರ್‌ನಲ್ಲಿ ಸರಿಯಾಗಿ ಕಲೆಕ್ಷನ್ ಆಗದೇ ಇದ್ದಾರೆ ಎಲ್ಲ ತಪ್ಪುಗಳನ್ನು ತಾನೇ ಹೊತ್ತುಕೊಂಡು ಅಜ್ಞಾತ ವಾಸಕ್ಕೆ ತೆರಳಿ ಚಿತ್ರದಲ್ಲಿ ನಡೆದ ತಪ್ಪುಗಳನ್ನು ಅಧ್ಯಯನ ಮಾಡಿ ನಂತರ ಮತ್ತೊಂದು ಚಿತ್ರಕ್ಕೆ ಸ್ಕೆಚ್ ರೆಡಿ ಮಾಡುತ್ತಾರೆ. ಇದು ಮಣಿರತ್ನಂಗೆ ಚಿತ್ರದಿಂದ ಚಿತ್ರಕ್ಕೆ ಇರುವ ಪ್ರೀತಿ.
ಹುಡುಕಾಟದ ಮಣಿ:
ಮಣಿರತ್ನಂ ಚಿತ್ರಗಳಲ್ಲಿ ಕ್ಯಾಮರಾ ವರ್ಕ್‌ಗೆ ಬಹಳಷ್ಟು ಮಹತ್ವ ಇದೆ. ಚಿತ್ರದ ಕತೆ, ಸಂಗೀತ, ಸಂಕಲನ ಹೀಗೆ ಪ್ರತಿಯೊಂದು ಹಂತದಲ್ಲಿ ಮಣಿ ಖುದ್ದಾಗಿ ಫೀಲ್ಡ್‌ಗೆ ಬಂದುಬಿಡುತ್ತಾರೆ. ಮಣಿರತ್ನಂರ ಖಾಸಾ ಚಿತ್ರ ಎಡಿಟರ್ ಸುರೇಶ್ ಅರಸ್ ಹೇಳುವ ಮಾತು ಹೀಗಿದೆ: ಮಣಿ ಸರ್ ಅವರ ಚಿತ್ರಗಳು ಎಡಿಟಿಂಗ್ ಮಾಡಲು ಕೊಂಚ ಕಷ್ಟ. ತಮಗೆ ತೃಪ್ತಿಯಾಗುವ ವರೆಗೂ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪಕ್ಕದಲ್ಲಿ ಕೂತು ಹೇಳುತ್ತಾರೆ. ಅವರು ಚಿತ್ರವನ್ನು ಬೇಗನೆ ಮುಗಿಸುತ್ತಾರೆ. ಆದರೆ ಎಡಿಟಿಂಗ್ ವಿಚಾರದಲ್ಲಿ ಮಾತ್ರ ಆರು ತಿಂಗಳಿನಿಂದ ವರ್ಷಗಟ್ಟಲೆ ಎಡಿಟರ್ ಡೆಸ್ಕ್‌ನಲ್ಲಿ ಕೂತು ಚಿತ್ರದ ಕಾಪಿಯನ್ನು ತಿದ್ದುತ್ತಾರೆ. ಯಾವುದೇ ನಿರ್ದೇಶಕ ಈ ರೀತಿಯ ಕೆಲಸ ಮಾಡುವುದಿಲ್ಲ. ನಿರ್ದೇಶಕರು ಮಾಡದೇ ಇರುವ ಕೆಲಸವನ್ನು ಮಣಿರತ್ನಂ ಮಾಡುತ್ತಾರೆ. ಈ ಕಾರಣದಿಂದ ಮಣಿರತ್ನಂಗೆ ಚಿತ್ರನಗರಿಯಲ್ಲಿ ಒಳ್ಳೆಯ ಹೆಸರಿದೆ.
ಮಣಿರತ್ನಂ ತಮ್ಮ ಚಿತ್ರದಲ್ಲಿ ಪ್ರತಿಭಾವಂತರಿಗಂತೂ ಬಹಳಷ್ಟು ಅವಕಾಶ ಕೊಟ್ಟೆ ಕೊಡುತ್ತಾರೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ಶಿವನ್ ಇವರ ಚಿತ್ರಗಳಿಂದಲೇ ಹೊರ ಬಂದ ಪ್ರತಿಭೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಮಣಿಯ ಗರಡಿಯಲ್ಲಿ ಪಳಗಿಕೊಂಡು ಬಂದವರು. ನಟ ಅರವಿಂದ್ ಸ್ವಾಮಿ, ಕಾರ್ತಿಕ್, ಪ್ರಭು, ನಟಿ ರೇವತಿ ಹೀಗೆ ಪ್ರತಿಭಾವಂತರನ್ನು ಹುಡುಕಿ ಅವರಿಗೊಂದು ಅವಕಾಶ ಕೊಡುವುದರಲ್ಲಿ ಮಣಿರತ್ನಂ ಎತ್ತಿದ ಕೈ. ಈಗಲೂ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡೇ ಬಿಗ್ ಬಜೆಟ್ ಚಿತ್ರವನ್ನು ಮಾಡಿ ಸಕ್ಸಸ್ ಪಾಯಿಂಟ್‌ಗೆ ಸಾಗಿಸುವ ಸಾಮರ್ಥ್ಯ ಮಣಿಗೆ ಸಿದ್ಧಿಸಿದೆ.
ಕನಸು ನುಚ್ಚು ನೂರಾಗುತ್ತಿತ್ತು !
‘ಮದ್ರಾಸ್ ಟಾಕೀಸ್’ ಇದು ಮಣಿರತ್ನಂ ತನ್ನ ಚಿತ್ರಗಳನ್ನು ನಿರ್ಮಾಣ ಮಾಡಲು ಇಟ್ಟುಕೊಂಡ ಪ್ರಾಡಕ್ಷನ್ ಕಂಪನಿ ಹೆಸರು. ೧೯೯೫ರಲ್ಲಿ ಈ ಪ್ರಾಡಕ್ಷನ್ ಕಂಪನಿಯನ್ನು ಮಣಿರತ್ನಂರ ಸಹೋದರರಾದ ಜಿ. ಶ್ರೀನಿವಾಸನ್, ಜಿ. ವೆಂಕಟ್ ನಾರಾಯಣ್ ಹಾಗೂ ಪತ್ನಿ ಸುಹಾಸಿನಿ ಮಣಿರತ್ನಂರ ಜತೆಗೂಡಿ ಕಟ್ಟಿ ಬೆಳೆಸಿದವರು.
ಆದರೆ ಹಿರಿಯ ಸಹೋದರ ಜಿ. ವೆಂಕಟ್ ನಾರಾಯಣ್ ೨೦೦೩ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ೨೦೦೭ರಲ್ಲಿ ಮತ್ತೊಬ್ಬ ಸಹೋದರ ಜಿ. ಶ್ರೀನಿವಾಸನ್ ಕಾರು ಅಪಘಾತದಲ್ಲಿ ಮೃತಪಟ್ಟರು. ಈ ಸಮಯದಲ್ಲಿ ‘ಮದ್ರಾಸ್ ಟಾಕೀಸ್’ ಮುರಿದು ಬೀಳುವುದರಲ್ಲಿ ಇತ್ತು. ಆದರೆ ಮಣಿರತ್ನಂರ ಸಮಯಪ್ರಜ್ಞೆಯಿಂದ ಕಂಪನಿ ಸೇಫ್ ಝೋನ್‌ನಿಗೆ ಬಂದು ನಿಂತಿತ್ತು. ಪತ್ನಿ ಸುಹಾಸಿನಿ ಮಣಿಯ ಎಲ್ಲ ಕೆಲಸದಲ್ಲಿ ಜತೆಗೂಡಿದರು. ಕಂಪನಿ ಮತ್ತೇ ಚೇತರಿಕೆ ಕಂಡುಬಂತು. ಸಹೋದರರನ್ನು ಕಳೆದುಕೊಂಡ ಮಣಿ ಚಿತ್ರ ಮಾಡುವುದಕ್ಕೆ ರೆಡಿಯಾದರು.
ಸಹೋದರರು ಹೋದ ನಂತರ ಉದ್ಯಮಿ ರೂಭಾಯಿ ಅಂಬಾನಿಯ ಬದುಕಿನ ಕತೆಯನ್ನು ಆಧರಿಸಿಕೊಂಡ ‘ಗುರು’ ಚಿತ್ರ ಇದೇ ಪ್ರಾಡಕ್ಷನ್ ಕಂಪನಿಯಲ್ಲಿ ತಯಾರಾಯಿತು. ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತು. ಇದೇ ಜೋಶ್‌ನಿಂದ ‘ರಾವಣ್’ ಚಿತ್ರ ರೆಡಿಯಾಯಿತು. ಆದರೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಇಲ್ಲದೇ ರಾವಣ್ ಮುರಿದು ಬಿದ್ದು ಬಿಟ್ಟಿತು.
ಮಣಿರತ್ನಂ ಈಗ ಸಿನ್ಮಾ ಮಾಡಲು ರೆಡಿಯಾಗಿದ್ದಾರೆ. ನವೀರಾದ ಲವ್ ಸ್ಟೋರಿ ಜತೆಗೆ ಪ್ರಸ್ತುತ ಘಟನೆಯೊಂದನ್ನು ತೋರಿಸಲು ಹೊರಟಿದ್ದಾರೆ. ಶ್ರೀಲಂಕಾದ ನೌಕಾದಳಕ್ಕೆ ಸಿಕ್ಕ ರಾಮೇಶ್ವರದ ಮೀನುಗಾರರ ಸ್ಥಿತಿ-ಗತಿಯ ಮೇಲೆ ಬೆಳಕು ಚೆಲ್ಲುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಾರ್ತಿಕ್ ಪುತ್ರ ಗೌತಮ್ ನಾಯಕನಾದರೆ ನಾಯಕಿ ಪಟ್ಟ ಖಾಲಿ ಉಳಿದಿದೆ ಅನ್ನೋದು ಚೆನ್ನೈ ಕಡೆಯಿಂದ ಬಂದ ಸುದ್ದಿ. ಅಂದಹಾಗೆ ಮಣಿರತ್ನಂ ಸೋಲನ್ನು ಗೆಲುವಿನ ರಹದಾರಿ ಎಂದು ಸ್ವೀಕರಿಸಿಕೊಂಡು ಬಂದ ನಿರ್ದೇಶಕ. ಮತ್ತೆ ಸಿನ್ಮಾ ಅಖಾಡಕ್ಕೆ ಇಳಿದು ಗೆದ್ದು ಬರುತ್ತಾರೆ ಎನ್ನುವ ಖಾತರಿಯಂತೂ ಮಣಿಯ ಜತೆಯಲ್ಲಿ ಪ್ರೇಕ್ಷಕನಿಗೂ ಇದೆ.